ಇಗೋ! ಬೆಂಗಳೂರಿನ ಕೆಲವು ಒಳ್ಳೇ ಕನ್ನಡ ಶಾಲೆಗಳ ಪಟ್ಟಿ!!

ಕನ್ನಡ ಮಾಧ್ಯಮ ಒಳ್ಳೇದೋ ಇಂಗ್ಲಿಷ್ ಮಾಧ್ಯಮವೋ ಅಂತ ವಾದ ವಿವಾದ ನಡೀತಾ ಪಂಡಿತರು ಅದರಲ್ಲೇ ತೊಡಗಿರುವಾಗ ಅದೆಷ್ಟೊ ಜನ ಕನ್ನಡಿಗ್ರು ’ಅಲ್ಲಾ, ನಮ್ಮ ಮನೆ ಹತ್ರ ಒಳ್ಳೇ ಕನ್ನಡ ಮಾಧ್ಯಮ ಶಾಲೇನೆ ಇಲ್ಲವಲ್ಲಾ?’ ಅಂತ ’ಇದ್ದಿದ್ರೆ ನಮ್ ಮಕ್ಳುನ್ನ ಅಲ್ಲಿಗೇ ಸೇರುಸ್ತಿದ್ವಿ’ ಅನ್ನೋದನ್ನೂ ಕೇಳಿದೀವಿ. ಇಂಥಾ ಸಂದರ್ಭದಲ್ಲಿ ಏನ್ಗುರು ಓದುಗರೊಬ್ಬರು ಬೆಂಗಳೂರಿನಲ್ಲಿರುವ ಹತ್ತಾರು ಒಳ್ಳೆಯ ಕನ್ನಡ ಮಾಧ್ಯಮ ಶಾಲೆಗಳ ಪಟ್ಟೀನ ಕಳ್ಸಿದಾರೆ.
ಗುಣಮಟ್ಟದ ಕನ್ನಡ ಶಾಲೆಗಳು
ಈ ಶಾಲೆಗಳಲ್ಲಿ ಒಳ್ಳೆಯ ಬೋಧಕರು, ಆಟದ ಮೈದಾನಗಳಿದ್ದು ಗುಣಮಟ್ಟದ ಶಿಕ್ಷಣ, ಪಠ್ಯೇತರ ಚಟುವಟಿಕೆಗಳು ನಡೀತಾ ಇವೆ, ಇಲ್ಲಿನ ಮಕ್ಕಳಿಗೆ ಪ್ರತಿಭಾ ಕಾರಂಜಿ (ಸರ್ಕಾರ ನಡೆಸೋ ಅಂತರಶಾಲಾ ಸ್ಪರ್ಧೆಗಳು) ಯಲ್ಲಿ ಹೆಚ್ಚು ಹೆಚ್ಚು ಬಹುಮಾನ ಬರ್ತವೆ. ಈ ಶಾಲೆಗಳಲ್ಲಿ ಕಲಿತ ಅನೇಕರು ಇಂದು ಮಹನೀಯರಾಗಿದ್ದಾರೆ ಅಂತಾ ಹೇಳಿ ಅಂತಹ ಶಾಲೆಗಳ ಒಂದು ಪಟ್ಟಿ ಕಳ್ಸಿದಾರೆ.

ಕನ್ನಡ ಮಾಧ್ಯಮ ಶಾಲೆಗಳ ಹುಡುಕಾಟದಲ್ಲಿರೋ ತಾಯಿ-ತಂದೆಯರಿಗೆ ಅನುಕೂಲ ಆಗಲಿ ಅನ್ನೋ ಉದ್ದೇಶದಿಂದ ಅದುನ್ನ ಇಲ್ಲಿ ಕೊಡ್ತಿದೀವಿ. ಈ ಶಾಲೆಗಳಲ್ಲಿ ಯಾವುದನ್ನಾದ್ರೂ ನೀವು ಆರಿಸಿಕೊಂಡು, ಅಲ್ಲಿಗೆ ಭೇಟಿ ಕೊಟ್ಟು ಖುದ್ದಾಗಿ ಪರಿಶೀಲನೆ ಮಾಡಿ ನಿಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸಿ ಅನ್ನೋದು ಏನ್ ಗುರುವಿನ ಸಲಹೆ!

೦೧. ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ, ಬಸವನಗುಡಿ

೦೨. ಅಶೋಕ ಶಿಶುವಿಹಾರ, ಶಂಕರ ಪುರಂ

೦೩. ಭಾರತಿ ಸಂಸ್ಕೃತಿ ವಿದ್ಯಾಪೀಠ, ಚಾಮರಾಜಪೇಟೆ

೦೪. ಪಂಡಿತ್ ಜವಾಹರಲಾಲ್ ನೆಹರು ಸ್ಮಾರಕ ವಿದ್ಯಾಮಂದಿರ, ಚಾಮರಾಜ ಪೇಟೆ

೦೫. ಶ್ರೀನಿಧಿ ವಿದ್ಯಾಸಂಸ್ಥೆ, ಶ್ರೀನಗರ

೦೬. ಭಾರತ ಮಾತಾ ವಿದ್ಯಾ ಮಂದಿರ, ಹನುಮಂತನಗರ

೦೭. ಆಡನ್ ವಿದ್ಯಾಸಂಸ್ಥೆ, ಬನಶಂಕರಿ ಮೂರನೇ ಹಂತ

೦೮. ಸಹಕಾರಿ ವಿದ್ಯಾಸಂಸ್ಥೆ, ಪದ್ಮನಾಭನಗರ

೦೯. ಜ್ಞಾನಬೋಧಿನಿ ಶಾಲೆ, ಕೆಂಗೇರಿ ಉಪನಗರ

೧೦. ಬನಶಂಕರಿ ವಿದ್ಯಾಪೀಠ, ಕದಿರೇನಹಳ್ಳಿ
ಇನ್ನೊಂದು ಹತ್ತು ಶಾಲೆಗಳ ಪಟ್ಟೀನ ಮುಂದಿನ ಸಂಚಿಕೇಲೂ ಬರೀತೀವಿ. ಅಂದಹಾಗೆ ನಿಮ್ಮಲ್ಲೂ ಹಲವಾರು ಉತ್ತಮ ಕನ್ನಡ ಶಾಲೆಗಳ ಮಾಹಿತಿ ಇದ್ದಲ್ಲಿ ನಮಗೆ ಬರೆಯಿರಿ, ಏನ್ ಗುರು ಓದುಗರ ಜೊತೆ ಹಂಚಿಕೊಳ್ಳಿ... ಗುರುಗಳೇ!

ಕನ್ನಡದ ಗಡಿ ಮತ್ತು ಮಹಾಜನ್ ವರದಿ

"ಕಾವೇರಿಯಿಂದಮಾ ಗೋದಾವರಿವರೆಮಿರ್ದ..." ಅಂತ ತಾತನ ಕಾಲದಲ್ಲಿ ಕನ್ನಡನಾಡು ಅಲ್ಲೀತಂಕಾ ಹರಡಿತ್ತು, ಇಲ್ಲೀತಂಕಾ ಹರಡಿತ್ತು ಅಂತ ಹೆಮ್ಮೆ ಪಟ್ಕೊಂಡೇ ನಾವು ವ್ಯರ್ಥವಾಗಿ ಕಾಲಕಳೀತಾ ಇದೀವಾ ಅಂತ ಕನ್ನಡನಾಡಿನ ಗಡಿಗಳಲ್ಲಿ ಇವತ್ತಿನ ದಿನ ನಡೀತಿರೋ ಘಟನೆಗಳನ್ನು ನೋಡುದ್ರೆ ಅನ್ಸುತ್ತೆ ಗುರು!

ಗಡಿವಿವಾದ ಹುಟ್ಟಿಕೊಂಡದ್ದು!

ಸ್ವಾತಂತ್ರಕ್ಕೂ ಮೊದಲೇ ಹರಿದು ಹಂಚಿಹೋಗಿದ್ದ ಕರ್ನಾಟಕ ಒಂದಾಗಿದ್ದು ಸ್ವಾತಂತ್ರ ಬಂದು ಒಂಬತ್ತು ವರ್ಷಗಳಾದ ಮೇಲೇನೆ. ಇದೊಂಥರ ಹೊಸದಾಗಿ ಹುಟ್ಟಿಕೊಂಡ ರಾಜ್ಯವಾದ್ದರಿಂದ ನೆರೆಹೊರೆಯ ರಾಜ್ಯಗಳ ಆಳ್ವಿಕೆಯಲ್ಲಿದ್ದ ಕನ್ನಡ ಮಾತಾಡುವ ಪ್ರದೇಶಗಳನ್ನೆಲ್ಲಾ ಆಯಾ ಪ್ರದೇಶಗಳಿಂದ ಬಿಡುಗಡೆ ಮಾಡ್ಕೋಬೇಕಾದ ಪರಿಸ್ಥಿತಿ ಇತ್ತು. ಆಗಲೇ ತಮ್ಮ ನಾಡಿನ ಭಾಗವಾಗಿದ್ದ ಪ್ರದೇಶಗಳನ್ನು ಕನ್ನಡನಾಡಿಗೆ ಬಿಟ್ಟುಕೊಟ್ಟು ತಾವು ಚಿಕ್ಕವಾಗಲು ಯಾವ ನೆರೆಯವರೂ ಸಿದ್ಧವಿರಲಿಲ್ಲ. ಆ ಕಾರಣದಿಂದಲೇ ನ್ಯಾಯವಾಗಿ ಕನ್ನಡನೆಲವಾಗಿದ್ದ ಹೊಸೂರು, ಕೃಷ್ಣಗಿರಿ ತಮಿಳುನಾಡಿನಲ್ಲುಳಿದವು. ಅನಂತಪುರ, ರಾಮದುರ್ಗ, ಅದೋಣಿ, ಮಂತ್ರಾಲಯಗಳಂತಹ ಊರುಗಳು ಆಂಧ್ರದ ವಶದಲ್ಲಿ ಉಳಿದವು. ಕಾಸರಗೋಡು ಕೇರಳದ ಪಾಲಾಯಿತು. ಅಕ್ಕಲಕೋಟೆ, ಜತ್ತ, ಸೊಲ್ಲಾಪುರಗಳು ಮಹಾರಾಷ್ಟ್ರದಲ್ಲಿ ಉಳಿದವು. ಇದೇ ಹೊತ್ತಿನಲ್ಲಿ ಅವುಗಳಲ್ಲಿ ಕೆಲವು ರಾಜ್ಯಗಳು ಕರ್ನಾಟಕದ ಭಾಗವಾಗಿದ್ದ ಮತ್ತಷ್ಟು ಪ್ರದೇಶಗಳ ಮೇಲೆ ಹಕ್ಕು ಮಂಡಿಸತೊಡಗಿದವು. ಬೆಳಗಾವಿ ಜಿಲ್ಲೆ, ಬೀದರ್, ಕಾರವಾರ ಜಿಲ್ಲೆಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮಹಾರಾಷ್ಟ್ರ ಕೂಗೆಬ್ಬಿಸಿತು.

ಮಹಾಜನ್ ಸಮಿತಿ

ಇಂದಿರಾಗಾಂಧಿಯವರ ಮುಂದಾಳ್ತನದ ಅಂದಿನ ಕೇಂದ್ರಸರ್ಕಾರ ಸುಪ್ರಿಂಕೋರ್ಟಿನ ಮುಖ್ಯನ್ಯಾಯಮೂರ್ತಿಗಳಾಗಿ ನಿವೃತ್ತರಾಗಿದ್ದ ಶ್ರೀ. ಮೆಹರ್ ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಗಡಿ ವಿವಾದ ಕೊನೆಗೊಳಿಸಲು ಒಂದು ಸಮಿತಿಯನ್ನು ರಚಿಸಿತು. ಈ ಸಮಿತಿಯನ್ನು ರಚಿಸುವಂತೆ ಅಮರಣಾಂತ ಉಪವಾಸ ಸತ್ಯಾಗ್ರಹದ ಮೂಲಕ ಒತ್ತಾಯ ಹೇರಿದ್ದು ಮಹಾರಾಷ್ಟ್ರದ ನಾಯಕರಾದ ಸೇನಾಪತಿ ಬಾಪಟ್ ಅವರು. ಮಹಾಜನ್ ಸಮಿತಿಯಲ್ಲಿ ಇಬ್ಬರು ಕನ್ನಡಿಗರು, ಇಬ್ಬರು ಮರಾಠಿಗರು ಇದ್ದು ಸಮಿತಿ ಸಮತೋಲನದಿಂದ ಕೂಡಿತ್ತು. ಈ ಸಮಿತಿಯವರು ಗಡಿಭಾಗದ ಎಲ್ಲ ಊರುಗಳನ್ನು ಭೇಟಿ ಮಾಡಿ ಅಲ್ಲಿನ ಸಂಘ ಸಂಸ್ಥೆಗಳ, ಜನಸಾಮಾನ್ಯರ ಅಭಿಪ್ರಾಯವನ್ನು ಸಂಗ್ರಹಿಸಿದರು. ಒಟ್ಟು 2240 ಮನವಿಗಳನ್ನು ಸ್ವೀಕರಿಸಿಕೊಂಡ ಸಮಿತಿ ಮಹಾಜನ್ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು.

ಮಹಾಜನ್ ವರದಿ

ಹೀಗೆ ಸಲ್ಲಿಸಲಾದ ಮಹಾಜನ್ ವರದಿಯ ಸಾರ ಏನಪ್ಪಾ ಅಂದ್ರೆ, ಬೆಳಗಾವಿ ಕರ್ನಾಟಕದಲ್ಲಿ ಇರತಕ್ಕದ್ದು. ಜತ್ತ, ಅಕ್ಕಲಕೋಟೆ, ಸೊಲ್ಲಾಪುರವೂ ಸೇರಿದಂತೆ ಒಟ್ಟು 247 ಹಳ್ಳಿಗಳು ಕರ್ನಾಟಕಕ್ಕೆ ಸೇರತಕ್ಕದ್ದು. ಹಾಗೆಯೇ ಮಹಾರಾಷ್ಟ್ರಕ್ಕೆ ನಂದಗಡ, ನಿಪ್ಪಾಣಿ, ಖಾನಾಪುರ ಸೇರಿದಂತೆ 260 ಹಳ್ಳಿಗಳು ಸೇರತಕ್ಕದ್ದು. ಕಾಸರಗೋಡು ಕರ್ನಾಟಕಕ್ಕೆ ಬರತಕ್ಕದ್ದು.

ವರದಿಯನ್ನು ಒಪ್ಪಿದ್ದು! ಒಪ್ಪದ್ದು!!

ಕರ್ನಾಟಕಕ್ಕೆ ಮಹಾರಾಷ್ಟ್ರ ತಾನಾಗೆ ಒಪ್ಪಿ 260 ಹಳ್ಳಿಗಳನ್ನು ಕೊಡಕ್ಕೆ ಮುಂದಾಗಿತ್ತು ಆದ್ರೆ ಮಹಾಜನ್ ವರದಿ ಶಿಫಾರಸ್ಸು ಮಾಡಿದ್ದು 247 ಹಳ್ಳಿಗಳು ಮಾತ್ರಾ. ಇಂಥಾ ನಷ್ಟದ ಬಾಬತ್ತೇ ಇದ್ರೂ ಕರ್ನಾಟಕದೋರು ಮಹಾಜನ್ ವರದೀನ ಒಪ್ಪಿಕೊಂಡ್ರು. ಆದ್ರೆ ಕಾಸರಗೋಡು ಬಿಡಲಾರದೆ ಕೇರಳ ಈ ವರದಿಯನ್ನು ತಿರಸ್ಕರಿಸಿತು. ಮಹಾರಾಷ್ಟ್ರದಲ್ಲಿ ಈ ಸಮಿತಿ ನೇಮಕವಾದಾಗ ಇದ್ದ ಮುಖ್ಯಮಂತ್ರಿಗಳಾದ ಶ್ರೀ. ವಿ.ಪಿ.ನಾಯಕ್ ಅವ್ರು 1967ರ ನವೆಂಬರ್ 9 ರಂದು ಮಹಾಜನ್ ವರದಿ ಹೇಗೇ ಇದ್ದರೂ ಅದನ್ನು ಒಪ್ಪುವುದಾಗಿ ಸಾರ್ವಜನಿಕ ಹೇಳಿಕೆಯನ್ನೂ ಕೊಟ್ಟಿದ್ದರು. ಆದರೆ ವರದಿ ಸಲ್ಲಿಕೆಯಾದ ನಂತರ ಮಹಾರಾಷ್ಟ್ರ ಇದನ್ನು ತಿರಸ್ಕರಿಸಿತು. ನಲವತ್ತು ವರ್ಷಗಳ ನಂತರ ಇಂದಿಗೂ ಈ ವರದಿ ಜಾರಿಯಾಗಿಲ್ಲ. ಕರ್ನಾಟಕ ಸರ್ಕಾರ ಮಹಾಜನ್ ವರದಿ ಜಾರಿಯಾಗಬೇಕು ಅಥವಾ ಯಥಾಸ್ಥಿತಿ ಇರಬೇಕು ಅಂತಾ ಬಾಯಲ್ಲಿ ಹೇಳಿದರೂ ವರದಿ ಜಾರಿಗೆ ಒಮ್ಮನದಿಂದ ಪ್ರಯತ್ನ ಪಡ್ತಿರೋದು ಕಾಣ್ತಿಲ್ಲ ಗುರು!

ಮುಂದಾ!

ಆಕ್ರಮಣ ರಕ್ಷಣೆಯ ಉತ್ತಮ ತಂತ್ರ ಅನ್ನೋ ಹಾಗೇ ಕರ್ನಾಟಕ ಸರ್ಕಾರದೋರು ಮಹಾಜನ್ ವರದಿ ಜಾರಿಗೆ ಒತ್ತಾಯ ಮಾಡಬೇಕು. ಕಾಸರಗೋಡನ್ನು ಕರ್ನಾಟಕಕ್ಕೆ ಬಿಟ್ಟುಕೊಡುವಂತೆ ಕೇರಳವನ್ನು ಒತ್ತಾಯಿಸಬೇಕು. ಮಹಾರಾಷ್ಟ್ರದೋರು ಸುಪ್ರಿಂಕೋರ್ಟಿನಲ್ಲಿ 2006ರಲ್ಲಿ ಹಾಕಿರೋ ಮೊಕದ್ದಮೆಯನ್ನು ಸಮರ್ಥವಾಗಿ ಎದುರಿಸಬೇಕು. ಇದಕ್ಕೆ ಬೇಕಾಗಿರೋ ಸಿದ್ಧತೆಗಳನ್ನು, ವಕೀಲರ ತಂಡವನ್ನು, ಅವರು ಮಾಡೋ ವಾದಸರಣಿಯನ್ನೂ ಹತ್ತಿರದಿಂದ ಪರಾಮರ್ಶಿಸಲು ಸದನ ಸಮಿತಿ ಮಾಡಬೇಕು. ಸೊಲ್ಲಾಪುರ, ಅಕ್ಕಲಕೋಟೆ, ಜತ್ತ ಮೊದಲಾದ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಲು ಮುಂದಾಗಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಮಾಡಬೇಕಾದ ಕೆಲ್ಸ ಇನ್ನೊಂದಿದೆ...ಗುರು!

ಕನ್ನಡದ ಕೋಟೆ ಗಟ್ಟಿಯಾಗಬೇಕು!

ಇವತ್ತು ಯಾವ ಭಾಗಗಳು ಕರ್ನಾಟಕದ ಗಡಿಗಳಾಗಿವೆಯೋ ಆ ಊರು ಹಳ್ಳಿಗಳಲ್ಲಿ ಕನ್ನಡದ ಸಾರ್ವಭೌಮತ್ವ ಸ್ಥಾಪಿಸಬೇಕು. ಗಡಿನಾಡುಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ನಡೆಸುವುದು, ಶಾಲೆಗಳ ಗುಣಮಟ್ಟ ಹೆಚ್ಚಿಸುವುದು, ಕಾರ್ಖಾನೆಗಳನ್ನು ಸ್ಥಾಪಿಸುವುದು ಮತ್ತು ಅಲ್ಲಿ ನೇಮಕಮಾಡಿಕೊಳ್ಳುವಾಗ ಕನ್ನಡ ಪರೀಕ್ಷೆ ಪಾಸಾಗಬೇಕಾದ್ದು ಕಡ್ಡಾಯ ಮಾಡುವುದು, ಗಡಿ ಪ್ರದೇಶದ ಎಲ್ಲಾ ಕಛೇರಿಗಳಲ್ಲಿ ಕನ್ನಡದಲ್ಲಿ ಆಡಳಿತವನ್ನು ಖಾತ್ರಿ ಪಡಿಸಿಕೊಳ್ಳುವುದು... ಹೀಗೆ ಕನ್ನಡವನ್ನು ಗಟ್ಟಿಗೊಳಿಸುವ ಕೆಲಸಗಳನ್ನು ಮಾಡಬೇಕು ಗುರು! ಇಲ್ದಿದ್ರೆ ಕೋಲಾರದಲ್ಲಿ, ಬಳ್ಳಾರಿಯಲ್ಲಿ ತೆಲುಗೂ, ಚಾಮರಾಜನಗರದಲ್ಲಿ ತಮಿಳೂ, ಬೆಳಗಾವಿ, ಬೀದರ ಮುಂತಾದ ಕಡೆ ಮರಾಠಿಯೂ, ಕಾರವಾರದಲ್ಲಿ ಕೊಂಕಣಿಯೂ ಕೈಕಾಲು ಚಾಚುವುದನ್ನು ತಡೆಯಲು ಆಗುವುದಿಲ್ಲ! ನಾಳೆ ಅಲ್ಲಿ ಕನ್ನಡಿಗರು ಇಲ್ಲ, ನಾವೇ ಬಹುಸಂಖ್ಯಾತರು.. ಆದ್ರಿಂದ ಪಕ್ಕದ ರಾಜ್ಯಕ್ ಸೇರ್ಕೋತೀವಿ ಅನ್ನೋ ಒಡಕು ದನಿಗಳನ್ನು ತಡ್ಯೋದು ಅಸಾಧ್ಯವಾದೀತು!

ನಮ್ಮೂರ ವ್ಯವಸ್ಥೆ ಇರಬೇಕಾದ್ದು ಯಾರಿಗಾಗಿ?

ಮೊನ್ನೆಮೊನ್ನೆಯಿಂದ ನಮ್ಮ ಎಂಕ ಕೈಯ್ಯಲ್ಲಿ ಎರಡು ಫೋಟೋ ಇಟ್ಕೊಂಡು ಎದ್ರುಗೆ ಸಿಕ್ಕವ್ರನ್ನೆಲ್ಲಾ ತಡ್ದು ತಡ್ದು ಅವರ ಮುಖಕ್ಕೆ ಈ ಎರಡನ್ನೂ ಹಿಡೀತಾ ಇದಾನೆ! ಇದ್ಯಾಕ್ರಣ್ಣ ನಮ್ಮೂರಲ್ಲಿ ಇಂಗೈತೆ? ಅಂತಾ ಕೇಳ್ತಾ ಇದಾನೆ. ನೀವಾದ್ರೂ ಎಂಕಂಗೆ ಉತ್ತರ ಹೇಳ್ತೀರಾ ಸ್ವಲ್ಪ ನೋಡಿ!

ಇದು ಮೊದಲನೇದು ಬೆಂಗಳೂರಿನಲ್ಲಿ ಪೊಲೀಸರು ಜಾರಿಗೆ ತಂದಿರೋ ಆಟೋಚಾಲಕರ ಕಡ್ಡಾಯ ಗುರುತಿನದು. ನಮ್ಮ ಈ ಫಲಕ 100% ಇಂಗ್ಲಿಷಿನಲ್ಲಿದೆ. ಹಾಗೇ ಇರಬೇಕು ಅನ್ನೋದು ನಿಯಮ. ನಮ್ಮೂರಿಗೆ ಬಂದಿರೋ ಪರಭಾಷಿಕರಿಗೆ ಮಾಹಿತಿ ಅರ್ಥ ಆಗಬೇಕು ಅನ್ನೋದು ಇದರ ಉದ್ದೇಶವಂತೆ.



ಈ ಇನ್ನೊಂದು ಫೋಟೋ ಜಪಾನ್ ದೇಶದ್ದು. ಇದರಲ್ಲಿರೋ ಮಾಹಿತಿ ಪೂರ್ತಿ ಜಪಾನಿ ಭಾಷೇಲಿದೆ. ಅಂಕೆಗಳನ್ನು ಬಿಟ್ಟರೆ ಪ್ರವಾಸಿಗರಿಗೆ ಅರ್ಥವಾಗೋ ಅಂಥದ್ದು ಇದರಲ್ಲಿ ಏನೇನೂ ಇಲ್ಲ. ಅಂತರರಾಷ್ಟ್ರೀಯ ವಿಶ್ವಪರಂಪರೆಯ ತಾಣದಲ್ಲಿ ಒಂದಾದ ನಗರದಲ್ಲೇ ಇಂಥಾ ವ್ಯವಸ್ಥೆ ಇದೆ ಅಂದ್ರೆ ನಂಬಲೇ ಬೇಕು ಗುರು!



ಈ ಜಪಾನಿ ಭಾಷೇಲಿರೋ ಫೋಟೋ ಜಪಾನಿನ ಕ್ಯೋತೋ ಅನ್ನೋ ಊರಿನದು. ಈ ಊರು ಜಪಾನಿನ ಸಂಸ್ಕೃತಿಯನ್ನು ಪ್ರತಿಬಿಂಬಿಸೋ ಅಲ್ಲಿನ ಇತಿಹಾಸಾನ ಸಾರೋ ಒಂದು ಪ್ರವಾಸಿ ತಾಣ. ಈ ಜಾಗಕ್ಕೆ ಜಪಾನ್ ದೇಶಕ್ಕೆ ಪ್ರವಾಸ ಬಂದೋರೆಲ್ಲಾ ಬಂದೇ ಬರ್ತಾರೆ ಗುರು. ಇಂಥಾ ಪ್ರವಾಸಿ ತಾಣದಲ್ಲಿ ಕಣ್ಣಿಗೆ ಕಾಣೋದು ಜಪಾನಿ ಸಂಸ್ಕೃತಿ, ಆಚರಣೆ, ವೇಷಭೂಷಣ ಮತ್ತು ಮುಖ್ಯವಾಗಿ ಜಪಾನಿ ನುಡಿ.

ನಮ್ಮೂರ ವ್ಯವಸ್ಥೆ ಯಾರಿಗಾಗಿ ಇರಬೇಕು?

ಈಗ ನೀವೇ ಹೇಳಿ ಗುರುಗಳೇ? ಕರ್ನಾಟಕದಲ್ಲಿ ಬರೀ ಕನ್ನಡ ಮಾತ್ರಾ ಗೊತ್ತಿದ್ದವರು ಏನು ಮಾಡಬೇಕು? ಕರ್ನಾಟಕ ಅನ್ನೋದು ಕನ್ನಡದವರ ತವರುನೆಲ ತಾನೇ? ಇಲ್ಲಿರೋ ಯಾವ ಅಂಗಡಿ, ಮುಂಗಟ್ಟೆ, ರೈಲು ನಿಲ್ದಾಣ, ಬಸ್ ನಿಲ್ದಾಣ, ಬೋರ್ಡು, ಮಾಹಿತಿ, ಸೂಚನೆಗಳೆಲ್ಲಾ ಮೊದಲಿಗೆ ಈ ನೆಲದ ಜನಗಳ ಅಗತ್ಯ ಪೂರೈಸಬೇಕು ಮತ್ತು ಅವರಿಗಾಗಿ ಇರಬೇಕು ಅನ್ನೋದು ತಪ್ಪಾ? ಹಾಗಾದ್ರೆ ಇದನ್ನೆಲ್ಲಾ ಮಾಡಬೇಕಾದ್ದು ನಮ್ಮ ಕರ್ನಾಟಕ ಸರ್ಕಾರದ ಮೊದಲನೆ ಕೆಲಸ ಅಲ್ವಾ? ವಲಸಿಗರಿಗಾಗೇ ನಮ್ಮೂರಿನ ವ್ಯವಸ್ಥೆ ಕಟ್ಟೋದು ಮೂರ್ಖತನಾ ಅಲ್ವಾ? ಈ ಮೂರ್ಖತನಾನ ನಮ್ಮ ಸರ್ಕಾರಗಳು, ಇಲಾಖೆಗಳು ಎಂದಾದ್ರೂ ಕೈಬಿಟ್ಟಾವಾ ಗುರು? ಕನ್ನಡದವರೇ ಕನ್ನಡನಾಡಲ್ಲಿ ಅನಾಥರಂತೆ ಬದುಕಬೇಕಾ? ಕನ್ನಡದವರನ್ನು ಕಡೆಗಣಿಸಿ ಕಟ್ಟೋ ವ್ಯವಸ್ಥೆ ಎಂದಾದ್ರೂ ರಿಪೇರಿ ಆಗುತ್ತಾ? ನೋಡುದ್ರಾ ಗುರುಗಳೇ? ಎಂಕ ತೋರಿಸಿದ ಎರಡು ಫೋಟೋ ಹಿಂದೆ ಎಷ್ಟೊಂದು ಪ್ರಶ್ನೆಗಳಿವೆ...

ಚಿಕ್ಕತಿರುಪತಿ : ಏಳುಕೊಂಡಲವಾಡ ಗೋವಿಂದಾ ಗೋವಿಂದ!

ಕರ್ನಾಟಕ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಮಂತ್ರಿಗಳಾದ ಶ್ರೀ ಶ್ರೀ ಶ್ರೀ ಕೃಷ್ಣಯ್ಯಶೆಟ್ಟಿಗಾರು ಮೊನ್ನೆ ಒಂದು ಭರವಸೇನಾ ತಿರುಪತಿ ತಿರುಮಲ ದೇವಸ್ಥಾನಮು ಟ್ರಸ್ಟಿಗೆ ಕೊಟ್ಟಿದಾರೆ ಅಂತಾ 2009ರ ಜನವರಿ 19ರ ದಟ್ಸ್ ಕನ್ನಡದಲ್ಲಿ ವರದಿಯಾಗಿದೆ ಗುರು!

ಮಂತ್ರಿಗಳ ಕನಸಲ್ಲಿ ಕಂಡ ತಿಮ್ಮಪ್ಪ!
ಕನ್ನಡರಾಜ್ಯ ರಮಾರಮಣ ಶ್ರೀ ಕೃಷ್ಣದೇವರಾಯನ ಕುಲದೈವವಾದ ತಿರುಪತಿ ತಿಮ್ಮಪ್ಪನು ಶ್ರೀ ಶ್ರೀ ಶ್ರೀ ಕೃಷ್ಣಯ್ಯಶೆಟ್ಟಿಯವರ ಕನಸಿನಲ್ಲಿ ಕಾಣಿಸಿಕೊಂಡು "ಭಕ್ತೋತ್ತಮಾ, ಈ ಕನ್ನಡದ ಬಡ್ಡಿಮಕ್ಕಳಿಗೆಲ್ಲಾ ನನ್ನನ್ನು ಪೂಜೆ ಮಾಡಕ್ ಬರಾಕಿಲ್ಲ. ಇವ್ರುಗಳಿಗೆ ನನ್ನ ದೇವಸ್ಥಾನಾನ್ನ ಲಾಭದಾಯಕವಾಗಿ ನಡ್ಸಕ್ ಬರಾಕಿಲ್ಲ, ಇದಕ್ಕೆಲ್ಲಾ ಏನಿದ್ರೂ ತೆಲುಗ್ರೇ ಸರಿ... ಇವ್ರು ಈ ರೀತಿ ನಡ್ಸುದ್ರೆ ಕುಬೇರನ ಹತ್ರ ನಾ ತೊಗೊಂಡಿರೋ ಸಾಲಾ ತೀರ್ಸದು ಎಂಗೆ? ನಿಮ್ಮ ಸರ್ಕಾರಾನ್ನ ತೆಲುಗ್ರುಗೆ ಒತ್ತೆ ಇಟ್ಟಂಗೇ, ಕರ್ನಾಟಕದ ಗಣಿಗಳನ್ನು, ಬೆಂಗಳೂರಿನ ರಿಯಲ್ ಎಸ್ಟೇಟನ್ನೂ ಆಂಧ್ರದವರಿಗೆ ಬಿಟ್ಟುಕೊಟ್ಟಂಗೆ ಕರ್ನಾಟಕದ ದೇವಸ್ಥಾನಗಳ ಆಡಳಿತವನ್ನೂ ಬಿಟ್ಟುಕೊಡಿ" ಅಂದ ಅನ್ಸುತ್ತೆ!

ಮಂತ್ರಿವರ್ಯರೇ, ನಿಮ್ಮ ಕಣ್ಣಿಗೆ ಬರೀ ಮಾಲೂರಿನ ಚಿಕ್ಕತಿರುಪತಿ ಮಾತ್ರಾ ಯಾಕೆ ಬಿತ್ತು? ಬೆಂಗಳೂರಿನ ದೇವಗಿರಿ, ಅರಸೀಕೆರೆಯ ಮಾಲೆಕಲ್ಲು, ಮೈಸೂರಿನ ಒಂಟಿಕೊಪ್ಪಲ್ಲು... ಹೀಗೆ ಕರ್ನಾಟಕದ ಉದ್ದಗಲಕ್ಕೂ ಇರೋ ವೆಂಕಟೇಶ್ವರ ಸ್ವಾಮಿ ದೇವಸ್ಥಾನಗಳನ್ನೂ ಈ ಪಟ್ಟಿಯಲ್ಲಿ ಸೇರಿಸಿಬಿಡಿ!! ನೀವೇನಂತೀರಾ ಗುರುಗಳೇ?

ಕನ್ನಡದವರನ್ನು ಒಡೆಯೋ ಮರಾಠಿ ತಂತ್ರ!

ಬೆಳಗಾವೀಲಿ ಕಳಕೊಂಡಿರೋ ನೆಲೇನ ಹೆಂಗಾದ್ರೂ ಪಡ್ಕೊಬೇಕು ಅಂತಾ ದಿಕ್ಕೆಟ್ಟಂಗೆ ಆಡ್ತಿರೋ ಎಂ.ಇ.ಎಸ್ಸು ಮಹಾಮೇಳಾವ ಮಾಡಕ್ ಹೋಗಿದ್ದೂ, ಅದಕ್ಕೆ ಅವಕಾಶ ಸಿಗದೇ ಇದ್ರೂ ಮಾಡೇ ಮಾಡ್ತೀವಿ ಅಂತ ಭಾರೀ ಸಂಖ್ಯೆಯಲ್ಲಿ ತಂಡಗಳಾಗಿ ಲೆಲೆ ಮೈದಾನಕ್ಕೆ ನುಗ್ಗಲು ಹೋಗಿ ಬಂಧನಕ್ಕೆ ಒಳಗಾಗಿದ್ದೂ (ಒಂದುನೂರಾ ಐವತ್ಮೂರು ಜನ ಅಂತಿದೆ 16.01.2009ರ ವಿಜಯಕರ್ನಾಟಕದ ವರದಿ) ಆಗ್ತಿದ್ದಂಗೇ ಇನ್ನೊಂದೆರಡು ಹಳೇ ವರಾತಾನ್ನೇ ಹೊಸದಾಗಿ ತೆಗ್ಯಕ್ಕೆ ಶುರು ಹಚ್ಕೊಂಡವ್ರೆ.

ಮೊದಲನೆ ವರಾತ : "ಕರ್ನಾಟಕದಲ್ಲಿ ಮರಾಠಿಗರ ಮೇಲೆ ದೌರ್ಜನ್ಯ"

ಇದು ಕನ್ನಡದೋರನ್ನು ಇಡೀ ಪ್ರಪಂಚದ ಕಣ್ಣಲ್ಲಿ ಅಪರಾಧಿಗಳಾಗಿ ನಿಲ್ಲಿಸೋ ತಂತ್ರ! ಮಾನವ ಹಕ್ಕುಗಳ ಉಲ್ಲಂಘನೆ ಆಗ್ತಿದೆ, ಗಡಿ ನಾಡಿನ ಮರಾಠಿಗರ ಮೇಲೆ ದೌರ್ಜನ್ಯ ನಡೀತಿದೆ ಅಂತಾ ಸೂರು ಕಿತ್ತೋಗೋ ಹಾಗೆ ಕೀರಲೋದು ಇದರ ರೀತಿ. ಎಂ.ಇ.ಎಸ್ಸಿಗೆ ಈ ಕೆಲಸಕ್ಕೆ ಸಹಯೋಗಿ ’ಶಿವಸೇನೆ’ ಅನ್ನೋ ಸಿದ್ಧಾಂತದ ಸ್ಪಷ್ಟತೆ ಇಲ್ಲದ ಪಾರ್ಟಿ. ಪಾಪಾ! ಮರಾಠಿ ಮತ್ತು ಮರಾಠಿಗರ ಅಸ್ತಿತ್ವಕ್ಕೆ ಯಾವುದರಿಂದ ತೊಂದರೆಯಾಗ್ತಿದೆ? ಯಾವುದರ ವಿರುದ್ಧ ಹೋರಾಡಬೇಕು? ಯಾವುದರ ಪರ ಹೋರಾಡ್ಬೇಕು? ಅನ್ನೋದು ತಿಳೀದೆ ಗೊಂದಲದ ಗೂಡಾಗಿರೋ ಪಾರ್ಟಿ ಇದು. ಇದರ ಮುಖಂಡರಾಗಿರೋ ರಾಮದಾಸ್ ಕದಂ ಕನ್ನಡದವರ ಮೇಲೆ ಹಲ್ಲೆ ಮಾಡ್ತೀವಿ, ಅವರ ಹೋಟೆಲ್ ಸುಡ್ತೀವಿ ಅಂತಾ ಇಲ್ಲಿ ಬಂದು ಹೊಯ್ಕೊಂಡು ಹೋದ ಮಾರನೇ ದಿನಾನೆ ಕನ್ನಡನಾಡಿನ ಬಸ್ಸುಗಳನ್ನು ಸುಟ್ಟ ಘಟನೆ ನಡೆದಿದೆ. ಇಷ್ಟಕ್ಕೂ ಈ ಹೈಕ್ಳು ತಾವು ಹೇಳ್ತಿರೋ ಹಾಗೆ ಕರ್ನಾಟಕದಲ್ಲಿ ಯಾವ ಮರಾಠಿಗನ ಮೇಲೆ ದೌರ್ಜನ್ಯ ನಡೆದಿದೆ? ಯಾವ ಸಾಂವಿಧಾನಿಕ ಹಕ್ಕನ್ನು ಮರಾಠಿಗರಿಂದ ಕಸಿಯಲಾಗಿದೆ? ಅನ್ನೋದನ್ನು ಮಾತ್ರಾ ತೋರಿಸಿಕೊಡಲಾರರು. ಇದರ ಜೊತೆ ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಕಡ್ಕೋತೀವಿ ಅನ್ನೋ ಬೆದರಿಕೆ ಬೇರೆ. ಕರ್ನಾಟಕದ ಬಿಜೆಪಿ ಪ್ರತಿಕ್ರಿಯೆ ಏನೋ ಅನ್ನೋ ಕುತೂಹಲ ಇದ್ದೇಇದೆ. ಇದೇನು ’ಕೇಂದ್ರಕಛೇರಿಯಿಂದ ಆದೇಶ ಬಂತು, ಬೆಳಗಾವಿ ಮಹಾರಾಷ್ಟ್ರದಲ್ಲಿದ್ರೇನು? ಕರ್ನಾಟಕದಲ್ಲಿದ್ರೇನು? ಎರಡೂ ಭಾರತ ತಾನೇ?’ ಅಂತಾ ಮಹಾರಾಷ್ಟ್ರಕ್ಕೆ ಬಿಟ್ಕೊಡ್ತೀವಿ ಅನ್ನುತ್ತಾ? ಅಂತ ಕಾದು ನೋಡಬೇಕು.

"ರಾಷ್ಟ್ರೀಯ ಪಕ್ಷಗಳಿಂದ ನಮ್ಮ ನಾಡಿನ ಉದ್ಧಾರ ಸಾಧ್ಯಾ ಇಲ್ಲಾ, ಇವ್ರುಗಳು ಪ್ರಾದೇಶಿಕ ಪಕ್ಷಗಳನ್ನು ಬೆಳ್ಯಕ್ಕೆ ಬಿಡಲ್ಲಾ" ಅಂತಾ ಗೋಳಾಡ್ತಾ ನಮ್ದು ಪ್ರಾದೇಶಿಕ, ನಮ್ದು ಪ್ರಾದೇಶಿಕ ಅಂತಾ ಅವಕಾಶ ಸಿಕ್ಕಾಗೆಲ್ಲಾ ಹಾಡೋ ಜೆಡಿಎಸ್ಸಿನ ಕುಮಾರಣ್ಣೋರು, ನಾಡ ಹಿತಕ್ಕಿಂತ ಬಿಜೆಪಿನ ಹಣಿಯೋದೇ ಮುಖ್ಯ ಅದಕ್ ಇದೇ ಸಮಯ ಅಂತಾ ’ಎಂ.ಇ.ಎಸ್ ಮಹಾಮೇಳಾವಕ್ಕೆ ಅನುಮತಿ ಕೊಡದೇ ಇದ್ದಿದ್ದಕ್ಕೇ ಹೀಗಾಯ್ತು’ ಅಂತ ಬೂಸಿ ಬಿಡ್ತಿದಾರೆ. ಕರ್ನಾಟಕದಲ್ಲೇ ಕರ್ನಾಟಕ ಸರ್ಕಾರದ ಅಧಿವೇಶನಕ್ಕೇ ಸವಾಲು ಹಾಕಿ, ನಿಮ್ ನಾಡನ್ನು ಒಡೀತೀವಿ ಅನ್ನೋ ಸಮಾವೇಶಕ್ಕೆ ಅನುಮತಿ ಕೊಡಬೇಕು ಅನ್ನೋ ಇವರ ರಾಜಕೀಯ ಪ್ರಬುದ್ಧತೆಗೆ ಬಡ್ಕೋಬೇಕು. ಇಂಥಾ ಸಮಯದಲ್ಲೂ ಒಗ್ಗಟ್ಟಾಗಿ ಇರೋದ್ ಬಿಟ್ಟು ಅವರಿವರ ಕಾಲೆಳೆಯೋ ರಾಜಕೀಯದಾಟಕ್ಕೆ ಏನನ್ನಬೇಕು ಗುರು?

ಎರಡನೇ ವರಾತ : "ಇದು ಮರಾಠಾ ಬಾವುಟವಲ್ಲ! ಭಗವಾಧ್ವಜ ಅನ್ನೋದು"

ಇವ್ರು ಬೆಳಗಾವೀಲಿ ಎಂ.ಇ.ಎಸ್ ಸಮ್ಮೇಳನ ಆದ್ರೆ ಹಾರಿಸೋದು ಇದೇ ಬಾವುಟ! ಕಿತ್ತೂರು ರಾಣಿ ಚನ್ನಮ್ಮನ ಕೈಲಿದ್ದ ಕನ್ನಡ ಬಾವುಟಾನ ಕಿತ್ತು ಎಸೆದು ಚನ್ನಮ್ಮನ ಕೈಗೆ ಸಿಗ್ಸೋದೂ ಇದೇ ಬಾವುಟ! ಕನ್ನಡದೋರು ಹಳದಿ ಕೆಂಪು ಬಾವುಟ ಹಿಡಿದು ನಡೆದರೆ ಅವರ ಮೇಲೆ ಹೊಡದಾಟಕ್ಕೆ ಬಂದಾಗ ಹಿಡ್ಕೊಂಡು ಬರೋದು ಇದೇ ಬಾವುಟ! ಕನ್ನಡಿಗರ ಹೋಟೆಲ್ಲನ್ನು ಮಹಾರಾಷ್ಟ್ರದಲ್ಲಿ ಸುಡ್ತೀವಿ ಅಂತ ರಣಘೋಷ ಮಾಡೋವಾಗ ಕೈಲಿ ಹಿಡ್ಕೊಳ್ಳೋದೂ ಇದೇ ಬಾವುಟ!!! ಇದನ್ನು ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಹಾರಿಸಿದ್ದು ಕನ್ನಡಿಗರ ಮೇಲೆ ಮರಾಠಿಗರ ಮೇಲುಗೈಯ್ಯಿನ ಪ್ರತೀಕವಾಗಿಯೇ? ಈಗ ಈ ಬಾವುಟಾನ್ನ ಇಳಿಸಿ ಕನ್ನಡ ಬಾವುಟ ಹಾರುಸ್ತೀವಿ ಅಂದ್ರೆ ’ಇದು ಹಿಂದುತ್ವದ ಬಾವುಟ, ಮುಟ್ಟುದ್ರೆ ಕೈ ಕಡೀತೀವಿ’ ಅಂತಾ ಬಣ್ಣ ಬದ್ಲಾಯ್ಸಿ ಹೀಗೆ ಕೇಳೋರು ಎಂ.ಇ.ಎಸ್ ವಿರೋಧಿಗಳಲ್ಲಾ, ಹಿಂದುತ್ವದ ವಿರೋಧಿಗಳು ಅನ್ನೋ ಬಣ್ಣ ಕೊಡೋ ಕುತಂತ್ರ ಮಾಡ್ತಾರೆ.

ಈ ಕುತಂತ್ರವನ್ನು ಮಣೀಸಲೇ ಬೇಕು ಗುರು!

ಎಂ.ಇ.ಎಸ್ ಮತ್ತು ಶಿವಸೇನೆಯ ನಾಯಕರು ಬಳುಸ್ತಾ ಇರೋ ಈ ತಂತ್ರಗಳನ್ನು ಕರ್ನಾಟಕದೋರು ಸರಿಯಾಗಿ ಬಗ್ಗು ಬಡಿಯಲೇ ಬೇಕಾಗಿದೆ. ರಾಜ್ಯ ಬಿ.ಜೆ.ಪಿ ನಾಯಕ್ರು ಈ ವಿಷಯದಲ್ಲಿ ಕೇಂದ್ರದಿಂದ ಬರೋ ಸೂಚನೆಗಳನ್ನು ಪಾಲಿಸೋ ಮೊದಲು ತಾವು ಮೊದಲು ಕನ್ನಡಿಗರು ಅನ್ನೋದನ್ನು ನೆನಪಿಟ್ಟುಕೋ ಬೇಕಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮೈತ್ರಿಯಿಂದ 48 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯ ಅಂತಾ ಬಿ.ಜೆ.ಪಿ ಕೇಂದ್ರ ಕಛೇರಿಯೋರು 28 ಸ್ಥಾನ ಗಳಿಸಲು ಆಗೋ ಕರ್ನಾಟಕದ ಬಿಜೆಪಿಯೋರಿಗೆ ಸ್ವಲ್ಪ ತಗ್ಗಿ ಬಗ್ಗಿ ನಡೀರಿ ಅನ್ನದ ಹಾಗೆ ನೋಡ್ಕೊಳ್ಳೋದೂ ಇಲ್ಲಿ ನಾಯಕರ ಹೊಣೆಗಾರಿಕೆ ಗುರು! ಇದನ್ನು ನಮ್ಮ ಯಡ್ಯೂರಪ್ಪನವ್ರೂ, ಅನಂತಕುಮಾರ್ ಅವ್ರೂ ಅರಿತೇ ಇರ್ತಾರೆ ಅಂತ ನಂಬೋಣ. ಇನ್ನು ಕನ್ನಡಿಗರ ಮೇಲಿನ ಅಪಪ್ರಚಾರಕ್ಕೆ ಸೂಕ್ತವಾದ ಉತ್ತರವನ್ನು ನಾಡು ಕೊಡಬೇಕಾಗಿದೆ. ಇದೆಲ್ಲಾ ಬರೀ ಎಂ.ಇ.ಎಸ್ ಮತ್ತು ಶಿವಸೇನೆಗಳ ಕಿತಾಪತಿ ಅಂತಾ ಜಗತ್ತಿಗೆ ತೋರಿಸಿಕೊಡಬೇಕಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಹಾರ್ತಿರೋ ಬಾವುಟದ ಬಣ್ಣ ಯಾವುದೇ ಆಗಿರಲೀ ಅದನ್ನು ಅಲ್ಲಿ ನೆಟ್ಟಿರುವುದು ಆ ಜಾಗದ ಯಜಮಾನಿಕೆ ಮರಾಠಿಗರದ್ದು ಅಂತಾ ಸಾರಕ್ಕೆ ಅನ್ನೋದನ್ನು ಕನ್ನಡದ ಜನ ಅರಿಯಬೇಕಾಗಿದೆ ಗುರು!

ಕರ್ನಾಟಕ ರಕ್ಷಣಾ ವೇದಿಕೆಯ ಉದ್ಘೋಷ : "ಕರ್ನಾಟಕದಿಂದ ಭಾರತ"

2009ರ ಜನವರಿ 17 ಮತ್ತು 18ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿತ್ತು. ಈ ಸಮಾವೇಶದಲ್ಲಿ ನಾಡಿನ ಮೂಲೆಮೂಲೆಗಳಿಂದ ಕನ್ನಡಿಗರು ಬಂದು ಭಾಗವಹಿಸಿದ್ದು ಈ ಬಾರಿ ಹೊರನಾಡುಗಳಿಂದಲೂ ಕನ್ನಡಿಗರು ಬಂದಿದ್ದುದು ವಿಶೇಷವಾಗಿತ್ತು. ಈ ಸಮಾವೇಶದಲ್ಲಿ "ಉದ್ಯೋಗ ಮತ್ತು ಉದ್ಯಮಶೀಲತೆ" ಎನ್ನುವ ಒಂದು ವಿಚಾರ ಸಂಕಿರಣವೊಂದು ನಡೆಯಿತು. ಈ ವಿಚಾರ ಸಂಕಿರಣದಲ್ಲಿ ನಾಡಿನ ಏಳಿಗೆಯಲ್ಲಿ ಉದ್ದಿಮೆಗಾರಿಕೆಯ ಮಹತ್ವದ ಬಗ್ಗೆ ವಿಷಯಮಂಡನೆಯಾಯ್ತು.

ಕರ್ನಾಟಕದಿಂದ ಭಾರತ!

ಕನ್ನಡಿಗರ ಈ ದೊಡ್ಡ ಸಮಾವೇಶದ ಘೋಷವಾಕ್ಯ "ಕರ್ನಾಟಕದಿಂದ ಭಾರತ" ಎನ್ನುವುದಾಗಿದೆ.ಈ ಸಂದರ್ಭದಲ್ಲಿ ಹೊರತಂದಿರುವ ಕೈಪಿಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಕರ್ನಾಟಕದಿಂದ ಭಾರತ ಎನ್ನುವುದನ್ನು ಹೀಗೆ ಅರ್ಥೈಸುತ್ತದೆ.
ಪ್ರತಿಯೊಂದು ಪ್ರದೇಶಕ್ಕೂ ಇರುವ ಅನನ್ಯತೆಯನ್ನು ಕಾಪಾಡಿಕೊಂಡು, ಪ್ರತಿಪ್ರದೇಶವನ್ನೂ ಒಂದೇ ತೆರನಾಗಿ ಕಾಣುವ, ಪ್ರತಿರಾಜ್ಯದ ಏಳಿಗೆಗೂ ಪೂರಕವಾಗುವ ವ್ಯವಸ್ಥೆಗಳನ್ನು ಹೊಂದಿದ ಭಾರತ ನಮ್ಮ ಕನಸು. ಇಂತಹ ಭಾರತದಲ್ಲಿಯೇ ಕರ್ನಾಟಕ ಬಲಿಷ್ಟವಾಗುವುದು. ಇಂತಹ ಬಲಿಷ್ಟ ಕರ್ನಾಟಕ, ಬಲಿಷ್ಟ ತಮಿಳುನಾಡು, ಬಲಿಷ್ಟ ಮಹಾರಾಷ್ಟ್ರ... ಹೀಗೆ ಪ್ರತಿಯೊಂದು ರಾಜ್ಯವೂ ಬಲಿಷ್ಟವಾಗುವುದರಿಂದಲೇ ಭಾರತ ಬಲಿಷ್ಟವಾಗಲು ಸಾಧ್ಯ. ಆ ಕಾರಣದಿಂದಲೇ ಈ ಸಮಾವೇಶಕ್ಕೆ "ಕರ್ನಾಟಕದಿಂದ ಭಾರತ" ಎನ್ನುವ ಘೋಷವಾಕ್ಯವನ್ನು ನೀಡಲಾಗಿದೆ.
ಕರ್ನಾಟಕ ರಾಜ್ಯವನ್ನು ಭಾರತ ಒಕ್ಕೂಟದಲ್ಲಿ ನಡೆಸಿಕೊಳ್ಳಲಾಗುತ್ತಿರುವ ಬಗೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವ ಈ ಕೈಪಿಡಿಯಲ್ಲಿ ಸಮಾನ ಗೌರವದ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಿಗರ ಏಳಿಗೆ ಸಾಧ್ಯ ಎಂಬುದನ್ನು ಪ್ರತಿಪಾದಿಸಲಾಗಿದೆ. ಹಿಂದಿ ಹೇರಿಕೆ ತಡೆ, ಅನಿಯಂತ್ರಿತ ವಲಸೆ ನಿಯಂತ್ರಣ ಕಾಯ್ದೆ, ರಾಷ್ಟ್ರೀಯ ಜಲನೀತಿ... ಮುಂತಾದವುಗಳ ಅಗತ್ಯದ ಬಗ್ಗೆ ವಿವರಿಸಲಾಗಿದೆ.

ಕರ್ನಾಟಕದ ಏಳಿಗೆಯ ಕನಸಿನೊಂದಿಗೆ ಹೀಗೆ ಸಾವಿರಾರು ಕನ್ನಡಿಗರು ಒಂದೆಡೆ ಸೇರಿ ನಾಡು ಕಟ್ಟುವ ಪಣ ತೊಡುವುದು ನಾಡಿನ ಹಿತದೃಷ್ಟಿಯಿಂದ ಬಲು ಒಳ್ಳೆಯ ಬೆಳವಣಿಗೆ ಗುರು!

ಮೊದಲು ಮಹಾರಾಷ್ಟ್ರದ ಒಳಗೆ ಏಕೀಕರಣವಾಗಲಿ!

ಬೆಳಗಾವಿಯ ವಿಧಾನಸಭಾ ಅಧಿವೇಶನಕ್ಕೆ ಸಡ್ಡು ಹೊಡ್ದು ಮಹಾರಾಷ್ಟ್ರ ಏಕೀಕರಣ ಸಮಿತಿಯೋರು ಮಾಡಕ್ ಮುಂದಾಗಿರೋ ಮಹಾಮೇಳಾವಕ್ಕೆ ಯಾರು ಬರ್ತಿದಾರೆ ಅನ್ನೋದು ಸಖತ್ ಬಿಸಿಸುದ್ದಿ ಆಗೋಗಿದೆ ಗುರು. 12.01.2009ರ ’ದಟ್ಸ್ ಕನ್ನಡ’ ದಲ್ಲಿ ಮಹಾಮೇಳಾವಕ್ಕೆ ಛಗನ್ ಭುಜಬಲ್, ಆರ್.ಆರ್.ಪಾಟೀಲ್, ರಾಜ್ ಠಾಕ್ರೆ ಇವ್ರೆಲ್ಲಾ ಬರ್ತಾರೆ ಅನ್ನೋ ಸುದ್ದಿ ಬಂದಿದೆ.

ಮಹಾರಾಷ್ಟ್ರದಲ್ಲೇ ಸರಿಮಾಡ್ಕೊಳ್ಳೋದು ಬೇಜಾನ್ ಇದೆ.

ತಡೆಯಿಲ್ಲದ ವಲಸಿಗರ ಸಮಸ್ಯೆಯಿಂದ ಕೆಲಸದ ಅವಕಾಶ ಇಲ್ದಿರೋ ಮರಾಠಿಗಳು, ಭಯೋತ್ಪಾದನೆಯಿಂದ ತಬ್ಬಿಬ್ಬಾಗಿರೋ ಮುಂಬೈ, ಸಾಯ್ತಾ ಇರೋ ಮರಾಠಿ ಚಿತ್ರರಂಗ, ಬೇರೆಯಾಗ್ತೀವಿ ಅಂತಿರೋ ವಿದರ್ಭ, ನಾಗಪುರದಂಥಾ ನಗರದಲ್ಲಿ ಗಂಟಲು ಕಟ್ಕೊಂಡಿರೋ ಮರಾಠಿ ನುಡಿ.... ಅಣ್ಣಂದೀರಾ, ಇವೆಲ್ಲಾ ಬಿಟ್ಟು ಇದ್ಯಾಕೆ ಬೆಳಗಾವಿ ಕಡೆ ಗುಳೇ ಹೊರ್ಟಿದೀರಾ? ಅಂತ ಇವತ್ತು ಅಲ್ಲೀ ಮಂದಿ ಕೇಳಬೇಕಾಗಿದೆ ಗುರು! ಹಿಂದೆ ಇದ್ದಿದ್ರಲ್ಲಿ ರಾಜ್ ಠಾಕ್ರೆ ಈ ಬಗ್ಗೆಯೆಲ್ಲಾ ದನಿ ಎತ್ತಿ ಒಕ್ಕೂಟ ವ್ಯವಸ್ಥೆಯಲ್ಲಿ ಆಗಬೇಕಾದ ರಿಪೇರಿ ಬಗ್ಗೆ, ತಡೆಯಿಲ್ಲದ ವಲಸೆಯಿಂದ ಉದ್ಯೋಗಾವಕಾಶಗಳು ಮರಾಠಿಗರ ಕೈ ತಪ್ತಿರೋ ಬಗ್ಗೆ ಮಾತಾಡಿದ್ರು. ಇನ್ನು ಛಗನ್ ಭುಜಬಲ್, ರಾಮದಾಸ್ ಕದಂ, ಆರ್.ಆರ್.ಪಾಟೀಲ ಇವ್ರೆಲ್ಲಾ ಈಗ ಇದ್ಕಿದ್ ಹಂಗೆ ಬೆಳಗಾವಿ ವಿಷ್ಯಕ್ ಯಾಕಪ್ಪಾ ಬರ್ತಾ ಇದಾರೆ ಅಂದ್ರೆ ಅಚ್ಚರಿಯಾಗಲ್ವಾ ಗುರು? 1986ರಲ್ಲಿ ’ಗಡಿ ಲಡಾಯಿ’ ಅನ್ನೋ ಹೆಸರಲ್ಲಿ ಗಲಭೆ ಮಾಡ್ಸೇ ಶರದ್ ಪವಾರ್ ದೊಡ್ಡ ರಾಜಕಾರಣಿಯಾಗ್ ಬೆಳುದ್ರು. ನಾವೂ ಹಾಗೇ ಆಗಬಹುದು ಅಂದ್ಕೊಂಡಿದಾರೋ ಏನೋ? ನಿಜಾ ಅಂದ್ರೆ, ಮಹಾರಾಷ್ಟ್ರಾದಲ್ಲಿ ಮೊದಲು ಏಕೀಕರಣ ಮಾಡ್ಕೊಬೇಕಾಗಿದೆ ಯಾಕಂದ್ರೇ ಅಲ್ಲೇ ನೂರಾರು ಸಮಸ್ಯೆಗಳಿವೆ...

ಮರಾಠಿಗರ ನಿಜವಾದ ಏಳಿಗೆ ಯಾವುದ್ರಿಂದ?

ಸಂಸ್ಕೃತಿ, ನುಡಿ, ಆಚಾರ ವಿಚಾರ ಉಳುಸ್ಕೊಂಡು, ಜನರ ಆರ್ಥಿಕ ಬೆಳವಣಿಗೆ ಆಗೋ ಅಂಥಾ ಉದ್ದಿಮೆಗಳನ್ನು ಕಟ್ಕೊಂಡು, ಅದ್ರಲ್ಲಿ ತಮ್ಮ ಜನಕ್ಕೇ ಕೆಲಸ ಸಿಗೋ ಹಾಗೆ ಮಾಡ್ಕೊಂಡು, ಪ್ರಪಂಚದಲ್ಲೇ ಮುಂದುವರೆದ ಜನಾಂಗ, ಸಮೃದ್ಧಿ ಮತ್ತು ಸುಖದ ನಾಡು ಅನ್ನುಸ್ಕೊಂಡು, ನೆಮ್ಮದಿಯಾಗಿ ಇರೋದೇ ಯಾವುದೇ ಒಂದು ನಾಡಿನ ಏಳಿಗೆ ಅನ್ನೋದ್ರ ಅರ್ಥ. ಇದನ್ನು ಸಾಧಿಸಕ್ಕೆ ಇವತ್ತು ಇರೋ ಹತ್ತು ಹಲವು ಸಮಸ್ಯೆಗಳಲ್ಲಿ ವಲಸೆ ಅನ್ನೋದು ದೊಡ್ಡದು. ಒಂದು ನಾಡಿನಲ್ಲಿ ಅದರತನವನ್ನೇ ಮುದುರಿ ಬಿಸಾಕೋ ಈ ವಲಸೆಗೆ ತಡೆ ಹಾಕೋದು ಹ್ಯಾಗೇ? ಆಯಾ ನಾಡಿನ ಜನರ ನಿರುದ್ಯೋಗ ಸಮಸ್ಯೆನ ಇಲ್ಲವಾಗ್ಸೋದು ಹ್ಯಾಗೇ? ಆಯಾ ಪ್ರದೇಶದಲ್ಲಿ ಆಯಾ ನುಡಿ, ನಡೆ, ಸಂಸ್ಕೃತಿಗಳ ಸಾರ್ವಭೌಮತ್ವಕ್ಕೆ ಅಡ್ಡಿ ಮಾಡ್ತಿರೋ ಅಂಶಗಳ್ನ ನಿವಾರ್ಸೋದು ಹ್ಯಾಗೇ? ಅನ್ನೋದ್ರ ಕಡೆ ದುಡೀಬೇಕಾಗಿದೆ. ಈ ದಿಕ್ಕಲ್ಲಿ ಹೊರಟಿದ್ದ ರಾಜ್ ಠಾಕ್ರೆ ಕನ್ನಡದೋರ ಬೆಂಬಲಾನೂ ಗಳಿಸಿದ್ರು ಅನ್ನೋದೂ ಸುಳ್ಳಲ್ಲ. ತಮ್ಮ ನಾಡಿನಲ್ಲಿ ತಮ್ಮತನಾನ ಉಳುಸ್ಕೊಳಕ್ ಮುಂದಾಗಿರೋ ಭಾರತದ ಮೂಲೆಮೂಲೆಯಲ್ಲಿರೋ ಎಲ್ಲಾ ಭಾಷಿಕರನ್ನೂ ಒಂದು ಮಾಡಿ ಅದರ ಮೂಲಕ ಒಕ್ಕೂಟ ವ್ಯವಸ್ಥೆಗೆ ಸರಿಯಾದ ಸರ್ಜರಿ ಮಾಡೋ ಕಡೆ ಗಮನ ಕೊಡೋದ್ ಬಿಟ್ಟು ಇದೇನು ಗುರು... ಇವರ ಚೆಲ್ಲಾಟ? ಕೆಲಸವಿಲ್ಲದ ಮಹಾರಾಷ್ಟ್ರದ ರಾಜಕಾರಣಿಯೆಂಬ ಬಡಗಿ... ಬೆಳಗಾವಿಯಲ್ಲಿರೋ ಮರಾಠಿಗರೆಂಬ ತಮ್ಮ ಮಕ್ಕಳ ಇನ್ನೇನೋ ಕೆತ್ತೋಕ್ಕೆ ಮುಂದಾಗಬಾರ್ದು ಗುರು!

ಬಿಜೇಪಿಯೋರಿಗೆ "ಸಾರೇ ಜಹಾಸೆ ಅಚ್ಛಾ..." ಕನ್ನಡ ಜಾನಪದವಂತೆ!


ಶ್ರೀ ಶ್ರೀ ಶ್ರೀ ಡಾ. ಯಡ್ಯೂರಪ್ಪನೋರ ಮುಂದಾಳ್ತನದ ಭಾರತೀಯ ಜನತಾ ಪಕ್ಷದ ಘನ ರಾಜ್ಯ ಸರ್ಕಾರ ಮಾಡ್ತಿರೋ ಈ ಘನಕಾರ್ಯ ನೋಡ್ರಪ್ಪೋ... ಮೊನ್ನೆ ಜನವರಿ 10 ಮತ್ತು 11ನೇ ತಾರೀಕು ಬೆಂಗಳೂರಿನ ಪದ್ಮನಾಭನಗರದಲ್ಲಿ ಜಾನಪದ ಜಾತ್ರೆನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಕಡೆಯಿಂದ ನಡ್ಸುದ್ರು. ಈ ಕಾರ್ಯಕ್ರಮಾನ ರೂಪಿಸಿದೋರು ಮಾನ್ಯ ರಾಜ್ಯ ಸಾರಿಗೆ ಸಚಿವ ಅಶೋಕ್ ಅವ್ರು ಅಂತ ಅಲ್ಲಿ ಆಗಾಗ ಮೈಕಲ್ಲಿ ಅನೌನ್ಸ್ ಮಾಡ್ತಿದ್ರು... " ಇದೇನ್ರಣ್ಣಾ... ಜಾನಪದ ಜಾತ್ರೆ ಮೊದಲು ಮಾಡಿದ್ದು ಕುಮಾರಸ್ವಾಮಿಗಳಲ್ವಾ? ಅದ್ನ ಲಾಲ್ ಬಾಗಿನಲ್ಲಿ ಮಾಡ್ತಿದ್ರಲ್ವಾ?" ಅಂತಾ ಕೇಳ್ಬೇಡಿ. "ಆ...... ಜಾನಪದ ಜಾತ್ರೇನೆ ಬೇರೆ. ಈ..... ಜಾನಪದ ಜಾತ್ರೇನೆ ಬೇರೆ. ಅದು ದೇಶ ಕಡೇದು ಅಂತಾ ಸಾರ್ತಿತ್ತು...ಇದು ದೇಶ ಮೊದಲು ಅಂತಾ ಸಾರ್ತಿದೆ" ಅನ್ತಾ ಇದಾರೆ ಈ ಬಿಜೆಪಿಗಳು.
ಜಾನಪದ ಅಂದ್ರೇ....
ಜಾನಪದ ಅಂದ್ರೆ ಡೊಳ್ಳು, ಕಂಸಾಳೆ, ಕರಡಿ ಕುಣಿತಗಳು ಅಂತ ನೀವಂದ್ಕಂಡಿದ್ರೆ ಆವತ್ತಿನ ಕಾರ್ಯಕ್ರಮ ನೋಡಿ ದೇವ್ರಾಣೆಗೂ ಎಚ್ಚರ ತಪ್ಪಿ ಬೀಳ್ತಿದ್ರಿ. ಮೊದಲಿಗೆ "ವಂದೇ ಮಾತರಂ" ಹಾಡಿಗೆ ಗೀತ ನೃತ್ಯ. ಇನ್ಮೇಲೆ ಎಲ್ಲಾ ಸರ್ಕಾರಿ ಕಾರ್ಯಕ್ರಮದಲ್ಲೂ ವಂದೇಮಾತರಂ ಹಾಡಲೇ ಬೇಕು ಅನ್ನೋದು ಮುಖ್ಯಮಂತ್ರಿಗಳ ಆಜ್ಞೇನೋ ಏನೋ ಅಂದ್ಕೊಂಡ್ರಾ? ಇಲ್ಲಿಗೆ ಹತ್ತು ನಿಮಿಷ ಢಮಾರು. ಆಮೇಲಿಂದು "ಮಾ ತುಝೇ ಸಲಾಂ..." ಹಾಡಿನ ನೃತ್ಯ ಕಾರ್ಯಕ್ರಮ... ಇಲ್ಲಿಗೆ ಇನ್ನೊಂದ್ ಹತ್ ನಿಮಿಷ. ಆಮೇಲೆ "ಸಾರೇ ಜಹಾಸೆ ಅಚ್ಛಾ... ಹಿಂದೂಸ್ತಾನ್ ಹಮಾರಾ..." ಅನ್ನೋ ಹಾಡು, ಮತ್ತದಕ್ಕೆ ನೃತ್ಯ. ಈ ಹಾಡಿನ ಕಡೆಗೇ "ಹಿಂದೀ ಹೈ ಹಮ್, ಹಿಂದೀ ಹೈ ಹಮ್..." ಅಂತ ಹಾಡ್ತಿದ್ದಾಗಂತೂ ಅಲ್ಲಿ ಸೇರಿದ್ದ ಜನಗಳ ಕಣ್ಣಿಂದ ಧಾರಾಕಾರವಾಗಿ ನೀರು ಉಕ್ಕುಕ್ಕಿ ಕಾವೇರಿಯಾಗಿ, ಥೂ ಶಾಂತಂ ಪಾಪಂ! ಗಂಗೆಯಾಗಿ ಹರೀತಾ ಇತ್ತು. ಇದೇನು ದೇಶಪ್ರೇಮಕ್ಕೋ ಜಾನಪದ ಅನ್ನೋದರ ಹೊಸ ಅರ್ಥಕ್ಕೋ ಗೊತ್ತಾಗ್ಲಿಲ್ಲ ಗುರು!
"ಬುದ್ಧಿಜೀವಿ" ಯುವಸಂಸದರ ನಲ್ನುಡಿ!
ಸಮಾರೋಪ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಒಬ್ಬ ಮಹನೀಯರು ಅಂದಂತೆ "ಬುದ್ಧಿಜೀವಿ ಯುವಸಂಸದ" ಶ್ರೀ ಅನಂತಕುಮಾರ್ ಅವರು ಮಾತಾಡುದ್ರು. "ನನ್ನ ಪ್ರೀತಿಯ ಪ್ರಜೆಗಳೇ, ಮೊದಲಿಗೆ ನಡೆದ ದೇಶಭಕ್ತಿ ಗೀತೆಗಳ (ಅದು ಹಿಂದೀಲಿ/ ಸಂಸ್ಕೃತದಲ್ಲಿದ್ದರೆ ಮಾತ್ರಾ!) ಕಾರ್ಯಕ್ರಮ ನೋಡ್ತಾ ನೋಡ್ತಾ ನನ್ನ ಎದೆ ತುಂಬ್ಕೊಂಡು ಬಂತು. ನೀವೆಲ್ಲಾ ಏನಪ್ಪಾ ಅರ್ಥ ಮಾಡ್ಕೊಂಬೇಕೂ ಅಂದ್ರೆ... ’ದೇಶ ಮೊದಲು, ಜಾನಪದ ಆಮೇಲೆ’ " ಅಂತಾ ಕರೆ ಕೊಟ್ರು.
ಅಲ್ಲಾ ಗುರು! ಜನ, ಜನಪದ ಇದೆಲ್ಲದರಿಂದಲೇ ದೇಶ ಅನ್ನೋ ಪರಿವೆಯೇ ಬೇಡ್ವಾ ಇವರಿಗೇ ಅಂತ. ಇಲ್ಲಿ ಒಂದುಕ್ಕಿಂತ ಇನ್ನೊಂದು ಮೊದಲು ಅನ್ನೋ ಲಾಜಿಕ್ಕೇ ಓಳಲ್ವಾ? ದೇಶ ಮೊದಲು ಅನ್ನೋದ್ರ ಅರ್ಥ "ಇಲ್ಲೀಗಂಟಾ ನೀವೆಲ್ಲಾ ಇನ್ಯಾವ್ದನ್ನೋ ದೇಶಕ್ಕಿಂತ ಮೊದಲು ಅಂತಿದೀರೀ, ಆ ಇನ್ಯಾವ್ದೋ ಇನ್ಮೇಲೆ ’ಆಮೇಲೆ’ ಅಂತಾ ತಾನೆ? ಈ ಇನ್ಯಾವ್ದೋ ಯಾವ್ದಪ್ಪಾ ಅಂದ್ರೆ ಅನಂತಕುಮಾರ್ ಅವ್ರು ಕನ್ನಡ-ಕರ್ನಾಟಕ-ಕನ್ನಡಿಗ ಅಂತಾ ಅಂದಾರೇನೋ... ಆದ್ರೆ ಈ ಇನ್ಯಾವ್ದೋ ಅನ್ನೋದ್ರ ಪಟ್ಟಿಗೆ ಈಗ ನಮ್ಮ ನಾಡಿನ ಜಾನಪದ ಕಲೆಗೋಳೂ ಸೇರ್ಕಂಬುಡ್ತಲ್ಲಾ ಗುರು... ಒಂದು ಮಜಾ ಅಂದ್ರೆ ಈ ಬಿಜೇಪಿಯೋರು ಕಾಪಾಡ್ತೀವಿ ಕಾಪಾಡ್ತೀವಿ ಅಂತಿರೋ ಹಿಂದುತ್ವ ಅನ್ನೋದ್ರ ಬೇರು ನಮ್ಮ ಜಾನಪದದಲ್ಲೇ ಅಲ್ವಾ ಇರೋದು? ಪಾಪ, ಪೊಳ್ಳು ರಾಷ್ಟ್ರೀಯತೆಯ ಕನ್ನಡಕ ಹಾಕ್ಕೊಂಡಿರೋ ಬಿಜೆಪಿಯೋರ ಕಣ್ಣಿಗೆ ಇವೆಲ್ಲಾ ಕಾಣೋದಾದ್ರೂ ಹೇಗೆ? ಅಲ್ವಾ ಗುರು!

ಬೆಳಗಾವಿ ಅಧಿವೇಶನ ಮತ್ತು ಮಹಾಮೇಳಾವ

ಶರಣ್ರೀ ಸಾಹೇಬ್ರಾ... ನೀವಾರ ಈ ಮಂದೀಗ ತುಸಾ ಬುದ್ದೀ ಹೇಳ್ರಲಾ... ನಮ್ ಬೆಳಗಾವಿಯಾಗ ಸರ್ಕಾರ ವಿಧಾನಸಭಾ ಅಧಿವೇಶನಾ ನಡ್ಸಾಕ್ ಮುಂದಾಗಾರಾ ಅಂದ್ ಕೂಡ್ಲಾ ತಿಗಿಣಿ ಕಡ್ದಾಂಗ್ ಆಡಾಕ್ ಹತ್ಯಾರಾ! ಕರ್ನಾಟಕದ ವಿಧಾನ ಸಭಾ ಅಧಿವೇಶನ ನಡ್ಯೂ ದಿನಾನ ನಾವು ’ಮಹಾಮೇಳಾವ’ ಮಾಡ್ತೇವ ಅಂತ ಹಟ ಹಿಡ್ಕೊಂಡ್ ಕುಂತಾರಾ ಈ ಎಂಇಎಸ್ ಮಂದಿ.
ಇದಾ ಮೊದಲಲ್ಲಾ...
ಬೆಳಗಾವೀನಾ ಮಾರಾಷ್ಟ್ರಾದೊಳಗ ಸೇರಿಸೋಣು ಅನ್ನೊ ಹಟ ಹಿಡ್ದಿರೋ ಮಹಾರಾಷ್ಟ್ರ ಏಕೀಕರಣ ಸಮಿತಿ ಮಂದಿ, ಹೀಂಗ್ ಆಡ್ತಿರೋದೂ ಇದಾ ಮೊದಲಲ್ರೀ ಸರಾ... ಹಿಂದ ಎಮ್.ಇ.ಎಸ್ ಮೋರೆಗೆ ಮಸಿ ಬಳ್ದಾಗಿಂದ ಬಾಲ ಸುಟ್ಟ ಬೆಕ್ಕಂಗಾಗಿರೋ ಎಂ.ಇ.ಎಸ್ ಮಂದಿ 2006, ಸೆಪ್ಟೆಂಬರ್ 25ಕ್ಕ ಕುಮಾರಸ್ವಾಮಿಗೋಳ ಸರ್ಕಾರ, ಮೊದಲ ಸರತಿ ಬೆಳಗಾವ್ಯಾಗ ಕರ್ನಾಟಕ ವಿಧಾನ ಮಂಡಲದ ಅಧಿವೇಶನಕ್ ಮುಂದಾದಾಗ ಈ ಮಹಾಮೇಳಾವ ನಡ್ಸಿದ್ರುರೀಪಾ. ಆಗ ಮಾರಾಷ್ಟ್ರದ ಉಪಮುಖ್ಯಮಂತ್ರಿ ಹುದ್ಯಾಗ್ ಕುಂತಿದ್ ಆರ್.ಆರ್.ಪಾಟೀಲ ಸಾಯೇಬ್ರು ಬೆಳಗಾವಿಗ್ ಬಂದು ಹುಳಿ ಹಿಂಡೊ ಬಾಷಣ ಮಾಡಿದ್ರುರೀ. ಹೀಂಗಾ ಕರ್ನಾಟಕದೊಳಗ ನಿಂತು ಕನ್ನಡ ನಾಡ್ ಒಡೀತೀವಿ ಅಂದ್ರೂ, ಕರ್ನಾಟಕ ಸರ್ಕಾರ ಸುಮ್ಮನ ಗಪ್ ಕೂಡ್ತೈತ್ ಅಂದ್ರ ಏನ್ ಬಡ್ಕೊಬೇಕ್ರೀಪಾ?

ಪಾಕಿಗಿಂತ ಹೊಲಸು ಕನ್ನಡನಾಡು ಅಂದ ಮಹಾಮೇಳವಾ!

ಆ ಸಭಾಗ ಭಾಳ ಮಂದೀನ ಕರ್ಕೊಂಡು ಬಂದಿದ್ರು, ಅದು ಜನರ ಅಭಿಪ್ರಾಯ ಅನ್ನೋದಾದ್ರಾ... ಹಾಂಗ ಜನಾಭಿಪ್ರಾಯ ತೋರ್ಸಕ್ಕ ಕನ್ನಡ ಮಂದಿಗೂ ಅವಕಾಶ ಕೊಡಬೇಕು, ಹೌದಲ್ಲೋ? ಹಿಂದಿನ ಸಾರ್ತಿ ಮಹಾಮೇಳವದಾಗ ಆರ್.ಆರ್.ಪಾಟೀಲ್ರು ಅಂದದ್ದಾರ ಏನ್ ಗೊತ್ತನು? "ಈ ಕರ್ನಾಟಕ ಸರ್ಕಾರ ಪಾಕಿಸ್ತಾನದ ಸೈನ್ಯಕ್ಕಿಂತ ಹೊಲಸದಾ" "ನಿಪ್ಪಾಣಿ, ಖಾನಾಪುರಾ, ಬೆಳಗಾವಿಯಾಗ ಕೇಂದ್ರ ಸರ್ಕಾರದ ಆಡಳಿತ ಹೇರಬೇಕು" ಅಂತ ನಾಲ್ಗಿ ಮ್ಯಾಗಿನ ಹಿಡ್ತ ಇಲ್ಲದೋರಂಗ ವದರಿದ್ದರೀ. ಒಂದು ರಾಜ್ಯದ ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ಇರೋ ಮನಷಾ ಹೀಂಗ್ ಹುಚ್ಚರ ಗತಿ ಮಾತಾಡ್ತಾರಾ ಅಂದ್ರಾ ಅಂಥಾ ಮಾತು ನಾಡಿನ ಭಾಷಾ ಸಾಮರಸ್ಯ ಕದಡೋ ಕೆಲಸಾ ಅಲ್ಲನು? ಇಂಥಾ ಮನಶಾನ್ನ ಮತ್ ಕರ್ಸಿ ವಿಧಾನ ಸಭಾ ಅಧಿವೇಶನದ ದಿನಾ ಗಲಭಿ ಮಾಡ್ಸಿ ಸಭಾ ಮಾಡ್ತೀವಿ ಅನ್ನೋ ಮಹಾಮೇಳಾವಾಗ ಹ್ಯಾಂಗಾರಾ ಅನುಮತಿ ಕೊಡ್ತಾರಾ?
ಯಾ ಮಂದಿ, ಎಲ್ಲಾರಾ ಸಭಿ ಮಾಡಬೋದು ಅನ್ನೋದು ಖರೀ ಆದ್ರೂ ವಿಧಾನ ಸಭಾ ಅಧಿವೇಶನದ ದಿನಾನಾ ಮಾಡಕ್ ಎದುಕ್ ಅವಕಾಶ ಕೊಡಕ್ ಮುಂದಾಗ್ತಾರಾ? ಅದೂ ನಾವಾ ಜಗಾ ಕೊಟ್ಟು ನಮ್ ಮಾರೀಗಾ ಉಗೀರಿ ಅಂದಂಗಲ್ಲೇನು ಮತ್ತಾ? ಇಂಥಾ ಸಭಿಗಾ ಅನುಮತಿ ಕೊಡ್ಸಕ್ ಮುಂದಾಗಿರೋದೂ ಹಿಂದೂವಾದಿ ರಾಷ್ಟ್ರೀಯ ಪಕ್ಷದಂವಾ ಆಗಿರೂ ಒಬ್ಬ ಅಚ್ಚ ಕನ್ನಡದ ಸಂಸದ ಅನ್ನೂ ಮಾತ ಬೆಳಗಾವಿ ತುಂಬೆಲ್ಲಾ ಹೊಗಿಯಾಡ್ತೈತ್ರೀಪಾ. ಅಂವಾ ಮುಂದಾ ಲೋಕಸಭಾ ಚುನಾವಣೀಗ ಮರಾಠಿಗರ ಮತಗ್ೆಲ್ಲಕ್ ಹೀಂಗ್ ಮಾಡಾಕ್ ಹತ್ಯಾರಾ ಅಂತ ಮಂದಿ ಪಿಸುಗುಡಕ್ ಹತ್ಯಾರಾ. ನೀವಾ ಹೇಳ್ರಲಾ? ಇದು ಹೀಂಗ ಆಗೋದ್ ಸರಿ ಏನಾ? ಹಾಂಗಾಂದ್ರಾ ಆವತ್ತೇ ಕನ್ನಡ ಮಂದೀ ಜಾಗೃತಿ ಸಮಾವೇಶ ಮಾಡಾಕ್ ಬಿಡ್ತಾರೇನೂ, ಈ ಸರ್ಕಾರದೋರೂ? ಇಲ್ಲಾ ಗಲಭಿ ಆಗ್ತೈತಿ ಕೊಡಾಂಗಿಲ್ಲಾ ಅಂದ್ರ ಈಗ ಎಂಇಎಸ್ ಮಂದೀಗೂ ಕೊಡಾಕ್ ಬರಾಂಗಿಲ್ಲಾ... ಹೌದಲ್ರೀ ಗುರುಗಳಾ?

ಸಿದ್ರಾಮಯ್ನೋರೇ, ನಿಮ್ ಕೈಲಿ ಇದಾಗುತ್ತಾ?

ಕರ್ನಾಟಕದಲ್ಲಿ ಕನ್ನಡದ ಸಿದ್ಧಾಂತ ಇಟ್ಕೊಂಡಿರೋ ಒಂದೊಳ್ಳೆ ರಾಜಕೀಯ ಪಕ್ಷ ಹುಟ್ಟಕ್ಕೆ ಇದು ಸರಿಯಾದ ಹೊತ್ತು! ಕೇಂದ್ರ ಸರ್ಕಾರದಿಂದ ನಾವು ಗಿಟ್ಟುಸ್ಕೋಬೇಕಾದ್ದನ್ನೆಲ್ಲಾ ನಮ್ಮನ್ನ ಆಳ್ತಿರೋರು ರಾಷ್ಟ್ರೀಯ ಪಕ್ಷಗಳೋರೂ ಅನ್ನೋ ಒಂದೇ ಕಾರಣದಿಂದ ಗಿಟ್ಟುಸ್ಕೊಳಕ್ ಆಗ್ತಿಲ್ಲದೇ ಇರೋದು ಎದ್ದು ಕಾಣ್ತಿದೆ.
ರಾಷ್ಟ್ರೀಯ ಪಕ್ಷಗಳ ಅಸಹಾಯಕತೆ!
ಶಿವಸೇನೆಯೊಂದಿಗೆ ಸಖ್ಯ ಹೊಂದಿರೋ ಬಿ.ಜೆ.ಪಿ - ಬೆಳಗಾವಿ ವಿಷಯದಲ್ಲಿ ಮಹಾರಾಷ್ಟ್ರದ ಪರ ನಿಂತರೆ ಮಹಾರಾಷ್ಟ್ರದಲ್ಲಿ 48 ಸದಸ್ಯರನ್ನು ಗೆಲ್ಲಿಸಿಕೊಳ್ಳಲು ಅವಕಾಶ ಇದೆ, ಆಗ ಕರ್ನಾಟಕದಲ್ಲಿ ಕಳೆದುಕೊಳ್ಳೋದು 28 ಸೀಟು. ಕಾವೇರಿ ವಿಷಯವಾಗಿ ತಮಿಳುನಾಡಿನ ಪರ ನಿಂತರೆ ಕಾಂಗ್ರೆಸ್ಸು ಇಲ್ಲಿ ಕಳಕೊಳ್ಳೋದು 28 ಸೀಟಾದರೆ ಗಳಿಸಿಕೊಳ್ಳೋ ಸಾಧ್ಯತೆ ಇರೋದು ತಮಿಳುನಾಡಿನ 39 ಸೀಟುಗಳ್ನ. ಈಗ ಹೇಳು ಗುರು, ಕನ್ನಡದೋರ ಪರವಾಗಿ ಬಿ.ಜೆ.ಪಿಯಾಗಲೀ, ಕಾಂಗ್ರೆಸ್ಸಾಗಲೀ ಗಟ್ಟಿ ನಿಲುವು ತೆಗೆದುಕೊಳ್ಳೋಕೆ ಸಾಧ್ಯಾನಾ ಅಂತ. ಇವರ್ಯಾರೂ ನಮ್ಮ ಪರವಾಗಿ ಪಕ್ಷಪಾತ ಮಾಡಕ್ ಆಗಲ್ಲ.. ನಿಜಾ ಅಂದ್ರೆ ಹಾಗೆ ಮಾಡ್ಬೇಕಾಗೂ ಇಲ್ಲ. ಕಡೇಪಕ್ಷ ರಾಷ್ಟ್ರೀಯ ಜಲನೀತಿ ಜಾರಿಗೆ ತರಕ್ಕೆ ಮುಂದಾಗಾದೋದ್ರೂ ಬ್ಯಾಡ್ವಾ? ಇವರುಗಳ ಪಾರ್ಟಿ ಪಕ್ಕದ ರಾಜ್ಯಗಳಲ್ಲೂ ಇರೋದ್ರಿಂದ ಆಯಾ ರಾಜ್ಯಗಳ ಜೊತೆ ಸಂಬಂಧ ಚೆನ್ನಾಗಿರುತ್ತೆ ಅನ್ನೋ ಇವರುಗಳ ಪ್ರಚಾರಕ್ಕೆ ಮರುಳಾಗೋ ಕಾಲಾನೂ ಆಗೋಗಿದೆ. ಎಲ್ಲಾ ವಿಷಯದಲ್ಲೂ ಸ್ಟೇಟಸ್ ಕೋ ಕಾಪಾಡ್ಕೊಂಡ್ರೆ ಆಯ್ತಲ್ಲಾ ಅನ್ನೋ ಮನೋಭಾವನೆ ಇರೋರು ಇವ್ರು. ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡೂ ಕಡೆ ಕಾಂಗ್ರೆಸ್ಸೇ/ ಬಿಜೆಪಿನೇ ಅಧಿಕಾರದಲ್ಲಿದ್ರೂ ಇವರು ಗಡಿ ತಕರಾರಿನ ಇತ್ಯರ್ಥಕ್ಕೆ ಕೈ ಹಾಕಲಾರರು. ಯಾಕಂದ್ರೆ ಇಬ್ಬರಲ್ಲಿ ಒಬ್ರುಗೆ ಅಸಮಾಧಾನ ಆದೀತಲ್ವೇ? ಸೌಹಾರ್ದಯುತ ಸಂಬಂಧ ಅಂದ್ರೆ ಇರೋ ಸಮಸ್ಯೆಗಳನ್ನೆಲ್ಲಾ ಇಲ್ಲಾ ಅಂತ ಅನ್ನುತ್ತಾ ಅಡೀಲಿ ಹಾಕ್ಕೊಂಡು ಕೂತ್ಕೊಂಡು, ತಮ್ಮ ಆಡಳಿತದ ಹೊತ್ತಿನಲ್ಲಿ ಚರ್ಚೆಗೆ ಬರದಂತೆ ನೋಡ್ಕೊಳ್ಳೋದಾ ಗುರು? ಹಾಗಾಗಿ ಪಾಪಾ ಅಂತರರಾಜ್ಯ ತಗಾದೆಗಳ ಬಗ್ಗೆಯೆಲ್ಲಾ ಸುಮ್ಮನಿರಲೇಬೇಕಾದ ಅನಿವಾರ್ಯತೆ, ಅಸಹಾಯಕತೆ ನಮ್ಮ ರಾಷ್ಟ್ರೀಯ ಪಕ್ಷಗಳದ್ದು.
ಕನ್ನಡಿಗರ ಪಕ್ಷ ಕಟ್ಟಕ್ಕೆ ಸಕಾಲ!
ಇಷ್ಟೆಲ್ಲಾ ಯಾಕಪ್ಪಾ ಪ್ರಸ್ತಾಪ ಮಾಡುದ್ವಿ ಅಂದ್ರೆ, ಇಪ್ಪತ್ತೈದು ವರ್ಷಗಳ ರಾಜಕೀಯ ಅನುಭವ ಇರೋ ಸಿದ್ರಾಮಯ್ಯನೋರೂ, ಹೆಚ್ಚುಕಮ್ಮಿ ಅಷ್ಟೇ ಅನುಭವ ಇರೋ ಸಿಂಧ್ಯಾ ಅವರೂ, 41 ವರ್ಷಗಳ ರಾಜಕೀಯ ಅನುಭವಾ ಇರೋ ಸಾರೆಕೊಪ್ಪದ ಬಂಗಾರಪ್ಪನೋರೂ ಇವತ್ತು ರಾಜಕೀಯವಾಗಿ ಆಕಡೆನೋ ಈಕಡೇನೋ ಅನ್ನೋ ಸ್ಥಿತೀಲಿ ಇದಾರೆ ಅನ್ನೋ ಸಮಾಚಾರಗಳು ದಿನ ಬೆಳಗ್ಗಾದ್ರೆ ಪೇಪರ್ರುಗಳಲ್ಲಿ ಬರ್ತಾ ಇವೆ. ನಾಡು ನುಡಿ ನಾಡಿಗರನ್ನು ಕೇಂದ್ರವಾಗಿಟ್ಟುಕೊಂಡು, ನಾಡು ಕಟ್ಟಬಲ್ಲ ರಾಜಕೀಯ ಪಕ್ಷವೊಂದನ್ನು ಕಟ್ಟೋ ಯೋಗ್ಯತೆ ಇವರಲ್ಲಿ ಯಾರೊಬ್ಬರಿಗೂ ಇದ್ದಂಗೆ ಕಾಣ್ತಾ ಇಲ್ವಲ್ಲಾ ಗುರು? ತಮ್ಮನ್ನು ತಾವು ಒಂದು ಸಮುದಾಯಕ್ಕೋ, ಜಾತಿಗೋ ಮಿತಿಗೊಳಿಸಿಕೊಂಡ್ರೆ. ಇಡೀ ಕನ್ನಡ ನಾಡಿಗೆ ನಾಯಕತ್ವ ಕೊಡಕ್ ಆಗಲ್ಲ ಅನ್ನೋದನ್ನು ಅರ್ಥ ಮಾಡ್ಕೊಂಡಿರೋ ಹಾಗೆ ಕಾಣ್ತಾ ಇಲ್ವಲ್ಲಾ ಗುರು? ಇವತ್ತು ಕರ್ನಾಟಕದ ಏಳಿಗೆಗಾಗಿ ದುಡೀತೀವಿ ಅನ್ನೋರಿಗೆ, ಕರ್ನಾಟಕವನ್ನು ಬಲಿಷ್ಟಗೊಳಿಸ್ತೀವಿ ಅನ್ನೋರಿಗೆ, ಬಲಿಷ್ಟ ಕರ್ನಾಟಕದಿಂದಲೇ ಬಲಿಷ್ಟ ಭಾರತ ಅನ್ನೋರಿಗೆ... ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಖಾಲಿ ಜಾಗ ಇದೆ ಅನ್ನೋದನ್ನು ಅರ್ಥ ಮಾಡ್ಕೊಂಡಿರೋ ಹಾಗೆ ಕಾಣ್ತಾ ಇಲ್ವಲ್ಲಾ ಗುರು? ಇದನ್ನು ಅರಿತಿದ್ದರೆ ಈ ಹೊತ್ತಿಗೆ ಇವರಲ್ಲಿ ಒಬ್ರಾದ್ರೂ ಕನ್ನಡ ಕೇಂದ್ರಿತ ರಾಜಕೀಯ ಮಾಡಕ್ಕೆ ಮುಂದಾಗ್ತಾ ಇದ್ರು... ಸಿದ್ರಾಮಯ್ನೋರೇ, ನಿಮ್ ಕೈಲಿ ಇಂಥಾ ಒಂದು ಪಕ್ಷ ಕಟ್ಟೊಕೆ ಆಗುತ್ತಾ? ನೀವು ಕಟ್ಟೋ ಪಕ್ಷಕ್ಕೆ ಇಂಥಾ ನಿಲುವು ಇರುತ್ತಾ?
ಕೊನೆಹನಿ : ’ದಟ್ಸ್ ಕನ್ನಡ’ ಪತ್ರಿಕೆಯಲ್ಲಿ 2009ರ ಜನವರಿ 5ನೇ ತಾರೀಕು "ನಮ್ಮ ಸಿದ್ರಾಮಣ್ಣ ಪಾರ್ಟಿ ಗೀರ್ಟಿ ಕಟ್ಟಾಕಿಲ್ಲಾ, ಪಕ್ಕದ ಆಂಧ್ರಪ್ರದೇಶದ ಹೊಸ ಪ್ರಾದೇಶಿಕ ಪಕ್ಷ ಪ್ರಜಾರಾಜ್ಯಂ ಸೇರ್ಕೊತಾರೆ" ಅಂತ ಬಂದ ಸುದ್ದಿ ರೆಕ್ಕೆಪುಕ್ಕ ಕಟ್ಕೊಂಡು ಊರೆಲ್ಲಾ ಹಾರಾಡ್ತಾ ಇದೆ ಗುರು! ಈ ಸುದ್ದಿಯಲ್ಲಿ ನಿಜವೆಷ್ಟೋ ಸುಳ್ಳೆಷ್ಟೋ ಆ ಬೀರಪ್ಪನೇ ಬಲ್ಲ! ಆದ್ರೂ ಇದು ಸುಳ್ಳಗಿರ್ಲಪ್ಪಾ, ಸಿದ್ರಾಮಯ್ಯನೋರಿಗೆ ಅಷ್ಟೊಂದು ದಡ್ದತನಾ ಕೊಡಬೇಡಮ್ಮಾ ತಾಯಿ ಅಂತ ಮನಸ್ನಲ್ಲೇ ಆ ಚಾಮುಂಡೇಶ್ವರಿ ದೇವಿನ ಬೇಡ್ಕೊಂಡ್ಬುಡೋಣ್ವಾ ಗುರು?

ಏಳು ಸೂತ್ರ ಸೂಪರ್! ಇನ್ನೈದು ಯಾವಾಗ?

ಈ ವರ್ಷಾನ ಕನ್ನಡ ಜಾಗೃತಿ ವರ್ಷವಾಗಿ ಆಚರಿಸಲು ಭಾರತೀಯ ಜನತಾ ಪಕ್ಷದ ಸರ್ಕಾರ ಏಳು ಆಡಳಿತ ಸೂತ್ರಗಳನ್ನು ಘೋಷಿಸಿದ ಸುದ್ದಿ ವಿಜಯ ಕರ್ನಾಟಕದ 02.01.2009ರ ಸಂಚಿಕೆಯ ಮುಖಪುಟದಲ್ಲಿ ಬಂದಿರೋ ಸುದ್ದಿ ನೋಡಿ ಭಾಳಾ ಖುಷಿ ಆಯ್ತು ಗುರು! ಇಂಥಾ ಗಟ್ಟಿ ನಿಲುವು ತೋರಿಸಿದ ಸರ್ಕಾರಕ್ಕೆ ನಮ್ಮ ಅಭಿನಂದನೆಗಳು.
ಕನ್ನಡ ಜಾಗೃತಿ ವರ್ಷಾಚರಣೆಗೆ ಏಳು ಸೂತ್ರಗಳು!
ಕರ್ನಾಟಕ ಸರ್ಕಾರ ಘೋಷಿಸಿರೋ ಈ ಏಳು ಸೂತ್ರಗಳು ಆಡಳಿತ, ಶಿಕ್ಷಣ, ನಾಮಫಲಕ, ಗಡಿ ಕಾವಲು, ನೀರು, ಉದ್ಯೋಗ, ಸಂಸ್ಕೃತಿ ಮತ್ತು ಮುಖ್ಯವಾಹಿನಿಗೆ ವಲಸಿಗರು ಎನ್ನುವ ಅಂಶಗಳನ್ನು ಒಳಗೊಂಡಿದೆ. ಈ ಸೂತ್ರಗಳು ಸರಿಯಾಗಿ ಜಾರಿಯಾದರೆ ಬಹಳ ದೊಡ್ಡ ಕ್ರಾಂತಿಯೇ ಆದ ಹಾಗಾಗುತ್ತೆ ಗುರು! ಈ ಏಳು ಸೂತ್ರಗಳ ಅಡಿಯಲ್ಲಿ ಏನೆಲ್ಲಾ ಮಾಡ್ತೀರಾ ಅಂತ ಸರ್ಕಾರಾನ ಕೇಳೋ ಬದಲು ’ಇಂಥಿಂಥಾ ಕೆಲಸಗಳು ಆಗಬೇಕು, ಇವೆಲ್ಲಾ ಮಾಡ್ತೀರಾ?’ ಅಂತ ಕೇಳಬೇಕಾಗಿದೆ.

1. ಆಡಳಿತದಲ್ಲಿ ಕನ್ನಡ : ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡೋ ಎಲ್ಲ ಕಛೇರಿಗಳಲ್ಲಿ ಆಡಳಿತ ಕನ್ನಡದಲ್ಲಿ ಮಾಡಬೇಕು ಅನ್ನೋ ಸರ್ಕಾರದ ನಿಲುವು ಕೇಂದ್ರ ಸರ್ಕಾರಿ ಕಛೇರಿಗಳಿಗೆ ಅನ್ವಯವಾಗುತ್ತದೆಯೇ? ಇಲ್ಲಿನ ತೆರಿಗೆ ಇಲಾಖೆ, ಸುಂಕ ಇಲಾಖೆ, ಪಾಸ್ ಪೋರ್ಟ್ ಕಛೇರಿ, ವಿಮಾನ ನಿಲ್ದಾಣಗಳು... ಹೀಗೆ ಎಲ್ಲೆಡೆ ಕನ್ನಡದಲ್ಲಿ ಆಡಳಿತವನ್ನು ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದೇ?

2. ಕಲಿಕೆಯಲ್ಲಿ ಕನ್ನಡ : ಕನ್ನಡ ಮಾಧ್ಯಮದಲ್ಲಿನ ಕಲಿಕೆಯ ಗುಣಮಟ್ಟ ಹೆಚ್ಚಿಸಲು ಯಾವ ಕ್ರಮ ತೆಗೆದುಕೊಳ್ಳುವಿರಿ? ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಉನ್ನತ ಶಿಕ್ಷಣವೂ ಸೇರಿದಂತೆ ಎಲ್ಲೆಡೆ ಕನ್ನಡದಲ್ಲಿ ಕಲಿಕೆ ಸಾಧ್ಯವಾಗಿಸಲು ಯಾವ ಯೋಜನೆ ಹೊಂದಿದ್ದೀರಿ? ಐ.ಸಿ.ಎಸ್.ಇ ಮತ್ತು ಸಿ.ಬಿ.ಎಸ್.ಇ ಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡ್ತೀರಾ?

3. ನಾಮಫಲಕದಲ್ಲಿ ಕನ್ನಡ : ಇದರ ಜೊತೇಲಿ ಗ್ರಾಹಕಸೇವೆಯನ್ನು ಕನ್ನಡದಲ್ಲಿ ನಿರಾಕರಿಸುವುದು ಶಿಕ್ಷಾರ್ಹ ಅಪರಾಧ ಎನ್ನುವ ಕಾಯ್ದೆ ಮಾಡಲು ಸಿದ್ಧರಾಗಿದ್ದೀರಾ? ಗ್ರಾಹಕ ಸೇವೆಯ ವ್ಯಾಪ್ತಿಗೆ ಕನ್ನಡದಲ್ಲಿನ ಸೇವೆಯನ್ನು ತರಲು ಮುಂದಾಗುವಿರಾ?

4. ಕನ್ನಡ ಗಡಿ ಕಾಯೋಣ : ಹೇಗೆ? ಸರ್ಕಾರ ಗಡಿ ಭಾಗಗಳಲ್ಲಿ ಕನ್ನಡ ವಾತಾವರಣ ಕಟ್ಟಲು ಏನೇನು ಯೋಜನೆ ಹೊಂದಿದೆ? ಹೇಗೆ ಅಲ್ಲಿನ ಮಕ್ಕಳ ಕಲಿಕೆ, ಅಲ್ಲಿನ ಜನರ ಬದುಕಲ್ಲಿ ಕನ್ನಡವನ್ನು ಅಡಕಗೊಳಿಸಲಾಗುತ್ತದೆ?

5. ನೆಲ, ಜಲ, ಉದ್ಯೋಗ ಕನ್ನಡಿಗರಿಗೆ : ಸೂಪರ್... ರಾಷ್ಟ್ರೀಯ ಜಲನೀತಿ ರೂಪಿಸಲು ಏನುಮಾಡ್ತೀರಾ? ಮಹಾಜನ್ ವರದಿ ಜಾರಿಗಾಗಿ ಹೇಗೆ ಮುಂದಾಗ್ತೀರಾ? ಡಾ. ಸರೋಜಿನಿ ಮಹಿಷಿ ವರದಿ ಜಾರಿ ಎಂದು?

6. ನಮ್ಮ ಸಂಸ್ಕೃತಿ ಕನ್ನಡ : ಕನ್ನಡಿಗರದ್ದಲ್ಲದ ಸಾಂಸ್ಕೃತಿಕ ದಾಳಿಗಳಾದ ಅಯ್ಯಪ್ಪ, ಛತ್ ಪೂಜಾ, ಕರುಮಾರಿಯಮ್ಮರ ಹಾವಳಿ ತಡೆಗೆ ಏನುಮಾಡ್ತೀರಾ? ಹಂಪಿ ಉತ್ಸವಗಳಲ್ಲಿ, ಬೆಂಗಳೂರು ಹಬ್ಬಗಳಲ್ಲಿ, ಮೈಸೂರು ದಸರಾ ಕಾರ್ಯಕ್ರಮಗಳಲ್ಲಿ ಕನ್ನಡ ಸಂಸ್ಕೃತಿಯನ್ನು ಬಿಂಬಿಸಲು ಕ್ರಮ ಕೈಗೊಳ್ತೀರಾ? ನಮ್ಮ ಸಂಸ್ಕೃತಿಯ ಪ್ರಚಾರಕ್ಕೆ ಯಾವ ಕ್ರಮ ತೊಗೋತೀರಾ?

7. ಎಲ್ಲಿಂದಾದ್ರೂ ಬಂದಿರಿ, ಕನ್ನಡಿಗರಾಗಿರಿ : ಎಲ್ಲಿಂದಲೋ ಬಂದವರಿಗೆ ಕನ್ನಡ ಕಲಿಸೋಕೆ ಏನು ಕ್ರಮ ತೊಗೋತೀರಾ? ಪರಭಾಷಿಕರಿಗೆ ಕನ್ನಡ ಕಲಿಕೆ ಕಡ್ಡಾಯ ಮಾಡೊಕೆ ಏನು ಕ್ರಮಕ್ಕೆ ಮುಂದಾಗ್ತೀರಾ?

ಕನ್ನಡ ಜಾಗೃತಿಗೆ ಹನ್ನೆರಡು ಸೂತ್ರಗಳು : ಇನ್ನೈದು ಇಲ್ಲಿವೆ!

8. ಅಂತರ ರಾಜ್ಯ ವಲಸೆ ನಿಯಂತ್ರಣಕ್ಕೆ ಮುಂದಾಗ್ತೀರಾ?

9. ತ್ರಿಭಾಷಾ ಸೂತ್ರಕ್ಕೆ ತಿಲಾಂಜಲಿ ಕೊಟ್ಟು ಕನ್ನಡದ ಮಕ್ಕಳಿಗೆ ಹಿಂದಿ ಕಲಿಕೆಯೆಂಬ ಶಾಪದಿಂದ ಮುಕ್ತಿ ಕೊಡುಸ್ತೀರಾ?

10. ಕನ್ನಡ ನಾಡಿನ ಮೇಲಾಗುತ್ತಿರುವ ಹಿಂದಿ ಹೇರಿಕೆಯನ್ನು ನಿವಾರಿಸಲು ಮುಂದಾಗಿ "ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ" ಎನ್ನಲು ಮುಂದಾಗ್ತೀರಾ? ಕನ್ನಡದ ಸಾರ್ವಭೌಮತ್ವ ಸ್ಥಾಪಿಸಲು ಮುಂದಾಗ್ತೀರಾ?

11. ನಿಮ್ಮ ಪಕ್ಷದ ವತಿಯಿಂದ (ಕಡೇ ಪಕ್ಷ!) ಮುಂಬರುವ ಚುನಾವಣೆಗಳಲ್ಲಿ ಕನ್ನಡಿಗರನ್ನು ಮಾತ್ರಾ ಕಣಕ್ಕಿಳುಸ್ತೀರಾ?

12. ನಾಡು ನುಡಿಗೆ ಹಾನಿ ಮಾಡುವ ನಿಲುವು ಹೊಂದಿರುವ ದ್ರಾವಿಡ ಪಕ್ಷಗಳಾಗಲೀ, ಎಂ.ಇ.ಎಸ್ ಥರದ ಪಕ್ಷಗಳಾಗಲೀ ತಲೆ ಎತ್ತಲು ಸಹಾಯವಾಗುವಂತೆ ಅವರೊಂದಿಗೆ ರಾಜಕೀಯ ಸಖ್ಯಕ್ಕೆ ಮುಂದಾಗುವುದಿಲ್ಲ ಎಂದು ಘೋಷಣೆ ಮಾಡ್ತೀರಾ?
ಹದಿನಾರಾಣೆ ಪ್ರಶ್ನೆಗಳು!
ಈ ಕೆಲಸಗಳೆಲ್ಲಾ ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನ ಸಿಗಲು ಅತ್ಯಗತ್ಯವಾಗಿದೆ. ಆದರೆ ಈ ನಿಲುವುಗಳೆಲ್ಲಾ ಭಾಜಪ ಪ್ರತಿಪಾದುಸ್ತಾ ಇರೋ ರಾಷ್ಟ್ರೀಯತೆ(?)ಯ ಪರಿಕಲ್ಪನೆಗೆ ಹೊಂದಿಕೆಯಾದೀತೇ? ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವ ಸ್ಥಾಪನೆಯಾಗೋದ್ರಿಂದಲೇ ಕನ್ನಡಿಗರ ಬದುಕು ಹಸನಾಗೋದು, ಬಲಿಷ್ಟ ಕರ್ನಾಟಕ ಹುಟ್ಟೋದು... ಇಂತಹ ಕ್ರಮಗಳಿಂದಲೇ ಬಲಿಷ್ಟ ತಮಿಳುನಾಡು, ಬಲಿಷ್ಟ ಗುಜರಾತುಗಳನ್ನು ಕಟ್ಟಲು ಸಾಧ್ಯವಾಗೋದು ಅನ್ನೋದನ್ನು ಇವರು ಅರ್ಥ ಮಾಡ್ಕೊಳ್ಳಬಲ್ಲರೇ? ಬಲಿಷ್ಟವಾದ ರಾಜ್ಯಗಳೇ ಭಾರತವನ್ನು ಬಲಿಷ್ಟಗೊಳಿಸೋದು ಅನ್ನೋದನ್ನು ಇವರು ಅರಿಯಬಲ್ಲರೇ?ನಿಜವಾದ ಏಳಿಗೆಗೆ ಬೇಕಾದ ಈ ಕ್ರಮಗಳನ್ನು ಇವತ್ತಿನ ಭಾಜಪಾ ಒಪ್ಪೀತಾ? ಅನ್ನೋದು ಹದಿನಾರಾಣೆ ಉತ್ತರವಿಲ್ಲದ ಪ್ರಶ್ನೆಗಳು ಗುರು!

ಪರಭಾಷಿಕರಿಗೆ ಕನ್ನಡ ಕಲಿಕೆ ಕಡ್ಡಾಯವಾಗಲಿ!

ಬೆಂಗಳೂರು ವಿಶ್ವವಿದ್ಯಾಲಯದೋರು 2೦೦9~ 2010ರಿಂದ ಹೋಟೆಲ್ ಮ್ಯಾನೇಜ್ ಮೆಂಟ್ ಪದವಿಯ ಮೂರನೇ ಸೆಮಿಸ್ಟರ್ ತರಗತಿಗೆ ಕನ್ನಡವನ್ನು ಕಡ್ಡಾಯ ಮಾಡಿರೋ ಸುದ್ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ 31.12.2008ರ ಸಂಚಿಕೆಯಲ್ಲಿ ವರದಿ ಮಾಡಿದ ಸುದ್ದಿ ನೋಡಿ ಒಂದು ಕಡೆ ಖುಷಿ, ಇನ್ನೊಂದು ಕಡೆ ದುಃಖ ಆಗ್ತಿದೆ ಗುರು! ಈ ವರದಿಯಂತೆ ಈ ಪದವಿಯಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಕನ್ನಡಿಗರ ಸಂಖ್ಯೆ 30%ರ ಆಸುಪಾಸಿನಲ್ಲಿದೆಯಂತೆ! ಕನ್ನಡಿಗರು ಹೆಚ್ಚು ಹೆಚ್ಚು ಉದ್ಯಮಶೀಲರಾಗೋಕೆ ಇಂಥಾ ಓದುಗಳಲ್ಲಿ ಹೆಚ್ಚೆಚ್ಚು ತೊಡಗಬೇಕು ಅನ್ನೋ ನಮ್ಮ ಆಶಯಾನ ಸದ್ಯಕ್ಕೆ ಬದಿಗಿಟ್ಟು ಈಗ ವಿ.ವಿ ಉದ್ದೇಶಿಸಿರೋ ಕನ್ನಡ ಕಡ್ಡಾಯದ ಬಗ್ಗೆ ಮಾತಾಡೋಣ ಬನ್ನಿ.
ವಲಸೆ ನಿಯಂತ್ರಣಕ್ಕೊಂದು ಸಾಧನ ಕನ್ನಡ ಪರೀಕ್ಷೆ!

ತುಂಬಾ ದೇಶಗಳಲ್ಲಿ ಹೆಚ್ಚಿನ ಓದು ಓದಕ್ಕೆ ಯಾರಾದ್ರೂ ಹೋಗಬೇಕೂ ಅಂದ್ರೆ ಅಲ್ಲಿನ ಭಾಷೆ ಕಲಿತು, ಅದರಲ್ಲೊಂದು ಪರೀಕ್ಷೆ ಬರ್ದು ಪಾಸಾಗಬೇಕು ಅನ್ನೋ ನಿಯಮ ಇದೆ ಅನ್ನೋದನ್ನು ಗಮನಿಸಿದಾಗ ನಮ್ಮ ನಾಡಲ್ಲಿ ಕನ್ನಡಾನ ಒಂದು ಸೆಮಿಸ್ಟರ್ರಿಗೆ ಕಡ್ಡಾಯ ಮಾಡಿರೋದೇ ಮಾಧ್ಯಮಗಳಲ್ಲಿ ಸುದ್ದಿಯಾಗ್ತಿರೋದು ಅಚ್ಚರಿ ತರುತ್ತಲ್ವಾ? ಕನ್ನಡ ನಾಡಲ್ಲಿರೋ ಇಂಜಿನಿಯರಿಂಗು, ಮೆಡಿಕಲ್ಲು, ಹೋಟೆಲ್ ಮ್ಯಾನೇಜ್ ಮೆಂಟು, ನರ್ಸಿಂಗ್ ಮೊದಲಾದ ಕಾಲೇಜುಗಳಲ್ಲಿ ಹೊರನಾಡಿನಿಂದ ಬಂದಿರೋ ವಿದ್ಯಾರ್ಥಿಗಳು ಗಣನೀಯ ಸಂಖ್ಯೆಯಲ್ಲಿದಾರೆ. ಇವ್ರೆಲ್ಲಾ ಇಲ್ಲಿ ಓದು ಮುಗಿಸಿದ ನಂತರ ಇಲ್ಲೇ ಝಾಂಡಾ ಊರೋ ಸಾಧ್ಯತೆಗಳೇ ಹೆಚ್ಚು ಅನ್ನೋದನ್ನೂ ಗಮನಿಸಿ. ಇಲ್ಲಿನ ಸಾಫ್ಟ್ ವೇರ್ ಸಂಸ್ಥೆಗಳು, ಆಸ್ಪತ್ರೆಗಳ ದಾದಿಗಳು ಇವರನ್ನೆಲ್ಲಾ ನೋಡುದ್ರೇ ಇದು ನಿಚ್ಚಳವಾಗಿ ಕಾಣುತ್ತೆ. ಹೀಗೆ ಅನಿಯಂತ್ರಿತವಾಗಿ ವಲಸೆ ಆಗೋದನ್ನು ತಡೆಯೋಕೆ ಕನ್ನಡ ಪಾಸಾಗೋದು ಕಡ್ಡಾಯ ಮಾಡೋದು ಒಂದೊಳ್ಳೆ ಸಾಧನ. ಜೊತೇಲಿ ಇದು ಪರಭಾಷಿಕರು ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಲು ಅನುಕೂಲ ಮಾಡಿಕೊಡುತ್ತೆ.

ಮುಂದಾಗಬೇಕಾದ್ದೇನು?

ಸದ್ಯಕ್ಕೆ ಬೆಂಗಳೂರಿನ ವಿ.ವಿ ತೆಗೆದುಕೊಂಡಿರೋ ಈ ನಿರ್ಧಾರ ಸರಿಯಾದದ್ದೂ, ಅಗತ್ಯವಾದದ್ದೂ, ಮೆಚ್ಚುಗೆಗೆ ಅರ್ಹವಾದದ್ದೂ ಆಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಕರ್ನಾಟಕದಲ್ಲಿರೋ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸಿ.ಬಿ.ಎಸ್.ಇ/ ಇ.ಸಿ.ಎಸ್.ಸಿ ಶಾಲೆಗಳೂ ಸೇರಿದಂತೆ ಪ್ರಾಥಾಮಿಕ ಶಾಲಾ ಹಂತದಿಂದ ಐ.ಐ.ಎಂ.ಬಿ ತನಕದ ಎಲ್ಲ ಹಂತದ ಕಲಿಕಾ ಕೇಂದ್ರಗಳಲ್ಲಿ ಕನ್ನಡವನ್ನು ಕಲಿಸೋದು, ಕಲಿಯೋದು, ಪರೀಕ್ಷೆ ಬರ್ದು ಪಾಸಾಗೋದನ್ನು ಕಡ್ಡಾಯ ಮಾಡಬೇಕು. ಇಷ್ಟೇ ಅಲ್ಲದೆ ಇಲ್ಲಿನ ಉದ್ದಿಮೆಗಳಿಗೆ ತನ್ನಲ್ಲಿ ಕೆಲಸ ಮಾಡೊ ಪರಭಾಷಿಕರಿಗೆ ಕನ್ನಡ ಕಲಿಸೋ ಜವಾಬ್ದಾರೀನಾ ಮನವರಿಕೆ ಮಾಡಿಕೊಡಬೇಕು. ಆ ಮೂಲಕ ಪರಭಾಷಿಕರನ್ನು ನಾಡಿನ ಮುಖ್ಯವಾಹಿನಿಗೆ ತರಲು ಮುಂದಾಗಬೇಕು. ಕಡಿಮೆ ಅಂದ್ರೆ ಇಷ್ಟಾದ್ರೂ ಆಗಲೇಬೇಕು... ಏನಂತೀ ಗುರು?

ಎಡವಟ್ಟು ದಾರಿ ಹಿಡಿದ ರೇಡಿಯೋ ಒನ್!

ಬೆಂಗಳೂರಾಗಿನ ಎಲ್ಲ ಎಫ್.ಎಂ ಮಂದಿ ಯಶಸ್ಸಿನ ದಾರಿ ಯಾವ್ದು ಅನ್ನೋದನ್ನು ಅರ್ಥ ಮಾಡ್ಕೊಂಡು ಕನ್ನಡದಲ್ಲಿ ಹಾಡು ಹಾಕಕ್ಕೆ ಮುಂದಾಗ್ತಾ ಇವೆ. ಅಂತಾದ್ರಲ್ಲಿ ಊರಿಗೊಂದು ದಾರಿ ಅಂದ್ರೆ ಎಡವಟ್ ರಾಯಂಗ್ ಒಂದು ಅನ್ನೋ ಹಂಗೆ ರೇಡಿಯೋ ಒನ್ ’ಬಾಲಿವುಡ್ ಬಾದಷಾ’ ಅನ್ನೋ ಈ ಜಾಹೀರಾತನ್ನು ಕನ್ನಡ ಪತ್ರಿಕೆಗಳಲ್ಲಿ ಹಾಕ್ತಾ ಇದೆ.
ರೇಡಿಯೋ ಒನ್ 94.3 FM ಇಡ್ತಿರೋ ತಪ್ಪು ಹೆಜ್ಜೆ?
ಮಿಡ್ ಡೇ ಗುಂಪಿನ ರೇಡಿಯೋ ಒನ್ ಬೆಂಗಳೂರಿನಲ್ಲಿ ಒಂದನೇ ಆಗಸ್ಟ್ 2006ರಿಂದ ಪ್ರಸಾರ ಮಾಡಕ್ಕೆ ಶುರು ಮಾಡಿದೆ. ಇದು ಬೆಂಗಳೂರಿನಲ್ಲಿ ಆರಂಭವಾದ ಮೂರನೇ ಖಾಸಗಿ ಎಫ್.ಎಂ ವಾಹಿನಿ. ಇದರಲ್ಲಿ ಮೊದಲಿಂದಲೂ ಹಿಂದಿ ಹಾಡುಗಳಿಗೇ ಮಣೆ. ಇಂಥಾ ರೇಡೀಯೋ ಒನ್ ಕನ್ನಡದಲ್ಲಿ ಹಾಕಿರೋ ಈ ಜಾಹೀರಾತು ಎಷ್ಟು ಪೆದ್ದುತನದ್ದು ನೋಡು ಗುರು! ಅಲ್ಲಾ, ಕನ್ನಡಿಗರು ಬಾಲಿವುಡ್ ಬಾದಷಾಗಳಾಗಿರ್ತಾರೆ ಅಂತ ಇವರು ಹ್ಯಾಗೆ ಕಲ್ಪುಸ್ಕೊಂಡ್ರೋ ದೇವ್ರೇ ಬಲ್ಲ. ಈ ಜಾಹೀರಾತಿನ ಉದ್ದೇಶ ಏನು? ಯಾರಿಗಾಗಿ ಇದನ್ನು ಹಾಕಿದ್ದಾರೆ? ಯಾಕಿದನ್ನ ವಿಜಯಕರ್ನಾಟಕದಂಥಾ ದೊಡ್ಡ ಜನಪ್ರಿಯ ಪತ್ರಿಕೇಲಿ ಹಾಕಿದ್ದಾರೆ? ವಿಜಯಕರ್ನಾಟಕಾನ, ಅಥವಾ ಅಂಥಾ ಕನ್ನಡ ಪತ್ರಿಕೆಗಳ್ನಾ ಎಷ್ಟು ಜನ ಬಾದಷಾಗಳು ಓದ್ತಾರೆ? ಇವರು ಕೊಡ್ತಿರೋ ಸಂದೇಶ ಏನಪ್ಪಾ ಅಂದ್ರೆ "ಪೆದ್ದುಮುಂಡೇವಾ, ಹಿಂದಿ ಹಾಡುಗಳನ್ನು ಕಲೀರಿ, ಕಲ್ತು ಲಕ್ಷಾಂತರ ಗೆಲ್ಲಿ" ಅಂತಾನಾ ಗುರು! ಒಂದು ಚುಟ್ಟಿನಾದ್ರೂ ಸ್ವಾಭಿಮಾನ ಇರೋ ಕನ್ನಡಿಗ ಇದನ್ನು ಹ್ಯಾಗೆ ಸ್ವೀಕರ್ಸ್ತಾನೆ ಅನ್ನೋದು ಕುತೂಹಲದ ಸಂಗತೀನೆ. ಒಟ್ನಲ್ಲಿ ಈ ಜಾಹೀರಾತಿನ ಮೂಲಕ ಕನ್ನಡದೋರ ಕಣಕಣದಲ್ಲಿ ಬಾಲಿವುಡ್ ಇರುತ್ತೆ ಅನ್ನೋ ಪೆಕರುತನಾನು, ಇರಬೇಕು ಅನ್ನೋ ಉದ್ಧಟತಾನಾನೂ ರೇಡೀಯೋ ಒನ್ ತೋರುಸ್ಕೊತಾ ಇದೆ. ಬೆಂಗಳೂರಿನಲ್ಲಿ ಕನ್ನಡದ ಕಾರ್ಯಕ್ರಮ ಮಾಡೋದು ಬಿಟ್ಟು ಹಿಂದಿ ಹಾಡಿನ ಸ್ಪರ್ಧೆಗೆ ಮುಂದಾಗಿರೋದು ವ್ಯಾಪಾರಿ ದೃಷ್ಟಿಯಿಂದ ಎಷ್ಟೇ ಕೆಟ್ಟ ತೀರ್ಮಾನ ಆಗಿದ್ರೂ ಅದು ಅವರಿಷ್ಟ ಅಂದ್ಕೊಂಡು ಸುಮ್ನಾಗಬೋದು, ಆದ್ರೆ ಇದು ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಮಾಡ್ತಿರೋ ಹಿಂದಿ ಹೇರಿಕೆಯೆಂಬ ನಾಡದ್ರೋಹದ ಪ್ರಯತ್ನ ಅನ್ಸಲ್ವಾ ಗುರು?
Related Posts with Thumbnails