ವಿಷ್ಣುವರ್ಧನ್ ಇನ್ನಿಲ್ಲ: ಮುಗಿಯಿತು ಮುತ್ತಿನ ಹಾರದ ಕವನ!


ಇಂದು ಬೆಳಗ್ಗೆ ಕನ್ನಡದ ಹಿರಿಯ ನಾಯಕ ನಟರಾದ ಡಾ. ವಿಷ್ಣುವರ್ಧನ್ (ಫೋಟೋ ಕೃಪೆ : ಒನ್ ಇಂಡಿಯ.ಇನ್) ಅವ್ರು ಮೈಸೂರಿನಲ್ಲಿ ತೀರಿಕೊಂಡಿದ್ದಾರೆ. ವಂಶವೃಕ್ಷದ ಸಣ್ಣ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸಂಪತ್ ಕುಮಾರ್, ನಾಗರಹಾವು ಚಿತ್ರದಲ್ಲಿ ನಾಯಕರಾಗಿ ವಿಷ್ಣುವರ್ಧನ್ ಎಂಬ ಹೆಸರಲ್ಲಿ ಮನೆ ಮಾತಾದರು. ಇದುವರೆಗೂ ಇವರು 197 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿನ್ನೆಯಷ್ಟೇ ತೀರಿಕೊಂಡಿದ್ದ ಶ್ರೀ. ಸಿ.ಅಶ್ವತ್ಥ್ ಅವರ ಸಾವಿನಿಂದ ಕಂಗೆಟ್ಟಿದ್ದ ಕನ್ನಡ ಜನತೆಗೆ ಇವರ ಸಾವು ಮತ್ತೊಂದು ಆಘಾತಕಾರಿ ಸುದ್ದಿಯಾಗಿದೆ. 2009, ಹೋಗುವ ಮುನ್ನ ಕನ್ನಡದ ಸಂಪತ್ತನ್ನೆಲ್ಲಾ ಕಸಿದು ಒಯ್ಯುತ್ತಿದೆಯೇನೋ ಎನ್ನುವ ನೋವಿನ ಚೀತ್ಕಾರ ಕನ್ನಡಿಗರಲ್ಲುಂಟು ಮಾಡಿದೆ. ಡಾ. ವಿಷ್ಣು ಆತ್ಮಕ್ಕೆ ಚಿರಶಾಂತಿ ಲಭಿಸಲಿ.

ಸಿ. ಅಶ್ವತ್ಥ್ : ಹಾರಿ ಹೋದ ಹಾಡುಹಕ್ಕಿ


ಕನ್ನಡವೇ ಸತ್ಯ ಖ್ಯಾತಿಯ ಹೆಮ್ಮೆಯ ಗಾಯಕ, ಸಂಗೀತ ನಿರ್ದೇಶಕ, ಸುಗಮ ಸಂಗೀತದ ಮಾಂತ್ರಿಕ, ಏರುದನಿಯ ಹಾಡುಗಾರ, ನಮ್ಮೆಲ್ಲರ ಪ್ರೀತಿಯ ಶ್ರೀ. ಸಿ. ಅಶ್ವಥ್ ಅವರು ಇಂದು ನಿಧನರಾಗಿದ್ದಾರೆ. ಅಶ್ವಥ್ ಎಂದೊಡನೆ ನೆನಪಾಗುವುದು ಕಾಮನ ಬಿಲ್ಲು ಚಿತ್ರದ "ನೇಗಿಲ ಹಿಡಿದು ಹೊಲವನು..." ಹಾಡು ಮತ್ತು ಆ ಹಾಡು ನಾಡಲ್ಲಿ ಮೂಡಿಸಿದ ಸಂಚಲನ. ಶಿಶುನಾಳ ಶರೀಫ ಅಂದರೆ ಕಣ್ಮುಂದೆ ಬರುವುದು ಅಶ್ವತ್ಥರ ಹಾಡುಗಳು.
ಏನ್ ಗುರು ಶ್ರೀಯುತರಿಗೆ ಗೌರವ ಪೂರ್ವಕವಾದ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತದೆ. ಪ್ರೀತಿಪೂರ್ವಕ... ಕಂಬನಿ ತುಂಬಿದ ವಿದಾಯಗಳು.

ದಾರಿ ತಪ್ಪಿದ ಸಂದೇಶ

ಬೆಂಗಳೂರಿನ ನಗರ ಪಾಲಿಕೆಗೆ ಚುನಾವಣೆಯ ದಿನಗಳು ಹತ್ತಿರ ಬರುತ್ತಿವೆ. ಈ ಸಂದರ್ಭದಲ್ಲಿ ಬೆಂಗಳೂರಿನ ಮತದಾರರಲ್ಲಿ ಈ ಚುನಾವಣೆಯ ಪ್ರಾಶಸ್ತ್ಯ ಮತ್ತು ಅದರಲ್ಲಿ ಮತದಾರರ ಮುಖ್ಯ ಪಾತ್ರದ ಬಗ್ಗೆ ಜನ್ರಲ್ಲಿ ಜಾಗೃತಿ ಮೂಡಿಸಲು ಇತ್ತೀಚೆಗೆ ಒಂದು ಕಾರ್ಯಕ್ರಮ ಜರುಗಿತು. ಮತದಾನ ಬಹಳ ಮುಖ್ಯ ವಿಚಾರ, ಅದರಲ್ಲಿ ಜನರ ಪಾತ್ರ ಅತಿ ಮುಖ್ಯ, ಇದನ್ನು ಜನರಿಗೆ ತಿಳಿ ಹೇಳಬೇಕು, ಎಲ್ಲಾ ಸರಿ. ಆದರೆ ಬೆಂಗಳೂರಿನ ಮತದಾರರಿಗೆ ಜಾಗೃತಿಯ ವಿಷಯ ಹಿಂದಿಯಲ್ಲಿ "ಜಾಗ್ತೇ ರಹೋ" ಎಂದು ಹಿಂದಿ ಭಾಷೇಲಿ ಹೇಳಿದರೆ ಕೆಲ್ಸ ಆಗತ್ತಾ ಗುರು?

ಈ ಚುನಾವಣೆ ಬೆಂಗಳೂರಿನ ಪಾಲಿಕೆಗೇ ತಾನೆ?

ಅಲ್ಲಾ, ಈ ಚುನಾವಣೆ ಬೆಂಗಳೂರಿನ ಮಹಾನಗರ ಪಾಲಿಕೆಗೋ, ಅಥವಾ ಭೂಪಾಲ ನಗರಕ್ಕೋ? ಇದರ ಆಯೋಜಕರು ಈ ಪ್ರಶ್ನೆಗೆ ಉತ್ತರ ಕಂಡುಕೊಂಡ ಬಳಿಕ ಕಾರ್ಯಕ್ರಮ ನಡೆಸಿದ್ದರೆ ಚೆನ್ನಾಗಿರ್ತಿತ್ತು. ಚುನಾವಣೆಯಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳಬೇಕು, ತಮ್ಮ ಮತ ಹಾಕಬೇಕು, ಚುನಾವಣೆಯನ್ನು ಯಶಸ್ವಿಗೊಳಿಸಬೇಕು, ಸರಿಯಾದ ನಗರಸಭಾ ಸದಸ್ಯರನ್ನು ಆಯ್ಕೆ ಮಾಡಬೇಕು, ಸರಿ. ಆದರೆ ಈ ಎಲ್ಲಾ ಸಂದೇಶಗಳನ್ನು ಒಂದೆರಡು ಪದಗಳಲ್ಲಿ ಜನರಿಗೆ ಹೇಳಲು ಹೊರಟು, ಬೆಂಗಳೂರಿನ ಈ ಚುನಾವಣೆಗೆ ಏನೇನೂ ಸಂಬಂಧವಿರದ ಹಿಂದಿ ಭಾಷೆಯನ್ನು ಬಳಸಿದರೆ ಹೇಗೆ?! ಇಲ್ಲಿ ಮತದಾರರಿಗೆ "ಎದ್ದೇಳು ಮತದಾರ" ಎಂದು ಹೇಳಿದರೆ ಕಾರ್ಯಕ್ರಮ ನಡೆಸಲು ಅಸಾಧ್ಯವಾಗುತ್ತಿತ್ತೇ? ಬೆಂಗಳೂರಿನ ಜನರಿಗೆ ಸಂದೇಶ ರವಾನಿಸಲು ಯಾವ ಭಾಷೆ ಸರಿಯಾದ್ದು ಎಂದೇ ಅರಿಯದ ಇವರು ಚುನಾವಣೆಯಂತ ಮುಖ್ಯ ಸಂದೇಶ ಕೊಡಲಾದೀತೇ?

ಆದೀತು.. ಇನ್ನೂ ಕಾಲ ಮಿಂಚಿಲ್ಲ. ಚುನಾವಣೆಗೆ ಮುನ್ನ ಇರುವ ಸಮಯದಲ್ಲಿ ಈ ಕಾರ್ಯಕ್ರಮದ ಹೆಸರು, ಅದರೊಳಗೆ ಹೇಳಬೇಕೆಂದಿರುವ ಸಂದೇಶಗಳನ್ನೆಲ್ಲಾ ಬೆಂಗಳೂರಿನ ಜನರಿಗೆ ಅರ್ಥವಾಗುವಂತೆ ಲಕ್ಷಣವಾಗಿ ಕನ್ನಡದಲ್ಲಿ ಹೇಳಿ ಜನರನ್ನು ತಲುಪಬಹುದು, ಸಂದೇಶವನ್ನು ಸರಿಯಾಗಿ ತಲುಪಿಸಬಹುದು. ಆಗ ನೋಡಿ, ನಿಜಕ್ಕೂ ಚುನಾವಣೆಯೆಂದರೆ ನಿದ್ದೆ ಮಾಡುವವರೂ ಎದ್ದು ಬಂದು ಮತ ಹಾಕ್ಯಾರು!

ಹಿಂದೀ ಪ್ರಚಾರ ಸಭೆಗಳು ಬೇಕಾ?

ಇತ್ತೀಚಿಗೆ ಬೆಂಗಳೂರಿನ ಚೌಡಯ್ಯಾ ಮೆಮೋರಿಯಲ್ ಹಾಲ್‍ನಲ್ಲಿ ಮೈಸೂರು ಹಿಂದೀ ಪ್ರಚಾರ ಪರಿಷತ್ತಿನೋರು 43ನೇ ಪದವಿ ಪ್ರದಾನ ಸಮಾರಂಭ ಮಾಡುದ್ರು. ಅದರಲ್ಲಿ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕದ ರಾಜ್ಯಪಾಲರಾದ ಶ್ರೀ ಹಂಸರಾಜ ಭಾರಧ್ವಾಜರು ಸೊಗಸಾಗಿ ಹಿಂದೀ ಹೇರಿಕೆಗೆ ಒಂದು ಪಾವಿತ್ರ್ಯತೆ ತಂದುಕೊಡೋ ಕೆಲಸಕ್ ಕೈ ಹಾಕಿದಾರೆ. ಇವರ ಜೊತೆಯಲ್ಲಿ ರತ್ನಾಕರ ಪಾಂಡೆ ಎನ್ನೋ ಮಹನೀಯರೂ ಆಣಿಮುತ್ತುಗಳಾಡಿದ್ದಾರೆ.

ಉದುರಿದ ನುಡಿಮುತ್ತುಗಳು!

"ಸ್ವಾತಂತ್ರ ಹೋರಾಟದಲ್ಲಿ ಭಾರತೀಯರೆಲ್ಲಾ ಹಿಂದಿಯ ಮೂಲಕ ಸಂಘಟಿತರಾದರು. ಕನ್ನಡ ಸಂಸ್ಕೃತಿಯು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರೋದ್ರಿಂದ ಈ ಜನರು ಹಿಂದೀನ ಬಳುಸ್ತಾರೆ" ಅಂತ ಅವರಂದ್ರೆ ಪರಿಷತ್‍ನ ಮಹಾ ಪೋಷಕರಾದ ಡಾ.ರತ್ನಾಕರ ಪಾಂಡೆಯವ್ರು ‘ಈಚಿನ ವರ್ಷಗಳಲ್ಲಿ ಇಂಗ್ಲಿಷ್ ಭಾಷೆಯ ಪ್ರಭಾವ ತೀವ್ರವಾಗಿದ್ದು, ಪ್ರಾಂತೀಯ ಭಾಷೆಗಳ ಬಳಕೆ ಕ್ಷೀಣಿಸುತ್ತಿದೆ. ಪ್ರತಿಯೊಂದು ರಾಜ್ಯದವರು ತಮ್ಮ ಮಾತೃಭಾಷೆಯನ್ನೇ ಬಳಸಲಿ. ಆದರೆ ಇತರೆ ಭಾಷಿಗರೊಂದಿಗೆ ವ್ಯವಹರಿಸುವಾಗ ಇಂಗ್ಲಿಷ್‌ಗೆ ಬದಲಾಗಿ ಹಿಂದಿ ಬಳಸಬೇಕು’ ಎಂದು ಕರೆ ನೀಡಿದರು.

ಅದೇ ಹಳೇ ಟ್ರಿಕ್ಕುಗಳು!

ಹಿಂದೀನಾ ಭಾರತದ ಜನರ ಮೇಲೆ ಹೊರೆಸಲು ಇವ್ರುಗಳು ಬಳುಸ್ತಿರೋ ಮಾಮೂಲಿ ಹಳೇ ಟ್ರಿಕ್ಕುಗಳೇ ಇವಾಗಿವೆ ಗುರು! ನಮ್ಮೂರಲ್ಲಿ ನಾವು ಪರಭಾಷೆಯೋರ ಜೊತೆ ಹಿಂದಿ ಬಳುಸ್ಬೇಕಂತೆ. ಪರಭಾಷಿಕರು ಅಂದ್ರೆ ತಮಿಳರು, ತೆಲುಗರು, ಮಲಯಾಳಿಗಳು, ಮರಾಠಿಗರು, ಬೆಂಗಾಲಿಗಳು, ಪಂಜಾಬಿಗಳು, ಗುಜರಾತಿಗಳೂ...ಸೇರಿದ ಹಾಗೆ ಎಲ್ಲಾ ಭಾಷೆ ಮಾತಾಡೋರೂ ಅಂತಾ ಅರ್ಥ. ಆಕಸ್ಮಾತ್ ನಾವು ಬಂದೋರ ಜೊತೇಲೆಲ್ಲಾ ಹಿಂದೀ ಬಳುಸಕ್ ಶುರು ಹಚ್ಕೊಂ
ಡ್ರೆ ನಮ್ಮ ನಾಡಲ್ಲಿ ನಮ್ಮ ನುಡಿ ಉಳಿದೀತಾ ಗುರು? ಅದರ್ ಬದ್ಲು ಇವ್ರುಗಳು ‘ಕನ್ನಡನಾಡಿಗೆ ಬಂದೋರೆಲ್ಲಾ ತಮ್ಮ ತಾಯ್ನುಡೀನಾ ಮನೇಲಿ ಬಿಟ್ಟು ಕನ್ನಡದಲ್ಲೇ ವ್ಯವಹರುಸ್ಬೇಕು‘ ಅನ್ನಬೇಕಿತ್ತಲ್ವಾ? ಈ ಜನಗಳ ಇನ್ನೊಂದು ಟ್ರಿಕ್ಕು ಇಂಗ್ಲಿಷ್ ಭಾಷೇ ನಮ್ಮನ್ನು ಗುಲಾಮರಾಗಿ ಮಾಡಿಕೊಂಡಿದ್ದ ಬ್ರಿಟೀಷರ ಭಾಷೆ. ಅದನ್ನು ಬಳುಸೋದು ಗುಲಾಮಗಿರಿ ಸಂಕೇತ ಅನ್ನೋ ಧ್ವನೀಲಿ ಮಾತಾಡೋದು. ಆ ಮೂಲಕ ಇವರೇನು ಕನ್ನಡ ಬಳಸಿ ಅಂತಿಲ್ಲಾ... ‘ಇಂಗ್ಲಿಷ್ ಬ್ಯಾಡಾ ಹಿಂದೀ ಬಳಸಿ’ ಅಂತಿದಾರೆ. ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾ ಅನ್ನೋ ಸಂಸ್ಥೇ ಮೂಲಕ ಈ ಪ್ರಚಾರದ ಕೆಲಸಕ್ಕೆ ಮುಂದಾಗಿದಾರೆ. ಇಂಥಾ ಪ್ರಚಾರಗಳ ಪೊಳ್ಳುತನ, ಅದರಿಂದಾಗೋ ಅಪಾಯಗಳ್ನ ನಾಡಿನ ಜನತೆ ಅರ್ಥ ಮಾಡ್ಕೋಬೇಕಾಗಿದೆ. ಅದು ಅಂಥಾ ಕಷ್ಟದ್ ಕೆಲ್ಸಾನೂ ಅಲ್ಲಾ ಗುರೂ! ಸುಮ್ನೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಲಾಂಛನದಲ್ಲಿ ಬರೆದಿರೋ ಸಾಲುಗಳನ್ನು ಓದಿಕೊಂಡ್ರೆ ಸಾಕು. ಅದರಲ್ಲೇನಿದೆ ಅಂದ್ರಾ... " ಏಕ್ ರಾಷ್ಟ್ರಭಾಷಾ ಹಿಂದೀ ಹೋ! ಏಕ್ ಹೃದಯ್ ಹೋ ಭಾರತ್ ಜನನಿ " ಅಂತಾ ಇದೆ. ಇದರರ್ಥ ಹಿಂದಿ ಅಲ್ಲದ ನುಡಿಗಳಿಗೆಲ್ಲಾ ಭಾರತದಲ್ಲಿ ಜಾಗಾ ಇಲ್ಲಾ ಅಂತ ಇದ್ದಂಗಿಲ್ವಾ? ಗುರೂ!!

ಕೊನೆಹನಿ : ತೆರಿಗೇ ರೂಪದಲ್ಲಿ ನಮ್ಮದೇ ಹಣಾ ತೊಗೊಂಡು, ನಮ್ಮೂರಲ್ಲೇ, ನಮಗೇ, ನಮ್ಮದಲ್ಲದ ಹಿಂದೀನಾ ಕಲಿಸೋ ಇಂಥಾ ಪ್ರಚಾರ ಸಭಾಗಳು ಯಾಕೆ ಬೇಕು? ಇಂಥಾ ಸಭೆಗಳ ಘೋಷಿತ ಉದ್ದೇಶಾನೇ ‘ಭಾರತಾನಾ ಒಂದಾಗಿಟ್ಕೊಳ್ಳೋಕೇ ನಮ್ಮದಲ್ಲದ ನುಡೀನಾ ನಮಗೆ ಕಲಿಸೋದು’ ಅನ್ನೋದಾದ್ರೆ ‘ಭಾರತದ ಏಕತೆ’ ಅಷ್ಟೊಂದು ಅಸಹಜವಾಗಿರೋದಾ ಅನ್ಸಲ್ವಾ ಗುರು?

ಬಿ.ಎಸ್.ಈ ತಾಣ - ಕನ್ನಡಕ್ಕಿಲ್ಲ ಸ್ಥಾನ !

ದೇಶದ ಅಗ್ರ ಶೇರು ಮಾರುಕಟ್ಟೆಯಾದ ಬಿ.ಎಸ್.ಈ ಭಾರತದ ಹಲವು ಭಾಷೆಗಳಲ್ಲಿ ಶೇರು ವಹಿವಾಟು ನಡೆಸಲು ಅನುಕೂಲವಾಗುವಂತೆ ಅಂತರ್ಜಾಲದ ತಾಣಗಳನ್ನು ವಿನ್ಯಾಸಗೊಳಿಸುವುದಾಗಿ ಹೇಳಿರುವ ಸುದ್ಧಿ ಬಂದಿದೆ ಗುರು.

ಶೇರು ಮಾರುಕಟ್ಟೆಯನ್ನು ಇನ್ನಷ್ಟು ಜನಪ್ರಿಯಗೊಳಿಸುವ, ಅದರಿಂದ ಸಿಗುವ ಲಾಭವನ್ನು ಇನ್ನಷ್ಟು ಜನರಿಗೆ ತಲುಪಿಸುವಲ್ಲಿ ಈ ನಡೆ ಖಂಡಿತ ಸಹಾಯ ಮಾಡಲಿದೆ. ಆದರೆ, " ಸಕಲ ಗುಣ ಸಂಪನ್ನ, ಏಕ ಗುಣ ಹೀನ" ಅನ್ನೋ ಸಂಸ್ಕೃತದ ಗಾದೆಯಂತೆ, ಈ ನಡೆಯಂತೆ ಶುರುವಾಗಲಿರುವ ತಾಣಗಳ ಪಟ್ಟಿಯಲ್ಲಿ ಕನ್ನಡಕ್ಕೆ ಸ್ಥಾನ ಕೊಟ್ಟಿಲ್ಲ ಗುರು !

ಕನ್ನಡದಲ್ಲಿ ತಾಣ ಹೆಚ್ಚಿಸುತ್ತೆ ವಹಿವಾಟು !
ಶೇರು ಮಾರುಕಟ್ಟೆಯನ್ನು ಮತ್ತು ಅದರಲ್ಲಿ ಹೂಡಿಕೆಯಿಂದ ಆಗೋ ಲಾಭವನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮರಾಠಿ, ತಮಿಳು, ತೆಲುಗು ಮತ್ತು ಪಂಜಾಬಿ ಭಾಷೆಯಲ್ಲಿ ಈ ತಾಣಗಳನ್ನು ರೂಪಿಸುವುದಾಗಿ BSE ತಿಳಿಸಿದೆ. ಕನ್ನಡವನ್ನು ಕಡೆಗಣಿಸಿರುವ ಇವರನ್ನು ಜಾಗೃತ ಕನ್ನಡದ ಗ್ರಾಹಕರು ಮಾತ್ರ ಎಚ್ಚರಿಸಬಲ್ಲರು ಗುರು. ಕನ್ನಡದಲ್ಲೂ ಈ ತಾಣ ರೂಪಿಸುವುದು ಕರ್ನಾಟಕದಲ್ಲಿ BSE ಶೇರು ವಹಿವಾಟನ್ನು ಇನ್ನಷ್ಟು ಜನಪ್ರಿಯಗೊಳಿಸುವುದಲ್ಲದೇ, ವಹಿವಾಟು ನಡೆಸುವ ಜನರಿಗೂ ಹಾಗೂ BSE ಗೂ ಹೆಚ್ಚಿನ ವಹಿವಾಟಿನ ಲಾಭ ತಂದು ಕೊಡಲಿದೆ ಎಂದು ಇವರಿಗೆ ತಿಳಿ ಹೇಳೊಣ, ಆ ಮೂಲಕ ಬದಲಾವಣೆಯೊಂದಕ್ಕೆ ಕಾರಣವಾಗೋಣ. ಏನಂತೀಯ ಗುರು ?

ಎಸ್ಸೆಮ್ಮೆಸ್ಸು!

ಭಾರತದಲ್ಲಿ 40 ಕೋಟಿಯಷ್ಟು ಜನ ಮೊಬೈಲು ಬಳಕೆದಾರರು ಇರೋದು ನಿಮಗೆ ಗೊತ್ತಿರ್ಬೋದು. ತಿಂಗಳೊಂದರಲ್ಲೇ ಸುಮಾರು ಒಂದು ಕೋಟಿ ಜನ ಹೊಸದಾಗಿ ಮೊಬೈಲು ಚಂದಾದಾರರು ಆಗ್ತಿರೋದೂ ನಿಮಗೆ ಗೊತ್ತಿರ್ಬೋದು. ಆದ್ರೆ ಅದರಲ್ಲಿ 10 ಕೋಟಿಗಿಂತಲೂ ಕಡಿಮೆ ಜನರು ಇಂಗ್ಲಿಶ್ ಬಲ್ಲವರು ಅಂತ ಗೊತ್ತಿತ್ತಾ? ಅಥವಾ ಆ ಹತ್ತು ಕೋಟಿ ಜನರಲ್ಲಿ SMS ಕಳಿಸುವಾಗ ಇಂಗ್ಲಿಶ್ ಬಳಕೆ ಮಾಡುವ ಜನ ಇನ್ನೂ ಕಡಿಮೆ ಅಂತ ನಿಮಗೆ ಗೊತ್ತಿತಾ? ಇತ್ತೀಚೆಗೆ ಎಕನಾಮಿಕ್ ಟೈಮ್ಸ್ ಅವರು ನವೆಂಬರ್ ತಿಂಗಳ 24ರಂದು ಇದೇ ಸುದ್ಧಿ ಹೊರತಂದವ್ರೆ.

ಇಲ್ಲಿ ಮೊಬೈಲು, ಎಸ್ಸೆಮ್ಮೆಸ್ಸು ಇಷ್ಟೇ ಇಲ್ಲ ವಿಷಯ. ಇಲ್ಲಿ ಟಾಕಿಯಾನ್ ಟೆಕ್ ಅವರು "ಕ್ವಿಲ್-ಪ್ಯಾಡ್" ಎಂಬ ಹೊಸದೊಂದು ತಂತ್ರಾಂಶ ಹೊರತಂದಿರೋದು ವಿಷಯ. ಈ ತಂತ್ರಾಂಶ ಉಪಯೋಗಿಸಿ ಯಾವುದೇ ಮೊಬೈಲ್ ಫೋನಿನಿಂದ ಕನ್ನಡ ಅಥವಾ ಬೇರೆ ನಾಲ್ಕೈದು ಭಾಷೆಗಳಲ್ಲಿ ಎಸ್ಸೆಮ್ಮೆಸ್ಸ್ ಕಳಿಸಬಹುದು ಅಂತೆಲ್ಲಾ ಹೇಳವ್ರೆ! ಇದು ಸಕ್ಕತ್ ಒಳ್ಳೇದಾಯ್ತು ಗುರು! ಮುಂದೆ ಕನ್ನಡದಾಗೇ ಆರಾಮಾಗಿ ಎಸ್ಸೆಮ್ಮೆಸ್ಸು ಕಳಿಸ್ಬೋದು, ಅಲ್ವ? ಈ ಕ್ವಿಲ್-ಪ್ಯಾಡ್ ಅಂತಹ ತಂತ್ರಾಂಶಗಳು ಎಲ್ಲಾ ಮೊಬೈಲುಗಳೊಳಗೆ ಹೊಕ್ಕೋದಂತೂ ಖಚಿತ ಗುರು!

ಪ್ರತ್ಯೇಕ ಮೊಬೈಲು ಕೊಳ್ಳದೇ ಕನ್ನಡದಲ್ಲಿ ಎಸ್ಸೆಮ್ಮೆಸ್ಸು ಕಳಿಸೋಕ್ಕೆ ಈ ತಂತ್ರಾಂಶ ಅವಕಾಶ ಮಾಡಿಕೊಟ್ಟಿದೆ. ಇದ್ರಿಂದ ಇದುವರೆಗೂ ಕಷ್ಟ ಪಟ್ಕೊಂಡು ಇಂಗ್ಲಿಶಿನಲ್ಲಿದ್ದ ಎಸ್ಸೆಮ್ಮೆಸ್ಸು ಓದುವ ಗೋಜು ನಿಲ್ಲುತ್ತೆ. ಆದರೆ ಇದರಲ್ಲಿ ಇನ್ನೂ ಎಸ್ಸೆಮ್ಮೆಸ್ಸು ಕಳಿಸಲು ಇಂಗ್ಲಿಶ್ ಬಳಕೆ ಬೇಕಾದ್ದರಿಂದ ಕೀಲಿಮಣೆಯೂ ಕನ್ನಡದಲ್ಲೇ ಇದ್ದರೆ ಇನ್ನೂ ಅನುಕೂಲ ಹೆಚ್ಚು. ಇಂತಹ ಅವಶ್ಯಕತೆಯನ್ನು ಅರಿತು ಮೊಬೈಲು ಉತ್ಪಾದಕರು ಈ ಅವಕಾಶವನ್ನು ತಮ್ಮ ಲಾಭವಾಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕನ್ನಡಿಗ ಗ್ರಾಹಕರು ಮೊಬೈಲಿನಲ್ಲಿ ಕನ್ನಡದ ಬಳಕೆ ಹೆಚ್ಚು ಮಾಡಬೇಕು, ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೇಡಿಕೆಯನ್ನೂ ವ್ಯಕ್ತ ಪಡಿಸಿಬೇಕು, ಅಷ್ಟೆ!

ಭಾಷಾವಾರು ಪ್ರಾಂತ್ಯ ಮತ್ತು ಭಾರತ!


ಮನುಷ್ಯ ಬದುಕೋಕೆ ತನ್ನ ಸುತ್ತ ಒಂದು ಸಮಾಜ ಕಟ್ಕೊಂಡಿರ್ತಾನೆ ಮತ್ತು ಸಹಕಾರದ ಆಧಾರದ ಮೇಲೇ ಬದುಕು ಸಾಗುಸ್ತಾನೆ. ಆ ಕಾರಣದಿಂದಲೇ ತಾನಿರುವ ಸಮಾಜದಲ್ಲಿ ಕೊಂಡಿಯಂತೆ ಒಗ್ಗಟ್ಟನ್ನು ಇಟ್ಕೊಂಡಿರ್ತಾನೆ. ಈ ಒಗ್ಗಟ್ಟು ಎರಡು ತೆರನಾಗಿದ್ದು ಮೊದಲನೇದು ‘ದೇಶದಲ್ಲಿನ ಒಗ್ಗಟ್ಟು’. ಅಂದರೆ ಆ ಸಮಾಜ ಹರಡಿರೋ ಪ್ರದೇಶದ ಒಟ್ಟೂ ಜನರಲ್ಲಿರುವ ಒಗ್ಗಟ್ಟು ಮತ್ತು ಎರಡನೇದು ‘ಕಾಲದಲ್ಲಿನ ಒಗ್ಗಟ್ಟು’. ಅಂದ್ರೆ ತಲತಲಾಂತರವಾಗಿ ಹರಿದು ಬಂದ/ ಹರಿದು ಸಾಗುವ ಒಗ್ಗಟ್ಟುಗಳಾಗಿರುತ್ತವೆ. ನಾಡೆಂಬುದರಲ್ಲಿ ಒಂದು ಪ್ರದೇಶದ ಸಮಾಜ, ಅದರ ನಂಬಿಕೆಗಳು, ಮನಸ್ಥಿತಿ, ಆಚರಣೆ, ವಿಚಾರ ಮಾಡೋ ವಿಧಾನಗಳು, ಅದರಲ್ಲಿನ ಸಹಕಾರಗಳೆಲ್ಲಾ ಅಡಕವಾಗಿರುತ್ತವೆ. ಇದೇ ಒಂದು ನಾಡಿನ ಒಳಗಿರೋ ಸಹಜವಾದ ನಿಜ ಸ್ವರೂಪ. ಒಂದು ಸಮಾಜ ತನ್ನೊಳಗೆ ಮಾಡಿಕೊಂಡಿರುವ ಕಟ್ಟುಪಾಡುಗಳು, ಕಲಿಕೆಗೆ ದುಡಿಮೆಗೆ ರೂಪಿಸಿಕೊಳ್ಳುವ ವ್ಯವಸ್ಥೆಗಳೆಲ್ಲಾ ಆ ಪ್ರದೇಶದ ಹಣೆಬರಹಾನ ಬರೆದಿಡುತ್ತೆ. ನಾಗರೀಕತೆ ಬೆಳೆದಂತೆಲ್ಲಾ ಇಂಥಾ ವ್ಯವಸ್ಥೆಗಳೂ ಆಧುನಿಕವಾಗುತ್ತಾ ಬಂದಿವೆ ಮತ್ತು ಇವುಗಳಲ್ಲಿ ಎಲ್ಲಾ ದೇಶಗಳಿಗೂ, ಸಮಾಜಗಳಿಗೂ ಅನ್ವಯವಾಗೋ ಅನೇಕ ಸಮಾನ ಅಂಶಗಳು ರೂಪುಗೊಂಡಿವೆ.

ಭಾಷೆ ಮತ್ತು ಸಮಾಜ

ಒಂದು ಸಮಾಜದ ಅಡಿಗಲ್ಲೇ ಸಹಕಾರವಾಗಿರುವಾಗ, ಅಂತಹ ಸಹಕಾರಕ್ಕೆ ಪ್ರಮುಖ ಸಾಧನವಾಗೋದು ಜನರ ನಡುವಿನ ಸಂವಹನ ಮತ್ತು ಹೆಚ್ಚಿನೆಡೆಗಳಲ್ಲಿ ಸಂವಹನದ ಸಾಧನವಾದ ಆ ಜನರಾಡುವ ನುಡಿ. ಹೌದೂ... ಭಾಷೆ ಸಮಾಜದ ಸಂಪರ್ಕ ಮಾಧ್ಯಮ ಮಾತ್ರಾ ಅಲ್ಲ, ಅದು ಸಹಕಾರದ ಮಾಧ್ಯಮ. ಇದೇ ಒಂದು ಭಾಷೆಗಿರುವ ಪ್ರಾಮುಖ್ಯ. ಒಂದು ಪ್ರದೇಶದ ಏಳಿಗೆಗೆ ಅಥವಾ ಹಿಂಬೀಳುವಿಕೆಗೆ ಆ ಪ್ರದೇಶದ ಜನರು ತಮ್ಮ ನುಡಿಗೆ ತಮ್ಮ ಸಮಾಜದಲ್ಲಿ ಯಾವ ಸ್ಥಾನ ಕೊಟ್ಟುಕೊಂಡಿದ್ದಾರೆಂಬುದು ಮಹತ್ವದ ಕಾರಣವಾಗಿರುತ್ತದೆ. ಒಂದು ಪ್ರದೇಶದಲ್ಲಿನ ಜನತೆ ಸಹಜವಾಗಿಯೇ ತಮ್ಮ ನುಡಿಗಳಲ್ಲಿ ಕಲಿಕೆ, ಆಡಳಿತ, ದುಡಿಮೆಯೇ ಮೊದಲಾದ ಪ್ರತಿಯೊಂದು ಕೆಲಸವನ್ನು ಮಾಡಿಕೊಳ್ಳುವುದು ಸರಿಯಾದ ಮತ್ತು ಸಹಜವಾದ ವಿಧಾನ. ಇದೇ ಭಾಷಾವಾರು ಪ್ರಾಂತ್ಯ ರಚನೆಯ ಹಿಂದಿರುವ ತತ್ವ. ಇನ್ನೊಂದು ಮಹತ್ವದ ವಿಷಯವೂ ಇದೆ. ಅದೆಂದರೆ ಭೌಗೋಳಿಕವಾಗಿ ಒಂದು ಪ್ರದೇಶ ದೊಡ್ಡದಾಗಿದ್ದು... ಆ ಪ್ರದೇಶದ ಜನಸಂಖ್ಯೆಯು ಹೆಚ್ಚಾಗಿರುವುದು ಬಲದ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿಯಾಗಿರುವುದೇನೋ ಸರಿಯೇ. ಆದರೆ ಇಂತಹ ದೊಡ್ಡ ಪ್ರದೇಶದ ಅಸ್ತಿತ್ವ ಸಹಜವೋ, ರೂಪಿತವೋ ಅನ್ನುವುದು ಗಮನಿಸಬೇಕಾದ ಅಂಶ. ಒಂದು ದೇಶದ ಭೌಗೋಳಿಕ ವ್ಯಾಪ್ತಿಯ ವಿಸ್ತರಣೆಯು, ಆ ಪ್ರದೇಶದಲ್ಲಿ ವಾಸಿಸುವ ವಿಭಿನ್ನ ಜನಾಂಗಗಳ ಕಲಸು ಮೇಲೋಗರವಾದರೆ ಏನಾಗುವುದು? ಹೀಗೆ ಭಿನ್ನ ಜನಾಂಗಗಳ ನಡುವೆ ಒಗ್ಗಟ್ಟು ಮೂಡಿಸಬೇಕಾದಾಗ ಸಹಜವಾಗಿರುವ ಸಾಮಾನ್ಯ ವಿಷಯವನ್ನು ಆಧಾರವಾಗಿಸಿಕೊಳ್ಳದೇ, ಇಲ್ಲದ ಸಮಾನತೆಯನ್ನು ಹೇರುವುದನ್ನು ಮಾಡುವುದು ಆ ಪ್ರದೇಶದ ಒಗ್ಗಟ್ಟಿಗೆ ದೀರ್ಘಾವಧಿಯಲ್ಲಿ ಮಾರಕವೇ ಆಗಿದೆ. ಬಲ ತೋರಿಕೆಗಾಗಿ ಅಸಹಜವಾದ ಒಗ್ಗಟ್ಟು ರೂಪಿಸಲು ಮಾಡುವ ಪ್ರಯೋಗಗಳು ಅಂತಹ ನಾಡುಗಳ ಒಳಗಣ ಒಗ್ಗಟ್ಟು ಮುರಿಯುವ ಸಾಧ್ಯತೆಯೇ ಹೆಚ್ಚು.

ಭಾರತ ಮತ್ತು ಏಕತೆ
ಭಾರತಕ್ಕೆ 1947ರಲ್ಲಿ ಸ್ವಾತಂತ್ರ ಬಂದ ಮೇಲೆ ‘ನಾಡು ಅಷ್ಟು ಶತಮಾನಗಳ ಗುಲಾಮಗಿರಿಗೆ ಒಳಗಾಗಿದ್ದೇ ಒಗ್ಗಟ್ಟಿನ ಕೊರತೆಯಿಂದಾಗಿ’ ಎನ್ನುವ ನಂಬಿಕೆಯ ಆಧಾರದ ಮೇಲೆ ದೇಶದಲ್ಲಿ ಒಗ್ಗಟ್ಟು ಸಾಧಿಸಲು ಅನುಸರಿಸಿದ ಕ್ರಮಗಳು ದುರಾದೃಷ್ಟವಶಾತ್ ಎರಡನೇ ಮಾದರಿಯದಾಗಿದ್ದವು. ಈ ಮಾತನ್ನು ಕೊಂಚ ಬದಿಗಿಟ್ಟು ನೋಡಿದರೆ 1947ರ ನಂತರ ಭಾರತದಲ್ಲಿ ಪ್ರಜಾಪ್ರಭುತ್ವದ ಕಾರಣವಾಗಿ ಅಧಿಕಾರವನ್ನು ಜನರೆಡೆಗೇ ಒಯ್ಯುವ ವ್ಯವಸ್ಥೆ ರೂಪಿಸಲು ಮುಂದಾಗಲಾಯಿತು. ಹಾಗಾಗಿ ಅನೇಕ ಪ್ರಾಂತ್ಯಗಳನ್ನು ರಚಿಸಬೇಕಾಯ್ತು. ಇಂಥಾ ಪ್ರಾಂತ್ಯಗಳನ್ನು ಯಾವ ಆಧಾರದ ಮೇರೆಗೆ ರೂಪಿಸಬೇಕು? ಎನ್ನುವ ಪ್ರಶ್ನೆಗೆ ಉತ್ತರವಾಗಿ ಕೆಲ ನಾಯಕರು ಭೂಪಟಾನಾ ಮುಂದಿಟ್ಟುಕೊಂಡು ಉದ್ದುದ್ದ ಅಡ್ಡಡ್ಡ ಗೆರೆ ಎಳೆದು ಪ್ರಾಂತ್ಯಗಳನ್ನು ಮಾಡೋದೇ ಸರಿ ಎಂದರು. ಅನೇಕರು ಯಾವುದೇ ಒಂದು ಸಮಾಜದ ಆಡಳಿತ, ಕಲಿಕೆ, ದುಡಿಮೆ, ಒಗ್ಗಟ್ಟು ಮತ್ತು ಏಳಿಗೆಗಳ ಸಹಜ ಸೂತ್ರವಾದ ಭಾಷೆಯ ಆಧಾರದ ಮೇಲೆ ಇಂತಹ ಪ್ರಾಂತ್ಯಗಳನ್ನು ರೂಪಿಸುವುದು ಸರಿಯೆಂದರು. ಅಂದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೂಡಾ ಈ ನಿಲುವನ್ನೇ ಹೊಂದಿತ್ತು. ಆದರೆ ಇದನ್ನು ಜಾರಿ ಮಾಡಲು ಸರ್ಕಾರ ಮೀನ ಮೇಷಾ ಎಣಿಸುತ್ತಿದ್ದಾಗ, 1952ರಲ್ಲಿ ಅಖಂಡ ಆಂಧ್ರಪ್ರದೇಶ ರಾಜ್ಯ ರಚನೆಗೆ ಒತ್ತಾಯಿಸಲಾಯಿತು. ಮಹಾತ್ಮ ಗಾಂಧಿಯ ಅನುಯಾಯಿಯಾಗಿದ್ದ ಚೆನ್ನೈನ ಪೊಟ್ಟಿ ಶ್ರೀರಾಮುಲು (ಅಮರಜೀವಿ ಶ್ರೀರಾಮುಲು) 58 ದಿನಗಳ ಕಾಲ ಅನ್ನಾಹಾರ ತ್ಯಜಿಸಿದರು. ಕೊನೆಗೆ ಡಿಸೆಂಬರ್ 15ರ ನಡುರಾತ್ರಿಯಲ್ಲಿ ಮರಣಹೊಂದಿದರು. ಇದಾದ ನಂತರ ಭಾರತದ ಮೊಟ್ಟ ಮೊದಲ ಭಾಷಾವಾರು ಪ್ರಾಂತ್ಯವಾಗಿ ಆಂಧ್ರಪ್ರದೇಶ ಹುಟ್ಟಿಕೊಂಡಿತು. ಮೂರು ವರ್ಷಗಳಾದ ಮೇಲೆ ರಾಜ್ಯಗಳ ಪುನರ್ವಿಂಗಡನಾ ಸಮಿತಿಯ ವರದಿಯ ಆಧಾರದ ಮೇಲೆ ತೆಲಂಗಣಾ ಪ್ರದೇಶ ಆಂಧ್ರವನ್ನು ಸೇರಿಕೊಂಡಿತು. ಆಗಲೇ ನಮ್ಮ ನಾಡಿನಲ್ಲೂ ಐವತ್ತು ವರ್ಷಕ್ಕೂ ಹಿಂದಿನಿಂದ ನಡೆಯುತ್ತಿದ್ದ ಕರ್ನಾಟಕ ಏಕೀಕರಣ ಚಳವಳಿ ಫಲ ನೀಡಿ ಕರ್ನಾಟಕ ರಾಜ್ಯ ನಿರ್ಮಾಣವಾಯ್ತು. ಭಾಷಾವಾರು ಪ್ರಾಂತ್ಯಗಳನ್ನು ರೂಪಿಸುವುದರ ಹಿಂದಿರುವ ಉದ್ದೇಶವೇ ಭಾಷಾವಾರು ರಾಜ್ಯಗಳ ಸರ್ವತೋಮುಖ ಏಳಿಗೆಯಾಗಲಿ, ಆ ಮೂಲಕ ಭಾರತದ ಏಳಿಗೆಯಾಗಲೀ ಎಂಬುದೇ ಆಗಿದೆ. ಇದನ್ನು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೀಗೆ ಹೇಳಿದ್ದಾರೆ - "ಬಹುಭಾಷಿಕ ರಾಜ್ಯಗಳಾದರೆ, ಅಂದ್ರೆ ಭಾಷಾವಾರು ರಾಜ್ಯಗಳಾಗದೇ ಹೋದರೆ ಭಾರತ ಒಡೆದು ಹೋದೀತು". ಸರಿಯಾದ ಮಾತಲ್ವಾ ಗುರೂ!!

ಹಿಂದಿಯೋರ ಮೇಲೇ “ಹಿಂದಿ ಹೇರಿಕೆ”!!!

ಹಿಂದೀ ಹೇರಿಕೆ ಬರೀ ಹಿಂದಿಯೇತರರ ಮೇಲೆ ಮಾತ್ರಾ ಆಗ್ತಿಲ್ಲ. ಹಿಂದೀ ಭಾಷಿಕರು ಅಂತ ಕರೆಸಿಕೊಳ್ತಾ ಇರೋ ಉತ್ತರ ಭಾರತದ ಬಹುತೇಕ ಎಲ್ಲಾ ಭಾಷಾ ಜನಗಳ ಮೇಲೆ ಹಿಂದೀ ಹೇರಿಕೆ ಆಗ್ತಾಯಿದೆ ಅಂದ್ರೆ ನಂಬ್ತೀರಾ? ಗುರೂ! ಹೌದು, ಉತ್ತರ ಭಾರತದಲ್ಲಿರೋ ಅನೇಕ ಭಾಷೆಗಳನ್ನು ಹಿಂದಿ ಅನ್ನೋ ಆಲದ ಮರದಡಿ ಹರವಿ (ಆಲದ ಮರದ ಕೆಳಗೆ ಏನೂ ಬೆಳ್ಯಲ್ಲಾ ಅನ್ನೋದು ಮರೀಬೇಡಿ) ಅವ್ರುನ್ನೆಲ್ಲಾ ಹಿಂದಿಯೋರೂ ಅಂದು ಅವರದಲ್ಲದ ನುಡೀನಾ ಅವರುಗಳ ಮೇಲೆ ಹೇರುತ್ತಾ ಇರೋದು ದಿಟಾ ಗುರು!!

ಅದೆಂಗೇ ಅಂತೀರಾ?

ಈ ಚಿತ್ರ ನೋಡಿ ಗುರುಗಳೇ. ಇದು ಕರ್ನಾಟಕದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಯೋರು ಅಪಾಯಾಕಾರಿಯಾದ ಕಸವನ್ನು ಸರಿಯಾದ ರೀತೀಲಿ ನಿರ್ವಹಿಸೋಕೆ ಅಂತಾ ರೂಪಿಸಿರೋ ಒಂದು ನಿಯಮದ ಅಂಗವಾಗಿರೋ ಸಣ್ಣ ಅಂಟುಚೀಟಿ.


ಈ ಅಂಟುಚೀಟೀನಾ ಸಂಬಂಧಪಟ್ಟ ಉತ್ಪಾದಕರು/ ಬಳಕೆದಾರರು (ಕಾರ್ಖಾನೆಯೋರು) ಬಹಳಾ ಮುತುವರ್ಜಿಯಿಂದ, ಬಿಸಾಕಲೆಂದು ಕೂಡಿಟ್ಟ ಅಪಾಯಕಾರಿ ಕಸದ ಡಬ್ಬಿಯ ಮೇಲೆ ಅಂಟಿಸಬೇಕು. ಇದರ ಮೇಲೆ ದೊಡ್ಡದಾಗಿ ಭವ್ಯ ಭಾರತದ ಮಹತ್ಸಾಧನೆಯಾದ ತ್ರಿಭಾಷಾ ಸೂತ್ರದ ಅನ್ವಯ ಮೂರು ಭಾಷೇಲಿ ಮುದ್ರಿಸಿದ್ದಾರೆ. ಕನ್ನಡದಲ್ಲಿ (?) “ಅಪಾಯಕಾರಿ ತ್ಯಾಜ್ಯ” ವೆಂದೂ, ಇಂಗ್ಲೀಷಿನಲ್ಲಿ “hazardous waste” ಎಂದೂ ಬರೆದಿದಾರೆ. ಆದ್ರೆ ದೇವನಾಗರೀ ಲಿಪಿಯಲ್ಲಿ ಬರೆದಿರೋ ಸಾಲುಗಳೇನು? ಅದು ಯಾವ ಭಾಷೇದು? ಅಂತಾ ವಸಿ ನೋಡು ಗುರು... “ಪರಿಸಂಕಟಮಯ ಅಪಶಿಷ್ಟ” ಅನ್ನೋದು ಯಾವ ಭಾಷೆ ಗುರೂ? ಇದನ್ನು ವಿನ್ಯಾಸ ಮಾಡಿರೋ ಮಹನೀಯರು ಹಿಂದೀ ಅಂತಾನೆ ಈ ಪದ ಬಳಸಿರೋದು. ಯಾವ ಹಿಂದೀ ಭಾಷಿಕರು ಇದನ್ನು ಬಳುಸ್ತಾರೆ? ಬಳುಸದ್ ಬಿಡಿ, ಯಾವ ಹಿಂದಿಯವನಿಗೆ ಇದು ಅರ್ಥವಾಗುತ್ತೆ? ಹಿಂದೀನೂ ಬಿಡಿ, ಹಿಂದೀ ಅನ್ನೋ ದೇವತೆ(?) ಇದುವರೆಗೂ ನುಂಗಿ ನೀರು ಕುಡ್ದಿರೋ ಭೋಜ್‍ಪುರಿ, ರಾಜಸ್ಥಾನಿ, ಪಹಾಡಿ, ಬ್ರಿಜ್ ಭಾಷಾ, ಅವಧಿ... ಮುಂತಾದ ೪೯ ಭಾಷೆಗಳಲ್ಲಿ ಯಾವ ಭಾಷೇಲಿ ಇದನ್ನು ಬಳುಸ್ತಾರೆ ಅಂತಾ ಕೇಳುದ್ರೆ... ‘ಊಹೂಂ ಯಾವ ಭಾರತೀಯ ಭಾಷೇಯ ಜನರೂ ಈ ಪದಗಳನ್ನು ತಮ್ಮ ನಿತ್ಯ ಜೀವನದಲ್ಲಿ ಬಳಸಲ್ಲ’ ಅನ್ನೋದೇ ಉತ್ತರವಾಗಿದೆ ಗುರು. ಮತ್ಯಾಕೆ ಇವರು ಹೀಗೆ ಈ ಪದಗಳ್ನ ಬಳಸಿದಾರೆ? ಇದ್ಯಾವ ಭಾಷೇದೂ?

ಕಪ್ಪು ನಾಯೀನ ಬಿಳೀ ಮಾಡೊ ಪ್ರಯತ್ನ!

ಇಂದು ಹಿಂದೀ ಭಾಷೆ ಅಂತಾ ಕರೀತಿರೋದ್ರಲ್ಲಿ ಒಟ್ಟು ೪೯ ಭಾಷೆಗಳು ಅಡಕವಾಗಿವೆ. ಹಿಂದೀ ಭಾಷೆ ಮಾತಾಡೋರ ಸಂಖ್ಯೆ ಜಾಸ್ತಿ ಅಂತಾ ಬಿಂಬಿಸಿ ಹಿಂದೀನ ಎಲ್ಲರ ಮೇಲೆ ಹೇರೋ ಪ್ರಯತ್ನಾನ ಭಾರತ ಸರ್ಕಾರ ಹಿಂದಿನಿಂದಲೂ ಮಾಡ್ಕೊಂಡೇ ಬಂದಿದೆ. ಇಂಥಾ ಪ್ರಯತ್ನದ ಅಂಗವಾಗಿ ಪಂಜಾಬಿ ಭಾಷೇನೂ ಹಿಂದೀನೇ ಅಂತ ಅಂದು, ಅದರಿಂದ ಪಂಜಾಬು ಹತ್ತುರಿದದ್ದೂ ಆಗಿ ಕೊನೆಗೆ ಪಂಜಾಬಿ ಭಾಷೆಗೂ ಸಂವಿಧಾನದ ಎಂಟನೇ ಪರಿಚ್ಛೇದದಲ್ಲೊಂದು ಜಾಗ ಸಿಕ್ಕಿದ್ದು ಇತಿಹಾಸ. ಇರಲಿ, ಹೀಗೆ ೪೯ ಬೇರೆ ಬೇರೆ ನುಡಿಗಳನ್ನು ನುಂಗಿ ಆ ನುಡಿಗಳೆಲ್ಲವೂ ಹಿಂದೀನೇ ಅನ್ನೋವಾಗ ಜನರು ಯಾವ ಪದಾನ ಬಳುಸ್ಬೇಕು ಅನ್ನೋ ಗೊಂದಲಾ ಹುಟ್ಕೊಂಡ್ತು. ಕೆಲವರು ಅಪಾಯ ಅಂತಾ ಅಂದ್ರೆ, ಇನ್ನು ಕೆಲವರು ಖತ್ರಾ ಅಂದ್ರು. ಅದಕ್ಕೇ ಹೀಗಾಗೋದ್ ಬ್ಯಾಡಾ ಅಂತಾ ಕೇಂದ್ರಸರ್ಕಾರದೋರು ಹಿಂದೀ ಅಂದ್ರೆ ಇಂಥದ್ದು, ಇದು ಸ್ಟಾಂಡರ್ಡ್ ಹಿಂದಿ, ಇದುನ್ನೇ ಇನ್ಮೇಲೆ ನೀವೆಲ್ಲಾ ಬಳುಸ್ಬೇಕು, ಅಂತಾ ಹೇಳಕ್ಕೇ ಅಂತಲೇ “Centre for Hindi Directorate” ಅಂತಾನೆ ಒಂದು ಇಲಾಖೆ ತೆಕ್ಕೊಂಡು ಕೂತಿದೆ. ಇವ್ರು ಹಿಂದೀಲಿ ಯಾವ ಪದ ಬಳುಸ್ಬೇಕು ಅಂತಾ ತೀರ್ಮಾನ ಮಾಡ್ತಾರೆ. ಹೊಸಪದಗಳನ್ನು ಹುಟ್ಟು ಹಾಕ್ತಾರೆ. ಒಟ್ಟಾರೆ ಜನರು ಬಳಸದ ತಥಾ, ಪರಂತು, ಕೇವಲ್, ಅನುಸಾರ್ ಮುಂತಾದ ಪದಗಳನ್ನು ಹುಟ್ಟು ಹಾಕೋರಿಗೆ ಏನನ್ನಬೇಕು ಗುರು?

ಹಿಂದಿಯೋರ ಮೇಲೇ ಹಿಂದಿ ಹೇರಿಕೆ

ಈಗೆ ಹೇಳಿ ಗುರುಗಳೇ, ಹಿಂದಿಯೋರ ಮೇಲೇ ಹಿಂದಿ ಹೇರಿಕೆ ಆಗ್ತಿದ್ಯೋ ಇಲ್ವೋ ಅಂತಾ. ಭಾಷಾ ವಿಜ್ಞಾನ ಅಂದ್ರೇನು? ಭಾಷೇ ಅಂದ್ರೇನು? ಇದು ಸಮಾಜದಲ್ಲಿ ಯಾವ ಪಾತ್ರ ವಹಿಸುತ್ತೆ? ಅನ್ನೋದನ್ನೆಲ್ಲಾ ಮರ್ತು ಒಂದು ದೇಶ ಅಂದಮೇಲೆ ಒಂದು ಭಾಷೇ ಬೇಡ್ವಾ? ಒಂದು ಭಾಷೆ ಅಂದಮೇಲೆ ಅದರಲ್ಲಿ ಎಲ್ರೂ ಬಳ್ಸೋ ಸ್ಟಾಂಡರ್ಡ್ ಪದಗಳೇ ಇರಬೇಕಲ್ವಾ? ಇದುಕ್ ಒಂದು ಸಣ್ಣ ಉದಾಹರಣೆ : ಇಡೀ ಕರ್ನಾಟಕ 'ಇದೆ' ಅನ್ನೋ ಪದಾನಾ ಇನ್ಮುಂದೆ 'ಇದೆ' ಅಂತಾನೇ ಅನ್ನಬೇಕು, ಅದಾವ, ಐತಿ, ಐತೆ, ಉಂಟು ಅನ್ನೋದನ್ನೆಲ್ಲಾ ಬಳುಸ್ಬಾರ್ದು ಅಂದ್ರೆ ಹೆಂಗೆ? ಈಗ ಹಾಗೇ ಇದೆ ಕೇಂದ್ರದ ಈ ಪ್ರಯತ್ನ. ದೇಶದಲ್ಲಿ ಒಗ್ಗಟ್ಟು ಮೂಡಿಸಲು ಆಗೋದು ನಮ್ಮ ನಡುವೆ ಈಗಾಗಲೇ ಇರೋ ಸಮಾನವಾದದ್ದನ್ನು ಎತ್ತಿ ಹಿಡಿಯುವ ಮೂಲಕವೇ ಹೊರತು ಇಲ್ಲದ ಸಮಾನತೇನಾ ಹೇರೋದ್ರ ಮೂಲಕ ಅಲ್ಲಾ ಅಲ್ವಾ ಗುರು?

ವಿ.ಎಚ್.ಪಿ ಅಂದ್ರೆ ವಿಶ್ವ ಹಿಂದೀ ಪರಿಷತ್ತಾ?


ಮಹಾರಾಷ್ಟ್ರಾ ವಿಧಾನಸಭೆಯಲ್ಲಿ ಇತ್ತೀಚಿಗೆ ಅಬು ಅಜ್ಮಿ ಅನ್ನೋ ಸಮಾಜವಾದಿ ಪಕ್ಷದ ಶಾಸಕರು ಮುಖಕ್ ಮಂಗಳಾರತಿ ಎತ್ತುಸ್ಕೊಂಡಿದ್ದಕ್ಕೆ ಏನು ಕಾರಣ? ‘ಅವರು ಮರಾಠಿಯಲ್ಲಿ ಪ್ರಮಾಣವಚನ ತೊಗೊಂಡಿಲ್ಲಾ’ ಅನ್ನೋದು ಎಂ.ಎನ್.ಎಸ್ ಕೊಡೋ ಕಾರಣವಾದರೆ ‘ಅಜ್ಮಿ ಅವ್ರು ಹಿಂದೀಲಿ ಪ್ರಮಾಣ ವಚನ ತೊಗೊಂಡಿದ್ದಕ್ಕೆ’ ಅನ್ನೋದು ಮಾಧ್ಯಮಗಳ, ರಾಷ್ಟ್ರೀಯ ಪಕ್ಷಗಳ ಹಾಗೂ ಅವುಗಳ ನಾಯಕರುಗಳು ಕೊಡೋ ಕಾರಣ. ಈ ವಿಷಯವಾಗಿ ವಿಶ್ವ ಹಿಂದು ಪರಿಷತ್ತಿನ ಮುಖಂಡರಾದ ಶ್ರೀ ಅಶೋಕ್ ಸಿಂಘಾಲ್ ಅವ್ರು ಒಂದು ಹೇಳಿಕೆ ಕೊಟ್ಟಿದ್ದಾರೆ. ಹಿಂದೀಲಿ ಪ್ರಮಾಣ ವಚನ ಸ್ವೀಕಾರ ಮಾಡೋದನ್ನು ವಿರೋಧ ಮಾಡೋ ರಾಜ್ ಠಾಕ್ರೆಗೆ ಕಠಿಣ ಶಿಕ್ಷೆ ಕೊಡಬೇಕು ಅಂತಾ ಅಪ್ಪಣೆ ಕೊಡ್ಸಿದಾರೆ. ಇಷ್ಟೇ ಅಲ್ಲಾ, ಬೆಂಗಳೂರಿನಲ್ಲಿ ಮೊನ್ನೆ ಮೊನ್ನೆ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಭೇಲೂ ಸಂಘದ ಮುಖಂಡರಾದ ಮೋಹನ್ ಭಾಗವತ್ ಅವರೂ ಇದೇ ವಿಷಯವಾಗಿ ಇನ್ನೊಂದು ಧಾಟಿಯ ಮಾತುಗಳನ್ನಾಡಿದ್ದಾರೆ.

ಏಕಂತೆ ಇವರ ವಿರೋಧ?

ವಿಶ್ವ ಹಿಂದೂ ಪರಿಷತ್ ಮತ್ತು ಆರೆಸ್ಸೆಸ್‌ಗಳೆರಡೂ ಅದ್ಯಾಕೋ ಹಿಂದುತ್ವಕ್ಕೂ ಹಿಂದೀಗೂ ನಡುವಿನ ವ್ಯತ್ಯಾಸದ ಬಗ್ಗೆ ಗೊಂದಲ ಮಾಡ್ಕೊಂಡಂಗಿದೆ. ಇವರ ಮಾತುಗಳ ಪ್ರಕಾರ ಹಿಂದೀನ ವಿರೋಧಿಸೋದು ದೇಶದ್ರೋಹದ ಕೆಲಸ ಮತ್ತು ಹಿಂದೂ ಧರ್ಮದ್ರೋಹದ ಕೆಲಸ ಆಗಿದ್ದಂಗಿದೆ. ಭಾಗವತರಂತೂ ತಮ್ಮ ಭಾಷಣದಲ್ಲಿ ಗುಲಾಮಗಿರಿಯ ಸಂಕೇತವಾಗಿ ಇಂಗ್ಲಿಷ್ ಭಾಷೆಯನ್ನೂ, ರಾಷ್ಟ್ರಪ್ರೇಮದ ಸಂಕೇತವಾಗಿ ಹಿಂದಿಯನ್ನೂ ಬಿಂಬಿಸಿ ಮಾತಾಡಿದರು. ಹೊರದೇಶದ ಭಾಷೆ ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣ ವಚನ ತೊಗೊಂಡರೆ ಪರ್ವಾಗಿಲ್ಲಾ, ನಮ್ಮ ದೇಶದ ಹಿಂದೀಲಿ ಬೇಡ ಅಂದ್ರೆ ಏನರ್ಥ? ಎಂದು ಗುಟುರು ಹಾಕುದ್ರು. ಇದೆಂಗಿದೆ ಅಂದ್ರೆ ‘ಪಕ್ಕದ ಮನೆಯೋರ ಚಾಕುವಿನಿಂದ ಚುಚ್ಚುದ್ರೆ ನೋವಾಗುತ್ತೇ ಅಂತಾ ಚೀರೋದು ಸರೀ, ಆದ್ರೆ ನಮ್ಮ ಮನೆಯ ಚಾಕುವಿನಿಂದಲೇ ಚುಚ್ಚುದ್ರೆ ನೋವಾಗುತ್ತೆ ಅಂದ್ರೆ ಏನರ್ಥ?’ ಅಂದಂಗಿದೆ. ವಿಶ್ವ ಹಿಂದೂ ಪರಿಷತ್ ಆಗ್ಲೀ ಆರೆಸ್ಸೆಸ್ ಆಗ್ಲೀ ತಿಳ್ಕೋಬೇಕಾಗಿರೋದು ಹಿಂದೂ ಅನ್ನೋ ಪದಕ್ಕೂ ಹಿಂದಿ ಅನ್ನೋ ಪದಕ್ಕೂ ಯಾವ ಸಂಬಂಧವೂ ಇಲ್ಲಾ... ಹಾಗೇನಾದ್ರೂ ಹಿಂದೂ ಆದವನು ಹಿಂದೀಗೆ ಗೌರವ ಸಲ್ಲಿಸಲೇ ಬೇಕು ಅಂತ ಅಂದ್ಕೊಂಡಿದ್ರೆ ಇವರ ಹಿಂದುತ್ವದ ಪಟ್ಟಿಯಿಂದ ಭಾರತದ ಅರ್ಧಕ್ಕಿಂತ ಹೆಚ್ಚು ಹಿಂದುಗಳು ಹೊರಗಾಗ್ತಾರೆ ಅಷ್ಟೆ. ಹಾಗೇ ಆರೆಸ್ಸೆಸ್ ಮುಖಂಡರು ಕೂಡಾ ಇಂಗ್ಲಿಷ್‌ನಂತಹ ಸಮಾನ ಶತ್ರು(?)ವನ್ನು ತೋರಿಸಿ ಭಾರತಾನಾ ಒಂದು ಮಾಡ್ತೀವಿ ಅನ್ನೋ ತಪ್ಪು ದಾರಿಯಿಂದ ಹೊರಬರೋದು ಒಳ್ಳೇದು ಅನ್ಸುತ್ತೆ.

ವಿಶ್ವ ಹಿಂದೀ ಪರಿಷತ್ ಆಗದಿರಲಿ!

ಸಹಜವಾಗಿ ಭಾರತದಲ್ಲಿರೋ ವೈವಿಧ್ಯತೇನಾ ಒಪ್ಕೊಂಡು ಎಲ್ಲಾ ಭಾಷೆಗಳೂ ಅವುಗಳ ನಾಡಿನಲ್ಲಿ ಸಾರ್ವಭೌಮ ಭಾಷೆಗಳಾಗಬೇಕು ಅನ್ನೋ ನಿಲುವನ್ನು ತೋರಿಸಿದ್ದರೆ ಈ ಎರಡೂ ಸಂಸ್ಥೆಗಳ ಖ್ಯಾತಿಗೆ ತಕ್ಕಂಗೆ ಇರೋದು ಗುರು. ‘ಮಹಾರಾಷ್ಟ್ರದಲ್ಲಿ ಅಜ್ಮಿಯವರು ಮರಾಠಿಯಲ್ಲಿ ಪ್ರಮಾಣ ವಚನ ತೊಗೊಳ್ಳೋ ಮೂಲಕ ತಾವು ಮರಾಠಿ ಮುಖ್ಯವಾಹಿನೀಲಿ ಇದೀನಿ ಅನ್ನೋದನ್ನು ಎತ್ತಿ ಹಿಡಿಯಬೇಕಿತ್ತು. ಆ ಮೂಲಕ ದೇಶದಲ್ಲಿ ಭಾಷಾವಾರು ಮನಸ್ತಾಪಗಳನ್ನು ಹುಟ್ಟು ಹಾಕದಂತೆ ನಡೆದುಕೊಳ್ಳಬೇಕಿತ್ತು’ ಅನ್ನೋ ಒಂದು ಮಾತನ್ನು ಆಡಿದ್ದಿದ್ರೆ ಬಹುಷಃ ‘ಹೌದಪ್ಪಾ! ಇವರಿಗೆ ನಿಜವಾಗ್ಲೂ ದೇಶದ ಬಗ್ಗೆ ಕಾಳಜಿಯಿದೆ’ ಅಂತ ಜನ ನಂಬೋಕಾಗ್ತಿತ್ತು. ಈಗ ಇವರಾಡಿರೋ ಮಾತುಗಳು ‘ಅಣ್ಣಾ... ನಾವೆಲ್ಲಾ ಒಂದೇ ದೇಶದವರು, ನಿಮ್ಮ ಮನೆಗೆ ನುಗ್ಗಿ ನಿಮ್ಮುನ್ನ (ನಿಮ್ಮ ನುಡಿಯನ್ನ) ಹೊರಗಾಕುದ್ರೂ ನೀವು ದೇಶದ ಒಗ್ಗಟ್ಟಿಗಾಗಿ ಸಹಿಸಿಕೊಳ್ಳೀ. ದೇಶ ಅನ್ನೋದ್ರು ಮುಂದೆ ಮನೆ ಅನ್ನೋದು ಗೌಣಾ’ ಅಂದಂಗಿದೆಯಲ್ವಾ? ಈ ಎರಡೂ ಸಂಸ್ಥೆಗಳೋರು ನಿಮ್ಮ ನಿಮ್ಮ ಭಾಷೆಗಳ ಬಗ್ಗೆ ನಮಗೇನೂ ಅಗೌರವವಿಲ್ಲ. ಆದ್ರೆ ಅವುಗಳನ್ನು ನಿಮ್ಮ ಮನೆಗಳಲ್ಲಿ ಬಳಸಿಕೊಳ್ಳಿ. ಬೀದಿಗೆ ಬಂದಾಗ ಹಿಂದೀನ ಬಳ್ಸಿ ಅನ್ನೋ ಥರಾ ರಾಗ ಪಾಡುದ್ರೆ ಹೆಂಗೇ ಗುರು? ಒಟ್ನಲ್ಲಿ ಏನೋಪ್ಪಾ... VHP ಅಂದ್ರೆ ವಿಶ್ವ ಹಿಂದೀ ಪರಿಷತ್ತಾ ಅಂತಾ ಜನಕ್ಕೆ ಅನುಮಾನ ಶುರುವಾಗಿದೆ... ಏನಂತೀ ಗುರು?

ಸಚಿನ್, ಠಾಕ್ರೆ ಮತ್ತು ಮಹಾ...ರಾಷ್ಟ್ರ!


(ಫೋಟೋ : ಎನ್.ಡಿ.ಟಿ.ವಿ ಕೃಪೆ)

ಮೊನ್ನೆ ಮೊನ್ನೆ ಭಾರತೀಯ ಕ್ರಿಕೆಟ್‌ನ ರನ್ ಮಾಂತ್ರಿಕ ಸಚಿನ್ ರಮೇಶ್ ತೆಂಡೂಲ್ಕರ್ ಆಡಿದ ಮಾತುಗಳ ಬಗ್ಗೆ ಮತ್ತು ಅದಕ್ಕೆ ಶಿವಸೇನೆಯ ದೊಡ್ಡೆಜಮಾನ್ರಾದ ಬಾಳಾ ಸಾಹೆಬ್ ಠಾಕ್ರೆಯವರು ನೀಡಿದ ಪ್ರತಿ ಹೇಳಿಕೆಯ ಬಗ್ಗೆ ಭಾರತದ ಎಲ್ಲಾ ಮಾಧ್ಯಮದೋರೂ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ನಲ್ಲಿ ಈ ಘಟನಾವಳಿಗಳು ಜನರಲ್ಲಿ ರಾಜ್ಯ ದೊಡ್ಡದೋ - ದೇಶ ದೊಡ್ಡದೋ, ಭಾಷೆ ದೊಡ್ಡದೋ - ರಾಷ್ಟ್ರೀಯತೆ ದೊಡ್ದದೋ ಅನ್ನೋ ಚರ್ಚೆಗೆ ಕಾರಣವಾಗಿದೆ. ನಿಸ್ಸಂದಿಗ್ಧವಾಗಿ ಎಲ್ಲಾ ಮಾಧ್ಯಮಗಳೂ ಭಾಷೆ ಮತ್ತು ಪ್ರಾದೇಶಿಕ ವಾದಾನಾ ದೇಶದ್ರೋಹದ್ದು ಅನ್ನೋ ಹಾಗೆ ಚಿತ್ರುಸ್ತಾ ಇದಾರೆ. ಪ್ರಾದೇಶಿಕ ಚಿಂತನೆ ರಾಷ್ಟ್ರದ ಒಗ್ಗಟ್ಟಿಗೆ ಹಾನಿಕಾರಕ ಅಂತಾ ಶಂಖಾ ಹೊಡ್ಕೊತಾ ಇದಾರೆ. ನಾವೇನೂ ಕಮ್ಮಿ ಇಲ್ಲ ಅನ್ನುವ ಹಾಗೆ ಕನ್ನಡನಾಡಿನ ಮಾಧ್ಯಮಗಳೂ ಇದರ ಬಗ್ಗೆ ಪುಂಖಾನುಪುಂಖವಾಗಿ ಬರೀತಿದಾರೆ. ಸಮಸ್ತ ಕನ್ನಡಿಗರ ಹೆಮ್ಮೆಯಾದ ವಿಜಯ ಕರ್ನಾಟಕದಲ್ಲಿ ಬರಹಗಾರ ಡಿ. ಅಶೋಕ್‌ರಾಮ್ ಅನ್ನೋರು ಸಚಿನ್ ಮುಂಬೈನ ಯಜಮಾನಿಕೆ ಬಗ್ಗೆ ಆಡಿದ ಮಾತನ್ನೇ ಮರೆಮಾಡಿ ’ನಾನು ಮೊದಲು ಭಾರತೀಯ ಅಂದಿದ್ದಕ್ಕೇ ಹೀಗೆ ಬಾಳಾಠಾಕ್ರೆ ಎಗರಾಡಿದಾರೆ, ಭಾಷೆಗಿಂತ ದೇಶ ದೊಡ್ದು... ಬ್ಲಾ ಬ್ಲಾ ಬ್ಲಾ’ ಅಂತೆಲ್ಲ ಬರೆದಿದ್ದಾರೆ. ಇದೇನಪ್ಪಾ ಹಿಂಗಾ... ಅಂತಾ ಏನ್‍ಗುರು ಈ ವಿಷಯದಲ್ಲಿ ಇಣುಕೌನೆ ನೋಡ್ಮಾ ಬಾ ಗುರು!

ಸಚಿನ್ ಮಾತಿನಲ್ಲಿರೋದೇನು?

ಸಚಿನ್ ಹೇಳಿರೋದ್ರ ಸಾರಾಂಶ “ನಾನೊಬ್ಬ ಮಹಾರಾಷ್ಟ್ರೀಯ ಅಂತಾ ಹೆಮ್ಮೆ ಇದೆ. ಆದರೆ ಅದಕ್ಕೆ ಮೊದಲು ನಾನು ಭಾರತೀಯ. ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು” ಅನ್ನೋದಾಗಿದೆ. ಅತ್ಯಂತ ದೇಶಭಕ್ತಿಯ ಮಾತುಗಳಿವು ಅನ್ನಿಸೋ ಹಾಗಿರೋ ಈ ಮಾತಲ್ಲಿ ಎಲ್ಲಾ ಸರಿಯೇ ಇದೆ ಅನ್ಸುತ್ತೆ. ಆದರೆ ಇದರಲ್ಲಿ ಬಾಳಾಠಾಕ್ರೆಯವರನ್ನು ಕೆರಳಿಸಿದ್ದು ‘ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು, ನಾನು ಮೊದಲು ಭಾರತೀಯ’ ಅನ್ನೋ ಮಾತುಗಳು. ಮಾಮೂಲಿ ದಿನದಲ್ಲಾಗಿದ್ರೆ ಈ ಮಾತಿಗೆ ಅಷ್ಟು ಮಹತ್ವವೇ ಇರುತ್ತಿರಲಿಲ್ಲವೇನೋ? ಯಾಕಂದ್ರೆ ಠಾಕ್ರೆ ಕೂಡಾ ಭಾರತ ಮಾತೆ, ಭಾರತ ಜನತೆ, ಭಾರತೀಯತೆ, ಜೈ ಹಿಂದ್ ಅಂತಾನೇ ಇಷ್ಟು ವರ್ಷ ಮಾತಾಡಿದ್ದಿದೆ. ಆದ್ರೆ ಈಗ ಪರಿಸ್ಥಿತಿ ಹೆಂಗೆ ಭಿನ್ನಾ ಅಂತೀರಾ? ಇತ್ತೀಚಿಗಷ್ಟೇ ಅಲ್ಲಿನ ವಲಸಿಗರು ತಾವು ಭಾರತೀಯರು, ಎಲ್ಲಿಗೆ ಬೇಕಾದ್ರೂ ಹೋಗಿ ಬಾಳುವ ಹಕ್ಕಿದೆ, ನಮ್ಮ ನಡೆ ನುಡಿ ಆಚರಣೆ ಸಂಸ್ಕೃತಿಗಳನ್ನು ನಮಗೆ ಬೇಕಾದಂತೆ ಆಚರಿಸೋ/ ತೋರಿಸಿಕೊಳ್ಳೋ ಹಕ್ಕಿದೆ ಅಂತಾ ಸಂವಿಧಾನದ ಕಡೆಗೆ ಬೊಟ್ಟು ತೋರುಸ್ತಿದಾರೆ. ವಿಷ್ಯಾ ಇಷ್ಟೇ ಅಲ್ವೇ... ಮುಂಬೈ ನಗರ ಪಾಲಿಕೆಯ ಆಳ್ವಿಕೆ ಹಿಂದೀಲಿ ಆಗಬೇಕು ಇವರ‍್ಯಾಕೆ ಕೇಳುದ್ರು? ಇವ್ರು ೩೦ ವರ್ಷದಿಂದ ಮಹಾರಾಷ್ಟ್ರದಲ್ಲೇ ಬದುಕ್ತಾ ಇದ್ರೂ ಮರಾಠಿ ಕಲಿಯಲ್ಲ ಅಂತಾ ಯಾಕಂದ್ರು? ಹಿಂದೀನಾ ರಾಷ್ಟ್ರಭಾಷೆ ಅಂತ ಯಾಕಂದ್ರು? ಈಗ ಮುಂಬೈನ ಮಿನಿ ಉತ್ತರ ಪ್ರದೇಶ ಅಂತಾ ಹ್ಯಾಗಂದ್ರು? ಹಾಗೇ ಮರಾಠಿ ಮುಖ್ಯವಾಹಿನೀಲಿ ಬೆರೆಯದೇ ಹೋದ್ರೆ, ಅದು ಮುಂಬೈ ಮತ್ತು ಮಹಾರಾಷ್ಟ್ರಗಳ ಮರಾಠಿ ಜನರ ಬದುಕಿನ ಮೇಲೆ ಏನು ಪರಿಣಾಮ ಬೀರುತ್ತೆ ಅನ್ನೋದೆಲ್ಲಾ ಇವರಿಗೆ ಗೊತ್ತಿಲ್ಲವೇನು?

ಸಚಿನ್ ಬೆಂಬಲಿಸಿ ಮಾತಾಡ್ದೋರು...

ಭಾರತ, ಮಹಾರಾಷ್ಟ್ರಾ, ಮುಂಬೈ ನಡುವೆ ಏನ್ ಸಂಬಂಧಾ ಇದೆ? ಮರಾಠಿಗೆ ಮುಂಬೈನಲ್ಲಿ ಏನ್ ಮಹತ್ವ ಇದೆ? ಅನ್ನೋದನ್ನೆಲ್ಲಾ ಯೋಚುಸ್ದೆ ಭಾರತ ಅನ್ನೋದ್ರು ಮುಂದೆ ಎಲ್ಲಾ ಗೌಣ ಅನ್ನೋ ಪ್ರಚಾರಕ್ಕೆ ಮರುಳಾಗಿರೋ ಸಾಮಾನ್ಯರು ಸಚಿನ್‍ನ ಬೆಂಬಲಿಸಿ ಮಾತಾಡ್ತಾರೆ. ಅಷ್ಟ್ಯಾಕೆ? ಯಾರಿಗೆ ಇದರಿಂದಾಗಿ ಲಾಭ ಇದೆಯೋ ಅವರೆಲ್ಲಾ ಇದನ್ನು ಬೆಂಬಲಿಸಿರೋರಲ್ಲಿ ಸೇರಿದ್ದಾರೆ. ಸಚಿನ್‌ಗಾದ್ರೂ ಬೇಕಿರೋದು ಅಖಿಲ ಭಾರತ ಮಟ್ಟದ ಬೆಂಬಲ ತಾನೇ? ಲಾಲೂ, ನಿತಿನ್, ಮುಲಾಯಂಸಿಂಗ್, ಅಮರ್‌ಸಿಂಗ್, ಮಾಯಾವತಿಯಂತಹ ಜನರಿರೋ ಪ್ರದೇಶದವರಿಗೆ ಸಚಿನ್‍ನ ಈ ಹೇಳಿಕೆಯಿಂದ ಲಾಭಾ ತಾನೇ? ಬೆಂಗಳೂರಿನಲ್ಲಿರಲಿ, ಮುಂಬೈಯಲ್ಲಿರಲಿ ಹೊರಗಿಂದ ಬಂದು ನೆಲೆಸಿರೋ ವಲಸಿಗರೆಲ್ಲಾ ಇದು ಲಾಭದಾಯಕವಾದ ಹೇಳಿಕೇನೆ. ಹಾಗಾಗಿ ಈ ಮಾತನ್ನು ಪಾಪಾ... ಹಿಂದೆ ಮುಂದೆ ನೋಡದೇ ಈ ಜನಾ ಮತ್ತವರ ಹಿಡಿತದ ಮಾಧ್ಯಮಗಳೋರೂ ಮೇಲೆ ಬಿದ್ದು ಬೆಂಬಲಿಸುತ್ತಾರೆ. ಇನ್ನು ರಾಷ್ಟ್ರೀಯ ಪಕ್ಷಗಳೋರು ಸಮರ್ಥಿಸೋದ್ರಲ್ಲಿ ಅನುಮಾನಾನೇ ಬೇಡ. ರಾಷ್ಟ್ರ ಅಂದ್ರೇನು ಅನ್ನೋದ್ರ್ ಬಗ್ಗೆ ಸರಿಯಾದ ಪರಿಕಲ್ಪನೇನೆ ಇಲ್ಲದ, ವೈವಿಧ್ಯತೆಯನ್ನು ಶಾಪವೆಂದೂ ಗೌಣವೆಂದೂ, ರಾಷ್ಟ್ರದ ಒಗ್ಗಟ್ಟಿಗೆ ವೈವಿಧ್ಯತೆಯನ್ನೇ ಅಳಿಸಿ ಹಾಕಬೇಕು ಅನ್ನೋ ಮನಸ್ಥಿತಿಯ ಜನರಿಂದ ಇನ್ನೇನು ತಾನೇ ನಿರೀಕ್ಷಿಸಬಹುದು? ಭಾಷಾವಾರು ಪ್ರದೇಶಗಳನ್ನು ಯಾಕೆ ರಚಿಸಲಾಯಿತು? ಕರ್ನಾಟಕ ಏಕೀಕರಣದ ಇತಿಹಾಸ ಏನು? ಭಾಷೆ ಅಂದರೇನು? ಸಮಾಜದಲ್ಲಿ ಅದರ ಪಾತ್ರವೇನು? ಎಂಬುದನ್ನೆಲ್ಲಾ ಅರಿಯದವರು ಬೆಂಬಲಿಸೋದು ಸಹಜ. ಭಾಷಾವಾರು ಪ್ರಾಂತ್ಯಗಳನ್ನು ಆಡಳಿತದ ಅನುಕೂಲಕ್ಕಾಗಿ ಮಾತ್ರ ರಚಿಸಲಾಯಿತು ಎಂದು ಬೂಸಿ ಬಿಡುವವರು... ಸಚಿನ್ ಹೇಳಿಕೇನ ಬೆಂಬಲಿಸೋದು ಸಹಜ.

ಸಚಿನ್ ಮಾತಿನಲ್ಲಿರೋ ಟೊಳ್ಳುತನ ಏನು?

ಈಗ ಸಚಿನ್ ಹೇಳಿರೋ ಹಾಗೇ ‘ನಾನು ಮೊದಲು ಭಾರತೀಯ’ ಅನ್ನೋದ್ರ ಅರ್ಥ ಏನು? ಭಾರತದ ಹಿತಕ್ಕಾಗಿ ನಾನು ನನ್ನ ರಾಜ್ಯದ ಹಿತವನ್ನು, ನನ್ನ ಭಾಷೆಯ ಹಿತವನ್ನು ಬಿಟ್ಟುಕೊಡ್ತೀನಿ ಅಂತಾನಾ? ಯುದ್ಧದಂತಹ ಕೆಲವು ಸನ್ನಿವೇಶಗಳಲ್ಲಿ ತಾತ್ಕಾಲಿಕವಾಗಿ ಈ ರೀತಿ ಬಿಟ್ಟುಕೊಡುವುದನ್ನು ಒಪ್ಪಬಹುದು. ಸಾಮಾನ್ಯ ಸಂದರ್ಭದಲ್ಲಿ ಈ ಮಾತಿನ ಅರ್ಥವೇನು? ನನ್ನ ದೇಶದಲ್ಲಿ ಭಾಷೆ, ಪ್ರಾದೇಶಿಕತೆಯ ಆಧಾರದ ಮೇಲೆ ಒಗ್ಗಟ್ಟು ಮುರಿಯುವ ಕೆಲಸ ಮಾಡುವುದಿಲ್ಲ ಅಂತಾನಾ? ಹೌದೂ ಅನ್ನೋದಾದ್ರೆ ಸರಿ. ಇವತ್ತಿನ ದಿವಸ ಒಗ್ಗಟ್ಟು ಮುರಿಯೋ ಮಾತು ಯಾವುದು? ಎಲ್ಲಾ ಪ್ರದೇಶಗಳಿಗಿರುವ ಭಾಷಾ, ಸಾಂಸ್ಕೃತಿಕ ಅನನ್ಯತೆಗಳನ್ನು ಕಾಯ್ದುಕೊಳ್ಳಬೇಕೆನ್ನುವುದು ಒಗ್ಗಟ್ಟು ಮುರಿಯುವ ಕ್ರಮವೋ? ಇಡೀ ದೇಶದಲ್ಲಿ ಯಾವುದೋ ಒಂದು ಪ್ರದೇಶದ ಭಾಷೆಯನ್ನು ಆಡಳಿತದಲ್ಲಿ ಜಾರಿಗೊಳಿಸಬೇಕೆನ್ನುವುದು ಒಗ್ಗಟ್ಟು ಮುರಿಯುವ ಕ್ರಮವೋ? ಊರ ದೇವತೆ ಅಣ್ಣಮ್ಮ ದೊಡ್ಡವಳೋ? ಕನ್ನಡತಾಯಿ ರಾಜರಾಜೇಶ್ವರಿ ದೊಡ್ಡವಳೋ? ಭಾರತಮಾತೆ ದೊಡ್ಡವಳೋ? ಎಂಬ ಪ್ರಶ್ನೆಗೆ ಏನುತ್ತರ? ಭಾರತ ಮಾತೆ ದೊಡ್ಡೋಳು, ಕನ್ನಡಮ್ಮ ಅವಳ ಮಗಳು, ಅಣ್ಣಮ್ಮ ಮೊಮ್ಮಗಳು ಅನ್ನೋದು ಸರೀನಾ ಗುರು? ನಿಜವಾಗಿಯೂ ತಾಯಿ ಅಣ್ಣಮ್ಮನೆಂದರೂ, ರಾಜೇಶ್ವರಿಯೆಂದರೂ, ಭಾರತ ಮಾತೆಯೆಂದರೂ ಒಬ್ಬಳೇ ಅಲ್ಲವೇ? ಭಾಳ ದಿನದ ಮೇಲೆ ತಾಯ್ನಾಡಿಗೆ ಹಿಂತಿರುಗಿದ ದೇಶಪ್ರೇಮಿ ಇಲ್ಲಿ ಬೆಂಗಳೂರಿನ ಮಣ್ಣನ್ನು ಎತ್ತಿ ಕಣ್ಣಿಗೊತ್ತಿಕೊಂಡ್ರೆ ಅದು ಬೆಂಗಳೂರಿನ ಮಣ್ಣು ಮಾತ್ರವೇನು? ಅದು ಭಾರತದ ಮಣ್ಣಲ್ಲವೇನು? ಮುಂಬೈ ಅಂದರೆ ಭಾರತವಲ್ಲವೇನು? ನಾನು ಮಹಾರಾಷ್ಟ್ರೀಯ ಅಂದರೆ ಭಾರತೀಯ ಅಂದ ಹಾಗಲ್ಲವೇ? ಸಚಿನ್ ನಾನು ಮೊದಲು ಭಾರತೀಯ ಆಮೇಲೆ ಮಹಾರಾಷ್ಟ್ರೀಯ ಅನ್ನೋ ಮಾತಂದದ್ದು ತಪ್ಪಲ್ವಾ? ನಾನು ಮಹಾರಾಷ್ಟ್ರೀಯನೂ ಹೌದು, ಭಾರತೀಯನೂ ಹೌದು ಅನ್ನಬೇಕಾದ್ದು ಸರಿಯಲ್ವಾ? ನಾನು ಮೊದಲು ಭಾರತೀಯ ಆಮೇಲೆ ಮಹಾರಾಷ್ಟ್ರೀಯ ಅನ್ನೋದು ಕೃತಕ ಅನ್ಸಲ್ವಾ ಗುರು? ಸಚಿನ್‍ಗೆ ಭಾರತೀಯತೆ ಮತ್ತು ಮಹಾರಾಷ್ಟ್ರೀಯತೆ ಬಂದಿರೋದು ಒಟ್ಟೊಟ್ಗೆ ಅಲ್ವಾ? ಒಂದುಕ್ ಇನ್ನೊಂದು ವಿರುದ್ಧ ಅನ್ನೋ ಮನಸ್ಥಿತಿ ಸರೀನಾ? ನಿಜವಾಗಿ ನಾಡೊಡೆಯುತ್ತಿರುವವರು ಯಾರೆಂದರೆ ಅಣ್ಣಮ್ಮ, ರಾಜೇಶ್ವರಿ, ಭಾರತಾಂಬೆ ಅನ್ನೋ ಈ ಮೂವರಲ್ಲೂ ಒಬ್ಬಳನ್ನೇ ಕಾಣದೆ ಮೂವರಲ್ಲೂ ಪರಸ್ಪರ ಪೈಪೋಟಿಯ ಮೂರು ಬೇರೆ ಬೇರೆ ದೈವಗಳನ್ನು ಕಾಣುತ್ತಿರುವ ಹುಸಿ ರಾಷ್ಟ್ರೀಯವಾದಿಗಳು ಅನ್ನುಸ್ತಿಲ್ವಾ ಗುರು?

ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು!

ಮುಂಬೈ ಎಲ್ಲಾ ಭಾರತೀಯರಿಗೂ ಸೇರಿದ್ದು ಅನ್ನುವುದರ ಅರ್ಥವೇನು ? ಮುಂಬೈಗೆ ಯಾವ ಭಾರತೀಯ ಬೇಕಾದರೂ ಬರಬಹುದು, ಇರಬಹುದು, ದುಡಿಯಬಹುದು ಅನ್ನುವುದು ಮಾತ್ರವೇ ಆದರೆ ಇದು ಒಪ್ಪುವ ಮಾತೇ. ಆದರೆ ತಡೆಯಿಲ್ಲದ ವಲಸೆ, ಎಲ್ಲಾ ಕೆಲಸದಲ್ಲೂ ತಮ್ಮವರನ್ನು ತಂದು ತುಂಬುವ ಉಮ್ಮೇದಿ, ಮರಾಠಿ ಭಾಷಿಕರೆಂದರೆ ಟೀ, ಕಾಫಿ, ಡಬ್ಬಾವಾಲಾ, ರಿಕ್ಷಾವಾಲಗಳು ಎನ್ನುವಂತೆ ಮುಂಬೈನಲ್ಲಿ ಸನ್ನಿವೇಶ ಹುಟ್ಟಿಕೊಂಡಿರುವಾಗ, ರೈಲ್ವೇ ಬ್ಯಾಂಕು ಮೊದಲಾದ ಎಲ್ಲಾ ಕೆಲಸಕ್ಕೂ ನೇಮಕಾತಿ ಪರೀಕ್ಷೆಗಳು ಹಿಂದಿಯಲ್ಲಿ ನಡೆಯುತ್ತಿರುವಾಗ, ಅಂಥಾ ಪರೀಕ್ಷೆಗಳಿಗೆ ಬಿಟ್ಟಿ ರೈಲುಗಳಲ್ಲಿ ಬಿಹಾರ, ಉತ್ತರ ಪ್ರದೇಶಗಳಿಂದ ಜನರನ್ನು ಕರೆತರುತ್ತಿರುವಾಗ, ಆಡಳಿತ ಭಾಷೆಯನ್ನು ಹಿಂದಿಗೆ ಬದಲಾಯಿಸಿ ಎನ್ನುವಾಗ... ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು ಎನ್ನುವ ಮಾತಿಗೆ ಬೇರೆಯೇ ಅರ್ಥ ಹುಟ್ಕೊಳುತ್ತೆ. ಮುಂಬೈ ಮರಾಠಿಗರಿಗೆ ಸೇರಿದ್ದಲ್ಲಾ ಎನ್ನುವ ಹೇಳಿಕೆಗೂ ಮುಂಬೈ ಇಡೀ ಭಾರತೀಯರಿಗೆಲ್ಲಾ ಸೇರಿದ್ದು ಅನ್ನುವುದಕ್ಕೂ ಅಂಥಾ ವ್ಯತ್ಯಾಸ ಏನಿದೆ ಗುರು? ಹಿಂದೆ ಈ ಮಾತೂ ಆಗಿಹೋಗಿದೆ. ಮುಂಬೈ ಬರೀ ಮರಾಠಿಗರು ಕಟ್ಟಿದ್ದಲ್ಲಾ, ಎಲ್ಲಾ ಭಾರತೀಯರು ಇದನ್ನು ಕಟ್ಟಿದ್ದಾರೆ ಎಂದಿದ್ದರು. ಏನ್ ಗುರುಗಳೇ... ಯಾರಾದರೂ ಮುಂಬೈ ನಗರವನ್ನು ಕಟ್ಟಲೆಂದು, ಬೆಳೆಸಲೆಂದು ಮುಂಬೈಗೆ ವಲಸೆ ಹೋಗಿರ್ತಾರಾ? ಅಥ್ವಾ ಹೊಟ್ಟೆಪಾಡಿಗಾಗಿ ಮುಂಬೈ ಮಹಾನಗರಿಯ ಹೊಸಿಲು ತುಳಿದಿರ್ತಾರಾ? ಏನೋ ಉಪಕಾರ ಮಾಡಕ್ಕೆ ಮುಂಬೈಗೆ ವಲಸೆ ಬಂದು, ಊರು ಉದ್ಧಾರ ಮಾಡಿದ ಹಾಗಿರೋ ದೊಡ್ಡಸ್ತಿಕೆಯ ಬೂಟಾಟಿಕೆಯ ಮಾತುಗಳನ್ನು ಆಡೋದು ಬಿಟ್ಟು... ತಿಳಿಯಬೇಕಾದ್ದು ಒಂದೇ. ಭಾರತದ ಮೂಲೆಮೂಲೆಯಿಂದ ಹಣ, ಬದುಕು, ಹೆಸರು, ಉನ್ನತಿಯನ್ನು ಅರಸಿ ಮುಂಬೈ ಮಹಾನಗರಿಗೆ ಕಾಲಿಡುವ ವಲಸಿಗರು ತಮ್ಮತನವನ್ನು, ನಡೆನುಡಿಯನ್ನು, ಸಂಸ್ಕೃತಿಗಳನ್ನು ತಮ್ಮ ತಮ್ಮ ಮನೆಗಳಿಗೆ ಸೀಮಿತಗೊಳಿಸಿಕೊಂಡು ಮುಂಬೈನ ಮರಾಠಿ ಮುಖ್ಯವಾಹಿನಿಯಲ್ಲಿ ಬೆರೆಯಬೇಕು. ಹಿಂದಿ ರಾಷ್ಟ್ರಭಾಷೆ, ಭಾರತದ ಯಾವ ಮೂಲೆಯಲ್ಲಾದರೂ ಇದು ನಡೀಬೇಕು ಅನ್ನುವ ಸುಳ್ಳಿನ ಪಿತ್ಥವನ್ನು ನೆತ್ತಿಯಿಂದಿಳಿಸಿಕೊಂಡು ನೆಟ್ಟಗೆ ಮರಾಠಿ ಮುಖ್ಯವಾಹಿನಿಯಲ್ಲಿ ಬೆರೆತು ಬದುಕುವುದಾದರೆ... ಹೌದು... ಮುಂಬೈ ಎಲ್ಲಾ ಭಾರತೀಯರದ್ದೇ. ಯಾಕಂದ್ರೆ ಈ ಮಾತು ನಾಳೆ ಬೆಂಗಳೂರಿಗೂ ಅನ್ವಯವಾಗೋದೇ! ಏನಂತೀ ಗುರು?

ರೈಲು ನೇಮಕಾತಿ : ಒಪ್ಪುಕೂಟದೆಡೆಗೊಂದು ಸರಿಹೆಜ್ಜೆ!!


ಆಹಾ! ಭಾರತ ದೇಶದಲ್ಲಿ ಅಪರೂಪಕ್ಕೊಂದು ಸಕ್ಕತ್ ಒಳ್ಳೇ ನಡೆ ಒಪ್ಪುಕೂಟಕ್ಕೆ ಒಪ್ಪೋ ಅಂಥಾ ದಿಕ್ಕಲ್ಲಿ ರೈಲ್ವೇ ಇಲಾಖೆಯಿಂದ ನಡೆದಿದೆ ಗುರು! ನಿನ್ನೆ ರೈಲು ಮಂತ್ರಿ ಶ್ರೀಮತಿ ಮಮತಾ ಬ್ಯಾನರ್ಜಿಯವರು ಇನ್ಮುಂದೆ ರೈಲು ಪರೀಕ್ಷೆಗಳನ್ನು ಸ್ಥಳೀಯ ಭಾಷೆಯಲ್ಲೂ ಬರೆಯ ಬಹುದು ಅಂದ್ರು. ಜೊತೆಗೆ ಒಂದೇ ಹೊತ್ತಿನಲ್ಲಿ ಇಡೀ ದೇಶದ ತುಂಬಾ ರೈಲು ನೇಮಕಾತಿ ನಡೆಯುತ್ತೆ ಅಂತಾನೂ ಅಂದ್ರು. ಇದೆಲ್ಲಾ ಆಗಿದ್ದು ಕನ್ನಡಿಗರ ಒಗ್ಗಟ್ಟಿನ ಹೋರಾಟದಿಂದಾನೇ ಅನ್ನೋದು ಸ್ಪಟಿಕದಷ್ಟು ಸ್ಪಷ್ಟ. ಎರಡು ವರ್ಷದ ಹೋರಾಟದ ಕಾರಣದಿಂದ ಬರೀ ಕರ್ನಾಟಕಕ್ ಮಾತ್ರಾ ಅಲ್ಲಾ... ಇಡೀ ಭಾರತಕ್ಕೆ ಉಪಕಾರ ಆಗೋ ಅಂಥಾ ಒಂದು ನಿಲುವಿಗೆ ಕೇಂದ್ರಸರ್ಕಾರ ಬಂದಿದೆ ಅಂದ್ರೆ ತಪ್ಪಾಗಲ್ಲ.
ರೈಲು ನೇಮಕಾತಿ ಅನ್ಯಾಯ ಬೆಳಕಿಗೆ ತಂದಿದ್ದು...
ರೈಲು ನೇಮಕಾತಿಯ ಅನ್ಯಾಯ ಮೊದಲಿಗೆ ಬಯಲಿಗೆ ಬಂದಿದ್ದು ಏನ್‍ಗುರುವಿನಲ್ಲೇ... ಆಗಸ್ಟ್ ೨೦೦೭ರಲ್ಲಿ ಇವರು ಜಾಹೀರಾತು ಕೊಟ್ಟಾಗಲೇ ಏನ್‍ಗುರುವಿನಲ್ಲಿ ಇದರ ಬಗ್ಗೆ ಬರೆದಿದ್ದೆವು. ನಂತರದ ದಿನಗಳಲ್ಲಿ ಈ ಅನ್ಯಾಯದ ವಿರುದ್ಧವಾಗಿ ದನಿಯೆತ್ತಿ ಹೋರಾಟದ ಕಣಕ್ಕೆ ಧುಮುಕಿದ್ದು ಕರ್ನಾಟಕ ರಕ್ಷಣಾ ವೇದಿಕೆಯೋರು. ನೇಮಕಾತಿ ಪರೀಕ್ಷೆಗೆ ಉತ್ತರದಿಂದ ಪುಗಸಟ್ಟೆ ರೈಲಲ್ಲಿ ಜನರನ್ನು ತುಂಬ್ಕೊಂಡು ಬಂದಾಗ ಈ ಹೋರಾಟ ಉಗ್ರ ಸ್ವರೂಪ ಪಡೀತು. ನೈಋತ್ಯ ರೈಲ್ವೇ ಕಛೇರಿಗೆ ಮುತ್ತಿಗೆ ಹಾಕಿದಾಗ ರೈಲು ಇಲಾಖೆ ಎಚ್ಚೆತ್ತುಕೊಂಡು ಇಡೀ ನೇಮಕಾತಿ ಪ್ರಕ್ರಿಯೇನಾ ಮುಂದೂಡ್ತು. ಇಂಥದೇ ಹೋರಾಟ ನಮ್ಮಿಂದಲೇ ಪ್ರೇರಣೆ ನಡೆದ ಹಾಗೆ ಮಹಾರಾಷ್ಟ್ರದಲ್ಲೂ... ಭಾರತದ ಬೇರೆಬೇರೆ ಕಡೆಗಳಲ್ಲೂ ನಡೀತು. ಆಮೇಲಾದ ರಾಜಕೀಯ ಬದಲಾವಣೆಗಳಲ್ಲಿ ಹೊಸ ಸರ್ಕಾರ, ಹೊಸ ಮಂತ್ರಿಗಳು ಬಂದ್ರು. ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯವರು ಈಗ ಕನ್ನಡಿಗರ ಹೋರಾಟಕ್ಕೆ ಗೌರವ ನೀಡಿ ಒಂದೊಳ್ಳೆ ನಿರ್ಧಾರ ಘೋಷಿಸಿದ್ದಾರೆ. ಇದರಂತೆ ಇನ್ಮುಂದೆ ರೈಲ್ವೇ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೀಬಹುದು. ಎಲ್ಲಾ ಕಡೆ ಒಟ್ಗೆ ಪರೀಕ್ಷೆ ನಡ್ಸೋದ್ರಿಂದ ಬೇರೆ ರಾಜ್ಯದಿಂದ ಇಲ್ಲಿಗೆ ಬರೋರ ಸಂಖ್ಯೆ ಕಮ್ಮಿ ಆಗೋ ಸಾಧ್ಯತೆ ಇದೆ. ಅಲ್ಲದೆ ಸ್ಥಳೀಯರಿಗೆ ಆದ್ಯತೆ ನೀಡೋಕೂ ರೈಲ್ವೇ ಮುಂದಾಗಿರೋದು ಸರಿಯಾದ ಒಪ್ಪುಕೂಟದೆಡೆಗಿನ ಹೆಜ್ಜೆಯಾಗಿದೆ.
ಬರೀ ರೈಲಲ್ಲ! ಎಲ್ಲ ನೇಮಕಾತಿಗಳೂ ಹೀಗಾಗಬೇಕು

ಇದು ಬರೀ ರೈಲು ಇಲಾಖೆಯಲ್ಲಾದ ಬದಲಾವಣೆಯಲ್ಲ. ಇದರಿಂದ ಕೇಂದ್ರಸರ್ಕಾರದ ಕೆಲಸಗಳಲ್ಲಿ ಇನ್ಮುಂದೆ ಸ್ಥಳೀಯರಿಗೆ ಆದ್ಯತೆ ಕೊಡಬೇಕು, ಆಯಾ ಪ್ರದೇಶಗಳ ಭಾಷೆಗಳಲ್ಲೇ ಪರೀಕ್ಷೆ ಬರೆಯೋ ಜನರ ಹಕ್ಕುನ್ನ ಮಾನ್ಯ ಮಾಡಬೇಕು. ಬ್ಯಾಂಕಿರಲಿ, ಸೈನ್ಯವಿರಲಿ ಎಲ್ಲಾ ಕಡೆಯ ಪರೀಕ್ಷೆಗಳು ಆಯಾ ರಾಜ್ಯಗಳ ಭಾಷೆಯಲ್ಲಿ ನಡೀಬೇಕು. ನಮ್ಮೂರಿನ ಕೆಲಸಗಳು ನಮ್ಮ ಮಣ್ಣಿನ ಮಕ್ಕಳಿಗೇ ಸಿಗಬೇಕು ಅಂತನ್ನೋ ಕೂಗಿಗೆ ಬಲ ಬಂದಂಗಾಗಿದೆ ಅಲ್ವಾ ಗುರು!

ಕೊನೆಹನಿ : ಬೆಂಗಾಲಿ ತಾಯ್ನುಡಿಯ ಮಮತಾ ಬ್ಯಾನರ್ಜಿ ಪ್ರಾದೇಶಿಕ ಪಕ್ಷಕ್ಕೆ ಸೇರಿದವರಾದ್ದರಿಂದಲೇ ಇಂಥಾ ಒಂದು ಒಪ್ಪುಕೂಟದ ಒಳಿತಿನ ತೀರ್ಮಾನ ಸಾಧ್ಯವಾಗಿದ್ದು ಅಂತನ್ನೋ ಮಾತನ್ನು ತಳ್ಳಿಹಾಕಕ್ ಆಗುತ್ತಾ ಗುರು?

ರೆಡ್ ಎಫ್.ಎಂ : ಕೆಂಪಾದವೋ ಎಲ್ಲಾ ಕೆಂಪಾದವೋ!!

ಬೆಂಗಳೂರಿನ ಎಸ್ ಎಫ್.ಎಮ್ ಅನ್ನೋ ಖಾಸಗಿ ಎಫ್.ಎಂ ಈಗ ರೆಡ್ ಎಫ್.ಎಮ್ ಅಂತ ಬದಲಾಗಿ ಸಕತ್ ಕನ್ನಡ ಹಾಡು ಹಾಕೋ ವಾಹಿನಿಯಾಗಿದೆಯಂತೆ. ಬೆಂಗಳೂರಿನ ರೇಡಿಯೊ ಮಾರುಕಟ್ಟೆಲಿ ದೊಡ್ಡ ಪಾಲು ( 10% ಗೂ ಹೆಚ್ಚು ) ಪಡಿಬೇಕು, ಆ ಮೂಲಕ ಹೆಚ್ಚು ಜಾಹೀರಾತಿನ ಆದಾಯ ಗಳಿಸಬೇಕು ಅಂದರೆ ಅದಕ್ಕಿರುವ ದಾರಿ ಕನ್ನಡ ಒಂದೇ ಅನ್ನೋದು ರೇಡಿಯೊ ಸಿಟಿ, ರೇಡಿಯೊ ಮಿರ್ಚಿ, ಫಿವರ್ ನಂತರ ಲೇಟ್ ಆದ್ರೂ ಲೇಟೆಸ್ಟ್ ಆಗಿ ರೆಡ್ ಎಫ್.ಎಮ್‍ಗೆ ಅರಿವಾದಂಗಿದೆ.

ರೇಡಿಯೊ ಕೇಳೋರ ಮಾಹಿತಿ (RAM) ಆಧಾರದ ಮೇಲೆ ಈ ಸಧ್ಯಕ್ಕೆ ಬೆಂಗಳೂರಿನ ರೇಡಿಯೊ ಸ್ಟೇಶನ್‍ಗಳ ಮಾರುಕಟ್ಟೆ ಪಾಲು ಇಂತಿದೆ:



ಗಮನಿಸಿ ನೋಡಿದರೆ ಮೇಲಿರುವ ಎಲ್ಲ ಸ್ಟೇಶನ್‍ಗಳು ಕನ್ನಡ ಹಾಡು ಹಾಕುವ ಸ್ಟೇಶನ್ ಗಳು ಮತ್ತು ಅವರೆಲ್ಲರ ಮಾರುಕಟ್ಟೆ ಪಾಲು ಗಣನೀಯವಾಗಿದೆ (10%ಕ್ಕಿಂತ ಹೆಚ್ಚು). ಇದರ ಅರ್ಥ ಏನಪ್ಪಾ ಅಂದ್ರೆ ರೇಡಿಯೋ ಮಾರುಕಟ್ಟೆಲಿ ಹೆಚ್ಚಿನ ಪಾಲು, ಹೆಚ್ಚಿನ ಆದಾಯ ಗಳಿಸಬೇಕು, ಹಾಗೆ ಮಾರುಕಟ್ಟೆಯಲ್ಲಿ ಅಗ್ರ ಆಟಗಾರ ಅನ್ನಿಸ್ಕೋಬೇಕು ಅನ್ನೋ ಎಲ್ಲ ವಾಹಿನಿಗಳಿಗೆ ಇರುವ ಒಂದೇ ಹಾದಿ ಅಂದ್ರೆ ಕನ್ನಡ ಅಪ್ಪಿಕೊಳ್ಳುವುದು ! ಇದನ್ನು ಅರಿತೇ ರೆಡ್ ಎಫ್.ಎಮ್ ಹೀಗೆ ಕನ್ನಡಕ್ಕೆ ಬದಲಾಗಿದ್ದು ಅನ್ಸಲ್ವಾ ಗುರು?

ಬೆಂಗಳೂರಿನಲ್ಲಿ ಕನ್ನಡ ಹಾಡು, ಮಾತಿಗಿರುವ ವ್ಯಾಪಕ ಬೇಡಿಕೆ

ಇಲ್ಲೊಂದು ಕುತೂಹಲಕರ ಮಾಹಿತಿ ಕಡೆ ವಸಿ ಕಣ್ಣ ಹಾಯ್ಸೋಣ ಬನ್ನಿ. ಕಳೆದ ವರ್ಷದ ಇದೇ ಸಮಯದ ಆಸುಪಾಸಿನಲ್ಲಿ ಫೀವರ್ ಮತ್ತು ರೇಡಿಯೋ ಸಿಟಿಗಳಿಗಿದ್ದ ಮಾರುಕಟ್ಟೆ ಪಾಲಿಗೂ, ಸಧ್ಯದ ಸ್ಥಿತಿಗೂ ಇರೋ ದೊಡ್ಡ ವ್ಯತ್ಯಾಸ ಸ್ವಲ್ಪ ನೋಡು ಗುರು.



ಆಧಾರ:
ಆಗಸ್ಟ್ 2008 :http://www.exchange4media.com/e4m/Radio/radionews.asp?section_id=7&news_id=31998&tag=26911

ಕನ್ನಡ ಅಪ್ಪಿಕೊಳ್ಳೋ ಮುಂಚೆ ಇದ್ದ ಪಾಲಿಗೂ, ನಂತರದ ಪಾಲಿಗೂ ಕಾಣೋ ವ್ಯತ್ಯಾಸ ಏನ್ ಹೇಳುತ್ತೆ? ಕನ್ನಡ ಅಪ್ಕೊಂಡ್ ನಂತರಾನೆ ವಾಹಿನಿಗಳು ಹೀಗೆ ಹೆಚ್ಚು ಹೆಚ್ಚು ಜನರನ್ನ ತಲುಪಲು ಶುರು ಆಗಿದ್ದು ಸ್ಪಷ್ಟವಾಗಿ ಕಾಣ್ಸತ್ತಲ್ವಾ? ಇದು ಕೊಡ್ತಿರೋ ಸಂದೇಶ ತುಂಬ ಸ್ಪಷ್ಟವಾಗಿದೆ. ಕನ್ನಡ = ದೊಡ್ಡ ಮಾರುಕಟ್ಟೆ ಪಾಲು, ದೊಡ್ಡ ದುಡ್ಡು. ಕನ್ನಡ ಕೈ ಬಿಡೋದು = ಮುಲೆಗುಂಪಾಗೋದು. ಬೆಂಗಳೂರಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಅನ್ನೋದ್ರಲ್ಲಿ ಇನ್ನು ಏನಾದ್ರೂ ಸಂದೇಹ ಇದೆಯಾ ಗುರು ?

SBI : ಪ್ರವೇಶ ಪರೀಕ್ಷೇಲಿ ಹಿಂದಿಯೋರಿಗೆ ಅನುಕೂಲ!

ಭಾರತೀಯ ಸ್ಟೇಟ್ ಬ್ಯಾಂಕ್‍ನ ಬೆಂಗಳೂರು ವೃತ್ತದಲ್ಲಿ ಅಂದ್ರೆ ಕರ್ನಾಟಕದ ವ್ಯಾಪ್ತೀಲಿ ಖಾಲಿಯಿದ್ದ 800 ಗುಮಾಸ್ತರ ಹುದ್ದೆಗಳನ್ನು ತುಂಬಕ್ಕೆ ಬ್ಯಾಂಕು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆದಿದ್ದಾರೆ. ಈ ಮೂಲಕ ಕರ್ನಾಟಕದ 800 ನಿರೋದ್ಯೋಗಿಗಳ ಮನೇ ಒಲೆ ಉರಿಯಲು ಸಹಾಯ ಆಗುತ್ತೆ ಅಂತ ನಾವಂದುಕೊಂಡ್ರೆ ದಡ್ರಾಗ್ತೀವಿ ಗುರು!

ನೂರು ಮೀಟರ್ ಓಟದ ಸ್ಪರ್ಧೇಲಿ...

ಈ ನೇಮಕಾತಿ ಮಾಡ್ಕೊಳ್ಳೋವಾಗ ಅಭ್ಯರ್ಥಿಗಳು ಹಲವಾರು ಅರ್ಹತೆಗಳನ್ನು ಹೊಂದಿರಬೇಕು ಅಂತಾ ಬ್ಯಾಂಕ್ ನೇಮಕಾತಿ ಮಾಡೋರು ನಿಗದಿ ಮಾಡಿದಾರೆ. ಇದರಲ್ಲಿ ಸ್ಥಳೀಯ ಭಾಷೆ ಗೊತ್ತಿರೋದು "ಅಡಿಷನಲ್ ಕ್ವಾಲಿಟಿ" ಅಂದ್ರೆ ಹೆಚ್ಚುವರಿ ಅರ್ಹತೆಯಂತೆ. ಇಂಗ್ಲೀಷಿನ ಅರಿವು ಕಡ್ಡಾಯವಂತೆ. ಹಾಗಂತಾ ಅವರ ಜಾಹೀರಾತಲ್ಲಿ ಹಾಕಿದಾರೆ.
"ತಪ್ಪೇನ್ರಿ? ಇವತ್ತಿನ ದಿವಸ ಬ್ಯಾಂಕುಗಳೆಲ್ಲಾ ಕೆಲಸಾ ಮಾಡೋದು ಇಂಗ್ಲಿಷ್‍ನಲ್ಲಲ್ವಾ?" ಅಂತಾ ಕೇಳ್ತೀರೇನೋ... ಹಂಗಾದ್ರೆ ಹಿಂದಿ ಭಾಷೆಯೋರಿಗೆ ಯಾಕೆ ವಿಶೇಷ ಸವಲತ್ತು ಕೊಡ್ತಿದಾರೆ ಇವರು? ಅಂತ ಹುಬ್ಬೇರಿಸೋ ಹಾಗೆ ಮುಂದಿನ ಸಾಲುಗಳಲ್ಲಿ ಬರ್ದಿದಾರೆ.



ಈ ಬ್ಯಾಂಕು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮತ್ತು ಹಿಂದೀಲಿ ಇರುತ್ತೆ. ಉತ್ತರ ಬರೆಯೋರು ಹಿಂದೀಲಿ ಬೇಕಾದ್ರೂ ಬರೀಬೌದು! ಅಕಸ್ಮಾತ್ ಪಾಸಾಗಿ ಸಂದರ್ಶನಕ್ ಹೋದ್ರೆ ಅಲ್ಲೂ ಹಿಂದೀನಾ ಅಯ್ಕೆ ಮಾಡ್ಕೊಬೌದು!!

ಈ ಸಾಲುಗಳ ಅವಶ್ಯಕತೆ ಏನು? ಅಂತಾ ಸ್ವಲ್ಪ ನೋಡು ಗುರು! ಕರ್ನಾಟಕದ ಶಾಖೆಗಳಲ್ಲಿ ಕೆಲಸಕ್ಕೆ ಸೇರೋನಿಗೆ ಕನ್ನಡ ಕಡ್ಡಾಯವಾಗಿ ಬರಬೇಕೆಂಬ ನಿಯಮ ಇಲ್ಲ. ಬ್ಯಾಂಕು ಪರೀಕ್ಷೆ ತೊಗೊಳ್ಳೋ ಕನ್ನಡಿಗನಿಗೆ ತನ್ನದಲ್ಲದ ಇಂಗ್ಲಿಷ್ ಅರಿವು ಕಡ್ಡಾಯ. ಆದ್ರೆ ಹಿಂದೀ ತಾಯ್ನುಡಿಯವನಿಗೆ? ಜಾಹೀರಾತಲ್ಲಿ ಇಂಗ್ಲಿಷ್ ವ್ಯವಹಾರ ಜ್ಞಾನ ಕಡ್ಡಾಯ ಅಂತಾ ಇದ್ರೂ ಬರೀ ಇಂಗ್ಲಿಷಿನ ಒಂದು ಪ್ರಶ್ನೆಪತ್ರಿಕೇಲಿ ಪಾಸ್ ಆದ್ರೆ ಸಾಕು, ಉಳಿದದ್ದೆಲ್ಲಾ ಹಿಂದೀಲಿ ಬರ್ದು ಪಾಸಾಗಬಹುದು ಅಂತಲ್ವಾ? ಬ್ಯಾಂಕಿನ ವ್ಯವಹಾರಕ್ಕೆ ಬೇಕಾಗೋ ಇಂಗ್ಲಿಷ್ ಬರದಿದ್ರೂ, ತಾನು ವ್ಯವಹರಿಸಬೇಕಾಗಿರೋ ಜನರ ಭಾಷೆಯ ಗಾಳಿಗಂಧವೇ ಇಲ್ದಿದ್ರೂ ಕೆಲಸ ಸಿಗಕ್ಕೆ ಯಾವ ಸಮಸ್ಯೇನೂ ಇಲ್ಲ. ಇದು ನೂರು ಮೀಟರ್ ಓಟದ ಸ್ಪರ್ಧೇಲಿ ಹಿಂದಿಯವನನ್ನು ಎಂಬತ್ತು ಮೀಟರ್ ಮುಂದೆ ನಿಲ್ಸಿ 1,2,3 ಸ್ಟಾರ್ಟ್... ಅನ್ನೋ ಮೋಸದಾಟದ ಹಾಗಲ್ವಾ? ತನ್ನೊಡಲೊಳಗಿರುವ ಎಲ್ಲಾ ನುಡಿಗಳನ್ನೂ ಜನರನ್ನೂ ಸಮಾನವಾಗಿ ನೋಡದೆ ತಾರತಮ್ಯ ಮಾಡ್ತಿರೋ ಈ ವ್ಯವಸ್ಥೆ ಸರೀನಾ ಗುರು?

ತನ್ನ ಭಾಷಾನೀತೀನ ಭಾರತ ಸರ್ಕಾರ ಬದಲಾಯಿಸಿಕೊಂಡು ....ಕರ್ನಾಟಕದಲ್ಲಿ (ತಮಿಳುನಾಡಲ್ಲಿ) ಈ ಬ್ಯಾಂಕು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ (ತಮಿಳಿನಲ್ಲಿ) ಇರುತ್ತೆ. ಉತ್ತರ ಬರೆಯೋರು ಕನ್ನಡದಲ್ಲಿ(ತಮಿಳಿನಲ್ಲಿ) ಬೇಕಾದ್ರೂ ಬರೀಬೌದು! ಅಕಸ್ಮಾತ್ ಪಾಸಾಗಿ ಸಂದರ್ಶನಕ್ ಹೋದ್ರೆ ಅಲ್ಲೂ ಕನ್ನಡಾನ (ತಮಿಳನ್ನು) ಅಯ್ಕೆ ಮಾಡ್ಕೊಬೌದು!! ಅನ್ನೋ ರೀತಿಯಲ್ಲಿ ಆಯಾ ಪ್ರದೇಶಗಳ ನುಡಿಯಲ್ಲಿ ಪರೀಕ್ಷೆಗಳೂ, ಸಂದರ್ಶನಗಳೂ ನಡೆಯೋ ವ್ಯವಸ್ಥೆ ಭಾರತದಲ್ಲಿ ಹುಟ್ಕೊಳ್ಳೋ ತನಕಾ ಈ ದೇಶದಲ್ಲಿ ಸಮಾನತೆ ಅನ್ನೋದು ಬರೀ ಬೊಗಳೇ ಅನ್ನುಸ್ತಿಲ್ವಾ ಗುರು?
"ಬ್ಯಾಂಕು ಕೆಲಸ ವರ್ಗಾವಣೆ ಆಗೋ ಕೆಲಸಾ, ಇಡೀ ಭಾರತದಲ್ಲಿ ಎಲ್ಲಿಗೆ ಬೇಕಾದ್ರೂ ಪೋಸ್ಟಿಂಗ್ ಆಗ್ಬಹುದು" ಅಂತನ್ನೋ ವಾದಕ್ಕೆ ಮರುಳಾಗಿ ಬಿಡಬೇಡಿ... ಎಲ್ಲಿಗೇ ವರ್ಗಾ ಮಾಡುದ್ರೂ ಆಯಾ ಪ್ರದೇಶದ ನುಡೀಲಿ ವ್ಯವಹರಿಸೋ ತರಬೇತಿ ಕೊಟ್ಟು ಕಳಿಸಕ್ಕೂ ಆಗುತ್ತೆ ಮತ್ತು ಅದೇ ಸರಿಯಾದದ್ದು ಗುರು!

ವಲಸಿಗನ ಧರ್ಮ ಮತ್ತು ಭಾರತದ ಏಕತೆ!

ಉತ್ತರ ಪ್ರದೇಶ ಮೂಲದ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ವಿಧಾನಸಭೆಯ ಶಾಸಕ ಅಬು ಆಜ್ಮಿಯೋರು ಮಹಾರಾಷ್ಟ್ರ ವಿಧಾನಸಭೇಲಿ ಮರಾಠಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದು, ಅದನ್ನು ಎಮ್.ಎನ್.ಎಸ್ ಪ್ರತಿಭಟಿಸಿದ್ದರಿಂದಾಗಿ ವಿಧಾನಸಭೆಯ ಅಂಗಳ ರಣರಂಗವಾದ ಸುದ್ದೀನಾ ನಾವೆಲ್ಲರೂ ಮಾಧ್ಯಮದಲ್ಲಿ ನೋಡುದ್ವಿ. ವಿಧಾನಸಭೆಯ ಸದನದ ಅಂಗಳದಲ್ಲಿ ಹೊಡೆದಾಟದಂತಹ ಅನಾಗರಿಕ ಘಟನೆಗಳು ನಡೆದದ್ದು ಸದನದ ಘನತೆಗೆ ತಕ್ಕುದಾಗಿರಲಿಲ್ಲ. ಇಂತಹ ಘಟನೆಗಳನ್ನು ನಾಗರಿಕ ಸಮಾಜ ಎಂದಿಗೂ ಒಪ್ಪಲ್ಲ ಮತ್ತು ಇವು ಖಂಡಿತವಾಗಿಯೂ ಮರುಕಳಿಸಬಾರದು. ಆದರೆ, ಹಿಂದಿ ಭಾರತದ ರಾಷ್ಟ್ರಭಾಷೆ ಅನ್ನೋ ಹಸೀ ಸುಳ್ಳುಮಾತುಗಳನ್ನು ಆಡುತ್ತಾ ವಲಸಿಗನ ಧರ್ಮವನ್ನು ಮರೆತು ನಡೆಯುವ ಜನರ ನಡವಳಿಕೆಯೇ ಇಂತಹದೊಂದು ಅಶಾಂತಿಗೆ ಕಾರಣವಾಗಿರೋದು ಅಂತನ್ನಿಸಲ್ವಾ ಗುರು?

ವಲಸಿಗನ ಧರ್ಮವೇನು?

ಹಾಗಿದ್ದರೆ, ವಲಸಿಗನ ಧರ್ಮವೇನು ಅಂತೀರಾ? ತಾನು ಹೊಟ್ಟೆಪಾಡಿಗೆ ಯಾವ ನಾಡಿಗೆ ಬರ್ತಾನೋ, ಆ ನಾಡಲ್ಲಿರೋ ಸಂಸ್ಕೃತಿ, ನುಡಿ, ವ್ಯವಸ್ಥೆಗಳಿಗೆ ಹೊಂದಿಕೊಂಡು ನಡೆಯೋದು. ಅಲ್ಲಿನ ನುಡಿ ಕಲಿತು, ಆ ನುಡಿಯಾಡುವ ಜನರೊಡನೆ ಬೆರೆತು ಬಾಳೋದೇ ವಲಸಿಗನ ಸರಿಯಾದ ಧರ್ಮ. ಅದು ಬಿಟ್ಟು "ನಾಡಿಗರ ನುಡೀನ ನಾನ್ಯಾಕೆ ಬಳಸ್ಲಿ? ನಂಗೆ ಬೇಕಾದ ಭಾಷೇಲಿ ಬೋರ್ಡ್ ಹಾಕ್ತೀನಿ. ವ್ಯಾಪಾರ ಮಾಡ್ತೀನಿ. ಪ್ರಮಾಣ ತಗೋತೀನಿ" ಅನ್ನೋ ಮೂಲಕ ಎಂದೆಂದಿಗೂ ತಾನು ವಲಸಿಗನಾಗೇ ಉಳಿಯುವೆ, ಎಂದಿಗೂ ಆ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಲಾರೆ ಅನ್ನೋ ನಿಲುವು ‘ಅನ್ನ ಕೊಟ್ಟ ಮನೆಯ ಗಳ ಎಣ್ಸೋ ಬುದ್ದಿ’ ಅಲ್ವಾ? ವಲಸಿಗನ ಧರ್ಮ ಮರೆತು ಈ ರೀತಿ ಅಶಾಂತಿಗೆ ಕಾರಣವಾಗೋದು ನಿಜವಾದ ಅರ್ಥದಲ್ಲಿ ದೇಶದ್ರೋಹ ಅನ್ಸಲ್ವಾ ಗುರು?

ಹಿಂದಿ ರಾಷ್ಟ್ರ ಭಾಷೆ ಅನ್ನೋ ಹಸಿ ಸುಳ್ಳು !

ಇವೆಲ್ಲವೂ ಒಂದು ತೆರನಾದರೆ... ‘ಹಿಂದಿಯಲ್ಲಿ ಪ್ರಮಾಣ ತೆಗೆದುಕೊಳ್ಳುವ ಮೂಲಕ ತಾನು ಭಾರತದ ರಾಷ್ಟ್ರಭಾಷೆಯಾದ ಹಿಂದಿಗೆ ಗೌರವ ಸಲ್ಲಿಸಿದ್ದೇನೆ’ ಎಂದು ಇವರು ಹೇಳುವುದು, ಅದನ್ನೇ ಹಲವು ಮಾಧ್ಯಮಗಳು ಹೌದು ಎಂಬಂತೆ ಪ್ರಸಾರ ಮಾಡುವುದನ್ನು ನೋಡಿದಾಗ "ಭಾರತದ ರಾಷ್ಟ್ರಭಾಷೆ ಹಿಂದಿ " ಎಂಬ ಅಪಾಯಕಾರಿ ಸಂದೇಶ ನೀಡುತ್ತಾ, ‘ಭಾರತ ಅಂದ್ರೆ ಹಿಂದೀ ಒಪ್ಕೋಬೇಕು’ ಅನ್ನೋ ಆಕ್ರಮಣಕಾರಿ ನಿಲುವು ಇವರಲ್ಲಿರುವುದು ಕಾಣಿಸುತ್ತೆ. ಮಾಧ್ಯಮಗಳು ಮಾಡುತ್ತಿರುವ ಇಂತಹ ಅಪಪ್ರಚಾರವೂ ಹಿಂದಿ ಹೇರಿಕೆಯ ಅಸ್ತ್ರವೇ ಆಗಿದೆ. ಸಂವಿಧಾನದಲ್ಲೆಲ್ಲೂ ಹಿಂದಿ ರಾಷ್ಟ್ರಭಾಷೆಯೆಂದು ಬರೆದಿರದಿದ್ದರೂ, ಇವರು ಇಂತಹ ನಿಲುವು ತಳೆಯುವುದರ ಹಿಂದೆ ಹಿಂದಿಯನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಅನ್ನೋ ಸಾಮ್ರಾಜ್ಯ ಶಾಹಿ ಧೋರಣೆ ಎದ್ದು ಕಾಣುತ್ತೆ. ಯಾವುದೇ ಒಂದು ನಾಡಿನಲ್ಲಿ, ಆ ನಾಡಿನ ಜನರ ಒಗ್ಗಟ್ಟು ಆ ನಾಡಿನ ಏಳಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಇದಕ್ಕೆ ಭಾರತವು ಹೊರತಲ್ಲ. ಹಾಗಾದರೆ ಭಾರತದಲ್ಲಿ ಇಂತಹ ತಾರತಮ್ಯ ಒಗ್ಗಟ್ಟು ಮೂಡುವುದೋ? ಇರುವ ಒಗ್ಗಟ್ಟನ್ನು ಮುರಿದು ಹಾಕುವುದೋ? ಎಂದರೆ ಎರಡನೆಯದೇ ವಾಸ್ತವವಾದ ಮಾತಾಗಿದೆ. ಯಾಕೆಂದರೆ ಭಾರತ ದೇಶವು ಬೇರೆ ಬೇರೆ ನುಡಿಗಳನ್ನಾಡುವ, ಬೇರೆ ಬೇರೆ ಸಂಸ್ಕೃತಿಗಳ, ಬೇರೆ ಬೇರೆ ಜನಾಂಗಗಳಿಂದ ಕೂಡಿದ ಒಪ್ಪುಕೂಟ. ಇಲ್ಲಿ ಯಾವುದೋ ಒಂದು ನುಡಿಯಿಂದ ದೇಶವನ್ನು ಒಂದಾಗಿರಿಸಬಲ್ಲೇವು ಅನ್ನೋದು ನಿಜಕ್ಕೂ ಮೂರ್ಖತನದ ಮಾತು. ಇಲ್ಲೇನಿದ್ದರೂ, ಸಮಾನತೆಯೆಂಬ ಸರಳ ತಂತ್ರವೇ ಒಗ್ಗಟ್ಟಿಗಿರೋ ಒಂದೇ ಒಂದು ಸಾಧನ ಎಂಬುದನ್ನು ಎಷ್ಟು ಬೇಗ ಅರಿತರೆ ಅಷ್ಟು ಭಾರತದೇಶಕ್ಕೆ ಒಳ್ಳೆಯದು ಗುರು!

ನಮ್ಮೂರ ಕೆಲ್ಸಾ ನಮ್ಮ ಮಂದೀಗಾ: ಈಗ ಮಧ್ಯಪ್ರದೇಶದ ಸರದಿ!

ಮಹಾರಾಷ್ಟ್ರ ಆತು, ಒರಿಸ್ಸಾ ಆತು... ಈಗ ಮಧ್ಯಪ್ರದೇಶದವರ ಪಾಳಿ ಚಾಲೂ ಆದಂಗೈತ್ರೀಪಾ! ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹಾನ್ ಅವ್ರ ಇಂಥಾ ಒಂದು ಹೇಳಕಿ, ಮತ್ತ ಬಿಹಾರಿಗಳು ಸುದ್ಯಾಗ ಬರಂಗ ಮಾಡೇತಲ್ರಿ ಗುರುಗಳ! ಚೌಹಾನ್ ಸಾಹೇಬ್ರ ಆ ಹೇಳಿಕಿ ಹೊರಬಿದ್ದದ್ದೇ ತಡ, ಬಿಹಾರದ ಮಂತ್ರಿ ಮಾಗದರೆಲ್ಲ ಬಾಲಸುಟ್ಟ ಬೆಕ್ಕಿನಂಗ ಆಡಕತ್ತಾರಂತಲ್ರೀ! ಈ ಸುದ್ದೀ ಭಾಳ ಥ್ರಿಲ್ಲಿಂಗ್, ಎದುಕ್ ಅಂದ್ರಾ ಈ ಮಾತ್ ಆಡಿರು ಸಾಹೇಬ್ರು ರಾಷ್ಟ್ರೀಯವಾದಿ, ರಾಷ್ಟ್ರೀಯ ಪಕ್ಷ ಆಗಿರೂ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ಅದಾರಾ ಅನ್ನೋದಾಗೈತಿ. ‘ಹ್ಞಾಂ! ರಾಷ್ಟ್ರೀಯ ಪಕ್ಷದ ಮಂದಿ ಹೀಂಗಾ ಪ್ರಾದೇಶಿಕ ಮಾತು ಅಂತಾರಾ? ತೆಗೀರೀ ಗುರುಗಳಾ’ ಅನ್‍ಬ್ಯಾಡ್ರೀಪಾ! ಈ ಸುದ್ದಿ 07.11.2009ರ ಡಿ.ಎನ್.ಏ ಪತ್ರಿಕೆಯಾಗ ಹತ್ತನೇ ಪುಟದಾಗೆ ಬಂದೈತ್ರೀಪಾ!

ಮಧ್ಯಪ್ರದೇಶದಾಗಿನ ನೌಕರೀ ಅಲ್ಲೀ ಮಂದೀಗಾ!

ಮಧ್ಯಪ್ರದೇಶ ರಾಜ್ಯದಾಗಿನ ಅಷ್ಟೂ ಕಂಪನಿಗಳು, ಕೆಲಸಕ್ಕ ಮಂದೀನ ತೊಗೋವಾಗ ಇನ್ಮುಂದಾ ಸ್ಥಳೀಯರನ್ನು ಬದಿಗೊತ್ತಿ ಬಿಹಾರದ ಮಂದಿಗೆ ಕೆಲಸ ನೀಡಂಗಿಲ್ಲಾ. ಮಧ್ಯಪ್ರದೇಶ ರಾಜ್ಯದ ಮಕ್ಕಳಿಗಾ ಮೊದಲು ಕೊಡ್ಬೇಕು, ನಮ್ ಮಂದೀಗಾ ಕೆಲಸಕ್ ತ್ರಾಸ್ ಇದ್ದಾಗ ಬಿಹಾರ, ಪಹಾರದಿಂದ ಮಂದೀನ ಇಲ್ಲಿಗ್ ಕರ್ಕೊಂಡ್ ಬಂದು ಕೆಲಸ ಕೊಡೋಣು ಆಗಬಾರ್ದು’ ಅಂತ ಚೌಹಾನ್ ಸಾಹೇಬರು ಅಂದಾರಂತ! ಅಷ್ಟಾ ಅಲ್ಲ ಮತ್ತಾ... ‘ಇಲ್ಲಿ ಉದ್ಯೋಗ ನಮ್ಮ ಯುವಜನರ ಹೊಟ್ಟೆಪಾಡು ಮತ್ತು ಅವರ ಬಾಳಿನ ವಿಷಯ, ಅದಕ್ಕ ಈ ಕೆಲ್ಸದ್ ವಿಷಯದಾಗ ಹೊರಗಿನವ್ರಿಗೆ ಯಾವುದೇ ಆಸ್ಪದ ನೀಡಂಗಿಲ್ಲ’ ಅಂತನೂ ಹೇಳ್ಯಾರೀಪಾ. ಮಧ್ಯಪ್ರದೇಶ ಮುಖ್ಯಮಂತ್ರಿಗೋಳ ಈ ನಿರ್ಧಾರ ‘ಆ ನೆಲದ ಮಕ್ಕಳಿಗೆ ಅವ್ರ ನೆಲದಾಗ ಬದುಕು ಕಟ್ಕೊಡೋ ದಿಕ್ಕಾಗ ತೊಗೊಂಡಿರೋ ಭಾರಿ ಚೊಲೋ ತೀರ್ಮಾನ’ ಅಂತ ಅನ್ಸೇ ಅನ್ಸುಸ್ತದಲ್ರೀ ಗುರುಗಳಾ? ‘ನಮ್ಮ ಜನರ ಬದುಕಿನ ಜವಾಬ್ದಾರಿ ನಮ್ ಮ್ಯಾಲೆ ಐತಿ’ ಅಂತ ಜ್ಞಾನೋದಯ ಆಗಿನೋ ಏನೋ, ಗುಜರಾತ್, ಮಹಾರಾಷ್ಟ್ರ ಮತ್ತು ಒರಿಸ್ಸಾಮುಖ್ಯಮಂತ್ರಿಗಳು, ಇವತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಏನು ನಿಲುವಿಟ್ಟು ಕೊಂಡಾರೋ, ಅಂಥದೇ ಚೊಲೋ ನಿರ್ಧಾರಾನ ಹಿಂದೇನ ತೊಗೊಂಡಿದ್ರು.

ಹೊಯ್ಕೊಳಾಕ್ ಹತ್ತಿರೋ ಬಿಹಾರದ ಮಂತ್ರಿಗೋಳು!

ಬಿಹಾರದ ಮಂದೀ ಹೀಂಗಾ ಎಲ್ಲಾ ಕಡಿಯಿಂದ ಛೀ ಥೂ ಅನ್ನುಸ್ಕೊತಾ ಇರೋದ್ ನೋಡಿ ಅಲ್ಲಿನ ರಾಜಕೀಯ ಮಂದೀಗೇನಾರಾ ನಾಚಿಕಿ ಬಂತಂತಾ ಮಾಡೀರೇನೂ? ಅಂಥಾ ಖಬರ್ ನಮಗಂತೂ ಬಂದಿಲ್ರೀಪಾ! ಅಲ್ಲಿ ರಾಜಕಾರಣಿಗಳು ‘ಭಾರತದಾಗ ಮಂದೀ ಎಲ್ಲಾರಾ ಹೋಗಿ ಕೆಲಸ ಮಾಡೋ ಹಕ್ಕು ಅದಾ. ಅಂಥಾ ಹಕ್ಕುನ್ನಾ ನಮ್ ಸಂವಿಧಾನಾನೇ ಕೊಟ್ಟೇತಿ.’ ಅಂತಾ ಒದರೋದ್ರಾಗಾ ಅದಾರೀಪಾ! ತಮ್ ಮಂದಿ ಎದುಕ್ ಹೀಂಗಾ ಗುಳೆ ಹೊಂಟಾರಾ? ಹಾಂಗ್ ಹೋಗದಾಂಗ ನಮ್ ನಾಡಾಗಾ ಎಂಥಾ ಉದ್ದಿಮೆ ಕಟ್ಟೋಣು? ಹ್ಯಾಂಗಾ ವ್ಯವಸ್ಥಿ ಸರಿ ಮಾಡೋಣು? ಜನಸಂಖ್ಯಿ ಹ್ಯಂಗ್ ಕಮ್ಮಿ ಮಾಡೋಣು? ಅಂತ ಚಿಂತಿ ಮಾಡೋದರ ಬದಲಿಗೆ ಹಿಂಗ್ ತೋಳೇರಸಕ್ ಮುಂದಾದ್ರ ಹೆಂಗಾ? ನೀವೇ ಹೇಳಿ ಗುರುಗಳಾ! ಒಟ್ಟಿನಾಗ ‘ಬ್ಯಾರೆ ರಾಜ್ಯದಾಗಿನ ಕೆಲಸ ಬೊಗಸಿ ಇರೋದಾ ಬಿಹಾರದ ಮಂದೀಗಾ’ ಅಂತ ತಿಳ್ಕೊಂಡಂಗೈತಿ ಈ ಬಿಹಾರದ ಮಂತ್ರಿ ಮಂದಿ. ರೇಲು ಪರೀಕ್ಷಾ ಅನ್ನೂದು ಎಲ್ಲೇ ನಡೆದ್ರೂ ಬಿಹಾರದಿಂದ ಆ ಪರೀಕ್ಷೆ ನಡಿಯೋ ಊರಿಗೆ ಹಿಂಡು ಹಿಂಡಾಗಿ ಬಿಹಾರಿಗಳನ್ನ ಪುಗಸಟ್ಟಿ ರೈಲಾಗ್ ಕಳಸೋದ್ರಾಗ, ಅಲ್ಲೀ ರಾಜಕಾರಣಿಗೋಳು ಬಿಜಿ ಅದಾರಾ ಅಂತೀರೇನು? ಒಟ್ನಾಗಾ ಬಿಹಾರಾನ ಸರಿಯಾಗಿ ಅಭಿವೃದ್ಧಿ ಮಾಡಲಾಗದ ಅಲ್ಲೀ ರಾಜಕಾರಣಿಗಳಿಂದ ಇಡೀ ಭಾರತದ ಮೂಲಿಮೂಲಿ ಜನಕ್ ತ್ರಾಸಾಗಕ್ ಹತ್ತೇತಿ ಅನ್ನೂದಂತೂ ಖರೇ ಐತ್ರೀಪಾ! ಏನಂತೀರ್ರೀ ಸರಾ?

ಕಾಡನ್ನು ಕಾಪಾಡಬೇಕಾದ ಸರ್ಕಾರವೆಂಬ ಬೇಲಿಯೇ ಮೇಯದಿರಲಿ!

ಕಾಡುಪ್ರಾಣಿಗಳ ಜೀವ ತೆಗೆಯೋ ಇರುಳು ಓಡಾಟಕ್ಕೆ ಅನುಮತಿ ಕೊಡೋ ಕ್ರಮಕ್ಕೆ ಮುಂದಾಗಬೇಡಿ ಅಂತಾ ಹೈಕೋರ್ಟು ಕರ್ನಾಟಕ ರಾಜ್ಯಸರ್ಕಾರಾನ ತರಾಟೆಗೆ ತೊಗೊಂಡಿರೋ ಸುದ್ದಿ ದಿನಾಂಕ 05.11.2009ರ ವಿಜಯಕರ್ನಾಟಕದ 12ನೇ ಪುಟದಲ್ಲಿ ಬಂದಿದೆ ಗುರು! ನಮ್ಮ ಕರ್ನಾಟಕದ ಬಂಡಿಪುರದ ಕಾಡು ಆನೆ, ಹುಲಿ, ಚಿರತೆ, ಕಾಡೆಮ್ಮೆ, ಜಿಂಕೆಗಳಂತಹ ಪ್ರಾಣಿಗಳ ಜೊತೆಗೆ ಅನೇಕ ಅಪರೂಪದ ಜೀವಿಗಳಿಗೆ ತವರಾಗಿದೆ. ಅಷ್ಟೇ ಅಲ್ದೆ ಇಲ್ಲಿ ಅತ್ಯಂತ ಬೆಲೆಬಾಳುವ ಶ್ರೀಗಂಧದಂತಹ ಮರಗಿಡಗಳೂ ಬೆಳೆಯುತ್ತವೆ. ಇದುನ್ನೆಲ್ಲಾ ಕಾಪಾಡ್ಕೋಬೇಕಾದ್ದು ನಮ್ಮ ಅಂದ್ರೆ ನಮ್ಮ ಸರ್ಕಾರದ ಹೊಣೆ. ಈ ಮಾತ್ನ ಕರ್ನಾಟಕ ಸರ್ಕಾರಕ್ಕೆ ರಾಜ್ಯ ಹೈಕೋರ್ಟು ಬೈದು ಹೇಳಿದೆ.

ಇಷ್ಟಕ್ಕೂ ಆಗಿದ್ದೇನಪ್ಪಾ ಅಂದ್ರೆ, ಮೈಸೂರು-ನಂಜನಗೂಡು-ಬಂಡಿಪುರ ಮಾರ್ಗವಾಗಿ ಕೇರಳಕ್ಕೆ ಒಂದು ರಸ್ತೆ ಹೋಗುತ್ತೆ. ಇದರಲ್ಲಿ ಲಾರಿಪಾರಿ ಥರದ ಸಕ್ಕತ್ ಗಾಡಿಗಳು ಓಡಾಡ್ತಾ ಇರ್ತವೆ. ಈ ಗಾಡಿಗಳು ಹೋಗೋವಾಗ ನಡುಮಧ್ಯೆ ಕಾಡುಪ್ರಾಣಿಗಳು ಸಿಗೋದೂ ಸಹಜ. ಅದ್ಯಾವ ಕಾರಣಕ್ಕೋ ಏನೋ ಒಟ್ನಲ್ಲಿ ದಾರಿ ಮಧ್ಯದಲ್ಲಿ ಅನೇಕ ಆನೆಗಳು, ಹುಲಿಗಳು, ಜಿಂಕೆಗಳು, ಹಾವುಗಳು, ಕಾಡೆಮ್ಮೆಗಳೂ ಈ ಗುರುತಿಲ್ಲದ ಗಾಡಿಗಳಿಗೆ ಸಿಕ್ಕು ಸಾಯ್ತಾಯಿರೋ ಕಳವಳಕಾರಿ ಘಟನೆಗಳು ನಡೆದಿವೆ. ಇಂಥಾ ದುರಂತಗಳೂ ಕೂಡಾ ಇರುಳಲ್ಲಿ ಓಡಾಡೋ ಗಾಡಿಗಳಿಂದಲೇ ಆಗ್ತಿವೆ ಅನ್ನೋ ಕಾರಣದಿಂದಾಗಿ ಸಂಜೆ ಕತ್ತಲಾದ ಮೇಲೆ ಈ ದಾರಿಗಳಲ್ಲಿ ಗಾಡಿಗಳು ಓಡಾಡಬಾರದು ಅನ್ನೋ ಕಟ್ಟುಪಾಡು ಜಾರಿ ಮಾಡಿದ್ರಂತೆ. ಈ ಥರ ಮಾಡಿದ್ರಿಂದ ಅನೇಕ ಪ್ರಾಣಿಗಳ ಜೀವ ಉಳ್ಯೋದ್ರು ಜೊತೆಗೇ ಇನ್ನೊಂದು ಉಪಕಾರವೂ ಆಗಿದೆ. ಮರಗಳನ್ನು ಕದ್ದು ಮಾರೋ ಕಳ್ಳಕಾಕರ ಓಡಾಟ ವಹಿವಾಟೆಲ್ಲಾ ಇರುಳಲ್ಲೇ ನಡೀತಾ ಇದ್ದುದ್ದು ಈಗ ಅಂಥದ್ದಕ್ಕೆಲ್ಲಾ ಕಡಿವಾಣ ಹಾಕ್ದಂಗಾಗಿದೆ.

ಕರ್ನಾಟಕ ರಾಜ್ಯ ಸರ್ಕಾರ ಮಾಡಿದ್ದೇನು ಗೊತ್ತಾ?

ಚಾಮರಾಜನಗರದ ಜಿಲ್ಲಾಧಿಕಾರಿಗಳು ಇಂಥಾ ಆದೇಶ ಹೊರಡಿಸಿದ್ದು ಜೂನ್ ತಿಂಗಳಲ್ಲಿ, ಇದಾದ ವಾರದ ಒಳಗೇ ಮುಖ್ಯಮಂತ್ರಿಗಳ ಕಛೇರಿಯಿಂದ ಬಂದ ನಿರ್ದೇಶನದ ಕಾರಣದಿಂದ ವಾಪಸ್ಸು ಪಡೆಯಲಾಯಿತು ಅನ್ನೋ ಸುದ್ದಿ ನೋಡುದ್ರೆ ಇದೇನು? ನಮ್ಮ ರಾಜ್ಯದ ರಾಜ್ಯ ಸರ್ಕಾರ ಯಾವ ಯಾವುದೋ ಲಾಬೀಗೆ ಬಗ್ಗುತ್ತಲ್ಲ ಅನ್ನೋದು ಗೊತ್ತಾಗುತ್ತೆ ಗುರು. ನೆರೆಯ ಕೇರಳ ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಹಿಂಗೆ ರಾತ್ರಿ ಹೊತ್ತಲ್ಲಿ ಸಂಚಾರಕ್ಕೆ ಅಡ್ಡಿ ಮಾಡಿರೋದ್ರಿಂದ ನಮ್ಮ ಜನರಿಗೆ ಕರ್ನಾಟಕಕ್ಕೆ ಹೋಗಿಬರಕ್ಕೆ ತೊಂದ್ರೆ ಆಗ್ತಿದೆ. ನಮ್ಮೂರಿನ ಸರಕು ಸಾಗಣೆ ವ್ಯವಸ್ಥೆಗೆ ಪೆಟ್ಟು ಬಿದ್ದಿದೆ ಅಂತಾ ಕಿರಿಕ್ ಮಾಡ್ತು. ಕರ್ನಾಟಕ ರಾಜ್ಯ ಸರ್ಕಾರ ನಮ್ಮ ಕಾಡುಪ್ರಾಣಿಗಳ ಬೆಂಬಲಕ್ಕೆ ನಿಲ್ತೇನು? ಇವೂ ನಮ್ಮ ಕನ್ನಡದ ಜನರಂಗೇ ಮೂಕ ಮುಂಡೇವು ಅಂತಾ ರಸ್ತೆ ತೆರವಿನ ಪರವಾಗಿ ಒಂದು ಅಫಿಡವಿಟ್ಟು ಹಾಕಕ್ಕೆ ತಯಾರಾಗೇ ಬುಡ್ತು. ಬಹಳ ಆತಂಕ ತರೋ ಮಾತಂದ್ರೆ ಕರ್ನಾಟಕ ಸರ್ಕಾರ ಕೇರಳದ ರಾಜಕೀಯದ ಲಾಬಿ ಕರ್ನಾಟಕದ ಮುಖ್ಯಮಂತ್ರಿಗಳ ಕಛೇರಿ ತನಕ ಹರಡಿರೋದು. ಅಲ್ಲಿನ ಅರಣ್ಯ ಸಚಿವ ಇಲ್ಲಿಗೆ ಬಂದು ನಮ್ಮ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಿರ್ಬಂಧ ತೆರವು ಮಾಡುಸ್ತಾರೆ ಅನ್ನೋದು ಎಂಥಾ ನಾಚಿಕೆಗೇಡಿನ ಸಂಗತಿ ಅಲ್ವಾ? ಇಷ್ಟು ಸಾಲ್ದು ಅಂತಾ ಈ ರಸ್ತೇಲಿ ವಾಹನಗಳು ಓಡಾಡಕ್ಕೆ ಅನುಕೂಲ ಮಾಡ್ಕೊಡೋ ಪ್ರಮಾಣಪತ್ರಾನ ಕೋರ್ಟಿಗೆ ಸಲ್ಲಿಸೋ ಬಗ್ಗೆ ಆಲೋಚನೆ ಮಾಡೋದೂ ಎಂಥಾ ದುರಂತ ಅಲ್ವಾ ಗುರು!

ಸರ್ಕಾರ ನಾಡಸಂಪತ್ತು ಕಾಪಾಡೋ ವಿಷ್ಯದಲ್ಲಿ ರಾಜಿಯಾಗದಿರಲಿ!

ಏನೋ, ನಮ್ಮ ಕಾಡು ಪ್ರಾಣಿಗಳ ಪುಣ್ಯದ ಫಲವಾಗಿ ರಾಜ್ಯ ಹೈಕೋರ್ಟು ಈಗ ಎರಡೂ ಸರ್ಕಾರಗಳ ಮೇಲ್ಮನವಿ ವಜಾ ಮಾಡಿ ಎರಡೂ ಸರ್ಕಾರಗಳಿಗೆ ಸರಿಯಾಗಿ ಬುದ್ಧಿ ಹೇಳಿದೆ. ಆ ರಸ್ತೇಲಿ ಸಾಯೋ ಪ್ರಾಣಿಗಳಿಗೆ ಜೀವ ಕೊಟ್ಟು ಆಮೇಲೆ ಆ ರಸ್ತೇನಾ ಸಂಚಾರಕ್ಕೆ ತೆರೀರಿ ಅಂದುಬುಟ್ಟಿದೆ. ಅಲ್ಲಾ ಗುರು? ಕೋರ್ಟಿಗೆ ಇರೋ ಕಾಳಜಿ ನಮ್ಮ ಸರ್ಕಾರಕ್ಕೆ ಯಾಕಿಲ್ಲಾ ಅಂತ ಅನ್ನುಸ್ತಿಲ್ವಾ? ಆ ಹುಲಿಗಳೂ, ಜಿಂಕೆಗಳೂ, ಚಿರತೆಗಳೂ, ಕಾಡೆಮ್ಮೆಗಳೂ, ಆನೆಗಳೂ ಓಟು ಬ್ಯಾಂಕು ಮಾಡ್ಕೊಂಡಿದ್ದಿದ್ರೆ ಆಗ ಒಸಿ ಕಾಳಜಿ ತೋರುಸ್ತಿತ್ತೇನೋ ಈ ಸರ್ಕಾರ, ಅನ್ನುಸ್ತಿಲ್ವಾ ಗುರು? ನಮ್ಮ ನಾಡು, ನಮ್ಮ ನುಡಿ, ನಮ್ಮ ನಾಡಿನ ಸಂಪತ್ತು, ನಮ್ಮ ಕಾಡುಗಳು, ನಮ್ಮ ವನ್ಯಕುಲ ಸಂಕುಲ ಇವುನ್ನೆಲ್ಲಾ ಕಾಪಾಡಕ್ಕೇ ಅಂತಾನೆ ನಾವಿಲ್ಲಿ ಅಧಿಕಾರದಲ್ಲಿರೋದು ಅಂತಾ ನಮ್ಮ ಸರ್ಕಾರಗಳಿಗೆ, ಸರ್ಕಾರ ನಡ್ಸಕ್ಕೆ ತುದಿಗಾಲಲ್ಲಿ ಸದಾ ನಿಲ್ಲೋ ರಾಜಕೀಯ ಪಕ್ಷಗಳಿಗೆ ಅನ್ನಿಸೋದು ಎಂದಿಗೆ ಗುರು?

ಸೈನ್ಯ ಸೇರಲು ಮಾನದಂಡವೇನು ?

ಭಾರತ ಸೈನ್ಯಕ್ಕೆ ಸೈನಿಕರಾಗಿ/ಗುಮಾಸ್ತರಾಗಿ/ಉಗ್ರಾಣಪಾಲಕರಾಗಿ/ಆರೈಕೆ-ಸಹಾಯಕರಾಗಿ ಸೇರಲು ಹಿಂದಿ/ಇಂಗ್ಲಿಷ್ ಬೇಕಾ ? ಹೌದು, ಸೇನೆಯ ಆ ಹುದ್ದೆಗೆ ಸೇರಲು ಹಿಂದಿ/ಇಂಗ್ಲಿಷ್ ಬೇಕೇ ಬೇಕು ಅಂತ ಅನ್ನುತ್ತೆ ಡಿ.ಎನ್.ಎ ಪತ್ರಿಕೆಯ ಈ ವರದಿ. ದೇಶಾನ ರಕ್ಷಿಸೋಕೆ ದೇಶಭಕ್ತಿ, ತ್ಯಾಗ ಮನೋಭಾವನೆ, ಗಟ್ಟಿತನ, ದೇಹದಾರ್ಢ್ಯತೆ, ಕಿಚ್ಚು, ಹೋರಾಟ ಮನೋಭಾವ - ಇವುಗಳಿಗಿಂತ ಹೆಚ್ಹಾಗಿ ಹಿಂದಿ/ಇಂಗ್ಲಿಷ್ ಕಲಿತಿರಬೇಕಂತೆ. ಯಾಕಂದ್ರೆ ಮೇಲೆ ಹೇಳಿದ ಸೇನೆಯ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳಲ್ಲಿ ನಮ್ಮ ನಾಡಿನ ಮಕ್ಕಳು ನಪಾಸಾಗಲು ಕರ್ನಾಟಕದ ಅಭ್ಯರ್ಥಿಗಳಿಗೆ ಹಿಂದಿ/ಇಂಗ್ಲಿಷ್ ಬರದೆ ಇರೋದೇ ಬಲವಾದ ಕಾರಣ ಅಂತ ಡಿ.ಎನ್.ಎ ಪತ್ರಿಕೆಯ ಆ ವರದಿಯಲ್ಲಿ ತಿಳಿಸಿದೆ ಗುರು.

ಏನ್ ಹೇಳುತ್ತೆ ವರದಿ?
ಆ ಲೇಖನದಲ್ಲಿ ಇನ್ನೊಂದು ಗಮನಿಸಬೇಕಾದ ವಿಷಯ ಅಂದ್ರೆ ನಮ್ಮ ನಾಡಿನ ಅಭ್ಯರ್ಥಿಗಳು ಫೇಲಾಗುತ್ತಿರುವುದು ಸೈನ್ಯ ಸೇರಲು ಮತ್ತೊಂದು ಮಾನದಂಡವಾದ ದೈಹಿಕ ಅರ್ಹತೆ ಪರೀಕ್ಷೆಯಲ್ಲಿ ಅಲ್ವಂತೆ ಬದಲಿಗೆ ಹಿಂದಿ/ಇಂಗ್ಲಿಷ್ ಪರೀಕ್ಷೆಯಲ್ಲಂತೆ. ಈ ಭಾಷೆಗಳು ಬರೋರು ಮಾತ್ರ ಸೇನೆ ಸೇರಲು ಯೋಗ್ಯರು ಅನ್ನೋ ನಿಲುವು ಸೇನೆಯವರದ್ದಾ ಅಂತಾ ಅನುಮಾನಾ ಬರ್ತಿದೆ ಗುರು. ಮೇಲೆ ಹೇಳಿದ ಹುದ್ದೆಗಳಿಗೆ ಸೇನೆಯನ್ನು ಪ್ರತಿನಿಧಿಸೋ ಅವಕಾಶವನ್ನು ಯಾವುದೇ ಒಂದು ನಾಡಿನ ಜನರಿಗೆ ಹಿಂದಿ/ಇಂಗ್ಲಿಷ್ ಬರೋದಿಲ್ಲ ಅನ್ನುವ ಕಾರಣ ಮುಂದಿಟ್ಟು ಅವರನ್ನು ಅಂತಹ ಅವಕಾಶದಿಂದ ವಂಚಿತನ್ನಾಗಿ ಮಾಡ್ತಿದಾರೆ ಅಂತ ಅನಿಸೋಲ್ವಾ ? ಅಲ್ಲಾ, ಒಬ್ಬ ಮನುಷ್ಯನಿಗೆ ದೇಶರಕ್ಷಣೆಯೇ ಗುರಿಯಾಗಿದ್ದು ಆ ಹುದ್ದೆಗೆ ಬೇಕಾದ ವಿದ್ಯಾರ್ಹತೆ ಇದ್ದೂ ಆತನಿಗೆ ಹಿಂದಿ/ಇಂಗ್ಲಿಷ್ ಬರೋದಿಲ್ಲ ಅಂತ ಆತನನ್ನು ನಿರಾಕರಿಸೋದು ಎಷ್ಟು ಸರಿ? ನಮ್ಮ ದೇಶದಲ್ಲಿ ದೇಶಸೇವೆಯನ್ನು ಮಾಡೋದು ಅಂದ್ರೆ ಸೈನ್ಯ ಸೇರೋದು ಅನ್ನೋ ಕಲ್ಪನೆ ಎಷ್ಟೋ ಜನರಲ್ಲಿ ಇದೆ. ಅಂತವರು 'ದೇಶರಕ್ಷಣೆಯು ಒಂದು ಶ್ರೇಷ್ಠ ಕೆಲಸ' ಅಂತ ಅಂದುಕೊಂಡು ದೇಶಕ್ಕಾಗಿ ಪ್ರಾಣ ಮುಡಿಪಾಗಿಡಲು ತಯಾರಿರ್ತಾರೆ. ಅಂತದ್ರಲ್ಲಿ ಭಾಷೆ ಹೆಸರಲ್ಲಿ ಅವರನ್ನು ಸೇರಿಸದೆ ಇರೋದು ಖಂಡಿತ ಸರಿಯಲ್ಲ. ಭಾರತದಂತಹ ಒಪ್ಪುಕೂಟ ವ್ಯವಸ್ಥೆಯಲ್ಲಿ, ಸೇನೆಗೆ ಆಯ್ಕೆ ಮಾಡುವ ಈ ಕ್ರಮ ಖಂಡಿತ ಸರಿ ಇಲ್ಲ ಗುರು.

ಸರಿಯಾದ ವಿಧಾನ ಏನು?
ಹಾಗಾದ್ರೆ ಸರಿಯಾದ ವಿಧಾನ ಯಾವುದು? ಇಕಾ ಇಲ್ಲಿದೆ ನೋಡು ಗುರು. ಭಾರತವು ರಾಜ್ಯಗಳ ಒಪ್ಪುಕೂಟವಾಗಿದ್ದು, ಭಾರತ ಸೇನೆಯು ದೇಶದ ಹೊರಗಿನ ಹಾಗೂ ಒಳಗಿನ ಶತ್ರುಗಳಿಂದ ಈ ಒಪ್ಪುಕೂಟವನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿದೆ. ಒಪ್ಪುಕೂಟ ವ್ಯವಸ್ಥೆಯ ಯಾವುದೇ ಕ್ಷೇತ್ರವಾದ್ರೂ ಸರಿ, ಈ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿ ಭಾಗಿಯಾಗಿರುವ ಎಲ್ಲ ರಾಜ್ಯದ ಜನರಿಗೂ ಆ ಕ್ಷೇತ್ರವನ್ನು ಸೇರಲು ಪ್ರತಿನಿಧಿಸಲು ಸಮಾನ ಅವಕಾಶ ಇರಬೇಕು. ಇದಕ್ಕೆ ಸೇನೆಯೂ ಹೊರತಾಗಿಲ್ಲ. ನೂರಾರು ಭಾಷೆಗಳನ್ನು ಮಾತಾಡುವ ಈ ದೇಶದಲ್ಲಿ ಹಿಂದಿ/ಇಂಗ್ಲಿಷ್ ಎಂಬ ಮಾನದಂಡವನ್ನು ಆಯ್ಕೆಯ ಹಂತದಲ್ಲೇ ಉಪಯೋಗಿಸಿ ಅಭ್ಯರ್ಥಿಗಳನ್ನು ಸೈನ್ಯಕ್ಕೆ ಸೇರದ ಹಾಗೆ ಮಾಡುವುದು ಒಪ್ಪುಕೂಟದ ಪ್ರತಿನಿಧಿಗಳಿಗೆ ಮಾಡುವ ವಂಚನೆ ಮತ್ತು ಪಕ್ಷಪಾತ.

ಪರಿಹಾರ ಏನ್ ಗುರು?
ಸೇನೆ ಸೇರಿದವರಿಗೆ ಕಷ್ಟದ್ದೇ ಆದ್ರೂ ಸರಿ ಏನೆಲ್ಲಾ ತರಬೇತಿ ನೀಡುವ ಭಾರತೀಯ ಸೇನೆ, ಪರೀಕ್ಷೆಯ ಅಭ್ಯರ್ಥಿಗಳಿಗೆ ಹಿಂದಿ/ಇಂಗ್ಲಿಷ್ ಪತ್ರಿಕೆ ಕಡ್ಡಾಯ ಮಾಡದೆ, ಉಳಿದೆಲ್ಲ ಪರೀಕ್ಷೆಗಳನ್ನು ಪಾಸು ಮಾಡಿದವರನ್ನು ಸೈನ್ಯಕ್ಕೆ ಸೇರಿಸ್ಕೊಂಡು ಯಾವ ಮಟ್ಟದ ಹಿಂದಿ/ಇಂಗ್ಲಿಷ್ ಜ್ಞಾನ ನಿರೀಕ್ಷಿಸುತ್ತಾರೋ ಅಷ್ಟು ತರಬೇತಿಯನ್ನು ಕೊಡೊ ವ್ಯವಸ್ಥೆ ತರಬೇಕು. ಅಂದರೆ ಸೈನ್ಯ ಸೇರಿದ ಮೇಲೆ, ಹಿಂದಿ/ಇಂಗ್ಲಿಷ್ ಅಥವ ಮತ್ತ್ಯಾವ ಭಾಷೆಯಾದ್ರೂ ಸರಿ ಅವಶ್ಯಕತೆಯ ಮೇರೆಗೆ ಭಾಷೆಯ ತರಬೇತಿನಾ ಕೊಡೊ ಏರ್ಪಾಡು ಮಾಡೋದು. ಇಂತಹ ಕಟ್ಟುಪಾಡು ಒಪ್ಪುಕೂಟ ವ್ಯವಸ್ಥೆಯ ಯಾವುದೇ ಹಾಗೂ ಎಲ್ಲಾ ಕ್ಷೇತ್ರದಲ್ಲೂ ಮಾಡಿದರೆ ನಿಜವಾದ ಒಪ್ಪುಕೂಟ ವ್ಯವಸ್ಥೆಯ ಕಾರ್ಯವೈಖರಿಯು ಹೇಗಿರಬೇಕೆಂದು ತೋರ್ಸಿಕೊಟ್ಟು ಒಪ್ಪುಕೂಟ ವ್ಯವಸ್ಥೆಯ ಘನತೆಯನ್ನು ಎತ್ತಿಹಿಡಿಯುತ್ತೆ. ಅಲ್ವಾ ಗುರು ?

ನಾಡೊಂದಾದ ಕತೆ ಹೇಳೋ ಡಿ.ವಿ.ಡಿ!

ನಾಡಹಬ್ಬದ ಆಚರಣೆ ಎಲ್ಲೆಡೆ ಆಚರಣೆಯಾಗ್ತಾ ಇರೋದೂ, ದಿನಾ ದಿನಾ ಹೆಚ್ತಾ ಇರೋದೂ ನಿಜಕ್ಕೂ ಸಕತ್ ಸಂತೋಷದ ವಿಷ್ಯ. ಹರಿದು ಹಂಚಿ ಹೋಗಿದ್ದ ಕರ್ನಾಟಕ ಒಂದಾದ ಈ ದಿನ ಕನ್ನಡಿಗರೆಲ್ಲರ ಪಾಲಿಗೆ ಸುದಿನ. ನಾವೂ ನೀವೆಲ್ಲಾ ನಾಡಹಬ್ಬದ ಆಚರಣೆಗೆ ತಯಾರಿ ಮಾಡಿಕೊಳ್ತಾ ಇರೋ ಈ ಸಂದರ್ಭದಲ್ಲಿ ಮೈಸೂರಿನ CIIL ಕರ್ನಾಟಕ ಏಕೀಕರಣದ ಬಗ್ಗೆ, ಅದಕ್ಕಾಗಿ ಪಾಡು ಪಟ್ಟವರ ಬಗ್ಗೆ, ಕನ್ನಡ ನಾಡು ಒಂದಾಗಲು ಆ ದಿನಗಳಲ್ಲಿ ಎದುರಾದ ಸವಾಲುಗಳ ಬಗ್ಗೆ, ಆದ ಹೋರಾಟ. ತ್ಯಾಗ ಬಲಿದಾನಗಳ ಬಗ್ಗೆ ಸಮಗ್ರವಾಗಿ ಬೆಳಕು ಚೆಲ್ಲುವ " ಕರ್ನಾಟಕ ಏಕೀಕರಣ ಇತಿಹಾಸ" ಅನ್ನುವ ಡಿ.ವಿ.ಡಿಯನ್ನು (ಬೆಲೆ ರೂ 100) ಹೊರ ತಂದಿರೋದು ಸಕಾಲಿಕವಾಗಿದೆ.

ಇದುನ್ನ ನಾಡಹಬ್ಬದ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಿದ್ರೆ ಅಲ್ಲಿ ನಡೆಯೋ ನಾಡಹಬ್ಬ ಕಳೆ ಕಟ್ಟೋದ್ರಲ್ಲಿ ಅನುಮಾನಾನೇ ಇಲ್ಲ ಗುರು!

ಬಲುರೋಚಕ ಈ ನಮ್ಮ ಇತಿಹಾಸ!

ಬ್ರಿಟಿಷರ ಆಳ್ವಿಕೆಯಲ್ಲಿ 20ಕ್ಕೂ ಹೆಚ್ಚು ಆಡಳಿತ ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದ ನಾಡನ್ನು ಒಂದಾಗಿಸಲು ನಡೆದ ಕರ್ನಾಟಕ ಏಕೀಕರಣಕ್ಕೆ ಕಮ್ಮಿ ಅಂದ್ರೂ ನೂರು ವರ್ಷಗಳ ಕಾಲದ ಇತಿಹಾಸವಿದೆ. ಶ್ರೀಯುತರುಗಳಾದ ಮುದವೀಡು ಕೃಷ್ಣರಾಯರು, ಸಿದ್ಧಪ್ಪ ಕಂಬಳಿ, ಏಕೀಕರಣಾ ಶಿಲ್ಪಿ ಎಂದೇ ಖ್ಯಾತರಾದ ಎಸ್.ನಿಜಲಿಂಗಪ್ಪ, ಕೌಜಲಗಿ ಶ್ರೀನಿವಾಸರಾಯರು, ಗೊರೂರು ರಾಮಸ್ವಾಮಿ ಅಯ್ಯಂಗಾರ್... ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕ ಕುಲ ಪುರೋಹಿತರೆಂದೇ ಖ್ಯಾತಿಯಾದ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಹಲವು ವರ್ಷಗಳ ಕಾಲ ನಡೆದ ನಿರಂತರ ಹೋರಾಟ ರೋಮಾಂಚಕಾರಿ. ಹುಬ್ಬಳ್ಳಿಯ ಹೋರಾಟ, ಅದರಗುಂಚಿ ಶಂಕರಗೌಡ ಪಾಟೀಲರ ದಾಖಲೆಯ 23 ದಿನಗಳ ಅಮರಣಾಂತ ಸತ್ಯಾಗ್ರಹ, ಜೀವ ತೆತ್ತ ಬಳ್ಳಾರಿಯ ರಂಜಾನ್‍ಸಾಬ್ ಕಥನಗಳು ರೋಚಕವಾಗಿವೆ. ಒಂದು ದೊಡ್ಡ ಜನಾಂದೋಲನದ ಫಲವಾಗಿ ಹಲವು ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದ ನಮ್ಮ ಈ ನಾಡು ನವೆಂಬರ್ 1, 1956ರಲ್ಲಿ ಒಂದಾದ ದಿನವೇ ಕನ್ನಡ ರಾಜ್ಯೋತ್ಸವ. CIIL ನ ಈ ಡಿ.ವಿ.ಡಿ ಒಮ್ಮೆ ನಮ್ಮನ್ನೆಲ್ಲ ಆ ದಿನಗಳತ್ತ ಕರೆದೊಯ್ದು, ಕನ್ನಡ ನಾಡಿನ ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿರುವ ಆ ದಿನಗಳ ಬಗ್ಗೆ ನಮ್ಮ ಅರಿವು ಹೆಚ್ಚಿಸುವುದ್ರಲ್ಲಿ ಸಂದೇಹಾ ಇಲ್ಲ ಗುರು. ನಮ್ಮ ನಮ್ಮ ಮನೇಲಿ ಮಕ್ಕಳು ಮರಿಗಳಿಗೆ ಈ ವಿಡಿಯೋ ತೋರಿಸುವುದರ ಮೂಲಕ ಅವರಲ್ಲಿ ನಾಡಿನ ಇತಿಹಾಸದ ಬಗ್ಗೆ ಅರಿವು ಮೂಡಿಸೋಣ್ವಾ?

ಎಲ್ಲ ಸರಿ, ಈ ಡಿ.ವಿ.ಡಿ ಎಲ್ಲಿ ಸಿಗುತ್ತೆ ಅನ್ನೋದು ನಿಮ್ಮ ಪ್ರಶ್ನೆನಾ? ಬೆಂಗಳೂರಿನ ಜಯನಗರದಲ್ಲಿರುವ "ಟೋಟಲ್ ಕನ್ನಡ" ಅಂಗಡಿಯಲ್ಲಿ ಸಿಗುತ್ತೆ. ನೀವು ಹೊರ ದೇಶದಲ್ಲಿದ್ದರೆ ಟೋಟಲ್ ಕನ್ನಡದ ಮೂಲಕ ಅಲ್ಲಿಗೆಯೇ ತರಿಸಿಕೊಳ್ಳಬಹುದು. ಈ ಡಿ.ವಿ.ಡೀನಾ ತಪ್ಪದೇ ನೋಡಿ, ನಿಮ್ಮ ಗೆಳೆಯರಿಗೂ ಪರಿಚಯಿಸಿ. ಆಗುತ್ತಲ್ವಾ ಗುರುಗಳೇ?

ಮರಾಠಿ ಮಾಣುಸ್ ಮನಸ್ಸಾಗ ಮನಸೇ ಐತ್ರೀಪಾ!!

ಮೊನ್ನಿ ಮೂರು ರಾಜ್ಯದಾಗ್ ಆದ ವಿಧಾನಸಭಾ ಚುನಾವಣಿಗಳೊಳಗಾ, ಮಹಾರಾಷ್ಟ್ರದಾಗಿನ ಚುನಾವಣಿ ಭಾಳ್ ಕುತೂಹಲ ಹುಟ್ ಹಾಕಿದ್ದಂತೂ ಖರೇ ರೀ ಯಪ್ಪಾ! ಮಂದೀ ಎಲ್ಲಾ "ಅಲ್ಲಾ, ಈ ಮಕ್ಳು ಈ ಪರಿ ಮರಾಟಿಗ್ರು, ಮರಾಟಿಗ್ರೂ ಅಂತ್ ಹೊಯ್ಕೊಳಾಕ್ ಹತ್ಯಾರಲ್ಲಾ, ಮಹಾರಾಷ್ಟ್ರದಾಗಿನ್ ಮಂದಿ ಇದುಕ್ ಮಣಿ ಹಾಕ್ಕ್ಯಾರೋ? ಇಲ್ಲೋ?" ಅನ್ನೂ ಮಾತ್‍ನ ಮಹಾರಾಷ್ಟ್ರ ನವನಿರ್ಮಾಣ ಸೇನಾ ಬಗ್ಗಿ ಆಡಾಕ್ ಹತ್ತಿತ್ರೀಪಾ. ಚುನಾವಣೀ ಆತು. ರಾಜ್‍ಠಾಕ್ರೆ ಮುಂದಾಳ್ತನದ ಎಂ.ಎನ್.ಎಸ್ ಒಟ್ಟು ಹದಿಮೂರು ಕಡಿ ಗೆಲುವು ಕಾಣ್ತು. ಅಲ್ರೀಪಾ... ಇರೂ ಇನ್ನೂರೆಂಬತ್ತೆಂಟರಾಗಾ ಹದಿಮೂರಂದ್ರಾ ಯಾ ಮೂಲಿಗಾತು ಅನ್ನಾಕ್ ಹತ್ತೀರೇನೂ? ಬರ್ರಲಾ... ಎಂ.ಎನ್.ಎಸ್ ಏನ್ ಮಾಡೈತಿ ಅನ್ನೂದ್ ನೋಡೋಣು...

ಚುನಾವಣಾ ವಿಷ್ಯಾ ಆತು ಮ-ಮ-ಮ!!

ಹಿಂದಾ ಅಲ್ಲೀ ಚುನಾವಣ್ಯಾಗಾ ಮರಾಠಿ-ಮರಾಠಿಗ-ಮಹಾರಾಷ್ಟ್ರ ಅನ್ನೂ ಮಾತು ಇಲ್ಲೀಮಟಾ ಶಿವಸೇನಾ ಪಾರ್ಟಿ ಪ್ರಣಾಳಿಕಿಯೊಳಗಾ ಇರ್ತಿತ್ರೀಪಾ... ಆದ್ರಾ ನಡಬರಕಾ ಶಿವಸೇನಾ ತನ್ನ ಗಮನಾನ ಬ್ಯಾರೀ ಕಡೀಗ್ ಹರ್ಸಾಕ್ ಹತ್ತೈತಿ ಅಂತಾ ಮಂದಿಗಾ ಅನ್ಸಾಕ್ ಚಾಲೂ ಆತ್ರೀಪಾ. ಅಷ್ಟರಾಗ ಇಂವಾ, ರಾಜ್ ಠಾಕ್ರೆ ಇತ್ತೀಚಿನ್ ದಿನಗಳಾಗ ಮರಾಠಿ ಮಂದಿ ಬದುಕು, ಕೆಲ್ಸಾ ಅಂತಾ ಜೋರ‍್ಜೋರಲೇ ಮಾತಾಡಕ್ ಹತ್ತಿದ್ದೇ ತಡಾ... ಎಲ್ಲಾ ಪಾರ್ಟಿ ಮಂದಿ ತಮ್ ಪ್ರಣಾಳಿಕಿ ಒಳಗಾ ಈ ಮಾತ್ ಆಡಾಬೇಕಾತ್ರೀ ಗುರುಗಳಾ.... ನೀವಾ ನೋಡ್ರಲಾ... ಭಾರತೀಯ ಜನತಾ ಪಕ್ಷ, ಶಿವಸೇನಾ ಕೂಡಾ ಬಿಡುಗಡಿ ಮಾಡಿದ್ದ ಪ್ರಣಾಳಿಕೆಯೊಳಗಾ "ಅನಿಯಂತ್ರಿತ ವಲಸಿ ತಡ್ಯಾಕ್ ಮುಂದಾಗ್ತೀವೀ" ಅಂದಾರ! ಈ ಮಂದಿ ಅಂತಾರಾ... "ಮಾರಾಷ್ಟ್ರಾದಾಗಿನ ೮೦% ಕೆಲಸ ಮರಾಠಿ ಮಂದೀಗಾ ಮೀಸಲು ಮಾಡ್ತೇವಾ" ಅಂತಾ.
A museum will be set up in Mumbai depicting the 'Samyukta Maharashtra' movement and a permanent mechanism would be created to stop the inflow of illegal migrants, Thackeray said.

Stating that 80 per cent of the skilled and unskilled jobs will be provided to locals, it vowed to encourage the sons-of-the soil to take up self-employment

ಫಲಿತಾಂಶ ಹೀಂಗದಾ!

ಇನ್ನು ಒಟ್ಟು ಫಲಿತಾಂಶಾ ಕಂಡಾಗ ತನ್ನ ಮೊದಲನೇ ಚುನಾವಣಿಯಾಗಾ ಎಂ.ಎನ್.ಎಸ್ ಹದಿಮೂರು ಸ್ಥಾನಾ ಗಳಸೈತಿ ಅದೂ ಯಾರ್ ಕೂಡಾ ಹೊಂದಾಣಿಕೆ ಮಾಡ್ಕೊಳ್ದೆ ಅನ್ನೋದು ದೊಡ್ ಮಾತೇ ಬಿಡ್ರೀಪಾ. ಮಹಾರಾಷ್ಟ್ರದೊಳಗಾ ಮುಂದಿನ ದಿನಗಳಾಗ ಎಂ.ಎನ್.ಎಸ್ ಒಂದು ದೊಡ್ಡ ಶಕ್ತಿಯಾಗ್ತೈತಿ ಅನ್ನೋ ಸೂಚನಿ ಕೊಟ್ಟಿರೋದಂತೂ ಖರೆ ಐತಿ. ಒಟ್ಟಾರೆ ಮರಾಠಿ ಮಾಣುಸ್ ಮನಸ್ಸಾಗ ಮ.ನ.ಸೇ ಐತ್ರೀಪಾ. ಅದ್ಕಿಂತ ದೊಡ್ ಮಾತಂದ್ರಾ ಮರಾಠಿ-ಮಹಾರಾಷ್ಟ್ರ-ಮರಾಠಿಗ ಅನ್ನೂದಂತೂ ರಾಜಕಾರಣದ ನಡುಮನಿ ಒಳಗ್ ದೊಡ್ಡಾಟ ಆಡೂದಂತೂ ಖರೀ ಐತ್ರಪಾ! ಏನಂತೀರ್ರೀ ಗುರುಗಳಾ?

ಕನ್ನಡ ಕಲಿಸೋ ಹೊಸ ತಾಣ!

ಸೆಪ್ಟೆಂಬರ್ 30ರ ಮೈ ಬ್ಯಾಂಗಲೊರ್‍ನಲ್ಲಿ ಕನ್ನಡ ಕಲಿ ಇದೀಗ ಆನ್ ಲೈನ್‍ನಲ್ಲಿ ಸಿಗ್ತಿದೆ ಅಂತಾ ಒಂದು ಸುದ್ದಿ ಪ್ರಕಟವಾಗಿದೆ ಗುರು! ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು ಇದನ್ನು ರೂಪಿಸಿದ್ದಾರಂತೆ. ಅವರ ಉದ್ದೇಶ ಹೊರನಾಡಿನಿಂದ ನಮ್ಮೂರುಗಳಿಗೆ ಬರುವ ಪರಭಾಷಿಕರಿಗೆ ಕನ್ನಡ ಜನ, ನುಡಿ ಮತ್ತು ಸಂಸ್ಕೃತಿಗಳ ಪರಿಚಯ ಮಾಡಿಕೊಡುವುದಂತೆ.

ಇಂಥವರ ಸಂತತಿ ಸಾವಿರವಾಗಲಿ...

ತಮ್ಮ ಕಾಲೇಜಿನ ಪರಭಾಷಿಕರನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಿರೋ ಈ ತಂಡದೋರು ಪೋಸ್ಟರ್, ಆಡಿಯೋ ವಿಡಿಯೋಗಳನ್ನು ಬಳಸೋ ಮೂಲಕ ಕನ್ನಡ ನುಡಿಯ ಪರಿಚಯ ಮಾಡಿಸಿಕೊಡೋದ್ರ ಜೊತೆಯಲ್ಲೇ ಕನ್ನಡದ ಹಿರಿಯ ಚೇತನಗಳ ಪರಿಚಯವನ್ನು, ನಾಡಿನ ಪ್ರವಾಸಿ ತಾಣಗಳ ಪರಿಚಯ ಮಾಹಿತಿಗಳನ್ನು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಮಾಡಿಕೊಡೋ ಯೋಜನೆಗಳನ್ನು ಹೊಂದಿದಾರಂತೆ. ಕರ್ನಾಟಕಕ್ಕೆ ಬರೋ ಪರಭಾಷಿಕರಿಗೆ ಕನ್ನಡ ಕಲಿಸುವ ಈ ಯೋಜನೆ ಉಳಿದ ಕಾಲೇಜುಗಳಿಗೆ ಮಾದರಿಯಾಗಲಿ. ಈ ಯೋಜನೆಯ ಹಿಂದಿರುವ ತಂಡದ ಸ್ಪೂರ್ತಿ ನೂರ್ಮಡಿಸಲಿ, ನೂರ್ಕಾಲ ಹೀಗೆ ಇರಲಿ.. ಇಂಥವರ ಸಂತತಿ ಸಾವಿರವಾಗಲಿ ಅಂತಾ ಹಾರೈಸೋಣ ಗುರು!

ಮಾಹಿತಿ ಹಕ್ಕು ಎಲ್ಲಾ ನುಡಿಯಲ್ಲಿರಬೇಕು ಅಂದೋರ್ಯಾರು ಗೊತ್ತಾ?

ಮೊನ್‍ಮೊನ್ನೆ ಅಂದ್ರೆ 2009ರ ಅಕ್ಟೋಬರ್ 13ನೇ ತಾರೀಕಿನಂದು ನವದೆಹಲಿಯಲ್ಲಿ ನಡೆದ, 2005ರ ಮಾಹಿತಿ ಹಕ್ಕು ಕಾಯ್ದೆಯ ನಾಲ್ಕನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾರತದ ಉಪರಾಷ್ಟ್ರಪತಿಗಳಾದ ಶ್ರೀ ಮೊಹಮದ್ ಹಮೀದ್ ಅನ್ಸಾರಿಯವರು ಒಂದು ಸೊಗಸಾದ ಹೇಳಿಕೆ ಕೊಟ್ಟಿದಾರೆ ಅಂತ ಯಾಹೂ ಸುದ್ದಿ ಹೇಳ್ತಿದೆ ಗುರು!

ಪ್ರಜಾತಂತ್ರಕ್ಕಿದು ನಿಜವಾದ ಅರ್ಥ!

ಭಾರತ ಒಪ್ಪಿರೋ 22 ಅಧಿಕೃತ ಭಾಷೆಗಳಲ್ಲಿರೋ ಎಲ್ಲಾ ಭಾಷೆಗಳಲ್ಲಿ ಈ ಮಾಹಿತಿ ಹಕ್ಕು ಕಾಯ್ದೆ ಇರಬೇಕು ಮತ್ತು ವ್ಯವಹಾರ ನಡೀಬೇಕು ಅನ್ನೋ ಉಪರಾಷ್ಟ್ರಪತಿಗಳ ಈ ಅನಿಸಿಕೆ ಭಾರತ ಒಪ್ಪುಕೂಟಕ್ಕೆ ನಿಜವಾಗಿ ಗೌರವ ತರೋ ಕೆಲಸ. ಜನರಿಂದ ಜನರಿಗಾಗಿ ಇರೋ ವ್ಯವಸ್ಥೆಗಳು ಸಹಜವಾಗಿ ಜನರ ನುಡಿಯಲ್ಲಿ ಇರಬೇಕಾಗ್ತದೆ. ಆ ಕಾರಣದಿಂದ ಈ ನಿಲುವು ಸರಿಯಾಗಿದೆ. ಹಿಂದಿಯೆನ್ನುವ ನುಡಿನುಂಗಣ್ಣನನ್ನು ತಲೆಮೇಲೆ ಹೊತ್ತು ಮೆರೆಸುತ್ತಿರುವ ಭಾರತ ದೇಶದ ಇಂದಿನ ವ್ಯವಸ್ಥೇಲಿ ಭಾರತ ದೇಶದೊಂದು ಉನ್ನತ ಸ್ಥಾನದಲ್ಲಿರೋ ವ್ಯಕ್ತಿ ಈ ಥರ ಮಾತಾಡ್ತಿರೋದು ಒಳ್ಳೇ ಬೆಳವಣಿಗೆ!

ಹೌದು, ಪ್ರಜಾತಂತ್ರಕ್ಕೆ ನಿಜವಾದ ಅರ್ಥ ಸಿಗಬೇಕಾದರೆ ಆಯಾ ಪ್ರದೇಶದ ಆಡಳಿತ ಆಯಾ ಭಾಷೇಲಿ ನಡೀಬೇಕು. ಕೇಂದ್ರ ಸರ್ಕಾರ ತನ್ನ ಪಟ್ಟೀಲಿರೋ 22 ಭಾಷೇಲಿ ಇಂಥಾ ಮಾಹಿತೀನಾ ಒದಗಿಸಿಕೊಡಲಿ. ಆದ್ರೆ ಇಂಥಾ ವ್ಯವಸ್ಥೆ ಭಾರತ ಒಪ್ಪುಕೂಟ ಶುರು ಆದಾಗಿನಿಂದಲೂ ಸಹಜವಾಗೇ ಇರಬೇಕಿತ್ತು, ಈಗ ಅಂಥ ಕೊರತೇನಾ ಉಪರಾಷ್ಟ್ರಪತಿಗಳು ಗುರುತಿಸಿ ಹೇಳಿರೋದು ತಡವಾಗಿ ಆಗ್ತಿರೋ ಜ್ಞಾನೋದಯದ ಗುರುತಲ್ವಾ ಗುರು?

ಹೊರದೇಶದೋರ ಕಣ್ಣಲ್ಲಿ ಕನ್ನಡಿಗ!

ಹಂಪಿ ವಿಶ್ವವಿದ್ಯಾಲಯದೋರು ೨೦೦೫ರಲ್ಲಿ ಡಾ. ವಿವೇಕ್ ರೈ ಅವರ ಸಂಪಾದಕತ್ವದಲ್ಲಿ “ಪ್ರವಾಸಿ ಕಂಡ ವಿಜಯನಗರ” ಅನ್ನೋ ಹೆಸರಿನ ಪುಸ್ತಕ ಹೊರತಂದಿದಾರೆ. ಕನ್ನಡದೋರೆಲ್ಲಾ ಒಮ್ಮೆ ಆ ಪುಸ್ತಕ ಓದಲೇ ಬೇಕು ಗುರು! ಅದರಲ್ಲಿ ಬಲು ಸೊಗಸಾಗಿ ನಮ್ಮ ನಾಡಿನ ಬಗ್ಗೆ ಮೈ ಝುಂ ಅನ್ಸೋ ಹಾಗೆ ಬರೆದಿದಾರೆ. ಕರ್ನಾಟಕ ಸಾಮ್ರಾಜ್ಯವನ್ನು ಭೇಟಿ ಮಾಡಿದ ಪರದೇಶಿಯರಲ್ಲಿ ಪ್ರಮುಖರೆಂದರೆ. ಇಬ್-ನೆ-ಬತೂತ, ನಿಕೊಲೋ-ದೆ-ಕೊಂತಿ, ದುಆರ್ತೆ ಬಾರ್ಬೋಸಾ, ಡೊಮಿಂಗೋ ಪ್ಯಾಸ್ ಮೊದಲಾದವರು. ಪರ್ಷಿಯಾ ದೇಶದವನಾದ ಅಬ್ದುಲ್ ರಜಾಕ್‌ನ ಮಾತುಗಳಲ್ಲಿ ಕೆಲವನ್ನು ನೋಡಿ :

ಬಿಜನಗರದಂತಹ ನಗರವನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ. ಈ ನಗರವನ್ನು ಹೇಗೆ ನಿರ್ಮಿಸಿದ್ದಾರೆಂದರೆ ಏಳು ದುರ್ಗಗಳೂ ಏಳು ಕೋಟೆಗಳೂ ಒಂದನ್ನೊಂದು ಆವರಿಸಿಕೊಂಡಿವೆ. ಒಂದನೆಯ ದುರ್ಗದ ಸುತ್ತ ಮನುಷ್ಯನ ಎತ್ತರದ ಕಲ್ಲು ಕಂಭಗಳನ್ನು ಭೂಮಿಯಲ್ಲಿ ಅರ್ಧ ಹೂತು ಇನ್ನರ್ಧ ಮೇಲೆ ಕಾಣುವಂತೆ ನೆಟ್ಟಿರುವರು. ಇವುಗಳನ್ನು ಒಂದರ ಪಕ್ಕ ಒಂದರಂತೆ ಹೇಗೆ ಹೂತಿದ್ದಾರೆಂದರೆ, ರಾವುತನಾಗಲೀ ಪದಾತಿಯಾಗಲೀ ಧೈರ್ಯವಾಗಿ ಅಥವಾ ಸುಲಭವಾಗಿ ದುರ್ಗದ ಕಡೆ ಹೋಗುವಂತಿಲ್ಲ. ಈ ಕೋಟೆ ಚಕ್ರಾಕಾರವಾಗಿದೆ. ಇದನ್ನು ಬೆಟ್ಟದ ತುದಿಯ ಮೇಲೆ ಕಲ್ಲು ಮತ್ತು ಗಾರೆಗಳಿಂದ ಕಟ್ಟಿದ್ದಾರೆ. ಇದರ ಹೆಬ್ಬಾಗಿಲುಗಳು ಬಲು ಬಲವಾಗಿವೆ. ಈ ಹೆಬ್ಬಾಗಿಲುಗಳನ್ನು ಒಂದೇ ಸಮನೆ ಕಾಯುತ್ತಿರುತ್ತಾರೆ. ಯಾರನ್ನೂ ಪೂರ್ಣಪರೀಕ್ಷೆ ಮಾಡದೆ ಒಳಗೆ ಬಿಡುವುದಿಲ್ಲ...

ಅರಮನೆಯ ಆನೆಗಳಿಗೆ ಕಿಚಡಿಯನ್ನು ತಿನ್ನಿಸುತ್ತಾರೆ. ಇ‌ದನ್ನು ತಾಮ್ರದ ಹಂಡೆಗಳಲ್ಲಿ ಬೇಯಿಸಿ ಆನೆಗಳ ಮುಂದೆಯೇ ಹೊರಗೆ ತೆಗೆದು, ಹರಡಿ ಅದರ ಮೇಲೆ ಉಪ್ಪನ್ನೂ ಸಕ್ಕರೆಯನ್ನೂ ಎರಚಿ ಚೆನ್ನಾಗಿ ಕಲಸುತ್ತಾರೆ. ಹೀಗೆ ಕಲಸಿದ ಮೇಲೆ ಅದನ್ನು ಎರಡು ಮಣದಷ್ಟು ತೂಕದ ಉಂಡೆಗಳನ್ನಾಗಿ ಮಾಡುತ್ತಾರೆ. ಈ ಉಂಡೆಗಳನ್ನು ತುಪ್ಪದಲ್ಲಿ ಅದ್ದಿ ಆನೆಯ ಬಾಯೊಳಗೆ ಇಡುತ್ತಾರೆ...

ಹೀಗೆ ವಿಜಯನಗರದ ಪ್ರತಿ ವಿವರವೂ ಇಲ್ಲಿ ದಾಖಲಾಗಿದೆ. ಅಂದಿನ ಸಾಮಾಜಿಕ ಜೀವನ, ಸಾಹಸ, ವೈಭವ, ಇತಿಹಾಸ, ಕ್ರೌರ್ಯ, ಮೌಢ್ಯ ಎಲ್ಲವನ್ನೂ ಓದ್ತಾ ಇದ್ರೆ ಮೈಮೇಲೆ ಮುಳ್ಳೇಳುತ್ತೆ ಗುರು! ಈ ಪುಸ್ತಕಾನ ಮುಂದಿನ ಸಲ ಹಂಪೆಗೆ ಹೋದಾಗ ಖಂಡಿತಾ ಕೊಳ್ಳಿ. ಇದು ನಿಮ್ಮ ಹತ್ತಿರದ ಪುಸ್ತಕದ ಅಂಗಡಿಯಲ್ಲಿಯೂ ಸಿಗಬಹುದು. “ಪ್ರವಾಸಿ ಕಂಡ ವಿಜಯನಗರ” ಹೊತ್ತಿಗೆ ಮನೆಗೊಂದು ಶೋಭೆ.

ಅಲ್ಲಿರೋವ್ರು ಕನ್ನಡ ಬಳುಸ್ತಿಲ್ಲಾ ಅಂದ್ರೆ ಇಲ್ಲಿರೋವ್ರು ತಾನೆ ಹೊಣೆ?


ಆರು ಲಕ್ಷಕ್ಕೂ ಹೆಚ್ಚಿರುವ ಕರ್ನಾಟಕ ಸರ್ಕಾರಿ ನೌಕರರ ಪೈಕಿ ಸುಮಾರು ಒಂದು ಲಕ್ಷಕ್ಕೂ ಅಧಿಕ ನೌಕರರಿಗೆ (ಅಂದರೆ ಸುಮಾರು 17% ನೌಕರರು!!) ಕನ್ನಡ ಬಳಸಕ್ಕೆ ತ್ರಾಸಂತೆ! ಇವರಿಗೆ ಸುಲಲಿತವಾಗಿ ಕನ್ನಡಾನ ಬರೆಯಕ್ಕೆ ಬರಲ್ಲ ಅನ್ನೋ ಹೌಹಾರುವಂತಾ ಸುದ್ದೀನಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಹೊರ ಹಾಕಿದ್ದಾರೆ ಗುರು! ಈಗ ಇವರೆಲ್ಲರಿಗೂ ಸುಮಾರು 2.5 ಕೋಟಿ ರೂಪಾಯಿ ಸರ್ಕಾರಿ ವೆಚ್ಚದಲ್ಲಿ ಕನ್ನಡ ಕಲಿಸುವ ಕೆಲಸಕ್ಕೆ ಸರ್ಕಾರ ಕೈ ಹಾಕಲಿದೆ ಅಂತಾನೂ ಹೇಳಿದ್ದಾರೆ. ಕರ್ನಾಟಕದ ಆಡಳಿತ ಭಾಷೆಯನ್ನೇ ಸಲೀಸಾಗಿ ಬಳಸಕ್ಕೆ ಬರದವರು ನಮ್ಮ ರಾಜ್ಯಸರ್ಕಾರಿ ನೌಕರಿಯಲ್ಲಿ ವರ್ಷಗಟ್ಲೆ ಅರಾಮಾಗಿ ಕೆಲಸ ಮಾಡಕ್ಕೆ ಆಗುತ್ತೇ ಅನ್ನೋದೆ ತಮಾಷೆ ಸುದ್ದಿ ಅಲ್ವಾ? ಪಾಪಾ! ಚಂದ್ರು ಅವ್ರು ಈಗ ಇವರಿಗೆ ಪಾಠ ಹೇಳಿಕೊಡೋದು ಬಿಟ್ಟು ಇನ್ನೇನು ತಾನೆ ಮಾಡಬಲ್ಲರು?

ಕನ್ನಡ ಬಳುಸ್ತಿಲ್ಲ ಅಂದ್ರೆ ಯಾರು ಕಾರಣ?

ಅಲ್ಲಾ ಗುರು! ನಾಡಿನ ಜನರ ನುಡಿಯಾದ ಕನ್ನಡದಲ್ಲೇ ನಮ್ಮ ಆಡಳಿತಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳೆಲ್ಲಾ ನಡೀಬೇಕು ಅನ್ನೋದನ್ನು ಸರಿಯಾಗಿ ಸರ್ಕಾರ ಅರ್ಥ ಮಾಡ್ಕೊಂಡು ವ್ಯವಸ್ಥೆ ಜಾರಿಗೆ ತಂದಿದ್ರೆ ಇಂಥಾ ಕೆಟ್ಟ ಪರಿಸ್ಥಿತಿ ಬರ್ತಿತ್ತಾ? ಈಗ ಇರೋರಲ್ಲಿ ಲಕ್ಷಾಂತರ ಜನಕ್ ಕನ್ನಡ ಬಳಸಕ್ ಆಗದೆ ಇರೋದ್ರಿಂದ ಎಷ್ಟು ಜನರಿಗೆ ಸಮಸ್ಯೆ ಅಲ್ವಾ? ಸರ್ಕಾರಗಳು ಮೊದ್ಲಿಂದ ಬಿಗಿಯಾಗಿ ಆಡಳಿತದಲ್ಲಿ ಕನ್ನಡ ಅನುಷ್ಠಾನ ಮಾಡದೇ ಈಗ 17% ನೌಕರರಿಗೆ ಕನ್ನಡದಲ್ಲಿ ಸರಿಯಾಗಿ ವ್ಯವಹರಿಸಕ್ ಆಗಲ್ಲಾ ಅಂದ್ರೆ ಕನ್ನಡ ಅನುಷ್ಠಾನ ಮಾಡಕ್ಕೆ ನಮ್ಮ ಸರ್ಕಾರಗಳು ಎಷ್ಟೊಂದು ಕಾಳಜಿ ತೋರಿಸಿವೆ ಅನ್ನೋದ್ ತಿಳಿಯಲ್ವಾ? ಆಡಳಿತ ಭಾಷೆಯ ಅನುಷ್ಠಾನಕ್ಕೆ ಅಂತ ಯಾವ್ದೋ ಸಮಿತಿ, ಸುಡ್ಗಾಡು ಶುಂಠಿ ಅಂತ ಮಾಡಿ ಸರ್ಕಾರ ಕೈತೊಳ್ಕೊಂಬುಟ್ರೆ ಆಗೋಯ್ತಾ? ಪಾಪಾ, ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅನ್ನೋ ಹಲ್ಲು ಕಿತ್ತ ಹಾವು ಎಷ್ಟು ಭುಸುಗುಟ್ಟುದ್ರೆ ತಾನೇ ಏನಾಗುತ್ತೆ? ಈಗಲಾದರೂ ಸರ್ಕಾರ ತನ್ನ ಕೆಲಸದಲ್ಲಿ ಆಗ್ತಿರೋ 20% ಕ್ಷಮತೆಯ ನಷ್ಟಾನಾ ಅರ್ಥ ಮಾಡ್ಕೊಂಡು ಸರೀಗೆ ಕನ್ನಡದಲ್ಲಿ ಆಡಳಿತ ಮಾಡಬೇಕು ಗುರು!

ಕನ್ನಡದ ದೊಡ್ಡಜನ ನಾಗರೀಕ ದನಿಯಾಗಬೇಕು!

ಇತ್ತೀಚಿನ ದಿನಗಳಲ್ಲಿ ನಮ್ಮೂರುಗಳು ಹಂಗೀರ್ಬೇಕು, ಹಿಂಗಿರ್ಬೇಕು ಅಂತಾ ಹೇಳಕ್ಕೆ, ಏನೇನ್ ಬದಲಾಗಬೇಕು, ಏನೇನು ಸುಧಾರಣೆ ಆಗ್ಬೇಕು ಅನ್ನಕ್ಕೆ, ಈಗಾಗ್ಲೆ ಇರೋ ಜನಪ್ರತಿನಿಧಿ ವ್ಯವಸ್ಥೆಗೆ ಹಿಡಿದಿರೋ ತುಕ್ಕು ಬಿಡಿಸೋಕ್ಕೆ ನಾಗರೀಕರೇ ಸೇರ್ಕೊಂಡು ಕಟ್ಕೊಂಡಿರೋ ಹಲವಾರು ಸಂಸ್ಥೆಗಳು ಕೆಲಸ ಮಾಡ್ತಿವೆ. ಅದ್ರಲ್ಲಿ ನಮ್ಮ ಬೆಂಗಳೂರಲ್ಲಿ ಜನಾಗ್ರಹ, ಬ್ಯಾಂಗಲೂರ್ ಸಿಟಿಜನ್ ಮ್ಯಾಟರ್ಸ್.ಇನ್ ಮೊದಲಾದವು ಇವೆ. ಈ "ಲಾಭರಹಿತ" ಸಂಸ್ಥೆಗಳಲ್ಲಿ ಹೆಚ್ಚಿನವು ಬೆಂಗಳೂರಿನ ವ್ಯವಸ್ಥೆ ಹೇಗಿರಬೇಕು ಅಂತಾ ಕೆಲಸ ಮಾಡ್ತಿವೆ. ಇವುಗಳಲ್ಲಿ ಬಹುತೇಕ ಸಂಸ್ಥೆಗಳನ್ನು ಕಟ್ಕೊಂಡಿರೋರು, ನಡುಸ್ತಿರೋರು ಯಾರಪ್ಪಾ ಅಂತಾ ನೋಡುದ್ರೆ ಅದರಲ್ಲಿ ನಮ್ಮ ಜನ ಅಂದ್ರೆ ಕನ್ನಡಿಗರಿರೋದು ಬೆರಳೆಣಿಕೆಯಷ್ಟು ಮಾತ್ರಾ ಕಣ್ರೀ.. ಅಲ್ಲಾರೀ, ಬೆಂಗಳೂರಿನ ವ್ಯವಸ್ಥೆ ಹೇಗಿರಬೇಕು ಅಂತಾ ರಾಜಾಸ್ಥಾನದಿಂದ, ಮುಂಬೈಯಿಂದ, ಕೇರಳದಿಂದ, ತಮಿಳುನಾಡಿಂದ ವಲಸೆ ಬಂದಿರೋ ಹೈಕ್ಳು ನಿರ್ಧಾರ ಮಾಡಬೇಕಾ? ಇದರಲ್ಲಿ ಯಾವ ತಪ್ಪೂ ಇಲ್ಲಾ ಅಂದ್ರೂ ಇವರಿಗೆ ನಮ್ಮೂರು, ನಮ್ಮೂರ ಜನ, ನಮ್ಮೂರ ಸಂಸ್ಕೃತಿಗಳು ಇದನ್ನೆಲ್ಲಾ ಲೆಕ್ಕಕ್ಕೆ ತಗೊಂಡು ಕೆಲಸ ಮಾಡೋ ಉಮ್ಮೇದಿ ಅದೆಂಗ್ ಇರಕ್ ಆಗುತ್ತೆ ಹೇಳಿ. ಇದ್ರಾಗೆಲ್ಲಾ ನಮ್ ಜನಗಳು ಇರಬೇಕು. ಆಗ ಸಮಸ್ಯೇನೂ ಸರಿಯಾಗಿ ಅರ್ಥ ಆಗುತ್ತೆ, ಪರಿಹಾರಾನೂ ಸರಿಯಾಗ್ ಸಿಗ್ತದೆ.

ಇವ್ರು ಯಾವ ಸೀಮೆ ಬೆಂಗಳೂರಿನ ಪ್ರತಿನಿಧಿಗಳು?

ದೊಡ್ಡ ಓದು ಓದಿದೀವಿ ಅಂತಾನೋ, ಸಮಾಜದಲ್ಲಿ ದೊಡ್ಡ ಸ್ಥಾನದಲ್ಲಿ ಇದೀವೀ ಅಂತಾನೋ ಇವರು ತಮ್ಮುನ್ ತಾವು ಇಡೀ ಬೆಂಗಳೂರಿನ ಪ್ರತಿನಿಧಿಗಳು ಅಂತ ಅಂದ್ಕೊಂಡಿದ್ರೆ ಮೂರ್ಖರಾಗ್ತಾರೆ ಅಷ್ಟೆ. ಈ ಬೆಂಗಳೂರಿನಲ್ಲಿ ಇರೋ ಕನ್ನಡಿಗರನ್ನೇ ಗಣನೆಗೆ ಇಟ್ಕೊಳ್ದೆ, ಹೊರಗಿಂದ ಬಂದೋರ ಹಿತ ಕಾಯೋದೊಂದೇ ಗುರಿ ಅನ್ನೋ ಹಾಗೆ ಇವರುಗಳು ನಡ್ಕೊತಿರೋದು ಎದ್ದು ಕಾಣ್ತಿದೆ. ಯಾಕಪ್ಪಾ ಅಂದ್ರೆ, ಬೆಂಗಳೂರಿನ ನಾಗರೀಕರನ್ನು ಪ್ರತಿನಿಧುಸ್ತೀವಿ ಅಂತಾ ಹೇಳ್ಕೊಳ್ಳೋ ಇವರ ಅಂತರ್ಜಾಲ ತಾಣಗಳಲ್ಲಿ ಕನ್ನಡವೇ ಇಲ್ಲ. ಅಂಥಾದ್ರಲ್ಲಿ ಇವರು ಯಾವ ಸೀಮೆ ಬೆಂಗಳೂರನ ನಾಗರೀಕರ ಪ್ರತಿನಿಧಿಗಳಾಗ್ತಾರೆ? ನೀವೆ ಹೇಳಿ. ಕನ್ನಡದೋರ ಅನುಭವ, ಸಮಸ್ಯೆ, ಯೋಜನೆ ಇವುನ್ನೆಲ್ಲಾ ಇವರ ತಾಣಗಳು, ಸಂಸ್ಥೆಗಳೂ ಪ್ರತಿನಿಧಿಸಲಾರವು. ಇವತ್ತಿನ ದಿವ್ಸ ಇವರ ಜೊತೆ ಕೆಲಸ ಮಾಡ್ತಿರೋ ಒಬ್ರೋ ಇಬ್ರೋ ಕನ್ನಡಿಗರೂ ಕೂಡಾ ಕನ್ನಡ ಬಳುಸೋದು ಹೆಂಗಪ್ಪಾ ಅನ್ನೋ ಕೀಳರಿಮೆಯಲ್ಲಿ ನರಳ್ತಿದಾರೇನೋ ಅನ್ಸುತ್ತೆ. ಇಲ್ದಿದ್ರೆ ಇಷ್ಟ್ ಹೊತ್ತಿಗೆ ಇವರ ಅಂತರ್ಜಾಲ ತಾಣದಲ್ಲಿ ದೇವ್ರಾಣೆಗೂ ಕನ್ನಡ ಇರ್ತಿತ್ತು. ಹೀಗೆ ಬುಡಹಂತದಲ್ಲೇ ಹುಳುಕು ಇಟ್ಕೊಂಡು, ತಮ್ಮ ಬರಹಗಳಲ್ಲಿ ನೇರವಾಗೇ ಪರಭಾಷೆಯೋರುನ್ನಾ ಮೆರುಸೋ ಸಲುವಾಗಿ ಕನ್ನಡದವರನ್ನೇ ಕಡೆಗಣುಸ್ತಿರೋ ಇವರಿಂದ ಬೆಂಗಳೂರು ಉದ್ಧಾರ ಆದ ಹಾಗೇ ಗುರೂ!

ಇದ್ಯಾವ ಮಹಾ ಸಂಸ್ಥೆಗಳು ಅನ್ನೋ ಅಸಡ್ಡೆ ಬೇಡಾ!

ಹಾಗಂತಾ ಇವ್ಯಾವ ಮಹಾ ಸಂಸ್ಥೆಗಳು ಅಂತಾ ನಾವೂ ನೀವೂ ಇವುಗಳ್ನ ಕಡೆಗಣಿಸಕ್ಕೆ ಆಗಲ್ಲಾ. ಯಾಕಂದ್ರೆ ಇವತ್ತು ಈ ಸಂಸ್ಥೆಗಳು ಎತ್ತುತಿರೋ ದನಿ ಆಡಳಿತದಲ್ಲಿರೋರ ಕಿವಿಗೆ ಮುಟ್ತಾಯಿದೆ. ಮಾಧ್ಯಮಗಳಲ್ಲಿ ಇವರ ಕೂಗು ಕೇಳಿ ಬರ್ತಾಯಿದೆ. ಹೌದಪ್ಪಾ, ಇವರು ಹೇಳ್ತಿರೋ ಸುಧಾರಣೆ ಮಾಡುದ್ರೆ ಊರು ಉದ್ಧಾರ ಆಗುತ್ತೆ ಅಂತಾ ಆಳೋರಿಗೆ ಅನ್ಸೋಕೆ ಶುರು ಆಗಿದೆ. ಇಂಥಾ ಸಂಸ್ಥೆಗಳು ಕೂಡಾ ನಿಜವಾಗಿ ಬೆಂಗಳೂರಿನ ವ್ಯವಸ್ಥೆಯನ್ನು ಸುಧಾರಿಸಬೇಕು ಅಂತಾ... ಬಹಳ ಅಧ್ಯಯನ ಮಾಡಿ ತಮ್ಮೆಲ್ಲಾ ಪರಿಣಿತಿ ಅನುಭವಗಳನ್ನು ಸುರಿದು ನಿಜವಾದ ಕಾಳಜಿಯಿಂದಲೇ ಕೆಲಸ ಮಾಡ್ತಿರಬಹುದು. ಆದರೇನು? ಇದರಲ್ಲಿ ನಮ್ಮ ಜನ ಇಲ್ಲದಿದ್ರೆ ಇವರ ಪರಿಹಾರಗಳು, ಯೋಜನೆಗಳೆಲ್ಲಾ ಇಲ್ಲಿಗೆ ಬರೋ ವಲಸಿಗರ ಬದುಕನ್ನು ಹಸನು ಮಾಡೋದ್ರಲ್ಲಿ ಮುಗಿದು ಹೋಗುತ್ತೆ! ಅದೆಂಗೇ ಅಂತೀರಾ? ಈಗ ನೋಡಿ, ಬೆಂಗಳೂರಿನ ಬಸ್ಸುಗಳಲ್ಲಿ ಇಂಗ್ಲಿಷ್ ಬರಹ ಬೇಕು ಅಂತಾ ಇವರು ಬಲವಾಗಿ ಪ್ರತಿಪಾದುಸ್ತಾರೆ. ಆದ್ರೆ ಇದೇ ಜನ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ, ಬೆಂಗಳೂರಿನ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಬರೀ ಕನ್ನಡ ಬರೋ ನಮ್ಮ ಎಂಕ ವ್ಯವಹರಿಸಕ್ಕೆ ಅನುಕೂಲ ಆಗೋ ಅಂಥಾ ವ್ಯವಸ್ಥೆ ಬೇಕು ಅನ್ನಲ್ಲ. ಇವರ್ಯಾರೂ ಅಂಥಾ ವ್ಯವಸ್ಥೆ ಬೇಡಾ ಅನ್ನಲ್ಲ. ಆದ್ರೆ ಈಗ ಇಂಗ್ಲಿಷ್ ಬೋರ್ಡ್ ಬೇಕು ಅನ್ನೋ ಹಾಗೆ ಎಂಕಂಗೆ ಅನುಕೂಲ ಆಗೋ ಥರದ ವ್ಯವಸ್ಥೆ ಕಟ್ಟಿ ಅನ್ನಲ್ಲ. ಅನ್ನಲ್ಲ ಅನ್ನಬಾರದು, ಇದುವರ್ಗೂ ಅಂದಿಲ್ಲಾ ಅಷ್ಟೆ.

ಜನಾಭಿಪ್ರಾಯದ ನಾಟಕ!

ಇವ್ರು ಜನಾಭಿಪ್ರಾಯ ತಿಳ್ಕೊಳಕ್ಕೆ ಅಂತಾ ಮತಕ್ಕೆ ಹಾಕಿರೋ ಈ ಪ್ರಶ್ನೆ ನೋಡಿ : ಇದರ ಉತ್ತರಗಳಲ್ಲಿ ಯಾವುದನ್ನು ಆರಿಸಿದ್ರೂ ನೀವು ಇಂಗ್ಲಿಷ್ ಬೋರ್ಡನ್ನು ಒಪ್ಪಿದ ಹಾಗೇ. ಇಂಥಾ ಸಂಸ್ಥೆಗಳು ನಿಜಕ್ಕೂ ಬೆಂಗಳೂರನ್ನು, ಬೆಂಗಳೂರಿನ ಜನತೆಯನ್ನು ಪ್ರತಿನಿಧಿಸ್ತಾ ಇದಾರಾ? ಇವರು ಪ್ರತಿನಿಧಿಸ್ತಾ ಇರೋ ಬೆಂಗಳೂರು ಕನ್ನಡಿಗರನ್ನು ಒಳಗೊಂಡಿದ್ಯಾ ಇಲ್ವಾ? ಅಂತೆಲ್ಲಾ ಪ್ರಶ್ನೆಗಳು ನಿಮ್ಮಲ್ಲಿ ಹುಟ್ತಿಲ್ವಾ ಗುರುಗಳೇ! ಇನ್ನೂ ಏನು ಯೋಚನೇ ಮಾಡ್ತಿದೀರಾ? ಸಮಾಜದಲ್ಲಿ ದೊಡ್ಡ ಸ್ಥಾನ ಹೊಂದಿರೋ ಕನ್ನಡಿಗರು ಇಂಥಾ ಸಂಸ್ಥೆಗಳ ಒಳಹೊಕ್ಕು ಚುಕ್ಕಾಣಿ ಹಿಡೀದಿದ್ರೆ, ಮಾತು ನಡ್ಯೋ ಹಂತಕ್ ತಲುಪದೇ ಇದ್ರೆ, ಅಥ್ವಾ ಈ ಸಂಸ್ಥೆಗಳಿಗಿಂತಾ ಪ್ರಭಾವಶಾಲಿಯಾದ ದೊಡ್ಡ ಸಂಸ್ಥೆಗಳ್ನ ಕಟ್ಟದೇ ಹೋದ್ರೆ ಮುಂದೆ ಅನಾಹುತಾ ಗ್ಯಾರಂಟಿ.

ಇವರ ನಿಲುವೇ ಬೆಂಗಳೂರಿಗರದ್ದೇನು?

ಮೊನ್ನೆ ನೋಡಿ ತಿರುವಳ್ಳುವರ್ ಸ್ಥಾಪನೆ ಮಾಡಿದ್ದೇ ಸರಿ ಅಂತಾ ಅಭಿಪ್ರಾಯಾನ ಬೆಂಗಳೂರು ಸಿಟಿಜನ್ ಮ್ಯಾಟರ್ಸ್‍‍ನ ಸಂಪಾದಕರು ಬರೆದಿದ್ದಾರೆ. ಇದನ್ನು ಮೀರಿಸೋ ಹಾಗೆ ಜನಾಗ್ರಹದ ಸಂಪಾದಕೀಯ ಇದೆ. ಇದೇನು ಇಡೀ ಕನ್ನಡಿಗರ ಅಭಿಪ್ರಾಯವೇನು? ಈ ಪ್ರತಿಮೆ ವಿಚಾರದಲ್ಲಿ ಸರ್ಕಾರ ಹೇಗೆ ನಡ್ಕೊಳ್ತು ಅಂತಾ ಇಡೀ ನಾಡಿಗೇ ಗೊತ್ತಿದೆ. ಜನರ ಅಭಿಪ್ರಾಯ ಏನಿತ್ತು ಅನ್ನೋದನ್ನು ಗಣನೆಗೆ ತೊಗೊಳ್ದೆ, ಸುದ್ದಿ ಕೊಡಬೇಕಾದೋರು ಅಭಿಪ್ರಾಯ ಕೊಡ್ತಾ ಅವರಿವರ ಪರ ವಕೀಲಿಕೆ ಮಾಡ್ತಾ ಇರೋದು ಎಷ್ಟರ ಮಟ್ಟಿಗೆ ಒಪ್ಪೋ ಮಾತು? ಇವರ ಸಂಪಾದಕೀಯಾನೂ, ಇವರ ಸಂಸ್ಥೇನೂ ಬೆಂಗಳೂರು ಜನತೆಯ ಪ್ರತಿನಿಧಿಸೋವು ಅಂತಾಗ್ಬುಟ್ರೆ, ನಾಳೆ ಇಡೀ ಬೆಂಗಳೂರಿನ ಒಟ್ಟಭಿಪ್ರಾಯವೇ ಇದು ಅಂತಾ ಅಗೋಗಲ್ವಾ? ಇಂಥಾದ್ದೆಲ್ಲಾ ಆಗಬಾರ್ದು ಅಂದ್ರೆ ಇರೋದು ಒಂದೇ ದಾರಿ. ಇಂಥಾ ಸಂಸ್ಥೆಗಳಲ್ಲಿ ನಾವೂ ತೊಡುಗುಸ್ಕೋಬೇಕಾಗಿದೆ. ಅದಕ್ಕಿಂತಾ ಪರಿಣಾಮಕಾರಿಯಂದ್ರೆ ಇಂಥಾ ಸಂಸ್ಥೆಗಳಿಗಿಂತ ದೊಡ್ಡ ಸಂಸ್ಥೆಗಳನ್ನು ಕನ್ನಡಿಗರು ಕೂಡಿ ಕಟ್ಟಬೇಕಾಗಿದೆ. ಏನಂತೀರಾ ಗುರುಗಳೇ?

ಮನೆಗೆ ಮಾರಿಯಾಗದಿರಲಿ ಕನ್ನಡಿಗ!!

ಅಂದೊಮ್ಮೆ...
ಕಾರ್ಗಿಲ್‌ ಯುದ್ಧದಿ
ದಂಡಿನ ಮಂದಿ ಬಲಿಯಾದಾಗ
ಮರುಗಿದ ಕನ್ನಡ ಮನವೇ ...

ಹಿಂದೊಮ್ಮೆ ...
ಲಾಥೂರ್‌, ಕಿಲಾರಿಯಲ್ಲಿ,
ಕಛ್‌, ಭುಜ್‌ನಲ್ಲಿ,
ಗುಡುಗುಡುಗಿ ನೆಲನಡುಗಿ,
ಮನೆಮುರಿದಾಗ
ಮಿಡಿದ ಕನ್ನಡ ಮನವೇ ...

ನಿನ್ನೆ ...
ಸಾಗರದಲೆಗಳು ತಮಿಳು ತೀರದಲಿ
ಮೃತ್ಯು ನರ್ತನ ನಡೆಸಿರಲು,
ಧಿಗ್ಗನೆ ನೆರವಿಗೆ
ಧಾವಿಸಿದ ಕನ್ನಡ ಮನವೇ ...

ಮೆಚ್ಚಿ ತಲೆಬಾಗುವೆ
ನಿನ್ನ ರಾಷ್ಟ್ರೀಯ ಭಾವಕ್ಕೆ!
ಜಾತಿ ಭಾಷೆ ಮೀರಿದ
ನಿನ್ನ ಉದಾತ್ತತೆಗೆ!!
ನಿನ್ನೊಡಲ ದೇಶ ಪ್ರೇಮಕ್ಕೆ ...

ಇಂದು ...
ಸುರಿದ ಮಳೆಗೆ ಕೃಷ್ಣೆ ಉಕ್ಕಿಹುದು,
ಮಲಪ್ರಭೆ, ತುಂಗಭಧ್ರೆ ನುಗ್ಗಿಹುದು
ನಿನ್ನದೇ ಮನೆಯ ಒಳಗೆ ...
ನೆಲ, ಮನೆ, ದನಕರು
ಕಡೆಗೆ ಹೆತ್ತಕಂದಮ್ಮಗಳೂ ... ಕೃಷ್ಣಾರ್ಪಣ!!

ಇಂದು ...
ರಾಯಚೂರಾಗಿದೆ ಚೂರು ಚೂರು,
ಬಿಜಾಪುರದ ಗುಂಬಜ್‍ಗಳಲ್ಲಿ ಮಸಣಮೌನ,
ಕಾರವಾರದಿ ಮೈಮೇಲೆ ಮುರಿದು ಬಿದ್ದ ಗುಡ್ಡ!
ಕಮರಿದೆ ಕನಸು, ಮುರುಟಿದೆ ಮನಸು
ಬಟಾ ಬಯಲಾಗಿದೆ ಬದುಕು...

ಭೂಕಂಪಿತರಿಗೆ ಬಟ್ಟೆ
ಸೈನ್ಯದ ಜನಕೆ ಹಣ,
ಸುನಾಮಿ ಪೀಡಿತರಿಗೆ ಚಪಾತಿ ಅನ್ನ.
ನಿನ್ನಯ ಮನೆಯ ಜನಕ್ಕೆ ??
ಕಡೆ ಪಕ್ಷ ಒಂದು ಹನಿ ಕಣ್ಣೀರು ?
ಮನೆಗೆ ಮಾರಿ ಊರಿಗೆ ಉಪಕಾರಿ

ಇದು ಕನ್ನಡಿಗನ ನಿಜ ರೂಪವೆಂದು
ಬೆಚ್ಚಿಹಳು ಭುವನೇಶ್ವರಿ ...
ನಿನ್ನ ನಿರಭಿಮಾನ ನಿರ್ಲಜ್ಜತನ, ನಿನ್ನದೇ ಜನಗಳ
ಕಷ್ಟಕಾಲದಲ್ಲೂ ತಟಸ್ಥವಾಗಿಹ ನಿನ್ನ ಗುಣ,
ಮೈಮನ ತುಂಬಿಹ ನಿರ್ವಿಣ್ಣತೆ
ನಿನ್ನಂತಹ ಮಕ್ಕಳನ್ನು ಹಡೆದವ್ವೆ ಧನ್ಯ !!!

ಅಳಿಸು ಈ ಕೆಟ್ಟಹೆಸರನಿಂದು ಗೆಳೆಯಾ,
ಇದು ನಮ್ಮವರ ಕಣ್ಣೊರೆಸೆ ಮುನ್ನುಗ್ಗೊ ಸಮಯಾ!
ಮುಂದಾಗು ಕನ್ನಡದ ಮನೆಯ ಮತ್ತೆ ಕಟ್ಟಲು,
ಕನ್ನಡ ರಾಜರಾಜೇಶ್ವರಿಯ ಋಣ ತೀರಿಸಲು!!

ಎಚ್ಚರವಾಗ್ತಿರೋ ಮರಾಠಿ ಮಾಣುಸ್!


ಮೊನ್ ಮೊನ್ನೆ ಸಿ.ಎನ್.ಎನ್-ಐ.ಬಿ.ಎನ್‍ನೋರು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಒಂದಿಬ್ರು ರಾಜಕೀಯ ನಾಯಕರನ್ನು ಸಂದರ್ಶನ ಮಾಡುದ್ರು ಗುರು! ಒಬ್ರು ಶಿವಸೇನೆಯ ಬಾಳಾಠಾಕ್ರೆಯ ಉತ್ತರಾಧಿಕಾರಿಯಾದ ಉದ್ಧವ್ ಠಾಕ್ರೆಯವರು. ಇನ್ನೊಬ್ರು ಮಹಾರಾಷ್ಟ್ರಾ ನವನಿರ್ಮಾಣ ಸೇನೆಯ ದಂಡನಾಯಕರಾದ ರಾಜ್ ಠಾಕ್ರೆಯವರು. ನೀವು ಆ ಸಂದರ್ಶನಗಳ್ನ ನೋಡುದ್ರಾ ಗುರು? ಇಲ್ದಿದ್ರೆ ಇಕಾ ಇಲ್ಲಿ ನೋಡಿ.

ಕಳಚುತ್ತಿರುವ ಸುಳ್ಳಿನ ಪೊರೆ ಒಂದೆಡೆ! ತನ್ನತನವ ತೊರೆದವರೊಂದೆಡೆ!!

ಶಿವಸೇನೆ ಅನ್ನೋದು ಹೇಗೆ ದಿಕ್ಕೆಟ್ಟು, ಸಿದ್ಧಾಂತದ ಗೊಂದಲದಲ್ಲಿ ತೊಳಲಾಡ್ತಾ ಇದೆ ಅನ್ನೋದನ್ನು ತಿಳ್ಯಕ್ಕೆ ಉದ್ಧವ್ ಆಡಿರೋ ಮಾತುಗಳ್ನ ನೋಡುದ್ರೆ ಸಾಕು. ಹಿಂದಿಯಲ್ಲಿ ಮಾತಾಡ್ತಾ, ಮಹಾರಾಷ್ಟ್ರ-ಮರಾಠಿ-ಮರಾಠಿಗರ ಬಗ್ಗೆ ಯಾವ್ದೇ ವಿಶೇಷ ಯೋಜನೆಗಳಿಟ್ಕೊಳ್ದೇ ರಾಷ್ಟ್ರೀಯ ಪಕ್ಷದ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಸಿದ್ಧವಾಗಿರೋ ಶಿವಸೇನೆ ತಾನು ಹುಟ್ಟಿದ್ದು ಯಾಕೆ ಅನ್ನೋದನ್ನೇ ಮರೆತು ಹೋದಂಗಿದೆ ಗುರು! ಇವರಿಗಿಂತಾ ಹೆಚ್ಚು ದಿಟದ ಮನವರಿಕೆ ಎಂ.ಎನ್.ಎಸ್‍ನವರಿಗೆ ಆಗಿರೋ ಹಾಗೆ, ರಾಜ್ ಠಾಕ್ರೆಯ ಮಾತುಗಳನ್ನು ಕೇಳ್ದಾಗ ಅನ್ಸುತ್ತೆ. ತಮಾಷೆ ಅಂದ್ರೆ ರಾಜ್‍ಠಾಕ್ರೆಯವರು ಮರಾಠಿಯಲ್ಲಿ ಮಾತಾಡೋದನ್ನೇ ಈ ಚಾನೆಲ್‍ನವರು ದೇಶ ಒಡೆಯೋ ಪ್ರಯತ್ನ ಅನ್ನೋಹಾಗೆ ಪ್ರಶ್ನೆಮಾಡಿರೋದನ್ನು ನೀವು ನೋಡಬಹುದು. ಹಿಂದಿ ಒಪ್ಪಿದ್ದಕ್ಕೇ ಮುಂಬೈ ಮಟಾಷ್ ಆಗಿರೋದು ಅನ್ನೋದನ್ನು ಅರ್ಥ ಮಾಡ್ಕೊಂಡಂಗಿರೋ ರಾಜ್‍ಠಾಕ್ರೆ, ಇದರಿಂದ ಚೂರು ಗಲಿಬಿಲಿಗೆ ಈಡಾಗಿದ್ದಂಗೆ ಕಾಣ್ಸಿದ್ರೆ ಅದುಕ್ಕೆ ಕಾರಣ, ಪಾಪಾ ಅವರೂ ಹಿಂದೀನಾ ರಾಷ್ಟ್ರಭಾಷೆ ಅಂತ ತಪ್ಪಾಗಿ ಭಾವಿಸಿರೋದೆ ಆಗಿದೆ ಗುರು! ಈ ಸಂದರ್ಶನ ಮಾಡಿದ ಮಹನೀಯ ರಾಜ್‍ದೀಪ್ ಕೂಡಾ ಪೆದ್ದುಪೆದ್ದಾಗಿ (ಅತಿ ಜಾಣತನ ಅಂತನ್ನೋ ಗುಮಾನೀನೂ ಇದೆ) ಹಿಂದೀನಾ ರಾಷ್ಟ್ರಭಾಷೇ ಅಂತನ್ನೋದುನ್ನ ನೋಡುದ್ರೆ, ಅವರ ಅಜ್ಞಾನಕ್ಕೆ ಮರುಗಬೇಕೋ ಅಥವಾ ಭಾರತೀಯರ ತಲೇಲಿ ಕೇಂದ್ರಸರ್ಕಾರ ಎಷ್ಟು ಯೋಜಿತವಾಗಿ ಒಂದು ಸುಳ್ಳುನ್ನ ತುಂಬ್ಕೊಂಡು ಬಂದಿದೆ ಅಂತಾ ಅಚ್ಚರಿ ಪಡಬೇಕೋ ಅರಿಯದಾಗಿದೆ ಗುರು! ಏನೇ ಆದರೂ ಹಿಂದಿಯಿಂದಾಗಿರೋ ಅಪಾಯದ ಅರಿವು ಮರಾಠಿಗರಿಗೆ ಅರ್ಥವಾಗ್ತಾ ಇರೋದೂ, ಜೊತೆಯಲ್ಲಿ ಈ ಅರಿವಿನ ರಾಜಕೀಯ ಪಕ್ಷ ಬೆಳೀತಾ ಇರೋದೂ ಒಳ್ಳೇ ಬೆಳವಣಿಗೆ ಆಗಿದೆ.

ರಾಜ್‍ಠಾಕ್ರೆ ಮಾತಿನ ಎರಡು ಸತ್ಯಗಳು!

ಮೊದಲನೇದಾಗಿ ಹಿಂದೀಲಿ ಮಾತಾಡದೆ ಮರಾಠಿ ಭಾಷೆಯನ್ನು ಬಳಸೋ ಮೂಲಕ ‘ಭಾರತದಲ್ಲಿ ಹಿಂದಿಯಷ್ಟೇ ಮರಾಠಿಯೂ ಭಾರತೀಯ’ ಅನ್ನೋ ಸಂದೇಶ ಕೊಡ್ತಾ, ‘ಇಷ್ಟು ದಿವಸ ಹಿಂದೀನ ಒಪ್ಕೊಂಡು ತಲೆಮೇಲೆ ಹೊತ್ತು ಮೆರೆಸಿದ್ದಕ್ಕೆ ಮರಾಠಿಗರ ಬದುಕು, ಉದ್ಯೋಗ ಎಲ್ಲಾ ಮಠ ಹತ್ತೋಗಿದೆ ಅನ್ನೋದು ನಮಗೆ ಗೊತ್ತಾಗಿದೆ. ಇನ್ಮೇಲೆ ಮರಾಠಿ ಸ್ವಾಭಿಮಾನ ಜಾಗೃತವಾಗಿದೆ ಅನ್ನೋದರ ಕುರುಹಾಗಿ ಹೀಗೆ ಮರಾಠಿಯಲ್ಲಿ ಮಾತಾಡ್ತಾ ಇದೀನಿ’ ಅನ್ನೋ ಸಂದೇಶಾನೂ ರಾಜ್ ಕೊಟ್ಟಿದಾರೆ. ಇದರ ಜೊತೆಗೆ ಯಾವ ಪಕ್ಷ ಮಹಾರಾಷ್ಟ್ರ, ಮರಾಠಿ ಮತ್ತು ಮರಾಠಿಗರ ಏಳಿಗೆಗೆ ದುಡಿಯಲು ಸಿದ್ಧವೋ, ಯಾವ ಪಕ್ಷ ಕಾಲಮಿತಿ ಹಾಕಿಕೊಂಡು ಏಳಿಗೆಯ ಯೋಜನೆಗಳನ್ನು ಜಾರಿಗೆ ತರಲು ಸಿದ್ಧವೋ ಅಂತಹ ಪಕ್ಷಗಳನ್ನು ಬೆಂಬಲಿಸುವುದಾಗಿಯೂ ರಾಜ್ ಠಾಕ್ರೆ ಹೇಳಿಕೆ ನೀಡಿದ್ದಾರೆ. ಒಟ್ಟಾರೆ ಈ ಸಂದರ್ಶನ ನೋಡಿದಾಗ ರಾಜ್‍ಠಾಕ್ರೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಹೆಚ್ಚು ಹೆಚ್ಚು ಸ್ಪಷ್ಟವಾದ ಚಿಂತನೆಯನ್ನೂ, ನಿಲುವನ್ನೂ ಮೈಗೂಡಿಸಿಕೊಳ್ಳುತ್ತಿರುವುದು ಕಾಣುತ್ತಿದೆ. ಅಂತೂ ಮರಾಠಿ ಮಾಣುಸ್ ಎಚ್ಚೆತ್ತುಕೊಳ್ತಿರೋದು ಭಾರತದ ಏಳಿಗೆಯ, ಒಕ್ಕೂಟದ ಸ್ವರೂಪದ ದೃಷ್ಟಿಯಿಂದ ಭಾಳಾ ಒಳ್ಳೇದು ಗುರು!!

ಸಂಸ್ಕೃತ ವಿವಿ : ಬೇಕೆಂದವರಿಗೊಂದು ಪ್ರತ್ಯುತ್ತರ

ಕರ್ನಾಟಕ ರಾಜ್ಯ ಸರ್ಕಾರವು ಸಂಸ್ಕೃತ ವೇದ ವಿಶ್ವವಿದ್ಯಾಲಯವೊಂದನ್ನು ಶುರುಮಾಡಲು ಮುಂದಾಗಿದೆ. ಇದು ಬೇಕೇ ಬೇಡವೇ ಎಂಬ ಬಗ್ಗೆ ವಿಜಯಕರ್ನಾಟಕ ದಿನಪತ್ರಿಕೆಯು ಒಂದು ಸಂವಾದವನ್ನು ನಡೆಸಿತು. ಮೈಸೂರಿನ ರೀಜನಲ್ ಕಾಲೇಜ್ ಆಫ್ ಎಜುಕೇಷನ್ ನಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿರುವ ಪ್ರೊ. ಎನ್.ಎಸ್ ರಘುನಾಥ್ ಅವರು ಈ ಬಗ್ಗೆ ಮಂಡಿಸಿದ್ದ ಅಪ್ರಕಟಿತ ಬರಹವೊಂದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಶ್ರೀಯುತರು NCERTನಲ್ಲಿ ಮೂವತ್ತು ವರ್ಷ ಸೇವೆ ಸಲ್ಲಿಸಿರುವ ಹಿರಿಯ ಕಲಿಕೆಯರಿಗರು. ಈ ಬರಹವನ್ನು ವಿಜಯಕರ್ನಾಟಕಕ್ಕೆ ಕಳಿಸಿದ್ದರೂ ಪ್ರಕಟ ಮಾಡುವ ದೊಡ್ಡಮನಸ್ಸನ್ನು ಆ ಪತ್ರಿಕೆಯು ಮಾಡಿಲ್ಲವೆಂಬುದನ್ನು ತಿಳಿಸಲು ಕೂಡ ಶ್ರೀಯುತರು ಇಷ್ಟಪಡುತ್ತಾರೆ. ಈ ಬರಹದಲ್ಲಿರುವ ಅಭಿಪ್ರಾಯಗಳು ಪ್ರೊ. ರಘುನಾಥ್ ಅವರದು. ಅವರನ್ನು ಸಂಪರ್ಕ ಮಾಡಬೇಕಾದರೆ ಅವರಿಗೆ ಮಿಂಚೆ ಬರೆಯಿರಿ. -- ಸಂಪಾದಕ, ಏನ್ ಗುರು

"ಕನ್ನಡ ಭಾಷೆಯ ಅಭಿವೃದ್ಧಿಗೆ ಸಂಸ್ಕೃತ ವಿವಿ ಪೂರಕವಾಗಲಿ" (ಡಾ ಎಸ್ ಎಲ್ ಭೈರಪ್ಪ, ವಿಕ 10.08.2009) ಭೈರಪ್ಪನವರ ಲೇಖನವು ತನ್ನ ತಲೆಬರಹ ಹೇಳುವಂತೆ ಕನ್ನಡ ಭಾಷೆಯ ಬೆಳವಣಿಗೆಗೆ ಏನಾದರೂ ಆಗುವುದಾದರೆ ಅದು ಆಗಬಾರದು ಎಂದು ಯಾರೂ ಹೇಳುವುದಿಲ್ಲ, ಹೇಳಲು ಸಾಧ್ಯವಿಲ್ಲ. ಆದರೆ ಅದು ಸಂಸ್ಕೃತದ ಮೂಲಕ ಹೇಗೆ ಆಗುತ್ತದೆ ಎಂದು ಭೈರಪ್ಪನವರು ತಮ್ಮ ಲೇಖನದಲ್ಲಿ ಎಲ್ಲೂ ಹೇಳುವುದಿಲ್ಲ. ಅದನ್ನು ಸಮರ್ಥಿಸಿಕೊಳ್ಳಲು ಅವರ ಬರವಣಿಗೆಗೆ ಸಾಧ್ಯವಾಗಿಲ್ಲ. ಸಂಸ್ಕೃತ ವೇದ ವಿಶ್ವ ವಿದ್ಯಾಲಯ ಏಕೆ ಆರಂಭಿಸಬೇಕು ಎನ್ನುವುದಕ್ಕೆ ಅವರ ಲೇಖನದಲ್ಲಿ ಎಲ್ಲೂ ತಾರ್ಕಿಕ ಅಥವಾ ವೈಜ್ಞಾನಿಕ ಸಮರ್ಥನೆ ಇಲ್ಲ. ಹಾಗೆ ನೋಡಿದರೆ ವಿವಿಯನ್ನು ಸ್ಥಾಪಿಸಲು ಅವರ ಲೇಖನದಲ್ಲಿ ಒಂದು ವಾದವೇ ಇಲ್ಲ. ಆದರೂ ಅವರು ಹೇಳುತ್ತಿರುವ ಕೆಲವು ಅಂಶಗಳನ್ನು ಇಲ್ಲಿ ಚರ್ಚೆ ಮಾಡುತ್ತೇನೆ. ಸಂಸ್ಕೃತ ವಿವಿ ಸ್ಥಾಪನೆಯ ಬಗ್ಗೆ
“ಎಷ್ಟೋ ಕನ್ನಡದ ತೂಕವುಳ್ಳ ವಿದ್ವಾಂಸರು ಮತ್ತು ಸಾಹಿತಿಗಳು ಮೌನವಾಗಿದ್ದಾರೆ.”
ಆದುದರಿಂದ “ಮೌನಂ ಸಮ್ಮತಿ ಲಕ್ಷಣಂ” ಎಂದಿದ್ದಾರೆ. ಇದು ಗಂಭೀರವಾದ ಹೇಳಿಕೆ. ಯಾರೀ ತೂಕದವರು? ಹಾಗಾದರೆ ತೂಕವಿಲ್ಲದವರು ಯಾರು? ಹೆಸರು ಹೇಳಲು ಭೈರಪ್ಪನವರು ಏಕೆ ಹಿಂಜರಿದಿದ್ದಾರೆ? ಭೈರಪ್ಪನವರೂ ಸಹ ಭ್ರಷ್ಟತೆಯ ಬಗ್ಗೆ ಮೌನವಾಗಿದ್ದಾರೆ. ಗಣಿಗಳು ಲೂಟಿಯಾಗುತ್ತಿರುವ ಬಗ್ಗೆ ಮೌನವಾಗಿಯೆ ಇದ್ದಾರೆ. ಇದರ ಅರ್ಥ “ಮೌನಂ ಸಮ್ಮತಿ ಲಕ್ಷಣಂ” ಎಂದು ಗ್ರಹಿಸಬಹುದೆ? ಇಂಥ ತುಕ್ಕು ಹಿಡಿದ ಕ್ಲೀಶೆ ತುಂಬಿದ ಭಾಷೆಯಲ್ಲಿ ಬರೆದಿರುವ ಬಾಲಿಶ ಹೇಳಿಕೆಗಳು ಲೇಖನದಲ್ಲಿ ಬೇಕಾದಷ್ಟು ಇವೆ. ಇವರ ಮತ್ತೊಂದು ಹೇಳಿಕೆ: “ಸಂಸ್ಕೃತ ವ್ಯಾಕರಣದ ಹಿನ್ನೆಲೆ ಇಲ್ಲದೆ ಭಾರತದ ಭಾಷಾ ಶಾಸ್ತ್ರದ ಅಧ್ಯಯನ ಸಾಧ್ಯವೆ?” ಇದಕ್ಕೆ ಇವರು ಕೊಡುವ ಉದಾಹರಣೆ “ಕನ್ನಡದಲ್ಲಿ ಎಂಎ ಮಾಡಿದವರನ್ನು ಕನ್ನಡದ ಹೊಸ ಪತ್ರಕರ್ತರನ್ನು ನಾನು ಪರೀಕ್ಷಿಸಿದ್ದೇನೆ.” ಇವರಿಗೆ ಕನಿಷ್ಟ ಸರಿಯೋ, ಕನಿಷ್ಠ, ಪುಷ್ಟಿಯೋ, ಪುಷ್ಠಿಯೋ, ಸೀತೆ ರೋಧಿಸಿದಳು, ರೋದಿಸಿದಳು” ಇತ್ಯಾದಿಗಳು ಗೊತ್ತಿಲ್ಲ ಎನ್ನುವುದನ್ನು ಹೇಳುತ್ತಾರೆ. ಇದನ್ನು ನಿಜವಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸಂಸ್ಕೃತಕ್ಕೂ ಈ ಸಮಸ್ಯೆಗೂ ಸಂಬಂಧ ಕಲ್ಪಿಸುವುದು ತರ್ಕಬದ್ದವಲ್ಲ. ಸಂಸ್ಕೃತ ಎಂಎ ಮಾಡಿರುವ ಪದವೀಧರರು ಆ ಭಾಷೆಯಲ್ಲಿ ಮಾತನಾಡುವಾಗ ಅಥವಾ ಬರೆಯುವಾಗ ಮಾಡಬಹುದಾದ ತಪ್ಪುಗಳನ್ನು ಇವರು ಇದೇ ರೀತಿ ಗಮನಿಸಲಿಲ್ಲವೇಕೆ? ಹಾಗೆ ಅವರು ಮಾಡುವ ತಪ್ಪುಗಳನ್ನು ಸರಿಪಡಿಸಲು ಯಾವ ಭಾಷೆ ಕಲಿಯಬೇಕು? ಇಂತಹ ಸಮಸ್ಯೆಗಳನ್ನು ಸುಧಾರಿಸಲು ಎಂಎ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಪ್ರಾಧ್ಯಾಪಕರುಗಳು ಅನುಸರಿಸುತ್ತಿರುವ ಮೆತೆಡಾಲಜಿ, ಅವರೇ ಬೋಧನೆಯಲ್ಲಿ ಬಳಸುತ್ತಿರುವ ಭಾಷೆಯ ಬಗ್ಗೆ, ಅಂತಹವರನ್ನು ಪರಿಕ್ಷೆಯಲ್ಲಿ ಉತ್ತೀರ್ಣಗೊಳಿಸುತ್ತಿರುವ ಕಾರಣಗಳ ಬಗ್ಗೆ ವಿವಿಗಳು ಗಮನಿಸಬೇಕು. ಭೈರಪ್ಪನವರು ಹೇಳಿರುವ ವಿಷಯವನ್ನು ತಿದ್ದಬೇಕಾದರೆ ಎಂಎ ಪಠ್ಯಕ್ರಮವನ್ನು ಗಂಭೀರ ಚರ್ಚೆಗೆ ಒಳಪಡಿಸಬೇಕಾಗುತ್ತದೆ. ಅವಶ್ಯವೆನಿಸಿದರೆ ಪರೀಕ್ಷಾ ಕ್ರಮವನ್ನೂ ಸೇರಿಸಿ ಎಲ್ಲದರಲ್ಲೂ ಆಮೂಲಾಗ್ರ ಬದಲಾವಣೆ ತರಬೇಕಾಗುತ್ತದೆ. ಆದರೆ ಇದೆಲ್ಲ ಸಂಸ್ಕೃತ ಭಾಷೆ ಕಲಿತರೆ ಸರಿಹೋಗಿಬಿಡುತ್ತದೆ ಎನ್ನುವಷ್ಟು ಸರಳ ಮಾಡುವುದು ಅಂಧ ತತ್ವವಾದವಾಗುತ್ತದೆ. ಮತ್ತು ಒಂದು ಭಾಷೆಯ ಕಲಿಕೆಯನ್ನು ಅದರ ವ್ಯಾಕರಣವನ್ನು ಮತ್ತೊಂದು ಭಾಷೆಯ ಕಲಿಕೆಯಿಂದ ಸರಿಪಡಿಸಬೇಕು/ ಸರಿಪಡಿಸಬಹುದು ಎನ್ನುವ ವಾದ ಭಾಷಾವಿಜ್ಞಾನದ ಸಿದ್ಧಾಂತಗಳಲ್ಲಿ ಓದಿದ ನೆನೆಪು ನನಗಿಲ್ಲ.

ಭೈರಪ್ಪನವರು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳ ಉದಾಹರಣೆ ತೆಗೆದುಕೊಂಡಿದ್ದಾರೆ. ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳನ್ನು ಐರೋಪ್ಯ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದಿದ್ದಾರೆ. ಕಲಿಯಲಿ. ಭಾರತೀಯರು, ಯೂರೋಪಿಯನ್ನರು ಎಲ್ಲರು ಸಂಸ್ಕೃತವನ್ನೂ ಕಲಿಯಲಿ. ಯಾರೂ ಬೇಡವೆಂದಿಲ್ಲ. ಇಲ್ಲಿ ಸಂಸ್ಕೃತ ಕಲಿಯುವಿಕೆ ಮತ್ತು ವಿವಿಸ್ಥಾಪನೆಗಳ ಸ್ಥಾಪನೆಯ ನಡುವೆ ಗೊಂದಲ ಸೃಷ್ಟಿಸುವುದು ಬೇಡ. ಸಂಸ್ಕೃತ ಎಲ್ಲರೂ ಕಲಿಯಲಿ. ನಾನು ಅದನ್ನು ಬೆಂಬಲಿಸುತ್ತೇನೆ. ಆದರೆ ವಿವಿಯ ಸ್ಥಾಪನೆ ಬೇರೆ ಮಾತು. ಯೂರೋಪಿನಲ್ಲಿ ಎಲ್ಲೂ ಲ್ಯಾಟಿನ್ ವಿಶ್ವವಿದ್ಯಾಲಯ ಇದ್ದಂತೆ ಕಾಣುವುದಿಲ್ಲ. ಗ್ರೀಕ್ ಒಂದು ದೇಶದ ಜೀವಂತ ಭಾಷೆ. ಇಲ್ಲಿ ಮತ್ತೊಂದು ವಿಷಯವನ್ನು ಗಮನಿಸಬೇಕು. ಯೂರೋಪಿನಲ್ಲಿ ರೋಮನ್ ಸಾಮ್ರಾಜ್ಯ ಕುಸಿದು ಬಿದ್ದಾಗ, ಲ್ಯಾಟಿನ್ ಭಾಷೆ ಸ್ಯ್ಪಾನಿಷ್, ಇಟ್ಯಾಲಿಯನ್, ಫ್ರೆಂಚ್, ರುಮೇನಿಯನ್ ಮತ್ತು ಪೋರ್ಚುಗೀಸ್ ಭಾಷೆಗಳಾಗಿ ವಿಭಜನೆಯಾಯಿತು. ಅಂದರೆ ಅಸ್ತಿತ್ವದಲ್ಲಿದ್ದ ಈ ಭಾಷೆಗಳು ಪ್ರಮುಖ ಭಾಷೆಗಳಾಗಿ ಬೆಳೆದವು. ಈ ಭಾಷೆಗಳ ಜೊತೆ ಇಂಗ್ಲಿಷ್, ಜರ್ಮನ್ ಇತ್ಯಾದಿ ಭಾಷೆಗಳು ಸೇರಿದಂತೆ ಲ್ಯಾಟಿನ್ ವರ್ಣಮಾಲೆಯನ್ನು ಅಳವಡಿಸಿಕೊಂಡವು. ಕಾಲಕ್ರಮೇಣ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳ ವ್ಯಾಕರಣವನ್ನೂ ಈ ಭಾಷೆಗಳು ತಮ್ಮ ಭಾಷೆಗಳ ವ್ಯಾಕರಣ ಬರೆಯಲು ಅಳವಡಿಸಿಕೊಂಡುಬಿಟ್ಟವು. ಆಗ ಭಾಷಾವಿಜ್ಞಾನ ಎನ್ನುವುದು ಮೊಳಕೆಯ ರೂಪದಲ್ಲೂ ಇರಲಿಲ್ಲ. ಆದರೆ 20ನೇ ಶತಮಾನದ ಮಧ್ಯ ಭಾಗದಲ್ಲಿ ಭಾಷಾವಿಜ್ಞಾನ ಚೆನ್ನಾಗಿಯೆ ಬೆಳೆಯಿತು. ಅಲ್ಲಿಂದ ನೋಮ್ ಚಾಮ್ಸ್‌ಕಿಯವರ ಬರಹಗಳಿಂದಾಗಿ ಭಾಷಾವಿಜ್ಞಾನದಲ್ಲಿ ಆಮೂಲಾಗ್ರ ಬದಲಾವಣೆ ಆಯಿತು. ಆಯಾ ಭಾಷೆಗಳಿಗೆ ಆಯಾ ಭಾಷೆಗಳನ್ನೇ ಆಧರಿಸಿ ವ್ಯಾಕರಣ ಬರೆಯುವ ಆವಶ್ಯಕತೆಯನ್ನು ವಿದ್ವಾಂಸರು ಕಂಡುಕೊಂಡರು. ಹದಿನೆಂಟನೇ ಶತಮಾನದಲ್ಲಿಯೆ ಪತ್ತೆಯಾಗಿದ್ದರೂ ಮತ್ತೊಂದು ಶತಮಾನದ ನಂತರ ಪಾಣಿನಿಯ ವ್ಯಾಕರಣ ಇವರಿಗೆ ಪ್ರಮುಖ ಮಾದರಿಯಾಯಿತು. ಈತನಷ್ಟು ಪರಿಪೂರ್ಣ ವೈಯ್ಯಾಕರಣಿ ವಿಶ್ವದಲ್ಲಿ ಮತ್ತೊಬ್ಬನಿಲ್ಲ ಎನ್ನುವುದು ಭಾರತಕ್ಕೆ ಹೆಮ್ಮೆಯ ವಿಷಯ. ಪಾಣಿನಿಯ ವ್ಯಾಕರಣ ಯಾವುದೇ ಸಿದ್ದಾಂತದ ಮೇಲೆ ರಚಿತವಾಗಿಲ್ಲ. ಅದು ಭಾಷೆ ಹೇಗೆ ವರ್ತಿಸುತ್ತದೆ ಎನ್ನುವುದರ ಸೂಕ್ಷ್ಮಾವಲೋಕನದ ಮೇಲೆ ರಚಿತವಾಗಿದೆ ಎನ್ನುವ ಅಂಶ ವಿಶ್ವ ಭಾಷಾವಿಜ್ಞಾನಿಗಳಿಗೆ ಕಣ್ಣು ತೆರೆಸುವ ಹೊಸ ಸಂಶೋಧನೆಗೆಯ ಸಾಧನವಾಯಿತು. ಇದನ್ನೇ ಅವರು ಅನುಸರಿಸಿದರು. ಫ್ಯ್ರಾಂಕ್ ಪಾಮರ್, ರಾಂಡಾಲ್ಫ್ ಕ್ವರ್ಕ್, ಡೇವಿಡ್ ಕ್ರಿಸ್ಟಲ್ ಇತ್ಯಾದಿಯವರು ಇದನ್ನು ಇಂಗ್ಲಿಷ್ ಭಾಷೆಯ ರಚನೆ ಮತ್ತು ಅದು ಬಳಕೆಯಾಗುತ್ತಿರುವ ಮತ್ತು ವರ್ತಿಸುವ ರೀತಿಗಳನ್ನು ವಿವರವಾಗಿ ಪರೀಕ್ಷಿಸುವುದರ ಮೂಲಕ ಹೊಸ ವ್ಯಾಕರಣವನ್ನು ರಚಿಸಿ ತೋರಿಸಿದರು. ವಿವರಣಾತ್ಮಕ (Descriptive) ವ್ಯಾಕರಣ ಅಸ್ತಿತ್ವಕ್ಕೆ ಬಂದಿತು. ವ್ಯಾಕರಣ ರಚಿಸಲು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಹೇಗೆ ವರ್ತಿಸುತ್ತವೆ ಎನ್ನುವುದು ಇವರಿಗೆ ಅಪ್ರಸ್ತುತವಾಯಿತು. ಇದರಿಂದಾಗಿ ಇಂಗ್ಲಿಷ್ ಭಾಷೆಯ ‘ಬೈಬಲ್’ ಎಂದೇ ಹೆಸರುವಾಸಿಯಾಗಿದ್ದ ಸಲಹಾತ್ಮಕ (ಪ್ರಿಸ್ಕ್ರಿಪ್ಟಿವ್) (prescriptive) ವೈಯ್ಯಾಕರಣಿಗಳಾದ ರೆನ್ ಅಂಡ್ ಮಾರ್ಟಿನ್ ನಿವೃತ್ತರಾಗಿ ಕಸದ ಬುಟ್ಟಿ ಸೇರಿದರು. ಹಾಗೆಯೇ ಕನ್ನಡ ಮತ್ತು ಸಂಸ್ಕೃತ ವ್ಯಾಕರಣಗಳನ್ನು ಬೇರೆ ಬೇರೆಯಾಗಿಯೇ ನೋಡಬೇಕು. ಒಂದು ವಿಧದಲ್ಲಿ ಪಾಣಿನಿಯೂ ಇದಕ್ಕೆ ಪರೋಕ್ಷವಾಗಿ ಕಾರಣಕರ್ತ ಎಂದರೆ ಉತ್ಪ್ರೇಕ್ಷೆಯಾಗಲಾರದು.

ಸಂಸ್ಕೃತ ಆಧಾರಿತ ಕನ್ನಡ ವ್ಯಾಕರಣಗಳನ್ನು ಈಗ ಯಾರು ಅನುಸರಿಸುತ್ತಿದ್ದಾರೆ? ತೀನಂಶ್ರೀ ಅವರ ‘ಕನ್ನಡ ವ್ಯಾಕರಣ’ ಈಗ ಯಾರು ಬಳಸುತ್ತಿದ್ದಾರೆ? ಡಿ ಎನ್ ಶಂಕರ ಭಟ್ ಅವರ ‘ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ’ ಬಂದಾಗ ಭೈರಪ್ಪನವರು ಏಕೆ ಇದನ್ನು ತಿರಸ್ಕರಿಸಬೇಕು ಎಂದು ಹೇಳಲಿಲ್ಲ? ನಮಗೆ ಗೊತ್ತಿರುವಂತೆ ಭಟ್ ಅವರು ಗಮನಿಸಬಹುದಾದಂಥ ಉತ್ತಮ ಭಾಷಾವಿಜ್ಞಾನಿಗಳು. ಆದುದರಿಂದ ಅವರು ಈ ರೀತಿ ವ್ಯಾಕರಣ ಬರೆಯಲು ಕಾರಣವೇನು ಎನ್ನುವುದನ್ನು ನೋಡಬೇಕು. ಸರಿ ಎನಿಸದಿದ್ದರೆ ಅವರು ಚರ್ಚಿಸುತ್ತಿರುವ ಭಾಷಾವಿಜ್ಞಾನದ ನೆಲೆಯಿಂದಲೇ ಅದನ್ನು ಏಕೆ ಸ್ವೀಕರಿಸಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಅದರ ಬದಲು ಭೈರಪ್ಪನವರು:
“ನಿಮ್ಮ ಸಂಸ್ಕೃತ ವ್ಯಾಕರಣ ನಿಯಮಗಳನ್ನು ನಾವು ಯಾಕೆ ಅನುಸರಿಸಬೇಕು? ನಮಗೆ ಇಷ್ಟ ಬಂದಂತೆ ನಾವು ಬಳಸುತ್ತೇವೆ; ಎಂಬ ಉಡಾಫೆಯನ್ನು ಎಷ್ಟೋ ಜನ ವೀರ ಕನ್ನಡ ಭಕ್ತರು ಹೊಡೆಯುತ್ತಾರೆ.”
ಎನ್ನುತ್ತಾರೆ. ಯಾಕೆ ಅನುಸರಿಸಬೇಕು ಎನ್ನುವುದನ್ನು ಮಾತ್ರ ಅವರ ಲೇಖನದಲ್ಲಿ ಎಲ್ಲಿಯೂ ಹೇಳಿಲ್ಲ. ಈ ವಾಕ್ಯದ ಭಾಷೆ ಮತ್ತು ಧ್ವನಿಗಳು, ಭೈರಪ್ಪನವರಂಥ ವಿದ್ವಾಂಸರ ಘನತೆಗೆ ತಕ್ಕುದಾದುದು ಎನಿಸುವುದಿಲ್ಲ. ಇದು ಪೂರ್ವಾಗ್ರಹ ಪೀಡಿತ ಸಿನಿಕತನದ ತೀರ್ಮಾನ ಎನಿಸುತ್ತದೆ. ಕಾದಂಬರಿಕಾರರು ಭಾಷಾವಿಜ್ಞಾನದ ಬಗ್ಗೆ ಬರೆಯುವಾಗ ಅದೊಂದು ವಿಶಾಲವಾಗಿ ಬೆಳೆದಿರುವ ವಿಷಯ ಎನ್ನುವುದನ್ನು ಗಮನದಲ್ಲಿಟ್ಟುಕೊಂಡರೆ ಒಳ್ಳೆಯದು. ಶಂಕರ ಭಟ್ ಅವರು ತಮ್ಮ ‘ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ’ ಕೃತಿಗೆ ಪೀಠಿಕೆ ಬರೆಯುತ್ತ:
ಸಂಸ್ಕೃತ ಮತ್ತು ಕನ್ನಡ ವ್ಯಾಕರಣಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಮತ್ತು ಈ ವ್ಯತ್ಯಾಸಗಳನ್ನು ಸರಿಯಾಗಿ ಗಮನಿಸದು ದರಿಂದಾಗಿ ಕನ್ನಡ ವಯ್ಯಾಕರಣಿಗಳು ಕನ್ನಡದ ವ್ಯಾಕರಣ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಿ ಹೇಳುವಲ್ಲಿ ಅಸಮರ್ಥರಾಗಿದ್ದಾರೆ ಎಂಬುದನ್ನು ನಿದರ್ಶನಗಳ ಮೂಲಕ ತೋರಿಸಿಕೊಡುವುದೇ ಈ ಪುಸ್ತಕದ ಮುಖ್ಯ ಉದ್ದೇಶ.” (ಪು 23)
ಎಂದು ಬರೆಯುತ್ತಾರೆ. (ಇದಕ್ಕೆ ಕರ್ನಾಟಕ ಸಾಹಿತ್ಯ ಅಕೆಡೆಮಿ ಬಹುಮಾನ ಬಂದಾಗ ನಾನೂ ಆ ಸಮಿತಿಯ ಸದಸ್ಯನಾಗಿ ಅದನ್ನು ಅನುಮೋದಿಸಿ ನಾನೆ ವಾದ ಮಂಡಿಸಿದ್ದೆ.) ಇವರು ಕೊಟ್ಟಿರುವ ನಿದರ್ಶನಗಳನ್ನು ಭೈರಪ್ಪನವರು ಈಗ, ಅಲ್ಲಗಳೆದು ತೋರಿಸಬೇಕಾಗುತ್ತದೆ. ಆದರೆ ಅವರ ಸುದೀರ್ಘ ಲೇಖನದಲ್ಲಿ ಸಿದ್ಧಾಂತ ಅಥವಾ/ ಮತ್ತು ತರ್ಕಗಳಿಗೆ ಸ್ಥಾನವಿಲ್ಲ. ಬರೆದಿರುವ ಕೇವಲ ಹೇಳಿಕೆಗಳು ಇವೆ. ಆದುದರಿಂದ ಕನ್ನಡದಲ್ಲಿ ಸಂಸ್ಕೃತ ಭಾಷೆಯನ್ನಾಧರಿಸಿ ಬರೆದ ವ್ಯಾಕರಣ ಹಳಸಿಹೋಗಿರುವುದರಲ್ಲಿ ಆಶ್ಚರ್ಯವಿಲ್ಲ. ಇದನ್ನು ಭೈರಪ್ಪನವರು ತಮ್ಮ ಲೇಖನವನ್ನು ಅಚ್ಚಿಗೆ ಕಳುಹಿಸುವುದಕ್ಕೆ ಮುಂಚೆ ಗಮನಿಸಬೇಕಿತ್ತು. ಯಾವುದೋ ಎರಡು ಭಾಷೆಗಳನ್ನು ಏಕರೀತಿಯಲ್ಲಿ ನೋಡುವುದು ಮತ್ತು ಶಾಸ್ತ್ರೀಯ ಭಾಷೆ ಎಂದು ಸಂಸ್ಕೃತವನ್ನು ಆರಾಧಿಸುವುದು ಸನಾತನ ಪದ್ಧತಿ. ಆದರೆ ಭೈರಪ್ಪನವರ ಲೇಖನದಲ್ಲಿ ಅದೇ ಪ್ರಮುಖ ಅಂಶ. ವಿವಿಯ ಪರ ಬರೆಯುತ್ತಿರುವವರಲ್ಲಿ ಅನೇಕರು ಸಂಸ್ಕೃತದ ಸನಾತನ ಚರಿತ್ರೆಯನ್ನು ವೈಭವೀಕರಿಸುವದೇ ವಿವಿಯನ್ನು ಸ್ಥಾಪಿಸಲು ಪ್ರಮುಖ ಕಾರಣವಾಗಿಟ್ಟುಕೊಂಡು ಬರೆದಿದ್ದಾರೆ. ಒಂದು ಭಾಷೆಯ ಪ್ರಭಾವವನ್ನು ಮತ್ತೊಂದು ಭಾಷೆಯ ಮೇಲೆ ಗುರುತಿಸಬಹುದು. ಸಂಸ್ಕೃತ ಭಾಷೆಯ ಪ್ರಭಾವ ಭಾರತೀಯ ಭಾಷೆಗಳ ಮೇಲೆ ಇದೆ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ಶತಮಾನಗಳ ಬಳಕೆಯಿಂದ ಈ ಭಾಷೆಗಳು ತಮ್ಮದೇ ಆದ ಅಸ್ತಿತ್ವವನ್ನು ಪಡೆದುಕೊಂಡಿವೆ. ಅಂದರೆ ಎಲ್ಲ ಭಾಷೆಗಳನ್ನೂ ಅಯಾ ಭಾಷೆಗಳ ರಚನೆ, ಶಬ್ದವಿನ್ಯಾಸ, ಪದವಿನ್ಯಾಸ, ಪದಗಳ ಜೋಡಣೆ, ಅರ್ಥ ಮತ್ತು ಅವುಗಳು ಬಳಕೆಯಾಗುವ ರೀತಿ, ಇತ್ಯಾದಿಗಳನ್ನು ಗಮನಿಸಿಯೆ ವ್ಯಾಕರಣ ರಚಿಸಬೇಕಾಗುತ್ತದೆ; ರಚಿಸಲಾಗಿದೆ. ಉದಾಹರಣೆಗೆ ಈಗ ಇಂಗ್ಲಿಷಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಫ್ಯ್ರಾಂಕ್ ಪಾಮರ್, ರಾಂಡಾಲ್ಫ್ ಕ್ವರ್ಕ್ ವ್ಯಾಕರಣಗಳನ್ನು ನೋಡಬಹುದು. ಈ ವಿಚಾರದಲ್ಲಿ ಅವರು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಿಂದ ದೂರ ಸರಿದಿದ್ದಾರೆ. ಇದರ ಜೊತೆಗೆ ಸಂಸ್ಕೃತದಿಂದ ದಿನದಿಂದ ದಿನಕೆ ದೂರ ಹೋಗುತ್ತಿರುವ ತಮಿಳು ಭಾಷೆಯ ಬಗ್ಗೆ ಭೈರಪ್ಪನವರು ಚಕಾರವೆತ್ತದಿರುವುದು ಗಮನಾರ್ಹ.
“ಸಂಸ್ಕ್ರೃತವೆಂದರೆ ವೇದ, ವೇದವೆಂದರೆ ನಾವು ವಿರೋಧಿಸಲು ಮಾತ್ರ ಅರ್ಹವಾದದ್ದು, ಎಂಬ ಮನಃಸ್ಥಿತಿಯನ್ನು ಒಂದು ಗುಂಪು ಬಂಡಾಯದ ಕಾಲದಿಂದ ಕನ್ನಡದಲ್ಲಿ ಗದ್ದಲ ಮಾಡುತ್ತಾ ಸೆಮಿನಾರುಗಳಲ್ಲಿ ಭಾಷಣಗಳಲ್ಲಿ ಅನಂತರ ಕ್ರಮೇಣವಾಗಿ ಶಾಲಾ ಕಾಲೇಜುಗಳ ಪ್ರವಚನಗಳಲ್ಲೂ ಸೇರಿಕೊಂಡು ವಿಷಬೀಜವನ್ನು ಬಿತ್ತುತ್ತಾ ಬೆಳೆದಿದೆ.”
ನಮ್ಮ ನಾಗರಿಕತೆಯಲ್ಲಿ “ವಿಷಬೀಜವನ್ನು ಬಿತ್ತುತ್ತಾ” ಸಮುದಾಯಗಳ ಬದುಕನ್ನೆ ಕತ್ತು ಹಿಸುಕಿ ಕೊಂದವರಾರು ಎನ್ನುವುದನ್ನು ಚರಿತ್ರೆಯ ಕಡೆ ಮುಖ ಮಾಡಿ ನೋಡಿದರೆ ಕೆಲವು ಕ್ರೂರವಾದ ಮತ್ತು ಅಮಾನುಷ ಎನಿಸುವ ಸತ್ಯಗಳನ್ನು ಎದುರಿಸಬೇಕಾಗಬಹುದು. ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಚರಿತ್ರೆಯಲ್ಲಿ ಎಂದೂ ದೇವ ಭಾಷೆಗಳೆಂದು ಹಣೆಪಟ್ಟಿ ಕಟ್ಟಿಸಿಕೊಂಡವಲ್ಲ; ಅವುಗಳ ಕಲಿಕೆ ಗುರುಕುಲಾಶ್ರಮಗಳ ಪ್ರವೇಶಕ್ಕೆ ಅರ್ಹರಾದ ಸಮುದಾಯಕ್ಕೆ ಸೇರಿದ ಜನಗಳಿಗೆ ಮಾತ್ರ ಮೀಸಲಾಗಿರಲಿಲ್ಲ. ಬೇರೆಯವರು ಅವನ್ನು ಕಲಿತರೆ ಭಾಷೆಯೇ ಅಪವಿತ್ರವಾಗಿಬಿಡುತ್ತದೆ ಎನ್ನುವ ಅವಿದ್ಯಾವಂತ ಮೂಢನಂಬಿಕೆಯನ್ನು ರೋಮ್ ಮತ್ತು ಗ್ರೀಸ್ ದೇಶದವರು ಎಂದೂ ಎಲ್ಲಿಯೂ ಬಿತ್ತಲಿಲ್ಲ. ಹಿಂದುಳಿದ, ಆಗ ‘ಅಸ್ಪೃಶ್ಯ’ರೆಂದು ಕರೆಯಲ್ಪಟ್ಟ ದಲಿತರು ಆ ಭಾಷೆಗಳಲ್ಲಿರುವ ಸಾಹಿತ್ಯವನ್ನು ಓದುವುದನ್ನು ಕೇಳಿದರೂ ಶಿಕ್ಷಿಸಬೇಕು, ಅವರ ಕಿವಿಯಲ್ಲಿ ಕಾದ ಸೀಸವನ್ನು ಹುಯ್ಯಬೇಕು ಎಂದು ಬರೆದು ಯಾರೂ ಸ್ಮೃತಿಗಳನ್ನು ಸೃಷ್ಟಿಸಲಿಲ್ಲ. ಸಂಸ್ಕೃತವನ್ನು ಈ ರೀತಿಯ ಹಿಂಸೆಗೆ ಒಳಪಡಿಸಿ, ಅದನ್ನು ಒಂದು ಸಮುದಾಯದ ಗೃಹ ಬಂಧನದಲ್ಲಿಟ್ಟು, ಉಸಿರು ಕಟ್ಟಿಸಿ ಸಾಂಸ್ಕೃತಿಕವಾಗಿ ಜೀವ ಹಿಂಡಿ ವಿಷಹಾಕಿದವರು ಇವರಲ್ಲವೆ? ಅತ್ಯಂತ ಸಮೃದ್ಧವಾಗಿ ಬೆಳೆದಿದ್ದ ಆ ಭಾಷೆಗೆ “ಮೃತ ಭಾಷೆ” ಎನ್ನುವ ಹಣೆಪಟ್ಟಿ ಬರಲು ಕಾರಣರು ಇವರೆ ಅಲ್ಲವೆ!? ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಂತೆ ದೇಶದ ಎಲ್ಲ ಪ್ರಜೆಗಳಿಗೂ ಇದನ್ನು ಕಲಿಸಿದ್ದರೆ ಬಹುಶಃ ಸಂಸ್ಕೃತ ಈ ದಿನ ಭಾರತದ ದೇಶ ಭಾಷೆಯಾಗಿರಬಹುದಿತ್ತು ಎಂದರೆ ತಪ್ಪಾಗಲಾರದು. ಇದನ್ನು ತಪ್ಪಿಸಿ ಅದಕ್ಕೆ ಪಾವಿತ್ರತೆಯ ವಿಷ ಹಾಕಿ ಕೊಂದವರಾರು? ಈಗ ಅದಕ್ಕೆ ಒಂದು ವಿವಿಯನ್ನು ಸ್ಥಾಪಿಸಲು ಹೊರಟರೆ ಅದಕ್ಕೆ ಜನಬೆಂಬಲ ನಿರೀಕ್ಷೆ ಮಾಡಲು ಹೇಗೆ ಸಾಧ್ಯ? ಹೀಗೆ ಸಾವಿರಾರು ವರ್ಷಗಳ ಕಾಲ ವಿದ್ಯೆಯಿಂದ ವಂಚಿತರಾಗಿ ಅವಮರ್ಯಾದೆಯಲ್ಲಿ ಬೆಂದು ಈಗ ಕೇವಲ ಕೆಲವು ದಶಕಗಳಿಂದ ವಿದ್ಯಾಭ್ಯಾಸ ಪಡೆಯುತ್ತಿರುವ ಸಮುದಾಯಗಳಿಗೆ ಸಂಸ್ಕೃತ ವೇದ ವಿಶ್ವ ವಿದ್ಯಾಲಯ ಎಂದಾಗ ಅನುಮಾನ ಹುಟ್ಟುವುದು ಸಹಜವೆ.

ಈಗ ನಮ್ಮ ವಿವಿಗಳಲ್ಲಿ ಸಂಸ್ಕೃತದ ವಿಭಾಗಗಳಿವೆ. ಅದಕ್ಕೆ ಎಷ್ಟುಜನ ನೊಂದಾಯಿಸಿಕೊಳ್ಳುತ್ತಾರೆ ಎನ್ನುವುದನ್ನು ಗಮನಿಸಿ. ಇದಕ್ಕೆ ಭೈರಪ್ಪನವರು ಹೇಳುವುದು:
“ಹೈಸ್ಕೂಲಿನಲ್ಲಿ ಸಂಸ್ಕೃತವನ್ನು ಬತ್ತಿಸಿ, ಕಾಲೇಜಿನಲ್ಲಿ ಬೆಳೆಯಗೊಡದೆ, ವಿಶ್ವವಿದ್ಯಾಲಯಗಳ ವಿಭಾಗಕ್ಕೆ ವಿದ್ಯಾರ್ಥಿಗಳೇ ಬರದಂತೆ ಮಾಡಿ ಇರುವುದಕ್ಕೇ ವಿದ್ಯಾರ್ಥಿಗಳಿಲ್ಲವೆಂಬ ಕೂಗುಹಾಕುವ ಹುನ್ನಾರಕ್ಕೆ ಏನನ್ನಬೇಕು?”
ಕೊಲೆ, ಭ್ರಷ್ಟಾಚಾರದಲ್ಲಿ ಸಿಕ್ಕಿಕೊಂಡ ರಾಜಕಾರಣಿಗಳು “ಇದು ವಿರೋಧ ಪಕ್ಷದವರ ರಾಜಕೀಯ ಹುನ್ನಾರ” ಎಂದು ಬೊಬ್ಬೆ ಹಾಕುತ್ತಾರೆ. ಈ ರೀತಿ ವಾಕ್ಯಗಳಿಗೆ ಏನನ್ನಬೇಕು? ರಾಜಕಾರಣಿಗಳಿಗಿಂತ ಭೈರಪ್ಪನವರ ಭಾಷೆ ಭಿನ್ನವೇನಲ್ಲ. ಮೈಸೂರು ವಿವಿಯ ಸಂಸ್ಕೃತ ವಿಭಾಗದಲ್ಲಿ ಹಿಂದಿನ 5 ವರ್ಷಗಳ ನೊಂದಣಿಯನ್ನು ನೋಡಿದರೆ ಯಾವ ವರ್ಷವೂ 5ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿಲ್ಲ. ಕೆಲವರ್ಷ 2-3 ವಿದ್ಯಾರ್ಥಿಗಳು ಸೇರಿರುವುದುಂಟು. ಬೇರೆ ವಿವಿಗಳಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಸಂಸ್ಕೃತವನ್ನು ಓದಬೇಡಿ ಎಂದು ವಿದ್ಯಾರ್ಥಿಗಳನ್ನು ತಡೆದಿರುವವರಾರು ಎಂಬುದನ್ನು ಭೈರಪ್ಪನವರು ತಿಳಿಸಬೇಕು. ಆಧಾರವಿಲ್ಲದೆ ಆಪಾದನೆ ಹೊರಿಸುವುದು ವಿದ್ವಾಂಸರಿಗೆ ತಕ್ಕುದಲ್ಲ. ಇರುವ ಒಂದು ವಿಭಾಗಕ್ಕೆ 5 ಜನಕ್ಕಿಂತ ಹೆಚ್ಚು ಬರದಿದ್ದಾಗ ಒಂದು ವಿಶ್ವವಿದ್ಯಾಲಯವನ್ನೆ ಆರಂಭಿಸುವುದು ಎಷ್ಟು ಸೂಕ್ತ? ಇಂಗ್ಲಿಷ್ ದಬ್ಬಾಳಿಕೆಯಿಂದ ಕನ್ನಡ ಈಗ ಮೂಲೆಗುಂಪಾಗುತ್ತಿದೆ. ಆದರೆ ಅದನ್ನು ಇಂಗ್ಲಿಷ್ ಬಲ್ಲವರು ಕನ್ನಡ ಕಲಿಯಬೇಡಿ ಎಂದು ತಡೆಯುವ ಹುನ್ನಾರ ಮಾಡುತ್ತಿದ್ದಾರೆ ಎನ್ನಲಾಗುವುದಿಲ್ಲ. ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ಆರ್ಥಿಕ ಬದಲಾವಣೆಗಳು, ಸಂವಹನ, ತಂತ್ರಜ್ಞಾನದಲ್ಲಿ ಆಗುತ್ತಿರುವ ತೀವ್ರ ಬದಲಾವಣೆಗಳು ವಿವಿಧ ದೇಶಗಳಲ್ಲಿ ಎಲ್ಲ ಸ್ಥಳೀಯ ಭಾಷೆಗಳನ್ನೂ ತಿನ್ನುತ್ತಿವೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಇತ್ಯಾದಿ ಭಾಷೆಗಳಿಗೆ ಇದನ್ನು ಎದುರಿಸುವ ಆಂತರಿಕ ಶಕ್ತಿ ಇದೆಯೆ? ಈ ಜೀವಂತ ಭಾಷೆಗಳನ್ನು ಆಡುತ್ತಿರುವ ಕೋಟಿಗಟ್ಟಲೆ ಜನರಿಗೆ ಆ ಶಕ್ತಿ ಇದೆಯೆ? ಎನ್ನುವುದನ್ನು ನಾವು ಪರಿಗಣಿಸಬೇಕು. ಜನರೇ ಅದನ್ನು ತೀರ್ಮಾನ ಮಾಡಬೇಕು. ಸಂಸ್ಕೃತ ಇವನ್ನು ರಕ್ಷಿಸುವುದಿಲ್ಲ.

ಕರ್ನಾಟಕದಲ್ಲಿ ಸಂಸ್ಕೃತ ವೇದ ವಿಶ್ವ ವಿದ್ಯಾಲಯ ತೆರೆಯಬೇಕೆ ಬೇಡವೆ ಎನ್ನುವುದರ ಬಗ್ಗೆ ಕರ್ನಾಟಕದಾದ್ಯಂತ ಈಗ ವಾದವಿವಾದಗಳು ಎದ್ದಿವೆ. ಸರ್ಕಾರವಂತೂ ಈಗಾಗಲೇ ಒಬ್ಬ ಆಡಳಿತಾಧಿಕಾರಿಯನ್ನು ನೇಮಿಸಿ ವಿವಿಯನ್ನು ಆರಂಭಿಸಲು ಪೂರ್ವಭಾವಿ ಸಿದ್ಧತೆಗಳನ್ನು ಆರಂಭಿಸಿದೆ. ಇದರ ಹಿಂದಿನ ಕಾರಣವಾದಿ ಚಿಂತನೆ ಏನು ಎನ್ನುವುದು ಕರ್ನಾಟಕದ ಜನತೆಗೆ, ಚಿಂತಕರಿಗೆ ಸ್ಪಷ್ಟವಾಗಿಲ್ಲ. ಇದರ ಪರವಾಗಿ ವಾದಮಾಡುವ ಚಿಂತಕರು ಸಂಸ್ಕೃತ ಭಾಷೆಯ ಪುರಾತನತೆಯನ್ನು ಮುಂದಿಟ್ಟುಕೊಂಡು ಅದನ್ನು ವೈಭವೀಕರಿಸಿ ಭಾವುಕತನದಿಂದ ವಾದವನ್ನು ಮುಂದಿಟ್ಟಿದ್ದಾರೆ. ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ:
" ‘ಇನ್ನು ಮುಂದೆ ಸಂಸ್ಕೃತದ ಎಲ್ಲ ಸತ್ವವನ್ನೂ ಕನ್ನಡಕ್ಕೆ ಕಂಡುಕೊಳ್ಳಬೇಕು. ಆದ್ದರಿಂದ ಸಂಸ್ಕೃತದ ಸಾರವನ್ನೆಲ್ಲ ಕನ್ನಡದ ಮೂಲಕ ಪ್ರಚಾರ ಮಾಡಬೇಕು. ಸಾಹಿತ್ಯ ಭಾಗ, ಶಾಸ್ತ್ರಭಾಗ - ಈ ಎರಡೂ ಕ್ಷೇತ್ರಗಳ ಉನ್ನತ ಗ್ರಂಥಗಳೆಲ್ಲವನ್ನೂ ಕನ್ನಡಕ್ಕೆ ತಂದು ಅವುಗಳ ಉಪಯೋಗವನ್ನು ಪಡೆಯಬೇಕು. ಕನ್ನಡ ಮಾತಿನಲ್ಲಿ ಸಂಸ್ಕೃತ ಹಿರಿಮೆಯನ್ನು ಸಾಧಿಸಬೇಕು.’ ಈ ಅಭಿಪ್ರಾಯವು ನಿಜವಾಗಿ ಅನುವಾದ ಕಾರ್ಯ ಸಾಹಿತ್ಯ ಭಾಗದಲ್ಲಿ ಸ್ವಲ್ಪ ನಡೆಯಬೇಕು. ಆದರೆ ಶಾಸ್ತ್ರ ಭಾಗದಲ್ಲಿ ಏನೇನೂ ಆಗಲಿಲ್ಲ."
ಎನ್ನುವುದು ಪ್ರೊ ಜಿ ವೆಂಕಟಸುಬ್ಬಯ್ಯನವರ ಅಭಿಪ್ರಾಯ. (ವಿಕ, 17.08.2009) ಆದರೆ ಈ ಶಾಸ್ತ್ರಭಾಗದಲ್ಲಿ ಸಮಕಾಲೀನ ಕನ್ನಡ ಜನತೆಗೆ ಆಧುನಿಕ ಪ್ರಜಾಪ್ರಭುತ್ವದ ಮೌಲ್ಯಗಳು, ಭಾರತದ ಸಂವಿಧಾನದ ಮೌಲ್ಯಗಳು ಹೇಗೆ ಗಟ್ಟಿಯಾಗಲು ಸಾಧ್ಯ ಎನ್ನುವುದನ್ನು ಹೇಳುವುದಿಲ್ಲ. ನಾವಿರುವುದು ವೇದಗಳು ಮತ್ತು ಸ್ಮೃತಿಗಳು ಬರೆದ ಊಳಿಗಮಾನ್ಯ ಪದ್ಧತಿಯ ಕಾಲವಲ್ಲ. ಆಗ ಶೋಷಣೆಯೆ ನಮ್ಮ ಸಂಸ್ಕೃತಿಯಾಗಿತ್ತು.
“ಜ್ಞಾನಾರ್ಜನೆ ಪ್ರಸ್ತುತ ಕಾಲದ ಲಾಭ ದೃಷ್ಟಿಯಿಂದ ಮಾತ್ರವೇ ಮಾಡುವಂಥದಲ್ಲ. ಸಂಸ್ಕೃತದಂಥ ವಿಶ್ವಮರ್ಯಾದಿತ ಪ್ರಾಚೀನ ಭಾಷೆ ಮತ್ತು ಅದರ ಮೂಲಕ ಸೃಷ್ಟಿಯಾದ ಜ್ಞಾನ ಈ ದೇಶದ ಅಮೂಲ್ಯ ಆಸ್ತಿ.”
ಎನ್ನುವ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು (ವಿಕ, 25.08.2009) ಈ ಸ್ಮೃತಿಗಳು ಸೃಷ್ಟಿಸಿದ ಕ್ರೂರ ಅಮಾನವೀಯ ಭಯಾನಕ “ಶಾಸ್ತ್ರಭಾಗ”ದ ವ್ಯವಸ್ಥೆಯನ್ನು ನಮ್ಮ “ಆಸ್ತಿ” ಎಂದು 21ನೇ ಶತಮಾನದಲ್ಲಿ ಹೇಳುವುದಾದರೆ, ವಿಶ್ವವಿದ್ಯಾಲಯವನ್ನು ಇವರು ಏತಕ್ಕಾಗಿ ಬಯಸುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಇದನ್ನು ಮುಂದೆ ಮತ್ತೆ ಚರ್ಚಿಸುತ್ತೇನೆ.

ಈ “ಅಮೂಲ್ಯ ಆಸ್ತಿ”ಯನ್ನು ಓದಿದವರಿಗೆ ಭಾರತದ 90% ಜನಜೀವನದ ಚಿತ್ರ ಸಿಗುವುದೇ ಇಲ್ಲ. ಬೆಸ್ತರು, ಗಾಣಿಗರು, ಕುಂಚಿಟಿಗರು, ಕುರುಬರು, ಬುಡುಬುಡುಕೆಯವರು, ಹೊಲೆಯ, ಮಾದಿಗ, ಚಂಡಾಲ ಎನಿಸಿಕೊಂಡ ದಲಿತರು ಇತ್ಯಾದಿ ಜನರ ಬದುಕಿನ ದುರಂತದ ಚಿತ್ರ ಯಾವ ಸಂಸ್ಕೃತ ಕೃತಿಯಲ್ಲಿ ರೂಪಿತವಾಗಿದೆ ಎನ್ನುವುದನ್ನು ಭಟ್ಟರು ತೋರಿಸ ಬಲ್ಲರೆ? ಆದರೂ ಅದು ಅವರಿಗೆ “ಅಮೂಲ್ಯ ಆಸ್ತಿ”! ಇದು ಪ್ರತಿಗಾಮಿ ಧೋರಣೆ. ಕೇಂದ್ರದಲ್ಲಿ ಬಿಜೆಪಿ ನಾಯಕತ್ವದಲ್ಲಿ ಆಡಳಿತದಲ್ಲಿದ್ದ ಎನ್‌ಡಿಎ ಸರ್ಕಾರ ಸಹ ಎನ್‌ಸಿಇಆರ್‌ಟಿಯ ಮೂಲಕ ಸಂಸ್ಕೃತ ಕಲಿಕೆಯನ್ನು ಎಲ್ಲ ಶಾಲೆಗಳಲ್ಲಿ ಕಡ್ಡಾಯ ಮಾಡಬೇಕೆಂದು ಯೋಚನೆ ಮಾಡಿತ್ತು. ಈ ವೇದ ಉಪನಿಷತ್ತುಗಳಲ್ಲಿರುವ ಅಥವಾ ಮಹಾಕಾವ್ಯಗಳಲ್ಲಿರುವ ಹಲವಾರು ಸತ್ಯಗಳನ್ನು ಇವರ ಚರಿತ್ರೆ ಪುಸ್ತಕಗಳಲ್ಲಿ ತಿರುಚಿ ಬರೆಯಲಾಯಿತು ಎನ್ನುವುದನ್ನು ಮರೆಯಲು ಸಾಧ್ಯವೇ? ಸಂಸ್ಕೃತ ವೇದ ವಿಶ್ವ ವಿದ್ಯಾಲಯದಲ್ಲಿ ಹೀಗಾಗುವುದಿಲ್ಲ ಎನ್ನುವುದಕ್ಕೆ ಯಾವ ಭರವಸೆ ಇದೆ?

ಹೀಗಿದ್ದರೂ ಡಾ ಬಿ ವಿ ಕುಮಾರ ಸ್ವಾಮಿಯವರ (ವಿಕ, 22.08.2009) ಅನಿಸಿಕೆ :
“ಈ ಭಾಷೆಯಲಿ ರಚಿತವಾಗಿರುವ ಸಾಹಿತ್ಯಗಳು ಭಾರತದ ಇತಿಹಾಸದಲ್ಲಿ ಮಾನವ ಬೌದ್ದಿಕ ಸುವರ್ಣಯುಗವನ್ನು ಸೃಷ್ಟಿಸಿದವು ಎನ್ನುವುದು ಜಗತ್ತೇ ತಿಳಿದಿರುವ ವಿಷಯ. ಈ ಸಂಸ್ಕೃತ ‘ರಸಸಾರ’ದಿಂದ ವಂಚಿತರಾಗಿರುವ ಜನರ ಇಂದಿನ ಸಮಾಜ ಸೃಷ್ಟಿಯೇ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಚಿಂತಕರ-ಶಿಕ್ಷಣ ತಜ್ಞರ ಗುರಿಯಾಗಿತ್ತು.”
ನಿಜವಿರಬಹುದು. ಆದರೆ ಈ ‘ರಸಸಾರ’ವನ್ನು ಭಾರತದ ಶೇಕಡ ಎಷ್ಟು ಜನ ವಿದ್ಯಾರ್ಥಿಗಳಿಗೆ ಇವರು ಉಣಬಡಿಸಿದರು ಎನ್ನುವುದು ಮುಖ್ಯವಲ್ಲವೆ? ತಮ್ಮ ಜನಗಳನ್ನು ತಾವೇ ಪ್ರಾಣಿಗಳಂತೆ ನಡೆಸಿಕೊಂಡ ಇವರು ಬ್ರಿಟಿಷರನ್ನು ದೋಷಿಗಳನ್ನಾಗಿ ಮಾಡುವ ಅವಶ್ಯಕತೆ ಏನು? ಇವರ ಇನ್ನೊಂದು ವಾಕ್ಯ...
“ಮೌರ್ಯ ಸಾಮ್ರಾಜ್ಯದಲ್ಲಿ ನಳಂದ, ವಿಶ್ವವಿದ್ಯಾಲಯ ಸ್ಥಾಪಿಸಿ ಜಗತ್ತನ್ನೇ ಆಕರ್ಶೀಸಿತಂತೆ..”
ಅದೂ ನಿಜವೆ. ಆದರೆ ಈ ವಿಶ್ವವಿದ್ಯಾಲಯಕ್ಕೆ ಪ್ರವೇಶ ಕೋರಿ ಬರುತ್ತಿದ್ದ 10 ಜನರಲ್ಲಿ 8 ಜನ ವಿದ್ಯಾರ್ಥಿಗಳನ್ನು ದ್ವಾರ ಪಂಡಿತರುಗಳು ಪ್ರವೇಶವೇ ಕೊಡದಂತೆ ಅಲ್ಲಿಂದಲೇ ಹಿಂದಕ್ಕೆ ಕಳುಹಿಸುತ್ತಿದ್ದರಂತೆ! ಹೀಗೆ ಹಿಂದಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗಳು ಯಾರು? ಈ ಬಗ್ಗೆ ಸಂಶೋಧನೆ ನಡೆದಿದೆಯೆ? 3೦೦೦-4೦೦೦ ವರ್ಷಗಳಿಂದ ಭಾರತದ ಎಲ್ಲ ಮಕ್ಕಳಿಗೂ ಈ ‘ರಸಸಾರ’ ಸಿಕ್ಕಿದ್ದರೆ, ಈ ದಿನ 2೦ ಮಿಲಿಯನ್ ಮಕ್ಕಳು ಬೀದಿಯಲ್ಲಿರುತ್ತಿರಲಿಲ್ಲ; ಅಂಬೇಡ್ಕರ್ ಅವರು ಮೀಸಲು ಕೇಳುತ್ತಿರಲಿಲ್ಲ; ಮಂಡಲ್ ಉದಯವಾಗುತ್ತಿರಲಿಲ್ಲ. ಈ ಜನ ಸಂಸ್ಕೃತ ವಿವಿಗೆ ಹೇಗೆ ಬೆಂಬಲಕೊಡುತ್ತಾರೆ? ಯಾವ ಕಾರಣಕ್ಕಾಗಿ ಕೊಡಬೇಕು? ಇದುವರೆಗೂ ಇಲ್ಲದ ಸಂಸ್ಕೃತ ವೇದ ವಿಶ್ವ ವಿದ್ಯಾಲಯದ ಪ್ರಸ್ತಾವನೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗಲೇ ಏಕೆ ಆಗುತ್ತದೆ? ಲಕ್ಷ್ಮೀನಾರಾಯಣ ಭಟ್ಟರು, ಸತ್ಯನಾರಾಯಣ ಭಟ್ಟರು, ಕೊಕ್ಕಡ ವೆಂಕಟರಮಣ ಭಟ್, ಎಲ್ ಶೇಷಗಿರಿ ರಾವ್ ಅವರು, ಎಂ ಚಿದಾನಂದ ಮೂರ್ತಿಯವರು, ಭೈರಪ್ಪನವರು ಏಕೆ ಈ ಸಮಯದಲ್ಲೇ ಸಂಸ್ಕೃತ ವಿವಿಗೆ ಬೆಂಬಲ ಕೊಟ್ಟು ದ್ವನಿ ಎತ್ತಿದ್ದಾರೆ ಎನ್ನುವುದು ಅತ್ಯಂತ ಗಮನಾರ್ಹ.

ಭಾರತದಲ್ಲಿ ಈಗ 12 ಸಂಸ್ಕೃತ ವಿವಿಗಳಿವೆ. ಅವುಗಳಲ್ಲಿ ನಡೆಯುತ್ತಿರುವ ಸಂಶೋಧನೆ ಕಾರ್ಯಕ್ರಮಗಳನ್ನು ಬಲಪಡಿಸಲಿ. ನಮ್ಮ ವಿವಿಗಳಲ್ಲಿರುವ ಸಂಸ್ಕೃತದ ವಿಭಾಗಗಳಿಗೆ ಮತ್ತು ಮೈಸೂರಿನ ‘ಸಂಸ್ಕೃತ ಪಾಠಶಾಲೆ’, ಶೃಂಗೇರಿ ‘ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ’, ಉಡುಪಿ ‘ಪೂರ್ಣಪ್ರಜ್ಞ ವಿದ್ಯಾಪೀಠ’, ಬೆಂಗಳೂರಿನ ‘ಸಂಸ್ಕೃತ ಕಾಲೇಜು’, ಮೇಲುಕೋಟೆ ಇತ್ಯಾದಿ ಸಂಸ್ಥೆಗಳಿಗೆ ಹೆಚ್ಚು ವಿದ್ಯಾರ್ಥಿಗಳು ಬರುವಂತೆ ಆಧುನೀಕರಣಗೊಳಿಸಿ. ಅದರ ಪ್ರಾಚಾರ್ಯರು, ಪ್ರಾಧ್ಯಾಪಕರುಗಳಿಗೆ ಯುಜಿಸಿ ವೇತನಗಳನ್ನು ಕೊಡಿ. ಹೊಸ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಪ್ರೋತ್ಸಾಹವಾಗುವಂತೆ ಆರ್ಥಿಕ ನೆರವನ್ನು ಘೋಷಿಸಿ. ಆದರೆ ಸಂಸ್ಕೃತ ವಿಶ್ವವಿದ್ಯಾಲಯದ ಆವಶ್ಯಕತೆ ಈಗ ಇಲ್ಲ.

ಭೈರಪ್ಪನವರು ವಾದವಿವಾದಗಳನ್ನು ಕೊನೆಗಳಿಸುತ್ತ ‘ವಿವೇಕಯುಕ್ತ ಕೆಲಸವನ್ನು ಆರಂಭಿಸುವುದೇ ಒಳ್ಳೆಯದು’ (ವಿಕ, 06.09.2009) ಎನ್ನುವ ಲೇಖನದಲ್ಲಿ ಹಲವಾರು ವಿದ್ಯಾಂಸರು ಎತ್ತಿರುವ ಯಾವುದೇ ವಿರೋಧವನ್ನು ಎದುರಿಸದೆ ಸಿನಿಕತನದಲ್ಲಿ ಮತ್ತೆ ತಮ್ಮ ತೀರ್ಮಾನಗಳನ್ನು ಕೊಟ್ಟಿದ್ದಾರೆ. ಅಷ್ಟೇಅಲ್ಲ ಲೇಖನದಲ್ಲಿ ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆ. “ಬೇಡವೇ ಬೇಡವೆಂದೂ ಮೂವರು ವಾದಿಸಿದ್ದಾರೆ.” ಇವರ ಪ್ರಕಾರ ಇದು “ಅವರಲ್ಲಿ ನೂರಕ್ಕೆ ತೊಂಬತ್ತೈದು ಭಾಗ ಸಂಸ್ಕೃತ ವಿಶ್ವವಿದ್ಯಾಲಯವು ಬೇಕೆಬೇಕೆಂಬ ಅಭಿಪ್ರಾಯವುಳ್ಳವರಾಗಿದ್ದಾರೆ.” ವಿಜಯ ಕರ್ನಾಟಕದಲ್ಲಿ ಬಂದ ಲೇಖನಗಳಲ್ಲಿ 7 ಜನ ಬೇಡವೆಂದಿದ್ದಾರೆ, 15 ಜನ ಬೇಕೆಂದಿದ್ದಾರೆ (73%.) ಇದು “ಮೂವರು” ಹೇಗಾಯಿತು? ಮತ್ತು ಇದು “ನೂರಕ್ಕೆ ತೊಂಬತ್ತೈದು ಭಾಗ” ಹೇಗಾಯಿತು? ಮಾರ್ಕ್ಸ್‌ವಾದಿಗಳನ್ನು ಮತ್ತು ಪ್ರಗತಿಪರರನ್ನು ಮನಸೋಇಚ್ಚೆ ಪೂರ್ವಾಗ್ರಹ ಪೀಡನೆಯಿಂದ ತೆಗಳುವುದು ಬಿಟ್ಟರೆ ಈ ಲೇಖನದಲ್ಲೂ ಯಾವುದೇ ಹುರುಳಿಲ್ಲ. ತರ್ಕಕ್ಕೂ ತಮಗೂ ಇರುವ ದೂರವನ್ನು ಹಾಗೆ ಉಳಿಸಿಕೊಂಡಿದ್ದಾರೆ. ವೈದಿಕ ಧರ್ಮವನ್ನು ಒರಟು ಒರಟಾಗಿ ವೈಭವೀಕರಿಸುತ್ತಿರುವ ಇವರಿಗೆ ಸಂಸ್ಕೃತ ವಿಶ್ವವಿದ್ಯಾಲಯವು ಬೇಕು ಎನ್ನುವುದಕ್ಕೆ ಸಮರ್ಪಕವಾದ ವಾದವೊಂದನ್ನು ಮಂಡಿಸಲು ಸಾಧ್ಯವಾಗಿಲ್ಲ ಎನ್ನುವುದು ಆಶ್ಚರ್ಯವೇನಲ್ಲ. ಬೈರಪ್ಪನವರನ್ನು ಈ ಚರ್ಚೆಯಲ್ಲಿ ಪ್ರೈಮ್ ಮೂವರ್ ಆಗಿ ಬಳಸಿಕೊಳ್ಳಲಾಗಿದೆ ಆದರೆ ಇದಕ್ಕೆ ಇಲ್ಲಿ ಪ್ರೈಮ್ ಅಪೋಸರ್ ಇಲ್ಲ. ಇದರ ಪರಿಣಾಮ ಚರ್ಚೆಯ ಕೊನೆಯಲ್ಲಿ ತೀರ್ಮಾನ ಕೊಡುವ ಅಧಿಕಾರ ಭೈರಪ್ಪನವರದಾಗುತ್ತದೆ.
Related Posts with Thumbnails