ಕಡೆಗೂ ದಕ್ಕಿದೆ, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ!!


ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿರೋ ಬಿಸಿ ಸುದ್ದಿ ಇದೀಗ ಬಂದಿದೆ. ಕನ್ನಡಿಗರ ಬಹುದಿನದ ಬೇಡಿಕೆ ಈ ಮೂಲಕ ಈಡೇರಿದೆ. ಎಲ್ಲ ಕನ್ನಡಿಗರಿಗೆ ಅಭಿನಂದನೆಗಳು. ಇದೀಗ ಕರ್ನಾಟಕ ರಾಜ್ಯೋತ್ಸವಕ್ಕೆ ಹೊಸ ಮೆರುಗು ಬಂದಂತಾಗಿದ್ದು ಕನ್ನಡನಾಡಿನಲ್ಲಿ ಇಂದು ಹರ್ಷದ ಹೊಳೆ ಹರಿದಾಡಿದೆ. ಈ ಸಮ್ಮಾನ ಕನ್ನಡ ನುಡಿಯ ಬೆಳವಣಿಗೆಗೆ ಪೂರಕವಾಗಲಿದೆ ಅನ್ನುವುದು ಎಷ್ಟು ಮಹತ್ವದ ಸುದ್ದಿಯಾಗಿದೆಯೋ ಒಕ್ಕೂಟ ವ್ಯವಸ್ಥೆಗೆ ಒಂದು ಗೌರವವನ್ನೂ ಇದು ತಂದುಕೊಟ್ಟಿದೆ ಎನ್ನುವುದೂ ಅಷ್ಟೇ ಮಹತ್ವದ ಸುದ್ದಿಯಾಗಿದೆ ಗುರು!
ಕನ್ನಡಿಗರ ಈ ಬೇಡಿಕೆಯು ಮೊದಲಿಗೆ ಸಾಹಿತ್ಯ ವಲಯಕ್ಕೆ ಸೀಮಿತವಾಗಿದ್ದನ್ನು, ಜನಾಂದೋಲನವನ್ನಾಗಿ ರೂಪಿಸಿ ನಿರಂತರವಾಗಿ ಫೆಬ್ರವರಿ 2006ರಿಂದ ಹೋರಾಟವನ್ನು ನಡೆಸಿಕೊಂಡು ಬಂದ ಕರ್ನಾಟಕ ರಕ್ಷಣಾ ವೇದಿಕೆಗೆ, ಮತ್ತದರ ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣಗೌಡರಿಗೆ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು. ಕನ್ನಡಿಗರ ಒಗ್ಗಟ್ಟಿನ ಈ ಹೋರಾಟ ನಮಗೆ ಕಲಿಸುತ್ತಿರುವ ಪಾಠ ಅತ್ಯಂತ ಮಹತ್ವದ್ದಾಗಿದೆ. ನಾಡಿನೆಲ್ಲ ಕನ್ನಡ ಬಂಧುಗಳಿಗಿದೋ ನಮ್ಮ ಮನದುಂಬಿದ ಅಭಿನಂದನೆಗಳು!!

ಹಾಗೆಯೇ ನಮ್ಮ ತೆಲುಗು ಬಾಂಧವರಿಗೂ ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ ದೊರಕಿರುವುದರ ಅಭಿನಂದನೆಗಳು.

KARNATIQUE ನಲ್ಲೂ ಓದಿ: BREAKING NEWS: Kannada Identified as Classical Language

ಕನ್ನಡದಾ ಮಕ್ಕಳೆಲ್ಲಾ ಒಂದಾಗೆ ಬನ್ನಿ...

ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು. ನಮ್ಮ ನಾಡು ಪ್ರಪಂಚದಲ್ಲೇ ಮುಂದುವರಿದ ನಾಡಾಗಬೇಕು ಅನ್ನೋದು ಪ್ರತಿಯೊಬ್ಬ ಕನ್ನಡಿಗನ ಕನಸು. ಆದ್ರೆ ಇವತ್ತು ನಾವು ಇರೋ ಪರಿಸ್ಥಿತಿ, ವಾತಾವರಣ ನೋಡ್ದಾಗ ಈ ಗುರಿ ಇನ್ನೂ ನಮ್ಮ ದಿಟ್ಟಿಗೆ ಎಟುಕಿಲ್ಲ ಅನ್ನಿಸುತ್ತದೆ. ನಾಡು ಎತ್ತ ಸಾಗಬೇಕು? ಏನಾಗಬೇಕು? ಅನ್ನೋದ್ರ ಬಗ್ಗೇನೇ ಕನ್ನಡಿಗರಲ್ಲಿ ಒಂದು ಸ್ಪಷ್ಟವಾದ ಚಿತ್ರಣ ಮೂಡಬೇಕಾಗಿದೆ. ಕನ್ನಡ-ಕನ್ನಡಿಗ-ಕರ್ನಾಟಕಗಳು ಸಾಧನೆಯ ಶಿಖರವನ್ನೇರಬೇಕಾದರೆ ನಾವು ಒಗ್ಗಟ್ಟಾಗಲೇ ಬೇಕು. ಕನ್ನಡಿಗರ ಒಗ್ಗಟ್ಟು ಸಾಧಿಸಲು ಸಾಧ್ಯವಾಗದ್ದು ಏನೂ ಇರಲು ಸಾಧ್ಯವೇ ಇಲ್ಲ. ಈ ಒಗ್ಗಟ್ಟು ಬರಿಯ ದೇಶದೊಳಗಣ ಒಗ್ಗಟ್ಟಲ್ಲ, ನೂರಾರು ವರ್ಷಗಳವರೆಗಿನ ಕನ್ನಡ ಜನಾಂಗವು ಸಾಧನೆಯ ಶಿಖರವೇರುವ ಒಂದೇ ಕನಸಿನ ಸಾಕಾರಕ್ಕಾಗಿ, ಒಂದೇ ಗುರಿಯೆಡೆಗೆ ಸಾಗಲು ಪ್ರೇರಕವಾಗುವ ಕಾಲದಲ್ಲಿನ ಒಗ್ಗಟ್ಟೂ ಆಗಿದೆ.
ಕನ್ನಡತನವೆಂಬ ಗುರುತು

ನಾಡಿನ ಇಂದಿನ ಸಮಸ್ಯೆಗಳನ್ನು ಎದುರಿಸಲು ನಾವು ಶಕ್ತರಾಗಬೇಕಾದರೆ ನಮ್ಮೊಳಗೆ ಕನ್ನಡತನವು ಜಾಗೃತಿಯಾಗಬೇಕಾಗಿದೆ. ಈ ಜಾಗೃತಿಯ ಹಣತೆಯ ಬೆಳಕೇ ನಮ್ಮ ಏಳಿಗೆಯ ದಾರಿ ದೀವಿಗೆ. ಕೆಲವು ಕನ್ನಡಿಗರು ಇಂದು ನಮ್ಮ ಸುತ್ತಲಿನ ಪ್ರಪಂಚವನ್ನು ಕಾಣುತ್ತಿರುವುದು ಸಹಜ ಕಣ್ಣುಗಳಿಂದಲ್ಲ. ಈ ಕಣ್ಣಿನ ಮುಂದೆ ನಾನಾ ರೀತಿಯ ಬಣ್ಣದ ಪರದೆಗಳು ಇವೆ. ಜಾತಿ, ಧರ್ಮ, ಕನ್ನಡತನವನ್ನು ಗೌಣವಾಗಿಸಿಹ ಪೊಳ್ಳು ರಾಷ್ಟ್ರೀಯತೆಯೇ ಮೊದಲಾದ ಈ ಬಣ್ಣದ ಕನ್ನಡಕಗಳ ಮೂಲಕ ನೋಡುತ್ತಿರುವವರೆಗೂ ಕನ್ನಡಿಗರಿಗೆ ಪ್ರಪಂಚದ ನಿಜರೂಪದ ಅರಿವಾಗದು. ಏಳಿಗೆಯ ದಾರಿ ಕಾಣದು. ಕನ್ನಡತನದ ಜಾಗೃತಿ ಈ ಗಾಜುಗಳ ತೆರೆಯನ್ನು ಸರಿಸಿ ಜಗದ ನಿಜರೂಪ ತೋರುವುದು ದಿಟ.
ಎಲ್ಲ ಸಿದ್ಧಾಂತದ ಗುರಿ ಮುಟ್ಟಲು ಇದೇ ಸಾಧನ

ಸಹಜವಾಗಿ ಇರುವ ಸಮಾನತೆಯನ್ನು ಕಾಯ್ದುಕೊಂಡು, ಸಹಜವಾಗಿ ಬಂದಿರುವ ನಮ್ಮತನವನ್ನು ಉಳಿಸಿಕೊಂಡು, ಸಹಜವಾಗಿ ನಮಗೆ ದೊರೆತಿರುವ ನುಡಿ ಸಾಧನವನ್ನು ಬಳಸಿಕೊಂಡೇ ನಾವು ಬೆಳೆಯುವುದು ಸಾಧ್ಯ. ಇಂದು ಕೆಲವರು ನಂಬಿ ಸಾಧಿಸಬೇಕೆಂದಿರುವ ಎಲ್ಲ ಸಮಾನತೆ, ರಾಷ್ಟ್ರೀಯತೆ, ಧರ್ಮಗಳ ಉಳಿವಿಗೆ ಇದೇ ಸಾಧನ. ಕನ್ನಡಿಗರೆಲ್ಲಾ ಇಂದು ಈ ದಾರಿಯನ್ನು ಕಂಡುಕೊಂಡು ಒಂದಾಗಿ ಮುನ್ನಡೆದರೆ ನಮ್ಮ ಏಳಿಗೆ ಅಸಾಧ್ಯವೇನಲ್ಲ. ನಾವಿಂದು ಪ್ರತಿಪಾದಿಸುತ್ತಿರುವ ಈ ಸಹಜವಾದ ಒಗ್ಗಟ್ಟಿನ ಮಂತ್ರದಿಂದಲೇ ಕನ್ನಡಿಗರ ಏಳಿಗೆ, ಕರ್ನಾಟಕದ ಏಳಿಗೆ, ಭಾರತದ ಏಳಿಗೆ, ಇದರಿಂದಲೇ ಮನುಕುಲದ ಏಳಿಗೆ. ಮೇಲ್ನೋಟಕ್ಕೆ ಯಾವುದು ಪ್ರಾಂತೀಯತೆ, ಸಂಕುಚಿತತೆ ಎಂದು ಇಂದು ಕೆಲವರಿಗೆ ತೋರುತ್ತಿರುವುದೋ ಅದು ಸಮಗೌರವದ, ಸಮಾನ ಏಳಿಗೆಯ ಅವಕಾಶ ಕಲ್ಪಿಸುವ, ಸಹಕಾರದ, ಉಜ್ವಲ ರಾಷ್ಟ್ರಪ್ರೇಮದ ದಾರಿ.
ಓ ಕನ್ನಡ ಬಂಧು... ಜಗವ ನೋಡುವ ಕಣ್ಣಿಗೆ ಕವಿದ ಬಣ್ಣದ ಕನ್ನಡಕಗಳನ್ನು ಕಿತ್ತೊಗೆದು ಸಹಜವಾದ ಕಣ್ಣುಗಳಿಂದ ಈ ಜಗವನ್ನು ನೋಡಿದರೆ ಅಂದೇ ಏಳಿಗೆಯ ದಾರಿ, ಸಾಧಿಸಬೇಕಾದ ಗುರಿ ನಿಚ್ಚಳವಾಗಿ ಕಾಣುವುದು ಸತ್ಯ. ಈ ಗುರಿಯೆಡೆಗೆ ಸಾಗೋಣ. ಆ ದಾರಿಯಲ್ಲಿ ಸಾಗಲು ಇಂದು ನಮಗಿರುವ ಎಲ್ಲ ಸಾಧನಗಳನ್ನೂ ಬಳಸೋಣ. ಪ್ರಪಂಚದ ಅತ್ಯುತ್ತಮವಾದವುಗಳನ್ನೆಲ್ಲಾ ಬಳಸೋಣ. ಭಾಷೆ, ಗಡಿಗಳ ಮಿತಿಯಿಲ್ಲದೆ ಎಲ್ಲೆಲ್ಲಿ ನಮ್ಮ ಏಳಿಗೆಗೆ ಪೂರಕವಾದವುಗಳಿವೆಯೋ ಅವೆಲ್ಲವನ್ನೂ ಬಳಸೋಣ. ಸಾಧನೆಯ ಶಿಖರವನ್ನೇರೋಣ. ಕನ್ನಡದಾ ಮಕ್ಕಳೆಲ್ಲಾ ಒಂದಾಗಿ ಬನ್ನಿ, ತಾಯ್ನಾಡ ಜಯಭೇರಿ ನೀವಾಗ ಬನ್ನಿ!

ಬಿಹಾರಿಗಳಿಗೆ ಕೆಲ್ಸ ಕೊಡುಸ್ಬೇಕಾದವ್ರು ಯಾರು?

ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯೋರು ರೈಲ್ವೇ ನೇಮಕಾತಿಯಲ್ಲಿ ಮರಾಠಿಗರಿಗೆ ಕೆಲಸ ಕೊಡ್ತಿಲ್ಲ, ಬರೀ ಬಿಹಾರಿಗಳನ್ನೇ ತಂದು ತುಂಬ್ತಿದಾರೆ ಅಂತ ಹೋರಾಟ ಮಾಡಿ ಪರೀಕ್ಷೆಗೆ ಬಂದಿದ್ದ ಉತ್ತರ ಭಾರತದವರನ್ನು ಓಡಿಸಿದ ಸುದ್ದಿ ಗೊತ್ತೇ ಇದೆ. ಇದಕ್ಕೆ ಪ್ರತಿಯಾಗಿ ಬಿಹಾರದಲ್ಲಿ ಭಾರಿ ಪ್ರತಿಭಟನೆ ನಡೆದು ಇಡೀ ಬಿಹಾರ ಹತ್ತಿ ಉರಿದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ ಗುರು!

ಇಂಥಾ ಘಟನೆಗಳು ಯಾಕಪ್ಪಾ ಆಗ್ತವೆ? ಈ ವ್ಯವಸ್ಥೆಗೆ ಇವುಗಳು ಆಗದ ಹಾಗೆ ತಡೆಯೋ ತಾಕತ್ತು ಇಲ್ವಾ? ಅನ್ಸಕ್ ಶುರು ಆಗ್ತದೆ ಗುರು! ಇಡೀ ಸಮಸ್ಯೆಯ ಮೂಲ ಕೆದುಕ್ತಾ ಹೋದ್ರೆ... ಎಮ್.ಎನ್.ಎಸ್ ನೋರು ರೈಲ್ವೆ ಕೆಲಸಗಳು ಮರಾಠಿಗರಿಗೇ ಸಿಗಲಿ ಅಂತ ಹೋರಾಟಕ್ ಇಳ್ದಿದ್ದು ಯಾಕೇ? ಮಹಾರಾಷ್ಟ್ರದಲ್ಲಿರೋ ರೈಲ್ವೇ ಕೆಲಸಗಳಲ್ಲಿ ಮರಾಠಿಗರನ್ನು ಕಡೆಗಣಿಸದ್ದಕ್ಕೆ ತಾನೇ? ಅಲ್ಯಾಕೆ ಅವರನ್ನು ಕಡೆಗಣಿಸಿದ್ರು? ಬಿಹಾರದಿಂದ ಅಭ್ಯರ್ಥಿಗಳನ್ನು ತಂದು ತುಂಬಕ್ಕೆ ತಾನೆ? ಅವರ್ಯಾಕೆ ಕಂಡ ಕಂಡಲ್ಲೆಲ್ಲಾ ಬಿಹಾರಿಗಳನ್ನು ತುಂಬಕ್ಕೆ ಹೋದ್ರು? ರೈಲ್ವೇ ಸಚಿವ ಬಿಹಾರಿ ಅಂತಾ ತಾನೇ? ಇದ್ಯಾಕೆ ಹೀಗೆ ಕೆಲಸದ ಅವಕಾಶ ಬೇರೆ ಬೇರೆ ರಾಜ್ಯಗಳಲ್ಲಿದ್ರೂ ಅಲ್ಲೆಲ್ಲಾ ಬಿಹಾರಿಗಳನ್ನು ತಂದು ತುಂಬಕ್ಕೆ ರೇಲ್ವೇ ಸಚಿವರು ಮುಂದಾಗ್ತಾರೆ ಅಂತೆಲ್ಲಾ ಅನ್ಸಲ್ವಾ ಗುರು? ಇವೆಲ್ಲಾ ನೋಡುದ್ರೆ ಅನ್ಸೋದು ಇಷ್ಟು.

ಸಮಸ್ಯೆ ಇರೋದು ಮುಂಬೈಯಲ್ಲಲ್ಲ! ಬಿಹಾರದಲ್ಲಿ!!

ಕಳೆದ ಎರಡು ದಶಕಗಳಲ್ಲಿ ಕೇಂದ್ರದ ರೈಲ್ವೇ ಸಚಿವರಲ್ಲಿ ಹೆಚ್ಚಿನವರು ಬಿಹಾರದೋರು. ನಿತಿಶ್ ಕುಮಾರ್, ರಾಮ್ ವಿಲಾಸ್ ಪಾಸ್ವಾನ್, ಲಾಲೂ ಹೀಗೆ ಬಿಹಾರದ ಸಚಿವರ ಸಂಖ್ಯೆ ದೊಡ್ದದು. ಇವ್ರು ಬಾಯಲ್ಲಿ ಹೇಳ್ತಿರೋ ಹಾಗೆ "ಅರ್ಹರಿಗೆ ರೈಲ್ವೇ ಇಲಾಖೆ ಕೆಲಸಗಳಿಗೆ ಸಂದರ್ಶನಕ್ಕೆ ಕರೆ ಹೋಗಿದೆ, ಇದು ಅಖಿಲ ಭಾರತ ಮಟ್ಟದ ಆಯ್ಕೆ ಪ್ರಕ್ರಿಯೆ" ಇತ್ಯಾದಿ ಮಾತುಗಳಲ್ಲಿ ಹುರುಳಿದ್ಯಾ ಅನ್ಸಲ್ವಾ ಗುರು? ಇವ್ರು ಹೇಳೋದೆ ನಿಜಾ ಆಗಿದ್ರೆ ಅದ್ಯಾಕೆ ಕರ್ನಾಟಕ, ಅಸ್ಸಾಮ್, ಮಹಾರಾಷ್ಟ್ರದ ಪರೀಕ್ಷೆಗಳಿಗೆ ಭಾರತದ ಇತರೆ ಕಡೆಗಳಿಗಿಂತ ಹೆಚ್ಚು ಅಭ್ಯರ್ಥಿಗಳು ಬಿಹಾರದಿಂದಲೇ ಬಂದರು ಅನ್ನೋ ಕೂಗು ಯಾಕೆ ಎದ್ದಿದೆ? ಬೆಂಕಿ ಇಲ್ದೇನೇ ಹೊಗೇನಾ? ಸಮಸ್ಯೆ ಏನಂದ್ರೆ ಭಾರತದಲ್ಲಿ ಯಾರು ಎಲ್ಲಿ ಬೇಕಾದ್ರೂ ಕೆಲಸ ಮಾಡಬಹುದು ಅನ್ನೋದನ್ನೇ ಅಸ್ತ್ರವಾಗಿಸಿಕೊಂಡು ಬಿಹಾರದಂತಹ ಪ್ರದೇಶಗಳ ರಾಜಕಾರಣಿಗಳು, ಭಾರತದ ಮೂಲೆ ಮೂಲೆಗೆ ತಮ್ಮ ನಾಡಿಂದ ಜನರನ್ನು ವಲಸೆ ಮಾಡುಸ್ತಾ ಇರೋದೇ ಆಗಿದೆ.

ಬಿಹಾರದ ಜನ ದನಿ ಎತ್ತಬೇಕಾದದ್ದು ಯಾರ ವಿರುದ್ಧ?

ಬಿಹಾರದಲ್ಲಿ ಉದ್ದಿಮೆಗಳನ್ನು ಬೆಳೆಸಿ, ಉದ್ಯೋಗಾವಕಾಶ ಹೆಚ್ಚಿಸೋದನ್ನು ಬಿಟ್ಟು ಹೀಗೆ ಕಂಡ ಕಂಡ ಕಡೆಗೆ ಬಡತನದ ಜೊತೆಗೇ ತನ್ನ ನಾಡಿನ ಜನರನ್ನು ಪಾರ್ಸಲ್ ಮಾಡ್ತಿರೋ ತಮ್ಮ ರಾಜ್ಯದ ರಾಜಕಾರಣಿಗಳ ವಿರುದ್ಧವೇ ಬಿಹಾರಿಗಳು ದನಿ ಎತ್ತಬೇಕಾಗಿತ್ತಲ್ವಾ ಗುರು? ನಮ್ಮ ಬಿಹಾರಕ್ಕೆ ಎಷ್ಟು ಉದ್ದಿಮೆಗಳನ್ನು ತಂದಿದೀರಾ? ಇದರಿಂದಾಗಿ ಎಷ್ಟು ಉದ್ಯೋಗಾವಕಾಶಗಳು ಹುಟ್ಟಿಕೊಂಡಿದೆ? ನಮ್ಮ ರಾಜ್ಯದ ತಲಾವಾರು ಆದಾಯ ಎಷ್ಟು? ನಮ್ಮ ರಾಜ್ಯದ ತಲಾವಾರು ಉತ್ಪಾದಕತೆ ಎಷ್ಟು? ಭಾರತದಲ್ಲೇ ಅತ್ಯಂತ ಶ್ರೀಮಂತ ಖನಿಜ ಸಂಪತ್ತಿರೋ ನಾಡುಗಳಲ್ಲಿ ಒಂದಾದ ನಮ್ಮ ರಾಜ್ಯ ಯಾಕೆ ಹಿಂದುಳಿದಿದೆ? ಈ ನಾಡನ್ನು ಉದ್ಧಾರ ಮಾಡೋಕೆ ನಿಮ್ಮ ಯೋಜನೆಗಳೇನು? ಅಂತ ಜನರು ಕುತ್ತಿಗೆಪಟ್ಟಿ ಹಿಡಿದು ಕೇಳ್ಬೇಕಾದ್ದು ಬಿಹಾರದ ರಾಜಕಾರಣಿಗಳನ್ನಲ್ವಾ ಗುರು! ಇಲ್ದಿದ್ರೆ ಇವತ್ತು ಮಹಾರಾಷ್ಟ್ರ, ಅಸ್ಸಾಮ್, ಕರ್ನಾಟಕಗಳಲ್ಲಿ ಆಗ್ತಿರೋದು ನಾಳೆ ಬೇರೆ ಬೇರೆ ಕಡೇನೂ ಆಗೋ ಅಪಾಯ ಇಲ್ವಾ ಗುರು?

ರಾಷ್ಟ್ರೀಯ ಪಕ್ಷಗಳ ಗೋಸುಂಬೇತನ!

ಇಡೀ ಎಪಿಸೋಡಿನಲ್ಲಿ ಭಾರತದ ರಾಷ್ಟ್ರೀಯ ಪಕ್ಷಗಳು ನಡೆದುಕೊಂಡ ರೀತಿ ಅಚ್ಚರಿ ಹುಟ್ಟಿಸೋ ಅಂಥದ್ದು. ಭಾರತೀಯ ಜನತಾ ಪಕ್ಷದವರಾಗಲೀ, ಕಾಂಗ್ರೆಸ್ಸಿಗರಾಗಲೀ ಬಿಹಾರಿಗಳ ಪರವಾಗಿ ಆ ಪರಿ ದನಿ ಎತ್ತಿ ನಿಂತೋರು ಯಾಕೆ ಭಾರತದ ಯಾವುದೇ ಮೂಲೆಯಲ್ಲಿ ರೈಲ್ವೇ ಪರೀಕ್ಷೆ ಮಾಡಿದ್ರೂ ಬಿಹಾರಿಗಳೇ ಹೆಚ್ಚು ಹೆಚ್ಚು ಕಾಣ್ತಾರೆ ಅನ್ನಲಿಲ್ಲ, ಯಾಕೆ ಅರ್ಜಿ ಹಾಕಬೇಕಾದರೆ ಹಿಂದಿಯಲ್ಲೇ ಬರೀಬೇಕು? ಯಾಕೆ ಕನ್ನಡದಲ್ಲಿ ಬರೆದ ಅರ್ಜಿಯನ್ನು ತಿರಸ್ಕಾರ ಮಾಡ್ತೀರಾ? ಅಂತ ದನಿ ಎತ್ತಲಿಲ್ಲ ಗುರು! ಕಡೇ ಪಕ್ಷ ರಾಜ್ಯದಲ್ಲಿರೋ ಇವರ ಪಕ್ಷಗಳೋರಾದ್ರೂ ಮಾತಾಡುದ್ರಾ? ಪಾಪಾ, ಕನ್ನಡದಲ್ಲಿ ಅರ್ಜಿ ಸಲ್ಲಿಸಕ್ಕೆ ಅವಕಾಶ ಕೊಡಿ ಅಂದ್ರೆ ಭಾರತದ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಬಂದುಬಿಡುತ್ತೆ ಅಂದುಕೊಂಡ್ರೇನೋ? ಒಟ್ನಲ್ಲಿ ಈ ಸೋ ಕಾಲ್ದ್ ರಾಷ್ಟ್ರೀಯ ಪಕ್ಷಗಳು ಬರೀ ಹಿಂದಿ ನಾಡಿನ ಪಕ್ಷಗಳು ಆಗಿಬಿಟ್ಟವೇನೋ ಅಂತ ಅನುಮಾನ ಜನತೇನ ಕಾಡ್ತಾ ಇದೆ ಗುರು!

ಕೊನೆಹನಿ: ಮಹಾರಾಷ್ಟ್ರದಲ್ಲಿ ನಡೆದ ದೊಂಬಿಯನ್ನು ಖಂಡಿಸೋ ಭರದಲ್ಲಿ ರೈಲ್ವೇ ಇಲಾಖೆಗೆ ಅಷ್ಟು ನಷ್ಟವಾಯ್ತು, ಇಷ್ಟು ನಷ್ಟವಾಯ್ತು ಅನ್ನೋರು ಬಿಹಾರದಲ್ಲಿ ಹತ್ತಾರು ರೈಲುಗಳನ್ನು ಸುಟ್ಟಾಗ, ಪ್ರತಿದಿನ ೨೦೦ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೆ ಧಕ್ಕೆ ಆದಾಗ, ದಿನಕ್ಕೆ ನೂರಾರು ಕೋಟಿ ನಷ್ಟವಾದಾಗ... ಯಾಕೆ ಸುಮ್ಮನೆ ಇರ್ತಾರೆ ಅನ್ಸೋದಿಲ್ವಾ ಗುರು!

ಹಿಂದಿ ಬರದಿದ್ರೆ ಕೇಂದ್ರದಲ್ಲಿ ಕೆಲ್ಸ ಆಗಲ್ಲಂತೆ!

ಅಕ್ಟೋಬರ್ ೨೫ರ ವಿ.ಕ ಮುಖಪುಟದಲ್ಲಿ ವಿ.ಕ ಸುದ್ದಿಲೋಕ ಅನ್ನೋ ತುಣುಕಿನ ಅಡಿಯಲ್ಲಿ ಒಂದು ಮಸ್ತ್ ಸುದ್ದಿ ಪ್ರಕಟವಾಗಿದೆ. ಕರ್ನಾಟಕದಿಂದ ದಿಲ್ಲಿಯಲ್ಲಿ ನಿಯೋಜಿತವಾಗಿರೋ ರಾಜ್ಯ ಪ್ರತಿನಿಧಿಗಳಾದ ಶ್ರೀ ಸುಭಾಷ್ ಭರಣಿಯವರಿಗೆ ಹಿಂದಿ ಬರಲ್ಲ ಅನ್ನೋ ಕಾರಣಕ್ಕೆ ಅವರು ದಿಲ್ಲಿಯಲ್ಲಿರಲು ನಾಲಾಯಕ್ಕು ಅನ್ನೋ ಧಾಟೀಲಿ ಬರೆದಿರೋ ವರದಿ ಪ್ರಕಟವಾಗಿದೆ, ಗುರು. ಈ ಸುದ್ದಿ ನೋಡ್ತಾ ಇದ್ರೆ ಕಣ್ಮುಂದೆ ಹತ್ತಾರು ಪ್ರಶ್ನೆಗಳು ಹುಟ್ಕೊತಾವೆ...

ಭಾರತೀಯ ಅನ್ನಿಸಿಕೊಳ್ಳಕ್ಕೆ ಹಿಂದಿ ಬರಲೇ ಬೇಕಾ?

ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ದಿಲ್ಲಿಯಲ್ಲಿರೋ ಭರಣಿಯವರಿಂದ ರಾಜ್ಯದ ಪರವಾಗಿ ಯಾವ ಕೆಲಸವೂ ಆಗಿಲ್ಲ ಅನ್ನೋದನ್ನು ಹೇಳ್ತಾ ಇರೋ ವರದಿಗಾರ ಇದಕ್ಕೆ ಕಂಡುಕೊಂಡಿರೋ ಕಾರಣ ಮಾತ್ರಾ ತೀರಾ ಅಮಾನವೀಯವಾದದ್ದಾಗಿದೆ ಗುರು! ನಿಜಕ್ಕೂ ಭರಣಿಯವರು ವಿಫಲರಾಗಿದ್ದರೆ ಮತ್ತು ಅದಕ್ಕೆ ವಿ.ಕ ಹೇಳ್ತಿರೋದೆ ಕಾರಣವಾಗಿದ್ರೆ ಒಕ್ಕೂಟ ವ್ಯವಸ್ಥೆ ಅನ್ನೋ ಪದ ಭಾರತದಲ್ಲಿ ಅರ್ಥ ಕಳ್ಕೊಂಡಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ದಿಲ್ಲಿ(ಕೇಂದ್ರ)ಯಲ್ಲಿ ಕರ್ನಾಟಕಾನ(ರಾಜ್ಯಗಳನ್ನು) ಪ್ರತಿನಿಧಿಸೋ ವ್ಯಕ್ತಿಗೆ ಹಿಂದಿ ಬರುತ್ತೋ ಇಲ್ವೋ ಅನ್ನೋದ್ರ ಮೇಲೆ ಈ (ಆಯಾ) ರಾಜ್ಯದ ಕೆಲಸಗಳು ಆಗುತ್ತೆ, ಯೋಜನೆಗಳು ಮಂಜೂರಾಗ್ತವೆ ಅನ್ನೋದಾದ್ರೆ ಭಾರತದಲ್ಲಿ ಇರೋಕೆ ಹಿಂದಿ ಕಲೀಲೆ ಬೇಕು ಅನ್ನೋ ಹಾಗಾಯ್ತಲ್ಲ. ಆ ಮೂಲಕ ನಮ್ಮ ಹಾಗೂ ನಮ್ಮಂಥ ಕೋಟ್ಯಾಂತರ ಜನರ ಬದುಕುವ ಹಕ್ಕಿಗೇ ಈ ವ್ಯವಸ್ಥೆ ಸಂಚಕಾರ ತರ್ತಿದೆ ಅಂತಾ ಆಗಲ್ವಾ? ಹಿಂದಿ ಗೊತ್ತಿಲ್ಲದೆ ಇರೋರು ಭಾರತೀಯರಲ್ಲ ಅಂದ ಹಾಗಲ್ವಾ?

ಯೋಜನೆಗಳ ಮಂಜುರಾತಿಗೂ ಭಾಷೆಗೂ ಯಾಕೆ ತಳುಕು?

ಕನ್ನಡನಾಡಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಆಗ್ಬೇಕು ಅನ್ನೋರು, ಹಾಗೆ ದಿಲ್ಲಿಯಲ್ಲಿ ಅಲ್ಲಿನ ಭಾಷೆ (ಹಿಂದಿ?) ಮಾತಾಡೋದು ಸರಿ ಅಲ್ವಾ? ಹಿಂದಿ ಭಾಷೇನ ಯಾಕೆ ಕಲೀಬಾರ್ದು? ಇದು ಸಣ್ಣ ಬುದ್ಧಿ ಅಲ್ವಾ? ಎಲ್ಲಾ ಭಾಷೇನೂ ಗೌರವಿಸಬೇಕು? ದೇಶದ ಒಗ್ಗಟ್ಟು .... ಇತ್ಯಾದಿ ಇತ್ಯಾದಿ ಗೊಂದಲಗಳನ್ನು ತಲೇಲಿ ಬಿಟ್ಟು ಇದೇ ಸರಿ ಅಂತ ತಲೆ ಕೆಡೋ ಹಾಗೆ ಮಾಡೋರುನ್ನ ಪಕ್ಕಕ್ಕಿಟ್ಟು ಈ ವಿಷ್ಯಾನ ನೋಡೋಣ ಬನ್ನಿ ಗುರುಗಳೇ. ನಿಜಾ ಅಂದ್ರೆ ಕನ್ನಡದೋರು ಬೇರೆ ಬೇರೆ ಭಾಷೆ ಕಲಿಯಕ್ಕೂ ಇದಕ್ಕೂ ಯಾವ ಸಂಬಂಧಾನೂ ಇಲ್ಲ. ಬರಿ ಹಿಂದಿ ಯಾಕೆ, ತಮಿಳು, ತೆಲುಗು, ಮರಾಠಿ, ಭೋಜ್ ಪುರಿ, ಸಂಸ್ಕೃತ, ಜರ್ಮನ್, ಜಪಾನೀಸ್, ಫ್ರೆಂಚು ಬೇಕಾದ್ರೂ ಕಲಿಯೋಣ. ಹಾಗೆ ಹತ್ತಾರು ಭಾಷೆ ಕಲಿಯೋದೂ ಒಳ್ಳೇದೇನೆ. ಆದ್ರೆ ಒಂದು ದೇಶಾ ಅಂತ ಒಂದು ವ್ಯವಸ್ಥೆ ಮಾಡಿ ಅದರಂತೆ ರಾಜ್ಯಗಳ ಯೋಜನೆಗಳಿಗೆ ಒಪ್ಪಿಗೆ ಬೇಕಂದ್ರೆ ದಿಲ್ಲಿಗೆ ಬರಬೇಕು ಅಂತಾ ಮಾಡಿ, ರಾಜ್ಯಗಳ ಕೆಲಸಗಳು ಆಗಬೇಕು ಅಂದ್ರೆ ’ನೀವು ಹಿಂದಿ ಕಲೀಲೆ ಬೇಕು, ಇಲ್ದಿದ್ರೆ ನಿಮ್ಮ ಯೋಜನೆಗಳಿಗೆ ಅನುಮತಿ ಸಿಗಲ್ಲ’ ಅನ್ನೋದು ಅಕ್ಷಮ್ಯ. ಕೇಂದ್ರದ ಜೊತೆ ಆಗಬೇಕಾದ ನಮ್ಮ ಕೆಲಸಗಳಿಗಾಗಿ ನಮ್ಮ ಭಾಷೆ ಬಳಸೋ ಹಾಗಿಲ್ಲ ಅನ್ನೋದನ್ನು ತಪ್ಪು ಅನ್ನಕ್ಕೂ ನಾವು ಎಲ್ಲಾ ಭಾಷೇನೂ ಗೌರವಿಸಬೇಕು ಅನ್ನೋದಕ್ಕೂ ಏನಾದ್ರೂ ಸಂಬಂಧ ಇದೆಯಾ ಗುರು? ಇದು ಭಾರತ, ಇಲ್ಲಿನ ಅಧಿಕೃತ ಭಾಷೆ ಹಿಂದಿ ಅನ್ನೋದಾದ್ರೆ ಬದಲಾಗಬೇಕಿರೋದು ನಾವಾ? ಅಥವಾ ವ್ಯವಸ್ಥೇನಾ? ಮೈಗೆ ತಕ್ಕಂತೆ ಅಂಗಿ ಹೊಲುಸ್ಕೊಬೇಕೇ ಹೊರತು ಅಂಗಿ ಆಕಾರಕ್ಕೆ ಮೈನ ಹಿಗ್ಸೋದು ಕುಗ್ಸೋದು ಮಾಡಕ್ ಆಗುತ್ತಾ ಗುರೂ?

ಕೇಂದ್ರದೊಂದಿಗೆ ವಹಿವಾಟಿಗೆ ಹಿಂದಿ ಕಡ್ಡಾಯ ಅನ್ನೋದು ಸರಿಯಲ್ಲ!

ವಿಷಯ ಏನಪ್ಪಾ ಅಂದ್ರೆ ನಿಜವಾಗ್ಲೂ ದಿಲ್ಲಿಯಲ್ಲಿ ಕನ್ನಡದೋರ ಕೆಲಸ ಆಗಬೇಕಾದ್ರೆ ಹಿಂದಿ ಮಾತ್ರಾ ನಡೆಯೋದು ಅನ್ನೋದು ವಾಸ್ತವಾನೋ ಅಲ್ಲವೋ ಅನ್ನೋದಕ್ಕಿಂತ ನಮ್ಮ ಕನ್ನಡಿಗರಲ್ಲೇ ಅನೇಕರ ಮನಸ್ಸಲ್ಲಿ ಭಾರತ/ಕೇಂದ್ರ ಸರ್ಕಾರದ ವ್ಯವಹಾರ ಅಂದ ಕೂಡಲೇ ಹಿಂದಿ ಕಲಿತಿರಲೇ ಬೇಕು, ಇದು ಸಹಜವಾದದ್ದು, ಸರಿಯಾದದ್ದು ಅನ್ನೋ ಮನಸ್ಥಿತಿ ಬೇರೂರಿರೋದು ಭಾರತದ ಒಳಿತಿನ ದೃಷ್ಟಿಯಿಂದಲೇ ಒಳ್ಳೇದಲ್ಲಾ. ಇಂಥಾ ಮನಸ್ಥಿತಿ ಪತ್ರಿಕೆಗಳವರಿಗಿರೋದಂತೂ ನಾಡಿನ ಹಿತಕ್ಕೆ ಮತ್ತಷ್ತು ಹೆಚ್ಚು ಮಾರಕ. ಕೇಂದ್ರ ಸರ್ಕಾರದ ಹಣಕಾಸು ಮಂತ್ರಿಗಳಾದ ಶ್ರೀ ಚಿದಂಬರಂ ಅವರು ಹಿಂದೊಮ್ಮೆ ಮುಂಬೈಯಲ್ಲಿ ಪತ್ರಿಕಾ ಗೋಷ್ಟಿ ಮಾಡ್ತಿದ್ದಾಗ ಇದೇ ಮನಸ್ಥಿತಿಯ ಪತ್ರಕರ್ತರೊಬ್ಬರು ಇದು ಭಾರತ, ಹಿಂದಿಯಲ್ಲಿ ಮಾತಾಡಿ ಅಂದಾಗ ಮಂತ್ರಿಗಳು ನಾನು ಇಂಗ್ಲಿಷಲ್ಲಿ ಮಾತಾಡ್ತೀನಿ, ಬೇಕಾದ್ರೆ ತರ್ಜುಮೆದಾರರನ್ನು ಇಟ್ಕೊಳ್ಳಿ ಅಂದಿದ್ದು ಈ ಸಂದರ್ಭದಲ್ಲಿ ನೆನಪಾಗ್ತಿದೆ. ಆಗ ಚಿದಂಬರಂ ಅವ್ರು ಸಾರಿದ್ದು ಭಾರತೀಯ ಆಗಿರೋದಕ್ಕೆ ಹಿಂದಿ ಕಲಿತಿರಲೇಬೇಕು ಅನ್ನೋದು ಸರಿಯಲ್ಲ ಅಂತಾ. ದೇವೆಗೌಡರು ಪ್ರಧಾನಿಯಾದಾಗ "ಈ ಮನುಷ್ಯಂಗೆ ಹಿಂದೀನೇ ಬರಲ್ಲ, ಇವರು ಹ್ಯಾಗೆ ಭಾರತದ ಪ್ರಧಾನಿಯಾಗಲು ಲಾಯಕ್ಕು?" ಅನ್ನೋ ಅಪಸ್ವರಗಳು ಎದ್ದಿದ್ದನ್ನು ಮರೆಯಕ್ಕಾಗುತ್ತಾ ಗುರು? ಭಾರತದ ಪ್ರಧಾನಿಯಾದವರಿಗೆ ಹಿಂದಿ ಬರಲೇಬೇಕು, ಕೆಂಪುಕೋಟೆ ಮೇಲೆ ನಿಂತು ಭಾಷಣ ಮಾಡೋರು ತಮಗೆ ಬರದೇ ಇದ್ರೂ, ತಮ್ಮ ಭಾಷೇಲಿ ಬರೆದುಕೊಂಡಾದ್ರೂ ಹಿಂದೀಲಿ ಭಾಷಣ ಮಾಡಲೇಬೇಕು ಅನ್ನೋ ಮನಸ್ಥಿತಿ ತಪ್ಪು. ಕೆಂಪುಕೋಟೆ ಮೇಲೆ ನಿಂತ ದೇವೇಗೌಡರಿಗೆ ಕನ್ನಡದಲ್ಲಿ ಭಾಷಣ ಮಾಡೊಕೆ, ಮನಮೋಹನ್ ಸಿಂಗರಿಗೆ ಪಂಜಾಬಿಯಲ್ಲಿ ಭಾಷಣ ಮಾಡೊಕ್ಕೆ ಅವಕಾಶ ಇರೋದೆ ಸರಿಯಾದ್ದು. ಆದರೆ ಭಾರತದಲ್ಲಿ ಸ್ವತಂತ್ರ ಬಂದಾಗಿನಿಂದಲೂ ಎಲ್ಲ ಪ್ರದೇಶಗಳ ಜನರ ತಲೆ ಸವರಿ ಸವರಿ ಹಿಂದಿ ಅನಿವಾರ್ಯ ಅನ್ನೋ ಮನಸ್ಥಿತಿಯನ್ನು ಕನ್ನಡಿಗರಲ್ಲೇ ಹುಟ್ಟು ಹಾಕಿರೋದು ನಿಜಕ್ಕೂ ಹುನ್ನಾರ ಅಲ್ವಾ ಗುರು? ಇದರಿಂದ ನಾವು ಆದಷ್ಟು ಬೇಗ ಹೊರಗ್ ಬರಲೇಬೇಕು ಗುರು!

ಇವರು ಯಾರು ಬಲ್ಲೆಯೇನು?

ಸರ್ ಎಂ.ವಿ ಎನ್ನುವ ಕನ್ನಡಿಗರ ಹೆಮ್ಮೆಯ ಭಾರತ ರತ್ನದ ಹೆಸರು ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವ್ರು ಅಂತ. ಈ ಮಹಾನುಭಾವ ತನ್ನ ಅದ್ಭುತ ದೂರದೃಷ್ಟಿಯಿಂದ ಕನ್ನಡ ನಾಡಿನ ಸರ್ವತೋಮುಖ ಏಳಿಗೆಗೆ ಅಡಿಪಾಯ ಹಾಕಿದವರು. ಅಣೆಕಟ್ಟೆಯ ಬಾಗಿಲಿನ ವಿನ್ಯಾಸಕ್ಕೆ ಹಕ್ಕುಸಾಮ್ಯ (ಪೇಟೆಂಟ್) ಹೊಂದಿದ್ದ ಇವರು ಕೆಆರ್ಎಸ್ ಅಣೆಕಟ್ಟೆ ಕಟ್ಟಿದ್ದಲ್ಲದೆ ಅನೇಕ ಉದ್ದಿಮೆಗಳನ್ನು, ವಿಶ್ವವಿದ್ಯಾಲಯಗಳನ್ನು, ಸಾಹಿತ್ಯ ಪರಿಷತ್ ಅನ್ನು ಕಟ್ಟಲು ಕಾರಣರಾದರು. ಇದಷ್ಟೇ ಅಲ್ಲದೆ ಭಾರತದ ಅನೇಕ ಅಣೆಕಟ್ಟುಗಳ ನಿರ್ಮಾಣದಲ್ಲಿ ಇವರ ಕೊಡುಗೆ ಇದೆ. ತಿರುಪತಿ ತಿರುಮಲ ರಸ್ತೆ, ಆಂಧ್ರದ ಹೈದರಾಬಾದ್ ನಗರದ ನೆರೆತಡೆ ವ್ಯವಸ್ಥೆ, ಪುಣೆಯ ಬಳಿ ಜಲಾಶಯ... ಹೀಗೆ ಇಡೀ ಭಾರತದ ಏಳಿಗೆಗಾಗಿ ದುಡಿದವರು ಈ ಸಾಧಕ. ಇವ್ರುನ್ನ ಬರೀ ಕನ್ನಡಿಗರಲ್ಲ, ಇಡೀ ಭಾರತವೇ ನೆನೆಸಿಕೊಳ್ಳೋ ಅಂಥಾ ಸಾಧನೆ ಇವರದ್ದು. ಅದನ್ನು ಗುರುತಿಸಿ ಗೌರವಿಸಲೆಂದೇ ಇವರಿಗೆ ಭಾರತ ರತ್ನ ಪ್ರಶಸ್ತಿಯನ್ನು 1955ರಲ್ಲಿ ನೀಡಲಾಯಿತು ಅನ್ನೋದೇನೋ ಸರಿ. ಆದರೆ ಭಾರತ ಸರ್ಕಾರದ ಅಧಿಕೃತ ಅಂತರ್ಜಾಲ ತಾಣದಲ್ಲೇ ಇವರ ಹೆಸರನ್ನು ಹ್ಯಾಗೆ ಬರೆದಿದಾರೆ ಅಂತ ನೋಡುದ್ರೆ ಅದೆಷ್ಟು ಅಸಡ್ಡೆ ಕನ್ನಡಿಗರನ್ನು ಕಂಡ್ರೆ ಅಂತ ತಿಳ್ಯುತ್ತೆ ಗುರು! ಭಾರತ ಸರ್ಕಾರದ ಅಧಿಕೃತ ಅಂತರ್ಜಾಲ ತಾಣದಲ್ಲಿ, ಭಾರತರತ್ನಗಳ ಪಟ್ಟಿಯಲ್ಲೇ ಇವರ ಹೆಸರು ಡಾ. ಎಂ. ವಿವೇಸ್ವರಾಯ ಅಂತ ಇದೆ. ಭಾರತ ಸರ್ಕಾರದೋರು ನಾಡಿನ ಹೆಮ್ಮೆಯ ವ್ಯಕ್ತಿಗಳ ಹೆಸರನ್ನೇ ತಪ್ಪು ತಪ್ಪಾಗಿ ಬರೀತಾರೆ ಅಂದ ಮೇಲೆ ಇನ್ನು ಮತದಾರರ ಪಟ್ಟೀಲಿ ನಮ್ಮ ನಿಮ್ಮ ಹೆಸರು ತಪ್ಪಾಗೋದ್ರಲ್ಲಿ ಯಾವ ಅಚ್ಚರಿಯೂ ಇಲ್ಲ ಗುರು!

ಕನ್ನಡನಾಡಿನ ಏಳಿಗೆ ಹೊಸದೊಂದು ಶಾಲೆಯಿಂದಲೇ ಆಗಬಲ್ಲುದು

ಕನ್ನಡದ ಸೊಲ್ಲರಿಮೆಯನ್ನು (ವ್ಯಾಕರಣವನ್ನು) ಮತ್ತು ಸ್ವರೂಪವನ್ನು ಅರ್ಥಮಾಡಿಕೊಳ್ಳುವುದರಲ್ಲಿ ವೈಜ್ಞಾನಿಕ ಮನೋಭಾವದ ಕನ್ನಡಿಗರೆಲ್ಲರ ಮನಸ್ಸನ್ನು ಗೆದ್ದಿರುವ ಶ್ರೀ. ಡಿ.ಎನ್. ಶಂಕರಭಟ್ಟರ ಕೊಡುಗೆ ಬಹಳ ಮುಖ್ಯವಾದದ್ದು. ಭಟ್ಟರ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ", "ಮಾತಿನ ಒಳಗುಟ್ಟು", "ಕನ್ನಡ ನುಡಿ ನಡೆದುಬಂದ ದಾರಿ" ಮುಂತಾದ ಹೊತ್ತಿಗೆಗಳು ಜನರಲ್ಲಿ ಕನ್ನಡದ ಬಗೆಗಿರುವ ತಪ್ಪು ತಿಳುವಳಿಕೆಯನ್ನು ಸುಟ್ಟು ಹಾಕುತ್ತವೆ. ಈ ಕ್ಷೇತ್ರದಲ್ಲಿ ಬಹುಕಾಲದಿಂದ ಕನ್ನಡದ ಭಾಷಾವಿಜ್ಞಾನಿಗಳು ಮತ್ತು ವ್ಯಾಕರಣಕಾರರು ಮಾಡಿಕೊಂಡು ಬಂದಿರುವ ತಪ್ಪುಗಳನ್ನು ಭಟ್ಟರು ಖಡಾಖಂಡಿತವಾಗಿ ತೋರಿಸಿಕೊಟ್ಟಿರುವುದರಿಂದ (ಮತ್ತು ಇನ್ನೂ ಮುಂದೆ ಬರುವ ಹೊತ್ತಿಗೆಗಳಲ್ಲಿ ತೋರಿಸಿಕೊಡಲಿರುವುದರಿಂದ) ಹಳೆ-ಶಾಲೆಗೆ ಅಂಟಿಕೊಂಡಿರುವ ಕೆಲವರ ಕಾಲ್ಕೆಳಗಿನ ನೆಲವೇ ಕುಸಿದಂತಾಗಿ, ಭಟ್ಟರನ್ನೂ ಮತ್ತವರ ತತ್ವಗಳನ್ನೂ ಕಟುವಾಗಿ ವಿರೋಧಿಸುವುದನ್ನೇ ಒಂದು ಹವ್ಯಾಸವಾಗಿಸಿಕೊಂಡಿದ್ದಾರೆ! ತಮಾಷೆಯೇನೆಂದರೆ ಇವರಾರ ವಿರೋಧವೂ ಭಟ್ಟರ ವೈಜ್ಞಾನಿಕತೆಯ ಮಟ್ಟಕ್ಕೆ ಏರದೆ ಬರೀ ಅವರನ್ನು ವೈಯಕ್ತಿಕವಾಗಿ ಮೂದಲಿಸುವುದರಿಂದ ಹಿಡಿದು, ಸಂಸ್ಕೃತದ ಪಂಡಿತರಾದ ಅವರೇ ಸಂಸ್ಕೃತದ್ವೇಷಿಗಳೆಂದು ಮೂದಲಿಸುವವರೆಗೆ, ಎಪ್ಪತ್ತೈದು ವರ್ಷದ ಮುದುಕರಾದ ಭಟ್ಟರು ರಾಜಕೀಯ ಲಾಭಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎನ್ನುವ ಸೊಂಟದ ಕೆಳಗಿನ ಆರೋಪದವರೆಗೆ ಮಾತ್ರ ತಲುಪುತ್ತವೆ! ಈ ಅವೈಜ್ಞಾನಿಕತೆಯೇ ಕನ್ನಡದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಕನ್ನಡಿಗರನ್ನು ಸೋಲಿಸಿರುವುದರಿಂದ ಇದನ್ನು ಕಿತ್ತೊಗೆಯದೆ ಬೇರೆ ದಾರಿಯಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ೩ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ "ಕೂಡಲಸಂಗಮ ದೇವನ ಕನ್ನಡ" ಎಂಬ ಬರಹದಲ್ಲಿ ಶ್ರೀ ಕೆ.ವಿ. ತಿರುಮಲೇಶ್ ಅವರು (ಚಿತ್ರ ನೋಡಿ) ಅದೇ ಅವೈಜ್ಞಾನಿಕತೆಯನ್ನು ಓದುಗರ ಮುಂದಿಟ್ಟು ನಮ್ಮ ಈ ಮರುವುತ್ತರವನ್ನು ತಾವೇ ಬರಮಾಡಿಕೊಂಡಿದ್ದಾರೆ. ತಿರುಮಲೇಶರ ಬರಹದಲ್ಲಿ ಆ ಹಳೆ-ಶಾಲೆಯ ಅವೈಜ್ಞಾನಿಕತೆಯು ಮೈದಳೆದು ಬಂದಿರುವುದರಿಂದ ನಮ್ಮ ಈ ಉತ್ತರವು ಅವರಿಗೊಬ್ಬರಿಗೇ ಅಲ್ಲದೆ ಆ ಹಳೆ-ಶಾಲೆಯವರೆಲ್ಲರಿಗೂ ಒಪ್ಪುತ್ತದೆ.

ಆ ಹಳೆ-ಶಾಲೆಯ ಅವೈಜ್ಞಾನಿಕ ತತ್ವಗಳಿಗೆ ಅಂಟಿಕೊಂಡಿರುವವರು ಅವೈಜ್ಞಾನಿಕತೆಯನ್ನು ಪ್ರದರ್ಶಿಸುತ್ತಿದ್ದಾರೆ ಎನ್ನುವುದು ನಿಜವಾದರೂ ಅವರ ಗುರಿಯು ಸಾಧುವಾಗೇ ಇದೆ. ಅವರಿಗೂ ಕನ್ನಡಿಗರ ಏಳಿಗೆ ಬೇಕು. ಅವರಿಗೂ ಕನ್ನಡವು ಬೆಳೆಯಬೇಕೆಂಬುದಿದೆ. ಅವರಿಗೂ ಕರ್ನಾಟಕವು ಏಳಿಗೆಹೊಂದಬೇಕೆಂಬ ಆಸೆಯಿದೆ. ಗುರಿಯಲ್ಲಿ ಅವರಿಗೂ ಹೊಸ-ಶಾಲೆಯ ನಮಗೂ ಹೆಚ್ಚು-ಕಡಿಮೆಯಿರುವುದಿಲ್ಲ; ಇರುವುದು ದಾರಿಯಲ್ಲಿ, ಗುರಿ ಮುಟ್ಟಲು ಯಾವಯಾವ ಹಂತಗಳ ಮೂಲಕ ಕನ್ನಡ-ಕನ್ನಡಿಗ-ಕರ್ನಾಟಕಗಳು ಹಾದುಹೋಗಬೇಕೆಂಬುದರಲ್ಲಿ. ಅವರ ಆಸೆಗಳು ಅವರೇ ಕಟ್ಟಿಕೊಂಡಿರುವ ಕಟ್ಟಳೆಗಳ ಹೊರಗೆ ಬರಲಾರದ ಚಿಂತನೆ ಮತ್ತು ಕೆಲಸಗಳಿಂದ ಈಡೇರದೆ ಹೋಗುವುದನ್ನು ಕಂಡು ಬೇಸರಗೊಂಡೇ ನಾವು ಸರಿಯಾದ ದಾರಿಯನ್ನು ಹುಡುಕಿ ಹೊರಟಿರುವುದು, ಹೊಸದೊಂದು ಶಾಲೆಯನ್ನು ಕಟ್ಟಲು ಹೊರಟಿರುವುದು.

ಮತ್ತೂ ಕೆಲವು ವಿಷಯಗಳಲ್ಲಿ ಹೊಸ ಮತ್ತು ಹಳೆಯ ಶಾಲೆಗಳಲ್ಲಿ ಒಮ್ಮತವಿರುತ್ತದೆ. ಕನ್ನಡವನ್ನು ಇನ್ನಷ್ಟು ಶ್ರೀಮಂತಗೊಳಿಸುವುದು ಹೇಗೆ, ಕನ್ನಡದ ಬೋಧನೆ, ಉಪಯೋಗಗಳನ್ನು ಆಕರ್ಷಕವೂ ವ್ಯಾಪಕವೂ ಆಗಿಸುವುದು ಹೇಗೆ ಎನ್ನುವ ಕಡೆ ನಮ್ಮ ಚಿಂತನೆ ಹರಿಯಬೇಕಾಗಿದೆ ಎಂದು ತಿರುಮಲೇಶರು ಹೇಳಿರುವುದೂ ಕೂಡ ಶೇಕಡ ನೂರರಷ್ಟು ಒಪ್ಪುವಂಥದ್ದು. ಆದರೆ ಹಳೆ-ಶಾಲೆಯವರು ಈ ಚಿಂತನೆಯನ್ನು ಹರಿಸುವಾಗ ಅನುಸರಿಸುತ್ತಿರುವ ಅವೈಜ್ಞಾನಿಕತೆಯೇ ಅವರನ್ನು ಗುರಿಮುಟ್ಟದಂತೆ ನೋಡಿಕೊಳ್ಳುತ್ತಿರುವುದರಿಂದ ಆ ಅವೈಜ್ಞಾನಿಕತೆಯನ್ನು ಕಿತ್ತೊಗೆಯಬೇಕೆಂಬುದೇ ಹೊಸ-ಶಾಲೆಯ ಮೂಲಮಂತ್ರವಾಗಿದೆ. ಸಂಸ್ಕೃತವನ್ನು ದ್ವೇಷಿಸಬಾರದು ಎಂದು ಇಬ್ಬರೂ ಒಪ್ಪುತ್ತಾರೆ. ಅದನ್ನು ದ್ವೇಷಿಸುವುದರಿಂದ ಏನೂ ಸಿಗುವುದಿಲ್ಲ ಎಂದು ಗೊತ್ತಿರುವುದೇ. ತಿರುಮಲೇಶರೇ ಬಹಳ ಚೆನ್ನಾಗಿ ಹೇಳುವಂತೆ ಸಂಸ್ಕೃತವನ್ನು ವೈರಿಯಾಗಿ ತೆಗೆದುಕೊಳ್ಳದೆ ಒಂದು ಸಂಪನ್ಮೂಲವಾಗಿ ತೆಗೆದುಕೊಳ್ಳುವುದೇ ಸರಿ. ಆದರೆ ಹೊಸ-ಶಾಲೆಗೂ ಅವರಿಗೂ ಹೆಚ್ಚು-ಕಡಿಮೆಯಿರುವುದು ಆ ಸಂಪನ್ಮೂಲವು ಯಾವ ರೀತಿಯದ್ದು, ಅದಕ್ಕೂ ಸಂಪನ್ಮೂಲವನ್ನು ಬಳಸಬೇಕಾದ ಕನ್ನಡಕ್ಕೂ ಸಂಬಂಧವೇನು ಎನ್ನುವುದರಲ್ಲಿ. ಆ ಸಂಪನ್ಮೂಲವಿಲ್ಲದೆ ಕನ್ನಡದ ಏಳಿಗೆಯ ಬಂಡಿ ಮುಂದಕ್ಕೇ ಹೋಗುವುದಿಲ್ಲ ಎಂದು ಹಳೆ-ಶಾಲೆಯವರು ತಿಳಿದುಕೊಂಡಿರುವುದು ಅವರು ಮಾಡುವ ಬಹಳ ದೊಡ್ಡ ತಪ್ಪುಗಳಲ್ಲಿ ಒಂದು. ಕನ್ನಡವೇನೆಂದು, ಭಾಷೆಯೇನೆಂದು ಅರಿತವರಾರೂ ಅದನ್ನು ಒಪ್ಪಲಾಗುವುದಿಲ್ಲವಾದ್ದರಿಂದ ಇಲ್ಲಿ ನಮ್ಮಿಬ್ಬರಲ್ಲಿ ಒಮ್ಮತವಿರುವುದಿಲ್ಲ. ಹಾಗೆಯೇ ತಿರುಮಲೇಶರು ಹೇಳುವಂತೆ ಕನ್ನಡಕ್ಕೆ ವಿಸ್ತರಣೆ ಬೇಕು, ಸಂಕುಚಿತತೆಯಲ್ಲ ಎನ್ನುವುದನ್ನು ಕೂಡ ನಾವು ಒಪ್ಪುತ್ತೇವೆ. ಆದರೆ ಯಾವುದು ಸಂಕುಚಿತತೆ, ಯಾವುದು ವಿಸ್ತರಣೆ ಎನ್ನುವುದರಲ್ಲಿ ಹೊಸ-ಶಾಲೆಗೂ ಹಳೆ-ಶಾಲೆಯವರಿಗೂ ಒಮ್ಮತವಿರುವುದಿಲ್ಲ. ಹಳೆ-ಶಾಲೆಯವರಿಗೆ ಸಂಸ್ಕೃತವೊಂದರಿಂದಲೇ ಕನ್ನಡಕ್ಕೆ ವಿಸ್ತರಣೆ ಸಾಧ್ಯವೆನಿಸುತ್ತದೆ; ಆದರೆ ನಿಜಕ್ಕೂ ನೋಡಿದರೆ ಅದೇ ಸಂಕುಚಿತತೆ, ಎಷ್ಟೆಂದರೆ ಕನ್ನಡಿಗರನ್ನೇ, ಕನ್ನಡವನ್ನೇ ಹೊರಗಿಡುವಷ್ಟು! ಹಾಗೆಯೇ ಇಡೀ ಜಗತ್ತಿಗೆ ಬೇಕಾಗಿರುವ ವಿಷಯಗಳ ಬಗ್ಗೆ ಕನ್ನಡದಲ್ಲಿ ಬರೆಯುವುದು, ಓದುವುದು ಸಾಧ್ಯವಾಗಬೇಕು ಎನ್ನುವ ತಿರುಮಲೇಶರ ಆಸೆಯೇ ಹೊಸ-ಶಾಲೆಯವರಿಗೂ ಇರುವುದು. ಆದರೆ ಹಳೆ-ಶಾಲೆಯವರು ಹಾಗೆ ಆಗಬೇಕು, ಆಗಬೇಕು ಎಂದು ಕೂಗಿಕೊಂಡು ಸುಸ್ತಾಗಿದ್ದಾರೆಯೇ ಹೊರತು ಅದು ಇವತ್ತಿನವರೆಗೂ ಯಾಕೆ ಆಗಿಲ್ಲ ಎನ್ನುವುದನ್ನು ವೈಜ್ಞಾನಿಕವಾಗಿ ಅರಿತುಕೊಳ್ಳುವ ಗೋಜಿಗೆ ಅವರು ಹೋಗಿಲ್ಲ. ನಮ್ಮಲ್ಲಿ ಸ್ವೋಪಜ್ಞ ಚಿಂತನೆಯ ಕೃತಿಗಳು ಬಾರದೆ ಇರುವುದಕ್ಕೆ ಕನ್ನಡಿಗರು ಪ್ರಯತ್ನಿಸದೆ ಇರುವುದೇ ಕಾರಣ ಎಂದು ಹೇಳಿರುವುದರಲ್ಲೂ ಪರಿಸ್ಥಿತಿಯ ಬರೀ ಮೇಲುಮೇಲಿನ ಅರಿವು ಮಾತ್ರ ಹಳೆ-ಶಾಲೆಯ ತಿರುಮಲೇಶರಿಗೆ ಇದೆ ಎಂದು ಎದ್ದು ಕಾಣುತ್ತಿದೆ. ಹೌದು, ಕನ್ನಡಿಗರು ಪ್ರಯತ್ನಿಸುತ್ತಿಲ್ಲ. ಆದರೆ ಏಕೆ ಪ್ರಯತ್ನಿಸುತ್ತಿಲ್ಲ ಎಂದು ಎಂದಾದರೂ ಹಳೆ-ಶಾಲೆಯವರು ಪ್ರಶ್ನಿಸಲಿಲ್ಲವಲ್ಲ?! ಆ ಪ್ರಶ್ನೆಯನ್ನು ಕೇಳಿದರೆ ಕನ್ನಡಿಗರಿಗೆ ಕಲಿಕೆಯ ಕನ್ನಡವೇ ತಮ್ಮದಲ್ಲ ಎನ್ನುವಷ್ಟು ಕಬ್ಬಿಣದ ಕಡಲೆಯಾಗಿ ಹೋಗಿದೆಯೆನ್ನುವ ಒಳಗಿನ ಕಾರಣವು ಗೋಚರವಾಗುತ್ತದೆ. ಹೀಗೆ ಇಲ್ಲೂ ಎರಡೂ ಶಾಲೆಯವರ ಗುರಿಯು ಒಂದೇ ಆಗಿದ್ದು ಹಳೆ-ಶಾಲೆಯವರು ಆ ಗುರಿಯನ್ನು ಮುಟ್ಟಲು ಶಕ್ತಿಯಿಲ್ಲದೆ ಕುಸಿದು ಬಿದ್ದಿರುವುದು ಕಾಣಿಸುತ್ತದೆ.

ಕಾಲವೇ ಆ ಹಳೆ-ಶಾಲೆಯ ಅವೈಜ್ಞಾನಿಕತೆಯಿಂದ ಏನೂ ಗಿಟ್ಟುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ. ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಯನ್ನು ನಮ್ಮ ಹೊಸ-ಶಾಲೆಯೇ ಮಾಡಿಸುವುದು ಎನ್ನುವುದರಲ್ಲಿ ಸಂದೇಹವಿಲ್ಲ. ಈ ಶಾಲೆಯೇ ಜಪಾನ್, ದಕ್ಷಿಣ ಕೊರಿಯಾ, ಇಸ್ರೇಲ್ ಮುಂತಾದ ಪ್ರಪಂಚದ ಅನೇಕ ನಾಡುಗಳನ್ನು ಆಯಾ ಭಾಷೆಗಳ ಸರಿಯಾದ ಬಳಕೆಯಿಂದ ಏಳಿಗೆ ಮಾಡಿಸಿರುವುದು. ಹಳೆ-ಶಾಲೆಯವರು ಪ್ರಪಂಚದಲ್ಲೆಲ್ಲ ಆಗದು ಎಂದೂ, ಕೈಲಾಗದು ಎಂದೂ ಕೈಕಟ್ಟಿ ಕೂತಿರುವುದನ್ನು ನೋಡಿದರೆ ಸಾಕು, ಇವರಿಂದ ಏನೂ ಸಾಧ್ಯವಿಲ್ಲ ಎಂದು ಅರಿತುಕೊಳ್ಳಲು! ಇನ್ನು ಈ ಬರಹದ ಉಳಿದ ಭಾಗದಲ್ಲಿ ಶ್ರೀ ತಿರುಮಲೇಶರು ಬರೆದಿರುವ ವಿಷಯಗಳ ಬಗ್ಗೆ ನಮ್ಮ ನಿಲುವನ್ನೂ ಅದಕ್ಕೆ ಸಮರ್ಥನೆಯನ್ನೂ ಕೊಡುತ್ತೇವೆ.

ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದ ಅಧ್ಯಯನವಾಗಬೇಕಿದೆ

ತಿರುಮಲೇಶರು ಸಂಸ್ಕೃತವನ್ನು ದ್ವೇಷಿಸಬಾರದು, ಅದರ ಬದಲಾಗಿ ಸಮಾಜದಲ್ಲಿರುವ ಜಾತಿ, ಅರ್ಥ, ಶಿಕ್ಷಣ, ಸಂಸ್ಕೃತಿ ಕುರಿತಾದ ಭಿನ್ನತೆಗಳು ಮತ್ತು ಅನ್ಯಾಯಗಳನ್ನು ದ್ವೇಷಿಸಬೇಕು ಎನ್ನುತ್ತಾರೆ. ಸಂಸ್ಕೃತವನ್ನು ದ್ವೇಷಿಸಬಾರದು ಎನ್ನುವುದೇನೋ ಸರಿ, ಆದರೆ ಭಿನ್ನತೆ, ಅನ್ಯಾಯಗಳನ್ನು ದ್ವೇಷಿಸಿದರೆ ಏನು ಸಾಧಿಸಿದಂತಾಯಿತು? ಬರೀ ಆ ದ್ವೇಷದಿಂದ ಏನೂ ಗಿಟ್ಟುವುದಿಲ್ಲವಲ್ಲ? ಹಾಗೆಯೇ ಪ್ರಜಾಪ್ರಭುತ್ವವು ಬಂದಾಗಲೂ ಈ ಭಿನ್ನತೆಗಳು ಹೋಗಲಿಲ್ಲ ಎಂದು ಅಳುವುದರಿಂದಲೂ ಏನೂ ಗಿಟ್ಟುವುದಿಲ್ಲವಲ್ಲ? ನಿಜಕ್ಕೂ ಕನ್ನಡಜನಾಂಗದ ಏಳಿಗೆಯಾಗುವುದು ಅದನ್ನು ದ್ವೇಷಿಸುವುದರಿಂದ ಇಲ್ಲವೇ ಇದನ್ನು ದ್ವೇಷಿಸುವುದರಿಂದಲ್ಲ, ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡುವುದರಿಂದ.

ಜಾತಿಯೇ ಮೊದಲಾದ ತಿರುಮಲೇಶರ ಪಟ್ಟಿಯಲ್ಲಿ ಪ್ರತಿಯೊಂದರಲ್ಲೂ ಇರುವ ಮೇಲು-ಕೀಳು ಮನೋಭಾವವನ್ನು ತೆಗೆದು ಹಾಕಬೇಕಾದರೆ ಪ್ರತಿಯೊಂದರಲ್ಲೂ ಎಲ್ಲರಿಗೂ ಸಮನಾದದ್ದೇನಿದೆಯೋ ಅದನ್ನು ಎತ್ತಿಹಿಡಿಯಬೇಕು ಎನ್ನುವುದು ತಿಳುವಳಿಕಸ್ತರಿಗೆ ಗೊತ್ತಾಗದೆ ಹೋಗುವುದಿಲ್ಲ. ಸಮನಾದದ್ದೇನಿದೆಯೋ ಅದೇ ಜಾತಿ, ಅರ್ಥ, ಶಿಕ್ಷಣ, ಸಂಸ್ಕೃತಿ ಇವುಗಳುಂಟುಮಾಡಿರುವ ಒಡಕನ್ನು ಹೋಗಲಾಡಿಸಿ ಕನ್ನಡಿಗರನ್ನು ಒಗ್ಗೂಡಿಸುವುದು. ಏನದು ಸಮನಾದದ್ದು? ಇನ್ನೇನೂ ಇಲ್ಲ, ನುಡಿಯೇ ಅದು. ಎಂತಹ ನುಡಿಯದು? ಯಾವುದನ್ನು ಕಂಡಾಗಲೆಲ್ಲ ಕೇಳಿದಾಗಲೆಲ್ಲ ಜಾತಿ, ಅರ್ಥ, ಶಿಕ್ಷಣ, ಸಂಸ್ಕೃತಿ ಕುರಿತಾದ ಭಿನ್ನತೆಗಳು ಮತ್ತು ಅನ್ಯಾಯಗಳು ನೆನಪಾಗುತ್ತವೋ ಅಂತಹ ನುಡಿಯಲ್ಲ, ಯಾವ ನುಡಿಯು ಈ ಮಣ್ಣಿನ ಜನರಿಗೆಲ್ಲ ಸಮನಾಗಿದೆಯೋ ಆ ನುಡಿ. ಆ ನುಡಿಯಲ್ಲಿ ಸಂಸ್ಕೃತವು ಇದ್ದರೆ ತಿರುಮಲೇಶರೇ ಉದಾಹರಿಸಿರುವ ಬಸವಣ್ಣನವರ ವಚನಗಳಲ್ಲಿ ಎಷ್ಟಿರುತ್ತದೆಯೋ ಅಷ್ಟಿರುತ್ತದೆಯೇ ಹೊರತು ಈಗಿನ ಕೆಲವರು ತಮ್ಮ ಸಂಸ್ಕೃತದ ಪಾಂಡಿತ್ಯವನ್ನು ಕನ್ನಡಿಗರ ಮುಂದೆ ತೋರಿಸಿಕೊಳ್ಳುವುದಕ್ಕೆ ಬಳಸುತ್ತಾರಲ್ಲ, ಅಷ್ಟಲ್ಲ. ಕನ್ನಡಿಗರೆಲ್ಲರನ್ನು ಒಗ್ಗೂಡಿಸುವ, ಕನ್ನಡಿಗರೆಲ್ಲರ ನಾಲಿಗೆಯ ಮೇಲೆ ಜಳಜಳನೆ ಹರಿಯುವ ಆ ನುಡಿಯೇ ಕನ್ನಡ. ಮತ್ತೊಂದಲ್ಲ.

ಅಂತಹ ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದಿಂದಲೇ ಜಾತಿ ಮೊದಲಾದ ಕಡೆ ಭಿನ್ನತೆಯನ್ನು ತಕ್ಕಮಟ್ಟಿಗೆ ಹೋಗಲಾಡಿಸಲಾಗುವುದು. ಪೂಜೆಯನ್ನು ಸಂಸ್ಕೃತದಲ್ಲೇ ಮಾಡಬೇಕೆಂದೇನಿಲ್ಲ, ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದಲ್ಲೇ ಲಿಂಗ ಮೆಚ್ಚಿ ಅಹುದಹುದೆನ್ನುವಂತೆ ಪೂಜಿಸಲಾಗುವುದು! ಅರ್ಥ-ಶಿಕ್ಷಣಗಳನ್ನೇನು ಇಂಗ್ಲೀಷಿನ ಮೂಲಕವೇ ಪಡೆಯಲಾಗುವುದು ಎಂದೇನಿಲ್ಲ. ನಿಜಕ್ಕೂ ನೋಡಿದರೆ ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದಿಂದಲೇ ಕನ್ನಡಿಗರು ಕುಬೇರರಾಗಲು ಸಾಧ್ಯ, ನೊಬೆಲ್ ಪ್ರಶಸ್ತಿಗಳನ್ನು ದೊರಕಿಸಿಕೊಳ್ಳಲು ಸಾಧ್ಯ, ಇಂಗ್ಲೀಷಿನಿಂದಲ್ಲ. ಹಾಗೆಯೇ ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡವೇ ಕನ್ನಡಿಗರಿಗೆ ಒಳ್ಳೆಯ ಸಂಸ್ಕೃತಿಯನ್ನೂ ತಂದುಕೊಡಲು ಸಾಧ್ಯ. ಆದ್ದರಿಂದ ಆ ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದ ಅಧ್ಯಯನವಾಗಬೇಕಿದೆ, ಅದರ ಸ್ವರೂಪವನ್ನು ನಾವು ತಿಳಿದುಕೊಳ್ಳಬೇಕಿದೆ. ಅದೇನು ಅಂತಿಂತಹ ನುಡಿಯಲ್ಲ. ಅದು ಚಿನ್ನದ ಗಣಿ! ಅದರಲ್ಲಿ ನಮ್ಮ ಭವಿಷ್ಯವೇ ಅಡಗಿದೆ!

ನಮ್ಮ ನುಡಿಯ ಸರಿಯಾದ ಅಧ್ಯಯನ ಮಾಡುವುದು ಬೇರೆ ನುಡಿಗಳ ದ್ವೇಷವಲ್ಲ

ಸಂಸ್ಕೃತ ಪದಗಳನ್ನು ಕಿತ್ತುಹಾಕಬೇಕು ಎಂದು ಎಲ್ಲೂ ಯಾರೂ (ಶಂಕರಭಟ್ಟರನ್ನೂ ಸೇರಿದಂತೆ) ಹೇಳಲಿಲ್ಲ. ತಿಳುವಳಿಕಸ್ತರು ಹೇಳುತ್ತಿರುವುದು ಇಷ್ಟೇ: ಎಲ್ಲೆಲ್ಲಿ ಈಗಾಗಲೇ ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದ ಪದಗಳಿವೆಯೋ ಅವುಗಳನ್ನು ಕೈಬಿಡದೆ ಬಳಸಿಕೊಂಡು ಹೋಗಬೇಕು. ಅವುಗಳ ಬದಲು ಸಂಸ್ಕೃತದ ಇಲ್ಲವೇ ಮತ್ತೊಂದು ಭಾಷೆಯ ಪದಗಳನ್ನು ಬಳಸುವುದು ಸರಿಯಲ್ಲ. ಹಾಗೆಯೇ ಹೊಸ ಪದಗಳನ್ನು ಹುಟ್ಟಿಸುವಾಗಲೂ ಈಗಾಗಲೇ ಇರುವ ಕನ್ನಡದ ಪದಗಳನ್ನು ಒಟ್ಟಿಗೆ ಸೇರಿಸಿ ಇಲ್ಲವೇ ತುಸು ಬದಲಾಯಿಸಿ ಹುಟ್ಟಿಸುವುದೇ ನಮ್ಮ ಮೊದಲ ಹೆಜ್ಜೆಯಾಗಬೇಕು. ಈ ಒಂದು ಬಗೆಯಿಂದಲೇ ಕಲಿಕೆಯ ಎಲ್ಲಾ ಕ್ಷೇತ್ರಗಳಲ್ಲೂ (ಬರೀ ಅಧ್ಯಾತ್ಮ, ನಾಟಕ ಕವಿತೆಗಳಲ್ಲಿ ಮಾತ್ರವಲ್ಲ) ಶೇಕಡ ೮೦ರಷ್ಟು ಪದಗಳನ್ನು ಹುಟ್ಟಿಸಬಹುದು. ನಮ್ಮ ಕನ್ನಡಕ್ಕೆ ಆ ಶಕ್ತಿಯಿದೆ. ಅಷ್ಟೇ ಏಕೆ, ಎಲ್ಲಾ ಭಾರತೀಯ ಭಾಷೆಗಳಿಗೂ ಆ ಶಕ್ತಿ ಇದೆ.

ಇನ್ನು ಮಿಕ್ಕ ಶೇಕಡ ೨೦ರಷ್ಟು ಪದಗಳನ್ನು ಬರೀ ಸಂಸ್ಕೃತದಿಂದ ಮಾತ್ರ ಆರಿಸಿಕೊಳ್ಳಬೇಕು ಎಂದೇನಿಲ್ಲ. ಪ್ರಪಂಚದ ಯಾವ ಭಾಷೆಯಿಂದ ಬೇಕಾದರೂ ಆರಿಸಿಕೊಳ್ಳಬಹುದು. ಯಾವ ಯಾವ ಕ್ಷೇತ್ರಗಳಲ್ಲಿ ಯಾವ ಯಾವ ಭಾಷೆಗಳು ಹೆಚ್ಚು ಬಳಕೆಯಲ್ಲಿವೆಯೋ ಆಯಾ ಭಾಷೆಗಳಿಂದಲೇ ಪದಗಳನ್ನು ಆಯ್ದುಕೊಳ್ಳುವುದು ಸಹಜ. ಅಧ್ಯಾತ್ಮಕ್ಕೆ ಸಂಬಂಧಿಸಿದ ಪದಗಳನ್ನು ಸಂಸ್ಕೃತದಿಂದಲೂ, ವಿಜ್ಞಾನ-ತಂತ್ರಜ್ಞಾನಗಳಿಗೆ ಸಂಬಂಧಿಸಿದ ಪದಗಳನ್ನು ಇಂಗ್ಲೀಷಿನಿಂದಲೂ ಆರಿಸಿಕೊಳ್ಳಬಹುದು (ಇಂಗ್ಲೀಷ್ ಕೂಡ ಪ್ರಪಂಚದ ಎಲ್ಲಾ ಭಾಷೆಗಳಿಂದ ಪದಗಳನ್ನು ಆಮದಿಸಿಕೊಂಡಿದೆ). ಹೀಗೆ ಆರಿಸಿಕೊಳ್ಳುವಾಗಲೂ ಕೆಲವು ನಿಯಮಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಬಹುಮುಖ್ಯವಾದ ನಿಯಮವೇನೆಂದರೆ ಆ ಪದಗಳು ಕನ್ನಡಿಗರ ನಾಲಿಗೆಯಲ್ಲಿ ಹೊರಳುವಂಥವಿರಬೇಕು. ಇಲ್ಲದಿದ್ದರೆ ಹೊರಳಲು ಬೇಕಾದ ಬದಲಾವಣೆಗಳನ್ನು ಮಾಡಬೇಕು. ಯಾವ ರೀತಿಯ ಬದಲಾವಣೆಗಳನ್ನು ಮಾಡಬೇಕು ಎಂದು ತಿಳಿದುಕೊಳ್ಳುವುದಕ್ಕೂ ಕೂಡ ನಮ್ಮ ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದ ಅಧ್ಯಯನವಾಗಬೇಕು.

ಒಟ್ಟಿನಲ್ಲಿ ನಮ್ಮ ನುಡಿಯಿಂದ ಬರಬೇಕಾದ ಶೇಕಡ ೮೦ನ್ನು ಕೈಬಿಡದೆ ಹೋಗದಂತೆ ಮಾಡಲು ಕನ್ನಡದ ಸರಿಯಾದ ಅಧ್ಯಯನವಾಗಬೇಕಿದೆ. ಆ ಕನ್ನಡದಲ್ಲಿ ಸಂಸ್ಕೃತವೂ ಇಲ್ಲ, ಇಂಗ್ಲೀಷೂ ಇಲ್ಲ, ಇನ್ನೊಂದೂ ಇಲ್ಲ. ಅದು ಬರೀ ಕನ್ನಡವೇ. ಅದರ ಅಧ್ಯಯನ ಮಾಡಿದರೆ ಸಂಸ್ಕೃತ ಮತ್ತು ಇಂಗ್ಲೀಷುಗಳನ್ನು ದ್ವೇಷಿಸಿದಂತಾಗುವುದಿಲ್ಲ. ಬದಲಾಗಿ ಅವುಗಳಿಗೆ ಕೊಡಬೇಕಾದ ಗೌರವವನ್ನು ಸರಿಯಾಗಿ ಅಳತೆಮಾಡಿ ತಿಳಿದುಕೊಂಡಂತಾಗುತ್ತದೆ, ಅಷ್ಟೆ. ಮಿಕ್ಕ ಶೇಕಡ ೨೦ನ್ನು ಬೇರೆ ಭಾಷೆಗಳಿಂದ ಸರಿಯಾಗಿ ಆಮದುಮಾಡಿಕೊಳ್ಳುವುದಕ್ಕೂ ಕನ್ನಡದ ಅಧ್ಯಯನವಾಗಬೇಕಿದೆ.

ನೋವಿನ ವಿಷಯವೇನೆಂದರೆ ಇವತ್ತಿಗೂ ಕೂಡ ಕನ್ನಡವನ್ನು ತನ್ನ ಕಾಲ ಮೇಲೆ ತಾ ನಿಂತ ಒಂದು ಭಾಷೆಯಂತೆ ಪರಿಗಣಿಸಿರುವ ವ್ಯಾಕರಣಗಳೇ ಇಲ್ಲ. ಇರುವವೆಲ್ಲವೂ ಸಂಸ್ಕೃತದ ವ್ಯಾಕರಣವನ್ನು ಕನ್ನಡಕ್ಕೆ ಹೊಂದಿಸಲು ಹೊರಟಿರುವವೇ. ಕನ್ನಡದ ಅಧ್ಯಯನದಲ್ಲಿ ನಾವು ಅಷ್ಟು ಹಿಂದಿದ್ದೇವೆ! ಈ ಕಟುಸತ್ಯವನ್ನು ಕಂಡುಹಿಡಿದು ಕನ್ನಡಿಗರ ಮುಂದಿಟ್ಟಿರುವ ಒಬ್ಬನೇ ಒಬ್ಬ ಭಾಷಾವಿಜ್ಞಾನಿಯೆಂದರೆ ಶ್ರೀ. ಡಿ.ಎನ್. ಶಂಕರಭಟ್ಟರು. ಈ ಕಟುಸತ್ಯವು ಕೆಲವರಿಗೆ ಹಿಡಿಸದಿರಬಹುದು, ಆದರೆ ಅವರಿಗೆ ಹಿಡಿಸದ ಮಾತ್ರಕ್ಕೆ ಸತ್ಯವೇನು ಬದಲಾಗುವುದಿಲ್ಲ. ಸತ್ಯದಿಂದ ಓಡಿಹೋಗುವ ಅವರಿಗೆ ಈ ಕೆಲಸವನ್ನು ಕೈಗೊಂಡವರಿಗೆ ಸಂಸ್ಕೃತದ ದ್ವೇಷವಿದೆ ಎನಿಸಿರುವುದಂತೂ ಒಂದು ದೊಡ್ಡ ತಮಾಷೆಯೇ ಸರಿ!

ಕನ್ನಡ ಬರಹದ ಸ್ಪೆಲ್ಲಿಂಗ್ ಸಮಸ್ಯೆಯನ್ನು ಹೋಗಲಾಡಿಸಲು ಅವಸರವಿಲ್ಲ

ಆಡಿದಂತೆ ಬರೆದರೆ ಕನ್ನಡದ ಬರಹದಲ್ಲಿ ಗೊಂದಲ ಕಡಿಮೆಯಾಗುತ್ತದೆ ಎನ್ನುವುದು ಸರಿಯೇ. ಅಚ್ಚುಕಟ್ಟಾದ (ಸಮ್ಯಕ್ ಕೃತಃ ವಾದ) ಯಾವ ಭಾಷೆಯಲ್ಲೂ ಸ್ಪೆಲ್ಲಿಂಗ್ ಸಮಸ್ಯೆ ಇರಲಾರದು. ಸಂಸ್ಕೃತದಲ್ಲಿ ಹೇಗೋ ಹಾಗೆ. ಈ ನಿಟ್ಟಿನಿಂದ - ಎಂದರೆ ಯಾರಿಗೆ ಕನ್ನಡವನ್ನು ಅಚ್ಚುಕಟ್ಟಾಗಿ ಮಾಡಬೇಕೆನ್ನುವ ಆಸೆಯಿದೆಯೋ ಅವರ ಕಣ್ಣಿಗೆ - ಇವತ್ತಿನ ಕನ್ನಡದ ಲಿಪಿಯಲ್ಲಿ ತೊಂದರೆಗಳು ಕಾಣಿಸದೆ ಹೋಗವು. ಕನ್ನಡಿಗರ ನಾಲಿಗೆಯಲ್ಲಿ ಉಲಿಯಲಾಗದ ಮಹಾಪ್ರಾಣಗಳು, ಋ, ಷ ಮುಂತಾದವುಗಳನ್ನು ತೆಗೆದರೇ ಕನ್ನಡವು ಅಚ್ಚುಕಟ್ಟಾಗುವುದು ಎಂದು ಅನ್ನಿಸದೆ ಹೋಗದು. ಸಿದ್ಧಾಂತದ ಬಣ್ಣವಿಲ್ಲದೆ ನೋಡಿದರೆ ಇದನ್ನು ಎಲ್ಲರೂ ಒಪ್ಪಲೇಬೇಕಾಗುವುದು. ಇಲ್ಲೂ ಶ್ರೀ ಶಂಕರಭಟ್ಟರು ಏನು ಮಾಡಿದರೆ ಕನ್ನಡದ ಸ್ಪೆಲ್ಲಿಂಗ್ ಸಮಸ್ಯೆ ಬಗೆಹರಿಯುತ್ತದೆ ಎಂದು ತಮ್ಮ ಕನ್ನಡ ಬರಹವನ್ನು ಸರಿಪಡಿಸೋಣ ಎಂಬ ಹೊತ್ತಗೆಯಲ್ಲಿ ತಿಳಿಸಿದ್ದಾರೆಯೇ ಹೊರತು ಸ್ಪೆಲ್ಲಿಂಗ್ ಸಮಸ್ಯೆಯನ್ನು ಬಗೆಹರಿಸದಿದ್ದರೆ ಏನಾದೀತು ಎನ್ನುವ ಬಗ್ಗೆ ಅವರು ತಲೆ ಕೆಡಿಸಿಕೊಂಡಿಲ್ಲ. ಅದು ಅವರ ಕೆಲಸವಲ್ಲ. ಇದ್ದಿದ್ದನ್ನು ಇದ್ದಂತೆ ಹೇಳುವುದು ಭಾಷಾವಿಜ್ಞಾನಿಯಾದ ಅವರ ಕೆಲಸ.

ಆದರೆ ಸ್ಪೆಲ್ಲಿಂಗ್ ಸಮಸ್ಯೆಯನ್ನು ಬಗೆಹರಿಸಲೇಬೇಕೆ? ಬಗೆಹರಿಸದಿದ್ದರೆ ಕನ್ನಡಜನಾಂಗವು ಏಳಿಗೆಹೊಂದದೆ ಹೋಗುತ್ತದೆಯೆ? ಎಂದು ಕೇಳಿಕೊಕೊಂಡರೆ ಉತ್ತರವು ಇಲ್ಲ ಎಂದೇ ಸಿಗುವುದು. ಹೌದು, ಕನ್ನಡ ಬರಹದಿಂದ ಸ್ಪೆಲ್ಲಿಂಗ್ ಸಮಸ್ಯೆಗಳನ್ನು ತೆಗೆದುಹಾಕಿ ಸರಿಪಡಿಸದಿದ್ದರೆ ಕನ್ನಡಜನಾಂಗಕ್ಕೆ ಏಳಿಗೆಯಿಲ್ಲ ಎಂದು ಯಾರಿಗೂ ತೋರಿಸಲಾಗುವುದಿಲ್ಲ. ಇಂಗ್ಲೀಷ್, ಫ್ರೆಂಚ್ ಮುಂತಾದ ಭಾಷೆಗಳಲ್ಲಿ ಸ್ಪೆಲ್ಲಿಂಗ್ ಸಮಸ್ಯೆಯಿದ್ದರೂ ಅವರ ಏಳಿಗೆಗೆ ಅದೇನು ಅಡ್ಡಿಯಾಗಿಲ್ಲವಲ್ಲ? ಆದ್ದರಿಂದ ಬರಹವನ್ನು ಸರಿಪಡಿಸುವ ಯೋಜನೆ ಈಗಲೇ ಜಾರಿಗೆ ಬರದಿದ್ದರೂ ನಮಗೆ ಅಂಥದ್ದೇನೂ ತೊಂದರೆ ಕಾಣಿಸುತ್ತಿಲ್ಲ.

ಹಾಗೆಯೇ ಈ ಬದಲಾವಣೆಯನ್ನು ಮಾಡುವುದು ದೊಡ್ಡ ತಪ್ಪೆಂದು ಹಳೆ-ಶಾಲೆಯವರು ತಿಳಿಯುವುದೂ ಸರಿಯಲ್ಲ. ಈ ಬದಲಾವಣೆ ಜಾರಿಗೆ ಬಂದರೆ ಅದರಿಂದ ಯಾವ ಹೆಚ್ಚಿನ ತೊಂದರೆಯೂ ನಮಗೆ ಕಾಣುತ್ತಿಲ್ಲ. ಏಕೆಂದರೆ ಕನ್ನಡವು ಮತ್ತಷ್ಟು ಅಚ್ಚುಕಟ್ಟಾದರೆ ತಪ್ಪೇನಿಲ್ಲ. ಕೊರಿಯಾ ಮತ್ತು ಟರ್ಕೀಗಳಲ್ಲಿ ಕೇವಲ ಇನ್ನೂರು ವರ್ಷಗಳ ಹಿಂದೆ ಹೆಚ್ಚು-ಕಡಿಮೆ ಇಂಥದ್ದೇ ಒಂದು ಬರಹಕ್ಕೆ ಸಂಬಂಧಿಸಿದ ಬದಲಾವಣೆ ನಡೆದಿದ್ದು ಇವತ್ತಿನ ದಿನ ಅವರಿಗೆ ಈ ವಿಷಯದಲ್ಲಿ ಯಾವ ತೊಂದರೆಯೂ ಆಗುತ್ತಿಲ್ಲ. ಆ ಎರಡು ನಾಡುಗಳಲ್ಲೂ ಹಳೆಯ ಚೈನೀಸ್ ಮತ್ತು ಅರೇಬಿಕ್ ಬರಹವನ್ನೇ ಇಟ್ಟುಕೊಳ್ಳಬೇಕು ಎನ್ನುವವರಿದ್ದರು; ಈಗ ಯಾರೂ ಇಲ್ಲ. ಹಾಗೆ ನೋಡಿದರೆ ಇಲ್ಲಿ ಶಂಕರಭಟ್ಟರು ಸೂಚಿಸುವಂತೆ ಕೆಲವು ಅಕ್ಷರಗಳನ್ನು ಕೈಬಿಡುವ ಕೆಲಸ ಕೊರಿಯಾ ಮತ್ತು ಟರ್ಕೀಗಳು ಮಾಡಿದಷ್ಟೇನು ಕಷ್ಟದ ಕೆಲಸವೂ ಅಲ್ಲ; ಕೊರಿಯಾ ಹೊಸದೊಂದು ಲಿಪಿಯನ್ನೇ ಕಂಡುಹಿಡಿಯಿತು, ಟರ್ಕೀ ರೋಮನ್ ಅಕ್ಷರಗಳನ್ನು ಅಳವಡಿಸಿಕೊಂಡಿತು. ಕೈಬರಹದಲ್ಲಿ, ಮುದ್ರಣಯಂತ್ರಗಳಲ್ಲಿ ಇಲ್ಲವೇ ಗಣಕಯಂತ್ರಗಳಲ್ಲಿ ಹೊಸ ಬರವಣಿಗೆಯನ್ನು ಅಳವಡಿಸುವುದೂ ಕಷ್ಟವಲ್ಲ. ಹೌದು, ಕೆಲಕಾಲ ಇವತ್ತಿನ ಕನ್ನಡದ ಅನೇಕ ಹೊತ್ತಿಗೆಗಳನ್ನು ಓದಲು ತುಸು ಕಷ್ಟವಾಗುತ್ತದೆ. ಆದರೆ ಈ ರೀತಿಯ ಬದಲಾವಣೆ ಕನ್ನಡಕ್ಕೇನು ಹೊಸದಲ್ಲವಲ್ಲ? ಈ ಹಿಂದೆ ಹಳಗನ್ನಡದ ಕೆಲವು ಅಕ್ಷರಗಳನ್ನು ನಾವು ಬಿಟ್ಟುಬಿಟ್ಟಿಲ್ಲವೆ? ಅದರಿಂದ ಹಳಗನ್ನಡವನ್ನು ಅಧ್ಯಯನ ಮಾಡುವವರಿಗೆ ಏನೂ ತೊಂದರೆಯಾಗಿಲ್ಲವಲ್ಲ? ಅವರು ಆ ಅಕ್ಷರಗಳನ್ನು ಕಲಿತುಕೊಂಡರೆ ಸಾಕು. ಹಾಗೆಯೇ ಸಂಸ್ಕೃತದ ಗ್ರಂಥಗಳನ್ನು ಓದುವಾಗಲೂ ತೊಂದರೆಯಾಗಬಹುದು, ಸಂಸ್ಕೃತದ ಶ್ಲೋಕಗಳನ್ನು ಓದುವಾಗ ಛಂದೋಭಂಗವಾಗಬಹುದು. ಆದರೆ ಇದಾವುದೂ ಕನ್ನಡವನ್ನು ಬಳಸಬಯಸುವವರ ಸಮಸ್ಯೆಗಳಲ್ಲ; ಸಂಸ್ಕೃತವನ್ನು ಬಳಸಬಯಸುವವರ ತೊಂದರೆಗಳು. ಹಳಗನ್ನಡದ ವರ್ಣಮಾಲೆಯೇ ಹೇಗೆ ಬೇರೆಯಿದೆಯೋ ಹಾಗೆ ಸಂಸ್ಕೃತಕನ್ನಡಕ್ಕೂ ಒಂದು ವರ್ಣಮಾಲೆಯನ್ನು ಇಟ್ಟುಕೊಳ್ಳಬಹುದು. ಮತ್ತೂ ಏನೆಂದರೆ ಮೇಲೆ ನಾವು ಹೇಳಿರುವ ಎರಡು ತೊಂದರೆಗಳೂ ಹಳೆಯದನ್ನು ಓದಿ-ಬರೆಯುವಾಗ ತಲೆಯೆತ್ತುತ್ತವೆಯೇ ಹೊರತು ಹೊಸತನ್ನು ಮಾಡಹೊರಟಾಗಲ್ಲ. ಜುಟ್ಟಿಗೆ ಮಲ್ಲಿಗೆಹೂವಿನ ವಿಷಯದಲ್ಲಿ ತಲೆಯೆತ್ತುತ್ತವೆಯೇ ಹೊರತು ಹೊಟ್ಟೆಗೆ ಹಿಟ್ಟಿನ ವಿಷಯದಲ್ಲಲ್ಲ. ಕನ್ನಡಿಗರು ಸಿರಿವಂತರಾಗಬೇಕಾದರೆ ಕನ್ನಡದಲ್ಲಿ ಹೊಟ್ಟೆಗೆ ಹಿಟ್ಟಿನ ವಿದ್ಯೆಗಳು ಮೆರೆಯಬೇಕು; ಹಿಂದಿನವರು ಬರೆದಿಟ್ಟುಹೋದ ಅಧ್ಯಾತ್ಮ, ನಾಟಕ, ಕವಿತೆ, ಕಾದಂಬರಿಗಳಿಂದ ಹೊಟ್ಟೆಗೆ ಹಿಟ್ಟು ಗಿಟ್ಟುವುದಿಲ್ಲವಾದ್ದರಿಂದ ಅವುಗಳನ್ನು ಓದಲು/ಬರೆಯಲು ಬೇಕಾದ ಅಕ್ಷರಗಳೇನು ಒಂದು ಜನಾಂಗದ ಹೊಟ್ಟೆಗೆ ಹಿಟ್ಟನ್ನು ಗಿಟ್ಟಿಸುವ ವಿದ್ಯೆಗಳಿಗೆ ಬಹುಮುಖ್ಯವಾದವಲ್ಲ (ಹಾಗೆಂದ ಮಾತ್ರಕ್ಕೆ ಅವುಗಳನ್ನು ಗೌರವಿಸಬಾರದು ಎಂದೇನಿಲ್ಲ. ಆ ವಿದ್ಯೆಗಳಿಗೆ ತಮ್ಮದೇ ಆದ ಮೇಲ್ಮೆಯು ಇದ್ದೇ ಇದೆ).

ಮತ್ತೂ ಒಂದು ಮಾತು ನಿಜ: ಕನ್ನಡದಲ್ಲಿ ಆಡಿದಂತೆ ಬರೆಯುವ ಏರ್ಪಾಡಿದ್ದರೆ ಕಲಿಕೆ ಸುಲಭವಾಗುತ್ತದೆ ಎನ್ನುವುದೇನಾದರೂ ನಿಜವಾದರೆ ಅದೂ ಒಳ್ಳೆಯದೇ. ಹಾಗೆ ಸುಲಭವಾಗುತ್ತದೆಯೋ ಇಲ್ಲವೋ ಎಂದು ಶಿಕ್ಷಣತಜ್ಞರು ಹೇಳಬೇಕು. ಇಂಗ್ಲೀಷ್ ಮತ್ತು ಫ್ರೆಂಚ್ ಮುಂತಾದ ಭಾಷೆಗಳನ್ನಾಡುವವರ ಸಮಾಜಗಳಲ್ಲಿ ಭಾಷೆಗೆ ಸ್ಪೆಲ್ಲಿಂಗ್ ಸಮಸ್ಯೆಯಿದ್ದರೂ ಅದರಿಂದಾಗುವ ನಷ್ಟವನ್ನು ಪೂರೈಸಲು ಕನ್ನಡಿಗರಲ್ಲಿಲ್ಲದ ಬೇರೆಯೇನಾದರೂ ಏರ್ಪಾಡುಗಳಿವೆಯೆ? ಆ ಏರ್ಪಾಡುಗಳನ್ನು ಕರ್ನಾಟಕದಲ್ಲಿ ಮಾಡುವುದು ಬಹಳ ಕಷ್ಟವಾಗಿವೆಯೆ? ಹಾಗಾದರೆ ಸ್ಪೆಲ್ಲಿಂಗ್ ಸಮಸ್ಯೆಯೆಂಬ ಕೊರತೆಯನ್ನು ಕನ್ನಡದಲ್ಲಿ ಇಟ್ಟುಕೊಂಡು ಮುಂದುವರೆಯುವುದೇ ತಪ್ಪಾಗಬಹುದು. ಈ ವಿಷಯದಲ್ಲಿ ಆಳವಾಗಿ ಸಂಶೋಧನೆ ನಡೆಯಬೇಕು (ಹಂಪಿ ಕನ್ನಡ ವಿವಿ ಇದನ್ನು ಕೈಗೊಳ್ಳಬಹುದು). ಆಳವಾಗಿ ವಿಷಯವನ್ನು ಅರ್ಥಮಾಡಿಕೊಳ್ಳದೆ ಬದಲಾವಣೆಯನ್ನು ಮಾಡುವ ಇಲ್ಲವೇ ಹಳೆ-ಶಾಲೆಯವರಂತೆ ವಿರೋಧಿಸುವ ಅವಶ್ಯಕತೆಯಿಲ್ಲ.

ಸಂಸ್ಕೃತದಿಂದಲೇ ಕನ್ನಡಕ್ಕೆ ಅಂಗಾಂಗಗಳು ಬಂದಿಲ್ಲ, ಅವು ಮೊದಲಿಂದಲೇ ಕನ್ನಡದಲ್ಲಿ ಇವೆ!

ತಿರುಮಲೇಶರು ಕನ್ನಡದ ಅಂಗಾಂಗಗಳೆಂದರೆ ಸಂಸ್ಕೃತದ ಪದಗಳು, ಸಂಸ್ಕೃತದ ಅಕ್ಷರಗಳು, ಸಂಸ್ಕೃತದ ಪದಕಟ್ಟುವ ನಿಯಮಗಳು ಎಂದು ತಿಳಿದುಕೊಂಡಿರುವುದು ಅವರಿಗೆ ಕನ್ನಡದ ಸ್ವರೂಪದ ಅರಿವಿಲ್ಲದಿರುವುದನ್ನು ತೋರಿಸುತ್ತದೆ. ಕನ್ನಡಕ್ಕೆ ಸಂಸ್ಕೃತದಿಂದಲ್ಲದೆ ಕೈಕಾಲುಗಳೇ ಇರುವುದಿಲ್ಲ ಎಂದು ತಿಳಿದುಕೊಂಡಿರುವುದು ತಪ್ಪು. ಕನ್ನಡದಲ್ಲಿ ಸ್ವಂತವಾಗಿ ಕೈಕಾಲುಗಳು ಇವೆ, ಕಣ್ಣು ಬಿಟ್ಟು ನೋಡಬೇಕಷ್ಟೆ. ಆ ಕೈಕಾಲುಗಳನ್ನು ಇಲ್ಲ, ಇಲ್ಲ ಎಂದು ಜಪಿಸುತ್ತಿರುವವರಿಗೆ ಅವು ಇಲ್ಲವೆನಿಸಬಹುದಷ್ಟೆ. ಕನ್ನಡ ಸಂಸ್ಕೃತದಿಂದ ಹುಟ್ಟಿಬಂದ ಭಾಷೆಯೆಂದು ತಪ್ಪಾಗಿ ತಿಳಿದಿರುವವರಿಗೆ ಇಲ್ಲವೆನಿಸಬಹುದಷ್ಟೆ.

ಹಾಗೆಂದ ಮಾತ್ರಕ್ಕೆ ಕನ್ನಡಕ್ಕೆ ಇಲ್ಲದ ಗುಣವೇ ಇಲ್ಲವೆಂದೂ ನಾವು ಹೇಳುತ್ತಿಲ್ಲ. ಸಂಸ್ಕೃತದಲ್ಲೂ ಇಲ್ಲದ ಗುಣಗಳಿವೆ. ಸಂಸ್ಕೃತವು ಸರ್ವಗುಣಸಂಪನ್ನವು ಎಂದು ಕೆಲವರು ತಿಳಿದುಕೊಂಡಿರುವುದು ಸಂಸ್ಕೃತದಲ್ಲಿರುವ ಅಧ್ಯಾತ್ಮಿಕ ಸಾಹಿತ್ಯದ ಬಗೆಗಿನ ಗೌರವವು ಸಂಸ್ಕೃತಭಾಷೆಗೆ ತುಳುಕಿರುವುದರಿಂದ. ಇಂಗ್ಲೀಷ್ ಕೂಡ ಸರ್ವಗುಣಸಂಪನ್ನವು ಎಂದು ಕೆಲವರು ತಿಳಿದಿರುವುದು ಇಂಗ್ಲೀಷಿನಿಂದ ಹೆಚ್ಚಿನ ಅನ್ನ ಹುಟ್ಟುತ್ತದೆ ಎನ್ನುವುದರ ಕುರಿತಾದ ಗೌರವವು ಭಾಷೆಗೆ ತುಳುಕಿರುವುದರಿಂದ. ಇರಲಿ. ಒಟ್ಟಿನಲ್ಲಿ ಕನ್ನಡಕ್ಕೆ ಬೇರೆ ಭಾಷೆಗಳಿಂದ ಬರಬೇಕಾದ್ದು ಬಹಳ ಇದೆ. ಬರಬೇಕಾದ್ದೆಲ್ಲ ಸಂಸ್ಕೃತದಿಂದಲೇ ಬರಬೇಕು ಎನ್ನುವುದು ಬಾವಿಯ ಕಪ್ಪೆಯ ಮಾತಾದೀತು. ಕನ್ನಡಕ್ಕೆ ಇಂಗ್ಲೀಷಿನಿಂದಲೂ ಬರಬೇಕಾದ್ದಿದೆ, ಜಪಾನೀಸಿನಿಂದಲೂ ಬರಬೇಕಾದ್ದಿದೆ, ಜರ್ಮನ್-ನಿಂದಲೂ ಬರಬೇಕಾದ್ದಿದೆ, ಮತ್ತೊಂದರಿಂದಲೂ ಬರಬೇಕಾದ್ದಿದೆ. ಸಂಸ್ಕೃತವೊಂದರಿಂದಲೇ ಆಮದುಮಾಡಿಕೊಂಡರೆ ಕನ್ನಡವು ಜಾಗತಿಕ ಮಟ್ಟಕ್ಕೆ ಏರಿದಂತೆಯೂ ಆಗುವುದಿಲ್ಲ. ಹಾಗೆ ಏರಲು ಪ್ರಪಂಚದ ಅನೇಕ ಪ್ರಮುಖ ಭಾಷೆಗಳಿಂದ ಆಮದುಮಾಡಿಕೊಳ್ಳಬೇಕು ಎನ್ನುವುದನ್ನು ತಿಳುವಳಿಕಸ್ತರು ಅರಿಯದೆ ಹೋಗರು.

ಏನೇ ಇರಲಿ, ಕನ್ನಡಕ್ಕೆ ಎಲ್ಲೆಲ್ಲಿಂದ ಏನೇನು ಬರಬೇಕೋ ಅದೆಲ್ಲವೂ ಸೇರಿ ಬೇಕಾದ ಅಂಗಾಂಗಗಳಲ್ಲಿ ಶೇ.೨೦ರಷ್ಟನ್ನು ಮಾತ್ರ ಪೂರೈಸಬಲ್ಲದು. ಮಿಕ್ಕ ಶೇ.೮೦ ಕನ್ನಡದಿಂದಲೇ ಬರಬೇಕು, ಈ ಮಣ್ಣಿನಿಂದಲೇ ಬರಬೇಕು, ಈ ಜನಾಂಗದಿಂದಲೇ ಬರಬೇಕು ಮತ್ತು ಬಂದೂ ಬರುತ್ತದೆ, ಎಕೆಂದರೆ ಅದೆಲ್ಲವೂ ನಮ್ಮ ನುಡಿಯಲ್ಲಿ ಅಡಗಿದೆ. ಇದಕೆ ಸಂಶಯವೆ? ಈ ದಿಟವನ್ನು ಕಾಣದವರಿಗೆ ಈ ಶೇ.೮೦ ಕೂಡ ಕನ್ನಡದ ಒಳಗಿನಿಂದ ಬರಲಾರದು ಎಂಬ ಹುಸಿನಂಬಿಕೆಯಿರುತ್ತದೆ. ಅದೂ ಸಂಸ್ಕೃತದಿಂದ ಬರಬೇಕು ಎಂದು ತಿಳಿದುಕೊಳ್ಳುವುದು ಪೆದ್ದತನವೇ ಸರಿ. ಈ ಶೇ.೮೦ರನ್ನು ಪೂರೈಸುವ ಕನ್ನಡದ ಒಳಗಿನ ಶಕ್ತಿಯನ್ನು ಬಳಸಿಕೊಳ್ಳಬೇಕಾದರೆ ನಾವು ಕನ್ನಡವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎನ್ನುವುದರಲ್ಲಿ ಸಂದೇಹವಿಲ್ಲ. ಕನ್ನಡದ ನಿಜವಾದ ಸ್ವರೂಪವೇನು? ಕನ್ನಡದ ನಿಜವಾದ ವ್ಯಾಕರಣವೇನು? ಕನ್ನಡಕ್ಕೂ ಸಂಸ್ಕೃತಕ್ಕೂ ನಿಜಕ್ಕೂ ಯಾವ ಸಂಬಂಧವಿದೆ? ಇವುಗಳನ್ನೆಲ್ಲ ಸರಿಯಾಗಿ ಅರಿತುಕೊಳ್ಳುವುದು ಬಹುಮುಖ್ಯ. ಕನ್ನಡವೆಂಬ ಚಿನ್ನದ ಗಣಿಯೊಳಗೆ ಅಡಗಿರುವ ಮುತ್ತು-ರತ್ನಗಳನ್ನು ಬೆಳಕಿಗೆ ತರುವ ಕೆಲಸವಾಗಬೇಕಿದೆ. ಈ ಗಣಿಯ ಮೇಲೆ ಕೂತಿರುವ ಕಸ-ಕಡ್ಡಿ-ಮಣ್ಣು-ಕಲ್ಲುಗಳನ್ನು ಅಗೆದು ಪಕ್ಕಕ್ಕೆ ಎಸೆಯಬೇಕಿದೆ. ಇದನ್ನು ಮಾಡಿದಾಗಲೇ ಕಾಲದ ಬಸಿರಿನಲ್ಲಿ ಇಂದು ಭ್ರೂಣಾವಸ್ಥೆಯಲ್ಲಿರುವ ಕನ್ನಡದ ಕೂಸಿನಲ್ಲಿರುವ ಅಂಗಾಂಗಗಳು ಬೆಳಕಿಗೆ ಬರುವುದು. ಇದನ್ನು ಮಾಡಿದಾಗಲೇ ಐದೂವರೆಕೋಟಿ ಕನ್ನಡಿಗರೆಲ್ಲರು ಆಡುವ ಭಾಷೆಯ ಸೊಗಡು ಮತ್ತು ಶಕ್ತಿ ಹೊರಬರುವುದು, ಲಾಭದಾಯಕವಾಗಿ ಬಳಸಲಾಗುವುದು. ಇದನ್ನು ಮಾಡಿದಾಗಲೇ ಉಬ್ಬುಕನ್ನಡಿ, ತಗ್ಗುಕನ್ನಡಿ ಮುಂತಾದ ಹೊಸ ಪದಗಳು ಕನ್ನಡದಲ್ಲಿ ಹುಟ್ಟುವುದು. ಇಲ್ಲದಿದ್ದರೆ ಅರ್ಥವಾಗದ ನಿಮ್ನದರ್ಪಣ, ಪೀನದರ್ಪಣ ಮುಂತಾದವುಗಳೊಡನೆ ಏಗಿ ಏಗಿ ಕನ್ನಡಿಗರು ಸುಸ್ತಾಗಿ ಕೂರಬೇಕಾಗುತ್ತದೆ. ಕನ್ನಡದ ಶೇ.೮೦ರಷ್ಟು ಅಂಗಾಂಗಗಳನ್ನು ಕನ್ನಡದಲ್ಲೇ ಹುಡುಕುವುದು ಕನ್ನಡಿಗರನ್ನು ಮತ್ತಷ್ಟು ಅವಕಾಶವಂಚಿತರಾಗಿಸಿದಂತೆ ಎಂದುಕೊಳ್ಳುವುದು ಚಿಂತನೆಯ ದೋಷವಾದೀತು, ಹೇಡಿತನವಾದೀತು, ಅಭಿಮಾನದ ಕೊರತೆಯಾದೀತು, ಪೆದ್ದತನವಾದೀತು.

ಕನ್ನಡದ ಏಳಿಗೆಗೆ ನಾವು ಮೇಲೆ ತೋರಿಸಿಕೊಟ್ಟಿರುವ ದಾರಿಯು ಪ್ರಪಂಚದಲ್ಲಿ ಹೊಸದೇನಲ್ಲ. ತಿರುಮಲೇಶ್ ಅವರು ಉದಾಹರಿಸಿರುವ ಯಹೂದ್ಯರ ಭಾಷೆಯಾದ ಹೀಬ್ರೂನ ಏಳಿಗೆಯ ಕತೆಯನ್ನು ಬಲ್ಲವರಿಗಿದು ಬಹಳ ಚೆನ್ನಾಗಿ ಗೊತ್ತು. ಯಹೂದ್ಯರ ಈ ಮುಖ್ಯವಾದ ಕತೆಯನ್ನು ಓದುಗರು ಒಮ್ಮೆ ಓದಬೇಕು.

ಭೂಸೇನೆಗೆ ಕನ್ನಡ ನಾಲಾಯಕ್ಕಂತೆ!

"ಬೇರೆ ಬೇರೆ ಭಾಷೆಗಳಿರೋ ಭಾರತಾನ ಒಂದು ಮಾಡಕ್ಕೆ ಸಾಮಾನ್ಯವಾದ ಒಂದು ಭಾಷೆ ಬೇಕೇ ಬೇಕು, ಇಲ್ದಿದ್ರೆ ಇದು ಒಡೆದು ಹೋಗುತ್ತೆ" ಅಂತನ್ನೋ ಸುಳ್ಳುನ್ನ ನಂಬುದ್ರೆ ಎಂಥಾ ಅಪಾಯ ಕಾದಿದೆ ಅನ್ನೋದಕ್ಕೆ ಸಾಕ್ಷಿಯಾಗಿರೋ ಒಂದು ಘಟನೆ ಮೊನ್ನೆ ಮೊನ್ನೆ ಹಾಸನದಲ್ಲಿ ನಡೆದಿದೆ ಅಂತಾ ೧೩ನೇ ತಾರೀಕಿನ ವಿಜಯಕರ್ನಾಟಕದ ಐದನೇ ಪುಟದಲ್ಲೊಂದು ಸುದ್ದಿ ಬಂದಿದೆ ಗುರು! ಭೂಸೇನಾ ನಿಗಮದೋರು ನೇಮಕಾತಿ ಮಾಡ್ಕೊಳ್ಳಕ್ಕೆ ಅಂತಾ ಹಾಸನದಲ್ಲಿ ಒಂದು ಸಂದರ್ಶನಕ್ಕೆ ಕರೆದಿದ್ದಾರೆ. ನೇಮಕಾತಿ ಆಗೋ ಆಸೆಯಿಂದ ನಾಡಿನ ಮೂಲೆ ಮೂಲೆಯಲ್ಲಿರೋ ಯುವಕರುಗಳು ತಮ್ಮ ತಮ್ಮ ಓದಿನ, ಹುಟ್ಟಿನ, ಜಾತಿಯ ಇತ್ಯಾದಿ ಪ್ರಮಾಣಪತ್ರಗಳನ್ನು ಕೈಲಿ ಹಿಡ್ಕೊಂಡು ಈ ಸಂದರ್ಶನಕ್ಕೆ ಬಂದಿದಾರೆ. ಆದ್ರೆ ಇದನ್ನು ಆ ಅಧಿಕಾರಿಗಳು ಒಪ್ಕೊತಾ ಇಲ್ಲ. ಯಾಕಪ್ಪಾ ಅಂತೀರೇನು?

ಕನ್ನಡದಲ್ಲಿ ಪ್ರಮಾಣ ಪತ್ರ!

"ಏನಿದು ಅನ್ಯಾಯ? ಇವರ ಬಹಳ ಮುಖ್ಯವಾದ ಅನೇಕ ಪ್ರಮಾಣಪತ್ರಗಳು ಕನ್ನಡದಲ್ಲಿವೆ. ಭಾರತದ ಮೂಲೆ ಮೂಲೆಗಳಲ್ಲಿರೋ ಅನೇಕಾನೇಕ ಭಾಷೆ ಮಾತಾಡೊ ಜನರು ಕೆಲಸ ಮಾಡಬೇಕಾದ ಇಲಾಖೆಗೆ ಜುಜುಬಿ ಲೋಕಲ್ ಭಾಷೆಯಲ್ಲಿರೋ ಪ್ರಮಾಣ ಪತ್ರ ಸಲ್ಲಿಸಿದ್ರೆ ಹೇಗೆ? ಭಾರತ ದೇಶದ ಅಧಿಕೃತ ಆಡಳಿತ ಭಾಷೆಯಾಗಿ ಹಿಂದಿ ಎಂಬ ದೇವತೆಯನ್ನು ಪ್ರತಿಷ್ಠಾಪಿಸಿರುವಾಗ ಇದೆಲ್ಲಿ ಕನ್ನಡದ ದೆವ್ವ ಇವರ ಪ್ರಮಾಣಪತ್ರದಲ್ಲಿ ಹೊಕ್ಕಿಕೊಂಡಿದೆ? ಅನ್ಯಾಯ... ಅನ್ಯಾಯ... ಹಿಂದುಸ್ತಾನದಲ್ಲಿರಲು ಈ ಮುಂಡೇಮಕ್ಕಳು ಲಾಯಕ್ಕಿಲ್ಲ. ಭಾರತೀಯ ಸರ್ಕಾರದ ಸೇವೆಯಲ್ಲಿರಲು ಈ ಬಡ್ಡಿಹೈಕಳು ಯೋಗ್ಯರಲ್ಲ. ಇವರನ್ನೆಲ್ಲಾ ವಾಪಸ್ ಕಳಿಸಿಬಿಡೋಣ" ಅಂತ ಭೂಸೇನಾ ಅಧಿಕಾರಿಗಳು ಅಂದುಕೊಂಡ್ರೋ ಏನೋ... ಒಟ್ನಲ್ಲಿ ಕನ್ನಡದಲ್ಲಿ ಪ್ರಮಾಣ ಪತ್ರ ತಂದವರನ್ನೆಲ್ಲಾ "ಥೂ, ಮುಂಡೇವಾ, ದೂರದಲ್ಲಿ ಆ... ಮೂಲೇಲಿ ಕೂತ್ಕೊಳಿ" ಅಂತ ದೂರದ ಮೂಲೆಗಟ್ಟಿದ್ದು ಮಾತ್ರಾ ಸುಳ್ಳಲ್ಲ ಗುರು!

ನಿಮ್ಮದು ನಿಮಗೇ ಕೀಳು ಅನ್ನಿಸಬೇಕು!

"ಹೌದು, ನಮ್ಮ ಪೆದ್ದು ಕರ್ನಾಟಕ ಸರ್ಕಾರಕ್ಕೆ ಅಷ್ಟೂ ಗೊತಾಗೋದು ಬ್ಯಾಡವಾ? ಎಲ್ಲ ಪ್ರಮಾಣಪತ್ರಗಳನ್ನು ಇಂಗ್ಲಿಷೂ, ಹಿಂದಿ ಭಾಷೇಲಿ ಕೊಡದಿದ್ರೆ, ಪಾ...ಪಾ, ಕೇಂದ್ರ ಸರ್ಕಾರದೋರು ಹ್ಯಾಗೆ ಅರ್ಥ ಮಾಡ್ಕೊತಾರೆ? ಎಲ್ಲಾ ರಾಜ್ಯದೋರೂ ಅವರವರ ಭಾಷೇಲೇ ಪ್ರಮಾಣ ಪತ್ರ ಕೊಟ್ರೆ, ಅದು ಹೇಗೆ ದೇಶದ ಉಳಿದವರಿಗೆ ಅರ್ಥ ಆಗುತ್ತೆ? ಭಾರತದ ಒಗ್ಗಟ್ಟು ಅದೇಗೆ ಉಳ್ಯುತ್ತೆ?" ಅಂತ ಈ ಕುರಿಗಳು ಬಯ್ಕೊಂಡು ಎದ್ದು ಹೋಗ್ತಾವೆ ಅಂದ್ಕೊಂಡ್ರು ಅನ್ಸುತ್ತೆ ಗುರು! ಆದ್ರೆ ಸುಮಾರು ಜನ ಕನ್ನಡಕ್ಕೆ ಬೆಲೆ ಕೊಡದೆ ಇರೋದನ್ನು ಪ್ರತಿಭಟಿಸಿ ಅಲ್ಲೇ ಕೂತರು. ಕಡೆಗೆ ಅದ್ಯಾರಿಗೆ ಹೆದರಿಕೊಂಡ್ರೋ ಏನೋ ಗೊತ್ತಿಲ್ಲ. ಅಂತೂ ಇಂತು ಕನ್ನಡದ ಪ್ರಮಾಣ ಪತ್ರಾನು ಇಸ್ಕೋತೀವಿ ಅಂತ ಭೂಸೇನಾ ಅಧಿಕಾರಿಗಳು ಅನ್ನೋ ಹೊತ್ತಿಗೆ ಅಲ್ಲಿಗೆ ಬಂದಿದ್ದೋರಲ್ಲಿ ಸಾಕಷ್ಟು ಜನರು ಮನೆಗೆ ಹೋಗಾಗಿತ್ತು! ಹಾಂ, ಈಗ ನೋಡ್ರಪ್ಪಾ ಸರಿಹೋಯ್ತು. ಇನ್ನು ಆ ಹುದ್ದೆಗಳಲ್ಲಿ ಹಿಂದಿನಲ್ಲೋ, ಇಂಗ್ಲಿಷಲ್ಲೋ ಪ್ರಮಾಣಪತ್ರ ತರೋ ಅಂತಾ ಉತ್ತರದೋರನ್ನು, ಬಿಹಾರಿಗಳನ್ನು ನೇಮಕ ಮಾಡ್ಕೋಬಹುದು ಅಂತಾ ಅಲ್ಲಿರೋ ಅಧಿಕಾರಿಗಳೂ ಒಳಗೊಳಗೇ ನಿಟ್ಟುಸಿರು ಬಿಟ್ರು ಅನ್ಸುತ್ತೆ! ಹೀಗೆ ನೀವು ಕನ್ನಡನಾಡಲ್ಲಿರೋ ರೈಲು, ಬ್ಯಾಂಕು, ಪೋಸ್ಟ್ ಆಫೀಸು, ಪಾಸ್ ಪೋರ್ಟ್ ಆಫೀಸು... ಎಲ್ಲೇ ಹೋದ್ರೂ ಕನ್ನಡಕ್ಕೆ ಕಿಮ್ಮತ್ತಿಲ್ಲ ಅನ್ಸಕ್ಕೆ ಶುರು ಮಾಡ್ಸುದ್ರೆ ಆಯ್ತಲ್ಲ. ಒಟ್ನಲ್ಲಿ ಇದು ಕನ್ನಡದವರ ತಲೇಲೇ ’ಹೌದು, ಕನ್ನಡ ಲೋಕಲ್ಲು. ಕನ್ನಡ ಭಾಷೇಗೆ ಭಾರತದ ಮಟ್ಟದಲ್ಲಿ ಉಪಯೋಗಕ್ಕೆ ಬರೋ ಯೋಗ್ಯತೆಯಿಲ್ಲ. ಇದನ್ನೇನಿದ್ರೂ ಮನೆ ಒಳಗೆ ಮಾತಾಡಕ್ಕೆ ಬಳುಸ್ಬೇಕು’ ಅನ್ನೋ ಕೀಳರಿಮೆಯ ಹುಳಾ ಬಿಡೋ ಹುನ್ನಾರ ಗುರು!

ರೈಲ್ವೇ ನೇಮಕಾತಿ: ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ

ಸನ್ಮಾನ್ಯ ಮುಖ್ಯಮಂತ್ರಿಗಳೇ, ನಾಡಿನ ಎಲ್ಲ ಕನ್ನಡಿಗರ ಪರವಾಗಿ ನಿಮಗೆ ನಮ್ಮ ನಮಸ್ಕಾರಗಳು. ಕರ್ನಾಟಕವೆಂಬ ನಮ್ಮೀ ಮನೆಯ ಯಜಮಾನ್ರು ನೀವು. ಈ ಮನೆಯ ಮಕ್ಕಳ ಯೋಗಕ್ಷೇಮದ ಹೊಣೆಗಾರಿಕೆ ನಿಮ್ದು. ಪ್ರಜೆಗಳ ಪಾಲಿನ ತಂದೆಯಾಗಿ ತಾವು ನಮ್ಮ ಬದುಕುವ ಹಕ್ಕನ್ನು ಉಳಿಸಿಕೊಡಬೇಕಾದದ್ದು ನಿಮ್ಮ ಮೊದಲ ಕರ್ತವ್ಯ ಮತ್ತು ನಿಮ್ಮ ಅಸ್ತಿತ್ವದ ಪರಮೋದ್ದೇಶ.

ಟಾಟಾ ಬರಲಿ ಎಂದು ಶ್ರಮಿಸಿದ್ದು ಯಾಕೆ?

ಮೊನ್ನೆ ಮೊನ್ನೆ ಟಾಟಾ ಸಂಸ್ಥೆಯ ನ್ಯಾನೋ ಕಾರು ತಯಾರಿಕಾ ಘಟಕ ಕರ್ನಾಟಕಕ್ಕೆ ಬರಲಿ ಅಂತ ತಾವೂ ತಮ್ಮ ಸರ್ಕಾರದೋರೂ ಅದೆಷ್ಟು ಪ್ರಯತ್ನ ಪಟ್ರಿ. ಟಾಟಾ ಸಂಸ್ಥೆಯ ಅಧಿಕಾರಿಗಳಿಗೆ ನೀವು ಕೊಟ್ಟ ಮರ್ಯಾದೆ ಎಷ್ಟು? ನೀವು ಆ ಸಂಸ್ಥೆಗೆ ಏನೆಲ್ಲಾ ರಿಯಾಯ್ತಿ, ಸೌಕರ್ಯಗಳನ್ನು ಕೊಡಕ್ಕೆ ಮುಂದಾಗಿದ್ರಿ ಅನ್ನೋದನ್ನು ಒಂದು ಸಾರ್ತಿ ನೆನಪು ಮಾಡಿಕೊಟ್ಟು ಮುಂದಿನ ಮಾತಾಡೋಣ. ಮಹಾಸ್ವಾಮಿಗಳೇ, ಯಾಕೆ ನೀವು ಟಾಟಾ ಕಾರ್ಖಾನೆ ಬರ್ಲಿ ಅಂತ ಇಷ್ಟೊಂದು ಪ್ರಯತ್ನ ಪಟ್ರಿ? ಸರ್ಕಾರಕ್ಕೆ ತೆರಿಗೆ ಬರುತ್ತೇ ಅಂತಲಾ? ಹಾಗಿದ್ದಿದ್ರೆ ತೆರಿಗೆ ರಜೆ ಕೊಡ್ತೀವಿ ಅಂತಿರಲಿಲ್ಲಾ ಅಲ್ವಾ? ಹಾಗಾದ್ರೆ ಮತ್ಯಾಕೆ ಯಜಮಾನ್ರೇ, ಟಾಟಾ ಬರಲಿ ಅಂತ ಶತ ಪ್ರಯತ್ನ ಮಾಡುದ್ರಿ? ನಮ್ಮ ಜನರಿಗೆ ಕೆಲಸ ಸಿಗುತ್ತೆ ಅಂತ್ಲಾ? ಹೌದು ತಾನೆ? ನಮ್ಮ ನಾಡಿನ ಏಳಿಗೆಗೆ ಉದ್ದಿಮೆಗಾರಿಕೆ ಮತ್ತದು ಸೃಷ್ಟಿ ಮಾಡೋ ಕೆಲಸಗಳೇ ದಾರಿ ಅನ್ನೋ ಸತ್ಯ ತಮಗೆ ಮನವರಿಕೆ ಆಗಿಯೇ ಇದೆ ಅನ್ನೋದು ನಮ್ಮ ನಂಬಿಕೆ.

ಅಂಗೈಲಿರೋ ಬೆಣ್ಣೆ : ರೈಲ್ವೇಯ ’ಡಿ’ ಗುಂಪಿನ ಹುದ್ದೆಗಳು

ಇದೀಗ ತಡೆ ಹಿಡಿದಿದ್ದ ನೈಋತ್ಯ ವಲಯದ ರೇಲ್ವೆಯಲ್ಲಿ ’ಡಿ’ ಗುಂಪಿನ ಹುದ್ದೆಗಳಿಗೆ ನೇಮಕಾತಿ ಮತ್ತೆ ಶುರು ಮಾಡ್ತಿದಾರಲ್ಲಾ? ಈ ಕೆಲಸಗಳು ಕನ್ನಡಿಗರಿಗೆ ಸಿಗಬಾರದೆಂದು ರೇಲ್ವೆಯವರು ಹುನ್ನಾರ ನಡೆಸಿರಬಹುದು ಎಂಬ ಅನುಮಾನ ನಿಮಗೆಂದೂ ಬಂದಿಲ್ವಾ? ಅಥ್ವಾ ಬಂದಿದ್ರೂ ಸುಮ್ಮನಿದ್ದೀರಾ? ಒಟ್ಟಾರೆ ಆ ಕೆಲಸಗಳು ಕನ್ನಡದೋರಿಗೇ ಸಿಗೋ ಹಾಗೆ ಕ್ರಮ ತೊಗೊಳ್ಳೋ ಮನಸ್ಸು ಮಾಡ್ತೀರಾ? ಧಣಿಗಳೇ, ಹತ್ತು ಸಾವಿರ ಕೆಲಸ ಹುಟ್ಟುತ್ತೆ ಅಂತಾ ಟಾಟಾದವರಿಗೆ ಅಷ್ಟೆಲ್ಲಾ ಸೌಕರ್ಯ ಕೊಡಕ್ಕೆ ಮುಂದಾದ ನೀವು, 4701 ಹುದ್ದೆಗಳು ನಾಡಿಗರಿಗೆ ಸಿಗಲೀ ಅಂತ ಏನೇನು ಕ್ರಮಕ್ಕೆ ಮುಂದಾಗ್ತೀರಾ? ಹೇಳಿ. ಉತ್ತರ ಕರ್ನಾಟಕದ ಏಳಿಗೆಗಾಗಿ ನೂರಾರು ಯೋಜನೆಗಳನ್ನು ಕೈಗೊಳ್ಳಲು ಮುಂದಾಗ್ತೀವಿ ಅನ್ನುವ ನೀವು ಈ ಅಂಗೈಯಲ್ಲಿನ ಬೆಣ್ಣೆಯನ್ನು ಕಡೆಗಣಿಸೋದನ್ನು ಹೇಗೆ ಸಹಿಸೋದು? ನಿಮ್ಮ ಕಾಳಜಿ ನಿಜವಾದುದು ಅಂತ ಸಾಧಿಸಲಾದರೂ ನೀವು ಮಾತಾಡಬೇಕಿದೆ ಯಡ್ಯೂರಪ್ಪನವರೇ...

ನೈಋತ್ಯ ರೈಲ್ವೇ ಹುದ್ದೆಗಳು ನಮ್ಮ ಅಗತ್ಯ!

ಈ ನಾಡಿನಲ್ಲೇ ತನ್ನ ಕಾರ್ಯಬಾಹುಳ್ಯ ಹೊಂದಿರೋ ನೈಋತ್ಯ ರೇಲ್ವೇಯಲ್ಲಿ 4701 ಡಿ ಗುಂಪಿನ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಬೇಕಿರೋ ಅರ್ಹತೆ ಎಂಟನೇ ತರಗತಿ ಓದು. ಡಿ ಗುಂಪಿನ ನೌಕರಿ ಅಂದ್ರೆ ಕಲಾಸಿ, ಗ್ಯಾಂಗ್ ಮ್ಯಾನ್, ಟ್ರ್ಯಾಕ್ ಮ್ಯಾನ್, ಪ್ಲಾಟ್ ಫಾರ್ಮ್ ಪೋರ್ಟರ್, ಪಾರ್ಸಲ್ ಪೋರ್ಟರ್ ಮತ್ತು ಸಫಾಯಿವಾಲಾ ಅನ್ನೋದು ರೈಲ್ವೇಯವರ ವಿವರಣೆ. ಈ ಕೆಲಸ ಮಾಡಲು ಯೋಗ್ಯತೆ ಇರೋ 4701 ನಿರುದ್ಯೋಗಿ ಯುವಕರು ಕನ್ನಡನಾಡಲ್ಲಿ ಸಿಗಲಾರರಾ? ನಮ್ಮ ನಾಡಲ್ಲೇ ಇರೋ ಈ ಹುದ್ದೆಗಳಿಗೆ ಅರ್ಜಿ ಬರೀಬೇಕಾದರೆ ಇಂಗ್ಲಿಷು ಅಥವಾ ಹಿಂದಿಯಲ್ಲಿ ಮಾತ್ರಾ ಬರಿಯಬೇಕು ಅನ್ನೋ ನಿಬಂಧನೆಯನ್ನು ರೈಲ್ವೇ ಇಲಾಖೆ ಹಾಕಿರುವುದರ ಉದ್ದೇಶವೇನಿರಬಹುದು? ಇದರ ಪರಿಣಾಮಗಳೇನು? ಅನ್ನುವುದರ ಬಗ್ಗೆ ಸ್ವಲ್ಪ ವಿಚಾರ ಮಾಡ್ತೀರಾ ತಂದೇ...

ಜನ್ರಿಗಾಗಿ ವ್ಯವಸ್ಥೆ ಇರೋದು ಸರಿಯಲ್ವಾ?

ಇಂತಹ ಕೆಳ ಹಂತದ ಕೆಲಸಗಳಿಗೂ ಕನ್ನಡಿಗರನ್ನು ಹಿಂದಿ ಬಾರದ ಕಾರಣಕ್ಕೆ ಅನರ್ಹರನ್ನಾಗಿಸೋದು ಕ್ರೌರ್ಯ ಅನ್ನಿಸೋಲ್ವಾ ನಿಮಗೆ? "ಇದು ಭಾರತ ಸರ್ಕಾರದ ಸೇವೆ, ಭಾರತದ ಸಂವಿಧಾನದ ಪ್ರಕಾರ ಯಾರು ಎಲ್ಲಿಗಾದರೂ ಕೆಲಸಕ್ಕೆ ಅರ್ಜಿ ಹಾಕಬಹುದು" ಅಂತಾ ಬಿಹಾರಿ, ಉತ್ತರ ಪ್ರದೇಶಗಳ ಅಭ್ಯರ್ಥಿಗಳಿಗೆ ಅವಕಾಶ ಕೊಡೋದ್ನ ಒಂದೆಡೆ ಒಪ್ತಾ," ಹಿಂದಿ-ಇಂಗ್ಲಿಷು ಭಾರತದ ಅಧಿಕೃತ ಆಡಳಿತ ಭಾಷೆಗಳು, ಆದ್ದರಿಂದ ಹಿಂದಿಯಲ್ಲಿ ಅರ್ಜಿ ಬರೀರಿ ಅನ್ನೋದು ಸರಿ" ಅಂತಾ ಇನ್ನೊಂದೆಡೆ ಒಪ್ತಾ ನಮ್ಮ ನಾಡಿನ ಮಕ್ಕಳಿಗೆ ಅನ್ಯಾಯ ಆಗ್ತಿರೋದನ್ನು ಸಹಿಸೋದು ಸರೀನಾ ಸ್ವಾಮಿ? ಎಂಟನೇ ತರಗತಿ ಓದಿರೋ ಅಭ್ಯರ್ಥಿಗೆ ತನ್ನದಲ್ಲದ ಒಂದು ನುಡಿಯಲ್ಲಿ ಅರ್ಜಿ ಬರೆಯುವಷ್ಟು ಪ್ರಾವೀಣ್ಯತೆ ಇರಲು ಸಾಧ್ಯವೇ? ವ್ಯವಸ್ಥೆ ಹಾಗಿದೇ ಅಂದರೆ ಬದಲಾಯಿಸಿ...ಇಡೀ ಪ್ರಜಾಪ್ರಭುತ್ವ, ಸಂವಿಧಾನ, ಆಡಳಿತ ವ್ಯವಸ್ಥೆಗಳೆಲ್ಲಾ ಇರುವುದೂ, ಇರಬೇಕಾದ್ದೂ ಪ್ರಜೆಗಳ ಹಿತ ಕಾಪಾಡಲು ಅಲ್ಲವೇನು? ಇರುವ ವ್ಯವಸ್ಥೆ ನಾಡಿನ ಜನರ ಹಿತ ಕಾಪಾಡಲು ವಿಫಲವಾಗುತ್ತಿರುವುದು ಕಣ್ಣಿಗೆ ರಾಚುತ್ತಿದ್ದಾಗಲೂ ಅಂತಹ ವ್ಯವಸ್ಥೆಯನ್ನು ಬದಲಾಯಿಸಲು ಮನೆ ಯಜಮಾನರಾದ ತಾವು ಯಾವ ಕ್ರಮ ತೊಗೋತೀರಿ ದೊರೆಗಳೇ? ಕನ್ನಡಿಗರು ಕೂಡಾ ಭಾರತೀಯರು ತಾನೇ? ಹಿಂದಿ ಕಲಿತಿಲ್ಲ ಅನ್ನೋ ಕಾರಣಕ್ಕೆ ನಿಮಗೆ ಉದ್ಯೋಗ ಇಲ್ಲ ಅನ್ನೋದನ್ನು ಹೇಗೆ ಒಪ್ತೀರಿ ಧಣಿಗಳೇ? ನಮ್ಮ ಮನೆಯ ಮಕ್ಕಳನ್ನು ಉಪವಾಸ ಕೆಡವಿ ನೆರೆಯವರನ್ನು ಪೊರೆಯೋದು ಸರೀನಾ ಗುರುಗಳೇ?

ಸ್ವಲ್ಪ ರಾಜಕೀಯ ಇಚ್ಛಾಶಕ್ತಿ ತೋರಿಸಿ ಧಣಿ!

ಧಣಿಗಳೇ, ಇದೊಂದು ಉದಾಹರಣೆ ನೋಡಿ. ಭಾರತಕ್ಕೆ ನೇರವಾಗಿ ಹಿಡಿತವೇ ಇಲ್ಲದ ಶ್ರೀಲಂಕಾದಲ್ಲಿ ತಮಿಳರ ಮೇಲೆ ಅಲ್ಲಿನ ಸೈನ್ಯ ಯುದ್ಧಕ್ಕೆ ಮುಂದಾದರೆ ’ಭಾರತ ಮಧ್ಯ ಪ್ರವೇಶಿಸಿ ಅವರನ್ನು ಕಾಪಾಡಬೇಕು, ಇಲ್ಲದಿದ್ರೆ ನಾವು ರಾಜಿನಾಮೆ ಬಿಸಾಕ್ತೀವಿ’ ಅನ್ನೋ ತಮಿಳುನಾಡಿನ ಸಂಸದರ ರಾಜಕೀಯ ಇಚ್ಛಾಶಕ್ತಿಯನ್ನು (ಇದು ಸರೀನಾ? ತಪ್ಪಾ? ಅನ್ನೋದು ಇಲ್ಲಿ ಅಪ್ರಸ್ತುತ) ನೋಡಿದ ಮೇಲೂ ನಾವು ಕನ್ನಡಿಗರು ಕಲ್ಯದು ಏನಾರಾ ಇದೆ ಅನ್ನುಸ್ತಿಲ್ವಾ ಯಜಮಾನ್ರೆ? ನೀವೂ ಕಡೇಪಕ್ಷ ಕನ್ನಡನಾಡಲ್ಲಿರೋ ಕನ್ನಡಿಗರಿಗೆ ಕರ್ನಾಟಕದಲ್ಲಿ ಅನ್ಯಾಯ ಆಗದ ಹಾಗೇ ತಡೆಯಕ್ಕೆ ಆಗಲ್ವಾ? ಕೈಗೆಟುಕೋ ಹಣ್ಣಿನಂತಿರೋ ರೈಲ್ವೇಯಲ್ಲಿನ ಈ ಹುದ್ದೆಗಳು ಕನ್ನಡಿಗರಿಗೆ ಸಿಗುವಂತೆ ಮಾಡಲು ನಿಮಗೆ ಅಸಾಧ್ಯ ಅನ್ನಿಸುತ್ತಿದೆಯೇ? ಕರ್ನಾಟಕದ ಅಷ್ಟೂ ಸಂಸದರನ್ನು ಈ ಬಗ್ಗೆ ದನಿಯೆತ್ತುವಂತೆ ಮಾಡಲು ನಿಮಗೆ ಅಸಾಧ್ಯವೇ? ಇಂದು ನೀವು ಈ ಹುದ್ದೆಗಳನ್ನು ಕನ್ನಡಿಗರಿಗೆ ದಕ್ಕಿಸಿಕೊಟ್ಟಿದ್ದೇ ಆದರೆ ಈ ನಾಡಿನ ಸಾವಿರಾರು ನಿರುದ್ಯೋಗಿಗಳು ಕೃತಜ್ಞರಾಗಿರ್ತಾರೆ ಗುರುಗಳೇ!

ಸಮಸ್ಯೆನೇ ಮರೆತು ‘ಪರಿಹಾರ’ ಕೊಡುವ ಹಿಂದೀವಾದಿಗಳು!

ಅಕ್ಟೋಬರ್ ೧೪ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರೊ. ವಿ.ಸಿ. ಕವಲಿ ಅವರು “ಹಿಂದಿ ನಮ್ಮ ರಾಷ್ಟ್ರಭಾಷೆಯೇ?” ಎಂಬ ಬರಹದಲ್ಲಿ ಬಹಳ ಮಹತ್ವದ ವಿಷಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ. ಆ ಬರಹದಲ್ಲಿ ಶ್ರೀ ಕವಲಿ ಅವರು ಭಾರತಕ್ಕೆ ಯಾವ ರೀತಿಯ ಭಾಷಾ ಪದ್ದತಿಯು ಬೇಕೆಂಬುದರ ಬಗ್ಗೆ ಅನೇಕ ತಪ್ಪುಗಳನ್ನು ಮಾಡಿರುತ್ತಾರೆ. ಅಷ್ಟೇ ಅಲ್ಲದೆ “ಹಿಂದಿ ನಮ್ಮ ರಾಷ್ಟ್ರಭಾಷೆಯೇ?” ಎಂಬ ಪ್ರಶ್ನೆಯನ್ನು ಅವರ ಬರಹದ ಹೆಸರು ಕೇಳುತ್ತದೆಯೇ ಹೊರತು ಅವರ ಮನಸ್ಸು ಮತ್ತು ಅವರ ಬರಹವು “ಹಿಂದಿಯೇ ನಮ್ಮ ರಾಷ್ಟ್ರಭಾಷೆ” ಎಂದು ಒಪ್ಪಿ ಕನ್ನಡಕ್ಕಷ್ಟೇ ಅಲ್ಲ, ಪ್ರಜಾಪ್ರಭುತ್ವಕ್ಕೇ ದ್ರೋಹವೆಸಗಿರುತ್ತವೆ.

ಹಿಂದಿ ರಾಷ್ಟ್ರಭಾಷೆ ಎನ್ನುವ ಕಾಗಕ್ಕನ ಕತೆ!

ಮೊದಲನೆಯದಾಗಿ ಹಿಂದಿಯು ನಮ್ಮ ರಾಷ್ಟ್ರಭಾಷೆಯಲ್ಲ ಎಂದು ಉತ್ತರಿಸಿದರೆ “ರಾಷ್ಟ್ರೀಯ ಏಕತಾ ಭಾವನೆಗೆ ಅಪಚಾರವಾದಂತಾಗುತ್ತದೆ” ಎಂದು ದಕ್ಷಿಣದ ನಾಲ್ಕು ರಾಜ್ಯಗಳ ಬಹುಪಾಲು ಜನರ ಅಭಿಪ್ರಾಯವಾಗಿದೆ ಎಂದು, ನಿಜಾಂಶದ ಅರಿವಿಲ್ಲದಿದ್ದರೂ ಪತ್ರಿಕೆಯೊಂದರಲ್ಲಿ ಸಾರಿ ಸಾರಿ ಹೇಳುವ ಇವರ ಧೈರ್ಯವನ್ನು ಮೆಚ್ಚಬೇಕು! ನಿಜಕ್ಕೂ ನೋಡಿದರೆ ಬಹುಪಾಲು ದಕ್ಷಿಣದ ನಾಡುಗಳ ಜನರಿಗೆ ಯಾವುದೋ ಒಂದು ಭಾಷೆಯನ್ನು ರಾಷ್ಟ್ರಭಾಷೆಯೆಂದು ಕರೆದರೇ “ಭಾರತದಲ್ಲಿ ಏಕತಾ ಭಾವನೆಗೆ” ಅಪಚಾರವಾದಂತಾಗುತ್ತದೆ ಎನ್ನುವ ಅರಿವು ಬಹಳ ಚೆನ್ನಾಗಿದೆ. ದಕ್ಷಿಣದವರು ಮೊದಲಿಂದಲೂ ಭಾರತಕ್ಕೆ ಒಂದು ರಾಷ್ಟ್ರಭಾಷೆಯಿರಬೇಕೆಂಬ ಹುನ್ನಾರಗಳನ್ನು ಎದುರಿಸುತ್ತಲೇ ಬಂದಿದ್ದಾರೆ, ಇಂದಿಗೂ ಎದುರಿಸುತ್ತಾರೆ, ಮುಂದೆಯೂ ಎದುರಿಸುತ್ತಾರೆ. ಯಾವುದೋ ಒಂದು ತಮ್ಮದಲ್ಲದ ಭಾಷೆಯನ್ನು ಭಾರತದ ಜನರ ಮೇಲೆಲ್ಲ ಹೇರಿದ್ದಾರೆ ಎನ್ನುವುದು ಅಂತರ್ರಾಷ್ಟ್ರೀಯ ಸಮುದಾಯಕ್ಕೆ ತಿಳಿದುಬಂದರೆ ಭಾರತವು ಪ್ರಜಾಪ್ರಭುತ್ವವೇ ಅಲ್ಲ ಎಂಬ ಕೂಗು ಏಳುವ ಸಾಧ್ಯತೆಯೂ ಇದೆ! ಆದ್ದರಿಂದ ಪೂರ್ತಿ ಸಂತೋಷದಿಂದಾಗಲೀ, ತುಸು ಸಂತೋಷದಿಂದಾದರೂ ಆಗಲಿ ಹಿಂದಿಯನ್ನು ನಮ್ಮ ರಾಷ್ಟ್ರಭಾಷೆ ಎಂದು ಹಿಂದಿಯೇತರ ನುಡಿಗಳನ್ನಾಡುವವರು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.

ಇನ್ನು ಹಿಂದಿಯನ್ನು ಏಕೆ ರಾಷ್ಟ್ರಭಾಷೆಯಾಗಿ ಕರೆಯಲಾಯಿತು ಎಂಬ ಕತೆಯನ್ನು ಶ್ರೀ ಕವಲಿಯವರು ಚೆನ್ನಾಗಿ ಕುಯ್ದಿದ್ದಾರೆ. ಆದರೆ ಇವತ್ತಿಗೂ ನಮ್ಮ ಸಂವಿಧಾನವು ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆಯುವುದಿಲ್ಲ ಎನ್ನುವುದು ಇವರ ಗಮನಕ್ಕೆ ಬರದೆ ಹೋಯಿತೇನೋ. ಇಂಥ ಬುದ್ಧಿಜೀವಿಗಳು ಒಮ್ಮೆ ಸಂವಿಧಾನವನ್ನು ಓದಬಾರದೇಕೆ? ಹಿಂದಿಯನ್ನು (ಅದು “ಆಕಾಶವಾಣಿ ಹಿಂದಿ”ಯನ್ನಾಗಲಿ “ಫಿಲ್ಮೀ ಹಿಂದಿ”ಯನ್ನಾಗಲಿ) ಭಾರತದ ಸಂವಿಧಾನವು ರಾಷ್ಟ್ರಭಾಷೆ ಎಂದು ಕರೆದಿಲ್ಲ. ಅದನ್ನು ಭಾರತದಲ್ಲಿ ಯಾವನೂ ಕಡ್ಡಾಯವಾಗಿ ಕಲಿಯಬೇಕಿಲ್ಲ. ಆದರೆ ಸಂವಿಧಾನವು ಒಂದನ್ನು ಹೇಳಿದರೆ ಬೀದಿಯ ದಿಟವೇ ಬೇರೆಯೆಂಬುದು ಭಾರತದ ಪ್ರಜಾಪ್ರಭುತ್ವದ ಮೇಲೆ ಬಿದ್ದಿರುವ ಕಪ್ಪುಚುಕ್ಕೆ. ಹೌದು, ಆ ಹಿಂದಿಯನ್ನು ಕಲಿಯದಿದ್ದರೆ ನಿಮಗೆ ಕೇಂದ್ರಸರ್ಕಾರದ ಯಾವ ಹುದ್ದೆಯೂ ದಕ್ಕುವುದಿಲ್ಲವೆನ್ನುವುದು ದಿಟ.

ಶುದ್ಧ ಹಿಂದಿಯೆನ್ನುವ ಜನ ಬಳಸದ ಭಾಷೆ!

ಹಿಂದಿಯನ್ನು ರಾಷ್ಟ್ರಭಾಷೆಯೆಂದು ಯಾವ ತರ್ಕವೂ ಇಲ್ಲದೆ ಒಪ್ಪಿಕೊಂಡ ಶ್ರೀ ಕವಲಿಯವರು ಮುಂದೆ ಆ ರಾಷ್ಟ್ರಭಾಷೆಯೂ ಅದರ ಲಿಪಿಯೂ ಹೇಗೆ ದಕ್ಷಿಣದ ರಾಜ್ಯಗಳಿಗೆ ಹೊಂದುವುದಿಲ್ಲವೆಂದು ವಾದಿಸಿ ತಮ್ಮ ಸಿದ್ಧಾಂತಕ್ಕೇ ಕೊಡಲಿಯೇಟು ಹಾಕಿಕೊಂಡಿದ್ದಾರೆ. ನಿಜಕ್ಕೂ ನೋಡಿದರೆ ಇವರು ತಿಳಿಸುವ “ಫಿಲ್ಮೀ ಹಿಂದಿ”ಯೇ ಹಿಂದಿ ಭಾಷಿಕ ಜನರು ತಮ್ಮ ತಮ್ಮ ಮನೆ ಮನೆಗಳಲ್ಲಿ ಆಡುವ ಹಿಂದಿ. ಈ ಹಿಂದಿಗೂ ಉರ್ದೂಭಾಷೆಗೂ ಜಾಸ್ತಿ ಹೆಚ್ಚು-ಕಡಿಮೆಯೇ ಇಲ್ಲ! ಪಾಕಿಸ್ತಾನವು ಉರ್ದೂಭಾಷೆಯನ್ನು ರಾಷ್ಟ್ರಭಾಷೆ ಆಗಿಸಿಕೊಂಡಿತು ಎಂದ ಮಾತ್ರಕ್ಕೆ ಭಾರತದಲ್ಲಿ ಆ ಭಾಷೆಯನ್ನು ಆಡುವವರ ನಾಲಿಗೆಯನ್ನೇ ಬದಲಾಯಿಸಲಾದೀತೆ? ಇಲ್ಲವೇ ಇಲ್ಲ! ಆದ್ದರಿಂದ ಇವತ್ತಿಗೂ ಉತ್ತರಭಾರತದಲ್ಲಿ ಜನಪ್ರಿಯವಾಗಿರುವ ಹಿಂದಿಗೂ ಪಾಕಿಸ್ತಾನದ ಉರ್ದುಗೂ ಜಾಸ್ತಿ ವ್ಯತ್ಯಾಸವಿಲ್ಲ. ಪಾಕಿಸ್ತಾನದ ಜೊತೆಗಿರುವ ಹಗೆತನದ ಹಿನ್ನೆಲೆಯಲ್ಲಿ ಈ ಮಾತು ಹಿಡಿಸದಿರಬಹುದು, ಆದರೆ ಹಾಗೆಂದು ಸತ್ಯವನ್ನೇ ಮುಚ್ಚಿ ಹಾಕುವುದು ಸರಿಯಲ್ಲ.

ಇಂತಹ ಅತಾರ್ಕಿಕತೆಯನ್ನು ಪ್ರದರ್ಶಿಸಿ ಒಂದು “ಶುದ್ಧ ಹಿಂದಿ” ಯನ್ನು ಹುಟ್ಟಿಸಿಬಿಟ್ಟು, ಅದರಲ್ಲಿ ದಕ್ಷಿಣದ ಭಾಷೆಗಳನ್ನು ಪ್ರತಿನಿಧಿಸುವ ಅಕ್ಷರಗಳಿಲ್ಲ ಎಂದು ಶ್ರೀ ಕವಲಿಯವರು ಗೊಳೋ ಎಂದು ಅತ್ತಿರುವುದು ನಗೆಪಾಟಲಾಗಿದೆ. ಇವರು ಹೇಳುವ ಬದಲಾವಣೆಗಳನ್ನೆಲ್ಲ ಮಾಡುತ್ತ ಹೋದರೆ ಹಿಂದಿಯೆನ್ನುವುದನ್ನು ಹಿಂದಿಯವರೇ ಕೈ ಬಿಟ್ಟಾರು! ಉತ್ತರದ ಜನರು ಸ್ವಾಭಾವಿಕವಾಗಿ “ಔರ್, ಲೇಕಿನ್, ಸಿರ್ಫ್, ಮುತಾಬಿಕ್” ಎನ್ನುವಾಗ “ತಥಾ, ಪರಂತು, ಕೇವಲ್, ಅನುಸಾರ್” ಎನ್ನಿರಿ ಎಂದು ಹೇಳಿದರೆ ಅವರ ಪಾಡೇನಾದೀತು?!

ಭಿನ್ನ ನೆಲೆಯ ಹಿಂದಿ - ಕನ್ನಡ

ಹೋಗಲಿ, ಆ “ಶುದ್ಧ ಹಿಂದಿ”ಯನ್ನು ದಕ್ಷಿಣದವರೆಲ್ಲ ಕಣ್ಣಿಗೆ ಒತ್ತಿಕೊಂಡು ಪೂಜಿಸುತ್ತಾರೆ ಎಂದು ಇವರು ತಿಳಿದಿರುವುದಂತೂ ಮಹಾ ಆತ್ಮವಂಚನೆಯೇ, ಏಕೆಂದರೆ ಇವರ ಕಲ್ಪನೆಯ ಶುದ್ಧ ಹಿಂದಿಯು ಸಂಸ್ಕೃತವೇ ಆಗಿದ್ದು ದಕ್ಷಿಣದ ಭಾಷೆಗಳಿಗಿಂತ ತೀರ ಬೇರೆಯಾದ ಒಂದು ಇಂಡೋ-ಯೂರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿರುತ್ತದೆ. ದಕ್ಷಿಣದ ಭಾಷೆಗಳು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರುತ್ತವೆ. ಇವೆರಡೂ ಭಾಷಾ ಕುಟುಂಬಗಳ ನಡುವೆ ಹೆಚ್ಚೇನೂ ಸಾಮ್ಯತೆಯಿಲ್ಲದಿರುವುದರಿಂದ ಒಂದನ್ನು ಇನ್ನೊಂದನ್ನಾಡುವವರ ಮೇಲೆ ಹೇರಲಾಗುವುದಿಲ್ಲ. ಶ್ರೀ ಕವಲಿಯವರೇನಾದರೂ ಮರೆತುಬಿಟ್ಟಿದ್ದರೆ ಮೇಲಿನ ಪದಗಳಿಗೆ ಕನ್ನಡದಲ್ಲಿ “ಮತ್ತು, ಆದರೆ, ಬರೀ, ಹಂಗೆ/ಹಾಗೆ” ಎನ್ನುವ ಪದಗಳಿವೆ. ಇವಕ್ಕೂ “ಶುದ್ಧ ಹಿಂದಿ”ಗೂ ಯಾವ ನಂಟೂ ಇಲ್ಲವೆನ್ನುವುದು ತಿಳುವಳಿಕಸ್ತರಿಗೆ ಅರ್ಥವಾಗದೆ ಹೋಗುವುದಿಲ್ಲ.

ಇನ್ನು ಶ್ರೀ ಕವಲಿಯವರು ಕೊಟ್ಟಿರುವ “ನರುಗಂಪು ಬೀರುವ ಹೂಗಳ ಸಜ್ಜಿಕೆ ಮನಸ್ಸನ್ನು ಮುದಗೊಳಿಸಿತು” ಎನ್ನುವುದೇ ಕನ್ನಡ. ಅದನ್ನು “ಸಿರಿಗನ್ನಡ” ಎಂದು ಕರೆಯುವುದು ಬೇಕಾಗಿಲ್ಲ; ಅದೇ “ಕನ್ನಡ”. “ಸುಗಂಧಭರಿತ ಪುಷ್ಪಗಳ ಅಲಂಕಾರ ಮನಸ್ಸನ್ನು ಮೋಹಗೊಳಿಸಿತು” ಎನ್ನುವುದು ಸಂಸ್ಕೃತಕ್ಕೂ ಕನ್ನಡಕ್ಕೂ ತಾಯಿ-ಮಗಳ ಸಂಬಂಧವಿದೆಯೆಂದು ತಪ್ಪಾಗಿ ತಿಳಿದಿರುವವರ ಒಂದು ಭಾಷೆ. ಈ ಭಾಷೆಯು ಕರ್ನಾಟಕದ ಸಾಹಿತ್ಯದಲ್ಲಿ ಬಹಳ ಓಡಾಡುತ್ತಿರುವುದು ಕನ್ನಡಿಗರ ಏಳಿಗೆಗೆ ಮಾರಕವಾಗಿದೆಯೆನ್ನುವುದು ಬೇರೆಯ ವಿಷಯ. ಸಾಹಿತ್ಯದಲ್ಲಿ ಇರುವುದೇ ಕನ್ನಡವೆಂದು ಸಾಮಾನ್ಯ ಕನ್ನಡಿಗರು ತಪ್ಪಾಗಿ ತಿಳಿದು ತಮ್ಮ ಆಡುನುಡಿಯೇ ಸರಿಯಿಲ್ಲವೆಂದುಕೊಂಡಿರುವುದು ಮತ್ತೊಂದು ವಿಷಯ. ಇವುಗಳ ಬಗ್ಗೆಯೆಲ್ಲ ಇಲ್ಲಿ ಬರೆಯುವುದು ವಿಷಯದಿಂದ ದೂರ ಹೋದಂತಾದೀತೆಂದು ಕೈಬಿಡೋಣ.

ಇನ್ನು ದೂರದರ್ಶನದಲ್ಲಿ ರಾಮಾಯಣ-ಮಹಾಭಾರತ ಧಾರವಾಹಿಗಳು “ಶುದ್ಧ ಹಿಂದಿ”ಯಲ್ಲಿ ಬಂದಾಗ ದಕ್ಷಿಣದವರಿಗೆ ಕಷ್ಟವಾಗಲಿಲ್ಲ ಎಂದು ವಾದಿಸುವುದು ನಿಜಕ್ಕೂ ಮಹಾ ಮೂರ್ಖತನವೇ. ದಕ್ಷಿಣದ ಜನರಿಗೆ ಆ ಧಾರವಾಹಿಗಳು ಅರ್ಥವಾಗಿದ್ದರೆ ಅದು ಆಯಾ ಕತೆಗಳನ್ನು ದಕ್ಷಿಣದ ಕವಿಗಳು ಇಲ್ಲಿಯ ಭಾಷೆಗಳಿಗೆ ಬಹಳ ಹಿಂದೆಯೇ ತಂದಿರುವುದರಿಂದ; ರಾಮಾಯಣ-ಮಹಾಭಾರತಗಳು ದಕ್ಷಿಣದ ಜನರಲ್ಲೂ ಬಹಳ ಹೆಸರುವಾಸಿಯಾಗಿರುವುದರಿಂದಲೇ ಹೊರತು “ಶುದ್ಧ ಹಿಂದಿ”ಯು ದಕ್ಷಿಣದ ಜನರಿಗೆ ಹತ್ತಿರವಾದ ಭಾಷೆ ಎಂದೇನಲ್ಲ!

ಸುಸಂಸ್ಕೃತ ಕನ್ನಡ ಎನ್ನುವ ಬೆದರುಬೊಂಬೆ!

ಕನ್ನಡವನ್ನು ಕೈಬಿಟ್ಟು “ಸುಸಂಸ್ಕೃತ ಕನ್ನಡ” ಎಂಬ ಹೊಸದೊಂದು ಬೆದರುಬೊಂಬೆಯನ್ನು ಹುಟ್ಟಿಸಿ ಅದನ್ನು ಆಡಿ ಎಂದು ಶ್ರೀ ಕವಲಿಯವರು ಕನ್ನಡಿಗರಿಗೆ ಹೇಳುವುದು ಮತ್ತೊಂದು ಅಪರಾಧವೇ ಸರಿ! ಇಡೀ ಕನ್ನಡ ಜನಾಂಗವು ತನ್ನ ನುಡಿಯನ್ನು ಒಬ್ಬರಿಬ್ಬರ ತೀಟೆಗಾಗಿ ಬದಲಾಯಿಸಿಕೊಳ್ಳಲಾಗುವುದೂ ಇಲ್ಲ, ಹಾಗೆ ಬದಲಾಯಿಸಿಕೊಳ್ಳಿ ಎನ್ನುವುದು ಪ್ರಜಾಪ್ರಭುತ್ವವನ್ನೇ ಕಡೆಗಣಿಸಿದಂತೆಯೂ ಹೌದು. ಈ “ಸುಸಂಸ್ಕೃತ ಕನ್ನಡ”ಕ್ಕೂ “ಶುದ್ಧ ಹಿಂದಿ”ಗೂ ಅಂಥದ್ದೇನು ವ್ಯತ್ಯಾಸವಿಲ್ಲ ಎಂದು ತೋರಿಸುವ ಶ್ರೀ ಕವಲಿಯವರು ಮರೆತಿರುವುದೇನೆಂದರೆ ಅವೆರಡೂ ನಿಜವಾದ ಭಾಷೆಗಳಲ್ಲ! ಅವೆರಡನ್ನೂ ಯಾರೂ ಆಡುವುದಿಲ್ಲ! ಇವರ ಕಾಲುಗಳು ನೆಲದ ಮೇಲೆ ಇವೆಯೋ ಇಲ್ಲವೋ ಎಂಬ ಪ್ರಶ್ನೆ ಓದುಗರಿಗೆ ಹುಟ್ಟಿದರೆ ತಪ್ಪೇನಿಲ್ಲ! ಇವರು ಯಾವ ಸಮಸ್ಯೆಗೆ ಪರಿಹಾರ ಕೊಡುತ್ತಿದ್ದಾರೆ ಎನ್ನುವುದನ್ನೇ ಮರೆತಿದ್ದಾರೆ!

ಭಿನ್ನತೆ ಕಾಯ್ದುಕೊಂಡರೇ ಏಕತೆ!

ಅಷ್ಟೇ ಅಲ್ಲದೆ ಈ “ಶುದ್ಧ ಹಿಂದಿ”ಯು ಹಿಂದಿಯನ್ನು ಆಡುವವರಿಗೂ ದೂರವಾದ ಭಾಷೆ, ಆದ್ದರಿಂದ “ಮೋಸವು ಬರೀ ದಕ್ಷಿಣದವರಿಗೆ ಆಗುತ್ತಿಲ್ಲ, ಇಗೋ ನೋಡಿ! ಎಲ್ಲರಿಗೂ ಮೋಸವನ್ನು ಮಾಡಿದ್ದೇನೆ!” ಎನ್ನುವ ಪೆದ್ದತನದ ಹೆಜ್ಜೆಗಳೇಕೆ? ಅದನ್ನು ಬಿಟ್ಟು ಭಾರತದಲ್ಲಿ ಭಾಷಾ-ಏಕತೆಯಿಲ್ಲವೆಂದು ಧೈರ್ಯವಾಗಿ ಒಪ್ಪಿಕೊಂಡು ಇಲ್ಲದ ಭಾಷಾ-ಏಕತೆಯನ್ನು ಹುಟ್ಟಿಹಾಕುವ ಪ್ರಯತ್ನವನ್ನೇ ಮಾಡಬಾರದು. ಭಾರತವೆಂದು ಕರೆಯಲ್ಪಡುವ ಪುಣ್ಯಭೂಮಿಯಲ್ಲಿ ಬೇರೆಬೇರೆ ಭಾಷಾವಾರು ಜನಾಂಗಗಳ ನಡುವೆ ಈಗಾಗಲೇ ಯಾವ ರೀತಿಯ ಏಕತೆಯಿದೆಯೋ ಅದನ್ನು ಗಟ್ಟಿ ಮಾಡಿಕೊಳ್ಳುವುದು ಬುದ್ಧಿವಂತರ ವಿಧಾನವು. ಅದನ್ನು ನೇರವಾಗಿ ಗಟ್ಟಿಮಾಡಿಕೊಳ್ಳುವ ಯೋಗ್ಯತೆಯಿರುವ ವೀರರೇ, ಬುದ್ಧಿವಂತರೇ ಮುಂದೆ ಭಾರತವನ್ನು ಏಳಿಗೆಯ ಹಾದಿಯಲ್ಲಿ ಕರೆದೊಯ್ಯಬಲ್ಲವರು; ಹೇಡಿಗಳಲ್ಲ; ಸತ್ಯವನ್ನು ಮುಚ್ಚಿಹಾಕುವವರಲ್ಲ; ಸಮಸ್ಯೆಯನ್ನೇ ಮರೆತು ಪರಿಹಾರಗಳ ಬಗ್ಗೆ ಮಾತಾಡುವ ಜಾಣರಲ್ಲ.

ಬಂಡವಾಳ ಹರಿದು ಬರಲು ಗಟ್ಟಿನೀತಿ ಬೇಕು


ಕರ್ನಾಟಕದಲ್ಲಿ ಟಾಟಾ ಸಂಸ್ಥೆಯೋರು ನ್ಯಾನೋ ಮಾದರಿ ಕಾರುಗಳನ್ನು ತಯಾರಿಸೋ ಘಟಕಾನ ಕಡೆಗೂ ಆರಂಭಿಸುವುದಿಲ್ಲ ಎನ್ನುವ ತೀರ್ಮಾನ ತೆಗೆದುಕೊಂಡರು. ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಮುಂದೇನಾಗಬೇಕು ಅಂತ ಚೂರು ನೋಡೋಣ ಬಾ ಗುರು!
ಉದ್ದಿಮೆಗಾರಿಕೆ ಮತ್ತು ಉದ್ಯೋಗಾವಕಾಶ!

ನಮ್ಮ ನಾಡಲ್ಲಿ ಉದ್ದಿಮೆಗಳ ಆರಂಭಕ್ಕಿರೋ ಮುಖ್ಯವಾದ ಆಯಾಮ ಸರ್ಕಾರಕ್ಕೆ ತೆರಿಗೆ ಮೂಲಕ ದೊರೆಯುವ ಆದಾಯ, ನಾಡಿನ ಜನರಿಗೆ ನೇರವಾಗಿ ಸಿಗಬಹುದಾದ ಉದ್ಯೋಗಗಳು ಮತ್ತು ಈ ಉದ್ದಿಮೆಗಳಿಗೆ ಪೂರಕವಾಗಿ ಆರಂಭವಾಗೋ ಇತರೆ ಉದ್ದಿಮೆಗಳು. ಈ ಉದ್ದೇಶಗಳ ಈಡೇರಿಕೆಗಾಗಿಯೇ ಸರ್ಕಾರಗಳು ಉದ್ದಿಮೆ ಆರಂಭಿಸಲು ಉತ್ತೇಜನ ಕೊಡ್ತಾ, ಕಡಿಮೆ ದರದಲ್ಲಿ ನೆಲ, ನೀರು, ವಿದ್ಯುತ್ ಇವುಗಳನ್ನು ಉದ್ದಿಮೆದಾರರಿಗೆ ನೀಡುತ್ತದೆ. ಇಂತಿಷ್ಟು ತೆರಿಗೆ ವಿನಾಯ್ತಿ, ಇಷ್ಟು ವರ್ಷದ ತೆರಿಗೆ ರಜಾಗಳನ್ನು ನೀಡುತ್ತದೆ. ಇಷ್ಟೆಲ್ಲಾ ಇದ್ದಾಗ್ಲೂ ನಮ್ಮ ಸರ್ಕಾರ ಈ ಬಾರಿ ಟಾಟಾ ಸಂಸ್ಥೆಯನ್ನು ಸೆಳೆಯಲು ಯಾಕೆ ವಿಫಲವಾಯ್ತು ಅಂತ ನೋಡುದ್ರೆ ಕರ್ನಾಟಕದ ರಾಜಕೀಯ ಸ್ಥಿತಿಗತಿ, ಇಲ್ಲಿನ ರೈತ ಸಮುದಾಯದ ಪ್ರತಿಕ್ರಿಯೆಗಳು, ಉದ್ದಿಮೆ ಎದುರಿಸಲು ಉಂಟಾಗಬಹುದಾದ ತೊಡಕುಗಳು, ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಗಳು, ಸರ್ಕಾರದ ನಿಯಮಾವಳಿಗಳ ಅಸ್ಥಿರತೆ/ ಅಸ್ಪಷ್ಟತೆ ಇವೆಲ್ಲಾ ಪ್ರಮುಖ ಪಾತ್ರ ವಹಿಸಿದ ಹಾಗೆ ಕಾಣ್ತಿದೆ ಗುರು!

ರೈತರ ಮನವೊಲಿಕೆಯ ಮಹತ್ವ!

ಉದ್ದಿಮೆ ಆರಂಭಕ್ಕಾಗಿ ನೆಲ ವಶಪಡಿಸಿಕೊಳ್ಳಲು ಸರ್ಕಾರ ಅನುಸರಿಸೋ ನೀತಿ ಮತ್ತಷ್ಟು ಸುಧಾರಿಸಬೇಕಾಗಿದೆ. ಕೈಗಾರಿಕಾ ಪ್ರದೇಶಗಳನ್ನು ಗುರುತಿಸಬೇಕಾದಾಗ ಅಲ್ಲಿ ಏನೇನಿರಬೇಕು ಅನ್ನೋದು ಸ್ಪಷ್ಟವಾಗಿರಬೇಕು. ಅಂತಹ ಭೂಮಿಯನ್ನು ನೀಡುವ ರೈತನಿಗೆ ಏನೆಲ್ಲಾ ಪರಿಹಾರ ಕೊಡಬೇಕು ಅನ್ನೋದು ರೈತನನ್ನು ಪ್ರೋತ್ಸಾಹಿಸೋ ಹಾಗಿರಬೇಕು. ದೇವನಹಳ್ಳಿ ಸುತ್ತಲ ಭೂಮಿನ ಸರ್ಕಾರ ವಶ ಪಡಿಸಿಕೊಂಡಾಗ ಯಾವ ಬೆಲೆಗೆ ಕೊಂಡುಕೊಳ್ತು? ಇವತ್ತು ಅದರಲ್ಲಿ ಎಷ್ಟು ಭಾಗ ಮಾತ್ರಾ ವಿಮಾನ ನಿಲ್ದಾಣಕ್ಕೆ ಅಗತ್ಯವಿದೆ? ಉಳಿದದ್ದನ್ನು ಯೋಜನೆಯಲ್ಲೇ ವಾಣಿಜ್ಯ ಉದ್ದೇಶಕ್ಕೆ ಅಂತ ತೋರಿಸಿ... ವಿಮಾನ ನಿಲ್ದಾಣ ಕಟ್ಟಿದ ಮೇಲೆ ಆ ನೆಲದ ಬೆಲೆ ಗಗನಕ್ಕೇರಿಸಿ ಲಾಭ ಹೆಚ್ಚಿಸಿಕೊಳ್ಳೋದನ್ನು ನೋಡಿದಾಗ ನೆಲ ಬಿಟ್ಟುಕೊಟ್ಟ ರೈತ, ನಾ ಕೊಟ್ಟ ಜಮೀನು ವಿಮಾನ ನಿಲ್ದಾಣಕ್ಕಲ್ಲ... ಅದನ್ನು ಕಟ್ಟಿದೋರ ಲಾಭ ಗಳಿಕೆಗೆ ಅಂತ ಅಸಮಾಧಾನ ಪಟ್ಕೊಳ್ಳೋ ಹಾಗೆ ನಮ್ಮ ನಿಯಮ ಇರಬಾರದು ಅಲ್ವಾ ಗುರು? ಅಂದ್ರೆ ನೆಲ ಕಳೆದುಕೊಳ್ಳುವವನು ಲಾಭದ ಭಾಗೀದಾರ ಆಗಬೇಕು ತಾನೆ? ಆಗ ಮಾತ್ರ ತಮ್ಮ ನೆಲ ಸರ್ಕಾರ ಕೊಂಡುಕೊಳ್ಳುತ್ತೆ ಅಂದ್ರೆ ಖುಷಿ ಪಟ್ಕೊಳ್ಳೋ ಪರಿಸ್ಥಿತಿ ಹುಟ್ಕೊಳ್ಳೋದು. ಒಳ್ಳೇ ಬೆಲೆ, ಸರಿಯಾದ ಪುನರ್ವಸತಿ, ದಬ್ಬಾಳಿಕೆ ಹಾಗೂ ಒತ್ತಾಯವಿಲ್ಲದ ಗೌರವದಿಂದ ನಡೆಸಿಕೊಳ್ಳೋದು ಇವೆಲ್ಲಾ ಸಾಧನಗಳನ್ನು ಬಳಸಿ ರೈತಣ್ಣನ ಮನವೊಲಿಸಬೇಕು.

ಏನೆಲ್ಲಾ ಕೊಡಬೇಕು?

ಅತ್ಯುತ್ತಮ ರಸ್ತೆ, ರೈಲು ಸಂಪರ್ಕಗಳ ಜೊತೆಯಲ್ಲಿ ಅಗತ್ಯವಾದ ನೀರು ಮತ್ತು ವಿದ್ಯುತ್ತುಗಳ ಪೂರೈಕೆ ಮಾಡಬೇಕಾಗಿದೆ. ಅದಕ್ಕೆ ಅಗತ್ಯವಾದಂತೆ ನದಿ ನೀರಿನ ಸದ್ಬಳಕೆಗೆ ಯೋಜನೆಗಳು, ವಿದ್ಯುತ್ ಉತ್ಪಾದನೆಗೆ ಬೇರೆ ಬೇರೆ ಶಕ್ತಿಮೂಲಗಳ ಬಳಕೆ, ಸೋರಿಕೆ ತಡೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರದ ನಾಯಕತ್ವ ಗಟ್ಟಿ ದೃಷ್ಟಿಕೋನದ, ದೂರಗಾಮಿ ಯೋಜನೆಯುಳ್ಳ, ನಾಡಿನ ಏಳಿಗೆಯ ಬಗ್ಗೆ ಸದಾ ತುಡಿಯುತ್ತಿರುವುದಾಗಿರಬೇಕು. ಕನ್ನಡನಾಡಿನ ಏಳಿಗೆಯೊಂದೇ ಪರಮಗುರಿಯಾಗಿರಬೇಕು. ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳುವಿಕೆ, ಸುತ್ತು ಬಳಸು ಮೀನ ಮೇಷವಿಲ್ಲದ ಪಾರದರ್ಶಕವಾದ ಚುರುಕಾದ ಆಡಳಿತ ಯಂತ್ರದ ಅಗತ್ಯವಿದೆ. ಉದ್ದಿಮೆ ಆರಂಭಿಸಲು ಬೇಕಾದ ಪರವಾನಿಗೆಗಳನ್ನು ಹಲವಾರು ಇಲಾಖೆಗಳಿಂದ ಪಡೆಯಬೇಕಾದ ಅಗತ್ಯವನ್ನು ಇಲ್ಲವಾಗಿಸಿ ಒಂದೇ ಸಂಸ್ಥೆಯಲ್ಲಿ ಸರಳವಾಗಿ ಲೈಸೆನ್ಸ್ ನೀಡಬೇಕಾದ ವ್ಯವಸ್ಥೆಯನ್ನು ಜಾರಿಗೊಳಿಸಬೇಕಾಗಿದೆ. ದೀರ್ಘಕಾಲಕ್ಕಾಗಿ ರೂಪಿಸಲಾದ, ಯಾವುದೆ ಸರ್ಕಾರವಿದ್ದರೂ ಬದಲಾಗದ ರೀತಿನೀತಿ ನಿಯಮಾವಳಿಗಳ ಅಗತ್ಯವಿದೆ.

ನಾಡಿನ ಏಳಿಗೆಗೆ ಉದ್ದಿಮೆಗಾರಿಕೆಯೇ ರಹದಾರಿ

ನಾಡು ಆರ್ಥಿಕವಾಗಿ ಬೆಳೆಯಲು, ನಾಡಿನ ಜನತೆಗೆ ಉದ್ಯೋಗಾವಕಾಶಗಳನ್ನು ತಂದುಕೊಡುವ ಉದ್ದಿಮೆಗಳೇ ಇಂದಿನ ಅಗತ್ಯವಾಗಿವೆ. ಸಿಂಗೂರಿಂದ ಟಾಟಾ ಎತ್ತಂಗಡಿ ಆಗುತ್ತೇ ಅಂದಾಗ ಸಂತೆಗೆ ಮೂರು ಮೊಳ ನೆಯ್ದಂಗೆ ತಕಾಪಕಾ ಕುಣಿದು ಟಾಟಾ ಮುಂದೆ ಲಾಗಾ ಹಾಕೊ ಬದಲಾಗಿ ನಾಡಿನ ಆಳುವ ಸರ್ಕಾರಗಳು ಈ ಬಗ್ಗೆ ಸರಿಯಾದ ನಿಯಮಗಳನ್ನು ಎಲ್ಲ ಕ್ಷೇತ್ರಗಳ ತಜ್ಞರ ಸಹಕಾರದಿಂದ ರೂಪಿಸಿ ಜಾರಿಗೆ ತರಬೇಕಾಗಿದೆ. ಇಗೋ! ಕರ್ನಾಟಕ ರಾಜ್ಯದ ಉದ್ದಿಮೆ ನೀತಿ ಇದು. ನಮ್ಮ ನಾಡಲ್ಲಿ ನೀವು ಉದ್ದಿಮೆ ಆರಂಭಿಸಲು ಇಂತಿಂತಹ ಪೂರಕ ವಾತಾವರಣವಿದೆ. ಈ ನಾಡಲ್ಲಿ ನಿಮಗೆ ಇಂತಿಂತಹ ಸವಲತ್ತುಗಳನ್ನು ಸರ್ಕಾರ ನಿಮಗೆ ನೀಡುತ್ತದೆ. ಬದಲಾಗಿ ನೀವು ಇಂತಿಷ್ಟು ಕನ್ನಡಿಗರಿಗೆ ಕೆಲಸ ಕೊಡಬೇಕು. ಉದ್ದಿಮೆ ಆರಂಭಕ್ಕಾಗಿ ಅಗತ್ಯವಿರುವ ನೆಲವನ್ನು ಸರ್ಕಾರ ರೈತರಿಂದ ಕೊಳ್ಳಲು ಇಂತಹ ನೀತಿಯನ್ನು ಅನುಸರಿಸುತ್ತದೆ, ಈ ಮಾನದಂಡದ ಆಧಾರದ ಮೇಲೆ ಇಂತಿಷ್ಟು ಪರಿಹಾರ ನೀಡಲಾಗುತ್ತದೆ... ಎಂಬೆಲ್ಲಾ ವಿಷಯಗಳು ಪಾರದರ್ಶಕವಾಗಿಯೂ, ಸ್ಫುಟವಾಗಿಯೂ ಇದ್ದಲ್ಲಿ ನಮ್ಮ ನಾಡಿಗೆ ಉದ್ದಿಮೆಗಳು ಹರಿದು ಬರುವುದು ಅಷ್ಟೊಂದು ಕಠಿಣವಾಗಲಾರದು ಗುರು!
ಕೊನೆಹನಿ : ಗುಜರಾತಿಗೆ ಟಾಟಾ ಹೋದ ನಂತರ ಮೋದಿ "ಉಳಿದವರಿಗಿಂತ ಭಿನ್ನವಾಗಿ ಮಾಡಿದ ಕೆಲಸ ಒಂದೇ, ಸಿಂಗೂರಿನಿಂದ ನ್ಯಾನೋ ಎತ್ತಂಗಡಿಯಾಗೋದು ಗೊತ್ತಾದ ಎರಡು ನಿಮಿಷದಲ್ಲಿ ರತನ್ ಟಾಟಾರ ಮೊಬೈಲ್ ಗೆ ’ಗುಜರಾತಿಗೆ ಸ್ವಾಗತ’ ಅನ್ನೋ ಒಂದು ಸಣ್ಣ ಎಸ್ಸೆಮ್ಮೆಸ್ ಕಳಿಸ್ದೆ" ಅಂದ್ರು ಅನ್ನೋ ಗಾಳಿಸುದ್ದಿ ಎಲ್ಲಾ ಕಡೆ ಓಡಾಡ್ತಿದೆ ಗುರು.

ವಾಯ್ಸ್ ಆಫ್ "ಹಿಂದಿ"ಯಾ?

ಅಲ್ಲಾ ಗುರು, ಭಾರತ ಅಂದ್ರೆ ಹಿಂದಿ ಅಂತನ್ನೊ ಪೆದ್ದರಿಗೆ ಯಾವತ್ತಿಗೆ ಬುದ್ಧಿ ಬಂದೀತು? ಇತ್ತೀಚಿಗೆ ಸ್ಟಾರ್ ಟಿ.ವಿಯೋರು ನಡುಸ್ತಿರೋ ಈ ಒಂದು ಕಾರ್ಯಕ್ರಮದ ಹೆಸರನ್ನು ವಾಯ್ಸ್ ಆಫ್ ಇಂಡಿಯಾ ಅಂತ ಕರೆದು ಅದ್ರಲ್ಲಿ ಬರೀ ಹಿಂದಿ ಹಾಡಿಗೆ ಮಾತ್ರಾ ಅವಕಾಶಾ ಕೊಡೋದು ತಪ್ಪಲ್ವಾ ಗುರು? ಮೊನ್ನೆ ಮೊನ್ನೆ ’ರಿತೀಶಾ ಅನ್ನೊ ಬೆಂಗಳೂರಿನ ಹುಡುಗಿ ಆ ಕಾರ್ಯಕ್ರಮದಲ್ಲಿ ಚೆನ್ನಾಗಿ ಹಾಡಿ ಗೆಲುವಿಗೆ ಹತ್ರ ಆಗ್ತಿದಾಳೆ... ಅವಳಿಗೆ ಮತ ಹಾಕಿ, ಎಸ್ಸೆಮ್ಮೆಸ್ ಕಳ್ಸಿ’ ಅಂತಾ ಕರ್ನಾಟಕದ ಎಲ್ಲಾ ಮಾಧ್ಯಮಗಳಲ್ಲಿ ಸುದ್ದಿಯೋ ಸುದ್ದಿ. ನಮ್ಮೂರ ಹುಡುಗಿ, ದೇಶ ವಿದೇಶದಲ್ಲಿ ತನ್ನ ಪ್ರತಿಭೆ ತೋರ್ಸಿ ಗೆಲ್ಲೋದ್ರ ಬಗ್ಗೆ ನಮ್ಗೂ ಸಂತೋಷಾನೆ ಗುರು! ಆದ್ರೆ ಇದುನ್ನ ಒಂದು ವೈಯುಕ್ತಿಕ ಸಾಧನೆ ಅಂತಾ ನೋಡ್ದೆ ವಾಯ್ಸ್ ಆಫ್ ಇಂಡಿಯಾದ ಹಿಂದಿ ಹಾಡಿನ ಸ್ಪರ್ಧೆಯಲ್ಲಿ ಹಾಡಿ ಗೆದ್ರೆ, ಕರ್ನಾಟಕಕ್ಕೆ ಆಸ್ಕರ್ ಬಹುಮಾನ ಬರುತ್ತೆ ಅನ್ನೊ ಹಾಗೆ ನಮ್ಮ ಜನರಲ್ಲೇ ಕೆಲವರು ಖುಷಿ ಪಡೋದು, ಅವಳಿಗೆ ವೋಟ್ ಮಾಡಿ "ಕರ್ನಾಟಕದ ಮಾನ ಉಳಿಸಿ" ಅಂತ ಎಸ್ಸೆಮ್ಮೆಸ್ಸು, ಈಮೇಲು ಅಂತಾ ಶುರು ಹಚ್ಚಕೊಳ್ಳೊದು ನೋಡಿದ್ರೆ ಅಯ್ಯೋ ಅನ್ಸುತ್ತೆ ಗುರು!

ಭಾರತ ಅಂದ್ರೆ ಹಿಂದಿ ಮಾತ್ರಾ ಅನ್ನೋ ಅಪಾಯಕಾರಿ ನಿಲುವು

ಹಿಂದಿ ಚಾನಲ್ ಒಂದರಲ್ಲಿ ಹಾಡಿದ್ನೇ, ಭಾರತ ಮಟ್ಟದ (?) ಚಾನಲ್ ಒಂದರಲ್ಲಿ ಹಾಡಿದಂಗೆ ಅನ್ನೋದಾಗಲಿ, ಅಲ್ಲಿ ಇವ್ರು ಕರ್ನಾಟಕವನ್ನು ಪ್ರತಿನಿಧಿಸಿದರು ಅನ್ನೋದಾಗಲಿ ಪೆದ್ದತನ ಅಲ್ಲದೇ ಇನ್ನೇನ್ ಗುರು ? ಹಾಗೆ ಅನ್ನೋರ ತಲೇಲಿ "ಭಾರತ = ಹಿಂದಿ ", " ಹಿಂದಿ ಚಾನಲ್ = ಭಾರತ ಮಟ್ಟದ ಚಾನಲ್ " ಅನ್ನೊ ಸೆಗಣಿ ತಾನೆ ಇರೋದು? ವಾಯ್ಸ್ ಆಫ್ ಇಂಡಿಯಾ ಅನ್ನೋ ವಾಕ್ಯದ ನಿಜವಾದ ಅರ್ಥವಾದ್ರೂ ಏನು? ಭಾರತದ ಧ್ವನಿ ಅಂತಾ ತಾನೆ? ಹಾಗಿದ್ರೆ ಹಿಂದಿಯೊಂದೇ ಭಾರತದ ಧ್ವನಿ ಹೇಗಾಗುತ್ತೆ? ಕನ್ನಡ, ತಮಿಳು, ತೆಲುಗು, ಅಸ್ಸಾಮಿ, ಬೆಂಗಾಲಿ ಇವೆಲ್ಲ ಏನು ಚಂದ್ರಲೋಕದ ಭಾಷೆಗಳಾ? ಭಾರತದ ಧ್ವನಿ ಅನ್ನೋವಾಗ ಭಾರತದ ಎಲ್ಲ ಭಾಷೆಗಳಿಗೂ ಅಲ್ಲಿ ಸ್ಥಾನ ಸಿಗಬೇಕು ತಾನೆ? ಅದಿಲ್ಲ ಅಂದ್ರೆ ಇದನ್ನ ವಾಯ್ಸ್ ಆಫ್ ಇಂಡಿಯಾ ಅನ್ನದೇನೆ ವಾಯ್ಸ್ ಆಫ್ ಹಿಂದಿಯಾ ಅಂತ ತಾನೇ ಅನ್ನಬೇಕು? ಇವರ ಲೆಕ್ಕದಲ್ಲಿ ಜೀವನದಲ್ಲಿ ಒಂದೇ ಒಂದು ಹಿಂದಿ ಹಾಡ್ನ ಹಾಡಿಲ್ಲದೇ ಇರೋ ಕಾರಣಕ್ಕೇ ನಮ್ಮ ಡಾ.ರಾಜಕುಮಾರ್ ಅವರ ವಾಯ್ಸು ’ವಾಯ್ಸ್ ಆಫ್ ಇಂಡಿಯಾ’ ಅಗಕ್ಕೆ ಲಾಯಕ್ಕಿಲ್ಲಾ ಗುರು!

ಇದು ಬರೀ ಹಾಡಿನ ಸ್ಪರ್ಧೆ ಅಲ್ಲ! ಹಿಂದಿಗೆ ಮಾರುಕಟ್ಟೆ ಗಳ್ಸಿಕೊಡೋ ತಂತ್ರ
ಭಾರತದ ಒಂದು ಪ್ರಾದೇಶಿಕ ಭಾಷೆಯಾದ ಹಿ೦ದಿಯಲ್ಲಿನ ಈ ಕಾರ್ಯಕ್ರಮ ಇಡೀ ಭಾರತದ ಕಾರ್ಯಕ್ರಮ ಹೇಗಾದೀತು? ಒಟ್ನಲ್ಲಿ ಈ ಹಿಂದಿ ಕಾರ್ಯಕ್ರಮದಲ್ಲಿ ಕನ್ನಡದೋರೊಬ್ರು ಹಾಡಿ ಗೆಲ್ಲಬೇಕು ಅಂದ್ರೆ, ಕನ್ನಡಿಗರು ವೋಟ್ ಮಾಡಬೇಕು ಅಷ್ಟೆ. ಇದನ್ನೊಂದು ಪ್ರತಿಷ್ಠೆಯ, ಅಭಿಮಾನದ ವಿಷಯ ಅನ್ನೋ ಥರ ಎಲ್ಲಾ ಮಾಧ್ಯಮದ ಮೂಲಕ ಪ್ರಚಾರ ಮಾಡಿ, ವೋಟು ವೋಟು ಅಂತ ವದರಾಡಿ, ಕಡೆಗೆ ಹಿಂದಿಯಲ್ಲಿ ಓ ಅಂದ್ರೆ ಠೋ ಅನ್ನೋದೂ ಗೊತ್ತಿಲ್ಲದೋರೂ ಕೂಡಾ ಟಿ.ವಿ ಮುಂದೆ ಕೂತು, ಈ ಹಿಂದಿ ಕಾರ್ಯಕ್ರಮಾನ ನೋಡೋ ಹಾಗೆ ಮಾಡೊ ಮಾರುಕಟ್ಟೆ ತಂತ್ರ ಇದು ಅನ್ನೋದ್ನ ನಾವು ಅರಿಯಬೇಕಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಹಿಂದಿಗೆ ದೊಡ್ಡ ಮಾರುಕಟ್ಟೆ ಇದೆ ಅಂತಾ ನಮ್ಮ ನಾಡಲ್ಲೇ ಇರೋ ಕನ್ನಡದ ಚಾನಲ್ಲುಗಳು ನಾಳೆ ಹಿಂದಿ ಹಾಡು ಹಾಡಸೋಕೆ ಶುರು ಮಾಡ್ತಾರೆ (ಈಗಾಗಲೇ ಕೆಲವು ವಾಹಿನಿಯಲ್ಲಿ ಅಂತಾ ಪ್ರಯತ್ನ ಮಾಡಿದ್ನ ಮರೆಯೋ ಹಾಗಿಲ್ಲ). ಹಿಂದಿ ಹಾಡಕ್ಕೆ ಬರದೇ ಇರೋರು, ಎಷ್ಟೇ ಅದ್ಭುತ ಗಾಯಕರಾಗಿದ್ರೂ ಅವಕಾಶ ಇಲ್ದೇ ಮೂಲೆಗುಂಪಾಗಬೇಕಾಗುತ್ತೆ. ಇದ್ನೇ ತಾನೇ ಹೇರಿಕೆ ಅನ್ನೋದು. ಹೀಗೆ ತಾನೆ ನಮ್ಮ ಮನೆ-ಮನಗಳಿಗೆ ನಮ್ಮದಲ್ಲದ ಹಿಂದಿ ಲಗ್ಗೆ ಹಾಕೋದು? ನಮ್ಮ ದುಡ್ಡು ಕೊಟ್ಟು, ನಮ್ಮ ಮನೆಗೆ ಮಾರಿನಾ ಬಿಟ್ಕೊಳ್ಳೊದು ಅಂದ್ರೆ ಇದೇ ತಾನೆ?

ಕನ್ನಡ ಚಿಕ್ಕದು ಹಿಂದಿ ದೊಡ್ಡದು?

ಹಿಂದಿಯೊಂದೆ ಭಾರತವನ್ನು ಪ್ರತಿನಿಧಿಸೋ ಭಾಷೆ, ಉಳಿದ ಭಾರತೀಯ ಭಾಷೆಗಳೆಲ್ಲ ಲೆಕ್ಕಕ್ಕೆ ಇಲ್ಲದ ಭಾಷೆಗಳು ಅನ್ನೊ ಹಿಂದಿ ಮೇಲರಿಮೆಯ ಕಾರಣದಿಂದಲೇ ಹಿಂದಿ ಅನ್ನೊ ಪ್ರಾದೇಶಿಕ ಭಾಷೆಯ ಕಾರ್ಯಕ್ರಮಕ್ಕೆ ವಾಯ್ಸ್ ಆಫ್ ಇಂಡಿಯಾ ಅನ್ನುವ ಹೆಸರಿಡುವ ಸೊಕ್ಕಿಗೆ ಕಾರಣವಾಗುತ್ತೆ. "ಕನ್ನಡ ಚಿಕ್ಕದು! ಹಿಂದಿ ದೊಡ್ಡದು!!" ಅನ್ನೋದನ್ನು ಮನಮನಗಳಲ್ಲಿ ತುಂಬೋ ಪ್ರಯತ್ನವೇ ಈ ಕಾರ್ಯಕ್ರಮಗಳದ್ದು. ಕರ್ನಾಟಕದಲ್ಲಿ ಹಿಂದಿ ಮನರಂಜನೆಗೆ ಮಾರುಕಟ್ಟೆ ಕಟ್ಟಿಕೊಡಲು ಯತ್ನಿಸುತ್ತಿರುವ ಇಂಥಾ ರಿಯಾಲಿಟಿ ಶೋಗಳಿಗೆ ಕನ್ನಡಿಗರು ಮರುಳಾಗಬಾರದು ಗುರು.

ಯುವಕರಿಗೆ ಕನ್ನಡ ಬೇಡಾ ಅಂತ ಭಾವಿಸಿರೋ ಯುವದಸರಾ!


ಪ್ರತಿವರ್ಷದಂತೆ ಈ ಸಾರೀನೂ ಮೈಸೂರು ದಸರಾದ ಅಂಗವಾಗಿ ಯುವ ದಸರಾನ ಆಚರುಸ್ತಾ ಇದಾರೆ. ಆದ್ರೆ ನಾಡಿನ ಯುವ ಜನರ ಪ್ರತಿಭೆಗಳಿಗೆ ವೇದಿಕೆ ಆಗ್ಬೇಕಾಗಿದ್ದ ಈ ಯುವದಸರಾದ ಈ ವರ್ಷದ ಕಾರ್ಯಕ್ರಮಗಳ ಪಟ್ಟಿ ನೋಡುದ್ರೆ ಎಷ್ಟು ಚೆನ್ನಾಗಿ ಆಯೋಜಕರು ಎಡವಿದ್ದಾರೆ ಅಂತ ಗೊತ್ತಾಗುತ್ತೆ ಗುರು!

ಕನ್ನಡಿಗ ಕಲಾವಿದರಿಗೆ ಮನ್ನಣೆ ಇಲ್ಲ
ಈ ಕಾರ್ಯಕ್ರಮದ ಮೂಲಕ ಭಾರತದ ಪ್ರತಿಭೆಗಳನ್ನು ಮೈಸೂರಿಗರಿಗೆ ಪರಿಚಯಿಸುತ್ತೇವೆ ಅಂತ ಹೇಳ್ಕೊಂಡು ಇವ್ರು ಪ್ರತಿವರ್ಷ ಆಯೋಜಿಸೋ ಕಾರ್ಯಕ್ರಮಗಳಲ್ಲಿ ಪರಭಾಷಿಕರಿಗೇ ಮೊದಲ ಮಣೆ ಹಾಕ್ತಾ ಬಂದಿದಾರೆ. ಈ ಕಲಾವಿದರು ನೀಡೋ ಕಾರ್ಯಕ್ರಮದಲ್ಲೂ ಕನ್ನಡ ಕಣ್ಮರೆ, ಅಕಸ್ಮಾತ್ ಇವರು ದೊಡ್ದ ಮನಸ್ಸು ಮಾಡಿದರೆ ಒಂದೋ ಎರಡೋ ಕನ್ನಡ ಹಾಡುಗಳ್ನ ಹಾಡಬಹುದೇನೋ... ಈ ವರ್ಷಾನೆ ನೋಡಿ, ವಸುಂಧರಾ ದಾಸ್, ಶಿವಮಣಿ, ಕೈಲಾಸ್ ಖೇರ್, ಜಾಗೋ ಹಿಂದುಸ್ಥಾನಿ, ಶಂಕರ್ ಮಹದೇವನ್... ಇವ್ರು ಮಧ್ಯೆ ಕಾಣೋ ಒಂದೇ ಕನ್ನಡದ ಹೆಸರು ರಾಜೇಶ್ ಕೃಷ್ಣನ್.

ಕನ್ನಡ ಕಾರ್ಯಕ್ರಮಗಳಿಗೂ ಮನ್ನಣೆಯಿಲ್ಲ

ಕಲಾವಿದರೇ ನಮ್ಮೋರಲ್ಲದಿದ್ದಾಗ ಕಾರ್ಯಕ್ರಮ ನಮ್ಮದಾಗಿರುತ್ಯೇ? ಎಲ್ಲಾ ಕಾರ್ಯಕ್ರಮದ ನಿರೂಪಣೆಯೂ ಇಂಗ್ಲಿಷ್ ಭಾಷೇಲಿ ಮುಖ್ಯವಾಗಿತ್ತು. ಆಗಾಗ ಮತ್ತೆ ಜನ ಕೂಗ್ತಾರೆ ಅಂತ ಕನ್ನಡದಲ್ಲೂ ಮಾತಾಡ್ತಾ ಇದ್ರು. ಕನ್ನಡದ ಜನಕ್ಕೆ ಮಾಡ್ತಿರೋ ಕಾರ್ಯಕ್ರಮಾನ ಕನ್ನಡದಲ್ಲಿ ಯಾಕೆ ಮಾಡ್ಬಾರ್ದಾಗಿತ್ತು? ಪ್ರವಾಸಿಗಳಿಗೆ ಕನ್ನಡ ಬರಲ್ಲ ಅದುಕ್ಕೆ ಅಂದ್ರೆ ಹಾಗಾದ್ರೆ ಪ್ರವಾಸಿಗಳಿಗೆ ಕನ್ನಡದ ಪ್ರತಿಭೆಗಳನ್ನು ಪರಿಚಯ ಮಾಡಿಕೊಡೋ ದೃಷ್ಟಿಯಿಂದ ಹೆಚ್ಚೆಚ್ಚು ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಬೇಕಿತ್ತಲ್ವಾ? ಹೊರನಾಡಿನ ಪರಭಾಷೆಯ ಕಲಾವಿದರು ನೀಡಿದ ಕಾರ್ಯಕ್ರಮದಲ್ಲಿ ಸಿಂಹಪಾಲು ಹಿಂದಿ ಹಾಡುಗಳೇ. ರಾಜೇಶ್ ಒಬ್ಬರ ಕಾರ್ಯಕ್ರಮ ನೋಡ್ದಾಗ ಮಾತ್ರಾ ಈ ಯುವ ದಸರಾ ನಮ್ಮದು ಅನ್ನುಸ್ತಿತ್ತು. ಉಳಿದಂತೆ ಅದು ಪರದೇಶಿಗಳದ್ದಾಗಿತ್ತು ಗುರು!

ಕನ್ನಡ ಯುವಕ್ರು ಅಂದ್ರೆ ಕನ್ನಡದಿಂದ ದೂರ ಅಂತ್ಲಾ?
ಈ ಕಾರ್ಯಕ್ರಮದ ಆಯೋಜಕರು ಮೈಸೂರಿನ ಯುವಕ್ರು ಅಂದ್ರೆ ಕನ್ನಡಾನ ಮರ್ತು ಹೋಗ್ಬಿಟ್ಟಿದ್ದಾರೆ ಅಂದುಕೊಂಡಿದ್ದಾರೆ ಅನ್ಸುತ್ತೆ. ಹೀಗೆ ಒಂದು ಪೀಳಿಗೇನ್ನೆ ತಾಯ್ನುಡಿಯಿಂದ ದೂರಾ ಮಾಡಿ ಮನರಂಜನೆ ಅಂದ್ರೆ ಹಿಂದೀ ಅಂತ ತಲೇಲಿ ತುಂಬ್ತಿರೋ ಪಾಪದ ಕೆಲಸ ಮಾಡ್ತಿದಾರೆ ಇವ್ರು. ಇದು ಹೀಗೇ ನಡ್ಕಂಡ್ ಹೋದರೆ ಮುಂದಿನ ಕೆಲವೇ ವರ್ಷದಲ್ಲಿ ಕನ್ನಡ ಅನ್ನೋದು ದಸರಾ ಕಾರ್ಯಕ್ರಮಗಳಲ್ಲಿ ಮರೆಯಾಗೋದು ಗ್ಯಾರಂಟಿ. ಮತ್ತೂ ಮುಂದಿನ ದಿನಗಳಲ್ಲಿ ಕನ್ನಡ ಅನ್ನೋದು ಮನರಂಜನೆಗೇ ನಾಲಾಯಕ್ಕಾದ ಭಾಷೆ ಅನ್ಸಿಕೊಳ್ಳಲ್ವಾ? "ಇಡೀ ಭಾರತ ಒಂದು, ಒಂದು... ಅದ್ಕೆ ನ್ಯಾಶನಲ್ ಲೆವೆಲ್ಲಿನ ಮನರಂಜನೆ ತೊಗೊಳ್ಳಿ " ಅಂತಾ ನೈಸಾಗಿ ಹಿಂದೀನ ಹೇರೋ, ಹಿಂದಿ ಮನರಂಜನೆಗೆ ಮಾರುಕಟ್ಟೆ ಕಟ್ಟಿಕೊಡೋ ಹುನ್ನಾರ ಅಲ್ವಾ ಗುರು ಇದು?

ಕನ್ನಡ ಸಂಸ್ಕೃತಿ ಅಂದ್ರೆ ಇದೇನಾ?
ನಮ್ಮೂರ ನಾಡಹಬ್ಬದಲ್ಲಿ ಹೊರಗಿನ ಕಲಾವಿದರು ಇರಬಾರ್ದು ಅನ್ನೋ ವಾದ ನಮ್ಮದಲ್ಲ. ಆದರೆ ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸೋ ಕಾರ್ಯಕ್ರಮಗಳು, ನಮ್ಮ ದೇಸಿ ಪ್ರತಿಭೆಗಳು ತಮ್ಮ ಪ್ರತಿಭೇನ ಪ್ರಪಂಚದ ಮೂಲೆ ಮೂಲೆಯಿಂದ ಬಂದಿರೋ ಪ್ರವಾಸಿಗಳಿಗೆ ತೋರಿಸೋ ಅವಕಾಶ ಇರಬೇಕು ಅಲ್ವಾ ಗುರು? ಬರೀ ಕನ್ನಡ ಸಂಸ್ಕೃತಿ ಒಂದೇ ಅಲ್ಲ, ಯಾರಾದ್ರೂ ಕನ್ನಡಿಗರು ಪಾಶ್ಚಿಮಾತ್ಯ ಸಂಗೀತದಲ್ಲಿ ಪ್ರವೀಣರಾಗಿದ್ರೆ ಅಂಥವರ ಕಾರ್ಯಕ್ರಮಾನೂ ಇಡ್ಲಿ, ಯಾರು ಬೇಡಾ ಅಂದ್ರು. ಅದು ಬಿಟ್ಟು ಬರೀ ಹೊರಗಿನವ್ರಿಗೇ ಮಣೆ ಹಾಕೋದಾದ್ರೆ ಮೈಸೂರು ದಸರಾ ಅನ್ನೋದು ಅದ್ಹೇಗೆ ಕನ್ನಡಿಗರ ನಾಡಹಬ್ಬ ಆಗುತ್ತೆ? ಚಲನಚಿತ್ರ ಗೀತೆ, ಭಾವಗೀತೆ, ಜನಪದ ಗೀತೆ, ಜನಪದ ಕಲೆಗಳು, ಪಾಶ್ಚಿಮಾತ್ಯ ಸಂಗೀತ, ವಾದ್ಯಸಂಗೀತ, ನಾಟಕ, ಶಾಸ್ತ್ರೀಯನೃತ್ಯ, ಜನಪದ ನೃತ್ಯ, ಸಿನಿಮಾ ನೃತ್ಯ... ಇಂಥಾ ಹತ್ತಾರು ಕಲೆಗಳಲ್ಲಿ ಪರಿಣಿತಿ ಸಾಧುಸ್ತಾ ಇರೋ, ತಮ್ಮ ಪ್ರತಿಭೆಗೆ ಪ್ರೋತ್ಸಾಹ ಸಿಗಲೀ, ದಸರಾದಲ್ಲಿ ನಮಗೊಂದೇ ಒಂದು ಅವಕಾಶ ಸಿಗಲೀ ಅಂತ ಬಕಪಕ್ಷಗಳಂತೆ ಕಾಯ್ಕೊಂಡಿರೋ ಕನ್ನಡದ ಯುವಕ ಯುವತಿಯರನ್ನು ಕಡೆಗಣ್ಸೋದಾದ್ರೆ ಈ ಯುವ ದಸರಾ ಯಾಕೆ? ಮಣ್ ಹೊಯ್ಕೊಳ್ಳೋಕೆ... ಅಷ್ಟೆ.

ಪ್ರಜಾರಾಜ್ಯಂ: ಕನ್ನಡ ಮಾಧ್ಯಮಗಳ ದೊಂಬರಾಟ!

ಸಮಸ್ತ ಕನ್ನಡಿಗರ ಹೆಮ್ಮೆಯಾದ ವಿ.ಕ ಪತ್ರಿಕೆಯಲ್ಲಿ ಬಂದ ಸುದ್ದಿಯೊಂದನ್ನ ನೋಡಿ ಕನ್ನಡಿಗರು ದಂಗು ಬಡಿದು ಕುಂತಿದ್ದಾರೆ ಗುರು! ಆಂಧ್ರಪ್ರದೇಶದಲ್ಲಿ ಅಲ್ಲಿನ ಚಿತ್ರನಟ ಚಿರಂಜೀವಿ ಹೊಸದಾಗಿ ಕಟ್ಟಿರುವ ಪ್ರಜಾರಾಜ್ಯಂ ಅನ್ನೋ ರಾಜಕೀಯ ಪಕ್ಷದ ಬಗ್ಗೆ, ತೆಲುಗು-ತೆಲುಗ-ತೆಲುಗುನಾಡಿನ ಬಗ್ಗೆ ಅವರಿಗಿರುವ ಕನಸುಗಳೇನಪ್ಪಾ ಅಂತ ಬರ್ಕಂಬರಕ್ಕೆ ಹೋದ ನಮ್ಮ ವರದಿಗಾರ ಕೊನೆಯಲ್ಲಿ "ಕರ್ನಾಟಕಕ್ಕೆ ಪ್ರಜಾರಾಜ್ಯಂ ಪಕ್ಷ ಯಾವಾಗ ಕಾಲಿಡಲಿದೆ?" ಅನ್ನೋ ಪ್ರಶ್ನೆ ಕೇಳಿದ್ನ ನೋಡಿ ಕನ್ನಡಿಗರು ಕಣ್ ಕಣ್ ಬಿಡ್ತಾ "ಈ ಕನ್ನಡದ ವರದಿಗಾರರಿಗೆ ಅದ್ಯಾವ ಬರಬಾರದ ರೋಗ ಬಂದಿದೆ" ಅಂತಾ ಕನವರಿಸೋ ಹಾಗಾಗಿದೆ ಗುರು!
ಪಕ್ಕದ್ ಮನ್ಲಿ ಮದ್ವೆ ಅಂದ್ರೆ ಇವ್ರುಗೆ ಸೋಬ್ನದ್ ಸಡಗರ!

ಆಂಧ್ರಪ್ರದೇಶ, ತೆಲುಗು, ತೆಲುಗರ ಉದ್ಧಾರದ ಗುರಿ ಇಟ್ಟುಕೊಂಡು, ನಟ ಚಿರಂಜೀವಿ ಪಕ್ಷ ಕಟ್ಟಿದರೆ, ಅದನ್ನು ಕರ್ನಾಟಕದ ನಾಡಹಬ್ಬಾ ಏನೋ ಅನ್ನೊ ಹಾಗೆ ಹಗಲು ರಾತ್ರಿ ಪ್ರಸಾರ ಮಾಡಿ ಧನ್ಯರಾದರು ನಮ್ಮ ಕನ್ನಡದ ಟಿ ವಿ ಮಾಧ್ಯಮದವರು. ಅಲ್ಲಾ ಚಿರಂಜೀವಿ ತೆಲುಗರಿಗಾಗಿ, ತೆಲುಗರ ನಾಡಲ್ಲಿ ಪಕ್ಷ ಕಟ್ಟಿದ್ರೆ, ನಮ್ಮ ನಾಡಿನ ಪತ್ರಿಕೆಗಳು, ಟಿ.ವಿ. ಚಾನಲ್ ನವರು ’ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಿತು, ಕನ್ನಡಿಗರು ಇನ್ನ ಮೇಲೆ ಚಿನ್ನದ ಚಮಚೆಯಲ್ಲೆ ಉಣ್ಣೋದು’ ಅನ್ನೊ ಹಾಗೆ ಸಂಭ್ರಮಿಸಿದ್ದು ನೋಡಿ ಇವರೇನು ಕನ್ನಡ ನಾಡಿನಲ್ಲಿ, ಕನ್ನಡಿಗರಿಗಾಗಿ ಇರೋ ಪತ್ರಿಕೆಗಳಾ, ಚಾನಲ್ ಗಳಾ ಅನ್ನೋ ಸಂದೇಹ ಚೂರುಪಾರು ಮರ್ಯಾದೆ ಇರೋ ಕನ್ನಡಿಗರಿಗೆಲ್ಲ ಬಂದಿರೋದು ಖಂಡಿತಾ ಗುರು! ಆದ್ರೂ ಕನ್ನಡ ಮಾಧ್ಯಮದವರಿಗೆ ಇಂತವರಿಗೆ ಇಲ್ಲದ ಸಲ್ಲದ ಗೌರವ ಕೊಟ್ಟು, ಕನ್ನಡಿಗರ ತಲೆ ಮೇಲೆ ಕೂರಿಸೋದು ಅಂದ್ರೆ ಅದೇನು ಖುಷಿಯೋ!

ಕರ್ತವ್ಯ ಮರೆತ ಮಾಧ್ಯಮ

ಕರ್ನಾಟಕ-ಕನ್ನಡ-ಕನ್ನಡಿಗನಿಗೆ ಸಂಬಂಧಿಸಿದ ಎಲ್ಲ ವಿಷ್ಯದಲ್ಲಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾವಲು ಕಾಯಬೇಕಾಗಿರೋ ನಮ್ಮ ಕನ್ನಡ ಮಾಧ್ಯಮದವರು ತಮ್ಮ ಕರ್ತವ್ಯ ಮರೆತು ತಮಿಳರ, ಹಿಂದಿಯವರ ಚಿತ್ರಗಳಿಗೆ ಇಲ್ಲದ ಪ್ರಚಾರ ಕೊಟ್ಟು, ಕರ್ನಾಟಕದಲ್ಲಿ ಮಾರುಕಟ್ಟೆ ಹುಟ್ಟು ಹಾಕೋ ಕೆಲಸ ಮಾಡ್ತಾ ಇದ್ದಾರೆ ಗುರು. ಅಷ್ಟಕ್ಕೆ ನಿಲ್ಲದೇ, ಇವತ್ತು ನಟನೊಬ್ಬ ಅಲ್ಲೆಲ್ಲೊ ಪಕ್ಷ ಕಟ್ಟಿದ್ರೆ, ಅವನಿಗೆ ಕಾಲ ತೊಳೆದು, ಎಲೆ-ಅಡಿಕೆ ಕೊಟ್ಟು ಕರ್ನಾಟಕಕ್ಕೆ ಯಾವಾಗ ಬರ್ತಿರಾ? ಬಂದು ಕೊಚ್ಚೆಗುಂಡೀಲ್ ಬಿದ್ದು ಒದ್ದಾಡ್ತಿರೋ ಈ ಕನ್ನಡದೋರನ್ನು ಯಾವಾಗ ಉದ್ಧಾರ ಮಾಡ್ತಿರಾ? ಅಂತ ಕೇಳ್ತಾರಲ್ಲ!!! ಇದೇನಿವರ ಅಭಿಮಾನ್ಯಶೂನ್ಯತೇನೋ, ಇವುರ್ಗಾಗಿರೋ ಬುದ್ದಿ ಭ್ರಮಣೇನೋ?
ಕರ್ನಾಟಕಕ್ಕೆ ಯಾವಾಗ ಬರ್ತಿರಾ ಅಂತ ಕೇಳೊದ್ರ ಮೂಲಕ ಪರೋಕ್ಷವಾಗಿ, ನಮ್ಮ ನಾಡು, ನಾಡಿಗರಿಗೆ ಯಾವ ಸಂಬಂಧವೂ ಇಲ್ಲದ, ಎಲ್ಲಿಯದೋ ಒಂದು ಪಕ್ಷವನ್ನು, ಪಕ್ಷದವರನ್ನು " ಬನ್ನಿ, ಕರ್ನಾಟಕ ಅನ್ನೋದು ತೋಟದಪ್ಪನ ಛತ್ರ, ಇಲ್ಲಿ ಯಾರು ಬೇಕಾದ್ರೂ ಬಂದು ತಮ್ಮ ಬೇಳೆ ಬೇಯಿಸಿಕೊಬೌದು" ಅಂತಾ ಆಹ್ವಾನ ಕೊಟ್ಟಂಗಲ್ವಾ? ತೆಲುಗು-ತೆಲುಗರಿಗಾಗಿಯೇ ಹುಟ್ಟಿದ ಪಕ್ಷವೊಂದು ಕರ್ನಾಟಕಕ್ಕೆ ಕಾಲಿಟ್ಟರೆ, ಅದು ಎಂದಿಗಾದರೂ ಕನ್ನಡ-ಕನ್ನಡಿಗನ ಪರವಾಗಿ ನಿಲುವು ತೆಗೆದುಕೊಂಡೀತಾ? ಇಂತದೊಂದು ಮಾತಿನ ಮೂಲಕ ಕನ್ನಡಿಗರು ತಮ್ಮನ್ನು ತಾವು ಆಳಿಕೊಳ್ಳಲು ಆಗದವರು, ಅವರನ್ನ ಉದ್ಧಾರ ಮಾಡೋಕೆ ಅಲ್ಲೆಲ್ಲಿಂದ್ಲೋ ಒಂದು ಪಕ್ಷ ಬರಬೇಕು ಅನ್ನೊದು ಇವರ ನಿಲುವು ಅಂತಾ ತೋರುಸ್ತಿದಾರಾ? ಮಾಧ್ಯಮದವರ ಇಂತಾ ಬರವಣಿಗೆ ಇಡೀ ನಾಡಿನ ಮೇಲಾಗೋ ಪರಿಣಾಮದ ಬಗ್ಗೆ ಅರಿವಿರದೆ ಬೇಜವಾಬ್ದಾರಿಯಿಂದ ಆಡ್ತಿರೋ ಅಕ್ಷರ ಹುಚ್ಚಾಟ ಅಲ್ದೆ ಇನ್ನೇನು ಗುರು?

ಮೈಸೂರು ದಸರಾ - ವೆಬ್ ಸೈಟ್ ನೋಡಿದ್ರೆ ಬೇಸರಾ !

ಮೈಸೂರು ದಸರೆಯ ಅಧಿಕೃತ ವೆಬ್ ಸೈಟ್ ನೋಡಿದ್ಯಾ ಗುರು ? ಕನ್ನಡಕ್ಕೆ ಕೊಟ್ಟಿರೊ ಮರ್ಯಾದೆ ನೋಡಿ ತಾಯಿ ಚಾಮುಂಡೇಶ್ವರಿ ಕಣ್ಣಲ್ಲಿ ಗಳ ಗಳ ಅಂತಾ ನೀರು ಬರ್ತಾ ಇದೆ ಗುರು !

ನಮ್ಮ ನಾಡ ಹಬ್ಬಕ್ಕೆ ವಿಶ್ವದ ಮೂಲೆ ಮೂಲೆಯಿಂದ ಪ್ರವಾಸಿಗರನ್ನ ಸೆಳೆಯೊಕೆ ಇರೋ ಒಂದು ಮುಖ್ಯ ಮಾಧ್ಯಮ ಅಂದ್ರೆ ದಸರೆಯ ಅಧಿಕೃತ ವೆಬ್ ಸೈಟ್. ಪ್ರವಾಸಿಗಳ್ನ ಸೆಳೆಯೋಕೆ ಮತ್ತು ಅವರಿಗೆ ಅನುಕೂಲ ಮಾಡಿಕೊಡಬೇಕು ಅಂತ ಅವರುಗಳ ಭಾಷೇಲಿ ಇರ್ಲೇಬೇಕು, ನಿಜ. ಆದ್ರೆ ಕನ್ನಡದಲ್ಲಿ ಇಲ್ಲದೇ ಇರೋದು ಅಥ್ವಾ ಇದ್ರೂ ಕೆಟ್ಟದಾಗಿ ಅರೆಬರೆ ಇರೋದು ಮಾತ್ರ ಖಂಡಿತ ತಪ್ಪು ಗುರು! ಅದ್ಯಾಕೆ ನಮ್ಮ ಜನಕ್ಕೆ ನಮ್ಮ ಭಾಷೇನ ಅಡುಗೆಮನೆ-ಬಚ್ಚಲುಮನೆಗಳಿಗೇ ಮೀಸಲಾಗಿಡಬೇಕು ಅನ್ನೋ ರೋಗವೋ ಗೊತ್ತಿಲ್ಲ! ಅಥವಾ ಕನ್ನಡಿಗರಿಗೆ ಮೈಸೂರು ದಸರಾ ಬಗ್ಗೆ ಮಾಹಿತಿ ಬೇಡವೇ ಬೇಡ ಅನ್ನೋದು ಅವರ ತೀರ್ಮಾನವೇನು? ಏನು ಪೆದ್ದತನ! ಚೀನಿಯರು, ಒಲಂಪಿಕ್ಸ್ ಸಂಧರ್ಭವನ್ನು ಹೇಗೆ ತಮ್ಮ ಭಾಷೆಯನ್ನು ಇಡಿ ಜಗತ್ತಿಗೆ ಹೆಮ್ಮೆಯಿಂದ ತೋರಿಸಲು, ತಿಳಿಸಲು ಬಳಸಿಕೊಂಡರು ಅನ್ನೋದನ್ನ ನೋಡಿದ ಮೇಲಾದ್ರೂ ಈ ದಡ್ಡರಿಗೆ ಬುದ್ಧಿ ಬರಬಾರದಾ?

ತಾಣದಲ್ಲಿ ಕಡೆಗಣಿಸಲಾದ ಕನ್ನಡ

ಆ ಇಡೀ ತಾಣವನ್ನು ರೂಪಿಸಿರೋದು ಇಂಗ್ಲಿಷ್ ಭಾಷೇಲಿ. ಗೂಗಲ್ ಟ್ರಾನ್ಸಲೇಟ್ ಬಳಸಿ ವಿಶ್ವದ ಮೂವತೈದು ಭಾಷೆಗಳಲ್ಲಿ ಮಾಹಿತಿ ಸಿಗೋಹಾಗೆ ಮಾಡಿ ಕನ್ನಡವನ್ನ ಮೂಲೆಗೆ ತಳ್ಳಿದಾರಲ್ಲ, ಇವರಿಗೇನು ಬಂತು? ಸುಮ್ನೆ ಕಾಟಾಚಾರಕ್ಕೆ ಅನ್ನೊ ಹಾಗೆ, ಬರಿ ಒಂದು ಪುಟ (ಪಿ.ಡಿ.ಎಫ್ ) ದಷ್ಟು ಮಾಹಿತಿನಾ ಕನ್ನಡದಲ್ಲಿ ಕೊಟ್ಟು, ದಸರೆ ವೆಬ್ ಸೈಟ್ ಗೆ ಚಾಲನೆ ನೀಡಿದ್ರು ಈ ಭೂಪರು. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದ್ರು ಅನ್ನೊ ಹಾಗೆ, ದಸರೆ ಇನ್ನೆನು ಶುರು ಆಗ್ತಾ ಇದೆ ಅನ್ನೋವಾಗ, ಐ.ಟಿ.ಕನ್ನಡಿಗರ ಒತ್ತಾಯ, ಪ್ರತಿಭಟನೆಗೆ ಮಣಿದು ಕನ್ನಡದಲ್ಲಿ ಒಂದೆರಡು ಪುಟದಷ್ಟು ಮಾಹಿತಿ ಹಾಕಿದ್ದಾರೆ, ಅದು ಕೂಡ ಐ.ಟಿ.ಕನ್ನಡಿಗರ ಸಹಾಯ ಪಡೆದು! ದೇಶದ ಒಂದು ಪ್ರಾದೇಶಿಕ ಭಾಷೆಯಾದ ಹಿಂದಿಯಲ್ಲಿ ಪ್ರತಿ ಪುಟವನ್ನು ವಿನ್ಯಾಸ ಮಾಡಲು ಆಸಕ್ತಿ ತೆಗೆದುಕೊಂಡ ಈ ತಂಡ, ನಾಡ, ನಾಡಿಗರ ಭಾಷೆಯಾದ ಕನ್ನಡದ ಬಗ್ಗೆ ಯಾಕೆ ತಾತ್ಸಾರ ತಳೆದರೋ ?

ನಮ್ಮತನಾನ ತೋರಿಸಿಕೊಳ್ಳೋದೇ ಪ್ರವಾಸೋದ್ಯಮದ ಬೆನ್ನೆಲುಬು ಅಂದಾಗ ಈ ನಮ್ಮತನದಲ್ಲಿ ನಮ್ಮ ಭಾಷೇನೂ ಬರತ್ತೆ ಅನ್ನೋ ಬುದ್ಧಿ ಬೇಡವಾ? ಇಡೀ ಪ್ರಪಂಚದ ಕಣ್ಣಿಗೆ ಕನ್ನಡ ಮತ್ತು ಕನ್ನಡ ಸಂಸ್ಕೃತಿ ಎರಡನ್ನೂ ತೋರ್ಸೋ ಒಳ್ಳೇ ಅವಕಾಶ ಇದು. ಇದನ್ನೆಲ್ಲ ಬಿಟ್ಟು ಪ್ರವಾಸಿಗಳಿಗೆ ಬರೀ ಅವರತನವನ್ನೇ ತೋರಿಸಿಕೊಡಕ್ಕೆ ದಸರಾ ಯಾಕೆ ಮಣ್ಣು ಹುಯ್ಕೊಳಕ್ಕೆ? ನಮ್ಮೂರಿನ ಬಗ್ಗೆ ಇರೋ ನಮ್ಮದೇ ಅಂತರ್ಜಾಲ ತಾಣದಲ್ಲಿ ನಮ್ಮ ಭಾಷೇನೇ ನಾವು ಕಡೆಗಣುಸ್ತಾ ಇದೀವಿ ಅಂದ್ರೆ ಇದು ಎಂಥಾ ಕೀಳರಿಮೆ ಗುರು?! ಅಥವಾ ಫ್ರೆಂಚ್ ಪ್ರವಾಸಿಯೊಬ್ಬ ಇದನ್ನ ನೋಡಿ "ನಿಮ್ಮದು ಅಂತ ಯಾವ ಭಾಷೇನೂ ಇಲ್ಲವಾ ಗುರು?" ಅಂದ್ರೆ ಏನ್ ಮಾಡ್ತಾರಂತೆ ಆ ತಾಣವನ್ನ ಮಾಡಿರೋ ಭೂಪತಿಗಳು?

ಆ ತಾಣದ ಡಿಫಾಲ್ಟ್ ಭಾಷೆ ಕನ್ನಡವಾಗಬೇಕು

ನಮ್ಮತನವನ್ನ ಬರೀ ಅಡುಗೆಮನೆ-ಬಚ್ಚಲುಮನೆಗಳಿಗೇ ಮೀಸಲಿಡಬೇಕು ಅನ್ನೋ ಮನೆಹಾಳು ಬುದ್ಧಿ ಬಿಸಾಕಿ ಕೂಡಲೇ ಆ ತಾಣದಲ್ಲಿ ಈ ಕೆಳಗಿನ ಬದಲಾವಣೆಗಳಾಗಬೇಕು ಅಂತ ಆ ತಾಣ ಮಾಡಿರೋರ್ಗೆ ಒಸಿ ಬರಿಯೋಣ ಗುರು:

  • ಈ ತಾಣವನ್ನು ತೆರೆದ ಕೂಡಲೇ ಕನ್ನಡದ ಅಕ್ಷರಗಳು ಕಾಣಬೇಕು
  • ಬದಿಯಲ್ಲಿ ಭಾಷಾ ಆಯ್ಕೆ ಅಂತ ಬೇರೆ ಬೇರೆ ಭಾಷೆಗಳ ಆಯ್ಕೆಯ ಪಟ್ಟಿ ಇರಬೇಕು
  • ಎಲ್ಲ ಲಿಂಕುಗಳೂ ಕನ್ನಡದ ಆಯ್ಕೆ ಇದ್ದಾಗಲೂ ಕೆಲಸ ಮಾಡಬೇಕು.
ಕನ್ನಡದಲ್ಲಿ ಮಾಡಿ ಅಂದ್ರೆ ಕನ್ನಡದಲ್ಲಿ ಅದಾಗಲ್ಲ, ಇದಾಗಲ್ಲ, ಎಲ್ಲರಿಗೂ ಕಾಣೋಹಾಗೆ ಮಾಡಕ್ಕಾಗಲ್ಲ, ತಂತ್ರಾಂಶ ಇಲ್ಲ, ಗಿಂತ್ರಾಂಶ ಇಲ್ಲ, ಅಂತರ್ಜಾಲದ ಡಿಫಾಲ್ಟ್ ಭಾಷೆ ಇಂಗ್ಲೀಷ್, ಅದು-ಇದು, ಮಣ್ಣು-ಮಸಿ ಅಂತ ಉತ್ತರ ಕೊಡೋಕೆ ಮುಂದೆ ಬಂದ್ರೆ ಎಲ್ಲಕ್ಕೂ ನಮ್ಮಹತ್ತಿರ ಉತ್ರ ಇದೆ ಅಂತ ಹೇಳ್ಬೇಕು ಗುರು! ಈ ತಂತ್ರಾಂಶ-ಗಿಂತ್ರಾಂಶದ ತೊಂದರೆಗಳೆಲ್ಲ ಕುಣೀಲಾರದೇ ಇರೋರಿಗೆ ಮಾತ್ರ. ಕುಣೀಲೇಬೇಕು ಅಂತಿದ್ರೆ ತಂತ್ರಾಂಶವೂ ಬರತ್ತೆ, ಮಣ್ಣು-ಮಸೀನೂ ಬರತ್ತೆ ಅನ್ನೋದಕ್ಕೆ ಕನ್ನಡದಲ್ಲಿ ಇವತ್ತಿನ ದಿನ ಇರೋ ಸಾವಿರಗಟ್ಲೆ ಬ್ಲಾಗುಗಳೇ ಸಾಕ್ಷಿ ಗುರು! ನಮ್ಮ ಸರ್ಕಾರದ ದುಡ್ಡಲ್ಲಿ ಮಾಡೋ ಈ ವೆಬ್ ಸೈಟ್ ಅಲ್ಲಿ ಕನ್ನಡದ ಪರಿಸ್ಥಿತಿ ಹೀಗಿದೆ ಅಂದ್ರೆ, ಅದು ನಮ್ಮ ಸರ್ಕಾರಕ್ಕೆ ಕನ್ನಡ ಅನುಷ್ಟಾನದ ಬಗ್ಗೆ ಇರೋ ಕಳಕಳಿ, ಪ್ರಾಮಾಣಿಕತೆ ಏನು ಅಂತ ತೋರ್ಸುತ್ತೆ ಗುರು !
Related Posts with Thumbnails