ಗುಣಮಟ್ಟ ವೃತ್ತ ಸ್ಪರ್ಧೆಯಲ್ಲಿ ಕೇಳಿಬಂದ ಕನ್ನಡ!

ಇತ್ತೀಚಿಗೆ ಬೆಂಗಳೂರಿನ ಪಿ.ಇ.ಎಸ್.ಐ.ಟಿ (PESIT)ಸಭಾಂಗಣದಲ್ಲಿ ಒಂದು ಕಾರ್ಯಕ್ರಮ ನಡೀತು. ಅಖಿಲ ಭಾರತ ಗುಣಮಟ್ಟ ವೃತ್ತ ಸಂಸ್ಥೆಯ ಬೆಂಗಳೂರು ವಿಭಾಗದೋರು ಕಾರ್ಖಾನೆಗಳಲ್ಲಿ ತಂಡಗಾರಿಕೆಯ ಮೂಲಕ ಉತ್ಪನ್ನಗಳ ಗುಣಮಟ್ಟದ ಹೆಚ್ಚಳದ ಜೊತೆಜೊತೆಗೇ ಕೆಲಸ ಮಾಡೋ ವಿಧಾನದ, ಸುರಕ್ಷತೆಯ ಗುಣಮಟ್ಟ ಹೆಚ್ಚಿಸೋ ಉದ್ದೇಶದಿಂದ ನಾನಾ ಉತ್ಪಾದನಾ ಸಂಸ್ಥೆಗಳ ’ಗುಣಮಟ್ಟ ವೃತ್ತ’ಗಳ ಒಂದು ಸ್ಪರ್ಧೆ ನಡುಸ್ತು ಗುರು!

ಇಲ್ಲಿ ಕನ್ನಡಕ್ಕೆ ಉತ್ತೇಜನವಿತ್ತು!

ಈ ಕಾರ್ಯಕ್ರಮದಲ್ಲಿ ಕರ್ನಾಟಕದ ನಾನಾ ಸಂಸ್ಥೆಗಳ ಹತ್ತಾರು ತಂಡಗಳು ಭಾಗವಹಿಸಿದ್ವು. ಈ ತಂಡಗಳು ಹೆಚ್ಚಿನದಾಗಿ ಯಂತ್ರಾಗಾರದ ಕಾರ್ಮಿಕರನ್ನೇ ಒಳಗೊಂಡಿದ್ದು ಅವರುಗಳೇ ತಮ್ಮ ತಂಡದ ಸಾಧನೆಯ ಬಗೆಗಿನ ಪ್ರಾತ್ಯಕ್ಷಿಕೆಗಳನ್ನು ವಿವರಿಸಿದರು. ಇಡೀ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದ ಒಂದೆರಡು ವಿಷಯಗಳಂದ್ರೆ ಟಯೋಟಾ ಸಂಸ್ಥೆಯ ಅಂಗಸಂಸ್ಥೆಯೊಂದರ ತಂಡವೂ ಸೇರಿದಂತೆ ಅನೇಕ ತಂಡಗಳು ಕನ್ನಡದಲ್ಲಿ ತಮ್ಮ ಪ್ರಾತ್ಯಕ್ಷಿಕೆಗಳನ್ನು ವಿವರಿಸಿದ್ದು. ಈ ಸ್ಪರ್ಧಾವಳಿಯ ಆಯೋಜಕರೂ ಕೂಡಾ ಕನ್ನಡದ ವಿವರಣೆಯನ್ನು ಉತ್ತೇಜಿಸಿದರು ಗುರು!

ಈ ಸ್ಪರ್ಧೆಗಳ ಒಬ್ಬ ತೀರ್ಪುಗಾರರು ಅಂದು ಅಂದ ಮಾತು ..."ಈ ಸಂಸ್ಥೆಯ ತಂಡದೋರು ಕನ್ನಡದಲ್ಲೇ ಮಾತಾಡಿದ್ರೂ (ಇಂಗ್ಲಿಷ್ ಮಾತಾಡದೇ ಇದ್ದದ್ದು ಕೊರತೆ ಎನ್ನೋ ಮನೋಭಾವ ಅವರ ದನಿಯಲ್ಲಿತ್ತು!) ವಿಷಯದ ಬಗ್ಗೆ ಭಾಳಾ ಚೆನ್ನಾಗಿ ತಿಳ್ಕೊಂಡಿದ್ರು. ತಾವು ತಿಳಿದುಕೊಂಡಿದ್ದನ್ನು ಪ್ರತಿಯೊಬ್ರೂ ಎಷ್ಟು ಆತ್ಮವಿಶ್ವಾಸದಿಂದ ವಿವರುಸ್ತಾ ಇದ್ರೂ ಅಂದ್ರೆ ಅದಕ್ಕಾಗೆ ಅವರಿಗೆ ಪ್ರಶಸ್ತಿ ಹತ್ತಿರವಾಯ್ತು"

ಹಲವಾರು ತಂಡಗಳಿಗೆ ತಮ್ಮದಲ್ಲದ ನುಡಿಯಲ್ಲಿ (ಇಂಗ್ಲಿಷ್) ವಿವರಿಸೋದೇ ಒಂದು ದೊಡ್ಡ ತೊಡಕಾಗಿದ್ದುದು ಎದ್ದು ಕಾಣ್ತಿತ್ತು ಗುರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಂಜೆ ನಡೆಯುವಾಗ ಮುಖ್ಯ ಅತಿಥಿಗಳಾಗಿ ಬಂದ ನಾಡಿನ ಖ್ಯಾತ ಉದ್ಯಮಿಗಳಲ್ಲೊಬ್ಬರಾದ ಶ್ರೀ ಷಡಕ್ಷರಿಯವರು ತಾವಾಗೆ ಸಭೆಯನ್ನು ಕುರಿತು "ನನಗೆ ಕನ್ನಡದಲ್ಲಿ ಮಾತಾಡಲು ಇಷ್ಟ, ಮಾತಾಡ್ತೀನಿ , ಪರ್ವಾಗಿಲ್ವಾ?" ಅಂದಾಗ ಇಡೀ ಸಭಾಂಗಣ ಒಕ್ಕೊರಲಿನಿಂದ ಹೂಂಗುಟ್ಟಿದ್ದು, ಆ ನಂತರದ ಇಡೀ ಕಾರ್ಯಕ್ರಮ ಕನ್ನಡದಿಂದ ಮೆರುಗು ಪಡೆದದ್ದೂ ಮತ್ತೊಂದು ವಿಶೇಷ ಗುರು!

ಭಾಷೆ ಸಹಕಾರದ ಮಾಧ್ಯಮ!

ತಂತ್ರಜ್ಞಾನ ವಲಯದ ಸೆಮಿನಾರುಗಳು, ತರಬೇತಿಗಳು, ಇಂತಹ ಗುಣಮಟ್ಟ ವೃತ್ತ ಸ್ಪರ್ಧೆಗಳು ಇವೆಲ್ಲಾ ನಮ್ಮ ನಾಡಿನ ನುಡಿಯಲ್ಲಿ ನಡೆಯೋದು ನಿಜವಾಗ್ಲೂ ನಮ್ಮ ಏಳಿಗೆಯ ಹಾದಿಯಲ್ಲಿ ಇಡ್ತಿರೋ ಸರಿಯಾದ ಹೆಜ್ಜೆಗಳು. ತಂಡಗಾರಿಕೆಯಿಂದ ಗುಣಮಟ್ಟದ ಏಳಿಗೆ ಸಾಧಿಸುವ ಯೋಜನೆಯ ಯಶಸ್ಸಿಗೆ ಕಾರಣವಾಗುವುದೇ ತಂಡದ ಸದಸ್ಯರ ನಡುವಣ ಸಹಕಾರ. ಈ ಸಹಕಾರಕ್ಕೆ ಸಾಧನವೇ ಎಲ್ಲರಿಗೂ ತಮ್ಮನ್ನು ತಾವು ಸಂಪೂರ್ಣವಾಗಿ ಅಭಿವ್ಯಕ್ತಗೊಳಿಸಲು ಸಾಧ್ಯವಾಗೋದ್ರಿಂದ. ಅದು ಆಗೋದು ತಾಯ್ನುಡಿಯಿಂದ. ಭಾಷೆ ಬರೀ ಸಂವಹನದ ಸಾಧನ ಎಂದು ವಾದ್ಸೋರಿಗೆ ಉತ್ತರ ಕೊಡುವಂತೆ ಅಂದಿನ ಕಾರ್ಯಕ್ರಮಗಳು ನಡೆದು "ಭಾಷೆ ಸಂವಹನವಷ್ಟೇ ಅಲ್ಲ, ಒಂದು ಜನಾಂಗದ ಸಹಕಾರದ ಮಾಧ್ಯಮ" ಎಂಬುದನ್ನು ಸಾರಿ ಸಾರಿ ಹೇಳಿದ್ದು ಮಾತ್ರಾ ಹದಿನಾರಾಣೆ ದಿಟ ಗುರು!

ಬೋಸ್ ಸಿದ್ದಾಂತ ಏನು ಗೊತ್ತಾ?

ಇವ್ರು ಸತ್ಯೇಂದ್ರನಾಥ್ ಬೋಸ್. ಇವತ್ತಿನ ದಿನ ಪ್ರಪಂಚದ ಎಲ್ಲಾ ಜನರಲ್ಲೂ, ಅದರಲ್ಲೂ ವಿಶೇಷವಾಗಿ ವಿಜ್ಞಾನ ವಲಯದಲ್ಲೂ ಬಲು ಚರ್ಚಿತ ಹೆಸರು ಇವರದ್ದು. ಇತ್ತೀಚಿಗೆ ವಿಜ್ಞಾನಿಗಳು ಬ್ರಹ್ಮಾಂಡದ ಹುಟ್ಟಿನ ಮೂಲ ಹುಡುಕಲು ಅನುಕೂಲ ಮಾಡಿ ಕೊಡೊ, ಪ್ರೋಟಾನುಗಳನ್ನು ಢಿಕ್ಕಿ ಹೊಡ್ಸೋ ಮೂಲಕ ಮಹಾಸ್ಪೋಟದ ಗುಟ್ಟು ರಟ್ಟು ಮಾಡೊ ದಿಕ್ಕಲ್ಲಿ ದೊಡ್ಡ ಸಾಧನೆ ಮಾಡಿರೋದನ್ನು ನಾವು ಓದಿ ಬಲ್ಲೆವಷ್ಟೆ? ಈ ಸಂಶೋಧನೆಯ ಮೂಲ ವಿಜ್ಞಾನಿಗಳಲ್ಲಿ ಪ್ರಮುಖರು ಆಲ್ಬರ್ಟ್ಟ್ ಐನ್‍ಸ್ಟೈನ್ ಹಾಗೂ ಸತ್ಯೇಂದ್ರನಾಥ್ ಬೋಸ್ ಅವರುಗಳು.
ಬಂಗಾಳದ ಮೇಧಾವಿ ವಿಜ್ಞಾನಿ ಬೋಸ್ ಅವರನ್ನು ಜಗತ್ತಿನಾದ್ಯಂತ ಗೌರವಿಸ್ತಾರೆ. ಆಲ್ಬರ್ಟ್ಟ್ ಐನ್‍ಸ್ಟೈನ್ ಅಂತಹ ಹಿರಿಯ ವಿಜ್ಞಾನಿಯೇ ಬೋಸ್ ಬರೆದಿದ್ದ ಒಂದು ಪ್ರಬಂಧಕ್ಕೆ ತಮ್ಮ ಲೇಖನವೊಂದನ್ನು ಸೇರಿಸಿರುವುದು, ನಂತರ ಇದನ್ನು ಐನ್‍ಸ್ಟೈನ್-ಬೋಸ್ ಸ್ಟಾಟಿಸ್ಟಿಕ್ಸ್ ಎಂದು ಕರೆಯಲಾಗಿರುವುದು, ಇವೆಲ್ಲಾ ಇವರ ವಿಜ್ಞಾನದಲ್ಲಿನ ಪರಿಣಿತಿ ತೋರಿಸುತ್ತೆ ಗುರು! ಇಷ್ಟೇ ಅಲ್ಲದೆ ಭೌತಶಾಸ್ತ್ರದಲ್ಲಿ ಇವರ ನೆನಪಿನಲ್ಲಿ ಒಂದು ಕಣ - ಬೋಸಾನ್ - ಎಂದೇ ಇದೆ. ಇದೆಲ್ಲಾ ಸರಿ, ಆದ್ರೆ ಇವರ ಬಗ್ಗೆ ಏನ್ಗುರುಗೆ ಏಕೆ ಆಸಕ್ತಿ ಅಂತೀರಾ? ಅದು ಇವರು ಇದೆಲ್ಲಾ ಸಾಧನೆಗೆ ತಾಯ್ನುಡಿಯಲ್ಲಿನ ಕಲಿಕೆಯೇ ಸಾಧನವೆಂದು ಪ್ರತಿಪಾದನೆ ಮಾಡಿದ್ರು ಅನ್ನೋ ವಿಷಯ ಗುರು!

ಇವರು ತಾಯ್ನುಡಿಯಲ್ಲಿನ ಕಲಿಕೆಯ ಪ್ರತಿಪಾದಕ

ಇವರ ವಿಜ್ಞಾನ ಜೀವನದ ಶುರುವಿನಲ್ಲಿದ್ದ ಭೌತಶಾಸ್ತ್ರದ ಹಲವಾರು ಚಿಂತನೆಗಳು ಜರ್ಮನ್ ಭಾಷೆಯಲ್ಲಿದ್ವಂತೆ. ಹಾಗಾಗಿ ಜರ್ಮನ್ ಭಾಷೆಯನ್ನ ಮೊದಲು ಕಲಿತು, ನಂತರ ಅವುಗಳ ಸಾರವನ್ನ ಹೀರಿದೋರು ಇವರು! ಹೀಗಿರುವಾಗ ಒಂದು ವಿಷಯವನ್ನು ಹೀರಲು ಮತ್ತು ಹೊರಹಾಕಲು ಒಬ್ಬ ಮನುಷ್ಯನ ತಾಯ್ನುಡಿ ಎಷ್ಟು ಮುಖ್ಯ ಅಂತ ಇವರಿಗೆ ಚೆನ್ನಾಗಿಯೇ ಅರಿವಾಗಿತ್ತು. ಅದಕ್ಕಾಗೇ ಇವರು ಮುಂದೆ ತನ್ನ ನಾಡಿಗರಿಗೆ ವಿಜ್ಞಾನವನ್ನು ತಾಯ್ನುಡಿಯಲ್ಲೇ ಕಲಿಸಬೇಕೆಂದು "ವಂಗೀಯ ವಿಜ್ಞಾನ ಪರಿಷತ್" ಎಂಬ ಹೆಸರಿನಲ್ಲಿ ಒಂದು ಚಳವಳಿಯನ್ನೇ ಹುಟ್ಟುಹಾಕಿದ್ರು ಗುರು! ಇವರನ್ನ ನೋಡಿದರೆ ನಿಜವಾದ ತಿಳುವಳಿಕೆ ಇರೋರು ಖಂಡಿತವಾಗಿಯೂ ಮಾತೃಭಾಷಾ ಶಿಕ್ಷಣದ ಪರವೇ ಇರ್ತಾರೆ ಅಂತ ಸಾಬೀತೇ ಆಗತ್ತೆ ಗುರು!

ಭೌತಶಾಸ್ತ್ರದಲ್ಲಿ ಐನ್‍ಸ್ಟೈನ್ ಸಮಕ್ಕೆ ಬೆಳೆದಿದ್ದ ಇವರು, ಹಲವಾರು ಇತರ ವಿಜ್ಞಾನಗಳಲ್ಲೂ ಆಳವಾದ ಅಧ್ಯಯನ ಮಾಡಿದೋರು. ಜ್ಞಾನ ವಿಜ್ಞಾನ ತಂತ್ರಜ್ಞಾನದಲ್ಲಿ ಏನಾದ್ರೂ ಸಾಧನೆಯ ಶಿಖರ ಏರಬೇಕು ಅಂದ್ರೆ ಮಾತೃಭಾಷೆಯೊಂದೇ ಸಾಧನ ಎಂದು ಅಂತ ಶಿಖರದ ಮೇಲೆ ನಿಂತೇ ಸಾರಿದ ಸತ್ಯೇಂದ್ರನಾಥ ಬೋಸರ ಈ ಸಿದ್ಧಾಂತಾನ್ನ ನಾವು ಮರೀಬಾರ್ದು ಗುರು.

ಇಂಥ ಉನ್ನತ ಚಿಂತನೆಯ ಉನ್ನತ ಮನುಜನಾದ ಸತ್ಯೇಂದ್ರನಾಥ ಬೋಸ್ ಅವ್ರಿಗೆ ಇಗೋ ನಮ್ಮ ಒಂದು ನಮನ ಗುರು!

ಕೆಂಪೇಗೌಡ ನಿಲ್ದಾಣದಲ್ಲಿ ಕನ್ನಡದ ಕಂಪು!

ಇವತ್ತಿನ ವಿ.ಕ ನೋಡಿ ಬಾಳ ಅಂದ್ರ ಬಾಳ್ ಖುಷಿ ಆತ್ ನೋಡು ಗುರು! ಅಗದಿ ಹೋಳಗಿ-ತುಪ್ಪ ಉಂಡಷ್ಟ ಖುಷಿ ಆತು. ಆಡಳಿತದಲ್ಲಿ ಕನ್ನಡ ಅನುಷ್ಟಾನ ಅಂತ ಬರೇ ಬಾಯಿ ಮಾತಿನಾಗ ಕೇಳಕೊಂತ್ ಇದ್ದ ಕನ್ನಡಿಗರಿಗೆ ಒಂದ ಸಿಹಿ ಸುದ್ದಿ ಬಂದೇತಿ ಗುರು! ಅದೇನಪಾ ಅಂದ್ರ ಬಿ.ಎಮ್.ಟಿ.ಸಿಯ ಕೆಂಪೇಗೌಡ ನಿಲ್ದಾಣ ಈಗ ಸಂಪೂರ್ಣ ಕನ್ನಡಮಯ ಆಗೇತಂತ.

ಕನ್ನಡ ಅನುಷ್ಟಾನ ಅನ್ನೂದು ದೊಡ್ಡ ತ್ರಾಸಿನ ಮಾತಲ್ಲ!

ಕರ್ನಾಟಕ ರಾಜ್ಯ ಹುಟ್ಟಿ ೫೦ ವರ್ಷದ ಮ್ಯಾಲ್ ಆದ್ರೂ ಇನ್ನು ತಂಕ, ಆಡಳಿತದಲ್ಲಿ ಕನ್ನಡ ಅನುಷ್ಟಾನ ಅನ್ನುದು ಬರೇ ಕಡತದಾಗ ಅಷ್ಟೇ ಐತಿ. ಕನ್ನಡ ಅನುಷ್ಟಾನ ಮಾಡುದು ಖರೇನು ಅಷ್ಟ ತ್ರಾಸ್ ಐತಾ ಅಂತ ಕನ್ನಡಿಗರಿಗೆ ಅನ್ಸಾಕ್ ಶುರು ಆಗಿತ್ತು. "ಆಡಳಿತದಲ್ಲಿ ಕನ್ನಡ ಅನುಷ್ಟಾನ ಅಂದ್ರ ಭಾಳ ತ್ರಾಸಿನ ಕೆಲ್ಸ ಏನಲ್ಲಾ, ಅದಕ್ಕೆ ಬೇಕಾಗಿರುದು, ಬರೇ ಮಾಡಬೇಕು ಅನ್ನು ಮನಸ್ಸು, ಛಲ" ಅನ್ನುದನ್ನ ಬಿ.ಎಮ್.ಟಿ.ಸಿ ತನ್ನ ಈ ಹೆಜ್ಜಿ ಮೂಲಕ ತೋರಸೆತಿ ಗುರು. ಎಲ್ಲ ಖರೇ, ಬಿ.ಎಮ್.ಟಿ.ಸಿ ದವರು ಅಂತಾದೇನ್ ಮಾಡ್ಯಾರ್ ಅಂತ ಸ್ವಲ್ಪ ನೋಡುಣ ಬರ್ರಿ:

ನಿಲ್ದಾಣದಿಂದ ಹೊರಡು ಬಸಗೋಳ್ ನಾಮ ಫಲಕದಿಂದ ಹಿಡಿದು ಎಲ್ಲ ಕಡತಗಳ ವಿಲೇವಾರಿವರಿಗೆ ಎಲ್ಲ ಕನ್ನಡದಾಗ್ ಮಾಡ್ಯಾರ್ ಅಂತ್ರಿ.
ತಮ್ಮ ಎಲ್ಲ ಸಿಬ್ಬಂದಿ, ಚಾಲಕರು-ನಿರ್ವಾಹಕರಿಗೆ ಮಂದಿ ಕೂಡಾ ಕನ್ನಡದಾಗೇ ವ್ಯವಹರಿಸಾಕ್ ಸೂಚನೆ ನೀಡ್ಯಾರ್ ಅಂತ್ರಿ.
ಬ್ಯಾರೆ ಇಲಾಖೆಯಿಂದ ಅಂಗ್ರೇಜಿಯಾಗ ಪತ್ರ ಬಂದ್ರ ಅದನ್ನ ನಯವಾಗಿ ತಿರಸ್ಕರಿಸಿ, ಕನ್ನಡದಲ್ಲೇ ಪತ್ರ ವ್ಯವಹಾರ ಮಾಡುವಂತೆ ಸೂಚನೆ ನೀಡ್ಯಾರ್ ಅಂತ್ರಿ.

ಮೆಜೆಸ್ಟಿಕ್ಕಾಗಿನ ಬಸ್ ನಿಲ್ದಾಣದಾಗ್ ಮಾಹಿತಿ ಕೇಳಕೊಂಡ ಬರು ಮಂದಿಗೆ "ದಯಮಾಡಿ ಕನ್ನಡದಾಗೇ ಮಾತಾಡ್ರೀ" ಅಂತ ನಾಜೂಕಾಗಿ ಹೇಳಿ ನಮ್ಮ ಭಾಷಿ ಬಗ್ಗೆ ಪ್ರೀತಿ, ಅಭಿಮಾನ ಮೂಡು ಹಂಗಾ ವ್ಯವಹಾರ ಮಾಡಾಕ್ ಹೇಳ್ಯಾರ್ ಅಂತ್ರಿ.

ಬೆಂಗಳೂರಿನ ಕದಾ

ಮೆಜೆಸ್ಟಿಕ್ ಅನ್ನುದು ನಮ್ಮ ಬೆಂಗಳೂರಿನ ಕದಾ ಇದ್ದಂಗ ಐತ್ರಿ. ಈ ಊರಿಗೆ ಬಂದ ನೆಲೆಸು ಯಾರಿಗೆ ಆದ್ರೂ ಕನ್ನಡದ ಬಗ್ಗ ಜಾಗ್ರುತಿ ಮೂಡಿಸಾಕ್, ಇಲ್ಲಿನ ಭಾಷೆ, ಇಲ್ಲಿನ ಜನ ಜೀವನದ ಬಗ್ಗೆ ತಿಳಿ ಹೇಳಾಕ್ ಅಲ್ಲಿನ ಬಸ್ ನಿಲ್ದಾಣನೇ ಒಂದ ಮುಖ್ಯ ಸ್ಥಳ ಆಗೆತಿ. ಇಲ್ಲಿ ಬ್ಯಾರೆ ಭಾಷೆ ಮಂದಿಗೂ " ಇದು ಕರ್ನಾಟಕ, ಇಲ್ಲಿ ಕನ್ನಡದಾಗ್ ವ್ಯವಹಾರ ಮಾಡಬೇಕು, ಕನ್ನಡ ಬರಂಗಿಲ್ಲ ಅಂದ್ರ ಕನ್ನಡ ಕಲಿ ಬೇಕು ಇಲ್ಲ ಅಂದ್ರ ಜೀವನ ಮಾಡುದ ತ್ರಾಸ್ ಆಗತೇತಿ" ಅನ್ನು ಸಂದೇಶ ಕೊಡಾಕ ಬರೋಬರಿ ಜಗಾ ಇದು. ಬಿ.ಎಮ್.ಟಿ.ಸಿ ಇಟ್ಟಿರು ಈ ಹೆಜ್ಜಿ ಬಾಳ ಅಂದ್ರ ಬಾಳ ಚಲೊ ಐತಿ. ನಾವೆಲ್ಲ ಕೂಡಿ ಅವರಿಗೆ ನಮ್ಮ ಅಭಿನಂದನೆ ಹೇಳಬೇಕ್ರಿ. ಹಿಂಗೆ ಒಂದೊಂದೆ ಇಲಾಖೆಗೋಳು ಕನ್ನಡ ಅನುಷ್ಟಾನಕ್ಕ್ ಗಮನಾ ಕೊಟ್ರ ಕನ್ನಡ ಆಡಳಿತ ಭಾಷೆಯಾಗಿ ಅನುಷ್ಟಾನ ಆಗುದನ್ನ ತಡಿಯಾಕ್ ಯಾ ಮಗನ ಕೈಯಾಗು ಆಗುದಿಲ್ಲ, ಏನಂತೀರ್ರೀ ಗುರುಗಳಾ?

ಗಣಿಗಾರಿಕೆಯಿಂದ ಗರಿಷ್ಟ ಲಾಭ ಸಿಗ್ಬೇಕು


ಇತ್ತೀಚಿಗೆ ಮುಖ್ಯಮಂತ್ರಿಗಳು ಗಣಿ ಪರವಾನಿಗೆ ಬೇಕಂದ್ರೆ ಉಕ್ಕು ಕಾರ್ಖಾನೇನೂ ಸ್ಥಾಪಿಸಬೇಕು ಅಂತಂದ ಸೊಗಸಾದ ಹೇಳಿಕೆ ಕೊಟ್ಟಿದಾರೆ ಗುರು! ನಿಜಕ್ಕೂ ಇದು ಒಂದು ಒಳ್ಳೆಯ ಅತ್ಯಗತ್ಯವಾದ ನಡೆಯಾಗಿದೆ.

ಕರಗೋ ನೈಸರ್ಗಿಕ ಸಂಪತ್ತು

ನಮ್ಮ ನಾಡು ಬಹಳ ಸಮೃದ್ಧವಾದ ನಾಡು. ಇವತ್ತಿಗೂ ಕನ್ನಡನಾಡಲ್ಲೇ ಅತಿ ಹೆಚ್ಚು ಚಿನ್ನ ಸಿಗ್ತಿರೋದು. ಹಾಗೇ ನೋಡ್ತಾ ಹೋದ್ರೆ ನಮ್ಮ ಕಾಡುಗಳಲ್ಲಿ ಬೆಳೆಯೋ ಅನೇಕ ಮರಗಳು ಅತ್ಯಂತ ಬೆಲೆಬಾಳೋ ಅಪೂರ್ವವಾದವುಗಳು. ನಮ್ಮ ನಾಡಲ್ಲಿ ಹರಿಯೋ ನದಿಗಳು ಅನೇಕ... ಒಟ್ಟಲ್ಲಿ ಆ ದೇವರು ಒಳ್ಳೇ ಮೂಡಲ್ ಇದ್ದಾಗ ಸೃಷ್ಟಿ ಮಾಡಿದ್ದು ನಮ್ ನಾಡನ್ನ ಅಂದ್ರೆ ತಪ್ಪಾಗಲ್ಲಾ ಗುರು! ಇಂಥಾ ಸಮೃದ್ಧ ನಾಡಿನ ನೈಸರ್ಗಿಕ ಸಂಪತ್ತಿನ ಹಕ್ಕುದಾರರು ಯಾರು? ತಲತಲಾಂತರಗಳಿಂದ ಇದೇ ಮಣ್ಣಲ್ಲಿ ಬದುಕಿದ ನಮ್ಮ ಹಿರಿಯರು, ಈಗ ಬದುಕುತ್ತಿರೋ ನಾವು ಮತ್ತು ಮುಂದಿನ ನಮ್ಮ ನೂರಾರು ತಲೆಮಾರುಗಳು. ಈ ನೈಸರ್ಗಿಕ ಸಂಪತ್ತನ್ನು ನಾವು ಕರಗ್ಸೋದಾದ್ರೆ ಮುಂದಿನೋರಿಗೆ ಏನುತ್ತರ ಕೊಟ್ಟೇವು? ಹಾಗಂದ್ರೆ ಇದನ್ನು ನಾವು ಖರ್ಚು ಮಾಡಲೇ ಬಾರದೆನು? ಇಂದು ನಾವಲ್ಲದಿದ್ರೆ ಮುಂದಿನ ಇನ್ಯಾರಾದರೋ ಇದನ್ನು ಬಳಸಲೇ ಬೇಕು. ಆಗಲೇ ಇದನ್ನು ಸಂಪನ್ಮೂಲ ಅನ್ನಕ್ಕೆ ಸಾಧ್ಯ. ಇದು ತೆಗೆದ ಹಾಗೆಲ್ಲಾ ಕರಗೋ ಸಂಪತ್ತು ಅನ್ನೋದು ಎಷ್ಟು ಸತ್ಯಾನೋ, ತೆಗೀದೆ ಇರೋದು ಪೆದ್ದುತನ ಅನ್ನೋದೂ ಅಷ್ಟೆ ಸತ್ಯಾ ಗುರು!ಹಾಗಿದ್ರೆ ಇದನ್ನು ಎಷ್ಟು ಯೋಗ್ಯವಾಗಿ ಹೇಗೆ ಬಳಸಬೇಕು ಅನ್ನೋದೊಂದೇ ನಮ್ಮ ಮುಂದಿರೋ ಪ್ರಶ್ನೆ ಅಲ್ವಾ!

ಗರಿಷ್ಟ ಲಾಭ ತಂದುಕೊಡಬೇಕು ಗಣಿ!

ಇವತ್ತಿನ ದಿನ ಒಂದು ಟನ್ ಕಬ್ಬಿಣದ ಅದಿರನ್ನು ತೆಗೆದಾಗ ಅಂತಹ ಗಣಿ ಉದ್ಯಮಿ ಸರ್ಕಾರಕ್ಕೆ ಕಟ್ಟೋ ಶುಲ್ಕದಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ದಕ್ಕೋದು ಶೇಕಡಾ ಒಂದರಷ್ಟು ಮಾತ್ರಾ ಅಂದ್ರೆ ಇಪ್ಪತ್ತು ರೂಪಾಯಿಗಿಂತಲೂ ಕಮ್ಮಿ!!! ನಮ್ಮ ನಾಡಲ್ಲಿ ಗಣಿಗಾರಿಕೆ ಮಾಡಿ ನಮ್ಮ ಸಂಪನ್ಮೂಲಾನ ಶಾಶ್ವತವಾಗಿ ಬರಿದು ಮಾಡೋದಕ್ಕೆ ಅನುಮತಿಸಿದ್ದಕ್ಕೆ ನಮಗೆ ಸಿಗ್ತಿರೋ ಪ್ರತಿಫಲ ಇಷ್ಟೇ ಆದ್ರೆ ಹೆಂಗೆ ಗುರು? ಗಣಿಗಾರಿಕೆಯಿಂದ ನಮ್ಮ ಸರ್ಕಾರಕ್ಕೆ ಸಂಪನ್ಮೂಲ ಹರಿಹರಿದು ಬರಬೇಕು. ನಿಜಕ್ಕೂ ಗಣಿಯಿಂದ ಅದಿರು ತೆಗೆಯೋ ಪರವಾನಿಗೆ ಇರೋರಿಗೆ ಸಿಗಬೇಕಾದ್ದು ಬರೀ ಸಂಸ್ಕರಣಾ ಶುಲ್ಕ ಮಾತ್ರಾ ಅಲ್ವಾ ಗುರು? ಗಣಿಗಾರಿಕೆಯಿಂದ ತೆಗೆದ ಕಬ್ಬಿಣದ ಅದಿರನ್ನು ಇಲ್ಲೇ ಸಂಸ್ಕರಿಸಿ ಉಕ್ಕು ಕಾರ್ಖಾನೆ ತೆಗೆದರೆ ನಮ್ಮ ಜನಕ್ಕೆ ದೊರಕುವ ಉದ್ಯೋಗಗಳ ಸಂಖ್ಯೆ ಹೆಚ್ಚುತ್ತೆ. ಆ ಕಾರಣದಿಂದ ಮಾನ್ಯ ಮುಖ್ಯಮಂತ್ರಿಗಳ ಹೇಳಿಕೆ ಆ ಮಟ್ಟಿಗೆ ನಾಡಿಗೆ ಉಪಯೋಗಕಾರಿಯಾಗಿದೆ. ಆದ್ರೆ ಇಷ್ಟರಿಂದಲೇ ನಾವು ತೃಪ್ತರಾದ್ರೆ ತಪ್ಪಾಗುತ್ತೆ, ನಿಜಕ್ಕೂ ನಮ್ಮ ಜನರ ಸಂಪತ್ತನ್ನು ನಾವು ಮಾರಿಕೊಳ್ಳೋದರಿಂದ ಸಿಗೋ ಅಷ್ಟೂ ಬೆಲೆ ನಮ್ಮ ಸರ್ಕಾರಕ್ಕೇ ಸಿಗಬೇಕಾದದ್ದೂ, ಹಾಗೆ ಸಿಕ್ಕೋ ಸಂಪತ್ತಿಂದ ನಮ್ಮ ಜನರ ಕಲ್ಯಾಣ, ಕಲಿಕೆ, ಉದ್ಯೋಗಗಳಿಗೆ ನೆರವು ಸಿಗೋದು... ಇದೇ ಸರಿ ಅಲ್ವಾ ಗುರು?
ಕೊನೆಹನಿ : ಒಂದು ಟನ್ ಮರಳಿಗೆ ಸರ್ಕಾರ ಗಳಿಸೋ ರಾಯಧನ 25 ರೂಪಾಯಿ, ಆದ್ರೆ ಕಬ್ಬಿಣದ ಅದಿರಿಗೆ ಸಿಗೋದು ಬರೀ 15 ರೂಪಾಯಿ ಅನ್ನೋದು ಎಂಥಾ ಸೋಜಿಗದ ವಿಷ್ಯಾ ಅಲ್ವಾ ಗುರು?

ವಲಸಿಗರ ಪುಂಡುತನಕ್ಕೆ ಕಡಿವಾಣ ಬೇಕು


ತಮ್ಮ ಊರಲ್ಲಿ ತಿನ್ನಕ್ ಗತಿ ಇಲ್ಲಾ ಅಂತ ಹೊಟ್ಟೆಪಾಡಿಗೆ ನಮ್ಮ ಊರಿಗೆ ಬಂದಿರೋ ಈ ಪರಭಾಷಿಕ ಕೂಲಿಗಳು ನಡೆಸಿದ ದಾಂಧಲೆ ಬಗ್ಗೆ ಪತ್ರಿಕೆಗಳಲ್ಲಿ ವರದಿ(ಕನ್ನಡ ಪ್ರಭ-ಸೆಪ್ಟೆಂಬರ್ ೧೯, ಪುಟ ೩) (ಫೋಟೋ ಕೃಪೆ: ಕನ್ನಡಪ್ರಭ) ಬಂದಿದೆ. ಬೆಂಗಳೂರಲ್ಲಿ ನಡೆಯೋ ಕೊಲೆ, ದರೋಡೆ, ಅತ್ಯಾಚಾರದಂತಹ ಕ್ರೈಮುಗಳಲ್ಲಿ ಇತ್ತೀಚಿಗೆ ಇಂತಹ ವಲಸಿಗರ ಕೈವಾಡ ಹೆಚ್ಚು ಹೆಚ್ಚು ಕಾಣ್ತಿದೆ. ಆದ್ರೆ ಈ ಉದ್ಧಟತನ ಇವತ್ತು ನಮ್ಮ ನಾಡಿನ ವ್ಯವಸ್ಥೇನ್ನೇ ಧಿಕ್ಕರಿಸೋ ಹಂತಕ್ಕೆ, ಕಾಪಾಡುವ ಪೊಲೀಸರ ಮೇಲೇ ಕೈ ಮಾಡೋ ಹಂತಕ್ಕೆ ತಲುಪಿದೆ. ಈ ಘಟನೆ ನಮ್ಮ ವ್ಯವಸ್ಥೇನಾ ಗಟ್ಟಿ ಮಾಡ್ಕೊಳ್ಳೋ ಅಗತ್ಯಾನ ಎತ್ತಿ ತೋರುಸ್ತಿದೆ. ಈ ಒಂದು ಘಟನೆ ಕನ್ನಡಿಗರ ಕಣ್ಣು ತೆರಸಲಿ ಗುರು!

ಕಡಿವಾಣವಿಲ್ಲದ ವಲಸಿಗ!

ಕರ್ನಾಟಕದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತಿದ್ದ ಹಾಗೇ ಕಟ್ಟದ ನಿರ್ಮಾಣದಂತಹ ಕೆಲಸಗಳೂ ಹೆಚ್ಚಿದವು. ತೀರಾ ಹಿಂದುಳಿದ ಬಿಹಾರಿನಂತಹ ಪ್ರದೇಶಗಳ ಜನ ಹಿಂಡು ಹಿಂಡಾಗಿ ಗುಳೆ ಬರೋದೂ ಹೆಚ್ಚಕ್ ಶುರುವಾಯ್ತು. ಇದಕ್ಕೆ ತಕ್ಕಂತೆ ನಮ್ಮ ಸರ್ಕಾರ ಅಂತರರಾಜ್ಯ ವಲಸೆ ನಿಯಂತ್ರಣದ ಅಗತ್ಯವನ್ನು ಮನಗಾಣದೇ, ಯಾರು ಎಲ್ಲಿಗಾದ್ರೂ ವಲಸೆ ಹೋಗಬಹುದು ತಾನೇ, ನಮಗೂ ಇದಕ್ಕೂ ಸಂಬಂಧವಿಲ್ಲ ಅಂತ ಕಣ್ಣುಮುಚ್ಕೊಂಡು ಕೂತು ಕೊಳ್ತು. ನಮ್ಮ ನಾಡಿಗೆ ಹಾಗೆ ವಲಸೆ ಬರೋರಾದ್ರೂ ಎಂಥಾವ್ರು? ಸಂಸಾರ, ಮನೆ, ಮಕ್ಕಳು, ಸಮಾಜ ಇವುಗಳ ಬಗ್ಗೆ ಯಾವ ನಂಬಿಕೇನೂ, ಬಂಧನಾನೂ ಇಲ್ಲದ ಉಂಡಾಡಿ ಗುಂಡ್ರು ಅನ್ನೋಕೆ ಇವ್ರು ವಲಸೆ ಬಂದಿರೋ ಊರುಗಳ ಅಪರಾಧ ವರದಿಗಳನ್ನು ನೋಡುದ್ರೆ ಸಾಕು.

ಈ ಗೂಂಡಾಗಳಿಗೆ ಬಲಿಯಾಗಿರೋರೂ ಕೂಡಾ ಹೆಚ್ಚಾಗಿ ಉತ್ತರ ಕರ್ನಾಟಕದ ಹಳ್ಳಿಗಳಿಂದ ಬಂದಿರೋ ಕನ್ನಡಿಗ ಕೂಲಿಕಾರರ ಹೆಣ್ಣುಮಕ್ಕಳು. ಇವರ ಕಣ್ಣಿಗೆ ಎರಡು ವರ್ಷದ ಕೂಸಿಂದ ಎಂಬತ್ತು ವರ್ಷದ ಮುದುಕೀವರೆಗೆ ಎಲ್ರೂ ಒಂದೇ. ಇದಕ್ ಪೂರಕವಾಗಿ ಈ ಜನ ಸಂಸಾರ ಬಂಧನವಿಲ್ಲದ ಪುಂಡು ಪೋಕರಿಗಳಂತೆ ಗುಂಪಾಗಿ ವಾಸಿಸೋರು. ಯಾಕಂದ್ರೆ ಊರಿಂದ ಬರ್ತಾ ಸಂಸಾರ ಕಟ್ಕೊಂಡೇನು ಬಂದಿರಲ್ವಲ್ಲಾ...
ಈ ಊರೇನು ತಮ್ಮ ತವರಲ್ಲವಲ್ಲಾ, ಇಲ್ಲಿನ ಜನರೇನು ತನ್ನವರಲ್ಲವಲ್ಲಾ, ಇಲ್ಲೇನು ಮಾನ ಮರ್ಯಾದೆಗೆ ಹೆದರಿ ಯಾರೇನು ಅಂದ್ಕೋತಾರೋ ಅಂತ ಅಂಜಬೇಕಾಗಿಲ್ಲವಲ್ಲಾ... ಅಂತಾ ಇವರು ಅಂದ್ಕೊಂಡಿದಾರೆ ಅನ್ಸುತ್ತೆ. ಅದುನ್ನ ತಮ್ಮ ನಡವಳಿಕೆಯಿಂದ ಹೆಜ್ಜೆಹೆಜ್ಜೆಗೂ ತೋರುಸ್ತಿದಾರೆ ಗುರು. ನಮ್ಮ ನೆಲದ ಕಾನೂನಿಗೆ ಕಿಂಚಿತ್ತೂ ಬೆಲೆ ಕೊಡಲ್ಲಾ ಅನ್ನೋದನ್ನು ನಮ್ಮ ಪೊಲೀಸರ ಮೇಲೇ ಕೈ ಮಾಡೊದ್ರ ಮೂಲಕ, ನಮ್ಮ ಪೊಲೀಸ್ ಅಧಿಕಾರಿಯನ್ನೇ ಸಾಯೋ ಹಾಗೆ ಹೊಡೆಯೋ ಮೂಲಕ ತೋರಿಸಿ ಕೊಡ್ತಿದಾರೆ ಗುರು! ಇಂಥಾ ಕ್ರಿಮಿಗಳನ್ನು ಗಡಿಪಾರು ಮಾಡೋ ಕ್ರಮಕ್ಕೆ ಮುಂದಾಗಲಿ ನಮ್ಮ ಕರ್ನಾಟಕ ಸರ್ಕಾರ!

ಚಿನ್ನದಂಥಾ ಖಜಾನಾ!

ಬೆಂಗಳೂರಿನ ಜಯನಗರದಲ್ಲಿ ಖಜಾನಾ ಅನ್ನೋ ಹಿಂದಿ ಹೆಸರಿನ ಒಂದು ಚಿನ್ನದ ಅಂಗಡಿ ಇದೆ. ಈ ಅಂಗಡಿ ಹೆಸರು ಕೇಳಿ ಇಲ್ಲೂ ಕನ್ನಡ ಮೂಲೆಗುಂಪಾಗಿರುತ್ತೆ ಅಂತಾ ಆ ಅಂಗಡಿ ಮುಂದೆ ಓಡಾಡೋವಾಗೆಲ್ಲಾ ಭಾಳ ಅನ್ನುಸ್ತಿತ್ತು, ಜೊತೆಗೆ ಈ ಅಂಗಡಿ ಬಗ್ಗೆ ಒಂಥರಾ ಅಲರ್ಜಿ ಶುರುವಾಗ್ಬಿಟ್ಟಿತ್ತು ಗುರು! ನಮ್ಮೂರಲ್ಲಿ ಬಂದು ತಮ್ಮ ಭಾಷೇಲಿ ಹೆಸರಿಟ್ಟುಕೊಳ್ಳೋ ಕಳಾಮಂದಿರ, ಮನ್ ಪಸಂದ್, ಅಡ್ಯಾರ್..ಇಂಥಾ ಅಂಗಡಿಗಳ್ನ ಕಂಡಾಗೆಲ್ಲಾ ಇವ್ರುಗೆ ತಾವಿರೋದು ಕನ್ನಡ ನಾಡಲ್ಲಿ ಅನ್ನೋದು ಅರಿವಿದ್ಯೋ ಇಲ್ವೋ ಅನ್ನಿಸೋದೂ, ಇಂಥವ್ರು ತಮ್ಮ ಅಂಗಡಿ ಮುಂಗಟ್ಟುಗಳಿಗೆ ಕನ್ನಡದ ಹೆಸರಾದ್ರೂ ಇಡಲಿ ಅನ್ಸೋದೂ, ಹಾಗೆ ಇಲ್ದಿದ್ರೆ ಉರುಕೊಳ್ಳೋದು ಕನ್ನಡದೋರ ಪಾಲಿಗೆ ಮಾಮೂಲಾಗಿಬಿಟ್ಟಿದೆ ಗುರು!

ಖಜಾನಾದಲ್ಲಿ ಕನ್ನಡದ ಖಜಾನೆ!

ಮೊನ್ನೆ ಇದೇ ಖಜಾನಾದ ಒಳಗಡೆ ಹೋಗೋ ಅವಕಾಶ ಒದಗಿ ಬಂದಿತ್ತು ಗುರು! ಒಳಗ್ ಹೋಗ್ತಿದ್ದ ಹಾಗೆ ಸ್ವಾಗತ ಸಿಕ್ಕಿದ್ದು ಕನ್ನಡದಲ್ಲಿ. ಒಳಗಡೆ ಹೋಗಿ ವ್ಯಾಪಾರ ಮುಗ್ಸಿ ಹೊರಗ್ ಹೊರಟಾಗ "ಸ್ವಾಮಿ, ಈ ಫೀಡ್ ಬ್ಯಾಕ್ ಫಾರಂ ತುಂಬಿಸಿಕೊಡಿ" ಅಂತ ಅಂದ್ರು. ಆ ನಮೂನೆ ಕನ್ನಡದಲ್ಲಿ ಇರೋದು ನೋಡಿ ಹಾಲು ಕುಡಿದಂಗೆ ಆಯ್ತು. ಕನ್ನಡ ಬರದೇ ಇರೋರಿಗೆ ಅದರ ಹಿಂಬದಿಯಲ್ಲಿ ಇಂಗ್ಲಿಷ್ ಭಾಷೆಯಲ್ಲೂ ನಮೂನೆ ಇತ್ತು. ಅಂಗಡಿಯೋರು ಕೊಟ್ಟ ಬಿಲ್ಲಲ್ಲಿ ಅಲ್ಲಿನ ಒಬ್ಬ ಸಿಬ್ಬಂದಿ ’ಶಿವು’ ಅಂತ ಕನ್ನಡದಲ್ಲಿ ಸಹಿ ಮಾಡಿದ್ದನ್ನೂ ಕಂಡಾಗ ಇನ್ಮೇಲೆ ಚಿನ್ನ ಅಂತ ತೊಗೊಂಡ್ರೆ ಈ ಅಂಗಡೀಲೆ ತೊಗೋಬೇಕು ಅನ್ಸಿದ್ದು ಸುಳ್ಳಲ್ಲ ಗುರು.
ಅಂಗಡಿ ಮಾಲೀಕರಿಗೆ ಮೆಚ್ಚುಗೆ ಹೇಳಿ ಹೊರಗ್ ಬಂದಾಗ "ಅದ್ಯಾಕೆ ನಮ್ಮೂರಿನ ಎಲ್ಲ ಅಂಗಡಿ, ಮುಂಗಟ್ಟು, ಮಳಿಗೆಗಳು ಇವ್ರುನ್ ನೋಡಿ ಪಾಠ ಕಲೀಬಾರದು? ಕನ್ನಡನಾಡಲ್ಲಿ ಕನ್ನಡದಲ್ಲೇ ಸೇವೆ ಕೊಡೋದು ಸರಿಯಾದದ್ದು, ಕನ್ನಡಾ ಬರದೇ ಇರೋರಿಗೆ ಇಂಗ್ಲಿಷ್ ಸಾಕು ಅಂದ್ಕೋಬಾರ್ದು" ಅನ್ನುಸ್ತಿತ್ತು ಗುರು!

ವಿಶ್ವೇಶ್ವರಯ್ಯನವರಿಗೆ ನಮನ!



ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಂಥಾ ಪುಟ್ಟ ಹಳ್ಳೀಲಿ ಹುಟ್ಟಿದ ಕನ್ನಡಿಗರ ಹೆಮ್ಮೆಯ ದಾರ್ಶನಿಕ ಸರ್.ಎಂ.ವಿಶ್ವೇಶ್ವರಯ್ಯನವರ ಒಂದು ನೂರಾ ನಲವತ್ತೆಂಟನೇ ಹುಟ್ಟುಹಬ್ಬ ನಿನ್ನೆ ತಾನೆ ಆಗಿದೆ. ಈ ಸಂದರ್ಭದಲ್ಲಿ ಅವರನ್ನು ನೆನೆದು ನಮ್ಮ ಗೌರವಗಳನ್ನು ಸಲ್ಲಿಸುತ್ತೇವೆ. ಆದ್ರೆ ಇವರನ್ನು ಏನೆಂದು ನೆನೆಯೋಣ? ಏನೇನೆಂದು ನೆನೆಯೋಣ ಗುರು!?

ಸರ್ ಎಂ.ವಿ. ಎಂಬ ....

ಇವರು ತಮ್ಮ ತಾಂತ್ರಿಕ ನೈಪುಣ್ಯದಿಂದ ಅಣೆಕಟ್ಟೆಯ ಗೇಟ್ ವಿನ್ಯಾಸ ಮಾಡಿ ಪೇಟೆಂಟ್ ಪಡೆದಿದ್ದ ತಾಂತ್ರಿಕ ನಿಪುಣರೆಂದೇ? ಲೋಕೋಪಯೋಗಿ ಇಂಜಿನಿಯರ್ ಆಗಿ ಅನೇಕ ಅಣೆಕಟ್ಟುಗಳನ್ನು ಕಟ್ಟಿ ಯೋಜನೆಗಳನ್ನು ಜಾರಿಗೊಳಿಸಿದ ಒಳ್ಳೆಯ ಆಡಳಿತಗಾರರೆಂದೇ? ನಾಡಿನ ಏಳಿಗೆಗೆ ಅಗತ್ಯವಾಗಿರೋ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ ಶಿಕ್ಷಣ ತಜ್ಞರೆಂದೇ? ಕನ್ನಡ ನಾಡಿನ ಏಕೀಕರಣಕ್ಕೆ ಒಂದು ವೇದಿಕೆಯಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದ ಸಾಹಿತ್ಯ ಲೋಕದ ದಿಗ್ಗಜರೆಂದೇ? ನಾಡೊಂದಾಗಲೆಂಬ ಮುಂದಾಲೋಚನೆಯ ರಾಜಕಾರಣಿಯೆಂದೇ?

ತನ್ನ ಬದುಕಿನಲ್ಲಿ ಶಿಸ್ತಿಗೆ ಮಹತ್ವ ಕೊಟ್ಟ ತನ್ನ ಮತ್ತು ಉಳಿದವರ ಸಮಯದ ಬೆಲೆ ಅರಿತು ಸದಾ ಸಮಯಪಾಲನೆ ಮಾಡುತ್ತಿದ್ದ ಶಿಸ್ತುಗಾರರೆಂದೇ? ತನ್ನವರನ್ನೆಲ್ಲಾ ಕರೆದು ದಿವಾನರಾಗುವ ಮೊದಲು ವಶೀಲಿ ಮಾಡುವಂತೆ ಒತ್ತಾಯಿಸಬೇಡಿ ಎಂದು ನಿಷ್ಠುರವಾಗಿ ನಡೆದ ನ್ಯಾಯ ಪಕ್ಷಪಾತಿಯೆಂದೇ? ತನ್ನ ಸ್ವಂತ ಹಣವನ್ನೂ ನಾಡಿನ ಕೆಲಸಕ್ಕಾಗಿ ಖರ್ಚು ಮಾಡಲು ಹಿಂದುಮುಂದು ನೋಡದ ನಿಷ್ಠಾವಂತರೆಂದೇ? ತನ್ನ ವೈಯುಕ್ತಿಕ ಕೆಲಸಕ್ಕಾಗಿ ಸ್ವಂತದ ಪೆನ್ನು, ಕಛೇರಿ ಕೆಲಸಕ್ಕೆ ಕಛೇರಿ ಪೆನ್ನು ಬಳಸುತ್ತಿದ್ದ ಪ್ರಾಮಾಣಿಕತೆಯ ಶಿಖರವೆಂದೇ?

ನಾಡಿನಲ್ಲಿ ಇಂದು ಇರುವ ಸಂಪನ್ಮೂಲಗಳೇನು, ಅವನ್ನು ಸರಿಯಾಗಿ ಬಳಸಿಕೊಳ್ಳಲು ಗಣಿಗಾರಿಕೆ, ಉಕ್ಕು ಕಾರ್ಖಾನೆ ಸ್ಥಾಪಿಸಿದವರೇ ಇವರು. ನಾಡಿನ ಜನತೆ ಇಂದು ವ್ಯವಸಾಯವನ್ನು ಮುಖ್ಯವಾಗಿ ನಂಬಿದ್ದಾರೆ, ಹಾಗಾಗಿ ನೀರಾವರಿಗೆ ಆದ್ಯತೆ ಕೊಡಬೇಕೆಂದು ಅಣೆಕಟ್ಟೆ ನಿರ್ಮಾಣವನ್ನು, ಆಧುನಿಕ ವ್ಯವಸಾಯ ಪದ್ದತಿಗಳನ್ನು ಪ್ರೋತ್ಸಾಹಿಸಿದ ಮುಂದಾಲೋಚನೆ ಹೊಂದಿದ ಮುಂದಾಳೆಂದೇ? ನಮ್ಮ ಜನ ರೇಶ್ಮೆ ಬೆಳೆಯಲ್ಲಿ ನಿಸ್ಸೀಮರು, ಇದಕ್ಕೆ ಸೂಕ್ತ ಉತ್ಪಾದನೆ ಮತ್ತು ಮಾರಾಟದ ಸಾಧನವಾಗೋ ಸಂಸ್ಥೆ ಬೇಕು ಎಂದು ರೇಶ್ಮೆ ಉದ್ದಿಮೆಯನ್ನು, ಸಂಬಂಧಪಟ್ಟ ಕೈಗಾರಿಕೆಗಳನ್ನೂ ಕಟ್ಟಿದ ಆಧುನಿಕ ನಾಯಕರೆಂದೇ? ಇರುವ ಸಂಪನ್ಮೂಲದ ಜೊತೆ ತಂತ್ರಜ್ಞಾನದಲ್ಲೂ ಮುಂದಾಗಬೇಕು ನಮ್ಮ ನಾಡು ಎಂದು ೧೯೩೦ರ ದಶಕದಲ್ಲೇ ಕಾರು ಕಾರ್ಖಾನೆ ಸ್ಥಾಪಿಸಲು ಮುಂದಾದವರೆಂದೇ? ಹಿಂದುಸ್ಥಾನ್ ವಿಮಾನ ಕಾರ್ಖಾನೆಯನ್ನು ವಿಮಾನ ವಿಜ್ಞಾನ ಇನ್ನೂ ಅಂಬೆಗಾಲಿಡುತ್ತಿದ್ದಾಗಲೇ ಸ್ಥಾಪಿಸಲು ಕಾರಣರಾದ ವಿಜ್ಞಾನಿಯೆಂದೇ? ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಪೂರೈಸಲು ಇಡೀ ಏಷ್ಯಾ-ಖಂಡದ ಮೊದಲ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಕಾರಣರಾದ ನಾಡಿನ ಬೆಳಕೆಂದೇ? ಬಹಳ ಕಡಿಮೆ ಜನ ಸಾಬೂನು ಬಳಸುತ್ತಿದ್ದ ಆ ದಿನಗಳಲ್ಲೇ ಮುಂದೆ ಒದಗಬಹುದಾದ ಮಾರುಕಟ್ಟೆಯನ್ನು ಗುರುತಿಸಿ, ನಮ್ಮ ನಾಡಲ್ಲೇ ಹೆಚ್ಚು ಸಿಗುತ್ತಿದ್ದ ಗಂಧದೆಣ್ಣೆಯ ವಿಶೇಷತೆಯನ್ನು ಮಾರುಕಟ್ಟೆ ಗೆಲ್ಲುವ ಸಾಧನವಾಗಿ ಬಳಸಿದ ಮಹಾನ್ ಉದ್ದಿಮೆದಾರರೆಂದೇ? ನಮ್ಮ ಜನರ ಏಳಿಗೆಗೆ ಇಂದಿನ ಹಣಕಾಸು ಬೆಂಬಲ ಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂಬ ಬ್ಯಾಂಕ್ ಹುಟ್ಟುಹಾಕಿದ ಆರ್ಥಿಕ ತಜ್ಞರೆಂದೇ? ಏನೆಂದು ನೆನೆಯೋಣ ಗುರು?

ನಾಡುಕಟ್ಟೋರಿಗೆ ಏನೆಲ್ಲಾ ಮುನ್ನೋಟಗಳು, ಏನೆಲ್ಲಾ ಸಾಮರ್ಥ್ಯಗಳು ಇರಬೇಕೆಂದು ತೋರಿಸಿಕೊಟ್ಟ ಕನ್ನಡ ನಾಡಿನ ಹೆಮ್ಮೆಯ ದೇವ ಮಾನವರೆಂದೇ? ಇವೆಲ್ಲವೂ ಆಗಿರುವ ನಮ್ಮಲ್ಲಿ ಸದಾ ಸ್ಪೂರ್ತಿ ತುಂಬುವ ಚೈತನ್ಯವೆಂದೇ?

ಹಿಂದಿ ಹೇರಿಕೆ ತಡೆಗೆ 12 ಸೂತ್ರಗಳು!!

ಕೇಂದ್ರ ಸರ್ಕಾರದೋರು ಇಡೀ ದೇಶದ ತುಂಬಾ ಹಿಂದೀನ ತುಂಬ ಬೇಕು ಅಂತ ಏನೇ ಸರ್ಕಸ್ ಮಾಡುದ್ರು ಕಡೆಗೆ ಅದನ್ನು ನಾವು ಧಿಕ್ಕರಿಸಿದ್ರೆ ಅವ್ರೇನೂ ಮಾಡಕ್ ಆಗಲ್ಲಾ ಗುರು! ಹಿಂದಿ ಭಾಷಿಕರಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ, ಮಣಿಪುರದಿಂದ ಮುಂಬೈ ತನಕ ಜೀವನ ಮಾಡಕ್ಕೆ ಅನುಕೂಲ ಮಾಡಿ ಕೊಡಬೇಕು, ಅವ್ರು ಯಾವ ಕಛೇರಿಗೆ ಹೋದ್ರೂ ಅವ್ರಿಗೆ ತೊಂದರೆ ಆಗಬಾರ್ದು, ಯಾವ ಅಂಗಡಿಗ್ ಹೋದ್ರೂ ಸಲೀಸಾಗ್ ಬೇಕು. ಅವ್ರೇ ಹಿಂದಿ ಇಲ್ಲದಿರೋ ನಾಡಲ್ ಹೋಗಿ ಅಂಗಡಿ ತೆಗುದ್ರೂ, ಫ್ಯಾಕ್ಟರಿ ಕಟ್ಟುದ್ರೂ, ಕೂಲಿ ಮಾಡುದ್ರೂ ಭಾಷೆ ತೊಡಕಾಗಬಾರ್ದು ಅನ್ನೋ ಘನವಾದ ಉದ್ದೇಶದಂದ ಹಿಂದಿ ಅನ್ನೋ ಭಾಷೆನ ನಮ್ ತಲೆಗ್ ಕಟ್ಟಕ್ ಹೊರ್ಟಿದಾರೆ. ಅದಕ್ಕೆ ಸಾವಿರಾರು ದಾರಿಗಳ್ನ ಹುಡುಕ್ಕೊಂಡಿದಾರೆ. ದೇಶದ ಒಗ್ಗಟ್ಟು ಉಳ್ಸಕ್ಕೆ ಅಂತಾರೆ, ದೇಶಕ್ಕೊಂದು ಕಾಮನ್ ಭಾಷೆ ಇರಬೇಕು ಅಂತಾರೆ, ಯಾರ್ ಯಾವ ಬಾಷೇನ ಬೇಕಾದ್ರೂ ಮಾತಾಡಬೋದು ಅಂತಾರೆ, ಇದುನ್ ಸಂವಿಧಾನದ ಆಶಯ ಅಂತಾರೆ... ಹೀಗೆ ಇರೋ ಬರೋ ಸಾದ್ನ ಎಲ್ಲಾ ಬಳುಸ್ಕೊಂಡು ಹಿಂದಿ ಪ್ರಸಾರಕ್ ಮುಂದಾಗಿದಾರೆ.

ಹಿಂದೀನ ಒಪ್ಪಿದರೆ...

ಇಂಥಾ ಹೇರಿಕೆಯಿಂದ ಕನ್ನಡ ನಾಡಿಗೆ ವಲಸೆ ಹೆಚ್ಚುತ್ತೆ, ನಮ್ಮೋರಿಗೆ ಕೆಲಸ ಇಲ್ಲದಂಗ್ ಆಗುತ್ತೆ, ನಮ್ಮೂರಿನ ವ್ಯವಸ್ಥೆ ನಮಗಾಗಿ ಇರಲ್ಲ ಬರೀ ಹಿಂದಿಯವರಿಗೆ ಇರುತ್ತೆ (ಬೆಂಗಳೂರಿನ ಕೇಂದ್ರ ಸರ್ಕಾರಿ ಕಛೇರಿಲೂ ಕನ್ನಡದಲ್ಲಿ ಸೇವೆ ಕೊಡೋದು ಕಡ್ಡಾಯ ಅಲ್ಲ, ಆದ್ರೆ ಹಿಂದೀಲಿ ಕೊಡಲ್ಲ ಅನ್ನೋದು ಅಪರಾಧ ಅನ್ನುತ್ತೆ ’ಅಫಿಷಿಯಲ್ ಲಾಂಗ್ವೇಜ್ ಆಕ್ಟ್’). ಕಡೆಗೆ ನಮ್ಮ ನಾಡು, ಜನ, ನಾಡಿನ ಸಂಪತ್ತು ಎಲ್ಲಾ ಈ ಹಿಂದಿಯೋರ ಗುಲಾಮಗಿರಿಗೆ ಇರೋ ಸವಲತ್ತುಗಳಾಗ್ತವೇ ಅಷ್ಟೆ. ಇದನ್ನು ತಪ್ಪಿಸಬೇಕಾದದ್ದು ನಮ್ಮ ನಿಮ್ಮ ಹೊಣೆಯಾಗಿದೆ.

ಒಪ್ಪದೇ ಇರಕ್ ಏನ್ ಮಾಡ್ಬೇಕಪ್ಪಾ ಅಂದ್ರೆ...

ಶಿಕ್ಷಣ

೦೧. ಮಕ್ಕಳಿಗೆ ಮೊದಲು ಹಿಂದಿ ರಾಷ್ಟ್ರಭಾಷೆ ಅನ್ನೋ ಸುಳ್ಳನ್ನು ಹೇಳಿಕೊಡೋದನ್ನು ನಿಲ್ಲಿಸೋಣ. ಭಾರತ ನಾನಾ ಭಾಷಾ ಪ್ರದೇಶಗಳ, ಸಂಸ್ಕೃತಿ ಜನಾಂಗಗಳ ನಾಡು, ಇದರಲ್ಲಿ ಎಲ್ಲಕ್ಕೂ ಸಮಾನವಾದ ಸ್ಥಾನಮಾನ ಇರಬೇಕು, ಹಿಂದೀನೂ ಕನ್ನಡದ ಹಾಗೆ ಒಂದು ಜನಾಂಗವಾಡೋ ಭಾಷೆ, ಅದುಕ್ಕೇನು ಕೊಂಬಿಲ್ಲ ಅಂತ ಹೇಳಿಕೊಡೋಣ.

೦೨. ಕರ್ನಾಟಕ ರಾಜ್ಯ ಕಲಿಕಾ ಪದ್ದತಿಯಲ್ಲಿ ಅಳವಡಿಸಿಕೊಂಡಿರೋ ತ್ರಿಭಾಷಾ ಸೂತ್ರವನ್ನು ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸೋಣ. ನಮ್ಮ ನಾಡಿನ ಮಕ್ಕಳಿಗೆ ಶಾಲಾ ಹಂತದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಸಾಕು. ಮುಂದೆ ಅವರಿಗೆ ಬೇಕಾದ ಭಾಷೆ ಕಲಿಯೋ ವ್ಯವಸ್ಥೆ ಇರಲಿ ಅಷ್ಟೆ. ಜೊತೆಗೆ ಕೇಂದ್ರ ಸರ್ಕಾರ ವರ್ಗಾವಣೆಗಳಿಗೆ ಈಡಾಗೋ ತನ್ನ ನೌಕರರ ಮಕ್ಕಳಿಗೆ ಅಂತಲೇ ಹುಟ್ಟು ಹಾಕಿರೋ ಐ.ಸಿ.ಎಸ್.ಇ, ಸಿ.ಬಿ.ಎಸ್.ಇ ಹಾಗೂ ಕೇಂದ್ರೀಯ ವಿದ್ಯಾಲಯಗಳ ಮೇಲೆ ನಿಯಂತ್ರಣ ಇಟ್ಕೊಂಡು ಅಲ್ಲಿ ಬರೀ ಅಂತಹ ಮಕ್ಕಳಿಗೆ ಮಾತ್ರಾ ಶಿಕ್ಷಣ ಕೊಡ್ಸೋದ್ನ ಖಾತ್ರಿ ಮಾಡ್ಕೊಳ್ಳಲಿ, ಜೊತೆಗೆ ಅಂತಹ ಶಾಲೆಗಳಲ್ಲೂ ಆಯಾ ಪ್ರದೇಶದ ಭಾಷೇನ ಕಡ್ಡಾಯವಾಗಿ ಕಲಿಸೋ ವ್ಯವಸ್ಥೆ ಮಾಡಲಿ ಅಂತ ಕೇಂದ್ರ ಸರ್ಕಾರಾನ ಒತ್ತಾಯಿಸೋಣ.

೦೩. ನಮ್ಮ ಮಕ್ಕಳು ಹಿಂದಿ ಪರೀಕ್ಷೆಗಳನ್ನು ತೊಗೊಳ್ಳೋದನ್ನು ಉತ್ತೇಜಿಸೋದು ಬೇಡ. ಯಾಕಂದ್ರೆ ಆ ಮೂಲಕ ನಾವು ಮಕ್ಕಳಿಗೆ ಚಿಕ್ಕಂದಿನಲ್ಲೇ ತಲೇಲಿ ಭಾರತದಲ್ಲಿರೋಕೆ ಹಿಂದಿ ಕಲೀಬೇಕು ಅನ್ನೋ ತಪ್ಪು ಸಂದೇಶ ಕೊಡ್ತೀವಿ ಅಲ್ಲದೆ ಆ ಪರೀಕ್ಷೆಗಳ ಮೂಲಕ ಹಿಂದಿ ರಾಷ್ಟ್ರಭಾಷೆ ಅಂತ ಸುಳ್ಳು ತುಂಬ್ತೀವಿ.


ಆಡಳಿತ


೦೪. ಕನ್ನಡ ನಾಡಿನ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡದಲ್ಲಿ ಸೇವೆ ನಮ್ಮ ಮೂಲಭೂತ ಹಕ್ಕು ಮತ್ತು ಇದರ ಜಾರಿಗೆ ಇರೋ ಅಡೆತಡೆ ನಿವಾರಣೆಗೆ ಸರ್ಕಾರ ಗ್ರಾಹಕ ಸೇವೆಯ ಕಾಯ್ದೆ ಮಾಡಿ ಕನ್ನಡದಲ್ಲಿ ಸೇವೆ ಕೊಡದೆ ಇರೋದು ಶಿಕ್ಷಾರ್ಹ ಅಪರಾಧ ಅನ್ನುವುದನ್ನು ಜಾರಿಗೆ ತರಲಿ ಎಂದು ಸರ್ಕಾರಾನ ಒತ್ತಾಯಿಸೋಣ.


೦೫. ಕೇಂದ್ರ ಸರ್ಕಾರದ ಅಧೀನದ ಬ್ಯಾಂಕುಗಳೂ ಸೇರಿದಂತೆ ಎಲ್ಲ ಸರ್ಕಾರಿ ಕಛೇರಿಗಳ ವ್ಯವಹಾರದಲ್ಲಿ ಕನ್ನಡವೊಂದನ್ನೇ ಬಳಸೋಣ. ಕನ್ನಡ ನಮೂನೆಗಳು ಇರುವಂತೆ ಒತ್ತಾಯಿಸೋಣ. ಕರ್ನಾಟಕ ಸರ್ಕಾರ ತನ್ನ ನೆಲದಲ್ಲಿರೋ ಎಲ್ಲಾ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಕನ್ನಡದ ನಮೂನೆ, ಕನ್ನಡದ ಸೇವೆ ಕಡ್ಡಾಯ ಮಾಡಲಿ ಎಂದು ಒತ್ತಾಯಿಸೋಣ.

೦೬. ಕೇಂದ್ರ ಸರ್ಕಾರಿ ನೌಕರರಾಗಿದ್ದಲ್ಲಿ, ಹಿಂದಿ ದಿವಸ/ ಹಿಂದಿ ಸಪ್ತಾಹಗಳ ಆಚರಣೆಗಳನ್ನು ಸಾರಸಗಟಾಗಿ ಬಹಿಷ್ಕರಿಸೋಣ.

ಗ್ರಾಹಕ ಸೇವೆ


೦೭. ಕರ್ನಾಟಕದ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡದಲ್ಲಿ ಬೋರ್ಡುಗಳನ್ನು ಹಾಕುವಂತೆ, ಕನ್ನಡ ಬಲ್ಲ ಸಿಬ್ಬಂದಿ ಇಟ್ಟುಕೊಳ್ಳುವಂತೆ ಒತ್ತಡ ಹೇರೋಣ.


೦೮. ತಳ್ಳೋ ತರಕಾರಿ ಗಾಡಿಯೋರಿಂದ ಹಿಡ್ದು ಅಪಾರ್ಟ್ಮೆಂಟ್ ಮಾರೋರ ತನಕ ಎಲ್ಲಾರ್ ಜೊತೆ ನಾವು ಗ್ರಾಹಕರಾಗಿ ನಮಗಿರೋ ಹಕ್ಕನ್ನು ತಪ್ಪದೇ ಚಲಾಯಿಸೋಣ. ಅಂದ್ರೆ ಎಲ್ಲೆಡೆ ಕನ್ನಡದಲ್ಲೇ ವ್ಯವಹರಿಸೋಣ. ಕನ್ನಡ ಮಾತಾಡಲ್ಲ ಅಂದ್ರೆ ’ಹೋಗ್ರೀ ಸ್ವಾಮಿ, ನೀವೂ ಬೇಡ, ನಿಮ್ ಅಂಗಡೀನೂ ಬೇಡ’ ಅಂತ ಎದ್ ಬರೋಣ.

ವಲಸೆ

೦೯. ಹಿಂದಿ ತಾಯ್ನುಡಿಯೋರು ಮಾತ್ರಾ ಅಲ್ದೆ ಇಲ್ಲಿಗೆ ಬರೋ ಬೇರೆ ಭಾಷೆಯೋರ ಜೊತೆಗೂ ಕನ್ನಡದಲ್ಲೇ ಮಾತಾಡಿಸಿ ಕನ್ನಡ ಕಲಿಸಲು ಮುಂದಾಗಿ, ಕನ್ನಡ ಕಲಿಯೋ ವಾತಾವರಣ ಹುಟ್ ಹಾಕೋಣ. ಹಿಂದಿ ಬರೋರೂ ಕೂಡಾ ನಮಗೆ ಹಿಂದಿ ಬರಲ್ಲ ಅಂತ ಸೋಗು ಹಾಕಿ, ಹಿಂದಿ ಬಳಸೋರಿಗೆ ಅಸಹಕಾರ ಒಡ್ಡೋಣ.

ಮನರಂಜನೆ

೧೦. ಮನರಂಜನೆ ಅನ್ನೋದು ಹಿಂದಿ ಹೇರಕ್ಕೆ ಬಳಕೆ ಆಗ್ತಿರೋ ಅತಿ ಮುಖ್ಯವಾದ ಸಾಧನ. ಆ ಕಾರಣದಿಂದಾಗಿ ಹಿಂದಿ ಸಿನಿಮಾಗಳನ್ನು ಪ್ರೋತ್ಸಾಹಿಸೋದನ್ನು ನಿಲ್ಲಿಸೋಣ. ಹಿಂದಿ ಹಾಡುಗಳನ್ನು ಹಾಕೋ ರೇಡಿಯೋ ವಾಹಿನಿಗಳನ್ನು ಬಹಿಷ್ಕರಿಸೋಣ. ಹಿಂದೀಲಿ ಜಾಹಿರಾತು ಹಾಕೋರಿಗೆ ಕನ್ನಡದಲ್ಲಿ ಹಾಕಿ ಅಂತ ಒತ್ತಾಯಿಸೋಣ.

ಜೊತೆಯಲ್ಲೇ...

೧೧. ಹಿಂದಿಗೂ ದೇಶಭಕ್ತಿಗೂ ಯಾವ ಸಂಬಂಧವೂ ಇಲ್ಲ, ಹಿಂದಿಗೂ ದೇಶದ ಒಗ್ಗಟ್ಟಿಗೂ ಯಾವ ಸಂಬಂಧವೂ ಇಲ್ಲ ಅಂತಾ ಮನವರಿಕೆ ಮಾಡ್ಕೊಳ್ಳೋಣ. ನಿಜವಾಗ್ಲೂ ಹಿಂದಿ ಅನ್ನೋ ಒಂದು ಭಾಷೇನ ಎಲ್ಲರ ಮೇಲೆ ಹೇರೋದ್ರ ಮೂಲಕ ದೇಶದ ಒಗ್ಗಟ್ಟನ್ನು ಬಿಕ್ಕಟ್ಟಿಗೆ ತಳ್ಳಿದ ಹಾಗಾಗುತ್ತೆ ಅಂತ ಅರ್ಥ ಮಾಡ್ಕೊಳ್ಳೋಣ.

೧೨. ಕಡೆಯದಾಗಿ ಕನ್ನಡ ಜನರಲ್ಲಿ ಈ ಹಿಂದಿ ಅನ್ನೋದ್ರ ಹೇರಿಕೆ ನಡೀತಾ ಇದೆ, ಅದುನ್ನ ಒಪ್ಕೊಂಡ್ರೆ ನಮ್ಮ ಸರ್ವನಾಶ ಗ್ಯಾರಂಟಿ ಅನ್ನೋ ಜಾಗೃತಿ ಹುಟ್ಟುಹಾಕೋಣ. ನಮ್ಮ ವಿರೋಧ ಹಿಂದಿ ನಾಡಿನಲ್ಲಿ ಹಿಂದಿಯ ಸಾರ್ವಭೌಮತ್ವದ ವಿರುದ್ಧ ಅಲ್ಲ, ಅದೇನಿದ್ರೂ ನಮ್ಮ ನಾಡಲ್ಲಿ ಹಿಂದೀನ ನಮ್ಮ ಮೇಲೆ ಹೇರೋದರ ವಿರುದ್ಧ ಅನ್ನೋದನ್ನು ಮನವರಿಕೆ ಮಾಡಿಸೋಣ.

ನಿಜವಾದ ಒಕ್ಕೂಟ ವ್ಯವಸ್ಥೆ ನಮಗೆ ಬೇಕು

ನಮಗೆ ಇಂದು ಬೇಕಿರುವುದು ಸಮ ಗೌರವದ ಸರಿಯಾದ ಒಂದು ಒಕ್ಕೂಟ ವ್ಯವಸ್ಥೆ. ಇದರಲ್ಲಿ ಮಹಾರಾಷ್ಟ್ರದಲ್ಲಿ ಮರಾಠಿಯೂ, ತಮಿಳುನಾಡಿನಲ್ಲಿ ತಮಿಳೂ, ಕನ್ನಡನಾಡಿನಲ್ಲಿ ಕನ್ನಡವೂ, ಪಂಜಾಬಿನಲ್ಲಿ ಪಂಜಾಬಿಯೂ, ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ಹಿಂದಿಯೂ ಸಾರ್ವಭೌಮ ಭಾಷೆ ಆಗಿರುತ್ತದೆ. ಪ್ರತಿಯೊಂದು ನಾಡಿನ ಆಡಳಿತ ಭಾಷೆಯಾಗಿ ಆಯಾ ಪ್ರದೇಶದ ಭಾಷೆಯಿರುತ್ತದೆ. ನಾಡಿನ ವ್ಯವಸ್ಥೆ ವಲಸಿಗರಿಗಾಗಿ ಇರದೆ ನಾಡಿಗರಿಗಾಗಿ ಇರುತ್ತದೆ. ಕೇಂದ್ರ ಸರ್ಕಾರದ ಅಧಿಕೃತ ಆಡಳಿತ ಭಾಷೆಯಾಗಿ ಎಲ್ಲ ಭಾರತೀಯ ಭಾಷೆಗಳೂ ಇರುತ್ತವೆ. ಯಾವ ಒಂದು ಭಾಷಿಕ ಜನಾಂಗಕ್ಕೂ ಉಳಿದವರ ಮೇಲೆ ದೌರ್ಜನ್ಯ ಮಾಡುವ, ದರ್ಪ ತೋರುವ, ಗುಲಾಮಗಿರಿಗೆ ತಳ್ಳುವ, ಸವಾರಿ ಮಾಡುವ ಅವಕಾಶವಿರುವುದಿಲ್ಲ. ಯಾವೊಂದು ಭಾಷೆಯನ್ನೂ ಉಳಿದವುಗಳಿಗಿಂತ ಮೇಲು ಎಂದು ವಿಶೇಷ ಸ್ಥಾನಮಾನದ ಮೂಲಕ ಉತ್ತೇಜಿಸುವ ಮತ್ತು ಹೇರುವ ಅವಕಾಶ ಇರುವುದಿಲ್ಲ. ಇಂತಹ ಒಕ್ಕೂಟ ವ್ಯವಸ್ಥೆಯೇ ಭಾರತವನ್ನು ಬಲಿಷ್ಟಗೊಳಿಸುವುದು, ಭಾರತವನ್ನು ಒಂದಾಗಿಡುವುದು. ಏನಂತೀ ಗುರು?

ಹಿಂದಿ ಹೇರಿಕೆಗೊಂದು ಕಾರ್ಯಯೋಜನೆ!

ಭಾರತದ ಎಲ್ಲಾ ರಾಜ್ಯಗಳನ್ನು ಮೂರು ವಲಯ ಮಾಡಿ ಹಿಂದಿ ತಾಯ್ನುಡಿ ಇರೋ ರಾಜ್ಯಗಳು, ಹಿಂದಿಗೆ ಹತ್ತಿರದ ನುಡಿ ಇರೋ ವಲಯಗಳು ಮತ್ತು ಹಿಂದಿಗೆ ಸಂಬಂಧ ಇಲ್ಲದ ವಲಯಗಳು ಅಂತ ಮಾಡಿ, ಎಲ್ಲಾ ಕಡೆ ಘನ ಸಂವಿಧಾನದ ಆಶಯದಂತೆ ಹೇಗೆ ಹಿಂದಿಯೆನ್ನುವ ದೇವತೆಯನ್ನು ಪ್ರತಿಷ್ಠಾಪನೆ ಮಾಡೋದು ಅಂತ ವರ್ಷಾ ವರ್ಷಾ ಕಾರ್ಯ ಯೋಜನೆ ಮಾಡಿ, ಅದಕ್ಕೆ ಅಂತ ಒಂದು ಖಾತೆ ಮಾಡಿ, ಅದಕ್ಕೆ ಅಂತ ಕೋಟಿಗಟ್ಲೆ ತೆರಿಗೆ ಹಣವನ್ನು ಮೀಸಲು ಮಾಡಿ, ಹ್ಯಾಗೆ ಭಾರತೀಯರೆಲ್ಲ ಹಿಂದಿ ಕಲೀತಾ ಇದಾರೆ ಅನ್ನೋದನ್ನು ಹತ್ತಿರದಿಂದ ಪರಾಮರ್ಶೆ ಮಾಡ್ತಾ ಈ ದೇಶದ ಜನರೆಲ್ಲಾ ಎಷ್ಟ್ರು ಮಟ್ಟಿಗೆ ಹಿಂದುಸ್ಥಾನಿಗಳಾಗ್ತಾ ಇದಾರೆ ಅಂತ ಅಳೀತಾ ಇರ್ತಾರೆ ಅಂದ್ರೆ ಅಚ್ಚರಿ ಪಡಬೇಡಿ ಗುರುಗಳೇ! ಇವತ್ತು ಭಾರತ ಸರ್ಕಾರ ದೇಶದ ಬ್ಯಾಂಕುಗಳು ಹೆಂಗೆ ಕೆಲಸ ಮಾಡಬೇಕು? ಈ ವರ್ಷದಲ್ಲಿ ಏನೇನು ಗುರಿ ಸಾಧುಸ್ಬೇಕು ಅಂತ ಗುರಿ ಇಟ್ಕೊಂಡಿದಾರೆ ಅಂತ ನೋಡ್ಬುಟ್ರೆ ಜನ್ಮ ಸಾರ್ಥಕ ಆಗ್ಬುಡುತ್ತೆ ಗುರುಗಳೇ!!

ಭಾರತೀಯ ಬ್ಯಾಂಕುಗಳಿಗೆ ಈ ವರ್ಷಕ್ಕಿರೋ ಗುರಿ

ಈ ವರ್ಷ ಎಷ್ಟು ಬ್ರಾಂಚ್ ತೆಗೀಬೇಕು? ಎಷ್ಟು ಬಂಡವಾಳ ಸಂಗ್ರಹಿಸಬೇಕು? ಎಷ್ಟು ಸಾಲ ಕೊಡಬೇಕು? ಅನ್ನೋ ಗುರಿಗಳ ಬಗ್ಗೆ ಮಾತಾಡ್ತೀವಿ ಅಂದ್ಕೊಬೇಡಿ... ನೋಡಿ ಅವ್ರು ಸಾಧಿಸಬೇಕಾದ್ದು ಏನೇನು ಅಂತಾ...
ಬ್ಯಾಂಕುಗಳು ಡಿಮ್ಯಾಂಡ್ ಡ್ರಾಫ್ಟ್, ಪೇ ಆರ್ಡರುಗಳಿಗಾಗಿ ಹಿಂದಿಯಲ್ಲಿ ಅರ್ಜಿ ಸಲ್ಲಿಸಿದರೆ ಹಿಂದಿಯಲ್ಲೇ ತಯಾರು ಮಾಡಿಕೊಡಬೇಕು. ಇಂಗ್ಲಿಷಲ್ಲಿ ಬರೆದರೆ ಅಂತಹ ಗ್ರಾಹಕರ ಸಹಮತದೊಂದಿಗೆ ಹಿಂದಿಯಲ್ಲಿ ಮಾಡಿಕೊಡಬೇಕು.
ಬ್ಯಾಂಕಿನ ಎಲ್ಲ ದಾಖಲೆಗಳನ್ನು ಹಿಂದಿಯಲ್ಲಿ ತಯಾರು ಮಾಡಬೇಕು. ಎಲ್ಲ ತೆರನಾದ ಪಟ್ಟಿಗಳು, ರಿಟರ್ನ್ ಗಳು, ಫಿಕ್ಸಡ್ ಡಿಪಾಸಿಟ್ ರಸೀತಿಗಳು, ಚೆಕ್ ಪುಸ್ತಕಕ್ಕೆ ಸಂಬಂಧಿಸಿದ ಪತ್ರ ವ್ಯವಹಾರಗಳು, ದಿನನಿತ್ಯದ ವಹಿವಾಟು ದಾಖಲಿಸುವ ಲೆಡ್ಜರ್ ಪುಸ್ತಕದಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಎಂಟ್ರಿಗಳು, ಮಸ್ಟರ್ರು, ರವಾನೆ ಪುಸ್ತಕ, ಪಾಸ್ ಪುಸ್ತಕ, ಲಾಗ್ ಪುಸ್ತಕದ ಎಂಟ್ರಿಗಳು, ಆದ್ಯತೆ ಪಟ್ಟಿಯ ಕೆಲಸಗಳು, ಭದ್ರತೆ ಮತ್ತು ಗ್ರಾಹಕ ಸೇವೆಗಳು, ಹೊಸ ಖಾತೆ ತೆರೆಯುವಾಗ, ಲಕೋಟೆಗಳ ಮೇಲೆ ವಿಳಾಸ ಬರೆಯುವಾಗ, ಬ್ಯಾಂಕಿನ ನೌಕರರ ಪ್ರವಾಸ ಭತ್ಯೆಗೆ ಸಂಬಂಧಿಸಿದ ದಾಖಲಾತಿಗಳು, ರಜೆ, ಭವಿಷ್ಯ ನಿಧಿ, ಮನೆ ಕಟ್ಟಲು ನೀಡುವ ಅನುದಾನ, ವೈದ್ಯಕೀಯ ಸೇವೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಹಿಂದಿಯಲ್ಲಿರತಕ್ಕದ್ದು. ಇದಲ್ಲದೆ ಸಭೆಗಳ ಉದ್ದೇಶ ಹಾಗು ಸಭೆಯ ನಂತರದ ಸಾರಾಂಶದ ವರದಿಗಳು ಹಿಂದಿಯಲ್ಲಿರತಕ್ಕದ್ದು.....

ಹಿಂದುಸ್ತಾನವೋ ಹಿಂದಿ ಆಸ್ಥಾನವೋ?

ಇದು ಈ ವರ್ಷದ ಕೇಂದ್ರ ಸರ್ಕಾರದ "ಡಿಪಾರ್ಟ್’ಮೆಂಟ್ ಆಫ್ ಅಫಿಷಿಯಲ್ ಲಾಂಗ್ವೇಜ್"ಅವರು ಬ್ಯಾಂಕುಗಳಿಗಾಗಿ ಹಾಕಿಕೊಂಡಿರೋ ಗುರಿಗಳು. ಇನ್ನೂ ಏನೇನಲ್ಲಿ ಏನೇನು ಜಾರಿ ಮಾಡೋ ಯೋಜನೆ ಇದೆ ಅಂತ ಆ ಇಲಾಖೆಯ ಅಂತರ್ಜಾಲ ತಾಣದಲ್ಲಿ ವಿವರವಾಗಿ ಬರ್ದಿದಾರೆ, ಒಮ್ಮೆ ನೋಡಿ. ನಿಮ್ಮ ಕಣ್ಣಿಗೆ, ಮುಂದಿನ ದಿನಗಳಲ್ಲಿ ಈ ವರ್ಷ ಯಾರು ಯಾರ ಮನೆಗಳಲ್ಲಿ ಎಷ್ಟೆಷ್ಟು ಹಿಂದಿ ಪದ ಬಳಸಬೇಕು ಅನ್ನೋದೂ ಈ ಯೋಜನೆಯ ಅಂಗ ಆಗೋ ಸಾಧ್ಯತೆಗಳು ಕಾಣ್ತಿಲ್ವಾ ಗುರು?

ಹಿಂದಿ ಅನ್ನುವ ಆಕ್ಟೋಪಸ್!



ಕನ್ನಡ ನಾಡಿನ ಮೇಲೆ ಕನ್ನಡ ಜನರ ಮೇಲೆ ಹಿಂದಿ ಹೇರಿಕೆ ನಿಜವಾಗ್ಲೂ ನಡೀತಾ ಇದೆಯಾ? ಅಥ್ವಾ ನಾವು ಹುಚ್ಚುಚ್ಚಾಗಿ ಕಾಲ್ಪನಿಕ ಶತ್ರೂನ ಹುಟ್ ಹಾಕ್ಕೊಂಡಿದೀವಾ ಅಂತ ಇವತ್ ನೋಡ್ಮಾ ಬಾ ಗುರು!

ಹಿಂದಿ ಹೇರಿಕೆಯೆನ್ನುವ ಆಕ್ಟೊಪಸ್ಸಿನ ಕಬಂಧ ಬಾಹುಗಳು!!

ಕೇಂದ್ರ ಸರ್ಕಾರದ ಅಧಿಕೃತ ಸಂಪರ್ಕ ಭಾಷೆ ಯಾಕೆ ಹಿಂದಿ?

ಯಾಕೆ ಭಾರತದ ಎಲ್ಲಾ ಭಾಷೆಗಳಿಗೂ ಆ ಸ್ಥಾನಮಾನ ಇಲ್ಲ?

ಹದಿನೈದು ವರ್ಷ ಆದ ಕೂಡಲೆ ಇಂಗ್ಲಿಷ್ ತೆಗ್ದು ಬರಿ ಹಿಂದಿ ಒಂದನ್ನೇ ರಾಜಭಾಷೆ ಯಾಕೆ ಮಾಡಬೇಕು?

ಕರ್ನಾಟಕ ತಮಿಳುನಾಡಿನ ಜೊತೆ, ಗುಜರಾತಿನ ಜೊತೆ ವ್ಯವಹಾರ ಮಾಡಲು ಹಿಂದಿ ಯಾಕೆ ಬೇಕು?

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಂತಹ ಪ್ರಚಾರ ಸಭೆಗಳು ಯಾಕೆ ಬೇಕು?

ಹಿಂದಿ ಪ್ರಚಾರಕ್ಕೆ "ಇಂಡಿಯನ್ ಅಫಿಷಿಯಲ್ ಆಕ್ಟ್" ಯಾಕೆ?

ಹಿಂದಿ ಪ್ರಚಾರಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ಯಾಕೆ?

ಕನ್ನಡದವರಿಗೆ ಕೇಂದ್ರ ಸರ್ಕಾರಿ ಅಧೀನದ ಬ್ಯಾಂಕಲ್ಲಿ ಕೆಲಸಕ್ಕೆ ಅರ್ಜಿ ಹಾಕಬೇಕು ಅಂದ್ರೆ ಅವರ ಅಂಕಪಟ್ಟೀಲಿ ಹಿಂದಿ ಅನ್ನೋ ವಿಷಯ ಇರಲೇ ಬೇಕಂತೆ ಯಾಕೆ?

ಕರ್ನಾಟಕದಾಗೆ ಹರಡಿರೋ ನೈಋತ್ಯ ರೇಲ್ವೆಯಲ್ಲಿ ಕೆಲಸ ಬೇಕಂದ್ರೆ ಎಂಟನೆ ತರಗತಿ ವಿದ್ಯಾರ್ಹತೆ ಸಾಕು, ಆದ್ರೆ ಅರ್ಜಿ ಹಿಂದೀಲಿ ಬರೀಬೇಕು ಅನ್ನೋ ನಿಬಂಧನೆ ಹಾಕಿರೋದು ಯಾಕೆ?

ಕರ್ನಾಟಕದ ರೈಲು ಗಾಡಿಗಳಲ್ಲಿ ಸುರಕ್ಷತಾ ಸೂಚನೆ ಕನ್ನಡದಲ್ಲಿ ಇಲ್ಲಾ.... ಯಾಕೆ?


ನಮ್ಮ ಮನೆಯಲ್ಲಿ ಬಳಸೋ ಗ್ಯಾಸ್ ಸಿಲಿಂಡರ್ ಮೇಲಿರೋ ಸುರಕ್ಷತಾ ಸೂಚನೆಗಳು ಯಾಕೆ ಹಿಂದಿಯಲ್ಲಿದೆ?


ನಮ್ಮೂರ ದೂರ ತಿಳಿಸೋ ಮೈಲಿಗಲ್ಲುಗಳು ಯಾಕೆ ಹಿಂದಿಯಲ್ಲಿವೆ?

ನಮ್ಮ ಬೆಂಗಳೂರಿನ ಖಾಸಗಿ ಎಫ್.ಎಂ ವಾಹಿನಿಗಳಲ್ಲಿ ಜಾಹೀರಾತುಗಳು ಯಾಕೆ ಹಿಂದಿಯಲ್ಲಿರುತ್ತವೆ?


ಕನ್ನಡ ಕಾಮನ ಬಿಲ್ಲು ಎಂದು ಹಿಂದಿ ಹಾಡುಗಳನ್ನು, ಹಿಂದಿಯಲ್ಲೇ ನಿರೂಪಣೆಯನ್ನು ಬೆಂಗಳೂರಿನ ಆಕಾಶವಾಣಿಯ ಎಫ್.ಎಂ ರೈನ್ ಬೋ ಪ್ರಸಾರ ಮಾಡುತ್ತದೆ ಯಾಕೆ?

ಎಲ್ಲ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಯಾಕೆ ದಿನಕ್ಕೊಂದು ಹಿಂದಿ ಪದವನ್ನು ಹೇಳಿಕೊಡಲಾಗುತ್ತದೆ.

ಕನ್ನಡದ ಮಕ್ಕಳಿಗೆ ಯಾಕೆ ತ್ರಿಭಾಷಾ ಸೂತ್ರವೆಂಬ ಶೂಲದ ಮೂಲಕ ಹಿಂದಿ ಕಲಿಕೆ ಯಾಕೆ?

ನಮ್ಮೂರ ಪೆಟ್ರೋಲ್ ಬಂಕುಗಳಲ್ಲಿ ಹಿಂದೀನ ಇಂಗ್ಲಿಷ್ ಮೂಲಕ ಕಲಿಸುತ್ತಿರೋದು ಯಾಕೆ?


ಅಯ್ಯೋ ಇನ್ನೆಷ್ಟು ಉದಾಹರಣೆ ಬೇಕ್ರೀಪಾ? ಎಲ್ಲದಕ್ಕೂ ಸಂವಿಧಾನದ ಆಶಯ ಇದು ಅನ್ತಾ ಅನ್ತಾನೆ ನಮ್ಮ ಬದುಕುವ ಹಕ್ಕು ಕಿತ್ಕೊಳೋ ಈ ವ್ಯವಸ್ಥೇನಾ ಬದಲಾಯಿಸೋದೇ ಬೇಡ್ವಾ ಗುರು!ಹಿಂದಿ ಹೇರಿಕೆಯ ಆಕ್ಟೋಪಸ್ಸಿನ ವಿಷದ ಕಬಂಧ ಬಾಹುಗಳು ಕನ್ನಡವನ್ನು ಕಬಳಿಸೋ ಮೊದಲು ಎಚ್ಚೆತ್ಕೊಳೋಣ ಗುರು! ದೇಶದ ವೈವಿಧ್ಯತೆಯನ್ನು ಸರ್ವನಾಶ ಮಾಡಕ್ ಮುಂದಾಗಿರೋ ಈ ಹಿಂದಿ ಹೇರಿಕೆಯನ್ನು ಕೊನೆ ಮಾಡಕ್ಕೆ ಕನ್ನಡಿಗರು, ಬೆಂಗಾಲಿಗಳು, ತಮಿಳರು, ತೆಲುಗರು, ಮರಾಠಿಗಳು, ಗುಜರಾಥಿಗಳು, ಸಿಂಧಿಗಳು, ರಾಜಾಸ್ಥಾನಿಗಳು, ಪಂಜಾಬಿಗಳು, ಅಸ್ಸಾಮಿಗಳು, ಕಾಶ್ಮೀರಿಗಳು ಎಲ್ರೂ ಒಂದಾಗಬೇಕು... ಮುಂದಾಗಬೇಕು ಗುರು!

ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ

ಸೆಪ್ಟೆಂಬರ್ 14ನ್ನು 1949ರಿಂದಲೂ ಹಿಂದಿ ದಿವಸವೆಂದು ಭಾರತದಲ್ಲಿ ಆಚರಿಸಿಕೊಂಡು ಬರಲಾಗ್ತಾ ಇದೆ. ಈ ಬಾರಿಯೂ ಎಲ್ಲಾ ಕಡೆ ಆಚರ್ಸೋ ಹಂಗೇ ನಮ್ಮ ರಾಜ್ಯದ ಒಂದೊಂದು ಊರಲ್ಲೂ ಆಚರಿಸ್ತಾರೆ ಗುರು! ಈ ಹಿಂದಿ ದಿವಸ ಏನು? ಯಾಕೆ? ಅಂತೆಲ್ಲಾ ಇವತ್ತು ಒಂಚೂರು ವಿಚಾರ ಮಾಡೋಣ.

ಹಿಂದಿ ಒಪ್ಸಕ್ಕೆ ನೂರಾರು ದಾರಿ!

ಭಾರತಕ್ಕೆ ಸ್ವಾತಂತ್ರ್ಯ ಬರಕ್ಕೆ ಮೊದಲಿಂದಲೇ ಈ ಭಾರತ ಹೇಗಿರಬೇಕು? ಇದರ ಆಡಳಿತ ಹೇಗಿರಬೇಕು? ಅಂತ ಅವತ್ತಿನ ನಾಯಕ್ರು ಯೋಚನೆ ಮಾಡಿದ್ರು. ಬ್ರಿಟೀಷರನ್ನು ಓಡಿಸಿದ ಮೇಲೆ ನಮ್ಮ ಆಡಳಿತ ಎಲ್ಲಾ ನಮ್ಮ ಜನರ ಭಾಷೇಲೇ ಆಗಬೇಕು ಅನ್ನೋ ಸರಿಯಾದ ಆಲೋಚನೆ ಅವರಿಗಿದ್ರೂ ನಮ್ಮ ಜನರ ಭಾಷೆ ಯಾವ್ದು ಅನ್ನೋದ್ನ ಅರ್ಥ ಮಾಡ್ಕೊಳ್ಳೋದ್ರಲ್ಲಿ ಎಡವುದ್ರು. ಸ್ವತಂತ್ರ ಹೋರಾಟದ ಸಮಯದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ, ಬಂಗಾಲಾದಿಂದ ಬಾಂಬೆ ತನಕ ಯಾರೇ ಹಿಂದೀಲಿ ’ಭಾರತ್ ಮಾತಾ ಕೀ’ ಅಂದರೂ ಎದ್ರುಗಿರೋ ಜನ ’ಜೈ’ ಅಂತ ಅನ್ತಿದ್ರು, ಹಾಗಾಗಿ ಹಿಂದೀನ ರಾಷ್ಟ್ರಭಾಷೆ ಮಾಡೇ ಬಿಡೋಣ ಅಂತ ಮುಂದಾದ್ರು. ಆಗ ಕೇಂದ್ರ ಸರ್ಕಾರಕ್ಕೆ ತಮಿಳರಿಗೆ, ಬೆಂಗಾಲಿಗಳಿಗೆ, ಕನ್ನಡಿಗರಿಗೆ, ಪಂಜಾಬಿಗಳಿಗೆ, ಮಲಯಾಳಿಗಳಿಗೆ, ತೆಲುಗರಿಗೆ, ಮರಾಠಿಗರಿಗೆ, ಗುಜರಾತಿಗಳಿಗೆ... ಹಿಂದೀನು ಇಂಗ್ಲಿಷಿನಂತೆಯೇ ಅವರದ್ದಲ್ಲದ ಭಾಷೇ ಅಂತ ಯಾಕೋ ಮರತೇ ಹೋಗ್ಬಿಡ್ತು.

ಹಿಂದಿ ಒಕ್ಕೂಟದ ಒಗ್ಗಟ್ಟಿಗೆ ಸಾಧನ ಅಲ್ಲ

ಒಂದು ದೇಶ ಅಂದ್ರೆ ಅದಕ್ ಒಂದೇ ಭಾಷೆ ಇರಬೇಕು ಅನ್ನೋದ್ನ ಅದ್ಯಾರು ಹೇಳ್ಕೊಟ್ರೋ ಗೊತ್ತಿಲ್ಲ, ಜಪಾನೀಸ್ ಭಾಷೆ ಇರೋದ್ರಿಂದ ಜಪಾನ್ ಆಗಿದೆ ಅನ್ನೋದನ್ನು ಮರೆತು ಜಪಾನಿರೋದ್ರಿಂದಲೇ ಜಪಾನೀಸ್ ಭಾಷೆ ಇದೆ ಅಂತ ಅಂದ್ಕೊಂಡು ಅದೇ ಥರಾನೆ ಭಾರತಕ್ಕೆಲ್ಲ ಒಂದೇ ಭಾಷೆ ಇರಬೇಕು ಅಂದ್ಕೊಂಡ್ರು ಆ ಮಹಾನುಭಾವರು ಅನ್ಸುತ್ತೆ. ಆದ್ರೆ ನಾನಾ ಭಾಷಾ ಪ್ರಾಂತ್ಯಗಳಿರೋ ಭಾರತದಲ್ಲಿ ಒಂದು ಭಾಷೇಗೆ ದೊಡ್ಡ ಸ್ಥಾನ ಕೊಟ್ರೆ, ಅದರಲ್ಲೇ ಭಾರತದ ಮೂಲೆಮೂಲೇಲಿ ಆಡಳಿತ ಮಾಡ್ಬೇಕು ಅಂತ ಅಂದ್ಕೊಂಡು ಅದುನ್ನ ಜಾರಿಗೆ ತರಕ್ ಹೊರಟ್ರೆ ಒಕ್ಕೂಟ ಅನ್ನೋದರ ಮೂಲತತ್ವಾನ್ನೇ ತಪ್ಪಾಗಿ ಅರ್ಥೈಸಿದ ಹಾಗೆ ಅಂತ ಅದ್ಯಾಕೆ ಗೊತ್ತಗಲಿಲ್ವೋ ದೇವರೇ ಬಲ್ಲ. ಹೀಗೆ ಹಿಂದೀನ ರಾಷ್ಟ್ರಭಾಷೆ ಮಾಡಕ್ ಮುಂದಾದ್ರೆ ಹಿಂದಿ ಭಾಷಿಕರಿಗೆ ಸಲ್ಲದ ಅನುಕೂಲ ಮಾಡಿಕೊಟ್ಟಂಗಾಗಿ ಭಾರತದಲ್ಲಿ ಅಸಮಾನತೆಯಿಂದಾಗಿಯೇ ಇರೋ ಒಗ್ಗಟ್ಟೂ ಅಳಿದು ಹೋಗುತ್ತೆ ಅಂತ ಅವ್ರಿಗೆ ಅದ್ಯಾಕೆ ಯಾರೂ ಹೇಳಲಿಲ್ವೋ? ಒಂದು ಭಾಷೇನಾ ರಾಷ್ಟ್ರಭಾಷೆ ಅನ್ನೋದು ಅನೇಕ ಭಾಷಾ ಪ್ರಾಂತ್ಯಗಳಿರೋ ಭಾರತದ ಒಗ್ಗಟ್ಟಿನ ಸಾಧನ ಆಗೋಕೆ ಅಸಾಧ್ಯ ಅಂತ ಅರವತ್ತು ವರ್ಷ ಕಳೆದ ಮೇಲಾದ್ರೂ ಕೇಂದ್ರ ಸರ್ಕಾರ ಅರಿತುಕೋಬೇಕಿತ್ತು! ಅದುನ್ನ ಬಿಟ್ಟು ಸಂವಿಧಾನದ ಆಶಯ ಅಂತ ಹಿಂದೀ ಹೇರಿಕೆ ನಡುಸ್ತಿರೋದು ಪ್ರಜಾಪ್ರಭುತ್ವ ಅನ್ನೋದ್ರ ಕಗ್ಗೊಲೆ ಅಲ್ವಾ ಗುರು?

ರಾಷ್ಟ್ರಭಾಷೆ ಮಾಡಕ್ ಆಗ್ಲಿಲ್ಲ ಅಂತ ರಾಜಭಾಷೆ ಅನ್ನೋ ಹಿಂಬಾಗಿಲ ಹೇರಿಕೆ

1949ರಲ್ಲಿ ಹಿಂದೀನ ರಾಷ್ಟ್ರಭಾಷೇ ಮಾಡೋ ಪ್ರಯತ್ನ ತಮಿಳುನಾಡು, ಪಶ್ಚಿಮ ಬಂಗಾಳ ಥರದ ನಾಡುಗಳ ವಿರೋಧದಿಂದ ಜಾರಿ ಆಗ್ದೆ ಕಡೆಗೆ ಅದುನ್ನ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆ ಅಂತ ಕರ್ದು ರಾಷ್ಟ್ರಭಾಷೆ ಅನ್ನಕ್ ಆಗ್ದೆ ರಾಜ್ ಭಾಷೆ ಅಂತ ಸ್ಥಾನ ಮಾಡಿಕೊಟ್ರು. ರಾಜ್ಯ ರಾಜ್ಯಗಳ ನಡುವಿನ, ರಾಜ್ಯ ಕೇಂದ್ರಗಳ ನಡುವಿನ ವ್ಯವಹಾರಕ್ಕೆ ಬೇಕಾದ ಆಡಳಿತ ಭಾಷೆ ಅಂತ ಮುಂದಾದ್ರು, ಪ್ರತಿರೋಧ ಕಮ್ಮಿ ಮಾಡಕ್ಕೆ ಇಂಗ್ಲಿಷನ್ನೂ ಕೂಡಾ ಇನ್ನೊಂದು ಪೂರಕ ಭಾಷೆ ಅಂದ್ರು. ಆದ್ರೂ ತಮ್ಮೊಳಗಣ ಉದ್ದೇಶವಾದ "ಹಿಂದಿಯನ್ನು ಭಾರತದ ತುಂಬಾ ತುಂಬಿ ಇಡೀ ಒಕ್ಕೂಟದ ಆಡಳಿತ ಭಾಷೆ" ಮಾಡೊ ಹಿಂಬಾಗಿಲ ಯತ್ನ ಕೈ ಬಿಡ್ದೆ ಇನ್ನು ಹದಿನೈದು ವರ್ಷ ಆದಮೇಲೆ ಇಂಗ್ಲಿಷನ್ನು ಕೈ ಬಿಡ್ತೀವಿ ಅಂತ ಮೆತ್ತುಗ್ ಅಂದುಬಿಟ್ರು.

ಭುಗಿಲೆದ್ದ ಹಿಂದಿ ವಿರೋಧಿ ಚಳವಳಿ

1965 ಹತ್ರ ಬಂತು, ಮರೆತು ಹೋಗಿದ್ದ ರಾಜಭಾಷಾ ವಿಷಯಕ್ಕೆ ಜೀವ ಬಂತು. ಹದಿನೈದು ವರ್ಷದ ಗಡುವು ಮುಗೀತು, ಸಂವಿಧಾನದ ಆಶಯದಂತೆ ಇಂಗ್ಲಿಷನ್ನು ನಮ್ಮ ನೆಲದಿಂದ ಬಡಿದೋಡಿಸಿ ಹಿಂದಿ ರಾಜ್ಯಲಕ್ಷ್ಮಿಯನ್ನು ಪ್ರತಿಷ್ಠಾಪಿಸುತ್ತೇವೆ ಅಂದಿತು ಕೇಂದ್ರ ಸರ್ಕಾರ. ಅಯ್ಯಾ ನನ್ ಮಕ್ಕುಳ್ರಾ ಇದು ನಿಮ್ಮ ನೆಲ ಅಲ್ಲಾ, ತಮಿಳುನಾಡು ಅಂತ ತಮಿಳು ನಾಡು ಹಿಂದಿ ವಿರುದ್ಧ ದೊಡ್ಡ ಸಮರಕ್ಕೆ ಮುಂದಾಯ್ತು. "ಹಿಂದುಸ್ತಾನ್ ಮೇ ರೆಹತೇ ಹೋ, ಹಿಂದಿ ನಹೀ ಮಾಲೂಮ್" ಅಂದವರಿಗೆ "ಹಿಂದೀ ಒಪ್ಪಲೇ ಬೇಕು ಅಂದ್ರೆ ಹಿಂದುಸ್ತಾನಾನೆ ಬೇಡ... ಗುಡ್ ಬೈ" ಅಂದ್ಬಿಟ್ರು ತಮಿಳ್ರು. ಏಳು ಜನ ಆತ್ಮಾಹುತಿ ಮಾಡಿಕೊಂಡು, ಅರವತ್ತಕ್ಕೂ ಹೆಚ್ಚು ಜನ ಪೊಲೀಸ್ ಗುಂಡಿಗೆ ಬಲಿಯಾದ ನಂತರ ಕೇಂದ್ರ ಸರ್ಕಾರ ಬಗ್ತು, ’ಇಲ್ಲಾ ಭಾರತದ ಎಲ್ಲಾ ರಾಜ್ಯಗಳು ಒಪ್ಪೋ ತನಕ ಇಂಗ್ಲಿಷೂ ಮುಂದುವರೆಯುತ್ತೆ, ಹಿಂದಿ ಹೇರಲ್ಲ’ ಅನ್ನಲೇ ಬೇಕಾಯ್ತು.

ಶುರುವಾಯ್ತು ಹಿಂಬಾಗಿಲ ಹೇರಿಕೆ

ಆದ್ರೆ ಸಂವಿಧಾನದ ಆಶಯ ಪೂರೈಸ್ದೆ ಇದ್ರೆ ಆಗುತ್ಯೇ? ಅದಕ್ಕೇ ಅಂತ "ಡಿಪಾರ್ಟ್’ಮೆಂಟ್ ಆಫ್ ಅಫಿಷಿಯಲ್ ಲಾಂಗ್ವೇಜ್" ಮೂಲಕ ಹಿಂಬಾಗಿಲ ಹೇರಿಕೆ ಶುರು ಹಚ್ಕೊಂಡ್ತು ಭಾರತ ಸರ್ಕಾರ. ಹಿಂದಿ ಪ್ರಚಾರ ಸಭಾಗಳೇನು? ಅವುಕ್ಕೆ ವರ್ಷ ವರ್ಷ ಕೊಡೋ ಕೋಟ್ಯಾಂತರ ರೂಪಾಯಿ ನಿಧಿ ಏನು? ಪ್ರತಿವರ್ಷ ಇವ್ರು ಹಾಕಿಕೊಳ್ಳೋ ಗುರಿಗಳೇನು? ಇಡೀ ಭಾರತ ಸರ್ಕಾರ ಹಿಂದೀನ ಭಾರತದ ತುಂಬಾ ನಿಧಾನವಾಗಿ ಹರಡಕ್ಕೆ ಬಳ್ಸೋ ವಿಧಾನಗಳೇನು? ಒಂದಕ್ಕಿಂತ ಒಂದು ಅದ್ಭುತ ಕಲೆಗಾರಿಕೆ!!
ಹಿಂದಿ ಕಲೀರಿ ಭಡ್ತಿ ಗಳಿಸಿ, ದಿನಕ್ಕೊಂದು ಹಿಂದಿ ಪದ ಕಲೀರಿ, ಹಿಂದಿ ಓದಕ್ ಬರಲ್ವಾ? ಇಂಗ್ಲಿಷ್ ಮೂಲಕ ಹಿಂದಿ ಕಲೀರಿ, ಹಿಂದಿ ಸಿನಿಮಾ ನೋಡ್ರಿ, ಹಿಂದಿ ಎಫ್.ಎಂ ಕೇಳ್ರಿ, ಹಿಂದಿ ಭಾಷೇನ ರಾಷ್ಟ್ರಭಾಷೆ ಅಂತ ಶಾಲೇಲಿ ಹೇಳುಸ್ಕೊಳ್ಳಿ, ಹಿಂದಿ ಕಲೀದಿದ್ರೆ ಭಾರತದ ಒಗ್ಗಟ್ಟು ಹಾಳಾಗುತ್ತೆ ಅನ್ನೋದನ್ನು ನಂಬಿ, ನೀವು ಮಾತ್ರಾ ಮೂರುಮೂರು ಭಾಷೆ ಕಲೀರಿ, ಹಿಂದಿ ಭಾಷಿಕರು ಎರಡು ಕಲೀತಾರೆ, ವಿಶ್ವಸಂಸ್ಥೇಲಿ ಹಿಂದೀನ ಭಾರತದ ಭಾಷೆ ಅನ್ತೀವಿ, ನೀವೂ ಹೊರದೇಶದಲ್ಲಿ ಹಿಂದಿ ನಮ್ಮ ರಾಷ್ಟ್ರಭಾಷೆ ಅಂತನ್ನಿ, ಕೇಂದ್ರ ಸರ್ಕಾರದಲ್ಲಿ ಕೆಲಸ ಬೇಕು ಅಂದ್ರೆ ಹಿಂದೀಲೆ ಅರ್ಜಿ ಬರೀರಿ, ರೈಲಲ್ಲಿ ಸುರಕ್ಷತೆ ಬೇಕಂದ್ರೆ ಹಿಂದಿ ಕಲಿತು ಓದಿಕೊಳ್ಳಿ-ಇಲ್ದಿದ್ರೆ ನೆಗೆದ್ ಬಿದ್ದು ಸಾಯ್ರಿ, ಐ ಎ ಎಸ್ - ಐ ಪಿ ಎಸ್ ಅಧಿಕಾರಿ ಆಗಿದ್ರೆ ಹಿಂದಿ ಭಾಷೇಲಿ ಆಡಳಿತ ಸಭೆ ಮಾಡಿ ಇಲ್ದಿದ್ರೆ ಶಿಕ್ಷೆ ಅನುಭವ್ಸಿ, ವಿಜ್ಞಾನಿ ಆಗಿದ್ರೆ ಹಿಂದೀಲಿ ನಿಮ್ಮ ಪೇಪರ್ ಪ್ರೆಸೆಂಟ್ ಮಾಡ್ರಿ, ನಿಮ್ಮೂರಲ್ಲೇ ಸಭೆ ಮಾಡಿ ಕನ್ನಡಾನ ಮನೇಲಿ ಬಳುಸ್ರಿ, ಹಿಂದೀನ ಕಛೇರಿಲಿ ಬಳಸಿ ಅಂತ ದೊಡ್ದಾಗಿ ಬೋರ್ಡ್ ನೇತು ಹಾಕಿದ್ರೂ ಒಪ್ಕೊಂಡು ಸಭೇಲಿ ಭಾಗವಹಿಸ್ರಿ, ಪ್ರಧಾನಿ ಆಗಿ ಕೆಂಪುಕೋಟೆ ಮೇಲೆ ನಿಂತು ಮಾತಾಡೋದೇ ಅದ್ರೂ, ನೀವು ದೇವೆಗೌಡ್ರೇ ಆಗಿದ್ರೂ ಕನ್ನಡದಲ್ಲಿ ಬರ್ಕೊಂಡು ಹಿಂದೀಲೇ ಭಾಷಣ ಮಾಡ್ರಿ, ಕರ್ನಾಟಕ - ತಮಿಳುನಾಡಿನ ಸರ್ಕಾರಗಳು ನಿಮ್ಮೊಳಗೆ ವ್ಯವಹರಿಸಬೇಕಾದ್ರೂ ಈ ವರ್ಷ 55% ಹಿಂದೀಲಿ ವ್ಯವಹರ್ಸಿ.... ಅಬ್ಬಬ್ಬಾ...ಹಿಂದೀನ ಹೇರಕ್ಕೆ ಕೇಂದ್ರ ಸರ್ಕಾರ ಸಾಧ್ಯವಿರೋ ಎಲ್ಲಾ ಕಸರತ್ತೂ ಮಾಡ್ತಿದೆ.

ಸೆಪ್ಟೆಂಬರ್ 14: ಹಿಂದಿ ದಿವಸ - ಹಿಂದಿ ಹೇರಿಕೆ ವಿರೋಧಿ ದಿನವಾಗಲಿ

ಇದಕ್ಕೆ ಸಾಧನವಾಗಿ ಸೆಪ್ಟೆಂಬರ್ 14ನ್ನು ಹಿಂದಿ ದಿವಸ್ ಅಂತ ಎಲ್ಲ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಆಚರಣೆ ಮಾಡ್ತಾರೆ. ಆ ದಿನ ವೈಭವದ ಕಾರ್ಯಕ್ರಮ ಮಾಡ್ತಾ ಹಿಂದಿ ಸ್ಪರ್ಧೆಗಳು, ಹಿಂದಿ ಮನರಂಜನೆ ಅಂತ ಮಾಡಿ ಗೆದ್ದೋರಿಗೆ ಬಹುಮಾನ ಕೊಡ್ತಾರೆ. ಕಳೆದ ವರ್ಷ ಇಂಥಾ ಒಂದು ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತಾಡಿದ್ದಕ್ಕೆ ಕೆಲ ಹಿಂದಿ ಭಾಷಿಕರು ಹಿಂದಿ ದಿವಸದ ಕಾರ್ಯಕ್ರಮಾನ ಹಿಂದೀಲೇ ಮಾಡಿ ಅಂತಂದ ಘಟನೇನೂ ನಡೆದಿದೆ ಗುರು! ಮೊದಮೊದಲು ಹಿಂದಿ ದಿನ ಆಗಿದ್ದುದು ಈಗ ಹಿಂದಿ ಸಪ್ತಾಹ, ಹಿಂದಿ ಪಕ್ಷಕ್ಕೆ ಬಂದು ನಿಂತಿದೆ. ಇಂಥಾ ಕಾರ್ಯಕ್ರಮಗಳ ಮೂಲಕ ಭಾರತದಲ್ಲಿ ಎಲ್ಲಾ ಭಾಷೆಗಾಳಿಗೂ ಸಮಾನ ಸ್ಥಾನಮಾನ ಇಲ್ಲ ಅಂತ ಸಾರುತ್ತಾ ಇರೋ ಕೇಂದ್ರ ಸರ್ಕಾರ ಅನ್ನೋ ಭೂತದ ಬಾಯಲ್ಲಿ ಮಾತ್ರಾ ಸಮಾನತೆಯೇ ಭಾರತದ ತಳಹದಿ ಅನ್ನೋ ಭಗವದ್ ಗೀತೆ! ಕನ್ನಡಿಗರು ಎಚ್ಚೆತ್ತು ಈ ಹಿಂದಿ ಹೇರಿಕೆಯನ್ನು ತಡೀಬೇಕು. ಇಲ್ಲಾ ಅಂದ್ರೆ ಇನ್ನೊಂದು ಹತ್ತು ವರ್ಷದಲ್ಲಿ ವರ್ಷಕ್ಕೊಮ್ಮೆ ಕನ್ನಡ ದಿನ ಅಂತ ಆಚರಿಸಿ ಕನ್ನಡಾ ಅಂತ ಒಂದು ಭಾಷೆ ಇತ್ತು ಅಂತ ನೆನಪಿಸಿಕೊಳ್ಳೋ ಪರಿಸ್ಥಿತಿ ಬರುತ್ತೆ ಅಷ್ಟೆ. ಮೊದಲ ಹೆಜ್ಜೆಯಾಗಿ ಸಾಂಕೇತಿಕವಾಗಿ ಹಿಂದಿ ದಿವಸದ ಆಚರಣೆಗೆ ಕೊನೆ ಹಾಡಬೇಕು ಗುರು!!

ಬೆಂಗಳೂರಿರೋದು ತಮಿಳುನಾಡಲ್ಲಂತೆ!!

ಪಕ್ಕದ ತಮಿಳುನಾಡೋರು ತಮ್ಮ ನಾಡಿಗೆ ಬಂಡವಾಳ ಹೂಡಿಕೆ ಮಾಡೋರನ್ನು ಸೆಳೆಯೋಕೆ ಅಂತ ಪತ್ರಿಕೆಗಳಲ್ಲಿ ಕೊಟ್ಟಿರೋ ಈ ಜಾಹೀರಾತು ನೋಡಿ ಗುರು! ಈ ಜಾಹೀರಾತಿನಲ್ಲಿ ಎಲ್ಲಿಲ್ಲಿ ಬಂಡವಾಳ ಹೂಡಬಹುದು, ಅಲ್ಲೆಲ್ಲಾ ಏನೇನು ಅನುಕೂಲ ಇದೆ ಅಂತ ಬರೆದಿದ್ದಾರೆ. ನೋಡುದ್ರಲ್ಲಾ... ಇದ್ರಲ್ ಏನ್ ವಿಶೇಷ ಇದೆ ಅಂದ್ಕೊಂಡ್ರಾ? ಹಾಗೇ ಈ ಜಾಹಿರಾತಿನಲ್ಲಿರೋ ಭೂಪಟದ ಕಡೆ ಕಣ್ ಹಾಯ್ಸಿ ನೋಡಿ. ಕೃಷ್ಣಗಿರಿ ಅನ್ನೋ ಪ್ರದೇಶ ಕಾಣುಸ್ತಿದೆ ತಾನೆ? ಅಲ್ಲೇ ಒಂದು ವಿಮಾನ ನಿಲ್ದಾಣ ಸೌಕರ್ಯ ಇದೆ ಅಂತ ತೋರಿಸಕ್ಕೆ ವಿಮಾನದ ಒಂದು ಚಿತ್ರಾನೂ ಹಾಕಿದಾರೆ. ಈಗ ಆ ನಕ್ಷೇನಾ ಸ್ವಲ್ಪ ದೊಡ್ಡದು ಮಾಡ್ಕೊಂಡು ಹತ್ತಿರದಿಂದ ನೋಡಿ. ಎಲ್ಲಿದೆ ಆ ವಿಮಾನ ನಿಲ್ದಾಣ? ಕೃಷ್ಣಗಿರಿಲೇ ಇದೆ ಅಂತೀರಾ? ಕೃಷ್ಣಗಿರೀಲಿ ಯಾವ ವಿಮಾನ ನಿಲ್ದಾಣ ಇದೆಯಪ್ಪ ಅಂತ ಕೆಳಗಡೆ ವಿವರದಲ್ಲಿ ಬರ್ದಿರೋ ಸನಿಹದ ವಿಮಾನ ನಿಲ್ದಾಣದತ್ತ ಕಣ್ಣು ಹಾಯ್ಸುದ್ರೆ ಅಂಥಾ ಯಾವ ಮಾಹಿತಿನೂ ಅಲ್ಲಿಲ್ಲ. ಅವ್ರು ತೋರುಸ್ತಿರೋದು ಏನಪ್ಪಾ ಅಂದ್ರೆ ಅದು ನಮ್ಮ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಗುರು!
ಕಣ್ತಪ್ಪಿನಿಂದ ಆದದ್ದಲ್ಲ! ಬೇಕಂತ ಮಾಡಿರೋದು!!
ಕೃಷ್ಣಗಿರಿಗೂ ಬೆಂಗಳೂರಿಗೂ ಮಧ್ಯ ಬರೋಬ್ಬರಿ ದೂರ 91 ಕಿಲೋಮೀಟರ್ ಇದೆ. ತಮಿಳುನಾಡಿನ ಕೃಷ್ಣಗಿರಿಯಿಂದ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಇರೋ ದೂರ 121 ಕಿಲೋಮೀಟರ್. ಆದ್ರೆ ಈ ಚಿತ್ರದಲ್ಲಿ ತೋರುಸ್ತಿರೋದು ಬೆಂಗಳೂರೂ ಕೃಷ್ಣಗಿರಿಯೂ ಅಕ್ಕಪಕ್ಕದಲ್ಲಿವೆ ಅನ್ನೋಥರ. ಅಯ್ಯೋ ಅದು ’not to the scale' ಬಹುಷಃ ಕಣ್ತಪ್ಪು ಅಂದುಕೊಂಡೇ ನೋಡುದ್ರೆ... ಅದೇ ಭೂಪಟದಲ್ಲಿರೋ ಇತರೆ ಊರುಗಳಿಗೂ ಹತ್ತಿರದ ವಿಮಾನ ನಿಲ್ದಾಣಗಳಿಗೂ ಇರೋ ದೂರ ಗಮನಿಸಿ. ಪೆರಂಬಲೂರು ತಿರುಚ್ಚಿಯಿಂದ 90 ಕಿ.ಮೀ ದೂರದಲ್ಲಿದೆ.. ಭೂಪಟದಲ್ಲಿರೋ ದೂರ ಎಷ್ಟೊಂದಿದೆ ನೋಡಿ. ತೂತುಕುಡಿಯಿಂದ 50 ಕಿ.ಮೀ ದೂರದಲ್ಲಿರೋ ನಂಗುನೇರಿಗೆ ಎಷ್ಟು ದೂರದಲ್ಲಿ ವಿಮಾನದ ಚಿತ್ರ ಇದೆ ನೋಡಿ. ಇದರರ್ಥ ಹೀಗೆ ಬೆಂಗಳೂರು ವಿಮಾನ ನಿಲ್ದಾಣಾನಾ ತಮಿಳುನಾಡಿನ ಒಳಕ್ಕೆ ಸೇರಿಸಿಕೊಂಡಿರೋದು ಕಣ್ತಪ್ಪಿನಿಂದಲ್ಲ.. ಉದ್ದೇಶ ಪೂರ್ವಕವಾಗಿ ಅಂತ ಅಲ್ವಾ?

ಇದೇ ಮೊದಲೇನಲ್ಲ...
ತಮಿಳುನಾಡೋರು ಬಿಂಬಿಸಿಕೊಂಡು ಬಂದಿರೋ ಈ ವರಸೆ ಏನ್ ಮಜವಾಗಿದೆ ನೋಡುದ್ರಾ? ಅವ್ರು ನಮ್ಮ ನಾಡಿನ ಮೂಲಸೌಕರ್ಯಗಳನ್ನು ಹೇಗೆ ತಮ್ಮ ಲಾಭಕ್ಕೂ ಬಳಸ್ಕೋತಾರೆ ಅಂತನ್ನೋದನ್ನು ನಾವು ಗಮನಿಸಬೇಕು. ನೀವೇ ಗಮನಿಸಿ ನೋಡಿ. ರಾಷ್ಟ್ರೀಯ ಹೆದ್ದಾರಿ 4ರ ಕಾಮಗಾರಿ ಮೊದಲು ಚುರುಕಾಗಿ ನಡೆದು ಬೇಗ ಮುಗಿದದ್ದೇ ಹೊಸೂರು ರಸ್ತೇಲಿ. ಮುಂಬೈ-ಚೆನ್ನೈ ಉದ್ಯೋಗ ಕಾರಿಡಾರ್ ಮಾಡಿ ಅಂತ ಇವತ್ತು ಕೇಂದ್ರದ ಮೇಲೆ ಒತ್ತಡ ಹಾಕ್ತಿರೋ ತಮಿಳುನಾಡಿನ ಉದ್ದೇಶಾನೇ ಆ ಮೂಲಕ ಹೊಸೂರು ಚೆನ್ನೈ ನಡುವಿನ ಪ್ರದೇಶಗಳ್ನ ಉದ್ಧಾರ ಮಾಡೋದು. ಒಟ್ನಲ್ಲಿ ತಮಿಳ್ರು ಅದು ಕರ್ನಾಟಕದ ಹೆಸ್ರನ್ನು ಜೊತೇಲಿ ಸೇರ್ಸಿಕೊಂಡೇ ಇರಲಿ, ಬೆಂಗಳೂರಿನ ಬ್ರಾಂಡ್ ಇಮೇಜನ್ನು ಹೇಳ್ಕೊಂಡೇ ಇರಲಿ, ಎಲ್ಲಾನೂ ತಮ್ಮ ಅನುಕೂಲಕ್ ತಕ್ಕಂಗೆ ಹೇಗೆ ಬಳುಸ್ಕೊತಾರೆ ಅಂತ ಗೊತ್ತಾಗುತ್ತೆ ಗುರು.
ತಮಿಳುನಾಡೋರು ಭೂಪಟದ ವಿಷ್ಯವಾಗಿ ಹೀಗೆ ಉದ್ದೇಶಪೂರ್ವಕವಾಗಿ ಮಾಡ್ತಿರೋ ತಪ್ಪುನ್ನ ನೋಡಿದ ಮೇಲೂ ಸಂಬಂಧ ಪಟ್ಟ ನಮ್ಮ ಅಧಿಕಾರಿಗಳೂ, ನಮ್ಮ ಸರ್ಕಾರದೋರೂ ತಮಿಳುನಾಡಿನ ವಿರುದ್ಧ ಏನಾದ್ರು ಕ್ರಮ ತೊಗೋತಾರಾ ಅಥ್ವಾ ವಿಮಾನ ನಿಲ್ದಾಣಾ ಏನು? ಬೆಂಗಳೂರುನ್ನೇ ತಮಿಳುನಾಡು ತನ್ನ ಭೂಪಟದಲ್ಲಿ ಸೇರುಸ್ಕೊಂಡ್ರೂ ಸುಮ್ನಿರ್ತಾರಾ? ಅಂತ ಕಾದು ನೋಡೋಣ ಗುರು!

ಹಂಪಿ ಕನ್ನಡ ವಿಶ್ವವಿದ್ಯಾಲಯವೆಂಬ ದೇವರಿಲ್ಲದ ಗುಡಿ!

ಕರ್ನಾಟಕದ ಸರ್ಕಾರಿ ಅಂತರ್ಜಾಲದ ತಾಣಗಳಿಗೆ ಅದ್ಯಾಕೋ ಕನ್ನಡ ಕಂಡ್ರೆ ಅಲರ್ಜಿ ಅನ್ಸುತ್ತೆ ಗುರು ! ಬೇರೆ ಎಲ್ಲ ಹಾಗಿರಲಿ, ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದ ಅಂತರ್ಜಾಲ ತಾಣ ನೋಡಿ ಬಿಟ್ರೆ, ಈ ನಾಡಿನ ಸರ್ಕಾರಕ್ಕೆ ಕನ್ನಡ ಅಂದ್ರೆ ಅದೆಂಥಾ ಮರ್ಯಾದೆ ಇದೆ, ಕನ್ನಡ ವಿಶ್ವವಿದ್ಯಾಲಯಕ್ಕೆ ಕನ್ನಡ ಅಂದ್ರೆ ಅದೆಷ್ಟು ಕಾಳಜಿ ಇದೆ ಅಂತ ಸ್ಪಷ್ಟವಾಗಿ ಗೊತ್ತಾಗುತ್ತೆ ಗುರು.
ಈ ತಾಣದ ಕನ್ನಡ ಲಿಂಕು ಸತ್ತಿದೆ!
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವೆಬ್ ಸೈಟ್ ನ ಡಿಫಾಲ್ಟ್ ಭಾಷೆ ಕನ್ನಡ ಅಂತಾ ಏನಾದ್ರೂ ನಾವು ಅಂದು ಕೊಂಡಿದ್ರೆ ನಮಗಿಂತ ಪೆದ್ರು ನಮ್ಮ ನಾಡಲ್ಲಿ ಇಲ್ಲ ಗುರು. ಹೌದು, ಹಂಪಿ ವಿಶ್ವವಿದ್ಯಾಲಯದ ಅಂತರ್ಜಾಲ ತಾಣದ ಡಿ-ಫಾಲ್ಟ್ ಭಾಷೆ ಇಂಗ್ಲೀಷ್. ಕಾಟಾಚಾರಕ್ಕೆ ಅನ್ನೊ ಹಾಗೆ ಕನ್ನಡದ ಆವೃತ್ತಿ ಅಂತ ಒಂದು ವಿಭಾಗ ಮಾಡಿದ್ದಾರೆ, ಅಲ್ಲಿನ ಯಾವುದಾದ್ರು ಲಿಂಕ್ ಅಲ್ಲಿ ನಿಮಗೆ ಏನಾದ್ರೂ ಮಾಹಿತಿ ಕನ್ನಡದಲ್ಲಿ ಸಿಕ್ರೆ ನಿಮಗೆ ಹಂಪಿ ವಿ.ವಿಯ ಗೌರವ ಡಾಕ್ಟರೇಟ್ ಖಂಡಿತಾ ಕೊಡಬೌದು ಗುರು!

ಗರ್ಭ ಗುಡಿಲೇ ದೇವರಿಲ್ಲ !
ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಅಚ್ಚಳಿಯದೇ ನೆಲೆಸಿರುವ, ಕನ್ನಡಿಗರ ಹೆಮ್ಮೆಯ ಇತಿಹಾಸ ಸಾರುವ, ಕರ್ನಾಟಕ ಸಾಮ್ರಾಜ್ಯದ ಮೂಲ ಸ್ಥಾನ ಎನಿಸಿರುವ ಹಂಪಿಯಲ್ಲಿ ನೆಲೆಗೊಂಡಿರುವ ಈ ವಿಶ್ವವಿದ್ಯಾಲಯದ ಅಂತರ್ಜಾಲ ತಾಣದಲ್ಲಿ ಕನ್ನಡದ ಸ್ಥಿತಿ ನೋಡಿದಾಗ "ಊರ ತುಂಬ ಅಲಂಕಾರ ಇರೋ ದೇವಸ್ಥಾನದ ಗರ್ಭಗುಡಿಲಿ ದೇವರೇ ಇಲ್ಲ" ಅನ್ನುವ ಗಾದೆ ಮಾತು ನೆನಪಾಗುತ್ತೆ ಗುರು. ಕರ್ನಾಟಕದಲ್ಲಿ ಕನ್ನಡವನ್ನು ಆಡಳಿತ ಭಾಷೆ ಮಾಡುವುದಾಗಿ ದಿನವೂ ಜಪ ಮಾಡೋ ಸರ್ಕಾರದ ಮೂಗಿನ ತುದಿಯಲ್ಲೇ ಇಂತದೊಂದು ದೊಡ್ಡ ಅಸಹ್ಯ ನಡೀತಿದ್ರೂ ಸಂಬಂಧ ಪಟ್ಟೋರು ನಿದ್ದೆಲಿದ್ದಾರೆ ಅನ್ಸುತ್ತೆ ಗುರು!
Related Posts with Thumbnails