ಕೋಕಾಕೋಲಾ ಕಂಡುಕೊಂಡ ಗೆಲುವಿನ ದಾರಿ!


ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಸ್ಟೈಲಲ್ಲೇ ಹೇಳೋದಾದ್ರೆ...
ಗೊತ್ತಾಗೋಯ್ತು ಕಣ್ರೀ,
ಕೋಕಾಕೋಲಾದವ್ರಿಗೆ ಗೊತ್ತಾಗೋಯ್ತು ಕಣ್ರೀ...
ಕರ್ನಾಟಕದಲ್ಲಿ ವ್ಯಾಪಾರ ಮಾಡಿ ಗೆಲ್ಲಬೇಕು ಅಂದ್ರೆ ಏನ್ ಮಾಡ್ಬೇಕು ಅಂತಾ ಗೊತ್ತಾಗೋಯ್ತು ಕಣ್ರೀ

ಕೋಕಾಕೋಲಾ ಸಂಸ್ಥೆಯವರು ಕರ್ನಾಟಕದ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ನಮ್ಮ ಗೋಲ್ಡನ್ ಸ್ಟಾರ್ ಗಣೇಶ ಅವರನ್ನ ರಾಯಭಾರಿ ಮಾಡ್ಕೊಂಡಿರೋದೂ, ಅವ್ರುನ್ ಹಾಕ್ಕೊಂಡು ಜಾಹೀರಾತು ಮಾಡಿರೋದೂ ಒಳ್ಳೇ ಬೆಳವಣಿಗೆ ಗುರು!

ಮಾರುಕಟ್ಟೆ ಗೆಲ್ಲಕ್ಕಿದು ಸರಿಯಾದ ತಂತ್ರ!

ಕರ್ನಾಟಕದಲ್ಲಿ ಕನ್ನಡದಲ್ಲಿ ಜಾಹೀರಾತು ಹಾಕೋದು, ಕನ್ನಡದ ತಾರೆಯರನ್ನ ಪ್ರಚಾರಕ್ಕೆ ಬಳಸೋದು ಇಲ್ಲಿನ ಮಾರುಕಟ್ಟೆ ಗೆಲ್ಲೋಕೆ ಇರೋ ತಂತ್ರ ಅನ್ನೋದು ಅಂಗೈ ಮೇಲಿರೋ ಸ್ಪಟಿಕದಷ್ಟೇ ಸ್ಪಷ್ಟ. ಕೋಕಾಕೋಲಾ ಸಂಸ್ಥೆಗೆ ತಡವಾಗಿಯಾದ್ರೂ ಇದು ಅರ್ಥವಾಗಿದೆ ಗುರು! ಯಾವುದೇ ವಸ್ತೂನ ಕೊಳ್ಳಬೇಕಾದ್ರೆ ಅದರ ಬಗ್ಗೆ ಶಿಫಾರಸ್ಸು ಮಾಡೋರು ನಮ್ಮೋರು ಅನ್ನೋ ಭಾವನೆ ಕೊಳ್ಳುಗನಲ್ಲಿರಲಿ ಅನ್ನೋದೆ ಜಾಹೀರಾತುಗಳಲ್ಲಿ ಪರಿಚಿತ ಕಲಾವಿದರನ್ನು ಬಳಸೋಕಿರೋ ಕಾರಣ. ಇದನ್ನು ಮಾಡಕ್ಕೆ ಚೂರು ಜಾಸ್ತಿ ದುಡ್ಡು ಆಗುತ್ತೆ ಅಂತಾನೋ ಅಥ್ವಾ ಇನ್ನೊಂದಕ್ಕೋ ನಮ್ಮ ಉತ್ಪಾದಕರುಗಳು, ಜಾಹೀರಾತು ಸಂಸ್ಥೆಗಳೋರೂ ಒಂದು ಭಾಷೆಯ ಜಾಹೀರಾತನ್ನೇ ಎಲ್ಲಾ ಕಡೆ ಬರಿ ದನಿ ಬದಲಿಸಿ ಹಾಕ್ಕೊಳ್ಳೊ ದಾರಿ ತುಳಿಯುತ್ತಿದ್ರು ಅನ್ನೋದು ಗೊತ್ತೇ ಇರೋ ಸಂಗತಿ. ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಜನರ ಮನಸ್ಸಿಗೆ ತಲುಪಿಸಬೇಕು ಅನ್ನೋ ನಿಜವಾದ ಬುದ್ಧಿ ಮತ್ತು ಮನಸ್ಸಿದ್ದೋರು ಬಳಸೋ ದಾರೀನೇ ಈಗ ಕೋಕಾಕೋಲಾದವ್ರು ಕಂಡುಕೊಂಡಿದಾರೆ ಗುರು!

ಇದು ಕೊನೆಗೂ ಬದಲಾಗ್ತಾ ಇದೆ !

ಇವತ್ತಿನ ದಿವ್ಸಾ ಕೋಕಾಕೋಲಾ ಸಂಸ್ಥೆ ಇಟ್ಟಿರೋ ಈ ಹೆಜ್ಜೆ ನಾಡಿನ ಇತರೆ ಉದ್ದಿಮೆದಾರರಿಗೆ ಮಾದರಿಯಾಗಿದೆ. ಕರ್ನಾಟಕದಲ್ಲಿ ವ್ಯಾಪಾರ, ವ್ಯವಹಾರ ಮಾಡಲು ಬರುವ ಸಂಸ್ಥೆಗಳು ಹೆಚ್ಚೆಚ್ಚು ಲಾಭಗಳಿಸಲು ಇರುವ ಹಾದಿ ಎಂದರೆ ತಮ್ಮ ಜಾಹೀರಾತುಗಳನ್ನು ಹೆಚ್ಚೆಚ್ಚು ಕನ್ನಡಿಗರಿಗೆ ತಲುಪುವಂತೆ ಮಾಡುವುದು ಅಂತಾ ಸಾರ್ತಿದೆ. ಹಾಗೆ ಕನ್ನಡಿಗರ ಮನಸ್ಸನ್ನು ತಲುಪಲು, ಕನ್ನಡದ ಕಲಾವಿದರನ್ನು, ಜನಪ್ರಿಯ ಕನ್ನಡದ ಕ್ರೀಡಾಪಟುಗಳನ್ನು ತಮ್ಮ ಜಾಹೀರಾತುಗಳಲ್ಲಿ ಬಳಸಬೇಕು ಇದು ಲಾಭದಾಯಕ ಅನ್ನೋ ಸಂದೇಶಾನೂ ಕೊಡ್ತಿದೆ. ಇದರಿಂದ ಸಿನಿಮಾ ರಂಗದ ಜೊತೆಜೊತೆಗೇ ಜಾಹೀರಾತು ರಂಗದ ಅವಕಾಶವೂ ಸಿನಿಮಾ ಮಂದಿಗೆ ಸಿಗುತ್ತೆ. ಇದನ್ನು ಸಿನಿಮಾದವ್ರು ಅರ್ಥ ಮಾಡ್ಕೊಂಡು ಜಾಹೀರಾತು ಕ್ಷೇತ್ರಕ್ಕೆ ಧುಮುಕುದ್ರೆ ಇದರಿಂದ ಎರಡೂ ರಂಗದೋರಿಗೆ ಲಾಭ, ಸಂಸ್ಥೆಗಳಿಗೆ ಮಾರುಕಟ್ಟೆ ವಿಸ್ತಾರವಾಗೋದೂ ದಿಟ!! ಹೌದಲ್ವಾ ಗುರು?

ಚಿತ್ರರಂಗಕ್ಕೆ ಬೇಕಿರೋದು ಊರುಗೋಲಲ್ಲ, ಸ್ವಂತಬಲ!


ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಮುಖ್ಯಸ್ಥೆಯಾದ ಶ್ರೀಮತಿ ಡಾ.ಜಯಮಾಲಾ ಅವ್ರು ಸರ್ಕಾರದ ಬಜೆಟ್ ನಂತರ ತಮ್ಮ ಅಸಮಾಧಾನಾನ ತೋಡಿಕೊಂಡಿದ್ದಾರೆ ಅನ್ನೋ ಸುದ್ದಿ 21.02.2009ರ ಕನ್ನಡಪ್ರಭದಲ್ಲಿ ವರದಿಯಾಗಿದೆ. ಕನ್ನಡ ಸಿನಿಮಾ ಎಪ್ಪತ್ತೈದರ ಹೊಸ್ತಿಲಲ್ಲಿ ನಿಂತಿರೋವಾಗ, ಈ ಸುದ್ದಿ ಓದಿದವರ ಮನಸ್ಸಲ್ಲಿ ಕನ್ನಡ ಚಲನಚಿತ್ರರಂಗವಿನ್ನೂ ಸ್ವಾವಲಂಬಿ ಆಗಿಲ್ವಾ? ಅನ್ನೋ ಪ್ರಶ್ನೆ ಹುಟ್ಟೋದು ಸಹಜಾ ಗುರು!

ಕನ್ನಡ ಚಿತ್ರರಂಗದ ಬೇಡಿಕೆಗಳಾದ್ರೂ ಏನು?

ಇವತ್ತಿನ ದಿವಸ ಸರ್ಕಾರಾನಾ ಈ ಸಿನಿಮಾದೋರು ಏನೇನು ಬೇಡಿದಾರೆ ಅಂತಾ ನೋಡಿ. ಕನ್ನಡ ಚಿತ್ರರಂಗದಲ್ಲಿ ತೆಗೆಯೋ ಎಲ್ಲಾ ಚಿತ್ರಗಳಿಗೆ ಸಬ್ಸಿಡಿ ಹಣವನ್ನು ಸರ್ಕಾರ ಕೊಡಬೇಕಂತೆ. ಹಾಗೆ ಈ ಬಾರಿ ಬಜೆಟ್ಟಲ್ಲಿ ಕೊಟ್ಟಿಲ್ಲಾ ಅನ್ನೋದು ಕನ್ನಡ ಚಿತ್ರರಂಗಕ್ಕೆ ಹೊಡೆದ ಕೊನೆಯ ಮೊಳೆಯಂತೆ!

ಗುಣಮಟ್ಟದ ಸಿನಿಮಾಗಳಿಗೆ, ಪ್ರಶಸ್ತಿ ವಿಜೇತ ಚಿತ್ರಗಳಿಗೆ, ಸಾಮಾಜಿಕ ಸಂದೇಶವುಳ್ಳ ಸಿನಿಮಾಗಳಿಗೆ, ಮಕ್ಕಳ ಚಿತ್ರಗಳಿಗೆ ಅಂತಾ ಒಂದೊಂದಾಗಿ ಶುರುವಾಗಿದ್ದ ಈ ಸಬ್ಸಿಡಿ ಅನ್ನೋದನ್ನು ಒಳ್ಳೇ ಚಿತ್ರಗಳಿಗೆ ಅಂತ ಮಾಡುದ್ರು. ಆಮೇಲೆ ರಿಮೇಕ್ ಅಲ್ಲದ ಚಿತ್ರಗಳಿಗೆ ಅಂದ್ರು, ಈಗ ರಿಮೇಕೋ ಸ್ವಮೇಕೋ ಎಲ್ಲಾ ಕನ್ನಡ ಚಿತ್ರಗಳಿಗೆ ಇಪ್ಪತ್ತಿಪ್ಪತ್ತು ಲಕ್ಷ ಕೊಡಬೇಕು ಅಂತಾ ಕೇಳ್ತಾರಲ್ಲಾ... ವರ್ಷಕ್ಕೆ ಬರೋ ನೂರು ಚಿತ್ರಗಳಿಗೆ ತಲಾ ಇಪ್ಪತ್ತು ಲಕ್ಷದಂತಾದ್ರೆ ಸರ್ಕಾರಕ್ಕೆ 20 ಕೋಟಿ ಹೊರೆ ಬೀಳುತ್ತೆ. ಇರಲಿ, ನಮ್ಮ ಸಿನಿಮಾರಂಗ ಉಳೀಬೇಕು ಅಂದ್ರೆ ಏನೇನಾಗಬೇಕು ಎಲ್ಲಾ ಮಾಡಲೇಬೇಕು. ಆದ್ರೆ ಇವರ ಬೇಡಿಕೆಯ ಪಟ್ಟಿ ಎಲ್ಲಿಂದ ಎಲ್ಲಿಗೆ ಮುಟ್ಟಿದೆ ನೋಡಿ. ಕನ್ನಡ ಚಿತ್ರಗಳಿಗೆ ಸಹಾಯ ಧನ ಅಂತಾ ಇಪ್ಪತ್ತಿಪ್ಪತ್ತು ಲಕ್ಷಾನ ಪುಗಸಟ್ಟೇ ಕೊಡಬೇಕು, ಪ್ರದರ್ಶನ ತೆರಿಗೆಯನ್ನು ರದ್ದು ಮಾಡಬೇಕು, ಇವ್ರು ರಿಮೇಕ್ ಮಾಡುದ್ರೂ ಅದಕ್ಕೆ ಪ್ರಶಸ್ತಿ ಕೊಡಬೇಕು...ಅಂತಿದಾರೆ. ನಾಳೆ ಹೀಗೇ ಮುಂದುವರಿದು "ಇಡೀ ಸಿನಿಮಾಗೆ ಸರ್ಕಾರ ಪೂರ್ತಿ ದುಡ್ಡುಕೊಡಬೇಕು, ಜನರಿಗೆ ಮನೆಮನೆಗೆ ಟಿಕೆಟ್ ತಲುಪಿಸಬೇಕು, ನಮ್ ಸಿನಿಮಾ ನೋಡ್ದೇ ಇದ್ದೋರ್ಗೆ ಶಿಕ್ಷೆ ಕೊಡಬೇಕು... ಇವೆಲ್ಲಾ ಮಾಡುದ್ರೆ ಚಿತ್ರರಂಗ ಉಳ್ಯುತ್ತೆ" ಅನ್ನೋ ದಿನವೂ ಬಂದೀತಾ ಅಂತಿದಾರೆ ಜನಾ!

ನಿಜವಾಗ್ಲೂ ಕೊನೆಮೊಳೆ ಹೊಡೀತಾ ಇರೋರು ಯಾರು?

ಕನ್ನಡ ಚಿತ್ರರಂಗಾನ ಕಳಪೆ ಕಥೆಗಳಿಂದ, ಕಳಪೆ ಹಾಡುಗಳಿಂದ, ಕೆಟ್ಟದಾಗಿ ಉಚ್ಚರಿಸಿದ್ರೂ ಇವರೇ ಬೇಕು ಅಂತಾ ಪರಭಾಷಿಕ ಹಾಡುಗಾರರನ್ನು ಕರೆತರೋದ್ರಿಂದ, ಕನ್ನಡದ ಕಲಾವಿದರನ್ನು ಕಡೆಗಣಿಸಿ ಹೊರಗಿನಿಂದ ಆಮದು ಮಾಡಿಕೊಳ್ಳೋದ್ರಿಂದ, ಜುಜುಬಿ ಒಂದು ಹಾಸ್ಯದ ದೃಶ್ಯಾನೂ ಸ್ವಂತವಾಗಿ ಮಾಡಕ್ಕಾಗ್ದೆ ಪಕ್ಕದ ಭಾಷೆ ಸಿನಿಮಾಗಳಿಂದ ಕದಿಯೋದ್ರಿಂದ, ಆಗಿರೋ ಒಪ್ಪಂದಗಳನ್ನು ಒಳಗಿಂದೊಳಗೇ ಮುರಿದು ಪರಭಾಷಾ ಚಿತ್ರ ವಿತರಣೆ ಒಂದ್ಕಡೆ ಮಾಡ್ಕೊಂಡು, ಇನ್ನೊಂದ್ಕಡೆ ಕನ್ನಡ ಚಿತ್ರರಂಗ ಉಳ್ಸಿ ಉಳ್ಸಿ ಅಂತ ಬೂಟಾಟಿಕೆ ಮಾಡೋದ್ರಿಂದ... ಕೊನೆ ಮೊಳೆ ಹೊಡ್ಯಕ್ ಮುಂದಾಗಿರೋದು ಚಿತ್ರರಂಗದ ಒಳಗಿನ ಕೆಲಮಂದೀನೇ ಅಂತ ಜನಕ್ ಅನ್ಸಲ್ವಾ ಗುರು?
ಕನ್ನಡ ಚಿತ್ರರಂಗದೋರು ಉದ್ಧಾರ ಆಗೋಕೆ ತೊಡಕಾಗಿರೋ ಮೂಲಭೂತ ಸಮಸ್ಯೆ ಏನು? ಇದಕ್ ಪರಿಹಾರ ಏನು? ಅಂತಾ ಚಿಂತನೆ ಮಾಡಿ, ಇಲ್ಲಿನ ಪ್ರತಿಭೆಗಳನ್ನು ಬೆಳೆಸೋದು ಹ್ಯಾಗೆ? ಹೊಸ ಪ್ರತಿಭೆಗಳನ್ನು ಬೆಳಕಿಗೆ ತರೋದು ಹ್ಯಾಗೇ? ಕನ್ನಡ ಚಿತ್ರಗಳಿಗೆ ಬಂಡವಾಳ ತೊಡಗಿಸೋರ್ಗೆ ಅನುಕೂಲ ಮಾಡಿಕೊಡೋದು ಹ್ಯಾಗೇ? ಕಲಾವಿದರ ಜೀವನ ಭದ್ರತೆಗೆ ಏನು ಮಾಡಬೇಕು? ಮೀಟರ್ ಬಡ್ಡಿ ಸಾಲದ ಶೂಲವಿಲ್ಲದ, ಸರಳ ಬಡ್ದಿಯ ಸಾಲಕ್ಕೆ ಸಹಕಾರಿಯಾಗೋದು ಹ್ಯಾಗೇ? ಕನ್ನಡ ಚಿತ್ರರಂಗಾನಾ ಉದ್ಯಮವಾಗಿ ನೋಡಿ, ಪ್ರಪಂಚದ ತುಂಬೆಲ್ಲಾ ಮಾರುಕಟ್ಟೆ ಹುಟ್ಟುಹಾಕೋ ವೃತ್ತಿಪರತೆ ಹೇಗೆ ಗಳಿಸಿಕೊಳ್ಳೋದು? ಅಂತೆಲ್ಲಾ ಗಹನವಾದ ಚರ್ಚೆ ನಡ್ಸಕ್ ಮುಂದಾಗಬೇಕು ಗುರು! ಕನ್ನಡ ಚಿತ್ರರಂಗಕ್ಕೆ ತನ್ನಕಾಲಮೇಲೆ ನಿಲ್ಲೋ ತಾಕತ್ತಿಲ್ಲಾ ಅಂತಾ ಚಿತ್ರರಂಗದೋರು ಭಾವಿಸೋದಾದ್ರೆ ಸರ್ಕಾರದ ಸವಲತ್ತುಗಳ ಊರುಗೋಲಿನ ಆಶ್ರಯ ಬಯಸೋದು ಬಿಟ್ಟು ಮಾರುಕಟ್ಟೆ ಗೆಲ್ಲಬಲ್ಲ ಚಿತ್ರಗಳ ನಿರ್ಮಾಣವೆಂಬ ಸೋತಕಾಲಿಗೆ ಬಲತುಂಬೋ ದೀರ್ಘಾವಧಿ ಯೋಚನೆಗಳೂ, ಯೋಜನೆಗಳೂ ಬೇಕು ಗುರು!

ಕನ್ನಡ ಚಿತ್ರರಂಗಕ್ಕೀಗ ಡಬ್ಬಿಂಗ್ ಬೇಕು!

ಕನ್ನಡ ಚಿತ್ರರಂಗ ಮಿನುಗುತಿರಲಿ. ನಮ್ಮ ಬದುಕಿನ ಬೇರೆ ಮಾಡಲಾಗದ ಅಂಗವಾಗಿರೋ, ನಮ್ಮನ್ನು ಗಾಢವಾಗಿ ಆವರಿಸಿಕೊಂಡಿರುವ ಚಿತ್ರರಂಗಕ್ಕೀಗ ಎಪ್ಪತ್ತೈದು. ಇದು ಕನ್ನಡ ನಾಡಿಗೇ ಹಿಗ್ಗು ತಂದಿದೆ. ಕನ್ನಡ ಚಿತ್ರರಂಗಕ್ಕೆ ಕನ್ನಡ ಜನತೆಯ ಶುಭ ಹಾರೈಕೆಗಳು.
ಈ ಸಮಯದಲ್ಲೇ ಚಿತ್ರರಂಗದೋರು ಒಂದು ಸೊಗಸಾದ ಅದ್ದೂರಿ ಕಾರ್ಯಕ್ರಮಾನಾ ನಡ್ಸಕ್ ಮುಂದಾಗಿರೋದೂ ಎಪ್ಪತ್ತೈದರ ಹಬ್ಬಕ್ಕೆ ಒಳ್ಳೆ ಖಳೆ ತರುತ್ತೆ. ಎಪ್ಪತ್ತೈದು ಮುಗ್ದಿರೋದು ಸಂಭ್ರಮದ ಆಚರಣೆಗೆ ಮಾತ್ರಾ ಸೀಮಿತವಾಗದೆ ಕನ್ನಡ ಸಿನಿಮಾ ಉದ್ಯಮ ಎದುರುಸ್ತಿರೋ ಸಮಸ್ಯೆಗಳನ್ನು ಪರಿಹರಿಸೋಕೆ ಇರೋ ದಾರಿಗಳ ಬಗ್ಗೆ ಗಂಭೀರವಾದ ಚಿಂತನೆ ಮಾಡಕ್ಕಿರೋ ಒಂದೊಳ್ಳೆ ಅವಕಾಶಾನೂ ಆಗಿದೆ. ಇವತ್ತಿನ ದಿವಸ ಚಿತ್ರರಂಗ ಒಲ್ಲೆ ಅನ್ತಾ ಇರೋ, ಒಂದು ಕಹಿ ಔಷಧಿಯ ಬಗ್ಗೆ ಚಿತ್ರರಂಗದೋರ ಗಮನ ಸೆಳೆಯೋಣ. ಆ ಮೂಲಕ ಒಳ್ಳೇ ಚರ್ಚೆ, ಸರಿಯಾದ ನಿರ್ಧಾರಗಳು ಹೊರಹೊಮ್ಮಲಿ ಅನ್ನೋದು ಏನ್ ಗುರುವಿನ ಆಶಯವಾಗಿದೆ. ಅಂದಹಾಗೇ ಆ ಔಷಧದ ಹೆಸರು ಡಬ್ಬಿಂಗ್.
ಅಂದು ಡಬ್ಬಿಂಗ್ ಬೇಡ ಅಂದಿದ್ದು ಸರಿ!
ಹಿಂದೆ ಅಂದ್ರೆ ಅರವತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಅನ್ನೋದು ನೆಲೆಯಾಗಿದ್ದುದ್ದು ಮದ್ರಾಸಿನಲ್ಲಿ. ನಮ್ಮ ಚಿತ್ರಗಳ ನಿರ್ಮಾಪಕರುಗಳಲ್ಲಿ ಹೆಚ್ಚಿನೋರು ಪರಭಾಷೆಯೋರೆ. ಮೊದಲ ಕನ್ನಡ ಚಿತ್ರ ತೆಗ್ಯಕ್ಕೆ ಬಂಡವಾಳ ಕೂಡಿಹಾಕಿದ ಕಥೆ ಓದುದ್ರೇ ಆವತ್ತಿನ ದಿನ ಕನ್ನಡದಲ್ಲಿ ಚಿತ್ರ ತೆಗ್ಯೋದು ಅನ್ನೋದು ಎಷ್ಟು ತ್ರಾಸಿನ ಬಾಬತ್ತಾಗಿತ್ತು ಅಂತ ತಿಳ್ಯುತ್ತೆ. ಮದ್ರಾಸಿನ ಸ್ಟುಡಿಯೋಗಳಲ್ಲಿ ಕನ್ನಡದ ಚಿತ್ರಗಳ ಶೂಟಿಂಗಿಗೆ ರಾತ್ರಿ ಪಾಳಿ ಮಾತ್ರಾ ಮೀಸಲು ಮಾಡಿದ್ರಂತೆ ಅನ್ನೋದು ಕೇಳುದ್ರೆ ನಮ್ಮ ಚಿತ್ರರಂಗದ ಅಂದಿನ ಹೀನಾಯ ಸ್ಥಿತಿ ತಿಳ್ಯುತ್ತೆ. ಕನ್ನಡದ ತಂತ್ರಜ್ಞರಿಲ್ಲ, ಸ್ಟುಡಿಯೋ ಇಲ್ಲ, ರಿಕಾರ್ಡಿಂಗ್ ಇಲ್ಲ, ಸಂಗೀತಗಾರರಿಲ್ಲ...ಇಲ್ಲ ಇಲ್ಲ ಇಲ್ಲ ಅನ್ನೋ ಸ್ಥಿತಿಯಲ್ಲಿ ಕನ್ನಡ ಚಿತ್ರ ತೆಗ್ಯೋದಂದ್ರೆ ದೊಡ್ಡ ಸಾಹಸವೇ ಆಗಿಹೋಗಿತ್ತು... ಆಗ. ನಮ್ಮ ಸ್ವಾವಲಂಬನೆಗೆ ಅಡ್ಡಿಯಾಗಿದ್ದ ಇಂಥ ಸನ್ನಿವೇಶದಲ್ಲಿ ಒಂದು ಚಿತ್ರದ ದನಿ ಬದಲಿಸಿ ಯಾವ ಭಾಷೆಯ ದನಿಯನ್ನಾದ್ರೂ ಕೂಡಿಸಿ ಆಯಾ ಭಾಷಾ ಪ್ರಾಂತ್ಯದಲ್ಲಿ ಬಿಡುಗಡೆ ಮಾಡುದ್ರೆ ಕಡಿಮೆ ಖರ್ಚು ಅನ್ನೋದನ್ನು ಕಂಡುಕೊಂಡ ಭಾರತೀಯ ಚಿತ್ರರಂಗ, ಈ ಪಾಟಿ ಕಷ್ಟ ಪಟ್ಕೊಂಡು ಕನ್ನಡ ಸಿನಿಮಾ ತೆಗೆಯೋ ಬದಲು ತೆಗೆದಿರೋ ತೆಲುಗು, ಹಿಂದಿ, ತಮಿಳು ಚಿತ್ರಗಳಿಗೆ ಕನ್ನಡದ ದನಿ ಜೋಡಿಸಿದ್ರೆ ಸಾಕೆಂದುಕೊಳ್ತು. ಆ ಕಾರಣದಿಂದಲೇ ಕನ್ನಡ ಸಿನಿಮಾ ಇಂಡಸ್ಟ್ರಿ ಸಾಯೋದೊಂದೇ ದಾರಿ ಅನ್ನೋ ಪರಿಸ್ಥಿತಿ ಹುಟ್ಕೊಳ್ತು. ಆಗ ಈ ಡಬ್ಬಿಂಗು ಒಂದು ಪಿಡುಗು, ಇದರಿಂದ ಕನ್ನಡ ಚಿತ್ರೋದ್ಯಮಕ್ಕೆ ಹಾನಿ ಅಂತಾ ಡಬ್ಬಿಂಗ್ ವಿರೋಧಿ ಚಳವಳಿ ಹುಟ್ಕೊಳ್ತು. ಡಾ. ರಾಜ್ ಕುಮಾರ್ ಅವ್ರೂ ಮುಂಚೂಣಿಯಲ್ಲಿದ್ದ ಈ ಚಳವಳಿ ಯಶಸ್ವಿಯಾಗಿದ್ದು ಡಬ್ಬಿಂಗ್ ನಿಷೇಧವಾದಾಗ. ಇದರ ಪರಿಣಾಮವಾಗಿ ಕನ್ನಡ ಚಿತ್ರರಂಗ ಬೆಂಗಳೂರಿಗೆ ಬಂತು, ಹತ್ತಾರು ಸ್ಟುಡಿಯೋಗಳು ಬಂದವು, ಸಾವಿರಾರು ಜನ ಕಲಾವಿದರು ಬೆಳಕಿಗೆ ಬಂದರು, ನಾಡಿನ ಅನೇಕ ಸುಂದರ ತಾಣಗಳು ತೆರೆಗೆ ಬಂದವು, ಇಂದು ಈ ಮಟ್ಟಕ್ಕೆ ಸ್ವಾಭಿಮಾನಿಯಾಗಿ ಕನ್ನಡ ಚಿತ್ರರಂಗ ಬೆಳೆಯಲು ಕಾರಣವಾಯ್ತು.
ಇಂದು ಡಬ್ಬಿಂಗ್ ಬೇಕಾಗಿದೆ!
ಇವತ್ತಿನ ದಿನ ಕನ್ನಡ ಚಿತ್ರರಂಗ ತನ್ನ ಕಾಲ ಮೇಲೆ ತಾನು ನಿಂತಿದೆ. ಇವತ್ತು ಡಬ್ಬಿಂಗ್ ಬಗೆಗಿನ ನಮ್ಮ ನಿಲುವನ್ನು ಪರಾಮರ್ಶೆ ಮಾಡೋ ಕಾಲ ಬಂದಿದೆ. ಎಲ್ಲಾನೂ ನಾವೇ ಮಾಡ್ತೀವಿ ಅನ್ನಕ್ ಆಗ್ದಿರೋ ಸತ್ಯಾ ಅರಗಿಸಿಕೊಂಡು ಪ್ರಪಂಚದ ಅತ್ಯುತ್ತಮವಾದ ಚಿತ್ರಗಳನ್ನೆಲ್ಲಾ ನಮ್ಮ ನುಡಿಯಲ್ಲೇ ನೋಡೋಂಥಾ ಅವಕಾಶದತ್ತ ನೋಡಬೇಕಾಗಿದೆ. ಈಗ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ಕೊಡೋದ್ರೂ ಮೂಲಕ ಕರ್ನಾಟಕದಲ್ಲಿ ಪ್ರದರ್ಶನವಾಗೋ/ ಬಿಡುಗಡೆಯಾಗೋ ಎಲ್ಲಾ ಪರಭಾಷಾ ಚಿತ್ರಗಳನ್ನು ನಿಯಂತ್ರಿಸೋಕ್ಕೆ ಒಳ್ಳೆ ಅವಕಾಶಾನೂ ಇದೆ ಗುರು! ಪರಭಾಷಾ ನಿರ್ಮಾಪಕರಿಗೇನಂತೆ? ಅವರ ಸಿನಿಮಾ ದುಡ್ಡು ತಂದುಕೊಟ್ರೆ ಸಾಕಲ್ವಾ? ಡಬ್ಬಿಂಗ್ ಒಪ್ಪೋ ಮೂಲಕ ಇನ್ನಷ್ಟು ಹೆಚ್ಚು ಗಳಿಸಬಹುದು ಅಂತನ್ನೋದು ಮನವರಿಕೆ ಆದರೆ ಅವರೂ ಕೂಡಾ ನಮ್ಮ ನೆಲದಲ್ಲಿ ಕನ್ನಡದಲ್ಲೇ ಚಿತ್ರ ಬಿಡುಗಡೆ ಮಾಡಲು ಮುಂದಾಗ್ತಾರೆ. ಕನ್ನಡಿಗರ ಮನರಂಜನೆ ಕನ್ನಡದಲ್ಲಿರಬೇಕು ಅನ್ನೋದು ನಮ್ಮ ಹಕ್ಕಾಗಿದೆ. ನಾವು ಸೂಪರ್ ಮ್ಯಾನ್ ಆಗ್ಲೀ, ಸ್ಪೈಡರ್ ಮ್ಯಾನ್ ಆಗ್ಲೀ, ಜುರಾಸಿಕ್ ಪಾರ್ಕ್ ಆಗ್ಲೀ... ನಮ್ಮ ನುಡಿಯಲ್ಲೇ ಸವಿಯೋದ್ರಲ್ಲೇನು ತಪ್ಪಿದೆ? ಡಬ್ಬಿಂಗ್ ಮೂಲಕ ಶಿವಾಜಿ, ಕುಸೇಲನ್, ತಾರೆ ಜಮೀನ್ ಪರ್, ಘಜನಿ... ಮೊದಲಾದವು ನೂರಾರು ಕೇಂದ್ರದಲ್ಲಿ ಆಯಾ ಭಾಷೇಲೇ ಬಿಡುಗಡೆಯಾಗಿ, ಕನ್ನಡದೋರೆಲ್ಲಾ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲೇ ಮನರಂಜನೆ ಪಡ್ಕೊಳ್ಳೋಕೆ ಮುಂದಾಗೋದನ್ನು ತಪ್ಪಿಸಬಹುದಲ್ವಾ ಗುರು?
ಡಬ್ಬಿಂಗ್ ಬೇಡ ಅನ್ನೋದು ಕಾನೂನಲ್ಲ!
ಡಬ್ಬಿಂಗ್ ನಿಷೇಧ ಅನ್ನೋದಕ್ಕೆ ಯಾವ ಕಾನೂನು ಮಾನ್ಯತೇನೂ ಇಲ್ಲ. ಅಷ್ಟೇ ಯಾಕೆ? ಏಳು ವಾರಗಳ ಗಡುವಿಗೂ ಯಾವ ಮಾನ್ಯತೆ ಇಲ್ಲ. ಯಾರಾದ್ರೂ ಸರಿಯಾಗಿ ಕೋರ್ಟಿಗೆ ಹೋದ್ರೆ ತೆಪ್ಪಗೆ ಎರಡಕ್ಕೂ ಅವಕಾಶ ಕೊಡಬೇಕಾಗುತ್ತೆ. ಅಂಥದ್ರಲ್ಲಿ ಕೆಲಸಾವಿರ ಜನಕ್ಕೆ ಉದ್ಯೋಗ ಹೊರಟು ಹೋಗುತ್ತೆ ಅನ್ನೋ ಹುರುಳಿಲ್ಲದ ಕಾರಣಕ್ಕೆ ಈ ಪರಿಸ್ಥಿತಿ ಹೀಗೆ ಮುಂದುವರೀಬೇಕಾ? ಚಿತ್ರರಂಗದೋರು ಭಯ ಪಡೋದಕ್ಕೆ ಅರವತ್ತರ ದಶಕದಲ್ಲಿದ್ದ ಸ್ಥಿತಿ ಈಗೇನೂ ಇಲ್ಲವಲ್ಲಾ? ಈಗಿರೋ ಕೆಲಸದ ಜೊತೆ ಡಬ್ಬಿಂಗ್ ಕಲಾವಿದರಿಗೆ, ಸಾಹಿತಿಗಳಿಗೆ ಹೆಚ್ಚು ಅವಕಾಶ ಸಿಗುತ್ತೆ ಅನ್ನೋದು ಸರಿಯಲ್ವಾ? ಡಬ್ಬಿಂಗ್ ಬೇಡ ಅನ್ನುತ್ತಿರೋ ಜನ್ರಲ್ಲೇ ಎಷ್ಟೋ ಜನ್ರು ಪರಭಾಷಾ ಚಿತ್ರಗಳ ವಿತರಕರೇ ಆಗಿದಾರೆ ಅನ್ನೋ ಗುಮಾನಿ ಇದೆ. ಡಬ್ಬಿಂಗ್ ಬಂದ್ರೆ ತಮ್ಮ ವಿತರಣಾ ಉದ್ದಿಮೆಗೆ ಹೊಡ್ತಾ ಬೀಳುತ್ತೆ, ರಿಮೇಕ್ ಮಾಡಕ್ಕೆ ಅಡ್ಡಿಯಾಗುತ್ತೆ ಅನ್ನೋ ಕಾರಣಕ್ಕೆ ಹೀಗಾಡ್ತಾರೆ ಅನ್ನೋ ಆರೋಪದಿಂದ ಈಗಿನ ಚಿತ್ರೋದ್ಯಮಿಗಳನ್ನು ಪಾರು ಮಾಡೋಕಾದ್ರೂ ಡಬ್ಬಿಂಗ್ ಬಗ್ಗೆ ಒಂದು ಒಳ್ಳೇ ಚರ್ಚೆಗೆ ಚಲಚಿತ್ರ ಮಂಡಲಿ ಮುಂದಾಗ್ಬೇಕು. ನೀವೇನಂತೀರಾ ಗುರು?

ಹೆಸರಲ್ಲೇ ಎಲ್ಲಾ ಇದೆ !

ಕಳೆದ ತಿಂಗಳು ವಿ.ಕ ಮಂಗಳೂರು ಆವೃತ್ತಿಯಲ್ಲಿ ತುಳುವಿನಲ್ಲಿರುವ ಕೆಲವು ಊರುಗಳ ಹೆಸರುಗಳನ್ನು ಬದಲಾಯಿಸಿ, ಅವುಗಳನ್ನು ತುಳುವಿನಿಂದ ದೂರ ಮಾಡುತ್ತಿರುವ ಬಗ್ಗೆ ಸುಧಾಕರ ತಿಂಗಳಾಡಿ ಅನ್ನೋರು ಬರೆದ ಒಂದು ಸುದ್ದಿ ಬಂದಿತ್ತು. ಒಂದೂರಿನ ಹೆಸರಿನ ಹಿಂದೆ ಒಂದು ಭಾಷೆ, ಒಂದು ಸಂಸ್ಕೃತಿಯ ಪ್ರಭಾವ ಯಾವತ್ತೂ ಇದ್ದು, ಅದನ್ನು ಬದಲಾಯಿಸಿ, ವೈವಿಧ್ಯತೆಯನ್ನು ಅಳಿಸುವ ಯಾವ ಪ್ರಯತ್ನವೂ ಸಲ್ಲದು ಗುರು. ಒಂದು ಪ್ರದೇಶದ ಜನರ ಬದುಕು, ಏಳ್ಗೆ ಮತ್ತು ಸಂಸ್ಕೃತಿಗಳ ಮೇಲೆ ಮಾರಕವಾಗೋ ಯಾವ ನಿರ್ಣಯ, ನೀತಿಗಳನ್ನಾಗಲೀ ಯಾರು ತೊಗೋಬಾರದು ಗುರು.

ಹೆಸರಲ್ಲೇನಿದೆ?

ಒಂದೂರಿನ ಹೆಸರು ರಚನೆಯಾಗಿದ್ದರ ಹಿಂದೆ ಆ ಮಣ್ಣಿನ ಗುಣ ದಟ್ಟವಾಗಿ ಪ್ರಭಾವ ಬೀರಿರುತ್ತದೆ, ಅದು ತುಳು ಇರಬಹುದು, ಇಲ್ಲವೇ ಕನ್ನಡ, ಕೊಡವ, ತಮಿಳು, ಹಿಂದಿ, ಫ್ರೆಂಚ್, ಜರ್ಮನ್ನೇ ಹೀಗೆ ಯಾವುದೇ ಭಾಷೆ ಆಗಿರಬಹುದು, ಈ ಮಾತು ಜಗತ್ತಿನ ಎಲ್ಲ ಭಾಷೆಗೂ ಅನ್ವಯಿಸುತ್ತೆ. ಪ್ರತಿ ಪ್ರದೇಶದ ಊರುಗಳ ಹೆಸರುಗಳು ಆಯಾ ಪ್ರದೇಶದ ಭಾಷೆ, ಇತಿಹಾಸ, ಪರಂಪರೆಯೊಂದಿಗೆ ತಳುಕು ಹಾಕಿಕೊಂಡಿರುತ್ತವೆ. ತುಳುವಿನ ಪೊಸಕೊಂಡ -> ಹೊಸ ಗದ್ದೆಯಾಗೋದೋ, ಇಲ್ಲಾ ಕನ್ನಡದ ಆನೆಪಾಳ್ಯ -> ಗಜೇಂದ್ರ ನಗರವಾಗೋದೋ, ಕೋತಿ ಬಂಡೆ -> ಮಾರುತಿ ಮಂದಿರವಾಗೋದೋ, ಇಲ್ಲವೇ ಬೆಂಗಳೂರು -> ಬ್ಯಾಂಗಲೋರ್ ಆಗೋದೋ, ಎಲ್ಲವೂ ಮೂಲದಿಂದ ನಮ್ಮನ್ನು ಬೇರ್ಪಡಿಸುವ ಕೆಟ್ಟ ಪ್ರಯತ್ನವೇ. ಏನಂತೀಯಾ ಗುರು?

ಕರ್ನಾಟಕದ ಹಿತ ಕಾಪಾಡೀತೇ... ಪ್ರಜಾರಾಜ್ಯಂ?

ಮೊನ್ನೆಮೊನ್ನೆ ನೆರೆಯ ತೆಲುಗುನಾಡಲ್ಲಿ ಹುಟ್ಟಿಕೊಂಡ ಚಿರಂಜೀವಿಯವರ ಪ್ರಜಾರಾಜ್ಯಂ ಪಕ್ಷ ಮುಂಬರುವ ಲೋಕಸಭಾ ಚುನಾವಣೇಲಿ ಕರ್ನಾಟಕದಿಂದಲೂ ಕಣಕ್ಕೆ ಇಳ್ಯುತ್ತಂತೆ. ಈ ಪಕ್ಷ ಕರ್ನಾಟಕದಲ್ಲಿ ಸ್ಪರ್ಧೆಗೆ ಇಳ್ಯಕ್ ಇರೋ ಕಾರಣಾ ಏನಪ್ಪಾ ಅಂದ್ರೆ "ಇಲ್ಲಿರೋ ತೆಲುಗರನ್ನು ಒಗ್ಗೂಡಿಸಿ, ಅವರನ್ನೆಲ್ಲಾ ಮತಶಕ್ತಿಯಾಗಿಸಿ, ಕನ್ನಡನಾಡಿನ ಲೋಕಸಭಾಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು" ಅನ್ನೋದಂತೆ. ಇಂಥಾ ಒಂದು ಸುದ್ದಿ 15.02.2009ರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಒಂಬತ್ತನೇ ಪುಟದಲ್ಲಿ ವರದಿಯಾಗಿದೆ ಗುರು!
ಅಲ್ಲಿನೋರಿಗೆ ಇಲ್ಲೇನು ಕೆಲಸ?

ಆಂಧ್ರಪ್ರದೇಶದ ಪ್ರಾದೇಶಿಕ ಪಕ್ಷವಾಗಿರೋ ಪ್ರಜಾರಾಜ್ಯಂ ಕರ್ನಾಟಕದಲ್ಲಿ ಚುನಾವಣೆಗೆ ನಿಲ್ಲೋಕೆ ಅವಕಾಶವೇನೋ ಇದೆ ಸರಿ. ಆದರೆ ಎರಡು ರಾಜ್ಯಗಳ ನಡುವೆ ಹಿಂದೆ ಇದ್ದ, ಈಗಿರುವ ಅಥವಾ ಮುಂದೆ ಹುಟ್ಟಿಕೊಳ್ಳಬಹುದಾದ ತಕರಾರುಗಳ ಬಗ್ಗೆ ಈ ಪಕ್ಷದ ನಿಲುವು ಏನಾಗಿದೆ? ನಮ್ಮ ನಾಡಿನ ಹಿತ ಕಾಪಾಡಬೇಕು ಅನ್ನೋದು ಇವರ ಆದ್ಯತೆ ಆಗಿರಲು ಸಾಧ್ಯಾನೇ? ಒಂದು ನಾಡಿನ ಪ್ರಾದೇಶಿಕ ಪಕ್ಷಕ್ಕೆ ಇನ್ನೊಂದು ನಾಡಿನ ಜನರ ಹಿತಕಾಯಬೇಕು ಅನ್ನೋ ಆದ್ಯತೆ ಇಲ್ಲದೆ ಇದ್ದಾಗ ಆ ಪಕ್ಷ ನಮ್ಮ ನಾಡಲ್ಲಿ ಬೇರೂರಲು ನಡೆಸೋ ಪ್ರಯತ್ನದ ಹಿಂದಿರೋ ಉದ್ದೇಶವೇನು? ಪ್ರಜಾರಾಜ್ಯಂ ಭಾಷಾ ಹಂಗಿಲ್ಲದೆ ಕರ್ನಾಟಕದ ಜನರ ಸೇವೆಗೆ ಮುಂದಾಗೋದಾಗಿದ್ರೆ ಬೇರೆ ಮಾತು. ಅವರು ಆಗ ಬೇರೆ ಬೇರೆ ಸಂಸ್ಥೆಗಳಿಂದ ಕರ್ನಾಟಕದ ಹತ್ತು ಲೋಕಸಭಾ ಕ್ಷೇತ್ರಗಳಲ್ಲಿ ತೆಲುಗರು ಎಷ್ಟಿದಾರೆ? ಗೆಲುವಿನ ಸಾಧ್ಯತೆ ಎಷ್ಟಿದೆ? ಅಂತ ಸಮೀಕ್ಷೆ ಮಾಡಕ್ ಮುಂದಾಗ್ತಿದ್ರಾ ಗುರು? ಇದನ್ನೆಲ್ಲಾ ನೋಡ್ತಿದ್ರೆ ಅಂತರರಾಜ್ಯ ವಲಸೆ ನಿಯಂತ್ರಣ ಕಾಯ್ದೆ ನಮ್ಮ ನಾಡಿನ ಹಿತ ಕಾಪಾಡಲು ಎಷ್ಟೊಂದು ಅಗತ್ಯವಾಗಿದೆ ಅನ್ಸಲ್ವಾ ಗುರು?

ಲಾಲೂ - ನೀವು "ಭಾರತದ" ರೇಲ್ವೇ ಮಂತ್ರಿ ತಾನೆ?

ಇಂದು (ಫೆಬ್ರವರಿ ೧೩) ೨೦೦೯-೧೦ರ ಮಧ್ಯಂತರ ರೇಲ್ವೇ ಬಜೆಟ್ (ಲೇಖಾನುದಾನ) ಮಂಡಣೆಯಾಯ್ತು. ನಾಲ್ಕು ತಿಂಗಳ ಕಾಲಕ್ಕೆ ಮಂಡಿಸಿರುವ ಈ ಬಜೆಟ್ ಕೂಡ ಅಂದ್ಕೊಂಡ ಹಾಗೇ ಕನ್ನಡಿಗರ ಅವಶ್ಯಕತೆಗಳ ಮೇಲೆ ನೀರು ಹುಯ್ದಿದೆ. ಇದು ಹೀಗೇ ಆಗಬಹುದು ಎಂದು ಎಣಿಸಿಯೋ ಏನೋ, ಬಜೆಟ್ ಮುನ್ನ ಮುಖ್ಯಮಂತ್ರಿ ಯೆಡ್ಡ್ಯೂರಪ್ಪನವರು ಕೇಂದ್ರ ರೇಲ್ವೆ ಮಂತ್ರಾಲಯಕ್ಕೆ ನಮ್ಮನ್ನ ಮರೆತುಬಿಡಬೇಡಿ ಅನ್ನೋ ಹಾಗೆ ಪತ್ರ ಬರೆದಿರೋದೂ ವರದಿಯಾಗಿದೆ! ಇಷ್ಟೆಲ್ಲಾ ಬೇಡಿಕೆಗಳ ನಡುವೆ ಕಳೆದ ಅರವತ್ತು ವರ್ಷಗಳಲ್ಲಿ ಕರ್ನಾಟಕಕ್ಕೆ ಆಗಿರೋದು ಮಾತ್ರ ಘೋರ ಅನ್ಯಾಯ. ಇಂತ ಅನ್ಯಾಯಗಳ ಮತ್ತಷ್ಟು ಅಂಕಿ-ಅಂಶಗಳು ಇಲ್ಲಿ ಕಾಣಬಹುದು.


ಇದು ಹೊಸ ರೈಲೇನಲ್ಲ!

ರೇಲ್ವೇ ವಿಚಾರದಲ್ಲಿ ಕೇಂದ್ರದ ತಾರತಮ್ಯದ ನೋಟ ವ್ಯಕ್ತವಾಗ್ತಿರೋದು ಇದೇ ಮೊದಲನೇ ಬಜೆಟ್ಟೇನಲ್ಲ. ಪ್ರತಿ-ವರ್ಷವೂ ಒಂದು ರಾಜ್ಯಕ್ಕೆ ಬೆಣ್ಣೆ, ಒಂದು ರಾಜ್ಯಕ್ಕೆ ಸುಣ್ಣ ಮಾಡುವ ಬಜೆಟ್ಟುಗಳೇ ಮಂಡಣೆಯಾಗ್ತಾ ಬಂದಿವೆ. ಇವುಗಳಲ್ಲಿ ಸುಣ್ಣ ಉಂಡಿರೋರು ಪ್ರತಿ ಬಾರಿ ನಾವೇ ಗುರು! ಪ್ರತಿ ಬಜೆಟ್ಟಿನಲ್ಲಿ ಕರ್ನಾಟಕಕ್ಕೆ ಸಿಗುತ್ತಾ ಬಂದಿರುವ ರೈಲು ಯೋಜನೆಗಳು ಇತರ ರಾಜ್ಯಗಳೆದುರು ಉಗುರಿನ ಲೆಕ್ಕಕ್ಕೂ ನಿಲ್ಲಲ್ಲ! ದೇಶದಲ್ಲೇ ಅತಿ ಕಡಿಮೆ, ಅದ್ಯಾಕೆ ಝಾರ್ಕಂಡ್ ರಾಜ್ಯಕ್ಕಿಂತ್ಲೂ ಕಡಿಮೆ ವಿದ್ಯುತ್ ರೈಲು ಮಾರ್ಗ ಹೊಂದಿರುವ ಹಣೇಬರಹ ಕನ್ನಡಿಗರದ್ದೇ ಗುರು! ಪ್ರತಿ ಬಜೆಟ್ಟಿನ ನಂತರ ಕರ್ನಾಟಕಕ್ಕೆ ಅಷ್ಟು ರೈಲು ಕೊಟ್ವಿ, ಇಷ್ಟು ರೈಲು ಹಾಕಿದೀವಿ ಅಂತ ಹೇಳಿದರೂ ಈ ರೈಲುಗಳಿಂದ ಕರ್ನಾಟಕದೊಳ್ಗೆ ಓಡಾಡಕ್ಕಿಂತ ಹೊರ-ರಾಜ್ಯದೋರು ಕರ್ನಾಟಕದೊಳ್ಗೆ ವಲಸೆಯಾಗಕ್ಕೇ ಮಾಡಿರೋದು ಗೊತ್ತಾಗತ್ತೆ! ಕಳೆದ ೬೦ ವರ್ಷಗಳಲ್ಲಿ ಕೊಡಗಿನಲ್ಲಿ ರೈಲು ಮಾರ್ಗ ಇರ್ಲಿ, ರೈಲಿನ ಒಂದು ಹಳಿಯನ್ನೂ ಹಾಕದೇ ಇರೋದು ನೋಡಿದ್ರೇ ಗೊತ್ತಾಗಲ್ವ ಗುರು, ಇದರ ಬಂಡ್ವಾಳ ಏನೂಂತ?


ಇದಕ್ಕೇನು ಮದ್ದು?

ರೇಲ್ವೇ ಮಂತ್ರಾಲಯದಿಂದ ಕರ್ನಾಟಕಕ್ಕೆ ಈ ಬಾರಿ ಇಂತಿಷ್ಟು ಬೇಡಿಕೆಗಳಿವೆ, ಇವನ್ನು ಪೂರೈಸಿ ಅಂತ ಬಜೆಟ್ ಮುನ್ನ ಒಂದು ಪತ್ರ ಬರೆದು ಹಾಕಿದರೆ ಸಾಕಾ? ಈ ಬೇಡಿಕೆಗಳನ್ನ ಗಿಟ್ಟಿಸಿಕೊಳ್ಳಕ್ಕೆ ಅವಶ್ಯವಾದ ರಾಜಕೀಯ ಒತ್ತಡಗಳ್ನ ಹೇರೋದೋ ಅಥವಾ ಇತರ ತಂತ್ರಗಾರಿಕೆ ಮಾಡೋದು ಬೇಡ್ವಾ? ಕನ್ನಡಿಗರನ್ನ ಪ್ರತಿನಿಧಿಸಕ್ಕೆ ಅಂತ ದಿಲ್ಲಿಗೆ ಹೋಗಿ ಹೈಕಮಾಂಡುಗಳಿಗೆ ಕಿವಿಯಾಲಿಸಿ ರಾಜ್ಯದ ಪರವಾಗಿ ಒಂದೇ-ಒಂದು ಪ್ರಶ್ನೆಯನ್ನೂ ಕೇಳದೇ ಗೊಂಬೆಗಳಾಗಿ ಕೂತರೆ ಅರವತ್ತಲ್ಲ, ಸಾವಿರ ವರ್ಷ ಕಳೆದರೂ ಕರ್ನಾಟಕಕ್ಕೆ ಸಿಗೋದು ರೈಲಲ್ಲ, ಮುಖ್ಯಮಂತ್ರಿಗಳು ಕಳುಸಿದ ಪತ್ರಗಳಿಗೆ ತಲುಪೊಪ್ಪಿಗೆ (ತಲುಪು + ಒಪ್ಪಿಗೆ), ಅಷ್ಟೆ ಗುರು!

ಕೊನೆ ಹನಿ: ಇಂತಹ ಅನ್ಯಾಯ ನಮಗೆ ರೇಲ್ವೇ ವಿಚಾರದಲ್ಲಿ ಮಾತ್ರ ಆಗ್ತಿದೆ ಅಂತ ಅನ್ಕೊಂಡ್ರೆ ಅದಕ್ಕಿಂತ ದೊಡ್ಡ ತಪ್ಪಿನ್ನೊಂದಿಲ್ಲ. ಈ ರಾಜ್ಯಗಳ ಒಕ್ಕೂಟದಲ್ಲಿ ಕರ್ನಾಟಕಕ್ಕೆ ಪ್ರತಿಯೊಂದು ಹೆಜ್ಜೆಯಲ್ಲೂ ತಾರತಮ್ಯ ಆಗ್ತಿದೆ ಅಂತ ಅರಿತು ಇವುಗಳಿಗೆ ಪರಿಹಾರ ಏನು ಅಂತ ಚಿಂತನೆ ಮಾಡುವ ಕಾಲ ಬಂದಿದೆ ಅನ್ಸಲ್ವ ಗುರು?

ಕೇಂದ್ರದ ಕೈಲಿರೋ ಬ್ರಹ್ಮಾಸ್ತ್ರ: "ರಾಜ್ಯದ ಕಾನೂನು ಸುವ್ಯವಸ್ಥೆ ಕುಸಿದಿದೆ"

ಕಳೆದ ಕೆಲ ದಿನಗಳಲ್ಲಿ ಕರ್ನಾಟಕದಲ್ಲಿ ನಡೆದ ಎರಡು ಘಟನೆಗಳು ಇಡೀ ಭಾರತದ ಗಮನ ಸೆಳೆದಿದೆ. ಮೊದಲನೇದು ಮಂಗಳೂರಿನ ಪಬ್ ಮೇಲೆ ಶ್ರೀರಾಮಸೇನೆಯೋರು ನಡೆಸಿದ ದಾಳಿ. ಎರಡನೇದು ಕೇರಳದ ಶಾಸಕರ ಮಗಳು ಮತ್ತವಳ ಗೆಳೆಯನ ಮೇಲೆ ಮಂಗಳೂರಿನಲ್ಲಾದ ಹಲ್ಲೆ ಪ್ರಕರಣ. ಈ ಎರಡು ಪ್ರಕರಣದ ಬಗೆಗಿನ ಚರ್ಚೆಗಿಂತಲೂ, ಈ ಪ್ರಕರಣಗಳ ಬಗ್ಗೆ ಹೊರಹೊಮ್ಮಿರೋ ರಾಜಕೀಯ ಪ್ರತಿಕ್ರಿಯೆಗಳು ನಮ್ಮ ಸರಿಯಿಲ್ಲದ ವ್ಯವಸ್ಥೆ ಬಗ್ಗೆ ಬೆರಳುಮಾಡ್ತಿವೆ ಗುರು!

ಕಾನೂನು ವ್ಯವಸ್ಥೆ ಕುಸಿದಿದೆ ಎಂಬ ಅಸ್ತ್ರ!

ಕೇಂದ್ರದ ಸಚಿವ ಸ್ಥಾನದಲ್ಲಿರೋ ರೇಣುಕಾ ಚೌಧರಿ ಎಂಬಾಕೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ ಎನ್ನುತ್ತಿದ್ದಾರೆ. ಒಂದು ಊರಿನಲ್ಲಿ ನಡೆದ ಒಂದು ಘಟನೆಯಿಂದ ಇಡೀ ವ್ಯವಸ್ಥೆಯೇ ಕುಸಿದು ಬಿದ್ದಿದೆಯೆನ್ನುತ್ತಿರುವುದರ ಹಿಂದೆ ಯಾವುದೇ ರಾಜಕೀಯ ಕಾರಣವಿರಲಿ, ಇಂತಹಾ ಹೇಳಿಕೆ ಕೊಟ್ಟು ಕೇಂದ್ರಸರ್ಕಾರ, ರಾಜ್ಯಗಳ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯ ಅನ್ನುವುದೇ ಆತಂಕದ ಸಂಗತಿ. ಒಟ್ನಲ್ಲಿ ನಮ್ಮ ನಾಡಿನ ಕಾನೂನು ಸುವ್ಯವಸ್ಥೆಯ ಹೊಣೆ ಯಾರದು? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಆಡಳಿತ ವ್ಯವಸ್ಥೆಯಲ್ಲಿ ಸಂವಿಧಾನದ 243ನೇ ಕಲಮ್ಮಿನ ಅನ್ವಯ ಕಾನೂನು ಸುವ್ಯವಸ್ಥೆ ಅನ್ನೋದು ರಾಜ್ಯದ ಹೊಣೆಗಾರಿಕೆ ಪಟ್ಟಿಯಲ್ಲಿದೆ. ಹಾಗಾದ್ರೆ ಇದರ ಬಗ್ಗೆ ಕೇಂದ್ರ ಸಚಿವೆ ಯಾಕೆ ಮಾತಾಡ್ತಿದಾರೆ? ಯಾಕಪ್ಪಾ ಅಂದ್ರೆ ಭಾರತ ಸಂವಿಧಾನ ಕಾನೂನು ಸುವ್ಯವಸ್ಥೆ ಕೆಟ್ಟಿರೋ ರಾಜ್ಯ ಸರ್ಕಾರಾನಾ ವಜಾ ಮಾಡಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಸ್ಥಾಪಿಸಕ್ಕೆ ಕೇಂದ್ರಸರ್ಕಾರಕ್ಕೆ ಅವಕಾಶ ಮಾಡಿಕೊಡುವ 356 ಅನ್ನೋ ಇನ್ನೊಂದು ಕಲಮ್ಮನ್ನೂ ಹೊಂದಿದೆ. ಇದರಂತೆ ರಾಜ್ಯಗಳಲ್ಲಿ ದಂಗೆಯಂತಹ ಸನ್ನಿವೇಶ ಹುಟ್ಕೊಂಡರೆ ಕೇಂದ್ರ ನೇರವಾಗಿ ತನ್ನ ಆಳ್ವಿಕೆಯನ್ನು ಹೇರಬಹುದು. ಆದರೆ ನಿಜವಾಗ್ಲೂ ಯಾವ್ಯಾವಾಗ ಇದು ಬಳಕೆಯಾಗಿದೆ ಅನ್ನೋದು ನೋಡುದ್ರೆ ಇದು ತನ್ನ ಉದ್ದೇಶಿತ ಕಾರ್ಯಕ್ಕೆ ಬಳಕೆ ಆಗೋಕಿಂತಾ ರಾಜಕೀಯದಾಟದ ಪಗಡೆಯಾಗಿ ಬಳಕೆಯಾಗಿರೋದೇ ಹೆಚ್ಚಾಗಿದೆಯೇನೋ ಅನ್ನಿಸುವಂತಿದೆ. 1950ರಲ್ಲಿ ಭಾರತೀಯ ಸಂವಿಧಾನ ರೂಪುಗೊಂಡಾಗಿನಿಂದ ಈ ರೀತಿ ನೂರಕ್ಕೂ ಹೆಚ್ಚುಬಾರಿ ರಾಜ್ಯಸರ್ಕಾರಗಳನ್ನು ವಜಾ ಮಾಡಲಾಗಿದೆ. ಈ ವಜಾಗಳಲ್ಲಿ ಕಡಿಮೆ ಅಂದ್ರೆ ಇಪ್ಪತ್ತು ಸಲ ಈ ಕಲಮ್ಮಿನ ದುರ್ಬಳಕೆ ಆಗಿದೆ ಅನ್ನುತ್ತಿದೆ ದಿ ಹಿಂದೂ ಪತ್ರಿಕೆಯ ಒಂದು ಸಮೀಕ್ಷಾ ವರದಿ.

ಬಾಯಿ ಸತ್ತಿರೋ ಸರ್ಕಾರ!

ಕರ್ನಾಟಕ ರಾಜ್ಯಸರ್ಕಾರ ಅನ್ನೋದು ಕನ್ನಡನಾಡಿನ ಜನರ ಸರ್ಕಾರ. ಇದು ಇಂಥಾ ಸಮಯದಲ್ಲಿ ಕರ್ನಾಟಕದ ನಿಲುವನ್ನು ಗಟ್ಟಿಯಾಗಿ ಪ್ರತಿಪಾದುಸ್ಬೇಕಿತ್ತು. ಕೇಂದ್ರಸರ್ಕಾರದ ಒಬ್ಬ ಮಂತ್ರಿ ಕೊಡ್ತಿರೋ ಹೇಳಿಕೆಗೆ ಬದಲಾಗಿ " ’ಲಾ ಅಂಡ್ ಆರ್ಡರ್’ ರಾಜ್ಯಗಳ ವ್ಯಾಪ್ತಿಗೆ ಬರೋ ವಿಷ್ಯಾ. ಇದರಲ್ಲಿ ತಾವು ತಲೆ ತೂರ್ಸೋ ಅಗತ್ಯವಿಲ್ಲ, ಇಷ್ಟಕ್ಕೂ ನಿಭಾಯಿಸಲು ಆಗದಂಥಾ ಪರಿಸ್ಥಿತಿ ಇಲ್ಲೇನು ಇಲ್ಲಾ... ಅಂಥಾ ಸನ್ನಿವೇಶ ಬಂದ್ರೆ ನಾವೇ ಕೇಂದ್ರದ ಸಹಾಯ ಕೇಳ್ತೀವಿ" ಅನ್ನೋದಷ್ಟೇ ಅಲ್ಲದೆ ರಾಜ್ಯಗಳ ಜೊತೆ ಕೇಂದ್ರದ ಸಂಬಂಧಗಳು ಹೇಗಿರಬೇಕು ಅನ್ನೋದ್ರ ಬಗ್ಗೆ ಚರ್ಚೆಗೆ ಮೊದಲಾಗಬೇಕಾಗಿದೆ...ಗುರು! ಹಿಂದೆ ಸರ್ಕಾರಿಯಾ ಕಮಿಷನ್ ಅವ್ರು ನೀಡಿರೋ ವರದಿಯನ್ನು ಜಾರಿಗೆ ತನ್ನಿ ಅಂತ ಕೋರ್ಟುಗಳು ಛೀಮಾರಿ ಹಾಕಿದ ನಂತರವೂ, ಇವತ್ತಿನ ತನಕ ಏನೂ ಆಗಿಲ್ಲದೆ ಇರೋ ಬಗ್ಗೆ ದನಿ ಎತ್ತಬಹುದಿತ್ತು. ಆ ಮೂಲಕ ರಾಜ್ಯಸರ್ಕಾರಗಳನ್ನು ಕೇಂದ್ರ ಗೊಂಬೆಯಂತಾಡಿಸಿ, ವಜಾ ಎನ್ನೋ ಗುಮ್ಮ ತೋರಿಸೋದ್ನ ನಿಲ್ಸಕ್ ಒಂದು ಪ್ರಯತ್ನ ಮಾಡಬೇಕಾಗಿತ್ತು ಅಲ್ವಾ ಗುರು?

ಸಾಹಿತ್ಯ ಸಮ್ಮೇಳನವೂ! ನಿರ್ಣಯಗಳೂ!!


75ನೇ ಕನ್ನಡ ಸಾಹಿತ್ಯ ಸಮ್ಮೇಳನ ಚಿತ್ರದುರ್ಗದಲ್ಲಿ ಇದೀಗ ಮುಗಿದಿದೆ. (ಫೋಟೋಕೃಪೆ : ಒನ್ ಇಂಡಿಯಾ) ಆ ಸಮ್ಮೇಳನದಲ್ಲಿ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಒಂದು ವಿಶೇಷಾ ಅಂದ್ರೆ ಇದರಲ್ಲಿನ ಯಾವೊಂದು ನಿರ್ಣಯಾನು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ್ದಲ್ಲವೇ ಅಲ್ಲ. ಏನಪ್ಪಾ ಇದರ ಅರ್ಥ? ಕನ್ನಡ ಸಾಹಿತ್ಯ ವಲಯದೋರು ಕೂಡಾ ಕನ್ನಡವನ್ನು ಬರೀ ಸಾಹಿತ್ಯವೆಂಬ ಜುಟ್ಟಿನ ಮಲ್ಲಿಗೆಗಿಂತಾ ಭಿನ್ನವಾದ ಹೊಟ್ಟೆಗೆ ಹಿಟ್ಟು ಕೊಡುವ ಭಾಷೆಯಾಗಿ ಪರಿಗಣಿಸಿದಾರೆ ಅನ್ನೋದೇ ಆಗಿದೆ.
ನಿರ್ಣಯ 1 : ಕನ್ನಡಿಗರ ಗಡಿ ಕಿರಿಕ್ಕು, ಉದ್ಯೋಗದ ಹಕ್ಕು ಮತ್ತು ಏಳಿಗೆಯ ದಿಕ್ಕು!

ಕನ್ನಡನಾಡಿನ ಎಲ್ಲಾ ಉದ್ದಿಮೆಗಳು ಮತ್ತು ವ್ಯವಸ್ಥೆಗಳಿಗೆ ಇರುವ ಮೂಲ ಉದ್ದೇಶವೇ ನಮ್ಮ ಬದುಕನ್ನು ಕಟ್ಟಿಕೊಡುವುದು. ಈ ಮಣ್ಣಿನ ಪ್ರತಿಯೊಂದು ಉದ್ಯೋಗದ ಮೇಲೂ ಕನ್ನಡಿಗನಿಗೇ ಮೊದಲ ಹಕ್ಕು. ಎಲ್ಲದರಲ್ಲೂ ಕನ್ನಡಿಗರಿಗೇ ಆದ್ಯತೆ ಸಿಗಬೇಕು ಅನ್ನೋ ಉದ್ದೇಶದಿಂದ ಡಾ. ಸರೋಜಿನಿ ಮಹಿಷಿಯವರು ಹತ್ತಾರು ವರ್ಷಗಳ ಹಿಂದೆ ಸಲ್ಲಿಸಿದ್ದ ವರದಿಯನ್ನು ಜಾರಿಗೆ ತರುವ ಮೂಲಕ ಸರ್ಕಾರ ಈಡೇರಿಸಬೇಕು ಎನ್ನುವುದು ಈ ನಿರ್ಣಯ. ಇದರ ಜೊತೆಜೊತೆಯಲ್ಲೇ ಕರ್ನಾಟಕದಲ್ಲಿ ಹಿಂದುಳಿದ ಪ್ರದೇಶಗಳೆಂದೂ, ಈ ಪ್ರದೇಶಗಳಲ್ಲಿ ಬೆಳವಣಿಗೆ ಚಟುವಟಿಕೆಗಳು ನಡೆಯಬೇಕೆಂದೂ ತಾಲೂಕುವಾರು ಗುರುತಿಸಿ ಡಾ. ನಂಜುಂಡಪ್ಪ ಅವರು ಸಲ್ಲಿಸಿರೋ ವರದಿಯೂ ಜಾರಿಯಾಗಬೇಕೆಂಬುದು ಈ ನಿರ್ಣಯದ ಮತ್ತೊಂದು ಅಂಶ. ಕನ್ನಡನಾಡಿನ ಗಡಿ ತಕರಾರಿಗೆ ಕೊನೆ ಹಾಡಲು ಮಹಾಜನ ವರದಿ ಜಾರಿಗೆ ಬರಲಿ ಎನ್ನೋದು ಇನ್ನೊಂದು. ಒಟ್ಟಾರೆ ಸಾಹಿತ್ಯ ಸಮ್ಮೇಳನದ ಆಶಯವೂ ಕನ್ನಡಿಗರ ಬದುಕು ಮತ್ತು ಏಳಿಗೆಗಳ ಕುರಿತಾಗಿದೆ ಅನ್ನೋದು ಸಂತಸದ ವಿಷಯ!!

ನಿರ್ಣಯ 2 : ಚಳವಳಿಗಾರರು ಶ್ಲಾಘನೆಗೆ ಅರ್ಹರು! ಶಿಕ್ಷೆಗಲ್ಲ!!

ಕನ್ನಡನಾಡು ಹುಟ್ಟಿದಂದಿನಿಂದ ನಮ್ಮ ರಾಜಕೀಯ ಪಕ್ಷಗಳು ನಮ್ಮ ಹಕ್ಕುಗಳನ್ನು ನಮಗೆ ದಕ್ಕಿಸಿಕೊಡುವಲ್ಲಿ ಸೋತಿದ್ದು, ಇವುಗಳ ಕಾರಣದಿಂದಲೇ ಇಂದು ಕನ್ನಡಿಗರು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ತಮ್ಮ ಬದುಕು, ಭವಿಷ್ಯಗಳನ್ನು ಪಣಕ್ಕಿಟ್ಟು ಹೋರಾಟಮಾಡುವವರನ್ನು ನಮ್ಮ ಸರ್ಕಾರಗಳು ನಡೆಸಿಕೊಳ್ಳುವ ಬಗೆ ಬಲ್ಲವರೇ ಬಲ್ಲರು. ನಮ್ಮ ರಾಜಕಾರಣಿಗಳು ಕಾವೇರಿ ನದಿನೀರು ಹಂಚಿಕೆಯಲ್ಲಿ ನ್ಯಾಯ ದೊರಕಿಸಿಕೊಡಲು ಸಂಸತ್ತಿನಲ್ಲಿ ದನಿ ಎತ್ತಿದ್ದರೆ, ರಾಷ್ಟ್ರೀಯ ಜಲನೀತಿಗೆ ಒತ್ತಾಯಿಸಿದ್ದರೆ ಇವತ್ತು ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ಬರುತ್ತಿತ್ತೇನು? ಗಡಿ ವಿವಾದ ಬಗೆ ಹರಿಯಲು ಅಂದಿನಿಂದಲೇ ಪಟ್ಟು ಹಿಡಿದು ಮಹಾಜನ ವರದಿ ಜಾರಿಗೊಳಿಸುವಂತೆ ಕೇಂದ್ರದ ಮೇಲೆ ಒತ್ತಡ ತಂದಿದ್ದರೆ ಇವತ್ತು ಬೆಳಗಾವಿ ಹೋರಾಟಗಳ ಅಗತ್ಯವಿರುತ್ತಿತ್ತೇ? ಕನ್ನಡ ಹೋರಾಟವನ್ನು ಸ್ವಾರ್ಥಕ್ಕಾಗಿ ಬಳಸಿ, ಕನ್ನಡ ಹೋರಾಟವೆಂದರೆ ಪ್ರಹಸನ ಎನ್ನುವ ಮಟ್ಟಕ್ಕೆ ತಂದಿರುವ ನಾಯಕರೂ ಇಲ್ಲವೆಂದಲ್ಲ, ನಾಡಿನ ಹಿತಕ್ಕಾಗಿ ಬೂಟಿನೇಟಿಗೆ ಮೈಯೊಡ್ಡಿ, ಪೊಲೀಸರ ಲಾಠಿ ಏಟಿಗೆ ಕೈಕಾಲು ಮುರಿಸಿಕೊಂಡು, ಡಕಾಯಿತಿಯಂತಹ ಅತಿರೇಕದ ಕೇಸುಗಳಿಗೆ ಈಡಾಗಿ ಜಾಮೀನು ಸಿಗದೆ ಜೈಲುವಾಸ ಅನುಭವಿಸಿ ಇಂದಿಗೂ ದಿನಬೆಳಗಾದ್ರೆ ಠಾಣೆಗಳ ಮೆಟ್ಟಲು ಹತ್ತುವ, ಕಟಕಟೆಯಿಂದ ಕಟಕಟೆಗೆ ಅಲೆಯುವ ಹೋರಾಟಗಾರರ ಬಗ್ಗೆ ಸಮ್ಮೇಳನ ತೋರಿರುವ ಕಾಳಜಿ ಶ್ಲಾಘನೀಯವಾಗಿದೆ. ಹೋರಾಟಗಾರರ ಮೇಲಿನ ಕೇಸುಗಳನ್ನು ಕೈಬಿಡಬೇಕೆನ್ನುವ ನಿರ್ಣಯ ಕನ್ನಡ ಸಾಹಿತ್ಯ ಕ್ಷೇತ್ರ ಹೋರಾಟಗಳನ್ನು ಸಮರ್ಥಿಸುತ್ತಿರುವ ಶುಭಸೂಚನೆಯಾಗಿದೆ.

ನಿರ್ಣಯ 3 : ಕನ್ನಡಿಗರಿಗೆ ಕಲಿಕೆ ಕೈಗೆಟುಕಬೇಕು!

ನಾಡಿನ ಎಲ್ಲ ಜನತೆಗೆ ಸಮಾನವಾದ ಕಲಿಕಾ ವ್ಯವಸ್ಥೆ ಜಾರಿಯಾಗುವುದಕ್ಕೆ ದಾರಿಯಾಗಿ ಎಲ್ಲಾ ಕಲಿಕಾ ಸಂಸ್ಥೆಗಳನ್ನು ರಾಷ್ಟ್ರೀಕರಿಸುವ ನಿರ್ಣಯವನ್ನು ಈ ಸಮ್ಮೇಳನ ತೆಗೆದುಕೊಂಡಿದೆ. ಇಲ್ಲಿ ರಾಷ್ಟ್ರೀಕರಣ ಅನ್ನೋದ್ರ ಅರ್ಥ ಕರ್ನಾಟಕ ರಾಜ್ಯ ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿ ಅನ್ನುವುದೇ ಆಗಿದೆ ಅನ್ನುವುದು ನಮ್ಮ ಭಾವನೆ. ಶಿಕ್ಷಣ ಸಂಸ್ಥೆಗಳು, ಅವುಗಳಲ್ಲಿನ ಕಲಿಕಾ ಪದ್ದತಿ, ಶುಲ್ಕಗಳು, ಪಠ್ಯಗಳ ಮೇಲೆ ಸರ್ಕಾರ ನಿಯಂತ್ರಣವಿಟ್ಟುಕೊಳ್ಳುವುದರಿಂದ ಕಲಿಕೆ ಎಲ್ಲರಿಗೂ ದಕ್ಕುವುದರ ಜೊತೆಗೆ ಸರ್ಕಾರದ ಕಲಿಕಾನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲೂ ಸಾಧ್ಯವಾಗುವೆಡೆಗೆ ಇದು ಮೊದಲ ಹೆಜ್ಜೆಯಾಗಲಿದೆ ಅನ್ನುವುದು ಸಮ್ಮೇಳನದ ಆಶಯದಂತೆ ಕಾಣುತ್ತದೆ.

ಸಾಹಿತ್ಯ ಸಮ್ಮೇಳನದ ಹಿಟ್ಟಿನ ಮಾತು!

ಕನ್ನಡದ ಸಾಹಿತ್ಯ ಸಮ್ಮೇಳನಗಳು ಕನ್ನಡಿಗರ ಬದುಕು, ಉದ್ಯೋಗ, ಏಳಿಗೆಗಳ ಬಗ್ಗೆ ಮಾತಾಡುವ ಮೂಲಕ - ಕನ್ನಡನುಡಿಯು ಸಾಹಿತ್ಯವೆಂಬ ಜುಟ್ಟಿನ ಮಲ್ಲಿಗೆಯ (ಕೆಲವೇ ಜನರ ಹಿಟ್ಟಿನನುಡಿ) ಸ್ಥಾನದಿಂದ ಜನತೆಯ ಏಳಿಗೆ, ಒಗ್ಗಟ್ಟುಗಳ ಹೊಟ್ಟೆಯ ಹಿಟ್ಟನ್ನು ಸಂಪಾದಿಸಿಕೊಳ್ಳುವ ದಾರಿಯಾಗಲಿ ಎಂಬ ತುಡಿತವನ್ನು ತೋರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಒಟ್ಟಿನಲ್ಲಿ ಕನ್ನಡಿಗರ ಹಕ್ಕೊತ್ತಾಯದ ಕೂಗಿಗೆ ಸಾಹಿತ್ಯ ವಲಯದಿಂದಲೂ ದನಿಬಲ ಸಿಕ್ಕುತ್ತಿರುವುದು ಸಂತಸದ ಸುದ್ದಿಯಾಗಿದೆ ಗುರು!

ಗಡಿ ಮತ್ತು ಅಂಗಡಿ...

ಮೊನ್ನೆ ಮೊನ್ನೆ ವಿಜಯಕರ್ನಾಟಕದಲ್ಲಿ ಮರಾಠಿ ಸಮ್ಮೇಳನದಲ್ಲಿ ಕನ್ನಡದ ಅಂಗಡಿ ಅನ್ನೋ ಒಂದು ಲೇಖನ ಪ್ರಕಟವಾಗಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರದ ಗಡಿಗೆ ಹತ್ತಿಕೊಂಡಿರುವ ಯಳ್ಳೂರು ಎಂಬಲ್ಲಿ ಒಂದು ಮರಾಠಿ ಸಾಹಿತ್ಯ ಸಮ್ಮೇಳನ ನಡೀತಂತೆ, ಇದರಲ್ಲಿ ಬೆಳಗಾವಿ ಸಂಸದ ಸುರೇಶ್ ಅಂಗಡಿಯವ್ರು ಭಾಗವಹಿಸಿದ್ರಂತೆ ಅನ್ನೋದೆ ಆ ಸುದ್ದಿ. ಕನ್ನಡನಾಡಿನ ಸಂಸದ ಬೇರೆ ಬೇರೆ ಭಾಷೆಯೋರು ನಡ್ಸೋ ಸಮ್ಮೇಳನದಲ್ಲಿ ಭಾಗವಹಿಸುದ್ರೆ ಏನು ತಪ್ಪು? ಅನ್ನೋ ಅನುಮಾನ ಜನ್ರುನ್ ಕಾಡೀತು... ಕೆಲವರಂತೂ ಈ ಥರ ಯೋಚ್ಸೋದು ಪ್ರಾದೇಶಿಕ ಸಂಕುಚಿತತೆ ಅಂತಾನೂ ಅಂದುಕೊಂಡಾರು... ನಿಜವಾಗ್ಲೂ ಇದು ತಪ್ಪಾ? ಸರೀನಾ?

ಇದು ಬರೀ ಪರಭಾಷಿಕ ಸಮ್ಮೇಳನವಲ್ಲ!

ನಮ್ಮ ನಾಡಲ್ಲಿ ಬರೀ ಕನ್ನಡಿಗರೇ ಇಲ್ಲ ಅನ್ನೋದೂ ಸತ್ಯಾನೆ, ಜೊತೆಗೆ ಬೇರೆ ಭಾಷೆಯೋರು ಸಮ್ಮೇಳನಗಳನ್ನು ಮಾಡಿಕೊಳ್ಳೋದೂ ಸರೀನೆ. ಅದ್ರಲ್ಲೂ ಗಡಿಗಳನ್ನು ಭಾಷಿಕರ ಆಧಾರದ ಮೇಲೆ ಬೇರೆ ಮಾಡಕ್ಕೆ ಆಗಲ್ಲ. ಗಡಿಯ ಎರಡೂ ಕಡೆ ಎರಡೂ ಭಾಷೆ ಜನ ಇದ್ದೇ ಇರ್ತಾರೆ. ಹಾಗಾದ್ರೆ ಇಲ್ಲಿ ಇರಬೇಕಾದ್ದ ಮುಖ್ಯವಾದ ಅಂಶ ಯಾವ್ದಪ್ಪಾ ಅಂದ್ರೆ ತಾವು ವಾಸ ಮಾಡೋ ಜಾಗ ಯಾವ ಪ್ರದೇಶದ್ದೋ ಅಲ್ಲಿನ ಹಿತಾಸಕ್ತಿಗಳಿಗೆ ಪೂರಕವಾಗಿ ಬದುಕೋದು. ಯಳ್ಳೂರಿನ ಮರಾಠಿಗರೂ ಇದನ್ನು ಅರ್ಥ ಮಾಡ್ಕೊತಿದ್ರೇನೋ? ಆದ್ರೆ ಎಂ.ಇ.ಎಸ್ ಎಂಬ ಕಿರಾತಕ ಪಡೆ ಇದಕ್ಕೆ ಅವಕಾಶ ಕೊಡದೆ ಅಲ್ಲಿರೋ ಮರಾಠಿಗರನ್ನು ಕನ್ನಡಿಗರ, ಕನ್ನಡನಾಡಿನ ವಿರುದ್ಧ ಎತ್ತಿಕಟ್ಟೋ ಮನೆಮುರುಕ ಕೆಲಸಕ್ಕೆ ಮುಂದಾಗಿದಾರೆ. ಹಾಗಾಗಿ ಅಲ್ಲಿ ನಡೆಯೋ ಮರಾಠಿ ಸಾಹಿತ್ಯ ಸಮ್ಮೇಳನ ಅನ್ನೋ ಸೌಹಾರ್ದ ಬೆಸೆಯಬೇಕಾದ ಸಂಭ್ರಮದ ಹಬ್ಬ ನಾಡವಿರೋಧಿ ಕಾರ್ಯಕ್ರಮವಾಗಿರೋದು. ಹತ್ತಾರು ವರ್ಷಗಳಿಂದಲೂ ಆ ಕಾರ್ಯಕ್ರಮದಲ್ಲಿ ಸಾಹಿತ್ಯದ ಬಗ್ಗೆ ಚರ್ಚೆ ನೆಪದಲ್ಲಿ ಬೆಳಗಾವಿ, ಬೀದರ, ಕಾರವಾರ ಎಲ್ಲವೂ ಮಹಾರಾಷ್ಟ್ರಕ್ಕೆ ಸೇರಿಸಬೇಕು ಅನ್ನೋ ಠರಾವು ಕೈಗೊಳ್ತಾನೇ ಬಂದಿದಾರೆ. ಇದರ ವಿರುದ್ಧ ಕ್ರಮ ತೊಗೊಳ್ಳಕ್ಕೆ ಸರ್ಕಾರ ಮುಂದಾದ್ರೆ ಮರಾಠಿಗರ ಮೇಲೆ ದೌರ್ಜನ್ಯ ಮಾಡ್ತಿದಾರೆ ಅಂತ ಹೊಯ್ಕೊತಾರೆ, ಆದ್ರೆ ಮಾಡೋದು ಮಾತ್ರಾ ಮನೆಹಾಳು ನಿರ್ಣಯಗಳೇ. ಇದರಿಂದ ಗಡಿ ಭಾಗದ ಕನ್ನಡಿಗ-ಮರಾಠಿ ಸೌಹಾರ್ದತೆಗೆ ಮಂಗಳ ಹಾಡಿದಂತಾಗುತ್ತೆ ಅನ್ನೋ ಪರಿಜ್ಞಾನವೇ ಇಲ್ಲದಂತೆ ಆಡ್ತಿದಾರೆ. ಹಾಗಾಗಿ ಯಳ್ಳೂರಿನ ಆ ಸಾಹಿತ್ಯ ನಿಜವಾದ ಸಾಹಿತ್ಯ ಸಮ್ಮೇಳನಾ ಆಗ್ದೆ ಎಂ.ಇ.ಎಸ್ ನ ತುತ್ತೂರಿ ಆಗಿರೋದು!

ತುಷ್ಟೀಕರಣಮಾಡ್ತಿರೋ ಸಂಸದರಿಗೆ ಪಾಟ ಕಲುಸ್ತಾರೆ!

ಇಂಥಾ ಸಮ್ಮೇಳನದಲ್ಲಿ ಕರ್ನಾಟಕದ ಸಂಸದರೊಬ್ರು ಭಾಗವಹಿಸೋದು, ಆಮೇಲೆ ’ನಾನು ಬರೀ ಹೋಗಿದ್ದೆ, ಭಾಷಣ ಮಾಡ್ಲಿಲ್ಲ’ ಅನ್ನೋದು ಇವೆಲ್ಲಾ ಕೀಳುಮಟ್ಟದ ನಾಟಕ ಅನ್ನೋದು ಜನಕ್ಕೆ ಗೊತಾಗಲ್ವಾ ಗುರು! ಇನ್ನೇನು ಲೋಕಸಭಾ ಚುನಾವಣೆ ಬಂದುಬಿಡುತ್ತೆ, ಆ ಭಾಗದ ಎಂ.ಇ.ಎಸ್ ಬೆಂಬಲಿಗರ ಮತಾನೂ ಬಿದ್ರೆ ಗೆದ್ದುಬುಡ್ಬೋದು ಅಂತನ್ನೋ ಭ್ರಮೇಲಿ ನಮ್ಮ ಸಂಸದರೇನಾದ್ರೂ ಇದಾರಾ ಅಂತ ಅನುಮಾನ ಬರುತ್ತೆ ಗುರು! ಹಾಗೇನಾರೂ ಆಗಿದ್ರೆ ಬಹುಸಂಖ್ಯಾತ ಕನ್ನಡಿಗರು ಅವ್ರ ಕೈ ಬಿಟ್ಟು, ತಾಯ್ನಾಡಿಗೇ ಕೈಕೊಡಕ್ ಮುಂದಾಗೋ ರಾಜಕಾರಣಿಗಳ ಸಮಯಸಾಧಕತನಕ್ಕೆ ಸರಿಯಾದ ಉತ್ರ ಕೊಟ್ಟೇಕೊಡ್ತಾರೆ ಗುರು!

ಇಲ್ಲಿ ಬೀಮಾ ಅಂದ್ರೆ ಯಾರ್ರಣ್ಣಾ?


ಕನ್ನಡನಾಡಿನ ಕನ್ನಡಿಗರ ಸರ್ಕಾರವೇ ಹಿಂದಿ ಹೇರಿಕೇನ ಹ್ಯಾಗೆ ಅನುಮೋದಿಸ್ತಾ ಇದೆ ಅಂತಾ ಈ ಫೋಟೋ ನೋಡುದ್ರೆ ಗೊತಾಗುತ್ತೇ ಗುರು! ಕೇಂದ್ರಸರ್ಕಾರದ ಒಂದು ಯೋಜನೇನಾ ನಮ್ಮ ಜನತೆಗೆ ತಲುಪ್ಸೋದ್ರಲ್ಲಿ ಇವರು ಎಂಥಾ ಕಾಳಜಿ ತೋರುಸ್ತಿದಾರೆ ಅಂತ ತಿಳ್ಯುತ್ತೆ. ಛೇ... ಬಡ್ಕೋಬೇಕು ಇವ್ರ್ ನಡವಳಿಕೇಗೆ!! ಈ ಜಾಹೀರಾತನ್ನೇ ನೋಡಿ. ಮೇಲ್ಗಡೆ ಪೊಗದಸ್ತಾಗಿ ಕರ್ನಾಟಕ ರಾಜ್ಯ ಲಾಂಚನಾನ್ನ ಹಾಕಿದಾರೆ, ಆದ್ರೆ ಅದರ ಕೆಳಗೆ ಬರ್ದಿರೋದೆಲ್ಲಾ ಕನ್ನಡ ಲಿಪಿಯ ಹಿಂದಿ! ಆಮ್ ಅಂದ್ರೆ ಮಾವಿನಹಣ್ಣು! ಬೀಮಾ ಅಂದ್ರೆ ಬಲಭೀಮಾ ಅನ್ಸಲ್ವಾ? ಜನರಿಗೆ ತಲುಪಬೇಕಾದ ಸಂದೇಶಾನ ಈ ಜಾಹೀರಾತು ಪರಿಣಾಮಕಾರಿಯಾಗಿ ತಲುಪುಸ್ತಿಲ್ಲ ಅನ್ನೋದ್ನ ಕಂಡಾಗ ಒಂದು ಒಳ್ಳೇ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಾ ಅಂತ ಅನುಮಾನ ಆಗಲ್ವಾ ಗುರು!

ಕೇಂದ್ರಸರ್ಕಾರದ ಯೋಜನೆ ಅಂದಕೂಡ್ಲೇ ಅಲ್ಲಿದ್ದ ಹಿಂದೀ ಹಾಗೇ ಇರಬೇಕಾ?

ಕೇಂದ್ರದ ಅಧಿಕೃತ ಸಂಪರ್ಕ ಭಾಷೆ ಹಿಂದಿ ಮತ್ತು ಇಂಗ್ಲಿಷ್ ಅನ್ನೋ ನೆಪ ಇಟ್ಕೊಂಡು ಸೋಮಾರಿತನಾ ತೋರುಸ್ತಿರೋ ಕರ್ನಾಟಕ ರಾಜ್ಯ ಸರ್ಕಾರದ ಈ ನಿಲುವು ಎಂಥಾ ಅಪಮಾನಕಾರಿಯಾಗಿದೆ ನೋಡಿ. ಅವರು ಒಂದು ಯೋಜನೇನಾ ಪ್ರಕಟ ಮಾಡುದ್ರು ಅಂದ ಕೂಡಲೇ ಅದನ್ನು ರಾಜ್ಯ ತನ್ನ ಜನತೆಗೆ ಮುಟ್ಸೋ ರೀತಿ ನೋಡಿ. ಆಮ್ ಆದ್ಮಿ ಬೀಮಾ ಯೋಜನೆ ಅಂತ ಹಾಕಿದಾರಲ್ಲಾ? ಇದನ್ನು ಓದಿ, ಯಾವನಾದ್ರೂ ಒಬ್ಬ ಕನ್ನಡಿಗನಿಗೆ ಇದೇನು ಅಂತ ಪ್ರಯಾಸವಿಲ್ಲದೇ ಅರ್ಥವಾದೀತಾ? ಇದೇನು ಭೀಮಾ ನೀರಾವರಿ ಯೋಜನೇನಾ? ಬೀಮಾ ಯೋಜನೆ ಅಂದಕೂಡಲೇ ಯಾವ ಬೀಮಾ? ಮಹಾಭಾರತದೋನಾ ಅಂತ ತಲೆ ಕೆಡುಸ್ಕೊಂಡುಬುಡ್ತಾರೆ ನಮ್ ಜನ...

ಜನರನ್ನು ತಲುಪುವಲ್ಲಿ ಎಡವುತ್ತೆ!

ಕರ್ನಾಟಕ ರಾಜ್ಯಸರ್ಕಾರದ ಸಂಬಂಧಿಸಿದ ಇಲಾಖೇಲಿ ಕೂತಿರೋ ಜಾಣಾತಿಜಾಣರಿಗೆ ಈ ಯೋಜನೆ ಕನ್ನಡದ ಜನರಿಗಾಗಿ ಇರೋದು, ಅಂದಮೇಲೆ ಅವರಿಗೆ ಅರ್ಥವಾಗೋ ಭಾಷೇಲೇ ಹಾಕಬೇಕು ಅನ್ನೋ ಸಾಮಾನ್ಯ ಜ್ಞಾನವೂ ಇಲ್ಲಾ ಅನ್ನೋದು ಕಂಡಾಗ ಮೈ ಉರಿದುಹೋಗುತ್ತೆ ಗುರು! ಎಂಥಾ ಒಳ್ಳೇ ಯೋಜನೇನೇ ಆಗಲಿ ಅದು ಪರಿಣಾಮಕಾರಿಯಾಗಿ ಜನ್ರುನ್ ತಲ್ಪಕ್ಕೆ ಕನ್ನಡದಲ್ಲಿ, ಸರಿಯಾದ ರೀತೀಲಿ ಅದರ ಪ್ರಚಾರ ಮಾಡಕ್ಕೆ ಏನು ಧಾಡಿ ಇವ್ರುಗೆ ಅಂತ ಅನ್ಸಲ್ವಾ! ಇಷ್ಟಕ್ಕೂ ಇರೋ ಮಾಹಿತಿ ಕನ್ನಡ ಲಿಪಿಯಲ್ಲಿದ್ರೆ ಸಾಕು ಅಂತಾ ತಿಳ್ಕೊಂಡಿದಾರಾ ಇವ್ರುಗಳೂ ಅಂತನ್ಸಲ್ವಾ ಗುರು!

ಕೇಂದ್ರಸರ್ಕಾರ ಕರ್ನಾಟಕದಲ್ಲಿ ಕನ್ನಡದಲ್ಲಿರಬೇಕು!

ಇಷ್ಟು ಅಸಡ್ಡೆ ತೋರುಸ್ತಿರೋ ಇವ್ರುದ್ದು ಒಂದು ತೂಕವಾದ್ರೆ ನಿಮ್ಮ ಜನಕ್ಕೆ ಅನುಕೂಲ ಮಾಡಿ ಕೊಡ್ತೀವಿ ಅಂತ ಹೇಳ್ಕೊಂಡು ಹಿಂಬಾಗಿಲಿಂದ ಹಿಂದಿ ಕಲಿಸಕ್ಕೆ ಹೊರ್ಟಿರೋ ಕೇಂದ್ರಸರ್ಕಾರದ ಧೋರಣೆ, ಪ್ರಜಾಪ್ರಭುತ್ವ ಅನ್ನೋದು ಇವತ್ತು ತಲುಪಿರೋ ಪಾತಾಳಕ್ಕೆ ಕನ್ನಡಿ ಹಿಡೀತಿದೆ. ಕರ್ನಾಟಕದಲ್ಲಿರೋ ಕೇಂದ್ರ ಸರ್ಕಾರಿ ಕಛೇರಿಗಳು ಕನ್ನಡದಲ್ಲಿ ಕಾರ್ಯನಿರ್ವಹಿಸಬೇಕು ಅನ್ನೋದೇ ಸರಿ ಅಂತ ಈ ಸರ್ಕಾರಗಳಿಗೆ ತಿಳಿಸಿಕೊಡಬೇಕಾಗಿದೆ! ನಮ್ಮೂರಲ್ಲಿರೋ ಆದಾಯ ತೆರಿಗೆ ಇಲಾಖೆ, ಸಂಶೋಧನಾ ಸಂಸ್ಥೆ, ಪಾಸ್ ಪೋರ್ಟ್ ಕಛೇರಿ... ಇವೆಲ್ಲಾ ನಮ್ಮೂರ ಜನಕ್ಕೆ ತಾನೇ ಇರೋದು? ಹಾಗಿದ್ದ ಮೇಲೆ ಇವುಗಳಲ್ಲಿ ಆಡಳಿತ ಆಗಬೇಕಾದ್ದು ಕನ್ನಡದಲ್ಲಿ ತಾನೇ? ಒಟ್ನಲ್ಲಿ ಕನ್ನಡಿಗರ ಹೆಗಲೇರಿರುವ ಈ ಹಿಂದಿ ಹೇರಿಕೆಯ ಬೇತಾಳಾನ ಕೆಳಗಿಳ್ಸೋ ಪುಣ್ಯದ ಕೆಲಸಾನ ಈ ನಾಡಿನ ಅಧಿಕಾರಿಗಳೂ, ಇಲಾಖೆಗಳೂ, ಸರ್ಕಾರಗಳೂ ಮಾಡಬೇಕಾಗಿದೆ ಗುರು!

ಕಿಂಚಿತ್ತಾದ್ರೂ ಸ್ವಾಭಿಮಾನ ಇರಲಿ!

ಕರ್ನಾಟಕ ರಾಜ್ಯಸರ್ಕಾರ ಈ ವರ್ಷಾನ ಕನ್ನಡ ಅನುಷ್ಠಾನ ವರ್ಷ ಮಾಡ್ತೀವಿ ಅಂತಿದಾರಲ್ಲಾ, ಅವ್ರುಗೆ ಈ ಕುಂದು ಕಾಣ್ತಿಲ್ವಾ? ನಮ್ಮ ನಾಡು, ನಮ್ಮ ನುಡಿ ಅನ್ನೋ ಸ್ವಾಭಿಮಾನದ ತುಣುಕು ಕೂಡಾ ಇಲ್ಲವಾ ಈ ನಾಡಿನ ಸರ್ಕಾರಗಳಲ್ಲಿ? ಇವರ ಅಧಿಕಾರಿಗಳಲ್ಲಿ? ಜವಾಹರ್ ರೋಜ್ಗಾರ್ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ... ಹೀಗೆ ಕೇಂದ್ರದೋರು ಪ್ರಕಟಿಸೋ ಯೋಜನೆಗಳನ್ನೆಲ್ಲಾ ಅದೇ ಹೆಸರಲ್ಲಿ ಯಾಕೆ ಇವರು ಜಾರಿಗೆ ತರಲು ಮುಂದಾಗಬೇಕು? ಕೇಂದ್ರವೇನಾದ್ರೂ ಈ ಹೆಸರು ಬದಲಿಸೋಹಾಗಿಲ್ಲ ಅನ್ತಾ ಇದೆಯಾ? ಅಷ್ಟಕ್ಕೂ ಅವರು ಕೊಡ್ತಿರೋದು ಧರ್ಮಕ್ಕಲ್ಲಾ, ಭಿಕ್ಷೆ ಅಲ್ಲ... ಅದು ನಮ್ಮದೇ ತೆರಿಗೆ ಹಣ ಅಂತ ಗೊತ್ತಾಗಲ್ವಾ!! ಇವರಿಗೆಲ್ಲಾ ಸ್ವಾಭಿಮಾನದ ಪಾಠಾನ ಮತದ ಪೆಟ್ಟಿಗೆಯ ಮೂಲಕವೂ ಕೊಡಬೇಕಾಗಿದೆ ಗುರು!

ಕನ್ನಡ ಶಾಲೆಗಳ ಇನ್ನೊಂದು ಪಟ್ಟಿ!

ಮೊನ್ನೆ ಬರ್ದಿದ್ದ ಶಾಲೆಗಳ ಪಟ್ಟೀಗೆ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಇನ್ನೊಂದಿಷ್ಟು ಶಾಲೆಗಳ ಹೆಸರುಗಳು ಹೀಗಿವೆ.

೧. ರಾಜರಾಜೇಶ್ವರಿ ಶಾಲೆ, ರಾಜರಾಜೇಶ್ವರಿ ನಗರ

೨. Y N ನ್ಯಾಷನಲ್ ಶಾಲೆ, ಸುಬ್ರಮಣ್ಯಪುರ (ಉತ್ತರಹಳ್ಳಿ)

೩. ವಿನಾಯಕ ಶಾಲೆ, ಕಬ್ಬನ್ ಪೇಟೆ

೪. ಸೇಂಟ್ ಥೆರೇಸಾ ಶಾಲೆ, ರಾಯನ್ ಸರ್ಕಲ್, ಚಾಮರಾಜಪೇಟೆ

೫. ವಿಜಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಸೌತ್ ಎಂಡ್ ವೃತ್ತ, ಜಯನಗರ

೬. ಆರ್.ವಿ ವಿದ್ಯಾಸಂಸ್ಥೆ, ಆರ್.ವಿ ರಸ್ತೆ, ಲಾಲ್ ಬಾಗ್ ಹತ್ತಿರ

೭. ಮಹಿಳಾ ಮಂಡಲಿ ವಿದ್ಯಾಸಂಸ್ಥೆ, ನರಸಿಂಹರಾಜಾ ಕಾಲೋನಿ

೮. ನಿರ್ಮಲಾ ರಾಣಿ ಶಾಲೆ, ಸುಬ್ರಮಣ್ಯ ನಗರ, ಮಲ್ಲೇಶ್ವರ

೯. ವಿದ್ಯಾವರ್ಧಕ ಸಂಘ, ರಾಜಾಜಿನಗರ

೧೦. ಸರಸ್ವತಿ ವಿದ್ಯಾಮಂದಿರ, ಮಲ್ಲೇಶ್ವರ

ಇವಿಷ್ಟೇ ಅಲ್ಲದೆ ಬಸವನಗುಡಿ, ಕತ್ರಿಗುಪ್ಪೆ, ವೀರಭದ್ರನಗರ, ಉತ್ತರಹಳ್ಳಿ, ವಾಜರಹಳ್ಳಿ, ಸಾರಕ್ಕಿ ಮತ್ತು ಕೆಂಗೇರಿಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳೂ ಗುಣಮಟ್ಟದಲ್ಲಿ ಉತ್ತಮವಾಗಿವೆ ಎಂದು ಬರೆದಿದ್ದಾರೆ. ವಿಲ್ಸನ್ ಗಾರ್ಡನ್ನಲ್ಲಿ ಇರುವ ಮಾರುತಿ ವಿದ್ಯಾಲಯ ಕೂಡಾ ಉತ್ತಮವಾಗಿದೆ ಎಂದು ಮತ್ತೊಬ್ಬ ಓದುಗರು ಬರೆದು ತಿಳಿಸಿದ್ದಾರೆ. ನಿಮಗೂ ಇನ್ನಷ್ಟು ಶಾಲೆಗಳ ಬಗ್ಗೆ ಗೊತ್ತಿದ್ದರೆ ತಿಳಿಸಿ ಗುರುಗಳೇ...
Related Posts with Thumbnails