ಗೀತಾಂಜಲಿ ಹಾಡಿಸಿದ ಕಾರವಾರ

ಕಾರವಾರದಲ್ಲಿ ಬಹಳ ಹಿಂದೆ ಬಂಗಾಳದ ರಬೀಂದ್ರನಾಥ ಠಾಗೋರ್ ಅವರು 1882-83ರ ನಡುವೆ ನೆಲೆಸಿದ್ದದ್ದು ಗೊತ್ತಾ ನಿಮ್ಗೆ? ಹೌದು, ಇದು ನಿಜ. ಇವರು ಕಾರವಾರದಲ್ಲಿ ಒಂದಿಷ್ಟು ಕಾಲ ನೆಲೆಸಿದ್ದೂ ಉಂಟು, ಇಲ್ಲಿಯ ಪ್ರಕೃತಿಯ ಸೌಂದರ್ಯವನ್ನ ಸವಿದದ್ದೂ ಉಂಟು, ಅದನ್ನು ಹೊಗಳಿ, ಅದನ್ನುಲ್ಲೇಖಿಸಿ ಬರೆದು, ಹಾಡಿ, ಎಲ್ಲಾ ಮಾಡಿದ್ದೂ ಉಂಟು. ನಂತರ ನೊಬೆಲ್ ಬಹುಮಾನ ಪಡೆದ ಅವರ ಬರಹಕ್ಕೆ ಈ ನಮ್ಮ ನೆಲವೇ ಸ್ಪೂರ್ತಿ ನೀಡಿತ್ತು ಅಂತ ಠಾಗೋರರೇ ಒಂದು ಕಡೆ ಹೇಳಿಕೊಂಡಿರೋದು ನೋಡಿದ್ರೆ ಯಾವುದೇ ಕನ್ನಡಿಗನ ಮನಸ್ಸಿನಲ್ಲಿ ಉಲ್ಲಾಸ ಹುಟ್ಟೇ ಹುಟ್ತತ್ತೆ ಗುರು! ಕೋಟ್ಯಂತರ ಜನ ಹಾಡುವ ಗೀತೆಗಳ ರಚನಕಾರನಿಗೆ ಈ ನಮ್ಮ ಭೂಮಿ ಸ್ಪೂರ್ತಿ ಕೊಟ್ಟಿತ್ತು ಅಂದ್ರೆ ದೊಡ್ಡ ಸೊಗಸಾದ ಅನುಭವ ಗುರು!


ಇದು ನಮ್ಮ ಕಾರವಾರಕ್ಕೆ ಮತ್ತು ಕರ್ನಾಟಕಕ್ಕೇ ಬಹಳ ಹೆಮ್ಮೆಯ ವಿಷಯ. ಕಾರವಾರದಲ್ಲಿಯ ಅದ್ಭುತ ಶಕ್ತಿ ಎಂತಹದು ಅಂತ ಇದ್ರಿಂದ ವ್ಯಕ್ತವಾಗ್ತಿದೆ ಗುರು! 1882-83ರ ನಡುವೆ ಕಾರವಾರಕ್ಕೆ ತನ್ನ ಅಣ್ಣನೊಡನೆ ಬಂದ ರಬೀಂದ್ರನಾಥ ಠಾಗೋರ್ ಅವರು ಇಲ್ಲಿಯ ನೈಸರ್ಗಿಕ ಸೌಂದರ್ಯದಿಂದ ಅದೆಷ್ಟು ಪ್ರಭಾವಿತರಾಗಿದ್ದರು ಅಂದ್ರೆ ಅದರಿಂದ ತಮ್ಮ ಸಾಹಿತ್ಯ ಜೀವನದ ಮೊದಲ ನಾಟಕವನ್ನ (ಪ್ರಾಕೃತಿರ್ ಪ್ರತಿಶೂತ) ಇಲ್ಲಿದ್ದಾಗಿಯೇ ಬರೆದುಬಿಟ್ಟರು.

ಇದಲ್ಲದೆ ನಂತರ ಇನ್ನೆಲ್ಲೋ ಒಂದು ಕಡೆ ತಮ್ಮ ಇಡೀ ಸಾಹಿತ್ಯದ ಬೀಜವಾಗಿತ್ತು ಕಾರವಾರದ ಆ ದಿನಗಳು ಅಂತಲೂ ಹೇಳಿದಾರೆ. ನಿಜಕ್ಕೂ ಕನ್ನಡಿಗರು ಇದರಿಂದ ಅನುಭವಿಸುವ ಆಹ್ಲಾದಕ್ಕೆ ಮಿತಿಯೇ ಇರಲಾರದು. ಎಂತವರಿಗೆಲ್ಲಾ ಸ್ಪೂರ್ತಿ ನೀಡಿರುವ ಇಂಥಾ ಮಣ್ಣಲ್ಲಿ ಹುಟ್ಟಿರೋ ನಾವೇ ಧನ್ಯರು ಗುರು!

ಗೆಲುವಿನ ಸೂತ್ರವಾದ ಪ್ರಾದೇಶಿಕತೆ!

ನಮ್ಮೂರಾಗಿನ ಚುನಾವಣಾ ಬಿಸಿ ಇನ್ನೂ ಆರಿಲ್ಲ. ಈಗ ಗೆದ್ದೋರು ಯಾಕ್ ಗೆದ್ರು, ಸೋತೋರು ಯಾಕ್ ಸೋತ್ರು ಅನ್ನೋ ವಿಶ್ಲೇಷಣೆಗಳು ಮಸ್ತಾಗಿ ನಡೀತಾನೆ ಇದೆ ಗುರು. ಒಂದು ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷ ಗೆದ್ದು ಅಧಿಕಾರ ಹಿಡೀತಾ ಇದ್ರೆ ಇನ್ನೊಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಸು ಎರಡನೇ ಸ್ಥಾನದಲ್ಲಿದೆ. ಮೂರನೆಯದಾದ ಜನತಾದಳ (ಜಾ) ಸೋತು ಸುಣ್ಣವಾಗಿ ಮೂರನೇ ಜಾಗದಲ್ಲಿದೆ. ಶೇಖರ್ ಗುಪ್ತಾ ಅನ್ನೋರು ಬರ್ದಿರೋ ಒಂದು ವಿಶ್ಲೇಷಣೆ ಪ್ರಕಾರ ಸ್ಥಳೀಯ ಅಜೆಂಡಾನೆ ಈ ಚುನಾವಣೆಯ ಟ್ರಂಪ್ ಕಾರ್ಡ್. ಜೊತೆಗೆ ಮುಂದಿನ ದಿನಗಳಲ್ಲಿ ಇದೇ ಪ್ರಾಮುಖ್ಯತೆ ಪಡೆಯೋ ಎಲ್ಲ ಸೂಚನೆಗಳೂ ಇವೆ ಗುರು.

ಭಾಜಪ ಬದಲಿಸಿದ ರಾಗ!

ಮೊದಲಿಗೆ ನಾಯಕನ ಆಯ್ಕೆ ಹೈಕಮಾಂಡ್ ಅಪ್ಪಣೇ ಹಾಗೆ ನಡ್ಯುತ್ತೆ ಅನ್ನದೆ ಯಡಿಯೂರಪ್ಪನವರನ್ನು ಮುಂದು ಮಾಡಿದ್ರು. ತಮ್ಮ ಮೂಲ ರಾಗವಾದ ಹಿಂದುತ್ವ, ಬಾಬಾಬುಡನ್ ಗಿರಿ ಬಗ್ಗೆ ಉಸಿರೆತ್ತದೆ ಹೊಗೆನಕಲ್ ಅಂದ್ರು, ಕನ್ನಡ ನಾಡಿನ ಏಳಿಗೆ ಅಭಿವೃದ್ಧಿ ಅಂತ ಮಾತಾಡುದ್ರು. ನರೇಂದ್ರ ಮೋದಿ ಥರದ ನಾಯಕ್ರುನ್ನ ಕರ್ಕೊಂಡು ಬಂದು ನಮ್ಮದು ಗುಜರಾತ್ ಮಾದರಿ ಅಂದರು. ಗುಜರಾತಿನಲ್ಲಿ ಯಾವ "ಗುಜರಾತಿ ಅಸ್ಮಿತಾ" ರಾಷ್ಟ್ರೀಯತೆಯ ಮಂತ್ರಕ್ಕಿಂತ, ಹಿಂದುತ್ವದ ಮಂತ್ರಕ್ಕಿಂತ ಹೆಚ್ಚಿನ ಕೆಲಸ ಮಾಡಿತ್ತೋ ಅದೇ ಕೆಲಸಾನ ಇಲ್ಲೂ ಪ್ರಾದೇಶಿಕತೆ ಬಗ್ಗೆ ಸಮಸ್ಯೆಗಳ ಪರಿಹಾರದ ಬಗ್ಗೆ ಮಾತಾಡಿ ಮಾಡೊ ಪ್ರಯತ್ನ ಮಾಡುದ್ರು. ಯಾವ ಭಾಜಪ ರಾಜ್ಯಗಳ ನಡುವೆ ಗಡಿ ಬೇಡ, ಭಾಷಾವಾರು ಪ್ರಾಂತ್ಯ ಬೇಡ, ಅದೇನಿದ್ರೂ ಆಡಳಿತಕ್ಕೆ ಅನುಕೂಲ ಆಗೋ ಹಾಗೆ ಭಾರತಾನ ಉದ್ದುದ್ದ ಅಡ್ಡಡ್ಡ ಗೆರೆ ಎಳ್ದು ವಿಭಾಗ ಮಾಡಬೇಕು ಅಂತ ನಂಬುತ್ತೋ ಅದೇ ಬಿಜೆಪಿ... ಕನ್ನಡದ ಗಡಿಯಲ್ಲಿ ಕನ್ನಡ ವಾತಾವರಣ, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ, ಡಾ.ರಾಜ್ ಸ್ಮಾರಕದ ಬಗ್ಗೆಯೆಲ್ಲಾ ತನ್ನ ಭರವಸೆ ಕೊಟ್ರು. ಒಟ್ಟಿನಲ್ಲಿ ಬೇಕೋ ಬೇಡವೋ ಸ್ಥಳೀಯತೆಯನ್ನು ಕಡೆಗಣಿಸೋ ರಾಷ್ಟ್ರೀಯತೆಗೆ ಗೆಲುವಿಲ್ಲ ಅಂತ ಅವ್ರೂ ಅರ್ಥ ಮಾಡ್ಕೊಂಡ ಹಾಗೆ ಕಾಣ್ತಿದೆ ಗುರು!
ತಮಾಷೆ ಅಂದ್ರೆ, ಎಲ್.ಕೆ.ಅಡ್ವಾಣಿಯೋರು ಕರ್ನಾಟಕದಲ್ಲಿ ತಾವು ಪ್ರಾದೇಶಿಕತೆಯ ತಂತ್ರವೇನೂ ಬಳಸಿಲ್ಲ ಅನ್ನೋದ್ರು ಮೂಲಕ ತಾವು ಮಾಡಿದ್ದು ಅದನ್ನೇ ಅಂದಿದಾರೆ. ಒಂದು ಅರ್ಥದಲ್ಲಿ ಪ್ರಾದೇಶಿಕತೆಗೆ ಮಹತ್ವ ನೀಡೋದೆ ರಾಷ್ಟ್ರೀಯತೆ ಅಂತ ಸಂದೇಶ ಕೊಡ್ತಿದಾರೆ ಗುರು!

ಪ್ರಾದೇಶಿಕ ಪಕ್ಷ!

ಕನ್ನಡನಾಡಿನಲ್ಲಿ ಸರಿಯಾದ ನಿಜವಾದ ಪ್ರಾದೇಶಿಕ ಪಕ್ಷ ಇನ್ನೂ ಹುಟ್ಟಿಲ್ಲದಿರೋ ಈ ಸಂದರ್ಭದಲ್ಲಿ ಖಾಲಿ ಇರೋ ಆ ಜಾಗಾನಾ ತುಂಬಕ್ಕೆ ಮುಂದಾಗಿದ್ದು ಜೆಡಿಎಸ್. ಆದ್ರೆ ಈ ಬಗ್ಗೆ ಅವರ ನಿಲುವು ಘೋಷಣೆ ಆಗಿದ್ದು ಹೆಂಗಾದ್ರೂ ಸೀಟು ಗೆಲ್ಲಬೇಕು ಅನ್ನೋ ತಂತ್ರವಾಗಿ ಕಿರುಲೋರ ಥರ ಕೇಳುಸ್ತಿತ್ತೇ ಹೊರತು ಬಲಿಷ್ಠವಾದ ಕನ್ನಡ ಸಿದ್ಧಾಂತವಾಗಿ ಕಾಣುಸ್ಲಿಲ್ಲ. ಕಾಂಗ್ರೆಸ್ಸು ನಮ್ಮ ನಾಯಕರ ಆಯ್ಕೆ ಗೆದ್ದಮೇಲೆ ಮಾಡ್ತೀವಿ, ಹೈಕಮಾಂಡ್ ಅನುಮೋದನೆ ಮಾಡುತ್ತೆ, ಅವ್ರು ಹೇಳಿದ ಹಾಗೆ ಮಾಡ್ತೀವಿ ಅಂತಂದು ಜನರಿಂದ ದೂರಾದ್ರು. ಇದಕ್ಕೆ ಪೂರಕವಾಗಿ ಕನ್ನಡದೋರ ಮುಂದೆ ದಿಗ್ವಿಜಯ ಸಿಂಗ್ ಥರದೋರುನ್ನ ಕರ್ಕೊಂಡು ಬಂದು ನಿಲ್ಸುದ್ರು. ಒಂದುಕಡೆ ಮೋದಿ ಥರದೋರು ಪ್ರಾದೇಶಿಕ ಏಳಿಗೆ ಅನ್ನೋ ಮಾತಾಡ್ತಿದ್ರೆ ಇವ್ರು ದಿಲ್ಲಿ ಗುಲಾಮಗಿರಿನ ಮೆರಸಕ್ ಬಂದೋರ ಹಾಗೆ ಕಂಡ್ರು. ಭಯೋತ್ಪಾದನೆ ಬಗ್ಗೆ ದನಿ ಎತ್ತಿದಾಗ್ಲೂ ಅವ್ರು ಹೆಚ್ಚು ಮಾತಾಡಿದ್ದು ಕಲಘಟಗಿ, ಹುಬ್ಳಿ ಬಗ್ಗೇನೆ. ಒಟ್ನಲ್ಲಿ ಬಿಜೆಪಿಯೋರು ಒಂದು ಪ್ರಾದೇಶಿಕ ಪಕ್ಷದ ಹಾಗೇ ಈ ಚುನಾವಣೆ ಎದುರಿಸಿ ಗೆದ್ರು.
ಇರಲಿ, ಗೆದ್ದಿದ್ ಆಯ್ತು. ಸರ್ಕಾರವೂ ಬರುತ್ತೆ. ಕನ್ನಡದೋರು ಮಾತ್ರಾ ಬಿಜಿಪಿ ಬಾಲ ಬಿಚ್ಚಿ ಹಿಂದಿ ರಾಷ್ಟ್ರಭಾಷೆ ಅನ್ನೋಕೆ, ಹಿಂದಿಗೆ ಉತ್ತೇಜನ ಕೊಡಕ್ಕೆ, ಪೊಳ್ಳು ರಾಷ್ಟ್ರೀಯತೆ ಮಂತ್ರ ಹಾಡಿ ಭಾರತವೆಲ್ಲಾ ಒಂದೇ, ಇಲ್ಲಿಗೆ ವಲಸಿಗ್ರು ಬಂದು ತುಂಬ್ಕೊಳ್ಳಲಿ, ರೈಲ್ವೇ ಕೆಲ್ಸ ಬಿಹಾರಿಗೆ ಸಿಕ್ರೂ ಪರ್ವಾಗಿಲ್ಲ, ಕಾವೇರಿ ತಮಿಳುನಾಡಿಗೆ ಹೋದ್ರೂ ಪರ್ವಾಗಿಲ್ಲ, ಬೆಳಗಾವಿ ಎಲ್ಲಿದ್ರೂ ಒಂದೇ, ಕರ್ನಾಟಕದ ಬಿಜೆಪಿ ತೆಲುಗ್ರು ಕೈಲಿದ್ರೂ, ಇಲ್ಲಿಂದ ರಾಜ್ಯಸಭೆಗೆ ವೆಂಕಯ್ಯ ನಾಯ್ಡುಗಳು ಹೋದ್ರೂ ಪರ್ವಾಗಿಲ್ಲ ಅಂತ ಅನ್ನದ ಹಾಗೆ ಎಚ್ಚರಿಕೆ ವಹಿಸಬೇಕು. ಏನಂತೀ ಗುರು?

ಚುನಾವಣಾ ಫಲಿತಾಂಶ ಕೊಡ್ತಿರೋ ಹೊಸ ಸುಳಿವು!

ಕರ್ನಾಟಕ ರಾಜ್ಯದ ಈ ಬಾರಿಯ ವಿಧಾನ ಸಭಾ ಚುನಾವಣಾ ಫಲಿತಾಂಶಗಳು ಹೊರಬಂದಿದೆ. ಈ ಚುನಾವಣಾ ಫಲಿತಾಂಶ ಕನ್ನಡ ಕೇಂದ್ರಿತ ರಾಜಕಾರಣಕ್ಕೆ ಸಂಬಂಧಪಟ್ಟಂತ ಹಲವಾರು ವಿಷಯಗಳಲ್ಲಿ ಒಳ್ಳೊಳ್ಳೇ ಸಂದೇಶಾನ ಕೊಡ್ತಿದೆ ಗುರು!

ನಾಡು ಒಡೀತೀವಿ ಅಂದೋರ ಕೈಗೆ ಚೊಂಬು!

ಬೆಳಗಾವಿಯ ಇತಿಹಾಸದಲ್ಲಿ ಇದುವರೆಗೂ ಕಂಡು ಕೇಳರಿಯದ ಹಾಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಮಣ್ಣು ಮುಕ್ಕಿದೆ. ನಿಪ್ಪಾಣಿ, ಖಾನಾಪುರಗಳಲ್ಲಂತೂ ಇವ್ರ ಪ್ರಚಾರದಲ್ಲಿ ಮರಾಠಿ ಪ್ರತ್ಯೇಕತೇನೆ ಚುನಾವಣೆ ವಿಷಯ ಮಾಡ್ಕೊಂಡಿದ್ರು.
ಈ ಬಾರಿ ಕರ್ನಾಟಕದ ವಿಧಾನ ಸಭೆಯ ಅಧಿವೇಶನದ ಮೊದಲ ದಿನ ಎಂಇಎಸ್ ನ ಕಪ್ಪು ಬಟ್ಟೆಯ ಕೆಟ್ಟ ಘೋಷಣೆಯ ಸೋಂಕಿಲ್ಲದೆ ಆರಂಭವಾಗ್ತಿದೆ ಅನ್ನೋದು ಒಳ್ಳೇ ಬೆಳವಣಿಗೆ ಗುರು! ನಾಡು ಒಡ್ಯೋರ ಕಾಲ ಮುಗೀತು ಅನ್ನೋ ಸಂದೇಶಾನ ಇದು ಕೊಡ್ತಿದೆ ಗುರು.

ತಮ್ಮೂರಲ್ಲಿ ಸಾಲದು ಅಂತ ಇಲ್ಲಿ ಕಿಸಿಯಕ್ಕೆ ಬಂದಿದ್ದ ಅಣ್ಣಾ ಡಿಎಂಕೆ ಪಕ್ಷ ಏಳು ಕಡೆ ಸ್ಪರ್ಧಿಸಿತ್ತು. ತಮಿಳುನಾಡಿನ ಪರವಾಗಿ ನಿಲ್ತೀವಿ ಅಂತ ಮಾತಾಡಿದ್ದ ಇವರು ಏಳೂ ಕಡೆ ಸೋತು ಹೋಗಿರೋದು ಸಖತ್ ಸುದ್ದಿ ಗುರು.

ನಾಡು ನುಡಿಗೆ ಸ್ಪಂದಿಸದವರ ಕೈಗೆ ಚಿಪ್ಪು!

ಕಾವೇರಿ ಸಮಸ್ಯೆ ಕಾಲಕ್ಕೆ ರಾಜಿನಾಮೆ ನಾಟಕ ಮಾಡಿದ ಅಂಬರೀಷ್ ಕಡೆಗೆ ಶ್ರೀರಂಗಪಟ್ಟಣದಲ್ಲಿ ಹೀನಾಯವಾಗಿ ಸೋಲಬೇಕಾಯಿತು. ಕಾವೇರಿ ಅಂತಿಮ ತೀರ್ಪು ಬಂದಾಗ ಜನಪರವಾಗಿ ನಿಲ್ಲದೆ ತಮ್ಮದೇ ಲೋಕದಲ್ಲಿದ್ದವರಿಗೆ "ತಮ್ಮ ಸಮಸ್ಯೆಗಳಿಗೆ ಸ್ಪಂದಿಸದವರಿಗೆ ಅವರೆಷ್ಟೇ ದೊಡ್ಡ ಸ್ಟಾರೇ ಆಗಿದ್ರೂ ಜನ ತಿರಸ್ಕರಿಸ್ತಾರೆ" ಅಂತ ತೋರಿಸಿಕೊಟ್ಟ ಪಟ್ಣದ ಜನ ನಿಜಕ್ಕೂ ಒಳ್ಳೇ ಸಂದೇಶಾನೆ ಕೊಟ್ಟಿದಾರೆ.

ಇನ್ನು ತೆಲುಗು ಕನ್ನಡ ಸಮ್ಮೇಳನ ಅಂತ ಕರ್ನಾಟಕದ ತುಂಬ ತೆಲುಗು ಸಂಸ್ಕೃತಿ ಹರುಡ್ತಾ, ತೆಲುಗ್ರು ಕನ್ನಡದೋರು ಅಣ್ಣತಮ್ಮಂದಿರು ಅಂದಂದೆ ತೆಲುಗಲ್ಲಿ ಪ್ರಚಾರ ಭಾಷಣ ಮಾಡ್ಕೊಂಡು ಓಡಾತ್ತಿದ್ದ ಸಾಯಿಕುಮಾರ್ ಬಾಗೆಪಲ್ಲಿಯಲ್ಲಿ ಹಳ್ಳ ಹಿಡಿದಿದ್ದಾರೆ ಗುರು!

ಕನ್ನಡ ನಾಡಿನ ಹೆಮ್ಮೆಯ ಸ್ಮಾರಕಗಳಲ್ಲೊಂದಾದ ಕೆಂಪಾಂಬುಧಿ ಕೆರೆಯನ್ನು ನುಂಗಿ ನೀರು ಕುಡಿಯಕ್ಕೆ ಮುಂದಾದೋರಿಗೂ ಜನ ಮನೆ ದಾರಿ ತೋರಿಸಿದಾರೆ.

ಗೆದ್ದವರ ನಲ್ನುಡಿ!

ಬಿಜೆಪಿಯ ಯಡಿಯೂರಪ್ಪನೋರು ಇದೀಗ ಕೊಡ್ತಿರೋ ಸಂದರ್ಶನದಲ್ಲಿ ಇದು ಕನ್ನಡಿಗರಿಗೆ ಸಂದ ಜಯ, ನಾಡು ನುಡಿ ಕಾಪಾಡಕ್ಕೆ ನಾವು ಬದ್ಧರು ಅಂತೆಲ್ಲಾ ಮಾತಾಡ್ತಾ ಇರೋದು ಒಳ್ಳೆ ಬೆಳವಣಿಗೆ. ಈ ಬಾರಿಯ ಇಡೀ ಚುನಾವಣೆಯಲ್ಲಿ ಕನ್ನಡತನ ಸಾಕಷ್ಟು ಮಟ್ಟಿಗೆ ಜಾಗೃತವಾಗಿದೆ ಅನ್ನೋದಕ್ಕೆ, ಇದುವರೆಗೂ ಕನ್ನಡದ ಹೆಸರಲ್ಲಿ ಗೆದ್ದುಕೊಂಡು ಬರ್ತಿದ್ದ ಕೆಲ ಅಯೋಗ್ಯ ಕನ್ನಡಿಗರನ್ನು ಮತದಾರ ಮನೆಗೆ ಕಳಿಸಿದ್ದಾನೆ... ಅದೂ ಠೇವಣಿ ಕಳೆದು. ಜೊತೆಗೆ ಉತ್ತರಪ್ರದೇಶ ಮೂಲದ ಬೆಹನ್ ಜಿ ಮಾಯಾವತಿಯೋರ ಬಹುಜನ್ ಸಮಾಜ ಪಕ್ಷ ಮತ್ತು ಮುಲಾಯಂ ಸಿಂಗ್, ಅಮರ್ ಸಿಂಗ್ ಗಳ ಸಮಾಜವಾದಿ ಪಕ್ಷಗಳನ್ನು ಗೆಲುವಿನ ಹತ್ತಿರಕ್ಕೂ ಸುಳಿಯಲು ಬಿಡದೆ ’ಸ್ಥಳೀಯತೆಯೇ ಮತದಾನಕ್ಕೆ ಮೂಲಸರಕು’ ಅಂತ ಮತದಾರ ಸಾರಿದಾನೆ ಗುರು!
ಈ ಬಾರಿ ಕರುನಾಡಿಗ, ಇರೋ ಎರಡು ಪಕ್ಷಗಳಲ್ಲಿ ಚೂರು ಕಡಿಮೆ ಹೈಕಮಾಂಡ್ ಗುಲಾಮಗಿರಿ ಇರೋ ಭಾಜಪವನ್ನ ಗೆಲ್ಸಿದಾನೆ. ಈಗ ಗೆದ್ದಿರೋರು ಕನ್ನಡ ಕೇಂದ್ರಿತ ರಾಜಕಾರಣ ಮಾಡಿದಷ್ಟೂ, ದೆಹಲಿ ಹೈಕಮಾಂಡ್ ಗುಲಾಮರಾಗದಷ್ಟೂ ದಿನ ಜನ ಇವರ ಬೆಂಬಲಕ್ಕಿರೋ ಸಾಧ್ಯತೆಗಳು ಹೆಚ್ಚು. ಇವ್ರಾದ್ರೂ ರಾಜ್ಯಸಭೆಗೆ ವೆಂಕಯ್ಯ ಪಂಕಯ್ಯ ಅಂತ ಯಾರು ಯಾರನ್ನೋ ಆರಿಸದೆ ಕನ್ನಡದೋರನ್ನು ಆರಿಸಬೇಕು. ಕನ್ನಡ ನಾಡಿನ ಉದ್ದಿಮೆಗಳಲ್ಲಿ ಕನ್ನಡದ ಮಕ್ಕಳಿಗೆ ಕೆಲಸ ಕೊಡಸಕ್ಕೆ ಮುಂದಾಗಬೇಕು, ನಾಡಿನ ಸಂಸ್ಕೃತಿ, ನುಡಿ, ಗಡಿಗಳನ್ನು ಕಾಪಾಡಕ್ಕೆ ರಾಜಿ ಇಲ್ಲದಂತೆ ಮುಂದಾಗಬೇಕು. ಒಟ್ಟಾರೆ ಈ ಚುನಾವಣೆ ಕನ್ನಡ ಕೇಂದ್ರಿತ ರಾಜಕಾರಣಕ್ಕಿರೋ ದೊಡ್ಡ ಸಾಧ್ಯತೆಯ ಚಿಕ್ಕ ಸುಳಿವನ್ನು ಕೊಟ್ಟಿರೋದು ಇದರ ಫಲಿತಾಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅರ್ಥ ಆಗುತ್ತೆ! ಏನಂತೀ ಗುರು?

ಹಲ್ಮಿಡಿಗೆ ಒಮ್ಮೆ ಹೋಗಿಬನ್ನಿ!

ಕನ್ನಡದ ಅತ್ಯಂತ ಹಳೆಯ ಬರವಣಿಗೆ ಅಂದ್ರೆ ಶಾಸನ ರೂಪದಲ್ಲಿರೋ ಹಲ್ಮಿಡಿ ಶಾಸನ. ಇದು ಕನ್ನಡದ ಹಳಮೆಯನ್ನು ದಾಖಲಿಸಿರೋ ಮೊಟ್ಟಮೊದಲ ಶಾಸನ. ಇದು ಸಿಕ್ಕಿದ ಜಾಗದ ಹೆಸರು ಹಲ್ಮಿಡಿ. ಹಾಗಾಗಿ ಇದನ್ನು ಹಲ್ಮಿಡಿ ಶಾಸನ ಅಂತಾನೆ ಕರೀತಾರೆ. ಈ ಶಾಸನವು ಕದಂಬರ ಕಾಲಕ್ಕೆ ಸೇರಿದ್ದು ಸುಮಾರು ಕ್ರಿ.ಶ.೪೫೦ರ ಕಾಲದ್ದೆಂದು ಹೇಳಲಾಗಿದೆ. ಹದಿನಾರು ಸಾಲುಗಳ ಈ ಶಾಸನದಲ್ಲಿ ಪಲ್ಲವರ ವಿರುದ್ಧ ಯುದ್ಧಗಳನ್ನು ಗೆಲ್ಲಿಸಿಕೊಟ್ಟ ವಿಜಾ ಅರಸನೆಂಬ ಒಬ್ಬ ಯೋಧನಿಗೆ ನೀಡಲಾದ ಭೂಮಿ ಕಾಣಿಕೆಗಳ ಬಗ್ಗೆ ವಿವರ ಇದೆ.

ಹಲ್ಮಿಡಿ ಶಾಸನದಲ್ಲಿರೋದೇನು?


ಹಿಂದೆ ಕದಂಬ ದೊರೆ ಕಾಕುಸ್ಥ ವರ್ಮನ ಅಧಿಕಾರಿಗಳಾಗಿ ಬಲು ಶೂರರಾದ ನಾಗ ಮತ್ತು ಮೃಗೇಶ ಅನ್ನೋರಿದ್ರು. ಜೊತೆಗೆ ಪಶುಪತಿ ಅನ್ನೋ ಮತ್ತೊಬ್ಬನೂ ಇದ್ದ. ಬಾಣರು ಮತ್ತು ಸೇಂದ್ರಕರ ಸೈನ್ಯಗಳನ್ನು ಕೂಡಿಸಿಕೊಂಡು ಇವರು ನೂರಾರು ಯುದ್ಧಗಳನ್ನು ಕೇಕಯ ಪಲ್ಲವರೆದುರು ಮಾಡಿದ್ದರು. ಈ ಸೈನ್ಯದಲ್ಲಿದ್ದು ತನ್ನ ಪರಾಕ್ರಮದಿಂದ ಅನೇಕ ಯುದ್ಧಗಳನ್ನು ವಿಜಾ ಅರಸ ಎನ್ನುವ ಯೋಧನೊಬ್ಬ ಗೆಲ್ಲಿಸಿಕೊಟ್ಟಿದ್ದ. ಯುದ್ಧಗಳೆಲ್ಲಾ ಮುಗಿದ ಮೇಲೆ ರಕ್ತಸಿಕ್ತವಾದ ಖಡ್ಗವನ್ನು ತೊಳೆದು ಯೋಧರನ್ನು ಗೌರವಿಸೋದು ಆಗಿನ ಕಾಲದ ಒಂದು ಸಂಪ್ರದಾಯ. ಅದರಂತೆ ಬಾಣ ಮತ್ತು ಸೇಂದ್ರಕ ಸೈನ್ಯದ ಎದುರು ವಿಜಾ ಅರಸನನ್ನು ಗೌರವಿಸಿ ಸನ್ಮಾನ ಮಾಡಿ ಹಲ್ಮಿಡಿ ಮತ್ತು ಮುಗುಳವಳ್ಳಿ ಎಂಬ ಹಳ್ಳಿಗಳನ್ನು ದಾನ ಮಾಡಲಾಯಿತು. ಈ ದಾನ ಪತ್ರವೇ ಹಲ್ಮಿಡಿ ಶಾಸನವಾಗಿದೆ.

ಹೀಗೆ ಹೋಗಬೇಕು ಹಲ್ಮಿಡಿಗೆ!

ಮೂಲ ಶಾಸನವನ್ನು ಬೆಂಗಳೂರಿನಲ್ಲಿರುವ ಪುರಾತತ್ವ ಇಲಾಖೆಯ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಹಲ್ಮಿಡಿಯಲ್ಲಿ ಸ್ಮಾರಕ ನಿಲ್ಲಿಸಲಾಗಿದೆ. ಬೇಲೂರು ಹಳೆಬೀಡುಗಳನ್ನು ನೋಡಲು ಹೋಗೋರು ಬೇಲೂರಿನಿಂದ ಚಿಕ್ಕಮಗಳೂರಿನ ಕಡೆ ಹೋಗಬೇಕು. ದಾರಿಯಲ್ಲಿ ಹನ್ನೆರಡು ಕಿಲೋಮೀಟರ್ ಸಾಗಿದ ನಂತರ ಕೋಡನಹಳ್ಳಿ ಅಂತಾ ಸಿಗುತ್ತೆ. ಅಲ್ಲೇ ಹತ್ತಿರದಲ್ಲಿ ಚನ್ನಾಪುರ ಕ್ರಾಸ್ ಸಿಗುತ್ತೆ. ಅಲ್ಲಿಂದ ಎಡಕ್ಕೆ ತಿರುಗಿ ಆರು ಕಿಲೋಮೀಟರ್ ಹೋದರೆ ಅಲ್ಲಿದೆ ಹಲ್ಮಿಡಿ. ಇದನ್ನು ಹನುಮಿಡಿ ಅಂತಲೂ ಅಂತಾರೆ. ಅಲ್ಲಿಗೆ ಹೋಗೋ ದಾರಿ ಚನ್ನಾಪುರದ ತನಕ ಹೆದ್ದಾರಿಯಾಗಿದ್ದು ನುಣುಪಾಗಿ ಚೆನ್ನಾಗಿದೆ. ಒಳಗಿನ ಆರು ಕಿ.ಮೀ ಮಾತ್ರಾ ಸ್ವಲ್ಪ ತರಿ ತರಿಯಾಗಿದೆ. ಮುಂದಿನ ಸಾರಿ ಬೇಲೂರಿಗೆ ಹೋಗೋವಾಗ ತಪ್ಪದೇ ಹಲ್ಮಿಡಿಗೆ ಹೋಗಿಬನ್ನಿ. ಅಲ್ಲಿಗೆ ಹೆಚ್ಚು ಹೆಚ್ಚು ಪ್ರವಾಸಿಗರು ಹೋಗಿ ಬರ್ತಾ ಇದ್ರೆ, ಸರ್ಕಾರ ಪ್ರವಾಸಿ ಕೇಂದ್ರವನ್ನಾಗಿಯೂ ಅದನ್ನು ಬೆಳಸಕ್ಕೆ ಮುಂದಾಗುತ್ತೆ. ಅದೆಲ್ಲಕ್ಕಿಂತ ಹೆಚ್ಚಾಗಿ ’ಕನ್ನಡದ ಮೊಟ್ಟಮೊದಲ ಶಾಸನ ಸಿಕ್ಕ ಜಾಗ’ ನಮಗೆಲ್ಲ ಸ್ಪೂರ್ತಿ ಕೊಡೋದ್ರಲ್ಲಿ ಸಂದೇಹಾನೆ ಇಲ್ಲಾ ಗುರು.

ನಮ್ಮೂರ್ ಏರ್ ಪೋರ್ಟನ್ನೂ ಇಂಗೇ ಮಾಡಕ್ ಏನ್ ಧಾಡಿ?

ಮೊನ್ನೆ ಮೊನ್ನೆ ತಾನೆ ನಮ್ ಎಂಕ ಪಾರಿನ್ನು ನೋಡಿಕ್ಯಂಡ್ ಬತ್ತೀನಿ ಅಂತಾ ಅದ್ಯಾವ್ದೋ ತೈಲೆಂಡ್ ದೇಸಕ್ಕೆ ಓಗಿದ್ದವ್ನು ತಿರುಗಿ ಬಂದು ಒಂದು ದೊಡ್ ವರದೀನೆ ಒಪ್ಪುಸ್ಬುಡೋದಾ... ಬರ್ರೀ, ಒಸಿ ಅದೇನ್ ಅಂದಾನೋ ನೋಡ್ಮಾ....

ಎಂಕನ್ ರಿಪೋಲ್ಟು!

ನಮಸ್ಕಾರ ಕಣಣ್ಣೋ, ನಮ್ ಬೆಂಗಳೂರಲ್ಲಿ ಕನ್ನಡದೋರು ಒಸ ಇಮಾನ ನಿಲ್ದಾಣದಾಗೆ ಕನ್ನಡದ ವಾತಾವರಣ ಇರಬೇಕು, ಕನ್ನಡದೋರ್ಗೇ ಕೆಲ್ಸ ಕೊಡ್ಬೇಕು, ಕನ್ನಡದಾಗೇ ಬೋಲ್ಡುಗಳಿರಬೇಕು ಅಂತ ಓರಾಟ ಮಾಡ್ತಾ ಅವ್ರೆ ಅಂತ ಒಂದು ವರುಸದಿಂದ ನೋಡಿಕ್ಯಂಡು ಬತ್ತಾ ಇವ್ನಿ. ಅಲ್ಲಾ ಇಂಟರ್ ನ್ಯಾಸನಲ್ ಏರ್ ಪೋಲ್ಟ್ ಅಂದ್ ಮ್ಯಾಲೆ ಅದೆಂಗ್ಲಾ ಕನ್ನಡಕ್ ಅಲ್ಲಿ ಜಾಗ ಕೊಡಕ್ ಆಯ್ತದೆ? ಅಲ್ಲೇನಿದ್ರೂ ಇಂಟರ್ ನ್ಯಾಸನಲ್ ಬಾಸೆ ಇಂಗ್ಲಿಸ್ ಅಲ್ವಾ ಇರ ಬೇಕಾದ್ದು... ಅಂತ ನಾನೂನೂವೆ ಅಂದುಕ್ಯಂಡು "ಇರ್ಲಿ, ಬ್ಯಾರೆ ದೇಸದಲ್ಲೆಲ್ಲಾ ಎಂಗದೆ ಇಮಾನ ನಿಲ್ದಾಣ, ನೋಡಿಕ್ಯಂಡ್ ಬಂದ್ ಬುಡಮಾ" ಅಂತಾ ತೈಲೆಂಡಿನ ಕಡೆ ಒಂಟೆ.

ತೈಲ್ಯಾಂಡಿಗೆ ಯಾಕೋದ ಎಂಕ?

ಇಡೀ ಪರ್ಪಂಚದಾಗೆ ಪ್ರವಾಸಿಗಳು ಶಾನೆ ಜನ ಬರೋ ದೇಸಗಳಲ್ಲಿ ಇದೂನುವೆ ಒಂದು ಕಣ್ ಗುರು! ಇಲ್ಗೆ ಯೂರೋಪಿಂದ, ಅಮೇರಿಕಾದಿಂದ, ಏಸಿಯಾದಿಂದ ಬೇಜಾನ್ ಜನ ಓಯ್ತಾರೆ. ಅದೂ ಅಲ್ದಿರಾ ಈ ದೇಸ ಮುಕ್ಯವಾಗಿ ನಂಬ್ಕೊಂಡಿರೋದೇ ಪ್ರವಾಸೋದ್ಯಮಾನಾ. ಅಂಗಿದ್ ಮ್ಯಾಲೆ ಇಲ್ಲಿ ಶಾನೆ ಇಂಗ್ಲಿಸ್ ಇರೋದು ಸಾಜ ಅಂತ ಅಲ್ಲಿಗ್ ಓದೆ ಕಣ್ ಗುರು! ಈ ಊರೆಸ್ರು ಬ್ಯಾಂಕಾಕ್ ಅಂತೆ, ಈ ಇಮಾನ ನಿಲ್ದಾಣದ ಎಸ್ರು ಸುವರ್ಣಭೂಮಿ ಅಂತೆ. ಒಳಿಕ್ ಓಗ್ ನೋಡೇ ಬುಡಮಾ ಅಂತ ಓದೆ ಗುರು!

ಮೊಕಕ್ ಹೊಡ್ದಂಗ್ ಕಾಣೊ ನೆಲದ ಸೊಗಡು!

ಇಕಾ ನೋಡು ಒಳಿಕ್ ಓಯ್ತಿದ್ ಅಂಗೇ ಎಂಗ್ ಕಾಣ್ತುದೆ ಅಂತಾ! ಅದೆಂಥದೋ ಗೊಂಬೆ ನಿಲ್ಸವ್ರೆ? ಇಡೀ ಇಮಾನ ನಿಲ್ದಾಣ ಒಳ್ಳೆ ಬ್ಯಾರೆ ಪರಪಂಚ ಇದ್ದಂಗ್ ಐತಲ್ಲಪ್ಪೋ. "ಓ... ಇದೇನೇಯಾ ತೈ ಸಂಸ್ಕೃತಿ" ಅಂತಾ ಕಣ್ಣರಳುಸ್ಕೊಂಡು ಯಾಪಾಟಿ ಪ್ರವಾಸಿಗಳು ಅದ್ರು ಮುಂದೆ ನಿಂತವ್ರಲ್ಲಾ ಗುರು? ನಮ್ ಬೆಂಗಳೂರಾಗು ಇಂಗೆ ಕನ್ನಡ ಸಂಸ್ಕೃತಿ ಬಿಂಬ್ಸೋ ಚಿತ್ರಗಳು, ಗೊಂಬೆಗ್ಳೂ ಇದ್ರೆ ಏನ್ ಪಸಂದಾಗ್ ಇರ್ತೈತೆ ಅಲ್ವಾ ಗುರು? ಕನ್ನಡ ನಾಡಲ್ ನಿಲ್ಸಕ್ ಏನ್ ಗೊಂಬೆಗಳಿಲ್ವಾ? ಪರಪಂಚಕ್ ತೋರುಸ್ಕೊಳೋ ಸಂಸ್ಕೃತಿ ಇಲ್ವಾ ಅಂತಾ ಯೋಚ್ನೆ ಆಯ್ತುದೆ ಗುರು!

ನೆಲದ ಬಾಸೆಗೇ ಮೊದಲ ಸ್ತಾನಾ!

ಅಬ್ಬಬ್ಬಾ... ಎಲ್ಲ ಬೋಲ್ಡಲ್ಲೂ ಒಳ್ಳೆ ಜಾಂಗೀರ್ ಸುತ್ತಿರೋ ಅಂಗೆ ಕಾಣೋ ದೊಡ್ಡದಾಗಿ ಅವರ ಬಾಸೇಲೆ ಬರದವ್ರೆ. ಇಂಗ್ಲಿಸಿಗೆ ಕೆಳಗಿನ ಸ್ತಾನ ಕೊಟ್ಟವ್ರಲ್ಲಪ್ಪೋ? ಇಕಾ ಇಲ್ ಬರೋ ಐದ್ರೆಲ್ಲಾ ಬ್ಯಾರೆ ಬ್ಯಾರೆ ಬಾಸೇನೋರು ಕಣ್ರಣ್ಣಾ, ಅವ್ರಿಗೆಲ್ಲಾ ಎಂಗೆ ತಿಳ್ದೀತು ನಿಮ್ ಬಾಸೆ ಅಂದ್ರೆ, ಅಲ್ ಕೆಳಗಡೆ ಇರೋ ಇಂಗ್ಲಿಸ್ ಕಡೆ ಕೈ ತೋರುಸ್ತಾನಲ್ಲಣ್ಣೋ? ಅಲ್ಲಾ ಗುರು, ಬರೋ ಜನ್ರುಗೆಲ್ಲಾ ಎಂಗಿದ್ರೂ ನಿಮ್ ಬಾಸೆ ತಿಳ್ಯಕಿಲ್ಲಾ, ಮತ್ಯಾಕ್ ಅದ್ರಲ್ ಬರ್ದಿದೀರಾ ಅಂದ್ರೆ ಅಂತಾನೆ " ಈಗ್ ನಾವ್ ಬಂದಿರೋದು ತೈಲ್ಯಾಂಡಿಗೆ, ಇಲ್ಲಿ ಜನ್ರು ಬಾಸೆ ಬ್ಯಾರೆ, ಅದು ನೋಡಕ್ ಇಂಗ್ ಕಾಣ್ತುದೆ ಅಂತಾ ಹೊರಗಿನ್ ಜನುಕ್ ಅನ್ನುಸ್ಬೇಕು.. ಅದ್ರು ಜೊತೆ ನಮ್ ಜನಕ್ ತಮ್ ಬಾಸೆ ಬಗ್ಗೆ ಹೆಮ್ಮೆ ಉಟ್ಕಬೇಕು ಅಂತಾ ಇಂಗ್ ಮಾಡಿದೀವಿ" ಅನ್ನದಾ?

ಎಂಗೂ ಇಸ್ಟು ದೂರ ಬಂದಿವ್ನಿ, ಎಂಡ್ರುಗೇನೂ ತಿಳ್ಯಕಿಲ್ಲಾ, ಒಂದು ಪೆಗ್ ಏರುಸ್ ಬುಡಮಾ ಅಂತ ಬಾರ್ ಒಳಿಕ್ ಓದ್ರೆ, ನೋಡ್ ಗುರು... ಅಲ್ಲೂ ನನ್ ಮಗಂದು ಎಂಗ್ ಅವ್ರು ಬಾಸೇ ಪಳಪಳ ಒಳೀತಿದೆ.
ಅಲ್ಲಿ ಕುಡ್ಯೋ ನೀರಿನ್ ಬಾಟ್ಲಿರಲಿ, ಹೊಡ್ಯೋ ಎಣ್ಣೇ ಬಾಟ್ಲಿರಲಿ... ಎಲ್ಲುದ್ರು ಮ್ಯಾಲೂ ಅವರ್ ಬಾಸೇಲೇ ಬರ್ಕಂಡವ್ರೆ. ಅದೆಂಗ್ಲಾ ಇಂಗ್ ಮಾಡೀರಿ ಅಂದ್ರೆ ಇಂಗ್ಲಿಸಲ್ ಬರುದ್ರೆ ಮಾತ್ರಾ ಕಿಕ್ ಏರದು ಅಂತ ನಮ್ ಜನ ಅನ್ಕಂಡಿಲ್ಲಾ ಅನ್ನಾದಾ ಆ ಬಾರಲ್ಲಿರೋನು!

ಒಟ್ನಲ್ಲಿ ತೈಲ್ಯಾಂಡು ಅನ್ನೋ ದೇಸದಾಗೆ ಅವುರ್ದೆ ಒಂದು ಬಾಸೆ ಐತೆ, ಸಂಸ್ಕೃತಿ ಐತೆ, ಆಚಾರ ಇಚಾರ ಐತೆ, ಅದುಕ್ಕಿಂತ ಮುಕ್ಯವಾಗಿ ಅದುನ್ನೆಲ್ಲಾ ಬಂದೋರಿಗೆ ತೋರುಸ್ಕೋ ಬೇಕು ಅನ್ನೋ ತುಡಿತಾ ಐತೆ, ತೋರುಸ್ಕೊಳಕ್ಕೆ ಹೆಮ್ಮೆ ಐತೆ ಅಂತ ಅರ್ತ ಆಯ್ತು ಗುರು! ಅಲ್ಲಾ, ನಮ್ಮೂರಾಗೂ ನಮ್ ಬಾಸೆ, ಸಂಸ್ಕೃತಿ ತೋರುಸ್ಕೊಳ್ದೆ ಇರಕ್ಕೆ ಕನ್ನಡದವ್ರೇನು ನರ ಸತ್ತವ್ರಾ? ಗುರು

ಫಿವರ್ ಎಫ್ಎಂನಲ್ಲೀಗ ಬೊಂಬಾಟ್ ಕನ್ನಡ ಹಾಡುಗಳು!

ಬೆಂಗಳೂರಿನ ಫಿವರ್ ಅನ್ನೋ ಹೆಸರಿನ ಎಫ್.ಎಂ ಚಾನಲ್ಲಿನಲ್ಲೀಗ ಬದಲಾವಣೆಯ ಹೊಸ ತಂಗಾಳಿ ಬೀಸಿ ಬರ್ತಿದೆ ಗುರು. ಇತ್ತೀಚಿಗೆ ಕೆಲವು ದಿನಗಳಿಂದ ಇವ್ರು ಬೊಂಬಾಟ್ ಕನ್ನಡ ಹಾಡುಗಳು ಅನ್ನಕ್ ಶುರು ಹಚ್ಕೊಂಡಿದಾರೆ. 104 ಮೆಗಾಹರ್ಟ್ಸ್ ತರಂಗಾಂತರದಲ್ಲಿ ಪ್ರಸಾರ ಆಗ್ತಿರೋ ಈ ವಾಹಿನಿಯೋರು ಮೊದಲಿಗೆ ಹೆಚ್ಚೆಚ್ಚು ಇಂಗ್ಲಿಷ್ ಹಾಡುಗಳ್ನ ಹಾಕ್ತಿದ್ರು. ಆಮೇಲೆ ಹಿಂದಿ ಇಂಗ್ಲಿಷ್ ಅಂತ ಬದಲಾದ್ರು. ಇದೀಗ ಬೊಂಬಾಟ್ ಕನ್ನಡ ಹಾಡುಗಳು ಅಂತ ಸಾಕಷ್ಟು ಕನ್ನಡ ಹಾಡುಗಳ್ನ ಹಾಕಕ್ಕೆ ಶುರುಮಾಡಿದಾರೆ ಗುರು.

ಬೆಂಗಳೂರಿನಲ್ಲಿ ಮಾರುಕಟ್ಟೆ ಗೆಲ್ಲೋ ದಾರಿ!

ಇವತ್ತಿನ ದಿನ ಬೆಂಗಳೂರಿನಲ್ಲಿ ಮಾರುಕಟ್ಟೆ ಮೇಲೆ ಹಿಡಿತಕ್ಕೆ ಅಂತ ಬೇರೆ ಬೇರೆ ಎಫ್.ಎಂ ವಾಹಿನಿಯೋರು ಭರ್ಜರಿ ಪೈಪೋಟಿ ನಡುಸ್ತಾ ಇದಾರೆ ಗುರು. ಸಹಜವಾಗಿ ಇರೋ ಕನ್ನಡ ಮಾರುಕಟ್ಟೆಯನ್ನು ಹೆಚ್ಚಿನವ್ರು ಮೊದಲು ಮೊದಲು ಉಡಾಫೆ ಮಾಡಿ ವಲಸಿಗ್ರನ್ನು ಮೆಚ್ಸೋ ಯತ್ನಕ್ಕೆ ಕೈ ಹಾಕಿದ್ದೂ, ಆಮೇಲೆ ಈ ಸಹಜ ಮಾರುಕಟ್ಟೇನ ಗುರುತ್ಸಿ ಬದಲಾದದ್ದು ನಾವು ನೋಡ್ತಾನೆ ಇದೀವಿ. ರೇಡಿಯೋ ಮಿರ್ಚಿ ಆ ಸಾಲಲ್ಲಿ ಮೊದಲ್ನೇದು. ಇದ್ರಲ್ಲಿ ಕನ್ನಡ ಹಾಡುಗಳು ಶುರುವಾಗಿದ್ದೆ ಆಗಿದ್ದು ಮಾರುಕಟ್ಟೇಲಿ ಮೊದಲ ಸ್ಥಾನಕ್ಕೆ ಜಿಗೀತು. ಇದರ ಯಶಸ್ಸಿನ ಬೆನ್ನ ಹಿಂದೇನೆ ಇತ್ತೀಚಿಗೆ ರೇಡಿಯೋ ಸಿಟಿ ಸಿಕ್ಕಾಪಟ್ಟೆ ಕನ್ನಡ ಹಾಡುಗಳು ಅನ್ನಕ್ ಶುರು ಹಂಚ್ಕೊಂತು. ಇದೀಗ ಬದಲಾವಣೆಯ ಸರದಿ ರೇಡಿಯೋ ’ಎಫ್.ಎಂ 104 - ಫಿವರ್’ದು. ಈ ಬದಲಾವಣೆಗಳು "ಬೆಂಗಳೂರಿನಲ್ಲಿ ಕನ್ನಡ ಇಲ್ಲ, ಇದು ಬಹುಭಾಷಾ ನಗರ, ಇದು ಕನ್ನಡಿಗರದ್ದಲ್ಲ, ಬೆಂಗಳೂರೇ ಬೇರೆ, ಕರ್ನಾಟಕವೇ ಬೇರೆ" ಅಂತೆಲ್ಲಾ ವಟಗುಟ್ಟುತಿರೋರ ಬಾಯಿಗೆ ಬೀಗ ಹಾಕೋದ್ರಲ್ಲಿ ಅನುಮಾನವೇ ಇಲ್ಲ! ಏನಂತೀ ಗುರು?

ಪ್ರಾದೇಶಿಕ ಪಕ್ಷವೇ ಪರಿಹಾರ!

ಚುನಾವಣೆ ಕಾಲದಲ್ಲಿ ನಾನಾ ತರದ ಸಮೀಕ್ಷೆ ನಡೆಯೋದು ಸಹಜ. ಇತ್ತೀಚಿನ ದಿನಗಳಲ್ಲೇ ಸ್ವಲ್ಪ ಮಹತ್ವ ಪಡ್ಕೊಳೋ ಅಂಥಾ ಒಂದು ವಿಷಯ ಕನ್ನಡಪ್ರಭದೋರು ಪ್ರಕಟಿಸಿದ ಸಮೀಕ್ಷೇಲಿ ಹೊರಬಂದಿದೆ. ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷ ಅಗತ್ಯವಿದೆಯೇ ಇಲ್ಲವೇ ಅನ್ನೋದಕ್ಕೆ ಜನ ತಮ್ಮ ಅಭಿಪ್ರಾಯ ತೋರ್ಸಿರೋದನ್ನು ನೋಡುದ್ರೆ ನಮ್ಮ ನಾಡಲ್ಲೊಂದು ಯೋಗ್ಯವಾದ ಪ್ರಾದೇಶಿಕ ಪಕ್ಷ ಹುಟ್ಟೋಕೆ ಕಾಲ ಪಕ್ವವಾಗಿದೆ ಅನ್ನುಸ್ತಿದೆ ಗುರು. ಅಂಥಾ ಒಂದು ಪಕ್ಷಾ ಹುಟ್ಕೊಂಡ್ರೆ ಅದು ಜನಮನ ಗೆಲ್ಲೋದು ಖಚಿತಾ ಗುರು!

ಕನ್ನಡಪ್ರಭದೋರು ಪ್ರಕಟಿಸಿದ ಸಮೀಕ್ಷೆಯ ಸಾರ...

ಮೊದಲ ಹಂತದ ಚುನಾವಣೆ ನಡೆದ ಪ್ರದೇಶಗಳಲ್ಲಿ ನಡೆಸಿದ ಸಮೀಕ್ಷೇಲಿ ಬೆಂಗಳೂರು ಬಿಟ್ಟು ಉಳಿದ ಜಿಲ್ಲೆಗಳ ಜನರಲ್ಲಿ ಅರ್ಧಕ್ಕರ್ಧ ಭಾಗ ಅಂದ್ರೆ ಶೇಕಡಾ. ೫೦ ರಷ್ಟು ಜನ ಅಂಥಾ ಪಕ್ಷದ ಅಗತ್ಯ ಇದೆ ಅಂದ್ರಂತೆ. ಒಟ್ಟಾರೆ ಶೇಕಡಾ ೩೬ ಜನತೆ ಇಂಥಾ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ ಅಂತ ಪ್ರತಿಪಾದನೆ ಮಾಡಿದಾರೆ. ಎರಡನೇ ಹಂತದ ಚುನಾವಣೆ ನಡೆಯೋ ಪ್ರದೇಶಗಳಲ್ಲಿರೋ ಜನರಲ್ಲಿ ಶೇಕಡಾ ೩೧ರಷ್ಟು ಮಂದಿ ಪ್ರಾದೇಶಿಕ ಪಕ್ಷಾ ಬೇಕು ಅಂದಿದಾರಂತೆ.

ಬರೀ ಮೂವತ್ತೈದು ಮಂದಿ ಅನ್ನೋ ಹಾಗಿಲ್ಲ!

ಇವತ್ತಿನ ಪರಿಸ್ಥಿತಿ ನೋಡಿ. ಭಾರೀ ಇತಿಹಾಸ ಇರೋ ರಾಷ್ಟ್ರೀಯ ಪಕ್ಷಗಳು ತಮ್ಮವು ಅನ್ನೋ ಕಾಂಗ್ರೆಸ್ಸು, ಬಿಜೆಪಿ ಒಂದು ಕಡೆ... ಅನುಕೂಲಕ್ ತಕ್ಕ ಹಾಗೆ ಒಂದ್ಸರ್ತಿ ರಾಷ್ಟ್ರೀಯ ಅಂತ್ಲೂ ಮತ್ತೊಮ್ಮೆ ಪ್ರಾದೇಶಿಕ ಅಂತ್ಲೂ ಅಂತಿರೋ ಜಾತ್ಯಾತೀತ ಜನತಾ ದಳದೋರು ಇನ್ನೊಂದು ಕಡೆ, ರಾಷ್ಟ್ರೀಯ ಪಕ್ಷಗಳು ಅನ್ನೋ ಭ್ರಮೇಲಿ ಉತ್ತರಪ್ರದೇಶದ್ದೋ ಮತ್ತೊಂದು ಪ್ರದೇಶದ್ದೋ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿಗಳಾಗಿರೋ ಇನ್ನೊಂದೆರಡು ಪಕ್ಷಗಳು ಮೂರನೇ ಕಡೆ... ಇದೆಲ್ಲಾ ಒಂದು ತೂಕವಾದ್ರೆ ಒಂದೆರಡು ಸೀಟುಗಳ ವಾಟಾಳ್ ಪಕ್ಷವೋ, ಬೇರು ಮಟ್ಟದ ಸಂಘಟನೆಯ ಕೊರತೆ ಇರೋ ಚಂಪಾ ಅವರ ಪಕ್ಷವೋ... ಹಿಂದೆಲ್ಲಾ ಸಿದ್ಧತೆ ಸರಿಯಿಲ್ಲದೆ, ತಳಹದಿ ಭದ್ರವಿಲ್ಲದೆ ನೆಲಕಚ್ಚಿದ ಇನ್ನಿತರ ಕನ್ನಡದ ಹೆಸರಿನ ಪಕ್ಷಗಳೋ... ಒಟ್ನಲ್ಲಿ ಕರ್ನಾಟಕದ ಜನತೆ ಮುಂದೆ, ಪ್ರಾದೇಶಿಕ ಪಕ್ಷ ಅನ್ನೋದು ಬಲಹೀನವಾದ ಬಡಬಡಿಕೆ ಥರ ಕಂಡಿದ್ದು, ಪರಿಣಾಮಕಾರಿ ರಾಜಕೀಯ ಶಕ್ತಿಯೊಂದು ಇರಕ್ಕೆ ಸಾಧ್ಯಾ ಅನ್ನೋ ಭರವಸೆಯ ಸಣ್ಣ ಬೆಳಕಿನ ಗೆರೆಯೂ ಕಾಣದೆ ಇರೋ ಕಗ್ಗತ್ತಲ ಸ್ಥಿತಿ ಇದೆ. ಇಂಥಾ ಸನ್ನಿವೇಶದಲ್ಲಿ ಈ ಮೂವತ್ತೈದರ ಆಸುಪಾಸಿನ ಅಂಕಿ ಅಂಶ ಕನ್ನಡಿಗರದ್ದೇ ಪ್ರಾದೇಶಿಕ ಪಕ್ಷ ಬೇಕು ಅನ್ನೋರ್ಗೆ ಭಾರಿ ಉತ್ಸಾಹದಾಯಕವಾಗಿದೆ ಗುರು!

ಕಾಲ ಕೂಡಿ ಬಂದಿದೆ!

ನಾಡು ನುಡಿಯ ಬಗ್ಗೆ ಸ್ಪಷ್ಟವಾದ ನೀತಿ ನಿಲುವು ಹೊಂದಿದ್ದು ಗಟ್ಟಿ ಸಿದ್ಧಾಂತದ ಬೆನ್ನೆಲುಬು ಇರೋಂಥಾ, ಕನ್ನಡ ನಾಡಿನ ಹಳ್ಳಿ ಹಳ್ಳಿಗಳಿಗೂ ಹಬ್ಬಿಕೊಂಡಿದ್ದು ನಾಡು ನುಡಿಯ ರಕ್ಷಣೆಗೆ ರಾಜಿರಹಿತವಾಗಿ ದುಡಿಯೋಂಥಾ ಒಂದು ಕನ್ನಡಿಗರ ಪಕ್ಷ ಹುಟ್ಟಕ್ಕೆ ಇದು ಸಕಾಲ! ಇಂಥಾ ಪಕ್ಷ ಒಂದು ಇದೆ, ಇವರಿಗೆ ಸ್ಪಷ್ಟವಾದ ನೀತಿ ನಿಲುವು ಇದೆ, ನಾಡು ಕಟ್ಟೋ ಕ್ಷಮತೆ ಇದೆ ಅನ್ನೋದು ಕನ್ನಡಿಗರಿಗೆ ಮನವರಿಕೆ ಆಗಿಬಿಟ್ರೆ ಈ ಮೂವತ್ತೈದು ಎಂಬತ್ತೈದು ಆಗೋದ್ರಲ್ಲಿ ಯಾವ ಅನುಮಾನವೂ ಇಲ್ಲಾ! ಕನ್ನಡಿಗರಲ್ಲಿ ಕನ್ನಡತನ ಜಾಗೃತಗೊಂಡರೆ ಇಂಥಾ ಒಂದು ರಾಜಕೀಯ ಪಕ್ಷ ಇಂದಲ್ಲಾ ನಾಳೆ ಹುಟ್ಟಿಕೊಳ್ಳೋದು ಖಂಡಿತಾ ಗುರು! ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳಿಗೇ ಹುಟ್ಟು ಕೊಟ್ಟಿರೋ ಕನ್ನಡಮ್ಮ ಇಂಥಾ ಒಂದು ಸ್ವಾಭಿಮಾನದ ಸಾಮ್ರಾಜ್ಯದ ಮರುಹುಟ್ಟಿಗೆ ಕಾರಣಳಾಗದೆ ಇರೋ ಅಷ್ಟು ಬಂಜೆ ಅಲ್ಲ ಗುರು!

ಕರ್ನಾಟಕದ ಚುನಾವಣೆಲಿ ಇವ್ರ ದೊಂಬರಾಟ ಯಾಕೆ?

ಚುನಾವಣೆ ಶುರುವಾಗೈತೆ. ಈಗಾಗ್ಲೆ ಮೊದಲ್ನೆ ಹಂತದ ಮತದಾನ ಮುಗಿದೈತೆ. ಇದ್ರಲ್ಲಿ ಎಷ್ಟೋ ನಾಯಕ್ರುಗಳ ಹಣೆಬರಾ ನಿಕ್ಕಿ ಆಗೈತೆ. ಈ ಚುನಾವಣೆ ಕಾಲದಾಗೆ ಭಾರೀ ಪ್ರಚಾರಗಳೂ ನಡುದ್ವು. ನಮ್ಮ ಪಾರ್ಟಿಗೇ ಓಟ್ ಹಾಕಿ ಅಂತಾ ಪ್ರತಿಯೊಬ್ರೂ ಒಂದೊಂದೂ ಕ್ಷೇತ್ರದಲ್ಲೂ ಹೋಗಿ ಪ್ರಚಾರ ಮಾಡುದ್ರು. ಜನರ ಮನಸ್ಸನ್ನು ಗೆಲ್ಲಬೇಕು ಅಂತಾ ತಮ್ಮ ತಮ್ಮ ಪಕ್ಷಗಳ ದೊಡ್ದ ದೊಡ್ಡ ನಾಯಕ್ರುಗಳನ್ನೂ ಕರ್ಕೊಂಡು ಬಂದು ಭಾಷಣ ಮಾಡಿಸುದ್ರು. ನಿಜವಾಗ್ಲೂ ಹಾಗೆ ಹೊರಗಿಂದ ನಾಯಕ್ರುಗಳನ್ನು ಕರ್ಕೊಂಡು ಬರೋ ಅಗತ್ಯ ಇದೆಯಾ? ಹಾಗೆ ಬಂದೋರಾದ್ರೂ ಏನು ಕಿಸುದ್ರು? ಅಂತಾ ಒಸಿ ನೋಡ್ಮಾ ಬನ್ನಿ...

ಯಾರು ಯಾರು ಬಂದಿದ್ರು? ಬರ್ತಾರೆ?

ಕಾಂಗ್ರೆಸ್ ಪಕ್ಷದೋರು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಅಂಬಿಕಾ ಸೋನಿ, ಪುರಂದರೇಶ್ವರಿ, ಕಪಿಲ್ ಸಿಬಾಲ್, ರಾಹುಲ್ ಗಾಂಧಿ, ಗುಲಾಂ ನಬೀ ಆಜಾದ್, ಡಾ.ರಾಜಶೇಖರ ರೆಡ್ಡಿ, ವಿಲಾಸ್ ರಾವ್ ದೇಶಮುಖ್ ಇವ್ರುನ್ನೆಲ್ಲಾ ಕರ್ಕೊಂಬಂದು ಕರ್ನಾಟಕದಲ್ಲಿ ಪ್ರಚಾರ ಕೈಗೊಂಡ್ರು. ಬಿಜೆಪಿಯೋರು ಅಡ್ವಾಣಿ, ನರೇಂದ್ರ ಮೋದಿ, ವೆಂಕಯ್ಯ ನಾಯ್ಡು, ರಾಜನಾಥ್ ಸಿಂಗ್, ಹೇಮಮಾಲಿನಿ, ಅರುಣ್ ಜೇಟ್ಲಿ, ಸ್ಮೃತಿ ಇರಾನಿ, ವಿನೋದ್ ಖನ್ನಾ, ಸುಷ್ಮಾ ಸ್ವರಾಜ್ ಇವ್ರುಗಳನ್ ಕರ್ಕೊಂಡ್ ಬಂದ್ರು. ಕಮ್ಯುನಿಸ್ಟರ ಪರವಾಗಿ ಬೃಂದಾ ಕ್ಯಾರಟ್ ಬಂದದ್ದೂ ಆಯ್ತು. ಬಹುಜನ ಸಮಾಜ ಪಕ್ಷದ ಕುಮಾರಿ ಮಾಯಾವತಿ ಬಂದ್ರು. ಇನ್ನೂ ಬಂಗಾರಪ್ಪೋರು ಮುಲಾಯಮ್ ಸಿಂಗ್ ಯಾದವ್, ಅಮರ್ ಸಿಂಗ್, ಜಯಾಬಚ್ಚನ್ನು, ಜಯಪ್ರದಾ... ಅವ್ರುನ್ನು ಕರ್ಕೊಂಡು ಬರೋದಿದೆ.

ನಮ್ಮ ಏಳಿಗೆ ಬಗ್ಗೆ ಏನಂದ್ರು?

"ಕರ್ನಾಟಕಾನ ಹೇಗೆ ಉದ್ಧಾರ ಮಾಡ್ತೀವಿ, ಇಲ್ಲಿರೋರ ಸಮಸ್ಯೆಗಳನ್ನು ಹೇಗೆ ಬಗೆಹರುಸ್ತೀವಿ" ಅನ್ನೋದು ಚುನಾವಣೆ ವಿಷಯ ಆಗಬೇಕಿತ್ತು. "ಕರ್ನಾಟಕದ ರಸ್ತೆ, ರೈಲು, ವಿಮಾನ ಸಂಪರ್ಕದ ಬಗ್ಗೆ, ನಮ್ಮಲ್ಲಿಗೆ ಬಂಡವಾಳಾ ತರೋ ಬಗ್ಗೆ, ನಮ್ಮ ಜನಕ್ಕೆ ಉದ್ಯೋಗ ಅವಕಾಶ ಕೊಡ್ಸೋ ಬಗ್ಗೆ, ಬಡತನದ ರೇಖೆಗಿಂತ ಕೆಳಗಿರೋ ಜನಗಳ್ನ ಬಡತನ ರೇಖೆಗಿಂತ ಮೇಲೆತ್ತೋ ಬಗ್ಗೆ, ಹ್ಯಾಗೆ ನಮ್ಮ ನಾಡಲ್ಲಿ ವ್ಯವಸಾಯಕ್ಕೆ ಅನುಕೂಲ ಮಾಡಿಕೊಡೋ ನೀರಾವರಿ ಯೋಜನೆಗಳನ್ನು ಜಾರಿ ಮಾಡ್ತೀವಿ, ಹ್ಯಾಗೆ ಪರಿಣಿತ ಕಸುಬುದಾರರಿಗೆ ಮಾರುಕಟ್ಟೆ ಹುಟ್ಟಿಸಿ ಕೊಡ್ತೀವಿ, ಹ್ಯಾಗೆ ಏಳಿಗೆಗೆ ಅನುಕೂಲ ಆಗೋ ಹಾಗೆ ವ್ಯವಸ್ಥೆ ಮಾಡಿಕೊಡ್ತೀವಿ" ಅಂತೇನಾದ್ರೂ ಅಂದ್ರಾ ಅಂದ್ರೆ ...ಊಹೂ ಒಬ್ರಾದ್ರೂ ಈ ಬಗ್ಗೆ ಗಟ್ಯಾಗಿ ಮಾತಾಡ್ಲಿಲ್ಲ. ಬಿಟ್ಟಿ ಕರೆಂಟು, ಸಾಲಮನ್ನಾ, ಮನೆಗಳು, ಬಡ್ಡಿ ಇರದ ಸಾಲ, ಬಣ್ಣದ ಟಿವಿ ಅಂತ ಬಣ್ಣಬಣ್ಣವಾಗಿ ಅಂದ್ರು ಅಷ್ಟೆ.

ಎಷ್ಟು ಪರಿಣಾಮಕಾರಿ ಇವ್ರ ಮಾತು?

ಕರ್ನಾಟಕದ ಸಮಸ್ಯೆಗಳ ಬಗ್ಗೆ ಬೇರೆಲ್ಲೋ ಹೊರಗಿಂದ ಬರೋರಿಗೆ ಹ್ಯಾಗೆ ಅರಿವಿರಲು ಸಾಧ್ಯ? ಹೀಗೆ ರಾಷ್ಟ್ರೀಯ ನಾಯಕ್ರು(?)ಗಳ್ನ ಮುಂದು ಮಾಡ್ಕೊಂಡು ಬರೋದ್ರ ಅರ್ಥ ಅವ್ರು ನಮ್ಮ ಹೈಕಮಾಂಡು, ಇಲ್ಲಿ ಆಡಳಿತಾನೂ ಅವ್ರು ಹೇಳಿದಂಗೇ ನಡ್ಯೋದು ಅನ್ನೋ ಸಂದೇಶ ಕೊಡುತ್ತಲ್ವಾ ಗುರು? ಇರಲಿ, ಬೆಂಗಳೂರಿನ ನೇಕಾರರ ಸಮಸ್ಯೆ, ಚನ್ನಪಟ್ಟಣದ ರೇಶ್ಮೆ ಬೆಳೆಗಾರರ ಸಮಸ್ಯೆ, ವರ್ಷಕ್ಕೊಂದು ಸಾರ್ತಿ ಮನೆ ಒಳಗೆ ನುಗ್ಗಿ ದನಕರುಗಳ್ನ ಎಳ್ಕೊಂಡು ಹೋಗೋ ಬೆಳೆದ್ ಬೆಳೆನಾ ನುಂಗಿಹಾಕೋ ಕೃಷ್ಣಾ ಪ್ರವಾಹದ ಬಗ್ಗೆ....ಏನು ಗೊತ್ತಿರೋಕೆ ಸಾಧ್ಯ? ನಾಡು ಕೇಂದ್ರದಿಂದ, ನೆರೆ ರಾಜ್ಯಗಳಿಂದ ಎದುರುಸ್ತಾ ಇರೋ ಆತಂಕಗಳು, ತಾರತಮ್ಯಗಳ ಬಗ್ಗೆ ಏನು ನಿಲುವನ್ನು ಇವರು ತೋರಿಸಕ್ಕೆ ಸಾಧ್ಯ?
ಇದರ ಜೊತೆಗೆ ಇವರ ಭಾಷಣಗಳನ್ನು ನಮಗೆ ಅರ್ಥವಾಗದ ಭಾಷೇಲಿ ಮಾಡ್ಸುದ್ರೆ, ಅದುನ್ನ ನಮ್ಮ ಭಾಷೆಗೆ ತರ್ಜುಮೆ ಮಾಡದೆ ಹೋದ್ರೆ ಹೇಗೆ ಇವರ ನಿಲುವುಗಳು ಜನರಿಗೆ ಅರ್ಥವಾಗುತ್ತೆ? ಇನ್ನು ಜನ್ರನ್ ಸೆಳೆಯಕ್ಕೆ ಅಂತಾ ಸಿನಿಮಾದೋರ್ನಾ, ದೂರದರ್ಶನದೋರ್ನ ಕರ್ಕೊಂಡು ಬರ್ತಾರಲ್ಲಾ... ಎಷ್ಟು ಜನರಿಗೆ ಈ ಸ್ಮೃತಿ ಇರಾನಿ, ವಿನೋದ್ ಖನ್ನಾ, ಜಯಪ್ರದಾಗಳು ಗೊತ್ತಿದಾರೆ? ಗೊತ್ತಿದ್ರೂ ಇವರೆಲ್ಲಾ ನಮ್ಮ ಜನ್ರುನ್ ಎಷ್ಟು ಪರಿಣಾಮಕಾರಿಯಾಗಿ ಸೆಳೆಯಕ್ಕೆ ಆಗುತ್ತೆ? ಇದೇನು ಈ ಪಕ್ಷಗಳ ನಾಯಕರಿಗೆ ಅರ್ಥ ಆಗಿಲ್ವಾ? ಈ ನಾಯಕರುಗಳನ್ನು ಕರ್ಕೊಂಡು ಬಂದು ಬೀದಿ ಬೀದಿಲಿ ಮೆರವಣಿಗೆ ಮಾಡ್ಸೋದೂ, ನಮಗೆ ಅರ್ಥವಾಗದ, ನಮ್ಮ ಜನರದ್ದಲ್ಲದ ಭಾಷೇಲಿ ಭಾಷಣ ಮಾಡ್ಸೋದೂ ಪರಿಣಾಮಕಾರಿ ಚುನಾವಣಾ ತಂತ್ರ ಅಂತ ನಂಬಿ ನಡ್ಯೋರಿಗೆ ಏನು ಹೇಳೋದು ಗುರು?

’ಗುರುತಿನ ಚೀಟಿ’ ಅನ್ನೋ ವ್ಯವಸ್ಥೆಯ ಕನ್ನಡಿ!

ಇತ್ತೀಚೆಗೆ ಮತದಾರರ ಗುರುತಿನ ಚೀಟಿ ವಿತರಣೇಲಿ ಆಗ್ತಿರೋ ಒಂದು ಯಡವಟ್ಟಿನ ಕಥೆ ಇದು ಗುರು. ಗುರುತು ಚೀಟಿ ಕೊಡ್ತಿದಾರೆ ಅಂತಾ ದಿನವಿಡೀ ಸಾಲಲ್ಲಿ ನಿಂತು, ಬಿಸಿಲಲ್ಲಿ ಬೆಂದು ಬೇಸತ್ತು ಕೊನೆಗೂ ಚೀಟಿ ಸಿಕ್ತಪ್ಪ ಅಂತ ಮನೆಗೆ ತಂದು ನೋಡುದ್ರೆ... ತಕ್ಕಳಪ್ಪ! ತಂದೆ ಹೆಸ್ರು ಕನ್ನಡದಲ್ಲಿ ಒಂದು, ಇಂಗ್ಲಿಷಲ್ಲಿ ಮತ್ತೊಂದು! ಯಾಕ್ರಿ ಸ್ವಾಮಿ ಹಿಂಗ್ ಮಾಡುದ್ರಿ ಅಂತಾ ಕೇಳುದ್ರೆ ಈ ಚೀಟಿ ಮಾಡ್ಕೊಡ್ತಿದ್ದ ಮಹಾನುಭಾವರಿಗೆ ಕನ್ನಡ ಓದಕ್ಕೆ ಬರೆಯಕ್ಕೇ ಬರಲ್ಲ ಅನ್ನೋ ಆಘಾತಕಾರಿ ಅಂಶ ಹೊರಗೆ ಬಿತ್ತು! ಕನ್ನಡ ಓದಕ್ಕೆ ಬರದೆ ಇರೋರು ಕನ್ನಡದಲ್ಲಿ ಹೆಸರನ್ನು ಹ್ಯಾಗಪ್ಪಾ ಟೈಪು ಮಾಡುದ್ರು ಅಂದ್ರೆ ಇಂಗ್ಲಿಷಲ್ಲಿ ಟೈಪ್ ಮಾಡೋದು, ಕನ್ನಡ ಅಕ್ಷರದಲ್ಲಿ ಮೂಡುತ್ತೆ ಅನ್ನೋದೆ... ತಾವು ಮಾಡಿದ್ದು ಅದ್ಲು ಬದ್ಲು ಕಂಚಿ ಕದ್ಲು ಆದ್ರೆ ಏನಪ್ಪ ಮಾಡೋದು ಅನ್ನೋ ಆತಂಕವೂ ಇಲ್ದೆ ತಪ್ಪು ತಪ್ಪಾಗಿ ಮತದಾರರ ಗುರುತಿನ ಚೀಟಿ ಮಾಡಿಕೊಡ್ತಿದ್ರು ಅಂದ್ರೆ ಇದು ನಿಜಕ್ಕೂ ನಮ್ಮ ವ್ಯವಸ್ಥೆಗೆ ಹಿಡಿಯೋ ಕನ್ನಡಿ ಆಗಿದೆ ಗುರು!
ಗುರುತು ಪತ್ರ ತಪ್ಪಿಲ್ಲದೇ ಇರಬೇಕಾದುದ್ರ ಮಹತ್ವ

ಈ ಗುರುತು ಪತ್ರ ಬರೀ ಮತ ಚಲಾವಣೆಗೆ ಮಾತ್ರಾ ಬಳಕೆ ಆಗಲ್ಲ, ಇದನ್ನು ಎಲ್ಲೆಲ್ಲಿ ವಿಳಾಸ ಖಾತ್ರಿಗೆ ದಾಖಲೆ ಬೇಕು ಅಂತಾರೋ ಅಲ್ಲೆಲ್ಲಾ ಬಳುಸ್ಬೋದು. ಅಂದ್ರೆ ಪಾಸ್ ಪೋರ್ಟು, ಡ್ರೈವಿಂಗ್ ಲೈಸೆನ್ಸು... ಎಲ್ಲಾ ಕಡೆ. ಇಂಥಾ ಮಹತ್ವದ ದಾಖಲೆ ಪತ್ರಾನ ವಿತರಣೆ ಮಾಡೋವಾಗ ಸರಿಯಾಗಿ ತಪ್ಪಿಲ್ಲದೇ ಮಾಡದೇ ಹೋದ್ರೆ ಏನೇನೆಲ್ಲಾ ಅನಾಹುತಾ ಆದೀತಲ್ವಾ ಗುರು? ಬದುಕಿದ್ದವ್ರು ಸಾಯಬೌದು, ಇಲ್ದೇ ಇದ್ದೋರು ಹುಟ್ಕೋಬೌದು, ಅನಧಿಕೃತವಾಗಿ ಇಲ್ಲಿರೋರು ತಮ್ಮ ಇರುವನ್ನು ಅಧಿಕೃತ ಮಾಡ್ಕೊಂಡು ಏನುಬೇಕಾದ್ರೂ ಮಾಡ್ಬೌದಲ್ಲಾ ಗುರು? ಇಲ್ಲಿರೋ ಮಾಹಿತಿ ತಪ್ಪು ತಪ್ಪಾಗಿದ್ರೆ ’ಗುರುತಿನ ಚೀಟಿ’ ’ಪ್ರಜಾಪ್ರಭುತ್ವ’ ’ಚುನಾವಣೆ’ ಅನ್ನೋದಕ್ಕೆಲ್ಲಾ ಅರ್ಥವೇ ಇರಲ್ಲ ಅಷ್ಟೆ. ಇದು ಒಂದು ಸಮಸ್ಯೆ ಆದ್ರೆ ಸರಿಯಾದ ಮನುಷ್ಯಂಗೆ ತಪ್ಪು ತಪ್ಪು ಗುರುತು ಚೀಟಿ ಕೊಟ್ಟು ಇಂಥಾ ಚೀಟಿ ತೊಗೊಂಡು ಮತದಾನ ಮಾಡಕ್ಕೆ ಆಗದ ಹಾಗೆ ಆದ್ರೆ ಅವನ ಮೂಲಭೂತ ಹಕ್ಕುನ್ನೇ ಕಿತ್ಕೊಂಡ ಹಾಗಾಗೋದು ಇನ್ನೊಂದು ಸಮಸ್ಯೆ.
ಯಾಕೆ ಹೀಗಾಗುತ್ತೆ?
ಗುರುತು ಚೀಟಿ ನೀಡೋ ಕೆಲಸಾನ ಚುನಾವಣಾ ಆಯೋಗದೋರು ಕೆಲ ಸಂಸ್ಥೆಗಳಿಗೆ ವಹಿಸಿರ್ತಾರೆ. ಇಂಥಾ ಸಂಸ್ಥೆಗಳೋರಿಗೆ ಈ ಕೆಲಸ ಮಾಡಕ್ಕೆ ಇರಬೇಕಾದ ಸಲಕರಣೆ, ಅರ್ಹತೆಗಳು ಇದೆಯೋ ಇಲ್ವೋ ನೋಡಬೇಕಾದ್ರೆ ಅವರಿಗೆ ಕನ್ನಡ ಬರುತ್ತಾ ಅಂತ್ಲೂ ಗಮನಿಸಿರಲ್ಲ, ಕನ್ನಡ ಬರಬೇಕು ಅನ್ನೋ ಕಟ್ಟಳೇನೂ ವಿಧಿಸಿರಲ್ಲ. ಹಾಗೆ ಮಾಡಿದ್ದಿದ್ರೆ ಹೀಗಾಗ್ತಾನೂ ಇರಲಿಲ್ಲ. ಯಾರೋ ಹೊರಗಿನವ್ರಿಗೆ ಈ ಕೆಲ್ಸ ಒಪ್ಪಿಸಿದ್ರ ಪರಿಣಾಮವೇ ಇಂಥಾ ತಪ್ಪುಗಳಿಗೆ ಕಾರಣ! ಕನ್ನಡ ನಾಡಿನಲ್ಲಿ ಗುರುತು ಪತ್ರ ಮಾಡೋ ಕೆಲ್ಸಾನ ತಮಿಳುನಾಡು ಮೂಲದ ಮೈಕ್ರೋಟೆಕ್ ಸಂಸ್ಥೆಗೆ ಯಾಕೆ ಒಪ್ಪಿಸಬೇಕಿತ್ತು? ಇಲ್ಲಿ ಆ ಸಂಸ್ಥೆ, ಈ ಕೆಲಸಕ್ಕೆ ಕನ್ನಡವರನ್ಯಾಕೆ ನೇಮಕ ಮಾಡ್ಕೊಳ್ಳಿಲ್ಲಾ? ಇದೆಲ್ಲಾ ಭಾರತದಲ್ಲಿ ಆಡಳಿತ ವ್ಯವಸ್ಥೆ ತಪ್ಪುಗಳಿರೋ ಗುರುತು ಚೀಟಿಯ ಹಾಗೇ ಇರೋದ್ನ ತೋರುಸ್ತಾ ಇದೆ ಅನ್ನಿಸ್ತಿಲ್ವಾ ಗುರು?
ಸರಿಯಾದ ಚೀಟಿಯ ಜಾಗದಲ್ಲಿ ಹತ್ತು ತಪ್ಪು ತುಂಬಿರೋ ಚೀಟಿ ಮುದ್ರಣ ಮಾಡ್ತಿರೋ ಈ ಕನ್ನಡ ಬಾರದ ಕೆಲ್ಸಗಾರರಿಂದ ಸರ್ಕಾರದ ಮತ್ತು ನಮ್ಮ ಹಣ ಮತ್ತು ಸಮಯ ಎರಡೂ ದಂಡ ಆಗ್ತಿದೆ! ಚುನಾವಣೆ ಮುಗಿದೋದ್ರು ನಮ್ಮ ಹತ್ರ ಗುರುತು ಚೀಟಿ ಮಾತ್ರ ಇರಲ್ಲ. ನಮ್ಮ ಮತದ ಹಕ್ಕೂ ಕೈ ತಪ್ಪೋಗತ್ತೆ! ನಮಗೆ ಬೇಕಾದೋರು ಆಯ್ಕೆಯಾಗದೆ ಇರಕ್ಕೆ ಇದು ನೆರವಾಗೋಗತ್ತೆ! ಕನ್ನಡಿಗರಿಗೆ ಸಿಗಬೇಕಾಗಿದ್ದ, ಸಹಜವಾಗಿಯೇ ಕನ್ನಡಿಗರದ್ದಾದ ಕೆಲಸವೂ ಖೋತಾ!
ನಾಳೆ ಹೀಗೂ ಆಗಬಹುದಲ್ವಾ?
ಒಂದು ಸಣ್ಣ ಚೀಟಿಯ ಕೆಲ್ಸಕ್ಕೂ ಪರಭಾಷಿಕರನ್ನು ಕರೆತಂದು ಚುನಾವಣಾ ಆಯೋಗ ಕನ್ನಡಿಗರಿಗೆ ಸಿಗಬಹುದಾದ ಈ ಉದ್ಯೋಗವನ್ನು ಕಿತ್ತುಕೊಂಡಿದ್ದರ ಜೊತೆಗೆ ಪ್ರಜಾಪ್ರಭುತ್ವವನ್ನು ಜನರಿಂದ ದೂರ ಮಾಡ್ತಿದೆ. ಸರಳವಾದ ಒಂದೊಳ್ಳೆ ವ್ಯವಸ್ಥೆ ಕಲ್ಪಿಸೋ ಬದಲು ಇಂತಹ ಹುನ್ನಾರಗಳ ಫಲವಾಗಿ ಮುಂದೊಂದು ದಿನ "ಈ ಗುರುತು ಪತ್ರ ಕನ್ನಡದಲ್ಲಿ ಇರೋದ್ರಿಂದಲೇ ಸಮಸ್ಯೆ-ಬೇರೆ ಭಾಷೆಯೋರು ಇದನ್ನು ತಯಾರಿಸಕ್ಕೆ ಆಗಲ್ಲ-ಭಾರತದ ಆಡಳಿತ ಭಾಷೆ ಹಿಂದಿ, ಹಾಗಾಗಿ ಹಿಂದೀ ಮತ್ತು ಇಂಗ್ಲಿಷಲ್ಲಿ ಮಾತ್ರಾ ಗುರುತು ಚೀಟಿ ಇರಬೇಕು-ಇದನ್ನು ತಯಾರಿಸೋರು ಕಡ್ಡಾಯವಾಗಿ ಹಿಂದೀ ಕಲೀಲಿ-ಹೇಗೂ ಹಿಂದೀನ ಶಾಲಾ ಹಂತದಿಂದಲೇ ಹೇಳಿಕೊಡ್ತೀವಲ್ಲಾ" ಅಂತಾರೇನೋ.
ಒಂದು ಸರಿಯಾದ ಚುನಾವಣಾ ಪ್ರಕ್ರಿಯೇಲಿ ಪ್ರತಿಯೊಂದು ಹಂತದ ಕೆಲ್ಸದಲ್ಲೂ ಪ್ರಾದೇಶಿಕ ಭಾಷಾ ಪ್ರಯೋಗ ಮುಂದಿರಬೇಕು. ಗುರುತಿನ ಚೀಟಿಯೇ ಇರಲಿ, ಮತದಾನದ ಜಾಹಿರಾತುಗಳೇ ಇರಲಿ, ಪಕ್ಷಗಳ ಪ್ರಣಾಳಿಕೆ ಅಥ್ವಾ ಇತರ ಮುದ್ರಣಗಳೇ ಇರಲಿ, ಚುನಾವಣಾ ಆಯೋಗದ ನೀತಿ ನಿಯಮಗಳೇ ಇರಲಿ, ಮತಗಟ್ಟೆಗಳಲ್ಲಿನ ನಿರ್ದೇಶನಗಳಿರಲಿ, ಮತ ಚೀಟಿ ಅಥವಾ ಯಂತ್ರವೇ ಇರಲಿ... ಎಲ್ಲದ್ರಲ್ಲೂ ಕನ್ನಡವೇ ಇರಬೇಕು. ಇಲ್ದೇ ಹೋದಲ್ಲಿ ಆ ಚುನಾವಣೆ ಪರಿಣಾಮಕಾರಿಯಾಗಿ ನಡೆದೀತಾ ಅನ್ನೋ ಅನುಮಾನ ತರೋದು ಸತ್ಯಾ ಗುರು!

ತೆಲುಗುಗಂಗಾ ಹರಿಸ್ತಿರೋ ರಾಜಕೀಯ ಪಕ್ಷಗಳು!

ಚುನಾವಣೆ ಅಂದ ಕೂಡ್ಲೆ ಬೆದೆಗೆ ಬಂದೋರಂಗೆ ಆಡ್ತಿರೋ ರಾಜಕೀಯ ಪಕ್ಷಗಳು ಶತಾಯ ಗತಾಯ ಗೆಲ್ಲಲೇಬೇಕು ಅನ್ನೋ ಆಸೇಲಿ ಮಾಡಬಾರದ್ ಮಾಡ್ತಿರೋದ್ನ ನೋಡು ಗುರು! ಕನ್ನಡ ನಾಡಿನ ವಿಧಾನ ಸಭಾ ಚುನಾವಣೆಯಲ್ಲಿ ನಾನಾ ರಾಜಕೀಯ ಪಕ್ಷಗಳು ಟಿಕೆಟ್ ನೀಡಿರೋ ಅಭ್ಯರ್ಥಿಗಳು, ಪ್ರಚಾರಕ್ಕೆ ಕರ್ಕೊಂಡು ಬರ್ತಿರೋ ತೆಲುಗು ನಾಯಕ್ರುಗಳನ್ನು ನೋಡ್ತಿದ್ರೆ ಇದೇನು ಕರ್ನಾಟಕದಲ್ಲಿ ನಡೀತಾ ಇರೋ ಚುನಾವಣೇನೋ ಆಂಧ್ರಪ್ರದೇಶದ್ದೋ ಅನ್ನೋ ಅನುಮಾನ ಬರ್ತಿದೆ.

ಕನ್ನಡಿಗರೇ ಆದ ಮಹನೀಯರು!

ನೂರಾರು ವರ್ಷಗಳಿಂದ ನಮ್ಮ ನೆಲದಲ್ಲಿ ವಾಸ ಮಾಡ್ಕೊಂಡು ಕನ್ನಡ ನಾಡು ನುಡಿ ಸಂಸ್ಕೃತಿಗಳಿಗೆ ತಮ್ಮ ಜೀವ ಸವೆಸಿದ ಪರಭಾಷಿಕರು ಅನೇಕರು. ಅದರಲ್ಲೂ ಅಂಥಾ ತೆಲುಗರ ಸಂಖ್ಯೆ ದೊಡ್ದು. ಮನೆ ಮಾತು ತೆಲುಗೇ ಆಗಿದ್ರೂ ಕನ್ನಡಕ್ಕಾಗಿ ದುಡಿದ ಮಹನೀಯರಿಗೆ ಸದಾ ಗೌರವಾ ತೋರುಸ್ತಾನೆ ಇದಾನೆ ಕನ್ನಡಿಗ. ಆ ಮಹನೀಯರಲ್ಲಿ ಕೆಲವ್ರು ದೇವುಡು ನರಸಿಂಹ ಶಾಸ್ತ್ರಿ, ಮ.ರಾಮಮೂರ್ತಿ, ವೀರಕೇಸರಿ ಸೀತಾರಾಮ ಶಾಸ್ತ್ರಿ, ಬೀಚಿ, ಟಿ ಎಸ್ ವೆಂಕಣ್ಣಯ್ಯ, ಲಲಿತಾ ಶಾಸ್ತ್ರಿ, ತಿರುಮಲೆ ತಾತಾಚಾರ್ಯ ಶರ್ಮ ಮುಂತಾದವ್ರು. ಇವ್ರಷ್ಟು ದೊಡ್ಡ ಮನುಷ್ಯರಾಗಿ ಬೆಳೆಯದಿದ್ರೂ ನಾಡಿನ ಮುಖ್ಯವಾಹಿನೀಲಿ ಬೆರ್ತಿರೋ ಅದೆಷ್ಟೊ ತೆಲುಗು ಭಾಷಿಕರಿದ್ದಾರೆ. ಇವರನ್ನೆಲ್ಲಾ ಕನ್ನಡದೋರೂ ಕೂಡಾ ನಮ್ಮೋರು ಅಂತಾ ಒಪ್ಪಾಗಿದೆ. ಇವ್ರು ಕನ್ನಡದೋರಲ್ಲಾ ಅನ್ನೋ ಬುದ್ಧಿ ಯಾವ ಕನ್ನಡದೋನ್ಗೂ ಇಲ್ಲಾ ಅನ್ನೋದೂ ಸತ್ಯಾ ಗುರು!

ಹುಸಿ ರಾಷ್ಟ್ರೀಯತೆಗೆ ಕನ್ನಡಮ್ಮನ ಬಲಿ...

ಭಾರತೀಯ ಜನತಾ ಪಕ್ಷದೋರು ಈ ನೆಲದ ಜನರನ್ನೇ ಕಡೆಗಣುಸ್ತಾ ಇರೋದು ಇವತ್ತಿನದಲ್ಲ. ಆಂಧ್ರದ ವೆಂಕಯ್ಯ ನಾಯ್ದು ಅವರನ್ನು ರಾಜ್ಯಸಭೆಗೆ ಕಳಿಸ್ದಾಗ್ಲೆ ಇವ್ರ ಬಣ್ಣ ಬಯಲಾಯ್ತು. ಇದೀಗ ಚುನಾವಣೆಯಲ್ಲಿ ತೆಲುಗು ಮನೆ ಮಾತಾಗಿರೋ ಕನ್ನಡಿಗರನ್ನು ಒಲುಸ್ಕೋತೀವಿ ಅಂತಾ ಕಟ್ಟಾ ಸುಬ್ರಮಣ್ಯನಾಯ್ಡು, ಸಾಯಿಕುಮಾರ್ ಥರದೋರು ತೆಲುಗಲ್ಲೇ ಪ್ರಚಾರ ಮಾಡ್ತಿದಾರೆ. ಇದಕ್ಕೆಲ್ಲಾ ಕಲಶ ಇಟ್ಟ ಹಾಗೆ ಇತ್ತೀಚಿಗೆ ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಕನ್ನಡಿಗರನ್ನು ಉದ್ದೇಶಿಸಿ ವೆಂಕಯ್ಯ ನಾಯ್ಡು ಅನ್ನೋ ಮನುಷ್ಯಾ ತೆಲುಗಿನಲ್ಲಿ ಮಾತಾಡುದ್ರು. ವೇದಿಕೆ ಮೇಲಿದ್ದ ಭಾಜಪ ಮುಖಂಡರೆನ್ನಿಸಿಕೊಂಡಿರೋ ಮಹಾನ್ ಕನ್ನಡಿಗರಿಗೆ (?) ಏನೂ ಅನ್ನುಸ್ಲಿಲ್ಲ. ಇನ್ನೂ ಅದ್ಭುತವಾದ ತಂತ್ರ ಅಂತಾ ತೆಲುಗು ಮತದಾರರನ್ನು ಓಲೈಸಲು ಆಂಧ್ರದಿಂದ ಕಾರ್ಯಕರ್ತರನ್ನು, ಮರಾಠಿ, ಗುಜರಾತಿ, ತಮಿಳು ಭಾಷಿಕರಿಗೆ ಆಯಾ ರಾಜ್ಯಗಳಿಂದ ಕಾರ್ಯಕರ್ತರನ್ನು ಕರೆಸಿ ಅವ್ರವ್ರ ಭಾಷೇಲೇ ಪ್ರಚಾರ ಮಾಡುಸ್ತಿದಾರೆ. ಮತ ಬೇಕು ಅಂದ್ರೆ ತಾಯಿನುಡಿ, ತಾಯಿನಾಡೇನು ಹೆತ್ತಮ್ಮನ್ನೂ ಕಡೆಗಣ್ಸೋಕೆ ನಮ್ಮ ಈಗಿನ ರಾಜಕೀಯ ಪಕ್ಷಗಳೋರು ಮುಂದಾಗ್ತಾರೇನೋ! ತಮ್ಮ ಪಕ್ಷದ ಜುಟ್ಟುನ್ನ ಆಂಧ್ರದಿಂದ ವಲ್ಸೆ ಬಂದು ಗಣಿಗಾರಿಕೆ ಮಾಡ್ತಿರೋ ಧಣಿಗಳಿಗೆ ಒಪ್ಸಿ ಕೂತಿರೋ ಬಿಜೆಪಿಯವ್ರಿಂದ ಇನ್ನೇನು ತಾನೆ ನಿರೀಕ್ಷೆ ಮಾಡಕ್ ಆದೀತು ಗುರು! ಅಲ್ಪಸಂಖ್ಯಾತರ ತುಷ್ಟೀಕರಣ ನಿಲ್ಲಲಿ ಅಂತ ಸದಾ ಬಾಯ್ ಬಾಯಿ ಬಡ್ಕೊಳೋ ಬಿಜೆಪಿ ಈಗ ತಾನು ಮಾಡ್ತಿರೋದಾದ್ರೂ ಏನು? ಅಲ್ಪಸಂಖ್ಯಾತರ ತುಷ್ಟೀಕರಣ ಒಗ್ಗಟ್ಟಿಗೆ ಮಾರಕ ಅನ್ನೋರ ಕಣ್ಣಿಗೆ ಭಾಷಾ ಅಲ್ಪಸಂಖ್ಯಾತರ ತುಷ್ಟೀಕರಣವೂ ಅದೇ ಪರಿಣಾಮ ಬೀರುತ್ತೆ ಅಂತಾ ಗೊತ್ತಿಲ್ವಾ? ತಮಗೆ ಮತ ಸಿಗೋಕ್ಕೆ, ಅಧಿಕಾರ ಸಿಗಕ್ಕೆ ತಾಯಿನಾಡಿನ ಹಿತಕ್ಕೆ ಮಾರಕವಾಗಿ ನಡ್ಕೊಳ್ಳೋದು ಯಾವ ಸೀಮೆ ರಾಷ್ಟ್ರೀಯತೆ. ಗುರು?
ಇದ್ಯಾವ ಸೀಮೇ ಸ್ಪರ್ಧೆ?

ನಾವೇನು ಕಮ್ಮಿ ಇಲ್ಲ ಅಂತಾ ಕಾಂಗ್ರೆಸ್ ಪಕ್ಷದೋರು ಆಂಧ್ರಪ್ರದೇಶದಿಂದ ರಾಜಶೇಖರ ರೆಡ್ಡಿ ಅನ್ನೋ ನಾಯಕರನ್ನು ಬೆಂಗಳೂರಿಗೆ ಕರ್ಕೊಂಡು ಬಂದು ತೆಲುಗಲ್ಲೇ ಮಾತಾಡ್ಸುದ್ರು. ತಮ್ಮ ಪಕ್ಷದ ಜಾಹಿರಾತಿನಲ್ಲಿ ಆಂಧ್ರಪ್ರದೇಶದ ಸವಾಲನ್ನು ಎದುರಿಸಲು ಆಗಿದ್ದೇ ತಮ್ಮ ಪಕ್ಷದಿಂದ ಅಂತ ಹೇಳ್ತಾ ಆಂಧ್ರಾದೋರು ನಮ್ಮ ಪ್ರತಿಸ್ಪರ್ಧಿಗಳು ಅನ್ನೋ ಚಿತ್ರಣ ಕೊಟ್ಟೋರು, ಈಗ ತಮ್ಮ ಪ್ರತಿಸ್ಪರ್ಧಿ ರಾಜ್ಯದ ಮುಖ್ಯಮಂತ್ರೀನೆ ತಮ್ಮ ಪ್ರಚಾರಕ್ಕೆ ಕರೆಸಿದ್ದು ಯಾವ ಸೀಮೆಯ ಸ್ಪರ್ಧೆ? ಯಾವ ಸೀಮೆ ಪೈಪೋಟಿ? ಅಂತಾ ಜನ ಆಡ್ಕೊಂಡು ನಗೋ ಹಾಗೆ ಮಾಡಿದೆ.

ಧಿಕ್ಕಾರ ಇವುಗಳ ಕನ್ನಡ ದ್ರೋಹಕ್ಕೆ!
ನಮ್ಮ ನಾಡಿಗೆ ಹಿಂದೆಂದೋ ವಲ್ಸೆ ಬಂದಿರೋ ತೆಲುಗ್ರು ಈ ನಾಡಿನ ಮುಖ್ಯವಾಹಿನೀಲಿ ಈಗಾಗ್ಲೇ ಬೆರ್ತುಹೋಗಿದ್ರೂ ಬಿಡದೆ "ನೀವೇ ಬೇರೆ... ನೀವು ತೆಲುಗ್ರು... ನೀವು ತೆಲುಗ್ರು" ಅಂತಾ ಅವ್ರುಗಳ ತಲೇಲಿ ಪ್ರತ್ಯೇಕತೆನಾ ತುಂಬ್ತಾ ಇರೋ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಏನ್ ಮಾಡಕ್ಕೂ ಹೇಸದೋರು ಅಂತಾ ತೋರುಸ್ತಿದಾರೆ. ಈ ಮಣ್ಣಿನ ಮಕ್ಕಳು ರಾಜಕೀಯದೋರ ಈ ಹೂಟವನ್ನು ಅರ್ಥಮಾಡ್ಕೊಬೇಕಾಗಿದೆ. ಈ ಮಣ್ಣಲ್ಲಿ ಬದುಕ್ತಿರೋ ತೆಲುಗ್ರೂ ಸಹಿತ ಎಲ್ಲ ಪರಭಾಷಿಕ್ರು ಕೂಡಾ ಕನ್ನಡ ನಾಡಿಗೆ ದ್ರೋಹ ಮಾಡ್ತಿರೋ ಈ ರಾಜಕಾರಣಿಗಳನ್ನು ಧಿಕ್ಕರಿಸಬೇಕಾಗಿದೆ ಗುರು!

ಬೆಂಗಳೂರು ಕರ್ನಾಟಕದಾಗಿಲ್ಲ ಅನ್ನೂದು ಹುನ್ನಾರ ಅಲ್ಲೇನು?

ಚುನಾವಣಿ ಬಂತಂದ್ರ ಒಬ್ಬೊಬ್ಬ ಮಂದಿ ಒಂದೊಂದು ಉದ್ದೇಶ ಈಡೇರಿಸಿಕೊಳಕ್ಕೆ ಮುಂದಾಗ್ತಾರ. ಭಾಳ ಶಾಣ್ಯಾತನಾ ಮಾಡಿ ನಮ್ಮ ನಾಡ ಒಡ್ಯೋ ಯತ್ನ ಮಾಡೋ ರಗಡ್ ಹುನ್ನಾರಗಳೂ ನಡೀತಾ ಇರ್ತವೆ ಗುರು. "ಅಂಥಾ ಒಂದು ಹುನ್ನಾರಾನ ಈ ರಾಷ್ಟ್ರೀಯ ಮಾಧ್ಯಮಗಳೋರು ಮಾಡಕ ಹತ್ತಾರೇನ?" ಅನ್ನೋ ಪ್ರಶ್ನಿ ಮೊನ್ನಿನ ಈ ಸಿಎನ್ನೆನ್ ಐಬಿಎನ್ ಚಾನಲ್ಲದಾಗ ಬಂದ ವರದಿ ನೋಡಿ ಭಾಳ ಕಾಡ್ಸಾಕ್ ಹತ್ತೈತ್ರೀಪಾ!
"ಬೆಂಗಳೂರಾ ಬ್ಯಾರೀ, ಕರ್ನಾಟಕಾನಾ ಬ್ಯಾರೀ" ಅನ್ನೋ ಸೊಕ್ಕು ಮಾಡ್ಯಾರ!
ಈ ಮಂದಿ ಬೆಂಗಳೂರು ಬ್ಯಾರೀ ಐತಿ, ಉಳ್ಕಿ ಕರ್ನಾಟಕ ಬ್ಯಾರೀ ಐತಿ. ಬೆಂಗಳೂರು ಇಡೀ ಭಾರತಕ್ಕ ಮಾಣಿಕ್ಯದ ಹಾಂಗ ಹೊಳೀತೈತಿ, ಆದ್ರ ಕರ್ನಾಟಕ ಹೊಳ್ಯಂಗಿಲ್ಲಾ. ಬೆಂಗಳೂರಾಗಿನ ಸಂಸ್ಕೃತಿ ಬ್ಯಾರೀ ಐತಿ, ಇಲ್ಲಂದ್ರ ಮಂದಿ ಭಾಳ ಹೈಟೆಕ್ ಅದಾರ, ಎಸ್ಸೆಮ್ ಕೃಷ್ಣ ಇವ್ರುನ್ನ ಪ್ರತಿನಿಧಿಸ್ತಾರ ಅನ್ಕೋತಾ... ಇನ್ನೊಂದು ಕರ್ನಾಟಕ ಐತಿ. ಅದ್ರಾಗ ರೈತಣ್ಣದೀರಂಥಾ ಹಳ್ಳಿ ಮಂದಿ, ಬಡ ಮಂದಿ ಅದಾರ. ಇವ್ರುನ್ನ ಸಿದ್ರಾಮಯ್ಯ ಪ್ರತಿನಿಧಿಸ್ತಾರಾ ಅನ್ನಾಕ ಹತ್ಯಾರ್ರೀ. ಮ್ಯಾಗಿಂದ್ ನೋಡುದ್ರಾ 'ಹೌದಲೇ, ಖರಿ ಐತಿ ಇವ್ರ್ ಮಾತು' ಅನ್ಸೋ ಹಾಂಗ ಥಳಕ್ ಬಳುಕ್ ಮಾಡಿ ಸುದ್ದೀ ಹೇಳ್ಯಾರ್ರೀ. ಅಲ್ರೀ ಮನ್ಷಾನ ತಲೀ ಒಳ್ಗ ಮಿದುಳೈತಿ, ಅದ್ರಾಗಾ ಭಾಳ ಬುದ್ಧಿ ಐತಿ, ಬಾಕಿ ಕಡಿ ಇರಂಗಿಲ್ಲಾ ಅನ್ನೋ ಹಾಂಗ್ ಆತಲ್ರೀ ಇವ್ರ್ ಮಾತು! ಈ ಮರದಾಗ ಏನೂ ಸಾರ ಇಲ್ಲ, ಆದ್ರ ಹಣ್ಣಾಗ್ ಐತಿ ಅನ್ನೋ ಮಂದಿ ಹಣ್ಣು ತುಡುಗು ಮಾಡಕ್ ಬಂದೋರಾ ಆಗಿರ್ತಾರಾ ಮತ್ತಾ! ಈ ಮಂದಿ ನಡ್ಸಿದ್ ಸಂದರ್ಶನದಾಗ ಕೇಳೂ ಪ್ರಶ್ನೆ ಕಂಡ್ರಾ ಮೈ ಉರೀತೈತಿ. ಯಾರೋ ವಲಸಿ ಬಂದಿರೋ ಮಂಗ್ಯಾನ ಹಿಡಕೊಂಡು ಬಂದು "ನೀ ಏನ ಬೆಂಗಳೂರಾಗ ಅದೀಯೋ ಅಥ್ವಾ ಕರ್ನಾಟಕದಾಗೋ?" ಅಂತಾರ. ಅದಕ್ಕ ಅಂವಾ "ನಾ ಬೆಂಗಳೂರಾಗ ಅದೀನಿ" ಅಂತಾನ. ಅಂದ್ರಾ ಬೆಂಗಳೂರೇನು ಅಮೇರಿಕಾದಾಗೈತೇನು? ಈ ಮಾಧ್ಯಮದೋರು ಎಷ್ಟು ಉದ್ಧಟತನ ಮಾಡ್ಲಿಕ್ ಹತ್ಯಾರಾ ಅಂದ್ರ ನಾಳೀ ಬೆಂಗಳೂರು ಕರ್ನಾಟಕದಾಗ್ ಇರೋದ್ ಬ್ಯಾಡಾ ಅಂತ್ಲೂ ಕಾರ್ಯಕ್ರಮ ಮಾಡಾಕೂ ಹೇಸಂಗಿಲ್ಲಾ. ಈ ಮಂದಿಯೆಲ್ಲಾ ಕೂಡಿ ಏನ್ ಮಾಡಕ್ ಹತ್ಯಾರಾ? ಏನದಾ ಇವ್ರ ಉದ್ದೇಶ?
ನಿಮ್ಮೂರಾ ನಿಮದಲ್ಲಾ ಅಂದ್ರ ಏನರ್ಥ?
ನಿಮ್ ಮನೀ ನಿಮದಲ್ಲಾ, ನಿಮ್ ಊರು ನಿಮದಲ್ಲ ಅಂತಾ ಈಗ ಅನ್ನಾಕ್ ಹೊಂಟಿರೋ ಮಂದೀನ ಆವತ್ತು ಮುಂಬೈ ಮರಾಠಿಗ್ರದಲ್ಲಾ, ಮುಂಬೈ ಮೇಲೆ ನಿಮಗಾ ಹಕ್ಕು ಇಲ್ಲ ಅಂತಾ ಶಂಖಾ ಹೊಡದೋರ್ರಿ ಸರಾ... ನಾಳೀ ಇದೇ ಮಂದಿ ಬೆಂಗಳೂರು ಕೆಂಪೇಗೌಡ್ರು ಕಟ್ಟಿದ್ದಲ್ಲ, ಈ ಕೊಂಪೀನಾ ಉತ್ತರಾದಾಗಿಂದ ಬಂದ್ ಭಾಳ ಶಾಣ್ಯಾ ಮಂದಿ ಕಟ್ಯಾರಾ... ಅವರಿಲ್ಲಾಂದ್ರ ಬೆಂಗಳೂರನ್ನದು ಉದ್ಧಾರ ಆಗ್ತಿರಲಿಲ್ಲಾ, ಅದ್ಕ ಇದು ಇಡೀ ಭಾರತದಾಗಿನ ಮಂದೀಗ್ ಸೇರಿದ್ದು ಅಂತಾರಾ ಮತ್ತ. ಇದ್ರ ಮ್ಯಾಲ ಕನ್ನಡಿಗರ ಹಕ್ಕಿಲ್ಲ, ಇಡೀ ವಲಸಿಗ್ರ ಹಕ್ಕೈತಿ ಅಂತಾರ. ಬ್ಯಾರೀ ಭಾಷಾದೋರ್ನ ಬೆಂಗಳೂರು ಉದ್ಧಾರಕ್ಕಾಗೇ ಅವತಾರ ಎತ್ತಿರೋ ದ್ಯಾವತಿಗಳೂ ಅಂತಾರಾ. ಇಂಥಾ ವಾಹಿನಿಗಳಗ ನಿಮ್ಮ ವರದಿ ತಪ್ಪದ ಅಂತ ಈಗ ಅನ್ಲಿಲ್ಲಾ ಅಂದ್ರಾ ಮುಂದಾ ನಾವು ನೀವು ಹೊಯ್ಕಬೇಕಾಗ್ತದಾ ಅಷ್ಟಾ ಗುರುಗಳಾ!

ನಾಟಕ ನಡೆದೈತೆ! ಓಟಿನ ಬೇಟೆಗೆ ನಾಟಕ ಸಾಗೈತೆ!

ಕರ್ನಾಟಕ ರಾಜ್ಯ ಹುಟ್ಟಿ ಐವತ್ತು ವರ್ಷ ಆಗಿದ್ರೂ, ಅವತ್ತಿಂದ ಇವತ್ತಿನ ತನಕಾ ಹತ್ತಾರು ಚುನಾವಣೆ ನಡ್ದು, ನೂರಾರು ನಾಯಕ್ರುಗಳು, ನಾಕಾರು ರಾಜಕೀಯ ಪಕ್ಷಗಳು ದರ್ಬಾರು ನಡ್ಸುದ್ರೂ ನಮ್ಮ ಹಣೆಬರಹಾನ ಸುಧಾರಿಸಕ್ಕೆ ಇವುಗಳಿಂದ ಇನ್ನೂ ಆಗಿಲ್ಲ. ಕನ್ನಡ-ಕನ್ನಡಿಗ-ಕರ್ನಾಟಕ ಅನ್ನೋದನ್ನು ಕೇಂದ್ರವಾಗಿಸಿಕೊಂಡ ರಾಜಕಾರಣ ನಡೆದಿಲ್ಲ. ಹೋಗ್ಲಿ, ಈ ಪಕ್ಷಗಳೇ ಹೇಳ್ಕೊಳೋ ಹಾಗೆ ಬಡತನ ನಿರ್ಮೂಲನ ಮಾಡಿ ಜನ್ರುನ್ನ ಉದ್ಧಾರ ಮಾಡೊ ಯೋಜನೆಗಳೂ ಇವುಗಳ ಬತ್ತಳಿಕೆಯಿಂದ ಹೊರಗ್ ಬರ್ತಾ ಇಲ್ಲ. ಈಗ ಮತ್ತೊಂದು ಚುನಾವಣೆಯ ಹೊಸಿಲಲ್ಲಿ ಬಂದು ನಿಂತಿದೀವಿ. ಮತದಾನ ಮಾಡೋ ಮುನ್ನ ಒಂದು ಚೂರು ಆ ಬಗ್ಗೆ ಮಾತಾಡೋಣ.

ಪ್ರಣಾಳಿಕೆಯೆಂಬ ಟೊಳ್ಳು ಭರವಸೆಗಳು!

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್, ಭಾಜಪ ಮತ್ತು ಜನತಾದಳಗಳು ಮುಖ್ಯಸ್ಪರ್ಧಿಗಳಾಗಿದ್ದು, ಇವರಲ್ಲೇ ಯಾರಾದರೊಬ್ರು ಅಥ್ವಾ ಇಬ್ರು ನಾಳೆ ನಮ್ಮುನ್ ಆಳೋ ಸಾಧ್ಯತೆಗಳು ಹೆಚ್ಚು. ಈ ನಮ್ಮ ಭಾವಿ ಸರ್ಕಾರದೋರು ನಮ್ಮ ನಾಡಿನ ಏಳಿಗೆ ಬಗ್ಗೆ ಅದೇನು ಚಿಂತನೆ ಮಾಡ್ತಿದಾರೆ, ಅದೇನು ಭರವಸೆ ಕೊಡ್ತಿದಾರೆ ಅಂತ ನೋಡುದ್ರೆ ಎಷ್ಟು ಖಾಲಿತನ ಇವುಗಳಲ್ಲಿ ತುಂಬಿ ತುಳುಕಾಡ್ತಿದೆ ಅನ್ನೋದು ಅರ್ಥ ಆಗುತ್ತೆ ಗುರು! ಈ ಪಕ್ಷಗಳು [ಬಿಜೆಪಿ, ಕಾಂಗ್ರೆಸ್, ಜೆಡಿಎಸ್] ನೀಡಿರೋ ಭರವಸೆಗಳನ್ನು ಒಟ್ಟಾರೆ ನೋಡೋಣ ಬನ್ನಿ!

ನಾಡುನುಡಿ ಕಾಪಾಡೋ ಬಗ್ಗೆ!

ಮೂರೂ ಪಕ್ಷಗಳೋರು ಈ ಬಗ್ಗೆ ಏನು ನಿಲುವು ಇಟ್ಕೊಂಡಿದಾರೆ ಅಂತ ಕೇಳಣಾ ಅಂದ್ರೆ ಇವುಗಳಲ್ಲಿ ಒಂದಾದ್ರೂ ಮಹಾಜನ್ ವರದಿ, ನಂಜುಂಡಪ್ಪ ವರದಿ, ಸರೋಜಿನಿ ಮಹಿಷಿ ವರದಿಗಳ ಜಾರಿ ಬಗ್ಗೆ ಸ್ಪಷ್ಟವಾಗಿ ಮಾತಾಡಿಲ್ಲ. ಅಂತರ ರಾಜ್ಯ ನದಿ ನೀರು ಹಂಚಿಕೆಗೆ ರಾಷ್ಟ್ರೀಯ ಜಲ ನೀತಿ, ಅನಿಯಂತ್ರಿತ ವಲಸೆ ತಡೆ ಕಾಯ್ದೆಗಳನ್ನು ಮಾಡಲು ಕಾರ್ಯೋನ್ಮುಖರಾಗೋ ಬಗ್ಗೆ ಉಸಿರೆತ್ತಿಲ್ಲ.

ನಾಡಿನ ಏಳೆಗೆ ಬಗ್ಗೆ?

ಬಡತನದ ರೇಖೆಯನ್ನು ನಿರ್ಧರಿಸೋಕ್ಕೆ ಇರೋ ಆರ್ಥಿಕ ಮಟ್ಟವನ್ನು ಹೆಚ್ಚಿಸಿ ಇನ್ನಷ್ಟು ಜನರನ್ನು ಅದರೊಳ್ಗೆ ತರ್ತೀವಿ ಅಂತಾರೇ ಹೊರತು ಬಡತನದ ರೇಖೆಗಿಂತ ಹೇಗೆ ನಿಮ್ಮುನ್ ಮೇಲೆತ್ತುತ್ತೀವಿ ಅನ್ನಲ್ಲ. ಒಂದು ವರ್ಷ ಕಾಲ ನಿರುದ್ಯೋಗ ಭತ್ಯೆ ಕೊಡ್ತೀವಿ ಅಂತಾರೇ ಹೊರತು ನಿಮಗೆ ಉದ್ಯೋಗಾವಕಾಶಗಳನ್ನು ಒದಗಿಸಿಕೊಡ್ತೀವಿ ಅನ್ನಲ್ಲ. ಎರಡು ರೂಪಾಯಿಗೆ ಅಕ್ಕಿ ಕೊಡ್ತೀವಿ ಅಂತಾರೇ ಹೊರತು ಇಪ್ಪತ್ತು ರೂಪಾಯಿ ಅಕ್ಕಿಯನ್ನು ಕೊಳ್ಳಲು ನಿಮ್ಮನ್ನು ಶಕ್ತರನ್ನಾಗಿ ಮಾಡ್ತೀವಿ ಅನ್ನಲ್ಲ. ಸ್ವಯಂ ಉದ್ಯೋಗದ ಬಗ್ಗೆ ಮಾತನ್ನಾಡಿದ್ರೂ ಕೂಡಾ ನಮ್ಮ ನಾಡಿನಲ್ಲಿ ತಲೆ ಎತ್ತುತ್ತಿರುವ ಉದ್ದಿಮೆಗಳಲ್ಲಿ ಕನ್ನಡದವರಿಗೆ ಉದ್ಯೋಗ ಖಾತ್ರಿ ಕೊಡೋ ಬಗ್ಗೆ ಮಾತಾಡಲ್ಲ. ರೈತರಿಗೆ ಉಚಿತ ವಿದ್ಯುತ್ ಕೊಡ್ತೀವಿ ಅಂತಾರೆ ಹೊರತು ಅದರ ಸಬ್ಸಿಡಿ ದರವನ್ನು ಯಾರ ತಲೆ ಮೇಲೆ ಹಾಕ್ತೀವಿ ಅನ್ನಲ್ಲ. ರೈತರ ಬೆಳೆಗೆ ಮಾರುಕಟ್ಟೆ, ಸರಿಯಾದ ಬೆಲೆ ಸಿಗಲು ಬೇಕಾಗೋ ವ್ಯವಸ್ಥೆ, ಕೃಷಿಯಲ್ಲಿ ಉತ್ತಮ ಪದ್ದತಿಯ ತರಬೇತಿಗಳ ಮಾತಾಡಲ್ಲ. ಐವತ್ತು ಸಾವಿರ ಕೋಟಿ ಚೆಲ್ಲಿ ಬೆಂಗಳೂರು ನಗರಾನ ಮತ್ತಷ್ಟು ಬೆಳಸ್ತೀವಿ ಅಂತಾರೇ ಹೊರತು ಬೆಂಗಳೂರಿನಂತಹ ಇನ್ನೂ ನಾಕಾರು ನಗರ ಕಟ್ತೀವಿ ಅನ್ನಲ್ಲ. ಬಣ್ಣದ ಟಿವಿಯನ್ನು ಮನೆ ಮನೆಗೆ ತಲುಪುಸ್ತೀವಿ ಅಂತಾರೇ ಹೊರತು ಅಂಥಾ ಟಿವಿಯನ್ನು ನೀವೆ ಕೊಂಡುಕೊಳ್ಳುವಷ್ಟು ಆರ್ಥಿಕ ಸಬಲತೆಯನ್ನು ತಂದುಕೊಡ್ತೀವಿ ಅನ್ನಲ್ಲ. ಹಸಿದಿರೋನಿಗೆ ಅನ್ನ ಕೊಡಬೇಕು ಅನ್ನೋ ನೆಪ ಒಡ್ಡಿ ಅಕ್ಕಿ, ಟಿವಿ, ಬಿಟ್ಟಿ ಕರೆಂಟು, ಸಬ್ಸಿಡಿ ಅಂತಾ ಕೊಡೋಕೆ ಮುಂದಾಗೋರು ದೂರಗಾಮಿ ಯೋಜನೆಗಳ್ನೂ ಹೊಂದಿರಬೇಕಲ್ವಾ? ಹಸಿದವನಿಗೆ ಆ ಕ್ಷಣಕ್ಕೆ ಊಟ ಹಾಕುದ್ರೆ ಮಾತ್ರಾ ಸಾಲ್ದು, ತನ್ನ ಅನ್ನ ತಾನೇ ಗಳುಸ್ಕೊಳೋ ದಾರೀನೂ ತೋರಿಸ್ಬೇಕು ಗುರು!

ನಿಮ್ಮ ಮತ ಯಾರಿಗೆ?

ದುರದೃಷ್ಟವಶಾತ್ ಇಂದಿನ ಚುನಾವಣೆಯಲ್ಲಿ ನಾಡು ನುಡಿಯ ಏಳಿಗೆಯ ಬಗ್ಗೆ ಕಾಳಜಿ, ಕಳಕಳಿ, ಯೋಜನೆಗಳನ್ನು ತಮ್ಮ ಚುನಾವಣಾ ಪ್ರಣಾಳಿಕೆಯ ಭಾಗವಾಗುಳ್ಳ ಯಾವ ಪಕ್ಷವೂ ಕಾಣ್ತಿಲ್ಲ. ಹಾಗಾದ್ರೆ ಯಾರಿಗೆ ನಮ್ಮ ಮತ ನೀಡೋಣ? ಪಕ್ಷಗಳ ಹಂಗಿಲ್ಲದೆ ಯಾವ ಅಭ್ಯರ್ಥಿ ಕನ್ನಡ-ಕನ್ನಡಿಗ-ಕರ್ನಾಟಕಗಳ ಪರವಾದ ನಿಲುವುಗಳನ್ನು ಹೊಂದಿರ್ತಾರೋ ಅವರನ್ನು ಆರಿಸೋಣ. ಯಾರು ನಾಡು ನುಡಿಗಳ ಪರವಾಗಿ ವಿಧಾನ ಸಭೆಯಲ್ಲಿ ದನಿ ಎತ್ತುತ್ತಾರೋ ಅವರನ್ನು ಆರಿಸೋಣ. ಉತ್ತಮ ಆಡಳಿತಗಾರನಾಗಿರುವುದರ ಜೊತೆಯಲ್ಲಿ ಕನ್ನಡತನವನ್ನೂ ಹೊಂದಿರುವವರನ್ನು ಆರಿಸೋಣ. ಇಲ್ಲದಿದ್ದರೆ ಬೇಲಿ ಹಾಕದೆ ಹಣ್ಣಿನ ತೋಟ ಬೆಳಿಸಿದಂತಾಗುತ್ತೆ. ನಮ್ಮ ಜನಗಳ ಪಾಲಾಗಬೇಕಾದ ಕೆಲಸಗಳು, ಗುತ್ತಿಗೆಗಳು, ಸವಲತ್ತುಗಳು ಪರರ ಪಾಲಾಗುತ್ತೆ. ಮತ್ತೆ ನಾಡು ನುಡಿ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸ್ತಿಲ್ಲಾ ಅಂತಾ ಸಂಕಟ ಬಂದಾಗಲೆಲ್ಲಾ ನಾವು ಚಡಪಡಿಸಿ ಕೊರಗಬೇಕಾಗುತ್ತದೆ. ಏನಂತೀರಾ ಗುರು!

ಕಪ್ ಕಾಫಿ ನೆನಪಿಸೋ ಗ್ರಾಹಕನ ತಾಕತ್ತು!

ಇಂಡಿಯನ್ ಕಾಫಿ ಬೋರ್ಡಿನೋರು ಕಾಫಿಯ ಪ್ರಚಾರ ಮತ್ತದರ ವ್ಯಾಪಾರ ಹೆಚ್ಚಿಸಲು ನಮ್ಮ ಭಾಷೇಲೆ ರೂಪ್ಸಿರೋ ಈ ಅಂತರ್ಜಾಲ ತಾಣ ನಿಜ್ವಾಗ್ಲೂ ಅದೆಷ್ಟು ಸೊಗಸು ಅಂದ್ರೆ ಇದುನ್ನ ನೋಡ್ತಿದ್ರೇ ಒಂದು ಲೋಟ ರುಚಿಯಾದ ಕಾಫಿ ಕುಡಿದಂತೇ ಆಗತ್ತೆ ಗುರು!
ಒಮ್ಮೆ ಈ ತಾಣಕ್ಕೆ ಹೋಗಿ ಕ್ಲಿಕ್ಕಿಸಿ ನೋಡಿ - ಇಲ್ಲಿ ಕಾಫಿಯ ಬಗ್ಗೆ ಇರೋ ಎಲ್ಲಾ ಮಾಹಿತಿಯೂ ಕನ್ನಡದಲ್ಲೇ ಇದೆ. ಕನ್ನಡಿಗನೊಬ್ಬ ಕಾಫಿ ಕುಡೀಯೋದ್ರ ಜೊತೆ ತಿಳಿಯಲು ಬಯಸುವ ಎಲ್ಲಾ ಮಾಹಿತಿ ಇಲ್ಲಿ ಕನ್ನಡದಲ್ಲೇ ಸಿಗತ್ತೆ ಗುರು! ಗ್ರಾಹಕರನ್ನು ಗೌರವಿಸೋ, ಅವರ ಮನಸ್ಸುಗಳ್ನ ಗೆಲ್ಲೋಕೆ ಇವ್ರು ಸರಿಯಾದ ಹೆಜ್ಜೆ ಇಟ್ಟಿದಾರೆ ಅನ್ನೋಕೆ ಇದೊಂದು ಒಳ್ಳೆಯ ಉದಾಹರಣೆ ಗುರು!
ಕನ್ನಡದಲ್ಲಿ ಸೇವೆ: ಮಾರುಕಟ್ಟೆ ಗೆಲ್ಲೋ ಕೀಲಿಕೈ !
ಕರ್ನಾಟಕದಲ್ಲಿ ಕಾಫಿಗೆ ಸಕ್ಕತ್ ಒಳ್ಳೆ ಮಾರುಕಟ್ಟೆ ಸಾಧ್ಯತೆ ಇದೆ ಅಂತ ಕಾಫಿ ಬೋರ್ಡಿನೋರು ಕಂಡ್ಕೊಂಡಿದಾರೆ. ಕಾಫಿ ಕುಡಿಯೋ ಪ್ರತಿಯೊಬ್ಬ ಕನ್ನಡಿಗನೂ ಈ ಅಂತರ್ಜಾಲ ತಾಣಾನಾ ತನ್ನನ್ನೇ ಉದ್ದೇಶಿಸಿ ಮಾತಾಡಲು, ಮೆಚ್ಚಿಸಲು, ಓಲೈಸಲು ರೂಪಿಸಿದ್ದಾರೆ ಅಂದ್ಕೊಳೋ ಹಾಗೆ ಇದು ಇದೆ. ಕಾಫಿ ಬೋರ್ಡಿನೋರ ಈ ನಡೆ ನಿಜಕ್ಕೂ ಮೆಚ್ಚೋ ವಿಚಾರ ಗುರು!

ನಾವು ಕುಡ್ಯೋ ಕಾಫಿ ಜಗತ್ತಿನ ಯಾವ್ದೇ ಮೂಲಿಯಿಂದ ಬಂದಿರ್ಲಿ, ಅದರ ಬಗ್ಗೆ ತಿಳ್ಕೊಳೋ ಮೂಲಕ ಅದರ ರುಚೀನ ಎರಡು ಪಟ್ಟು ಹೆಚ್ಚು ಅನುಭವಿಸಕ್ಕೆ ನಮ್ಮ ನುಡೀಲೇ ವಿವರ ಇರೋ ಈ ವ್ಯವಸ್ಥೆ ಎಷ್ಟು ಚೆನ್ನ ಅಂತ್ಲೂ, ಸಖತ್ ಸರಿ ಅಂತ್ಲೂ ಈ ತಾಣ ತೋರಿಸಿಕೊಟ್ಟಿದೆ. ಕರ್ನಾಟಕದಲ್ಲಿ ಕಾಫಿಗೆ ಮಾರುಕಟ್ಟೆ ಹೆಚ್ಸಕ್ಕೆ ಕನ್ನಡದಲ್ಲಿರೋ ಈ ತಾಣ ಸಕ್ಕತ್ ಉಪ್ಯೋಗ ಆಗತ್ತೆ ಅಂತ ಕಾಫಿ ಬೋರ್ಡಿನೊರ್ಗೆ ಅರಿವಾಗಿದೆ. ಹಾಗಾಗಿ ಕಾಫಿ ಬೋರ್ಡಿನೋರು ತಮಿಳು, ತೆಲುಗು, ಮಲಯಾಳಂ, ಹಿಂದಿ, ಪಂಜಾಬಿ ಮುಂತಾದ ಭಾಷೆಗಳಲ್ಲೂ ಇಂಥಾ ತಾಣಗಳನ್ನು ರೂಪಿಸಿದ್ದಾರೆ ಗುರು! ಇದು ನಿಜಕ್ಕೂ ಖುಷಿ ತರೋ ವಿಷ್ಯಾನೆ!

ಕನ್ನಡದಲ್ಲಿ ಸೇವೆ ಗ್ರಾಹಕರ ಹಕ್ಕು!

ಕಾಫಿ ಬೋರ್ಡಿಗೆ ಮಾತ್ರಾ ಈ ಸೂತ್ರ ಅನ್ವಯ ಆಗಲ್ಲ. ಯಾವುದೇ ಉತ್ಪನ್ನ ನಮ್ಮ ಜನರನ್ನು ಪರಿಣಾಮಕಾರಿಯಾಗಿ ತಲುಪಬೇಕು ಅಂದ್ರೆ ಆ ವಸ್ತುವಿನ ಬಗ್ಗೆ ಇರೋ ಮಾಹಿತಿಗಳು ಕನ್ನಡದಲ್ಲಿರಬೇಕು. ಅದೆಷ್ಟೊ ವಸ್ತುಗಳನ್ನು ಹೇಗೆ ಬಳಕೆ ಮಾಡಬೇಕು ಅಂತಾ ಬರೆಯೋ ಸೂಚನೆಗಳು ಭಾಳಾ ಮುಖ್ಯವಾಗುತ್ತೆ. ಹಾಗಾಗಿ ಎಲ್ಲಾ ಸೂಚನೆಗಳು ಕೂಡ ಕನ್ನಡದಲ್ಲೇ ಇರಬೇಕು. ಇದು ಆಯಾ ಉತ್ಪನ್ನಗಳ ಮಾರಾಟ ಮಾತ್ರಾ ಹೆಚ್ಚಿಸಲ್ಲ, ಬದಲಿಗೆ ಗ್ರಾಹಕರ ಹಕ್ಕನ್ನೂ ಗೌರವಿಸೋ ಹಾಗಾಗುತ್ತೆ. ಗ್ರಾಹಕರು ಹಣ ಕೊಟ್ಟು ಕೊಂಡ್ಕೊಳ್ಳೋ ವಸ್ತೂನ ಅವ್ರಿಗೆ ಬೇಕಾದ ರೀತೀಲಿ ಮಾತ್ರಾ ಅಲ್ದೆ ಅದನ್ನ ಅವರು ಬಳಸಕ್ಕೆ ಅನುಕೂಲ ಆಗೋ ತರದಲ್ಲಿ ಕೊಡುವುದು ವ್ಯಾಪಾರಕ್ಕೇ ಒಳ್ಳೇದು ಅಂತ ಕಾಫಿ ಬೋರ್ಡಿನೋರ್ಗೆ ಅರ್ಥ ಆಗಿದೆ. ಇದು ಉಳಿಕೆ ಮಾರಾಟಗಾರರಿಗೂ ಅರ್ಥವಾದ್ರೆ ಒಳ್ಳೇದು ಗುರು!
ಪುಟ್ಟ ಕಾಫಿ ಲೋಟ ಕಲಿಸೋ ದೊಡ್ಡ ಪಾಠ!
ನಮಗಾದ್ರೂ ಈ ಪುಟ್ಟ ಕಾಫಿ ಲೋಟ ಕಲುಸ್ತಿರೋದು ಏನನ್ನು ಅಂತ ನೋಡಿ. ಬರೀ ಒಂದು ಲೋಟ ಕಾಫಿ ಕುಡ್ಯೋ ಮೂಲಕ ಅಷ್ಟು ದೊಡ್ಡ ಕಾಫಿ ಬೋರ್ಡಿನೋರೆ ನಮ್ಮ ಭಾಷೇಲಿ ಸೇವೆ ಕೊಡಕ್ಕೆ ಮುಂದಾಗಿದಾರೆ ಅಂದ್ರೆ ಅದು ನಾವು ಕುಡ್ಯೋ ಕಾಫಿಗೆ ಇರೋ ಶಕ್ತಿ ಅಲ್ಲ. ಗ್ರಾಹಕನಾಗಿ ನಮಗಿರೋ ಶಕ್ತಿ ಅಂತಾ. ಇದನ್ನು ನಾವು ಸರಿಯಾಗಿ ಅರ್ಥ ಮಾಡ್ಕೊಂಡು ಕನ್ನಡದಲ್ಲಿ ಸೇವೆಯನ್ನು ಒತ್ತಾಯಿಸಿದ್ರೆ ಎಲ್ಲಾ ಸಂಸ್ಥೆಗಳವ್ರೂ, ಉತ್ಪನ್ನದೋರೂ, ಸೇವೆಯೋರೂ ಕನ್ನಡಾನ ಅಳವಡ್ಸಿಕೊಳ್ಳೋದು ಖಂಡಿತಾ! ಅಲ್ವಾ ಗುರು?
Related Posts with Thumbnails