ಮತ್ತೊಮ್ಮೆ ಬೆಳಗಾವಿಗೆ ಕನ್ನಡ ಮೇಯರ್!

ಬೆಳಗಾವಿ ನಗರ ಪಾಲಿಕೆಯ ಮೇಯರ್ ಪಟ್ಟ ಈ ಬಾರಿಯೂ ಕನ್ನಡಿಗರ ಪಾಲಾಗಿರೋ ಸುದ್ದಿ ಇವತ್ತಿನ (31.03.2009)ರ ಕನ್ನಡಪ್ರಭ ಪತ್ರಿಕೆಯಲ್ಲಿ ವರದಿಯಾಗಿದೆ. ಆಹಾ! ಎಂಥಾ ಕಿವಿಗೆ, ಕಣ್ಣಿಗೆ ಹಿತವಾದ ಸುದ್ದಿ ಅಂತಾ ಕನ್ನಡಿಗರೆಲ್ಲಾ ಹಿಗ್ತಿದಾರೆ ಗುರು!
ಈ ಸಾಧನೆಗೆ ಕಾರಣವಾದೋರಿಗೆ ಅಭಿನಂದನೆ!
ಕಳೆದ ವರ್ಷ ಮಹಾನಗರ ಪಾಲಿಕೆಗೆ ಚುನಾವಣೆಯಾದಾಗ ಕನ್ನಡಪರರು 29 ಸ್ಥಾನಗಳಲ್ಲಿ ಆಯ್ಕೆಯಾಗಿದ್ದಾರೆ. 57 ಪಾಲಿಕೆ ಸದಸ್ಯರೂ, 4 ಶಾಸಕರೂ, ಒಬ್ಬ ಸಂಸದರೂ ಸೇರಿ 62 ಮಂದಿ ಕೂಡಿ ಮೇಯರ್ ಉಪಮೇಯರ್ ಆಯ್ಕೆ ಮಾಡ್ತಾರೆ. ಗೆಲುವಿಗೆ ಬೇಕಿರೋ 32 ಮತಗಳಿಸಲು ಕನ್ನಡಪರರ ಒಗ್ಗಟ್ಟು ಬಹುಮುಖ್ಯವಾಗಿದೆ. ಎಂ.ಇ.ಎಸ್ ಬೆಂಬಲಿಸೋ ಶಾಸಕರ, ಸಂಸದರ ಕಾರಣದಿಂದ ಎಂ.ಇ.ಎಸ್ ಗೆಲುವುದೇನೋ ಎನ್ನೋ ಆತಂಕ ಸದಾ ಇದ್ದಿದ್ದೆ. ಹಾಗಾಗಿ ಮೇಯರ್ ಉಪಮೇಯರ್ ಆಯ್ಕೆ ಮಾತ್ರಾ ಪ್ರತೀಬಾರಿ ಕನ್ನಡಪರರ ಒಗ್ಗಟ್ಟಿಗೆ ಸವಾಲೇ ಆಗಿದೆ. ಇಂಥಾ ಸವಾಲನ್ನು ಎದುರಿಸಿ ಕನ್ನಡಪರ ಮತಗಳು ಚದರದ ಹಾಗೆ ಮಾಡಿ ಕನ್ನಡಿಗರೇ ಮೇಯರ್, ಉಪಮೇಯರ್ ಆಗಿ ಆಯ್ಕೆಯಾಗುವಂತೆ ಶ್ರಮಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ ಮತ್ತದರ ರಾಜ್ಯಾಧ್ಯಕ್ಷರಾದ ಶ್ರೀ. ನಾರಾಯಣಗೌಡರು. ಈ ಶ್ರಮದ ಕಾರಣದಿಂದಾಗಿಯೇ ಕಳೆದ ಬಾರಿ ಶ್ರೀಮತಿ. ಪ್ರಶಾಂತಾ ಬುಡವಿ ಅವ್ರು ಮೇಯರ್ ಆಗಿಯೂ, ಶ್ರೀ.ಯೂನಿಸ್ ಮೊಮಿನ್ ಅವ್ರು ಉಪಮೇಯರ್ ಆಗಿಯೂ ಆಯ್ಕೆಯಾಗಿದ್ರು.

ಮತ್ತೊಮ್ಮೆ ಕರ್ನಾಟಕ ರಕ್ಷಣಾ ವೇದಿಕೆಯವರು ಬೆಳಗಾವಿಯಲ್ಲಿ ಮೊಕ್ಕಾಂ ಹೂಡಿ ಅಲ್ಲಿನ ರಾಜಕಾರಣಿಗಳ ಮೇಲೆ ಒತ್ತಡ ಹೇರಿದ್ದರ ಪರಿಣಾಮವಾಗಿ ಈ ಬಾರಿ ಯಲ್ಲಪ್ಪ ಕುರುಬರವ್ರು ಮೇಯರ್ ಆಗಿಯೂ, ಶ್ರೀಮತಿ ಜ್ಯೋತಿ ಬಾವಿಕಟ್ಟಿಯವ್ರು ಉಪಮೇಯರ್ ಆಗಿಯೂ ಆಯ್ಕೆಯಾಗಿ ಬಂದಿದಾರೆ. ಬೆಳಗಾವಿಯಲ್ಲಿ ನಡೆದ ಹೋರಾಟಗಳಿಂದಲೂ, ಮೊನ್ನೆಮೊನ್ನೆ ನಡೆದ ಬಾವುಟದ ಘಟನೆಯಿಂದಲೂ, ರಾಜ್ಯಾದ್ಯಂತ ಸುರೇಶ್ ಅಂಗಡಿ ಮತ್ತು ಬಿಜೆಪಿ ವಿರುದ್ಧ ನಡೆದ ಪ್ರತಿಭಟನೆಗಳಿಂದಲೂ, ಮುಂದೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರ ಮತವನ್ನು ಸೆಳೆಯುವ ದೃಷ್ಟಿಯಿಂದಲೂ... ಬಿಜೆಪಿ ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ್ ಬೊಮ್ಮಾಯಿಯೋರು ಖುದ್ದಾಗಿ ನಿಂತು ಪಕ್ಷಭೇದವಿಲ್ಲದಂತೆ ಕನ್ನಡ ಮತಗಳನ್ನು ಒಗ್ಗೂಡ್ಸಿ ಈ ಆಯ್ಕೆ ಸುಸೂತ್ರವಾಗಿ ನಡ್ಯೋ ಹಾಗೆ ಮಾಡಿದ್ರಂತೆ. ಅವರಿಗೂ ನಮ್ಮ ಅಭಿನಂದನೆಗಳು. ಏನೇ ಆಗಲೀ ಬೆಳಗಾವಿ ಪಾಲಿಕೆ ಮೇಯರ್ ಆಯ್ಕೆಗಾಗಿ ಎಲ್ಲಾ ಪಕ್ಷದೋರೂ ಒಂದಾಗಿದ್ದಕ್ಕೆ ಕಾರಣವೇ ಅಲ್ಲಿ ಕನ್ನಡಪರ ವಾತಾವರಣ ಜಾಗೃತಿಗೊಳಿಸಿದ ಕರ್ನಾಟಕ ರಕ್ಷಣಾ ವೇದಿಕೆಯೋರು. ಅಂದು ವಿಜಯ್ ಮೋರೆಗೆ ಮಸಿ ಬಳಿದಿದ್ದರಿಂದ ಹಿಡ್ದು ನಿನ್ನೆ ಮೇಯರ್ ಆಯ್ಕೆ ಆಗೋವರೆಗೂ, ಅದು ಎ.ಪಿ.ಎಂ.ಸಿ ಚುನಾವಣೆ ಆಗ್ಲಿ, ಎಂ.ಇ.ಎಸ್ ಬಾವುಟ ತೆಗೆಸೋ ಹೋರಾಟವಿರಲಿ, ವಿಶಾನಸೌಧಕ್ಕಾಗಿ ಹೋರಾಟವಿರಲಿ, ಹೀಗೆ ಪ್ರತಿಯೊಂದು ಸನ್ನಿವೇಶದಲ್ಲೂ ಬೆಳಗಾವಿಯಲ್ಲಿ ಕನ್ನದಪರವಾಗಿ ಶ್ರಮಿಸಿದ ಅವರಿಗೆ ನಾಡಿನ ಕನ್ನಡಿಗರೆಲ್ಲರ ಪರವಾಗಿ ನಮ್ಮ ಮನದುಂಬಿದ ಅಭಿನಂದನೆಗಳು... ಗುರು!

ಕೊನೆಹನಿ : ಇದೇ ಮೊದಲ ಬಾರಿಗೆ ಮೇಯರ್, ಉಪಮೇಯರ್ ಇಬ್ಬರೂ ಕನ್ನಡಿಗರು ಅಂತಾ ಕನ್ನಡಪ್ರಭ ಸೇರಿದಂತೆ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಕಳೆದ ಸರ್ತಿ ಮೇಯರ್ ಆಗಿದ್ದ ಪ್ರಶಾಂತಾ ಬುಡವೀನಾ ಕನ್ನಡದೋರು ಅಂತ ಒಪ್ಪಿರೋರು ಉಪಮೇಯರ್ ಆಗಿದ್ದ ಯೂನಿಸ್ ಮೊಮಿನ್ ಅವರನ್ನು ಕನ್ನಡದವರಲ್ಲಾ ಅನ್ನೋ ಹಾಗೆ ವರದಿ ಮಾಡ್ತಿರೋದು ಸರೀನಾ ಗುರು?

ಮುಖ್ಯಮಂತ್ರಿ ಚಂದ್ರು ಅವ್ರೇ.. ಇದೆಂಥಾ ಮರುಳು ನಿಮಗೇ?

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಯುತ ಮುಖ್ಯಮಂತ್ರಿ ಚಂದ್ರು ಅವರು ಕನ್ನಡಕ್ಕಾಗಿ ಮಿಡಿಯುತ್ತಾ ಭಾಳಾ ಸಂಕಟದಿಂದ ಮಾತಾಡಿದ್ದಾರೆ ಅಂತ 26.03.2009ರ ವಿಜಯಕರ್ನಾಟಕದ ಹತ್ತನೇ ಪುಟದಲ್ಲಿ ಬಂದಿರೋ ಒಂದು ವರದಿ ಹೇಳ್ತಿದೆ. ಇವರ ಕಾಳಜಿ ಏನೋ ತುಂಬಾ ಪ್ರಾಮಾಣಿಕವಾದದ್ದೇ ಆಗಿರಬಹುದು ಅನ್ನೋ ಬಗ್ಗೆ ನಮ್ಮ ಚಕಾರ ಇಲ್ಲ. ಆದ್ರೆ ಇವರು ಮಾತಿನ ಭರದಲ್ಲಿ ನಂಬಿರೋ ಒಂದೆರಡು ಭ್ರಮೆಗಳ ಬಗ್ಗೆ ಎಚ್ಚರಿಸಬೇಕಾಗಿದೆ ಗುರು!
ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು?
ಚಂದ್ರು ಅವ್ರು ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ 32% ಇದೆ ಅಂತಾ ಮಾತಿನ ಭರದಲಿ ಹೇಳಿಬಿಟ್ಟಿದ್ದಾರೆ. ಚಂದ್ರು ಅವ್ರೇ, ಇದಕ್ಕೆ ತಮ್ಮಲ್ಲಿ ಏನಾದ್ರೂ ಆಧಾರ ಇದೆಯೇ? ಮಾಧ್ಯಮಗಳಲ್ಲಿ ಪದೇಪದೇ ಪ್ರಕಟವಾಗೋ ಈ ಸುಳ್ಳನ್ನೇ ತಾವೂ ನಂಬಿರೋ ಹಾಗೆ ಕಾಣುತ್ತಲ್ಲಾ ಸ್ವಾಮಿ? ಬೆಂಗಳೂರಿನ ಪ್ರತಿಶತ ಎಷ್ಟು ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಡ್ಯಲ್ಲಾ ಹೇಳಿ. ನಿಮ್ಮ ಸುತ್ತಮುತ್ತ ಎಷ್ಟು ಪ್ರತಿಶತ ಕನ್ನಡೇತರರು ಇದ್ದಾರೆ? ಬೆಂಗಳೂರಿನ ಎಷ್ಟು ಬಡಾವಣೆಗಳಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು? ಬೆಂಗಳೂರಿನ ಎಷ್ಟು ಜನಪ್ರತಿನಿಧಿಗಳು ಕನ್ನಡದವರಲ್ಲಾ? ಬೆಂಗಳೂರಿನ ಎಷ್ಟು ಜನರು ಇಲ್ಲೇ ತಲೆಮಾರುಗಳಿಂದ ನೆಲೆಸಿದ್ದೂ ತಮ್ಮ ತಾಯ್ನುಡಿಯನ್ನು ಉರ್ದು, ತೆಲುಗು, ತಮಿಳು, ತುಳು, ಕೊಡವ, ಕೊಂಕಣಿ, ರಾಜಾಸ್ಥಾನಿ, ಗುಜರಾತಿ ಅಂತಾ ಜನಗಣತಿಯಲ್ಲಿ ಬರೆಸಿರುತ್ತಾರೆ ಎಂಬ ಅಂದಾಜಿದೆಯೇ? ಬೆಂಗಳೂರಿನ ಎಫ್.ಎಂ ವಾಹಿನಿಗಳು ಇಲ್ಲಿ ವ್ಯಾಪಾರದಲ್ಲಿ ಯಶಸ್ಸು ಬೇಕೆಂದ್ರೆ ಕನ್ನಡದಿಂದಲೇ ಅಂತಾ ಸಾರುತ್ತಿದೆ ಅಂತ ನಿಮಗೆ ಅನ್ನಿಸುತ್ತಿಲ್ಲವೇ? ಕನ್ನಡಿಗರ ಸಂಖ್ಯೆ ಕಡಿಮೆ ಅಂದ್ರೂ 70% ಇದ್ದೇ ಇದೆ ಅನ್ನೋದು ನಿಮ್ಮ ಅನುಭವಕ್ಕೆ ಬಂದಿಲ್ಲವೇ? ನೀವೇ ಕೆಲ ಸ್ವಹಿತಾಸಕ್ತಿಗಳು ಹುಟ್ಟುಹಾಕಿರೋ ’ಬೆಂಗಳೂರಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು’ ಅನ್ನೋ ಸುಳ್ಳನ್ನು ನಂಬುದ್ರೆ ಹೇಗೆ ಸ್ವಾಮಿ? ಆ ಅಂಕಿಅಂಶವನ್ನು ನಿಜಕ್ಕೂ ಛಾಲೆಂಜ್ ಮಾಡಬೇಕಾದ ತಾವೇ ಸೋತು ದಿಕ್ಕೆಟ್ಟವರಂತೆ ಮಾತಾಡುದ್ರೆ ಹೇಗೆ ಸ್ವಾಮಿ? ಹೋದಲ್ಲಿ ಬಂದಲ್ಲೆಲ್ಲಾ ನೀವು ಹೇಳಬೇಕು, ಕನ್ನಡಿಗರ ಸಂಖ್ಯೆ 70%ಕ್ಕಿಂತಾ ಹೆಚ್ಚಿದೆ. ತಲತಲಾಂತರದಿಂದ ಇಲ್ಲಿ ನೆಲಿಸಿರೋ-ಕನ್ನಡವನ್ನು ಒಪ್ಪಿಕೊಂಡಿರೋ-ಪರಭಾಷಿಕರೆಲ್ಲಾ ಕನ್ನಡಿಗರೇ ಅಂತ!!
ಭಾಷಾಸೂತ್ರದ ಗೊಂದಲ ಬಿಟ್ಟುಬಿಡಿ!
ಮತ್ತೊಂದೆಡೆ ತಮ್ಮ ಮಾತಿನ ನಡುವೆ ಚಂದ್ರು ಅವ್ರು 52 ತಾಲೂಕುಗಳಲ್ಲಿ ದ್ವಿಭಾಷಾ ಸೂತ್ರವಿದೆ, ಅಲ್ಲೆಲ್ಲಾ ತ್ರಿಭಾಷಾ ಸೂತ್ರ ಬರಬೇಕು ಅಂದಿದಾರೆ. ಚಂದ್ರು ಅವ್ರೇ, ಯಾವ ಎರಡು ಭಾಷೆಗಳು ಇವೆ? ಯಾವ ಮೂರು ಇರಬೇಕು ಅಂತೀದೀರಾ? ಅಂತಾ ಆ ವರದಿಯಲ್ಲಿ ಸ್ಪಷ್ಟವಾಗಿಲ್ಲದಿದ್ರೂ ಕನ್ನಡ, ಇಂಗ್ಲಿಷ್ ಮತ್ತು ಹಿಂದೀ ಭಾಷೆಗಳೇ ಆ ಮೂರುನುಡಿಗಳು ತಾನೇ? ನಿಮಗ್ಯಾಕೆ ಸ್ವಾಮಿ, ಹಿಂದಿಯನ್ನು ಕನ್ನಡನಾಡಿನ ಆಡಳಿತ ಭಾಷೆಯಾಗಿ ಸ್ಥಾಪಿಸೋ ಬುದ್ಧಿ? ನಮ್ಮ ಜನರ ಬದುಕನ್ನೇ ಕಿತ್ಕೋಳಕ್ ಮುಂದಾಗಿರೋ ಅನಿಯಂತ್ರಿತ ವಲಸೆ, ಹಿಂದಿ ಕಡ್ಡಾಯ ಮಾಡಿರೋ ಬ್ಯಾಂಕ್ ಕೆಲಸಗಳು, ರೇಲ್ವೇ ನೇಮಕಾತಿಗಳು ಹುಟ್ಟುಹಾಕಿರೋ ಸಮಸ್ಯೆಗಳನ್ನು ಕಂಡಮೇಲೂ ನಿಮಗೆ ತ್ರಿಭಾಷಾ ಸೂತ್ರದ ಬಗ್ಗೆ ಭರವಸೆ ಉಳಿದಿದೆಯೇ? ಕನ್ನಡಿಗರ ಅನುಕೂಲಕ್ಕಾಗಿ ಕನ್ನಡವೂ, ಪಾಪಾ ಅಂತ ಉಳಿದವರ ಅನುಕೂಲಕ್ಕಾಗಿ ಇಂಗ್ಲೀಷೂ ಇದ್ರೆ ಸಾಲದಾ ಸ್ವಾಮಿ? ’ತಾವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರೋ? ಹಿಂದಿ ಪ್ರಚಾರ ಸಭಾದವರೋ?’ ಅಂತಾ ಜನ ಮಾತಾಡ್ಕೊಳ್ಳೋ ಹಾಗೆ ನಡ್ಕೋಬೇಡಿ. "ನೋಡುದ್ರಾ ಗುರುಗಳೇ? ಹ್ಯಾಗೇ ನಮ್ಮ ನಾಡನ್ನಾಳೋ ಜನರ ಮಾತುಗಳಲ್ಲೇ ನಾಡಿನ ಬಗ್ಗೆ, ನುಡಿಯ ಬಗ್ಗೆ ಸುಳ್ಳರಿಮೆ ತುಂಬಿ ತುಳುಕಾಡ್ತಿದೆ" ಅಂತಾ ಜನಾ ಮಾತಾಡೋ ಹಾಗೆ ಮಾಡ್ಕೋಬೇಡಿ. ನೀವೇನಂತೀರಾ ಗುರು?

ಮರಳಿ ಬಂದಿಹ ಉಗಾದಿ, ಹೊಸ ಹರುಷ ತರಲಿ!


ಈ ಚಂದದ ಹಾಡನ್ನು ಬರ್ದಿರೋರು ಕನ್ನಡದ ಹೆಮ್ಮೆಯ ಚೇತನಗಳಲ್ಲೊಬ್ಬರಾದ, ಅಂಬಿಕಾತನಯದತ್ತ ಕಾವ್ಯನಾಮದ, ವರಕವಿ ಶ್ರೀ. ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು. ಪ್ರತಿವರ್ಷದ ಯುಗಾದಿಯಂದು ಇಡೀ ಕನ್ನಡನಾಡಿನ ಜನರು ಇವರನ್ನು ತಪ್ಪದೆ ನೆನೀತಾರೆ. ಇವರ ಹೆಸರು ತಿಳಿಯದೇ ಇರೋರು ಕೂಡಾ ಅವರ ಈ ಹಾಡನ್ನು ಬಲ್ಲವರೇ ಆಗಿರ್ತಾರೆ. ಕನ್ನಡನಾಡಿನ ಹೆಮ್ಮೆಯ ಈ ’ಯುಗದ ಕವಿ’ಗೆ ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದ ಸ್ಥಾನ ಒದಗಿಸಿಕೊಟ್ಟಿರೋ ಈ ಹಾಡು, 1963ರಲ್ಲಿ ಬಿಡುಗಡೆಯಾದ ಕುಲವಧು ಚಿತ್ರದ್ದು, ಸಂಗೀತ ಕೊಟ್ಟೋರು ಶ್ರೀ. ಜಿ.ಕೆ. ವೆಂಕಟೇಶ್ ಅವ್ರು, ಶ್ರೀಮತಿ ಎಸ್.ಜಾನಕಿ ಅವರ ಕಂಠಸಿರಿ ಈ ಹಾಡಿಗೆ ಜೀವತುಂಬಿದೆ...
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರಷಕೆ ಹೊಸ ಹರುಷವ ಹೊಸತು ಹೊಸತು
ತರುತಿದೆ
ಕನ್ನಡದ ಕವಿಗಳ ಇಂಥಾ ಸುಮಧುರ ಕವನಗಳನ್ನು ನಮ್ಮ ಚಿತ್ರರಂಗದೋರು ಹೆಚ್ಚುಹೆಚ್ಚು ಬಳಸುವಂತಾಗಲಿ. ಹೊಸ ವರುಷ ಎಲ್ಲರಲ್ಲೂ ಹೊಸ ಹರುಷಕೆ ಕಾರಣವಾಗಲಿ. ಏನ್ ಗುರು ಓದುಗರಿಗೆಲ್ಲಾ ಯುಗಾದಿ ಹಬ್ಬ ಒಳಿತುಮಾಡಲಿ.

ಗ್ರಾಹಕ ಹಕ್ಕು: ಆಚರಣೆ ಒಂದು, ಚಲಾವಣೆ ಮತ್ತೊಂದು

ವಿಶ್ವ ಗ್ರಾಹಕ ಹಕ್ಕುಗಳ ದಿನ ಅಂತ ಇದೇ ಮಾರ್ಚಿ ತಿಂಗಳ ೧೫ನೇ ತಾರೀಖು ಆಚರಣೆಯಾಯ್ತು. ಈ ದಿನದ ಆಚರಣೆ ಇಡೀ ಪ್ರಪಂಚದಲ್ಲೇ ನಡ್ಯುತ್ತೆ ಗುರು. ಯಾಕೆ ಗೊತ್ತಾ? 1962ನೇ ಇಸ್ವಿಯಲ್ಲಿ ಇದೇ ದಿನ ಅಮೇರಿಕದ ರಾಷ್ಟ್ರಪತಿ ಕೆನಡಿಯವರು ಅಮೇರಿಕದ ಗ್ರಾಹಕರ ಕಷ್ಟಗಳನ್ನು ನಿವಾರಿಸಲು ಒಂದು ಘೋಷಣೆಯನ್ನೇ ಮಾಡಿದ್ರಂತೆ. ಆ ಘೋಷಣೇಲಿ ಜಗತ್ತೇ ಅನುಸರಿಸೋ ಅಂತದ್ದೇನಿತ್ತಪ್ಪ ಅಂತೀರ? ಅತಿ ಸರಳವೇ ಆದ್ರೂ ಗ್ರಾಹಕರ ಅತಿ ಮುಖ್ಯ ಹಕ್ಕುಗಳಾದ:
  1. ಸುರಕ್ಷೆಯ ಹಕ್ಕು
  2. ಮಾಹಿತಿಯ ಹಕ್ಕು
  3. ಆಯ್ಕೆ ಮಾಡುವ ಹಕ್ಕು
  4. ಅಳಲುಗಳನ್ನು ಹೇಳಿಕೊಳ್ಳುವ ಹಕ್ಕುಗಳ
ಬಗ್ಗೆ ಇಲ್ಲಿ ಹೇಳಿದಾರೆ ಗುರು. ಅಯ್ಯೋ, ಇದ್ರಲ್ಲೇನು ಹೊಸದಿದೆ ಅಂತೀರ? ಆದ್ರೆ ಇವೆಲ್ಲಾ ಓದಿದಾಗ ಸರಳ ಅನಿಸಿದ್ರೂ ಮಾರುಕಟ್ಟೇಲಿ ಕನ್ನಡಿಗ ಗ್ರಾಹಕ ಮೋಸ ಹೋಗ್ತಿರೋದು ಈ ಹಕ್ಕುಗಳ ಅನುಷ್ಠಾನ ಹೇಗೆಂಬುದರ ಗೊಂದಲದಿಂದ್ಲೇ! ಹಾಗೆ ನೋಡಿದ್ರೆ ನಮ್ಮ ಸುತ್ತಲಲ್ಲೇ ನಾವು ಈ ನಾಲ್ಕೂ ಹಕ್ಕುಗಳಿಂದ ವಂಚಿತರಾಗ್ತಿರೋ ಉದಾಹರಣೆ ಕಾಣತ್ತೆ ಗುರು.. ಬನ್ನಿ ನೋಡ್ಮ.

ಸುರಕ್ಷೆ

ನೀವು ಕೊಳ್ಳುವ ಅಡುಗೆ ಅನಿಲದ ಸಿಲಿಂಡರ್ ಮೇಲೆ ಸುರಕ್ಷತಾ ಮಾಹಿತಿ ಕನ್ನಡದಲ್ಲಿ ಇದೆಯೇ? ಇರಲೇಬೇಕು ತಾನೆ? ಏಕಿಲ್ಲ? ಈ ಪ್ರಶ್ನೆ ನಿಮಗೆ ಹೊಳೆದಿದೆಯೇ? ಹೊಳೆದಿದ್ರೆ ಅದಕ್ಕೆ ಏನ್ ಮಾಡಿದೀರ? ಏಕೆ ಇನ್ನೂ ಸರಿ ಹೋಗಿಲ್ಲ?



ಮಾಹಿತಿ


ನೀವು ಮಾಡಿಸಿಕೊಳ್ಳುವ ಮುಖ್ಯ ಆರೋಗ್ಯ ತಪಾಸಣೆಗಳ ಬಗ್ಗೆ ಮಾಹಿತಿ ನಿಮಗೆ ಕನ್ನಡದಲ್ಲ ಸಿಗುತ್ತಿದೆಯೇ? ಏಕೆ ಸಿಗುತ್ತಿಲ್ಲ? ಕನ್ನಡ ಅದಕ್ಕೆ ಅರ್ಹವಲ್ಲವೋ, ಅಥವಾ ನಾವು ಆ ಮಾಹಿತಿಗೇ ಅರ್ಹರಲ್ಲವೋ?

ಆಯ್ಕೆ

ಡಿ.ಟಿ.ಎಚ್ ಸೇವೆಯ ಪ್ಯಾಕ್ ಆಯ್ಕೆ ಮಾಡುವಾಗ ಅವುಗಳ ವಿವರ ನಿಮಗೆ ಕನ್ನಡದಲ್ಲಿ ಸಿಗುತ್ತಾ? ಇಲ್ವಾ? ಏಕೆ ಸಿಗಲ್ಲ, ಅದು ನಿಮ್ಮ ಆಯ್ಕೆ ಸುಲಭ ಮಾಡಬಲ್ಲದು ಅಂತ ನಿಮಗೆ ಹೊಳೆದಿಲ್ವ? ಬೇರೆ ಎಲ್ಲಾ ಭಾಷೆಗಳಲ್ಲಿ ಸೇವೆ ಸಿಗತ್ತೆ ಅಂತ ಕನ್ನಡ ಬಿಟ್ಟು ಆ ಭಾಷೆಗಳಲ್ಲೇ ವ್ಯವಹರಿಸೋದು ಯಾವ ಬುದ್ಧಿವಂತ ಗ್ರಾಹಕರ ಲಕ್ಷಣ ಗುರು?

ಅಳಲು/ದೂರು

ಬ್ಯಾಂಕುಗಳಲ್ಲಿ ನೀವು ಯಾವ ಭಾಷೆಯಲ್ಲಿ ದೂರು ಕೊಡ್ತಿದೀರ? ದೂರಿನ ಬಗ್ಗೆ ಯೋಚನೆ ನೀವು ಯಾವ ಭಾಷೆಯಲ್ಲಿ ಮಾಡ್ತೀರ? ಈ ವ್ಯತ್ಯಾಸದ ಪರಿಣಾಮ ಏನು ಅಂತ ಯೋಚನೆ ಮಾಡಿದೀರ? ಇದರಿಂದ ಕನ್ನಡಿಗರಿಗೆ ಉದ್ಯೋಗ-ವಂಚನೆಯಲ್ಲದೆ, ನಿಮ್ಮ ಸಮಸ್ಯೆ ಬ್ಯಾಂಕಿಗೆ ಸರಿಯಾಗಿ ಅರ್ಥವಾಗದೇ ಇರುವುದೂ ಸಾಧ್ಯ!

ಒಟ್ಟಿನಲ್ಲಿ ಗ್ರಾಹಕನ ಹಕ್ಕುಗಳ ದಿನಾಚರಣೆ ಮಾಡುವಾಗ ಈ ನಮ್ಮ ಹಕ್ಕುಗಳ ಅನುಷ್ಠಾನ ಏಕೋ ಆಗ್ತಿಲ್ಲ ಅಂತ ಅನಿಸೋದು ಬೇಡ್ವ ಗುರು? ಆದ್ರೆ ಇದಕ್ಕೆ ಕಾರಣ ಏನು? ಕಾನೂನಾ? ನಾವಾ? ಗ್ರಾಹಕ ಹಕ್ಕು ದಿನಾಚರಣೆಯ ಹಿನ್ನೆಲೆಯಲ್ಲಿ ನಾವೆಲ್ಲಾ ಕನ್ನಡಿಗ ಗ್ರಾಹಕರಾಗಿ ನಮ್ಮ ಒಳಿತಿಗಾಗಿಯೇ ಈ ರೀತಿಯ ಯೋಚನೆ ಮಾಡೋದು ಒಳ್ಳೇದು ಅಂತ ಅನಿಸಲ್ವ ಗುರು?

ಇನ್ನು "ಆರ್ ಸಿ: ಉಡಾಯ್ಸಿ" ಅನ್ನೋ ಸರದಿ ಚಿತ್ರತಾರೆಗಳದ್ದು!


ನಿನ್ನೆ ದಿನದ ಅಂದ್ರೆ 21.03.2009ರ "ದಟ್ಸ್ ಕನ್ನಡ. ಕಾಮ್" ಪತ್ರೀಕೇಲಿ ಇಂಡಿಯನ್ ಪ್ರೀಮಿಯರ್ ಲೀಗಿನ ಪಂದ್ಯಗಳಲ್ಲಿ ಪಾಲ್ಗೊಂಡು ಸ್ಥಾನಿಕ ತಂಡವನ್ನು ಕನ್ನಡದ ಕೆಲ ಚಿತ್ರತಾರೆಯರು ಬೆಂಬಲಿಸಲು ಮುಂದಾಗಿದ್ದಾರೆ ಅನ್ನೋ ಸುದ್ದಿ ಪ್ರಕಟವಾಗಿದೆ. ಸ್ಥಾನಿಕ ತಂಡ ಅಂದ್ರೆ ಬೆಂಗಳೂರಿನ ತಂಡವಾದ ರಾಯಲ್ ಚಾಲೆಂಜರ್ಸ್ ಅನ್ನೋದು ನಮ್ಮ ಊಹೆ. ಸುದ್ದಿ ಇದೇ ಆಗಿದ್ರೆ ಇದು ನಿಜವಾಗ್ಲೂ ಒಂದೊಳ್ಳೆ ಬೆಳವಣಿಗೇನೆ ಆಗಿದೆ.

ಚಿನ್ನಸ್ವಾಮಿ ಮೈದಾನ ತಾರೆಗಳ ತೋಟವಾಗಲಿ!

ಕ್ರಿಕೆಟ್ ತಾರೆಗಳೂ ಅಂದ್ರೆ ನಮ್ಮ ಜನಕ್ಕೆಂಥದೋ ಅಭಿಮಾನ, ಇನ್ನು ಇವರ ಜೊತೆ ಚಿತ್ರತಾರೆಗಳೂ ಸೇರ್ಕೊಂಡ್ರೆ ಡಬ್ಬಲ್ ಮಜಾ. ಕನ್ನಡದ ಹಲವಾರು ತಾರೆಯರು ಬೆಂಗಳೂರಲ್ಲಿ ನಡೆಯೋ ಎಂಟು ಪಂದ್ಯಗಳಲ್ಲಿ ಏಳರಲ್ಲಿ ರಾಯಲ್ ಚಾಲೆಂಜರ್ಸ್ ಆಡಲಿದೆ, ಇನ್ನೊಂದು ಬೇರೆ ತಂಡಗಳದ್ದು. ಇರಲಿ, ನಮ್ಮ ಕನ್ನಡದ ತಾರೆಯರು ಬೆಂಗಳೂರು ತಂಡಕ್ಕೆ ಚಿಯರ್ ಮಾಡಲು ಇವುಗಳಲ್ಲಿ ಭಾಗವಹಿಸೋದು ಚೆನ್ನಾನೆ. ಈ ನೆಪದಿಂದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮತ್ತಷ್ಟು ಬೆಂಬಲ ಸಿಕ್ಕೋದ್ರಲ್ಲಿ ಅನುಮಾನವಿಲ್ಲ.

ಇದು ಹೀಗಿರಬೇಕಿತ್ತಲ್ವಾ?

ಇದೆಲ್ಲಾ ಸರೀನೆ, ಆದ್ರೆ ರಮೇಶ್ ಅರವಿಂದ್, ಗಣೇಶ್, ಪುನೀತ್, ಶರ್ಮಿಳಾ ಮೊದಲಾದ ತಾರೆಯರೆಲ್ಲಾ ಈ ದಿಸೆಯಲ್ಲಿ ಐ.ಪಿ.ಎಲ್ ಆಡಳಿತ ಮಂಡಳಿನಾ ಸಂಪರ್ಕ ಮಾಡಿದಾರೆ ಅನ್ನೋ ಸುದ್ದಿ ಚೂರು ನಿರಾಸೆ ಉಂಟುಮಾಡಿರೋದೂ ನಿಜಾನೆ. ಇದರ ಬಗ್ಗೆ ನಿಜವಾಗ್ಲೂ ರಾಯಲ್ ಚಾಲೆಂಜರ್ಸ್ ತಂಡದ ವ್ಯವಸ್ಥಾಪಕರು ತಾವೇ ಮುಂದಾಗಿ ಕನ್ನಡದ ತಾರೆಯರನ್ನು ಆಹ್ವಾನಿಸಿ, ತಮ್ಮ ತಂಡ ಎಲ್ಲೆಲ್ಲಿ ಆಡುತ್ತೋ ಅಲ್ಲಿಗೆಲ್ಲಾ ಕರ್ಕೊಂಡು ಹೋಗಿ ಚಿಯರ್ಸ್ ಹೇಳಿಸಲು ಒಪ್ಪಂದ ಮಾಡ್ಕೊಂಡಿದ್ದಿದ್ರೆ ಸರಿಯಾದ ನಡೆಯಾಗ್ತಿತ್ತು! ಇದರಿಂದ ಇಬ್ಬರಿಗೂ ಲಾಭವಾಗ್ತಿತ್ತು ಅನ್ನೋದು ನಿಜಾ ಅಲ್ವಾ ಗುರು? ಆ ಮೂಲಕ ಬೆಂಗಳೂರು ತಂಡಕ್ಕೆ ಹೆಚ್ಚು ಹೆಚ್ಚು ಬೆಂಬಲ ಗಳಿಸಿಕೊಡೋದ್ರು ಜೊತೆಗೆ ತಂಡವಾಡೊ ಎಲ್ಲಾ ಪಂದ್ಯಗಳ ಪ್ರೇಕ್ಷಕರ/ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳಬಹುದಿತ್ತು. ಇತ್ತೀಚಿನ ಬೆಳವಣಿಗೆ ನೋಡಿದರೆ ಈ ಪಂದ್ಯಗಳು ಹೊರದೇಶದಲ್ಲಿ ನಡ್ಯೋ ಸಾಧ್ಯತೆಗಳು ಎದ್ದು ಕಾಣ್ತಿವೆ. ಹಾಗಾಗೋದಾದ್ರೆ ನಮ್ಮ ಚಿತ್ರ ತಾರೆಯರನ್ನು ಅಲ್ಲಿಗೆ ಒಯ್ಯೋ ಮೂಲಕ ತಮ್ಮ ತಂಡ ಆಡೊ ಪಂದ್ಯಗಳ ವೀಕ್ಷಕರ ಸಂಖ್ಯೆಯನ್ನು ಕರ್ನಾಟಕದಲ್ಲಂತೂ ಹೆಚ್ಚಿಸ್ಕೋಬೌದು ಅನ್ನೋದು ಹದಿನಾರಾಣೆ ಸತ್ಯಾ ಗುರು!

ಬೆಂಗಳೂರಲ್ಲಿ ದೀವಟ್ರಾನಳ್ಳಿ ಯಾವ್ದು ಗೊತ್ತಾ?

ಇವತ್ತು ಬೆಂಗಳೂರೆಂಬ ಬೆಂಗಳೂರು ಎಷ್ಟೊಂದು ದೊಡ್ಡದಾಗಿದೆಯಲ್ವಾ? ಈ ಬೆಂಗಳೂರಲ್ಲಿ ದೀವಟ್ರಾನಹಳ್ಳಿ ಯಾವ್ದು ಗೊತ್ತಾ ಅಂದ್ರೆ ಹೇಗಪ್ಪಾ ಅಂತಾ ತಲೆ ಕೆರಕೋತಾ ಇದೀರಾ ಗುರು? ಇರಲಿ, ಈ ಹಳ್ಳಿಗೆ ಆ ಹೆಸರು ಹ್ಯಾಗ್ ಬಂತೋ ಮೊದಲು ಹೇಳ್ತೀವಿ ಕೇಳಿ.

ಸ್ವಾಮಿಭಕ್ತಿಗೆ ಒಲಿದ ಒಡೆಯರು!

ಹಿಂದೆ ಅಂದ್ರೆ ಮೈಸೂರನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವ್ರು ಆಳ್ತಿದ್ದ ಕಾಲದಲ್ಲಿ, ಮಹಾರಾಜರು ಆಗಾಗ ಬೆಂಗಳೂರಿಗೆ ಬಂದು ಹೋಗ್ತಿದ್ರಂತೆ. ಹೀಗೆ ಮಹಾಸ್ವಾಮಿಗಳು ಬರ್ತಾರೆ ಅಂದಾಗ ಬೆಂಗಳೂರಿನ ಹೊರವಲಯದ ಒಂದು ಪ್ರದೇಶದ ಮೂಲಕಾನೆ ಹಾದು ಬರಬೇಕಿತ್ತಂತೆ. ಹಾಗೆ ಅವ್ರು ಬರೋವಾಗ ಪ್ರತೀಸಾರ್ತಿನೂ ರಾಮ ಅನ್ನೋ ಒಬ್ಬ ಹಳ್ಳಿಗ ಗೌರವದಿಂದ ’ದೀವಟಿಗೆ’ ಸಲಾಮು ಮಾಡ್ತಿದ್ನಂತೆ. ಹೀಗೆ ಪ್ರತೀಸಾರಿ ವಿನಯದಿಂದ ಶ್ರದ್ಧೆಯಿಂದ ಮಹಾರಾಜರಿಗೆ ’ದೀವಟಿಗೆ ಸಲಾಮು’ ಸಲ್ಲಿಸುತ್ತಿದ್ದ ಅವನಿಗೆ ಅಲ್ಲೇ ಹತ್ತಿರದಲ್ಲಿ ಮನೆ ಕಟ್ಕೊಳಕ್ ಅವಕಾಶ ಮಾಡಿಕೊಟ್ರಂತೆ. ರಾಮ ಗುಡಿಸಲು ಕಟ್ಕೊಂಡ. ಅವನ ಗುಡುಸ್ಲು ಸುತ್ತಾ ಮನೆಗಳಾಗಿ ಆ ಬಡಾವಣೆ ’ದೀವಟಿಗೆ ರಾಮನಹಳ್ಳಿ’ ಆಯ್ತಂತೆ. ಮುಂದೆ ಅದು ದೀವಟ್ರಾಮನ ಹಳ್ಳಿ ಆಗಿ ಆಮೇಲಿಂದ ದೀವಟ್ರಾನ ಹಳ್ಳಿ ಆಯ್ತಂತೆ. ಇವತ್ತಿಗೂ ಆ ಬಡಾವಣೆಯಲ್ಲಿರೋ ಹಿರಿಯರ ಬಾಯಲ್ಲದು ’ದಿವಟ್ರಾನಹಳ್ಳೀ’ನೆ. ಯಾವುದಪ್ಪಾ ಈ ಏರಿಯಾ? ಯಾವುದೇ ಶಾಸನ, ತಾಮ್ರಪತ್ರ ಅಥವಾ ಇತರೆ ದಾಖಲೆಗಳಲ್ಲಿ ದೀವಟಿಗೆ ರಾಮನಿಗೆ ರಾಜರು ನಿವೇಶನ ನೀಡಿದ ದಾಖಲೆ ಇರದಿದ್ದರೂ ಆ ಪ್ರದೇಶ ಆ ಹೆಸರು, ಹೆಸರಿನ ದಂತಕತೆ ಇತಿಹಾಸವನ್ನು ಉಳಿಸಿಕೊಂಡು ಬಂತು. ಆದರೆ ಇವತ್ತಿನ ದಿನ ಆ ಜಾಗಾನಾ ದೀವಟ್ರಾನಳ್ಳಿ ಅಂತನ್ನಲ್ಲಾ... ಬೆಂಗಳೂರು ನಗರದ ಮೈಸೂರು ರಸ್ತೆಯಲ್ಲಿರೋ ಬಿ.ಎಚ್.ಇ.ಎಲ್ ಸಮೀಪದ ದೀಪಾಂಜಲಿ ನಗರವೇ ಈ ದೀವಟ್ರಾನಳ್ಳಿ.
( ಈ ಮಾಹಿತಿ ಡಾ. ಎಂ.ಚಿದಾನಂದಮೂರ್ತಿಗಳ "ಬೃಹತ್ ಕರ್ನಾಟಕ: ಭಾಷಿಕ, ಸಾಂಸ್ಕೃತಿಕ" ಎಂಬ ಹೊತ್ತಿಗೆಯಲ್ಲಿದೆ)

ಹೆಸರುಗಳ ಬದಲಾವಣೆ ಇತಿಹಾಸಕ್ಕೆ ಅಪಚಾರ?

ಪ್ರತಿ ಪ್ರದೇಶಕ್ಕೂ ಅದು ದಾಖಲಾಗಿರಲಿ ಇಲ್ಲದಿರಲಿ ಅದಕ್ಕೊಂದು ಇತಿಹಾಸವಿರುತ್ತದೆ, ಸೊಗಡಿರುತ್ತದೆ. ದೀವಟ್ರಾಮನಳ್ಳಿ ದೀಪಾಂಜಲಿನಗರವಾಗೋದೂ, ಸೂಳೆಕೆರೆ ಶಾಂತಿಸಾಗರವಾಗೋದೂ, ಮೇಟಗಳ್ಳಿ ಮಥುರಾನಗರವಾಗೋದೂ, ಬ್ಯಾಡರಹಳ್ಳಿ ಬೃಂದಾವನನಗರವಾಗೋದೂ, ಚಿಕ್ಕಬಳ್ಳಾಪುರ ವಿಶ್ವೇಶ್ವರಯ್ಯ ಜಿಲ್ಲೆ ಆಗೋದೂ, ಕೋತಿಬಂಡೆ ಮಾರುತಿ ಮಂದಿರವಾಗೋದೂ, ಆನೆಪಾಳ್ಯ ಗಜೇಂದ್ರನಗರವಾಗೋದೂ ನಮ್ಮ ಇತಿಹಾಸಕ್ಕೆ ನಾವೆಸಗೋ ಅಪಚಾರ ಅಲ್ವಾ ಗುರು?

ಬೆಳಗಾವಿ ರಾಜಕಾರಣ ಮತ್ತು ಭಾಜಪ

ನಿನ್ನೆ ಬೆಳಗಾವಿಯಲ್ಲಿ ಪಾಲಿಕೆ ಕಟ್ಟಡದ ಮೇಲೆ ಬಾವುಟ ಹಾರಿಸೋ ವಿಷಯವಾಗಿ ಗದ್ದಲ ನಡೀತು ಆಂತಾ ಇವತ್ತಿನ ಕನ್ನಡಪ್ರಭದ ಮುಖಪುಟದಲ್ಲಿ ವರದಿಯಾಗಿದೆ. ನಿನ್ನೆ ಬೆಳಗಾವಿಯಲ್ಲಿ ನಡೆದ ಘಟನೆಯಿಂದ ನಾಡಿಗೆ ಒಳ್ಳೇದೇನಪ್ಪಾ ಆಗಿದೆ ಅಂದ್ರೆ ಇದರಿಂದ ಬೆಳಗಾವಿಯ ಹಾಲಿ ಸಂಸದ ಮತ್ತು ಶಾಸಕರೊಬ್ಬರ ಬಣ್ಣ ಬಯಲಾಗಿದೆ. ಇಷ್ಟಕ್ಕೇ ಇದು ನಿಲ್ಲದೆ ನಾಡಿನ ಅಧಿಕಾರದ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷ ಯಾವ ನಿಲುವನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಿದೆ ಅನ್ನೋ ಕುತೂಹಲಕ್ಕೂ ಕಾರಣವಾಗಿದೆ.

ಬಾವುಟದ ವಿವಾದ ಬರೀ ನೆಪ!

ಬೆಳಗಾವಿ ಪಾಲಿಕೆ ಮೇಲೆ ಯಾವ ಬಾವುಟ ಹಾರ್ತಿತ್ತು? ಯಾವುದು ಹಾರ್ತಿದೆ? ಯಾವ್ದು ಹಾರಬೇಕು? ಅನ್ನೋದನ್ನೆಲ್ಲಾ ಪಕ್ಕಕ್ಕಿಟ್ಟು ನಮ್ಮ ಸಂಸದರ ನಡವಳಿಕೆ ಬಗ್ಗೆ ಮಾತ್ರಾ ನೋಡೋಣ ಗುರು! ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿರೋ ಸುರೇಶ್ ಅಂಗಡಿ ಎಂಬ ಹುಟ್ಟಿನಿಂದ ಕನ್ನಡಿಗರಾದ ಸಂಸದರು ಈ ಸಂದರ್ಭದಲ್ಲಿ ನಡೆದುಕೊಂಡ ರೀತಿಯನ್ನು ನೋಡೋಣ. ಕುಮಾರಗಂಧರ್ವ ರಂಗಮಂದಿರದ ಸಮೀಪದಲ್ಲಿ ಹೊಸದಾಗಿ ಕಟ್ಟಿರೋ ಪಾಲಿಕೆ ಕಛೇರಿ ಮೇಲೆ ಎಂ.ಇ.ಎಸ್ಸಿನ ಕೇಸರಿ ಬಾವುಟವನ್ನು ಹಾರಿಸಬೇಕೆಂದು ಒತ್ತಾಯಿಸಿ ಕೆಲ ಎಂ.ಇ.ಎಸ್ ಬೆಂಬಲಿಗರು ರಸ್ತೆ ತಡೆ ನಡುಸ್ತಿದ್ದಾಗ ಅಲ್ಲಿಗೆ ಬಂದ ಸಂಸದ ಅಂಗಡಿಯವರು ಆ ಜನಗಳ ಬೆಂಬಲವಾಗಿ ನಿಂತಿದ್ದಷ್ಟೇ ಅಲ್ಲದೆ ಮರಾಠಿಯಲ್ಲಿ ಭಾಷಣವನ್ನೂ ಮಾಡಿದ್ದಾರೆ. ಇದೇ ಸಭೆಯಲ್ಲಿ ಕನ್ನಡ ವಿರೋಧಿ ಘೋಷಣೆಗಳು ಮೊಳಗಿದವು ಅನ್ನೋದು ಕೂಡಾ ಪತ್ರಿಕೆಗಳಲ್ಲಿ ವರದಿಯಾಗಿದೆ. ಎಂ.ಇ.ಎಸ್ಸಿನೋರು ಬಾವುಟ ಹಾರುಸ್ತೀವಿ ಅಂತ ಬಂದಾಗ ಈ ಮಹಾಶಯ ಹೀಗೆಲ್ಲಾ ನಡ್ಕೊಂಡಿದ್ದು ಸರೀನಾ? ಹೇಳಿ ಗುರು...

ಮತಕ್ಕಾಗಿ ಈ ದೊಂಬರಾಟವೇ!

ಈಗ ಲೋಕಸಭಾ ಚುನಾವಣೆ ಹತ್ತಿರ ಬಂತು. ಎಂ.ಇ.ಎಸ್ ಜೊತೆ ಭಾಜಪಾ ಇಲ್ಲಿ ಸದಾ ಸಹಯೋಗೀನೆ. ಸದಾಕಾಲ ವಿಧಾನ ಸಭೆ, ನಗರಪಾಲಿಕೆ, ಎ.ಪಿ.ಎಂ.ಸಿ ಯಾರ್ಡು ಇಂಥಹವುಗಳಲ್ಲೆಲ್ಲಾ ಎಂ.ಇ.ಎಸ್ ಗೆಲುವಿಗೆ ಇವರ ಬೆಂಬಲ... ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅವರ ಬೆಂಬಲ ಅನ್ನೋ ಗುಮಾನಿ ಇದೆ. ಕನ್ನಡ-ಕರ್ನಾಟಕ-ಕನ್ನಡಿಗರ ವಿಷಯದಲ್ಲಿ ಎಂ.ಇ.ಎಸ್ ಎಂಥದೇ ಧೋರಣೆ ಹೊಂದಿದ್ದರೂ ಇವರಿಬ್ಬರ ಈ ಮೈತ್ರಿಗೆ ಧಕ್ಕೆ ಬಂದಿಲ್ಲ ಅನ್ಸುತ್ತೆ. ಎಂ.ಇ.ಎಸ್ ನೋರು ಬೆಳಗಾವಿನ ಮಹಾರಾಷ್ಟ್ರಕ್ಕೆ ಸೇರುಸ್ಬೇಕು ಅಂದಿದ್ಕೆ ಇಡೀ ಕರ್ನಾಟಕವೇ ಅವರ ವಿರುದ್ಧ ಒಗ್ಗೂಡಿದಾಗಲೂ ಈ ಸಂಬಂಧಾನ ಉಳುಸ್ಕೊಂಡೇ ಬಂದಿರೋ ಮಹಾನುಭಾವರು ಇವರು ಅಂತಿದಾರೆ ಜನ. ಕನ್ನಡ ರಾಜ್ಯೋತ್ಸವಾನ ಕಪ್ಪುದಿನ ಅಂತ ಇವರು ಆಚರಿಸಿದ್ರೂ, ಮರಾಠಿ ಮಹಾಮೇಳಾವ ಅಂತ ಮಾಡಿ ಬೆಳಗಾವೀನ ಕಿತ್ಕೋತೀವಿ ಅಂದಾಗ್ಲೂ... ಎಂದಿಗೂ ಜಗ್ಗದ ಬಗ್ಗದ ಕುಗ್ಗದ ಸಂಬಂಧ ಇವರದ್ದು ಅನ್ನೋ ಹಾಗಿದೆ. ಇದನ್ನು ನೋಡ್ತಿದ್ರೆ ಬಹುಷಃ ಬೆಳಗಾವಿ ಪಾಲಿಕೆ ಚುನಾವಣೆ, ವಿಧಾನಸಭಾ ಚುನಾವಣೆಗಳಲ್ಲಿ ಎಂ.ಇ.ಎಸ್ ಮಣ್ಣು ಮುಕ್ಕಿದ್ದಕ್ಕೆ ದುಃಖಿಸಿದ ಏಕೈಕ ಕನ್ನಡಿಗ ಈ ನಮ್ಮ ಸಂಸದರು ಅನ್ಸುತ್ತೆ. ಈ ಕಣ್ಣೀರಿನ ಹಿಂದಿರೋದು ತಾವು ಎಂ.ಇ.ಎಸ್ ಬೆಂಬಲವಿಲ್ಲದೆ ಸೋತೇನೇ ಎನ್ನೋ ಆತಂಕ ಅಂತಾ ಅನ್ಸಲ್ವಾ ಗುರು! ಇವರ ಈ ಬುದ್ಧಿ ಬೆಳಗಾವಿ ಜನಕ್ಕೆ ಗೊತ್ತೇ ಇರುತ್ತೆ, ಅದಕ್ ತಕ್ಕ ಉತ್ತರಾನೂ ಚುನಾವಣೇಲಿ ಮತದಾರ ಕೊಡೋದು ಖಂಡಿತ.

ಏನಂತೀರಾ ಸದಾನಂದಗೌಡ್ರೇ?

ನೇರವಾಗಿ ನಾಡವಿರೋಧಿಗಳ ಜೊತೆಯಲ್ಲಿ ಕೈ ಜೋಡಿಸಿರೋ ತನ್ನ ಪಕ್ಷದ ಹಾಲಿ ಸಂಸದರಾದ ಶ್ರೀ ಸುರೇಶ್ ಅಂಗಡಿ ಮತ್ತು ಹಾಲಿ ಶಾಸಕ ಶ್ರೀ ಸಂಜಯ್ ಪಾಟೀಲ ಅವರ ವಿರುದ್ಧವಾಗಿ ಯಾವ ಕ್ರಮಾ ತೊಗೋತೀರಾ ಈಗ? ಎಂ.ಇ.ಎಸ್ ಬಗ್ಗೆ ತಮ್ಮ ಪಕ್ಷದ ನಿಲುವೇನು? ಈ ಪ್ರತಿಭಟನಾ ಸಭೇಲಿ ಕರ್ನಾಟಕದ ಮತ್ತು ಕನ್ನಡಿಗರ ವಿರುದ್ಧವಾಗಿ ಘೋಷಣೆ ಕೂಗ್ತಿದ್ರೂ ತಮ್ಮ ಸಂಸದರು ಚಕಾರ ಎತ್ತದ ಬಗ್ಗೆ ಏನಂತೀರಾ? ಕರ್ನಾಟಕದಿಂದ ಬೆಳಗಾವಿಯನ್ನು ಬೇರೆ ಮಾಡ್ತೀವಿ ಅನ್ನೋರ ಜೊತೆ ಸರಸವಾಡ್ತಿರೋ ನಿಮ್ಮ ಪಕ್ಷದ ಸಂಸದರ ಬಗ್ಗೆ ಏನು ಶಿಸ್ತುಕ್ರಮಕ್ಕೆ ಮುಂದಾಗ್ತೀರಾ? ನಿಮ್ಮ ಪಕ್ಷದ ಮುಂದಿನ ನಡೆಯ ಬಗ್ಗೆ ನಾಡಿನ ಕನ್ನಡಿಗರು ಕುತೂಹಲದಿಂದ ಕಾಯ್ತಿದಾರೆ ಗೌಡ್ರೇ... ನೀವೇನು ಅಂಗಡಿಯವರಿಗೆ ಟಿಕೆಟ್ ನಿರಾಕರುಸ್ತೀರೋ? ಅಥ್ವಾ ಸುಮ್ಮನಿದ್ದು ಎಂ.ಇ.ಎಸ್ಸು - ಬಿಜೆಪಿಗಳ ಸಂಬಂಧಾನ್ನ ಸಮರ್ಥಿಸಿಕೊಳ್ತೀರೋ?

ನಮ್ಮ ಸಂಸದರ ಸಂಖ್ಯೆ ಎಷ್ಟಿರಬೇಕಿತ್ತು?

’ಲೋಕಸಭೆ ಚುನಾವಣೆ ಇನ್ನೇನು ಬಂದೇಬಿಟ್ಟಿದೆ. ಭಾರತದ ಸಂಸತ್ತಲ್ಲಿ ಕರ್ನಾಟಕಾನ ಪ್ರತಿನಿಧಿಸೋ ಸಂಸದರನ್ನು ಆರಿಸಬೇಕಾದ ಸಮಯ ಇದು. ಈ ನಮ್ಮ ಸಂಸದರು ಎಂಥವರಾಗಿರಬೇಕಪ್ಪಾ ಅಂದರೆ ನಮ್ಮ ಸಮಸ್ಯೆಗಳನ್ನು ದಿಲ್ಲಿಯಲ್ಲಿ ಬಿಂಬಿಸುವ, ನಮ್ಮ ನಾಡಿನ ಪರವಾಗಿ ಲಾಬಿ ಮಾಡಬಲ್ಲವರಾಗಿರಬೇಕು. ನಮ್ಮ ಸಂಸದರ ಬೆಂಬಲ ಇಲ್ಲದೆ ಯಾವ ಸರ್ಕಾರವನ್ನೂ ಅಲ್ಲಿ ಮಾಡಕ್ ಆಗಲ್ಲಾ, ಯಾವ ಸರ್ಕಾರಾನೂ ಅಲ್ಲಿ ಕೂರಕ್ ಆಗಲ್ಲ ಅನ್ನೋ ಸನ್ನಿವೇಶ ಹುಟ್ಕೊಂಡ್ರೆ ಮಾತ್ರಾ ನಮ್ಮ ನಾಡಿಗೆ ಬೇಕಾದ ಯೋಜನೆಗಳು, ಸರಿಯಾದ ಸಂಪನ್ಮೂಲ ಹಂಚಿಕೆ, ಪರಿಹಾರ ಹಂಚಿಕೆಗಳು ಅಲ್ಲಿ ಸಿಗೋದು’ ಅಂತಾ ಈಗಾಗ್ಲೆ ಜನರಿಗೆ ಅನ್ಸಕ್ ಶುರುವಾದಂಗಿದೆ. ’ಕರ್ನಾಟಕದಿಂದ ಒಟ್ಟು ಆರಿಸಿ ಹೋಗೋದು 28 ಸಂಸದರು. ಇಷ್ಟೂ ಜನ ಒಗ್ಗಟ್ಟಾಗಿದ್ರೆ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಕ್ಕೀತು, ಆದರೆ ಹಾಗಾಗಿಲ್ಲ ಅನ್ನೋದು ಒಂದು ದುರಂತ’ ಅಂತಲೂ ಇದೇ ಜನ ಅಂದ್ಕೊತಿರಬೌದು. ಇದೆಲ್ಲಕ್ಕಿಂತ ಮೀರಿದ ಇನ್ನೊಂದು ಮಾಹಿತಿ ಬಗ್ಗೆ ನಿಮ್ಮ ಗಮನ ಸೆಳೆಯೋ ಪ್ರಯತ್ನ ನಮ್ದು.

ರಾಜ್ಯಗಳ ಸಂಸದರ ಸಂಖ್ಯೆಯ ಮಹತ್ವ!

ಕಾಲ ಯಾವ್ದೇ ಇರಲಿ, ದಿಲ್ಲೀಲಿ ಪ್ರಧಾನಮಂತ್ರಿ ಪಟ್ಟಕ್ ಹತ್ತೋರು ಉತ್ತರಪ್ರದೇಶದ ಸಂಸದರೇ ಆಗಿರೋದ್ನ ನೋಡಬಹುದು. ಬೇಕಾದ್ರೆ ನೀವೇ ನೋಡಿ… ಒಬ್ಬ ನರಸಿಂಹರಾವ್, ಮತ್ತೊಬ್ಬ ದ್ಯಾವೇಗೌಡ್ರನ್ ಬಿಟ್ರೆ ಹೆಚ್ಚಿನೋರು ಅಲ್ಲಿಯವ್ರೇ. ಯಾಕಂದ್ರೆ ಅತಿಹೆಚ್ಚು ಸಂಸದರನ್ನು ದಿಲ್ಲಿಗೆ ಆರಿಸಿ ಕಳಿಸೋದೇ ಉತ್ತರಪ್ರದೇಶ. ಇಲ್ಲಿಂದ 80 ಸಂಸದರು. ಮಹಾರಾಷ್ಟ್ರದಿಂದ 48 ಸಂಸದರು, ತಮಿಳುನಾಡಿಂದ 39 ಸಂಸದರು ಬರ್ತಾರೆ. ಸುಮ್ನೆ ನೋಡುದ್ರೆ ಅತಿಹೆಚ್ಚು ಸಂಸದರನ್ನು ಹೊಂದಿರೋ ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ, ಪಶ್ಚಿಮಬಂಗಾಳ(42), ಆಂಧ್ರಪ್ರದೇಶ(42) ಮತ್ತು ತಮಿಳುನಾಡುಗಳೇ ಭಾರತದ ರಾಜಕಾರಣದಲ್ಲಿ ಪ್ರಭಾವಿ ರಾಜ್ಯಗಳೇನೋ ಅನ್ಸುತ್ತೆ. ಬೇಕೋ ಬೇಡ್ವೋ, ಸರಿಯೋ ತಪ್ಪೋ ಒಟ್ನಲ್ಲಿ ಒಂದು ರಾಜ್ಯದ ಒಟ್ಟು ಸಂಸದರ ಸಂಖ್ಯೆ ದಿಲ್ಲಿಯಲ್ಲಿ ಪ್ರಭಾವಶಾಲಿ. ಅದರಲ್ಲೂ ಆ ಸಂಖ್ಯೆ ಪ್ರಾದೇಶಿಕ ಪಕ್ಷದ್ದಾದ್ದರಂತೂ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಪ್ರಭಾವಶಾಲಿ ಅನ್ನುವ ಹಾಗೆ ತೋರುತ್ತದೆ. ಹೆಚ್ಚು ಸಂಸದರನ್ನು ಹೊಂದೋದು ಕೇಂದ್ರದಿಂದ ನಮ್ಮ ಪಾಲನ್ನು ಹೆಚ್ಚು ಗಿಟ್ಟಿಸಿಕೊಳ್ಳಕ್ಕೆ ಪೂರಕ ಅನ್ನೋ ಪರಿಸ್ಥಿತಿ ಇರುವಂತೆ ಇವತ್ತು ತೋರ್ತಿದೆ. ಹಾಗಾದ್ರೆ "ನಮ್ಮ ಹಕ್ಕು ನಮಗೆ ಸಿಗಬೇಕಾದ್ರೆ ನಮ್ಮ ಸಂಸದರ ಸಂಖ್ಯೇನೂ ಅಷ್ಟೊಂದಾಗಬೇಕಾ?" ಅನ್ನೋ ಪ್ರಶ್ನೆ ಕೇಳ್ತಿದೀರಾ?

ಸಂಸದರ ಸಂಖ್ಯೆ ಮತ್ತು ಜನಗಳ ಸಂಖ್ಯೆಯ ಅನುಪಾತ!

ಇಂತಿಷ್ಟು ಜನ ಮತದಾರರನ್ನು ಪ್ರತಿನಿಧಿಸೋಕ್ಕೆ ಒಬ್ಬ ಶಾಸಕರು ಇರ್ತಾರೆ, ಇಂತಿಷ್ಟು ಜನರನ್ನು ಪ್ರತಿನಿಧಿಸೋಕೆ ಒಬ್ಬ ಸಂಸದರು ಇರ್ತಾರೆ ಅನ್ನೋದೂ ಸಾಮಾನ್ಯ ತಿಳುವಳಿಕೆ. ಆದ್ರೆ ಕೆಲವು ಪ್ರದೇಶಗಳಲ್ಲಿ, ಉದಾಹರಣೆಗೆ ಅರುಣಾಚಲಪ್ರದೇಶ, ಲಕ್ಷದ್ವೀಪದಂತಹ ಪ್ರದೇಶಗಳು ಹೊಂದಿರೋದೆ ಕಮ್ಮಿ ಜನಸಂಖ್ಯೆ. ಆಗ ಇಡೀ ಭಾರತಕ್ಕೆ ಅನ್ವಯವಾಗೋ ನಿಯಮ ಅಲ್ಲಿ ಅನುಸರಿಸಕ್ ಆಗಲಿಕ್ಕಿಲ್ಲ. ಆ ಕಾರಣದಿಂದಲೇ ಲಕ್ಷದ್ವೀಪದ ಜನಸಂಖ್ಯೆ 41,000ದಷ್ಟೇ ಇದ್ದರೂ ಅಲ್ಲಿಂದ ಒಬ್ಬ ಸಂಸದರು ಪ್ರತಿನಿಧಿಯಾಗಿ ಆರಿಸಿಬರ್ತಾರೆ. ಇದೇನೋ ಸರೀನೇ. ಆದ್ರೂ ಅಂಥಾ ರಾಜ್ಯಗಳನ್ನೂ, ಕೇಂದ್ರಾಡಳಿತ ಪ್ರದೇಶಗಳನ್ನೂ ಲೆಕ್ಕದಿಂದ ಹೊರಗಿಟ್ಟು ನೋಡುದ್ರೆ ಕಾಣೋ ಅಂಕಿಅಂಶ ಕುತೂಹಲಕಾರಿಯಾಗಿದೆ. ಎಷ್ಟು ಜನಕ್ಕೆ ಒಬ್ಬ ಸಂಸದ ಅನ್ನೋ ಲೆಕ್ಕಪಟ್ಟೀಲಿ ಅತಿಹೆಚ್ಚು ಜನರನ್ನು ಪ್ರತಿನಿಧಿಸೋ ಸಂಸದರ ಪಟ್ಟಿಯಲ್ಲಿ ಕರ್ನಾಟಕವೇ ಮೊದಲನೆಯ ರಾಜ್ಯ ಅಂದ್ರೆ ಅಚ್ಚರಿ ಪಡಬೇಡಿ. ನಮ್ಮ 15,30,000 ಜನಕ್ಕೆ ಒಬ್ಬ ಸಂಸದನಿರ್ತಾನೆ. ರಾಷ್ಟ್ರೀಯ ಸರಾಸರಿ 12,75,000. ಈ ಸಂಖ್ಯೆ ತಮಿಳುನಾಡಿನಲ್ಲಿ 10,22,೦೦೦ಕ್ಕೆ ನಿಲ್ಲುತ್ತೆ. ಕೇರಳದಲ್ಲಿ ಪ್ರತಿ ಲೋಕಸಭಾ ಕ್ಷೇತ್ರದ ಸರಾಸರಿ ಮತದಾರರ ಸಂಖ್ಯೆ 10,50,000. ಅಂದ್ರೆ ನಮ್ಮಲ್ಲೂ ಕೇರಳ ಮತ್ತು ತಮಿಳುನಾಡಿನಲ್ಲಿದ್ದಂತೆ 10.0-10.5 ಲಕ್ಷಕ್ಕೊಬ್ಬ ಸಂಸದನಿದ್ದಿದ್ದರೆ ಆಗ ಕರ್ನಾಟಕದ ಒಟ್ಟು ಲೋಕಸಭಾಕ್ಷೇತ್ರಗಳ ಸಂಖ್ಯೆ ಇಂದಿನ 28ರ ಬದಲಾಗಿ 42 ಆಗ್ತಿತ್ತು ಅನ್ನೋದು ಗಣಿತದ ಲೆಕ್ಕಾಚಾರ. ಒಟ್ಟು ರಾಷ್ಟ್ರೀಯ ಸರಾಸರಿಯ ಆಧಾರದ ಮೇಲೆ ಲೆಕ್ಕ ಹಾಕುದ್ರೆ ಕರ್ನಾಟಕದಲ್ಲಿ 34 ಲೋಕಸಭಾ ಕ್ಷೇತ್ರಗಳೂ, ತಮಿಳುನಾಡಲ್ಲಿ 31 ಲೋಕಸಭಾ ಕ್ಷೇತ್ರಗಳೂ ಇರಬೇಕಿತ್ತು. ಹಾಗೇನಾದ್ರೂ ಆಗಿದ್ದಿದ್ರೆ ಏನೇನೆಲ್ಲಾ ಆಗಿರ್ತಿತ್ತು ಅನ್ನೋದು ನಿಮ್ಮ ಕಲ್ಪನೆಗೆ ಬಿಟ್ಟ ವಿಷ್ಯಾ ಗುರು!

“ಇದೆಂಗೇ ಗುರು? ಇದು ಕೇಂದ್ರದ ತಾರತಮ್ಯ ಧೋರಣೆ, ಇದರಿಂದ ಕರ್ನಾಟಕಕ್ಕೆ ಭೋ ಅನ್ಯಾಯ ಆಗ್ತಿದೆ, ನಮ್ಮ 28 ಜನರ ದನಿ 39 ಜನರ ಮುಂದೆ ಅಡಗಿ ಹೋಗ್ತಿದೆ, ಎಲ್ಲಾ ಕಡೆಯೂ ಒಂದೇ ಅನುಪಾತದ ಮಾನದಂಡದ ಮೇಲೆ ಲೋಕಸಭಾಸ್ಥಾನಗಳ ಸಂಖ್ಯೆ ಹೆಚ್ಚಿಸಬೇಕು/ ಅಥವಾ ಕಮ್ಮಿ ಮಾಡಬೇಕು” ಅಂತ ನಮ್ಮನ್ ಕೇಳ್ಬೇಡಿ ಮತ್ತೆ. ನಾವು ಕೊಡ್ತಿರೋದು ಬರೀ ಅಂಕಿಅಂಶ, ಇದರ ವಿಶ್ಲೇಷಣೆ ನಿಮಗೇ ಬಿಟ್ಟಿದ್ದು ಗುರು!!

ಐಪಿಎಲ್ ಕ್ರಿಕೆಟ್ ಕಾಮೆಂಟರಿ : "ಹಳದಿಕೆಂಪು-ಕನ್ನಡದ ಕಂಪು"

ಭಾರತೀಯ ಕ್ರಿಕೆಟ್ಟಿಗೆ ಹೊಸ ಬಣ್ಣ ತಂದುಕೊಟ್ಟಿರೋ ಐಪಿಎಲ್ ಸರಣಿ ಈ ಬಾರಿ ಪಂದ್ಯಾವಳಿಯಲ್ಲಿ ಕನ್ನಡದಲ್ಲೂ ಕಾಮೆಂಟರಿ ಕೊಡೋ ಯೋಜನೆ ಮಾಡಿದೆ ಅನ್ನೋ ಸೂಪರ್ ಸುದ್ದಿ 2009ರ ಮಾರ್ಚ್ 11ರ ಕನ್ನಡಪ್ರಭದ 12ನೇ ಪುಟದಲ್ಲಿ ಬಂದಿದೆ ಗುರು!! ಒಟ್ನಲ್ಲಿ ಗೊತ್ತಿದ್ದೋ ಗೊತ್ತಿಲ್ಲದೇನೋ ನಿಜವಾದ ಒಕ್ಕೂಟ ವ್ಯವಸ್ಥೆ ಹೇಗಿರಬೇಕು ಅನ್ನೋದಕ್ಕೆ ಬಿ.ಸಿ.ಸಿ.ಐ ಒಂದು ಮಾದರೀನ ಹಾಕ್ಕೊಡ್ತಿದೆ!

ಕ್ರಿಕೆಟ್ : ಹಿಂದೀ ಹೇರಿಕೆಯ ಪ್ರಮುಖ ಸಾಧನ!

"ಭಾರತದೋರಿಗೆ ಕ್ರಿಕೆಟ್ಟು ಅನ್ನೋದು ಕ್ರೀಡೆ ಮಾತ್ರಾ ಆಗಿಲ್ಲಾ, ಅದು ಅವರ ರಾಷ್ಟ್ರೀಯತೆಯಾಗಿದೆ" ಅಂತ ಅದ್ಯಾರೋ ಪುಣ್ಯಾತ್ಮ ಅಂದಿದ್ರಂತೆ. ಹಾಗೆ ಕ್ರಿಕೆಟ್ ಪಂದ್ಯಗಳು ಕಳೆದ ಮೂವತ್ತು ನಲವತ್ತು ವರ್ಷಗಳಲ್ಲಿ ಬೆಳೆದು ಆವರಿಸಿಕೊಂಡ ಪರಿ ಅದ್ಭುತವಾಗಿದೆ ಗುರು! ಇದೇ ಹೊತ್ತಲ್ಲಿ ತಂತ್ರಜ್ಞಾನದಲ್ಲಾದ ಬೆಳವಣಿಗೆ ನಮ್ಮ ಮನೆಗಳ ಒಳಗೆ ಟಿವಿ ಬರಲು ಕಾರಣವಾಯ್ತು. ಇದರ ಜೊತೆಯಲ್ಲೇ ದೂರದರ್ಶನವೆಂಬುದು ಭಾರತ ಸರ್ಕಾರ ತನ್ನ ಪ್ರಜೆಗಳ ಮೇಲೆ ಹಿಂದಿಯನ್ನು ಹೇರುವ ಹೆದ್ದಾರಿಯಾಯ್ತು. ತಕ್ಕಳಪ್ಪಾ, ಹೇಗಿದ್ರೂ ಜನಕ್ಕೆ ಕ್ರಿಕೆಟ್ ನೋಡೋ ಹುಚ್ಚು ಹಿಡ್ದಿದೆ, ಇದೇ ಸಮಯಾ ಅಂತ ನಮ್ಮ ಸರ್ಕಾರಗಳು ಹಿಂದೀ ಕಾಮೆಂಟರಿಗೆ ಇನ್ನಿಲ್ಲದ ಪ್ರಾಮುಖ್ಯತೆ ಕೊಡಲು ಶುರು ಹಚ್ಕಂಡ್ವು.
ಪ್ರಪಂಚದ ಯಾವ್ದೇ ಮೂಲೇಲೆ ಕ್ರಿಕೆಟ್ ನಡುದ್ರೂ ನಡುರಾತ್ರಿ, ಮುಂಜಾನೆ ಅನ್ನೋ ಪರಿವೆ ಇಲ್ಲದೆ ಜನ ಟಿವಿ ಮುಂದೆ ಕೂಡ್ಲಿಕ್ಕೆ ಶುರು ಮಾಡ್ತಿದ್ದಂಗೇ ತಮಗೆ ಗೊತ್ತಿಲ್ದಂಗೇನೆ ಹಿಂದೀ ಕಲ್ಯಕ್ ಶುರು ಹಚ್ಕೊಂಡ್ರು. "ಅಣ್ಣಾ... ಏಕ್ ಸೌ ಉಂತೀಸ್ ಅಂದ್ರೆ ಎಷ್ಟಣ್ಣಾ?" "ಛೇ ವಿಕೆಟ್ ಖೋಕರ್, ನಿನ್ನಿಯಾನ್ಬೇ ರನ್ ಅಂದ್ರೆ ಎಷ್ಟು ಸಾರ್?" "ಓ ಇಕ್ಯಾವನ್ ಅಂದ್ರೆ ಐವತ್ತೊಂದಾ?" ಅನ್ನೋ ಡೈಲಾಗುಗಳು ಕನ್ನಡದ ಮನೆಮನೆಯಲ್ಲಿ ಕಾಮನ್ನಾಗೋಯ್ತು ಗುರು! ಹಾಗೇ, ಅಲ್ಲೀ ತಂಕಾ ನೀಲಕಂಠರಾವ್ ಥರದ ವೀಕ್ಷಕ ವಿವರಣೆಕಾರರಿಂದ ರೇಡಿಯೋಗಳಲ್ಲಿ ಕನ್ನಡದಲ್ಲಿ ಕೇಳಿಬರುತ್ತಿದ್ದ ಕಾಮೆಂಟರಿಗಳೂ ಕೊನೆಯಾಗಿಹೋದವು. ಇಷ್ಟೆಲ್ಲಾ ಬೆಳವಣಿಗೆ ಕಂಡ ಮೇಲೂ ನಮಗೆ ಕ್ರಿಕೆಟ್ ಕಾಮೆಂಟರಿ ಅನ್ನೋದು ಭಾರತ ಸರ್ಕಾರ ನಮಗೆಲ್ಲಾ ನುಂಗುಸಕ್ ಮುಂದಾಗಿರೋ ಹಿಂದಿ ಹೇರಿಕೆಯೆಂಬ ವಿಷಕ್ಕೆ ಮೆತ್ತಿದ ಸಿಹಿ ಲೇಪನ ಅನ್ನೋದು ಗೊತ್ತಾಗ್ಲಿಲ್ವಲ್ಲಾ?

ಕನ್ನಡದ ಕಾಮೆಂಟರಿ : ಒಕ್ಕೂಟ ವ್ಯವಸ್ಥೆಗೆ ಗೌರವ!

ನಿಜಾ ಗುರು, ನಮ್ಮ ಮನರಂಜನೆ ನಮ್ಮ ನುಡಿಯಲ್ಲಿರಬೇಕು ಅನ್ನೋದು ನಮ್ಮ ಮೂಲಭೂತ ಹಕ್ಕಾಗಿದೆ. ಇವತ್ತು ಐಪಿಎಲ್ ಸರಣಿಯಲ್ಲಿ ಕನ್ನಡದ ಕಾಮೆಂಟರಿ ಕೊಡಕ್ಕೆ ಅವರು ಮುಂದಾಗಿರೋದು ಒಕ್ಕೂಟದ ಘನತೆ ಕಾಪಾಡಕ್ಕೇ ಅಂತೇನೂ ಅಲ್ಲ. ಇದರಿಂದ ಕನ್ನಡದ ಮಾರುಕಟ್ಟೇನಾ ಗೆಲ್ಲಕ್ ಸಾಧ್ಯಾ ಆಗಬಹುದು ಅನ್ನೋದೇ ಅವರ ಈ ನಿಲುವಿಗೆ ಕಾರಣ. ಏನೇ ಆಗಲಿ, ಇದರಿಂದಾಗಿ ಕನ್ನಡಿಗರು ತಮ್ಮ ನುಡಿಗೆ ಇರೋ ಮಾರುಕಟ್ಟೆ ಶಕ್ತೀನಾ ಮತ್ತೊಮ್ಮೆ ಅರಿತುಕೋಬೇಕು. ಬರೀ ಕಾಮೆಂಟರಿ ಅಲ್ಲ, ಟಿ.ವಿಯ ಜಾಹೀರಾತುಗಳು ಕೂಡಾ ಕನ್ನಡದಲ್ಲಿರೋದು ಆಯಾ ಉತ್ಪನ್ನಗಳ ಮಾರಾಟ ನಮ್ಮ ನಾಡಲ್ಲಿ ಹೆಚ್ಚೋದಕ್ಕೆ ಸಹಾಯಕ ಅಂತ ತೋರಿಸಿಕೊಡಬೇಕು. ಆಗ ಹಿಂದಿ ಹೇರಿಕೆಯೂ ಕೊನೆಯಾಗುತ್ತೆ, ಒಕ್ಕೂಟ ವ್ಯವಸ್ಥೆಗೂ ಗೌರವ ಬರುತ್ತೆ! ಹೌದಲ್ವಾ ಗುರು?

"ಕಲಿಕೆ" ರಾಜ್ಯದ ಪಟ್ಟೀಗೆ ಬರಬೇಕು!

"ಕನ್ನಡ ನುಡಿಯ ಬಗ್ಗೆ, ನಾಡಿನ ಬಗ್ಗೆ ಕೀಳರಿಮೆ ಹುಟ್ಟುಹಾಕ್ತಿರೋ ಪಠ್ಯಪುಸ್ತಕಗಳನ್ನು ನಮ್ಮ ಮಕ್ಕಳಿಗೆ ಮೇಲೆಬಿದ್ದು ಕಲುಸ್ತಿರೋ ಕನ್ನಡಿಗ ಪೋಷಕರೇ, ನೀವು ಅಮೃತ ಅಂತ ಕುಡುಸ್ತಿರೋ ಈ ಕೇಂದ್ರೀಯ ಪಠ್ಯಕ್ರಮದ ಕಲಿಕೆ ನಿಮ್ಮದೆಲ್ಲಾ ಕೀಳು ಅನ್ನೋ ವಿಷಾನ ನಿಮ್ಮ ಮಕ್ಕಳಲ್ಲಿ ಚೂರುಚೂರಾಗೇ ತುಂಬ್ತಾ ಇರೋದು ಇನ್ನೂ ನಿಮ್ಮ ಕಣ್ಣಿಗೆ ಕಾಣ್ತಿಲ್ವಾ?" ಅಂತ ಸುತ್ತಿಬಳ್ಸಿ ಕೇಳ್ತಾ ಇದೆ ನಿನ್ನೆಯ (09.03.2009) ವಿಜಯಕರ್ನಾಟಕದ ಐದನೇ ಪುಟದಲ್ಲಿ ಪ್ರಕಟವಾಗಿರೋ ಒಂದು ವರದಿ.

ಕರ್ನಾಟಕ ಸರ್ಕಾರದ ಹೊಣೆಗಾರಿಕೆ ಏನೂ ಇಲ್ವಾ?

ಕೇಂದ್ರೀಯ ಪಠ್ಯಕ್ರಮದ ಅನೇಕ ಶಾಲೆಗಳಲ್ಲಿ ಕಲಿಸಲು ಬಳಸೋ ಪಠ್ಯಪುಸ್ತಕಗಳ ಹೂರಣದ ಬಗ್ಗೆ ರಾಜ್ಯಸರ್ಕಾರಕ್ಕೆ ಯಾವ ರೀತಿಯ ಹಿಡಿತವೂ ಇಲ್ಲದಂತಿದೆ. ಕಲಿಕೆ ಪರಿಣಾಮಕಾರಿಯಾಗಿರೋಕೆ ಆಯಾ ಪ್ರದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಬಳ್ಸಿ ಕಲ್ಸೋದು ಸರಿಯಾದ ವಿಧಾನವಾಗಿದೆ. ಅಂಥದ್ರಲ್ಲಿ ನಾವು ಇರೋ ಪರಿಸರದ ಬಗ್ಗೆ ಅರೆಬರೆ, ತಪ್ಪುತಪ್ಪು ಮಾಹಿತಿ ಇರೋ ಅಂಥಾ ಪುಸ್ತಕಗಳನ್ನು ಕಲಿಕೆಗೆ ಬಳ್ಸುದ್ರೆ ನಮ್ಮ ಮಕ್ಕಳ ಮನ್ಸು ಏನಾಗಬೇಡಾ ಗುರು? ನಮ್ಮ ನಾಡು, ನುಡಿ ಬಗ್ಗೆ ಕೀಳರಿಮೆಗೆ ಕಾರಣವಾಗೋವಂಥಾ ಪಾಠ ಕಲಿತ ಮಕ್ಕಳು ಈ ನಾಡಿನ ಸಂಪತ್ತು ಹೇಗಾದಾರು? ’ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’ ಅನ್ನೋ ಮಾತಿಗೆ ಏನರ್ಥವಿರುತ್ತೆ? ಇಂಥಾ ಆಗುಹೋಗುಗಳ ಬಗ್ಗೆ ರಾಜ್ಯಸರ್ಕಾರಕ್ಕೆ ಹಿಡಿತ ಇರಬೇಕು ಅನ್ನೋದು ಸರಿಯಲ್ವಾ? ಹೀಗೆ ನಾಡಿನ ಮಕ್ಕಳಿಗೆ ಏನು ಕಲಿಸಲಾಗುತ್ತಿದೆ ಅನ್ನುವುದರ ಬಗ್ಗೆ ಕಾಳಜೀನೆ ಇಲ್ಲದೆ ನಮ್ಮ ಸರ್ಕಾರ ಕಣ್ಣುಮುಚ್ಚಿ ಸುಮ್ಮನೆ ಕೂರಕ್ಕಾಗುತ್ತಾ ಗುರು?

ಕರ್ನಾಟಕದಲ್ಲಿ ಕನ್ನಡ ಕಲ್ಸಿ ಅಂತಾ ಕೇಳ್ಕೊಂಡ ಶಿಕ್ಷಣ ಸಚಿವರು!

ಕೇಂದ್ರೀಯ ಪಠ್ಯಕ್ರಮದ ಶಾಲೆಗಳ ಮೇಲೆ, ಅವು ಕಲಿಸೋ ಪಠ್ಯದ ಮೇಲೆ ರಾಜ್ಯಸರ್ಕಾರಕ್ಕೆ ಯಾವ ರೀತಿ ಹಿಡಿತ ಇದೆ ಅಂತ ನೋಡುದ್ರೆ ನಿರಾಸೆಯಾಗುತ್ತೆ! ಇದಕ್ಕೆ ಸಾಕ್ಷಿಯಾಗುವಂತೆ ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವರಾದ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯೋರು ಸಿ.ಬಿ.ಎಸ್.ಇ, ಐ.ಸಿ.ಎಸ್.ಈಗಳಲ್ಲಿ ಕನ್ನಡಾನ ಕಲ್ಸಕ್ ಅವಕಾಶ ಮಾಡ್ಕೊಡಿ ಅಂತ ಕೇಳಿಕೊಂಡ ಸುದ್ದಿ ಸ್ವಲ್ಪ ದಿನದ ಹಿಂದೆ ಇದೇ ಪತ್ರಿಕೆಗಳಲ್ಲಿ ಬಂದಿತ್ತು. ಕರ್ನಾಟಕದ ಶಾಲೆಗಳಲ್ಲಿ ಏನು ಕಲಿಸಬೇಕು ಅಂತ ನಿರ್ಧರಿಸೋ ಹಕ್ಕು ಕರ್ನಾಟಕ ರಾಜ್ಯ ಸರ್ಕಾರಕ್ಕೇ ಇಲ್ಲಾ ಅಂದ್ರೆ ಹೇಗೆ? ಈ ಶಾಲೆಗಳಲ್ಲಿ ಕಲ್ಯೋ ಮಕ್ಕಳು ನಮ್ಮ ನಾಡಿನ ಮಕ್ಕಳು ಅನ್ನೋ ಒಂದು ಕಾಳಜಿ ಸಾಕಲ್ವಾ, ಕರ್ನಾಟಕ ರಾಜ್ಯ ಸರ್ಕಾರ ಈ ವಿಷ್ಯದಲ್ಲಿ ಒಂದು ಜವಾಬ್ದಾರಿಯುತ ನಿಲುವು ತೊಗಳ್ಳಕ್ಕೆ? ಕೇಂದ್ರಾನ ಒತ್ತಾಯಿಸಕ್ಕೆ? ಕಲಿಕೆ ಅನ್ನೋದು ರಾಜ್ಯಗಳ ಆಡಳಿತ ಪಟ್ಟಿಯಲ್ಲಿರಬೇಕು, ಇದನ್ನು ಮೊದಲು ಮಾಡಿ ಅಂತ ನಮ್ಮ ಸರ್ಕಾರದೋರು ಕೇಂದ್ರಾನ ಯಾಕೆ ಒತ್ತಾಯ ಮಾಡಬಾರದು ಗುರು? ಆಯಾ ರಾಜ್ಯಗಳಲ್ಲಿ ಇರೋ ಎಲ್ಲಾ ಶಾಲೆಗಳಲ್ಲಿ ಏನು ಕಲುಸ್ತಾರೆ ಅನ್ನೋದನ್ನು ತಿಳ್ಕೊಳೋ ಹಕ್ಕು, ಏನು ಕಲಿಸಬೇಕು ಅಂತಾ ಕಟ್ಟುಪಾಡು ಮಾಡೋ ಹಕ್ಕು ಆಯಾ ರಾಜ್ಯಸರ್ಕಾರಗಳ ಕೈಲೇ ಇರಬೇಕು ಅನ್ನೋದು ಸರಿಯಾದದ್ದಲ್ವಾ ಗುರು?

ಚಿತ್ರರಂಗದ ನಿರ್ಣಯಗಳು : ಜೊಳ್ಳು ಮತ್ತು ಕಾಳು


ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಸಂಭ್ರಮದಿಂದ ನಡೆಯಿತು. ಈ ಕಾರ್ಯಕ್ರಮದ ಕಡೇ ದಿವ್ಸ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದಾರೆ ಅನ್ನೋ ಸುದ್ದಿ 04.03.2009ರ ಕನ್ನಡಪ್ರಭದ ಮೂರನೇ ಪುಟದಲ್ಲಿ ಬಂದಿದೆ. ಕನ್ನಡ ಚಿತ್ರರಂಗದ ಏಳಿಗೆಗೆ ಅಗತ್ಯವಿದೆ ಅಂತ ಇವರು ಅಂದ್ಕೊಂಡಿರೋ ಆ ನಿರ್ಣಯಗಳ ಜೊತೆಗೆ ಇನ್ನೊಂದಿಷ್ಟು ವಿಚಾರಗಳ ಬಗ್ಗೇನೂ ನಿರ್ಣಯ ಕೈಗೊಳ್ಳಬೇಕಿತ್ತು ಗುರು!
ನಿರ್ಣಯಗಳು ಬೇಡಿಕೆ ಪಟ್ಟಿ ಮಾತ್ರಾ ಆಗಬಾರದು!
ಈ ಬಾರಿಯ ನಿರ್ಣಯಗಳಲ್ಲಿ ಚಿತ್ರರಂಗ ಮುಂದೆ ಏನೇನು ಯೋಜನೆ ಹೊಂದಿದೆ ಅನ್ನಕ್ಕಿಂತ ಉಳಿದವರು ಏನು ಮಾಡಬೇಕು ಅನ್ನೋ ಬಗ್ಗೇನೇ ಹೆಚ್ಚು ಒತ್ತುಕೊಟ್ಟಂಗಿದೆ. ಕನ್ನಡ ಚಿತ್ರಗಳ ಬಗ್ಗೆ ಜಾಗೃತಿ ಯಾತ್ರೆ ಅನ್ನೋ ಒಂದು ನಿರ್ಣಯ, ಚಿತ್ರಬೇತಿ ತರಬೇತಿ ಕಮ್ಮಟ ಅನ್ನೋ ಎರಡು ನಿರ್ಣಯಗಳನ್ನು ಬಿಟ್ಟರೆ ಉಳಿದದ್ದೆಲ್ಲಾ ಬೇಡಿಕೆಗಳೇ ಆಗಿವೆ. ಸಂತೋಷ. ಬೇಡಿಕೆಗಳ ಜೊತೆಗೆ ಒಳಗಿಂದ ಹ್ಯಾಗೆ ಚಿತ್ರರಂಗಾನ ಕಟ್ಕೋಬೇಕು, ಗಟ್ಟಿ ಮಾಡ್ಕೊಬೇಕು ಅನ್ನೋ ಮತ್ತಷ್ಟು ಆಳವಾದ ಚಿಂತನೇನೂ ಇರಬೇಕಿತ್ತು.
ಚಿತ್ರರಂಗ ಬೆಳಗಕ್ಕೆ ನಿಜಕ್ಕೂ ಬೇಕಿರೋದು?
ಗುಣಮಟ್ಟದ ಚಿತ್ರಗಳು ಇಂದಿನ ಅಗತ್ಯ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಗುಣಮಟ್ಟ ಅನ್ನೋದ್ರ ವಿವರಣೆ ಸ್ವಲ್ಪ ಕಷ್ಟಾನೆ. ನಿಜಕ್ಕೂ ನಮ್ಗೆ ಬೇಕಿರೋದು ಯಶಸ್ವಿಯಾಗಬಲ್ಲ ಚಿತ್ರಗಳು. ಇಂಥದೇ ಚಿತ್ರ ಗೆಲ್ಲುತ್ತೆ ಅಂತ ಹೇಳಕ್ ಆಗ್ದಿದ್ರೂ ಉತ್ತಮವಾದ ಕಥೆ, ಚಿತ್ರಕಥೆ, ನಿರೂಪಣೆ, ನಟನೆ, ಸಂಗೀತ ಇರೋವು ಗೆಲ್ಲಬಲ್ಲವು. ಚಿತ್ರರಂಗ ಈ ಹೊಸ ಉತ್ತಮ ಪ್ರತಿಭೆಗಳನ್ನು ಬೆಳೆಸೋಕೆ ಮುಂದಾಗಬೇಕು. ಹೊಸ ತರನಾದ ಪ್ರಯೋಗಗಳಿಗೆ ಮುಂದಾಗಬೇಕು. ಮುಂದಾಗೋರಿಗೆ ಉತ್ತೇಜನ ಕೊಡಬೇಕು. ಇದಕ್ಕಾಗಿ ಪ್ರತಿ ನಿರ್ಮಾಪಕನೂ ತನ್ನ ಚಿತ್ರಗಳಲ್ಲಿ ಇಂತಿಷ್ಟು ಹೊಸಮುಖಗಳಿಗೆ ಅವಕಾಶ ಕೊಡಬೇಕು ಅನ್ನೋ ಸ್ವಯಂಕಟ್ಟುಪಾಡು ಮಾಡ್ಕೊಬೌದಲ್ವಾ? ಇಂಥಾ ಒಂದು ಪ್ರತಿಭೆಗಳ, ಕಥೆಗಳ, ಚಿತ್ರಕಥೆಗಳ ಒಂದು ಬ್ಯಾಂಕ್ ಕಟ್ಟೋದು ಒಳ್ಳೇದಲ್ವಾ ಗುರು!
ಚಿತ್ರರಂಗದ ಕಾರ್ಮಿಕರ ಬದುಕಿಗೆ ಭದ್ರತೆ!
ಚಿತ್ರರಂಗದ ಕಾರ್ಮಿಕರಿಗೆ ಗ್ರೂಪ್ ಇನ್ಷುರೆನ್ಸ್ ಥರದ ಜೀವವಿಮೆಗಳಿಗೆ ಮುಂದಾಗಿ, ಕಲಾವಿದರ ಬದುಕಿಗೆ ಭದ್ರತೆ ಕಟ್ಟಿಕೊಡೋಕೆ ಯೋಜನೆ ಮಾಡಬೌದು. ನಿವೃತ್ತ ಕಲಾವಿದರಿಗೆ ಪಿಂಚಣಿ ದೊರೆಯೋ ಹಾಗೇ, ಅಸಹಾಯಕರಿಗೆ ವೈದ್ಯಕೀಯ ನೆರವು ದೊರೆಯೋ ಹಾಗೇ ಯೋಜನೆಗಳನ್ನು ರೂಪಿಸಬೇಕಲ್ವಾ? ಚಿತ್ರನಿರ್ಮಾಣ ಅನ್ನೋದು ಒಂದು ಗಂಭೀರವಾದ ಉದ್ದಿಮೆ ಅಂತ ಅರಿತು ನಿರ್ಮಾಣದಲ್ಲಿ ತೊಡಗೋ ನಿರ್ಮಾಪಕರು, ನಿರ್ಮಾಣ ಸಂಸ್ಥೆಗಳೂ ಇಂದಿನ ಅಗತ್ಯವಾಗಿದೆ. ಕಾರ್ಪೋರೇಟ್ ರೀತಿಯಲ್ಲಿ ವೃತ್ತಿಪರವಾಗಿ ಚಿತ್ರನಿರ್ಮಾಣಕ್ಕೆ ಇಳಿದಾಗ ಯಶಸ್ಸಿನ ಪ್ರಮಾಣಾನೂ ಹೆಚ್ಚುತ್ತದೆ. ಇವತ್ತು ಚಿತ್ರರಂಗಾನ ತಿಂದುಹಾಕ್ತಿರೋ ಮೀಟರ್ ಬಡ್ಡಿ ವ್ಯವಹಾರಕ್ಕೆ ಕೊನೆ ಹಾಡದೆ ನಿರ್ಮಾಪಕ್ರು ಚಿತ್ರಮಾಡಿ ಗೆಲ್ಲೋದು ಕಷ್ಟಾನೆ ಇದೆ. ತಮ್ಮದೇ ಆದ ಸಹಕಾರ ಸಂಘ ಮಾಡಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಚಿತ್ರ ನಿರ್ಮಾಣಕ್ಕೆ ಸಾಲ ಕೊಡೋ ವ್ಯವಸ್ಥೆ ಮಾಡ್ಕೊಬೌದಲ್ವಾ? ಚಿತ್ರನಿರ್ಮಾಣದ ನಾನಾ ಹಂತಗಳಾದ ಫಿಲ್ಮ್, ಪ್ರೊಸೆಸ್ಸಿಂಗ್, ಸೆಟ್ಟುಗಳು ಇವೆಲ್ಲಾನೂ ನಿರ್ಮಾಪಕರಿಗೆ ಹೊರೆಯಾಗದಂತೆ ಒದಗಿಸಿಕೊಳ್ಳೋ ವ್ಯವಸ್ಥೆ ಬೇಕಾಗಿದೆ.
ಮಾರುಕಟ್ಟೆ ಕಟ್ಟಿಕೊಳ್ಳೋ ತಂತ್ರಗಾರಿಕೆ!
ಇದರ ಜೊತೆಗೆ ಈಗಾಗಲೇ ನಿರ್ಣಯ ಮಾಡಿರೋ ಹಾಗೇ ಕನ್ನಡದ ತಾರೆಯರು ತಮ್ಮ ಚಿತ್ರ ಬಿಡುಗಡೆಯ, ಕ್ಯಾಸೆಟ್ ಸಿಡಿ ಬಿಡುಗಡೆಯ ಕಾರ್ಯಕ್ರಮಗಳ್ನ ಗಡಿ ಊರುಗಳಲ್ಲಿ ಹಮ್ಮಿಕೊಳ್ಳಬೇಕು. ಕನ್ನಡ ಚಿತ್ರ ಪ್ರದರ್ಶನ ಲಾಭದಾಯಕ ಉದ್ದಿಮೆಯಾಗಬೇಕೂಂದ್ರೆ ಸಹಜವಾಗೇ ಜನರನ್ನು ಸೆಳೆಯೋ ಶಕ್ತಿ ಚಿತ್ರಗಳಿಗೆ ಇರಬೇಕು. ಸರ್ಕಾರ ಎಲ್ಲಾ ಕಡೆ ಚಿತ್ರಮಂದಿರ ಆರಂಭಿಸಲು ಅನುಮತಿ ನೀಡಬೇಕಾದ ಪ್ರಕ್ರಿಯೆ ಸರಳವಾಗುವಂತೆ ಏಕಗವಾಕ್ಷಿ ವ್ಯವಸ್ಥೆ, ಹೊಸ ಉದ್ದಿಮೆಗಳಿಗೆ ನೀಡುವಂತೆ ಕೆಲವರ್ಷದ ತೆರಿಗೆ ರಜೆಗಳು ಬೇಕೆಂದು ಸರ್ಕಾರಾನ ಕೇಳೋದೇನೋ ಸರಿಯಾಗಿದೆ. ಚಿತ್ರಮಂದಿರಗಳ ಬಾಡಿಗೆ ದರವನ್ನು ಗೊತ್ತುಮಾಡಕ್ಕೆ ಚಿತ್ರಮಂದಿರಗಳ ಮಾಲೀಕರನ್ನು ಪ್ರತಿನಿಧಿಸೋ ಸರಿಯಾದ ಸಂಘಟನೆ ಜೊತೆ ಸಂಪರ್ಕ ಇಟ್ಕೊಂಡು ಒಪ್ಪಂದಗಳ ಮೂಲಕ ಬಾಡಿಗೆ ತೀರ್ಮಾನ ಮಾಡ್ಕೊಳ್ಳೋದು ಒಳ್ಳೇದು!
ನಕಲಿ ಸಿ.ಡಿ ಹಾವಳಿ ತಡೆಗೊಂದು ಯೋಜನೆ!
ನಕಲಿ ಸಿಡಿಗಳ ವಿರುದ್ಧ ಜನಜಾಗೃತಿ ಮಾಡಿ ಅಂತಹ ದುಷ್ಟ ಶಕ್ತಿಗಳನ್ನು ಸಾರ್ವಜನಿಕರ ಸಹಕಾರದಿಂದ ಕಂಡುಹಿಡಿದು ಅಂಥವರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ ಈ ಪಿಡುಗನ್ನು ನಿವಾರಿಸಲು ಮುಂದಾಗಬೋದಿತ್ತು. ಜಾಗೃತಿ ಯಾತ್ರೆಯ ಜೊತೇಲೇ ಇದನ್ನೂ ಮಾಡುದ್ರೆ ಪೈರಸಿ ತಡ್ಯಕ್ಕೆ ಆಗಲ್ವಾ? ಅಂತ ಯೋಚುಸ್ಬೌದಿತ್ತು. ನಕಲಿ ಸಿ.ಡಿ ತಯಾರ್ಸೋ ಒಂದೊಂದು ಅಂಗಡಿನ ಹಿಡ್ಕೊಟ್ಟ ಸಾರ್ವಜನಿಕರಿಗೆ ಅವರ ಮೆಚ್ಚಿನ ಒಬ್ಬೊಬ್ಬ ತಾರೆಯ ಜೊತೆ ಒಂದು ಡಿನ್ನರ್ ಮಾಡುಸ್ತೀವಿ ಅಂದ್ರೂ ಆಗ್ತಿತ್ತಪ್ಪ. ಈ ಪೈರಸಿ ಅಂಗಡಿಗಳ ಬಾಗಿಲು ಹಾಕ್ಸೋದ್ ಕಷ್ಟ ಆಗಲಾರದು ಅನ್ಸುತ್ತೆ!
ಕನ್ನಡ ಚಿತ್ರರಂಗ ಬೆಳೆಯೋಕೆ ಬೇಕಿರೋದು!
ಕನ್ನಡದ ಚಿತ್ರಗಳು ಗುಣಮಟ್ಟದ ಚಿತ್ರಗಳಾಗಿರಬೇಕು ಅಂದ್ರೆ ಸಾಲದು. ಇದರಲ್ಲಿ ಎಲ್ಲಾ ತೆರನಾದ ಅಭಿರುಚಿಗಳನ್ನೂ ಪೂರೈಸಬಲ್ಲ ಬಹುವಿಧದ ಚಿತ್ರಗಳು ಬರಬೇಕು. ಹೊಸ ಪ್ರತಿಭೆಗಳ ಪ್ರವಾಹ ಉಕ್ಕಿ ಹರೀಬೇಕು. ಚಿತ್ರರಂಗಾನ ಒಂದು ಉದ್ಯಮವಾಗಿ ಪರಿಗಣ್ಸೋ ಮನಸ್ಥಿತಿ ನಮ್ಮವರಿಗೆ ಬರಬೇಕು. ಆ ಸಹಾಯ ಕೊಡಿ, ಈ ಸಹಾಯ ಕೊಡಿ, ಸಬ್ಸಿಡಿ ಕೊಡಿ... ಅಂತ ಬರೀ ಬೇಡೋದೇ ಆಗಿಬಿಡಬಾರ್ದು. ಎಪ್ಪತ್ತೈದು ವರ್ಷಗಳಲ್ಲಿ ಚಿತ್ರರಂಗದ ಹಿರಿಯರು ಸಾಧಿಸಿದ್ದನ್ನು ಮುಂದಿನ ಇಪ್ಪತ್ತೈದು ವರ್ಷದಲ್ಲಿ ಹೇಗೆ ಸಾಧುಸ್ತೀವಿ? ಕನ್ನಡದ ಮಾರುಕಟ್ಟೆನಾ ಹೇಗೆ ಕರ್ನಾಟಕದಲ್ಲಿ ಗಟ್ಟಿ ಮಾಡ್ತೀವಿ?. ಅದಕ್ಕೆ ಡಬ್ಬಿಂಗ್ ಅನ್ನೋ ಸಲಕರಣೆನಾ ಹ್ಯಾಗೆ ಬಳುಸ್ತೀವಿ?, ಹೊರನಾಡುಗಳಲ್ಲಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಹ್ಯಾಗೆ ವಿಸ್ತರಿಸಿಕೊಳ್ತೀವಿ? ಹ್ಯಾಗೆ ತಂತ್ರಜ್ಞಾನಾನ ಬಳುಸ್ಕೊತೀವಿ?... ಅನ್ನೋದನ್ನೆಲ್ಲಾ ಮುಕ್ತವಾಗಿ ಚರ್ಚೆ ಮಾಡಬೇಕಿತ್ತು ಗುರು! ಆಗ ನಾಳಿನ ಬಗ್ಗೆ ಯೋಚನೆ ಮಾಡ್ತಿರೋ ಕನ್ನಡ ಚಿತ್ರರಂಗದ ಈ ತಲೆಮಾರನ್ನು ಸ್ವರ್ಗದಿಂದಲೇ ನಮ್ಮ ಹಿರಿಯರು ಹರಸ್ತಿದ್ರು! ಏನಂತೀರಾ?

ಕಮಲಹಾಸನ್ ಮತ್ತು ಕಲೆಯ ತಿಳಿಗೊಳ!

ಕನ್ನಡ ಚಿತ್ರರಂಗ 75ವರ್ಷ ಪೂರೈಸ್ತು ಅಂತಾ ಮೊನ್ನೆ, ಅಂದ್ರೆ 2009ರ ಮಾರ್ಚಿ ಒಂದನೇ ತಾರೀಕಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನದ ಒಂದು ಕಾರ್ಯಕ್ರಮಾನ ಹಮ್ಮಿಕೊಂಡಿದ್ರು. ಮೊದಲನೇ ದಿನಾ ತಮಿಳಿನಿಂದ ಕನ್ನಡಕ್ಕೆ ಬಂದಿದ್ದೋರೂ ಅಂತಾ ತಮಿಳು ಚಿತ್ರರಂಗದ ಹೆಸರಾಂತ ನಟರಾದ ಕಮಲಹಾಸನ್ ಅವ್ರುನ್ನ ಸನ್ಮಾನ ಮಾಡೊ ಸಲುವಾಗಿ ಕರೆದಿದ್ರು. ಅವ್ರು ಬಂದು ಗೌರವಾ ಸ್ವೀಕರಿಸಿ ಕನ್ನಡದಲ್ಲೇ ಭಾಷಣಾನೂ ಮಾಡಿದ್ರು. ಭಾಷಣದ ಕಡೆಗೆ ಅಡಿಗರ ಕಾವ್ಯವೊಂದನ್ನೂ ಓದಿದ್ರು. ಉದಾತ್ತತೆ, ಆದರ್ಶಗಳಿದ್ದ ಅವರ ಮಾತುಗಳು ತಾತ್ವಿಕವಾಗಿ, ರಾಜಕೀಯವಾಗಿ ಜನಮನ ಸೂರೆಯಾಗುವಂತೆಯೇ ಇದ್ವು, ಆದ್ರೆ ತಮ್ಮ ಅದ್ಭುತ ಉಪದೇಶಾಮೃತಾನ ಕನ್ನಡದೋರಿಗೆ, ಅದೂ ಈ ಸಮಯದಲ್ಲಿ ಕೊಡೋ ಅಗತ್ಯವೇನಿತ್ತು ಗುರು?

ಕಮಲಹಾಸನ್ ಆಡಿದ ರಾಜಕೀಯದ ಮಾತು!


ಆ ದಿನ ಕಮಲಹಾಸನ್ ಅವ್ರು ಆಡಿದ ಮಾತುಗಳನ್ನು ಒಂದ್ಸಲ ಮೆಲುಕು ಹಾಕಣ ಬನ್ನಿ!

“ನಾನೊಬ್ಬ ತಮಿಳಿಗ, ಇದು ಬದಲಿಸಲಾಗದ ಸತ್ಯ, ಆದರೆ ನಾನು ರಜನಿ, ತಾಯಿನಾಗೇಶ್, ಸಾವುಕಾರ ಜಾನಕಿ,
ಪ್ರಭುದೇವ, ಪ್ರಕಾಶ್ ರಾಜ್ ಮೊದಲಾದವರನ್ನೆಲ್ಲಾ ನಮ್ಮವರೆಂದು ಒಪ್ಪಿಕೊಂಡ ತಮಿಳಿಗ,
ಪುಟ್ಟಣ್ಣನವರನ್ನು ಗೌರವಿಸುವ ತಮಿಳಿಗ….”

ವೈಯುಕ್ತಿಕವಾಗಿ ಕಮಲ್ ಅಂಥ ದೊಡ್ಡತನದವರೇ ಇರಬಹುದು. ಇಷ್ಟನ್ನು ಆ ಸಭೆಯಲ್ಲಿ ಹೇಳಿ ಅಷ್ಟಕ್ಕೇ ನಿಲ್ಸಿದ್ರೆ ಎಲ್ಲಾ ತಮಿಳ್ರು ಹೀಗೆ ಇರಬೇಕು, ಎಲ್ಲಾ ಕನ್ನಡದೋರೂ ಹೀಗೆ ಇರಬೇಕು ಅನ್ನೋ ಸಂದೇಶ ತೊಗೊಂಡು ಖುಶಿ ಪಡ್ಬೋದಾಗಿತ್ತು… ಆದರೆ ಇಂಥಾ ಒಳ್ಳೇತನದ ಆದರ್ಶದ, ವ್ಯಕ್ತಿಗತವಾದ ಸ್ವಭಾವ ಹೇಳಿದ ಮರುಕ್ಷಣವೇ ನಾನಿಲ್ಲಿ ಬಂದಿರೋದೇ ಕನ್ನಡದವ್ರಿಗೆ ಬುದ್ಧಿ ಹೇಳಕ್ಕೆ ಅಂದು

“ರಾಜಕೀಯದ ಕೊಳದಲ್ಲಿ ಕಲ್ಲು ಹಾಕುದ್ರೆ ಪರ್ವಾಗಿಲ್ಲಾ, ನೀವೆಲ್ಲಾ ಕಲೆಯ ಕೊಳಕ್ಕೆ
ಕಲ್ಲುಹಾಕಬೇಡಿ, ಈ ಪುಷ್ಕರಣೀನಾ ರಕ್ತದ ಹೊಂಡ ಮಾಡಬೇಡಿ”

ಅಂದ್ರು. ಏನಿದರ ಅರ್ಥ? ನೀವು ಕಲ್ಲು ಹಾಕಬೇಡಿ ಅನ್ನೋ ಬದಲು ನಾವ್ಯಾರೂ ಕಲ್ಲು ಹಾಕಬಾರ್ದು ಅನ್ನಬೇಕಿತ್ತಲ್ವಾ? ಗುರು!

ತಿಳಿಗೊಳಕೆ ಕಲ್ಲನೆಸದವರು ಯಾರು?


"ನಿಜವಾಗ್ಲೂ ಯಾರು, ಕಲೆಗೂ ರಾಜಕೀಯಕ್ಕೂ ತಳುಕು ಹಾಕ್ತಿರೋರು? ಕನ್ನಡಿಗ್ರಾ? ತಮಿಳ್ರಾ? ಯಾರಿವನು ಸಿನಿಮಾ ಶೂಟಿಂಗ್ ಸಮಯದಲ್ಲಿ ಯಾಕೆ ತಮಿಳ್ರು ಡಾ. ರಾಜ್ ಮೇಲೆ ಆಕ್ರಮಣ ಮಾಡುದ್ರು? ಯಾಕೆ ಕಲಾವಿದರಾದ ಡಾ. ರಾಜ್ ಅವರನ್ನು ಹೊತ್ತೊಯ್ದು, ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯೇ ಮೊದಲಾದ ರಾಜಕೀಯ ಬೇಡಿಕೆಗಳನ್ನಿಟ್ರು? ಯಾರು ದಕ್ಷಿಣ ಭಾರತ ಚಲನಚಿತ್ರ ಮಂಡಳಿಯಿಂದ ಏಕಪಕ್ಷೀಯವಾಗಿ ಕನ್ನಡಿಗ ಪ್ರತಿನಿಧಿಗಳನ್ನು ಅವರದಲ್ಲದ ತಪ್ಪಿಗಾಗಿ, ಅವರು ಕನ್ನಡಿಗರೆಂಬ ಒಂದೇ ಕಾರಣಕ್ಕಾಗಿ ಸಸ್ಪೆಂಡ್ ಮಾಡಿದ್ರು? ಯಾರು ಕನ್ನಡಿಗರ ವಿರುದ್ಧವಾಗಿ ಪ್ರತಿಸಾರಿ ಚೆನ್ನೈ ಬೀಚಿನಲ್ಲಿ ಸತ್ಯಾಗ್ರಹ, ಭಾಷಣ ಮಾಡಿರೋರು? ಯಾರು ತುಂಬಿದ ಸಭೆಯಲ್ಲಿ “ಇವ್ರುನ್ನ ಒದೀಬೇಕು” ಅಂತಂದೋರು? ಯಾರು ಈ ಸಭೆಯಲ್ಲಿ ಭಾಗವಹಿಸದ ಕಲಾವಿದರನ್ನು ಚಿತ್ರರಂಗದಿಂದ ಬಹಿಷ್ಕರಿಸ್ತೀವಿ ಅಂದೋರು? ಯಾರು? ಯಾರು?" ಅಂತ ನಿಮ್ಮ ಮನಸ್ಸಲ್ಲಿ ಪ್ರಶ್ನೆಗಳು ಏಳ್ತಿಲ್ವಾ ಗುರು?

ಕಮಲಹಾಸನ್ ಅವ್ರು ತಮ್ಮ ಭಾಷಣಾನ್ನ ಯಾರನ್ನುದ್ದೇಶಿಸಿ ಮಾತಾಡಬೇಕಿತ್ತು? ಕನ್ನಡದವ್ರನ್ನೋ? ತಮಿಳರ್ನೋ? ಇದೇ ಭಾಷಣವನ್ನು ತಮಿಳು ಚಿತ್ರರಂಗದ ಕಾರ್ಯಕ್ರಮದಲ್ಲಿ ಇವ್ರು ಆಡಿದರೇನು? ಚೆನ್ನೈ ಬೀಚಲ್ಲಿ ನಿಂತು ಕಾವೇರಿ ಹೋರಾಟ ಮಾಡುವಾಗ ಆಡಿದರೇನು? ಇವತ್ತು ’ಕಲೆ, ಕಲಾವಿದರು ಶುಭ್ರ ಪುಷ್ಕರಣಿ, ರಾಜಕೀಯ ರಕ್ತದಹೊಂಡ’ ಅನ್ನೋರು, ’ತಮಿಳುನಾಡಿನ ಚಿತ್ರರಂಗದ ಜನ ಯಾಕೆ ಚಿತ್ರರಂಗವನ್ನು ರಾಜಕೀಯದ ಏಣಿಯಾಗಿ ಬಳುಸ್ತಾರೆ? ನಿಜವಾಗ್ಲೂ ಕಲೆಯ ತಿಳಿಗೊಳವನ್ನು ಕಲಕಿದೋರು ಯಾರು?’ ಅಂತಾ ಯೋಚುಸ್ಬೇಕಾಗಿತು ಅನ್ನುಸ್ತಿಲ್ವಾ? ಗುರು...


ಇವರು ಬಂದಿದ್ದಾದ್ರೂ ಯಾಕಿರಬೌದು?


ಚಿತ್ರರಂಗ ಇವತ್ತಿನ ದಿವ್ಸಾ ಬರೀ ಕಲೆಯಾಗಿ ಉಳ್ದಿಲ್ಲ. ಅದು ದೊಡ್ಡ ಉದ್ದಿಮೆಯಾಗಿ ಬೆಳೆದಿದೆ. ಕರ್ನಾಟಕ್ದಲ್ಲಿ ಚಲನಚಿತ್ರಗಳಿಗೆ ಮಾರುಕಟ್ಟೆ ಅನ್ನೋದು ಇರೋ ಹಾಗೇನೇ, ಮಾರುಕಟ್ಟೆಯಲ್ಲಿ ಸ್ಪರ್ಧೆಯೂ ಇದೆ. ಕರ್ನಾಟಕದಲ್ಲಿ ತಮಿಳು ಚಿತ್ರಗಳಿಗೆ ಮಾರುಕಟ್ಟೆ ಗಟ್ಟಿಗಳ್ಸೋ ತಂತ್ರವಾಗೇ “ಕಲೆಗೆ ಭಾಷೆಯಿಲ್ಲ, ಕಲಾವಿದ್ರೆಲ್ಲಾ ಒಂದೇ” ಅಂತಂದ್ರಾ ಅನ್ಸಲ್ವಾ ಗುರು? ಇವ್ರ ಮಾತುಗಳನ್ನು ಕೇಳಿದ ಮೇಲೆ ಅನ್ಸೋದೇನಪ್ಪಾ ಅಂದ್ರೆ ಇವರು ಇಲ್ಲಿಗೆ ಬಂದ ಉದ್ದೇಶ ನಮ್ಮನ್ನು ಅಭಿನಂದಿಸಿ ಗೌರವ ಸ್ವೀಕರಿಸಿ ಹೋಗೋದಷ್ಟೇ ಆಗಿರಲಿಲ್ಲಾ… ಅದಕ್ಕೂ ಮೀರಿದ ತಮಿಳು ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಡೋ ತಂತ್ರಗಾರಿಕೆ ಅನ್ನೋ ಅನುಮಾನ ಆವತ್ತಿನ ದಿವ್ಸ ಕಮಲಹಾಸನ್ ಅವ್ರ ಮಾತುಗಳನ್ನು ಕೇಳಿದೋರಿಗೆ ಬಂದಿರಬೋದಲ್ವಾ? ಗುರುಗಳೇ!

ಕರ್ನಾಟಕ ಮುಕ್ತ ವಿ.ವಿ.ಯ ಕನ್ನಡ ಕಲ್ಸೋ ಒಳ್ಳೇ ಕೆಲ್ಸ!

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದೋರು ರಾಜ್ಯದಲ್ಲಿ ಉರ್ದು ಬೋಧನೆ ಮಾಡೋ ಶಾಲೆಗಳಲ್ಲಿ ಕನ್ನಡ ಕಲ್ಸೋಕೆ ಒಂದು ಯೋಜನೇನಾ ಜಾರಿಗೊಳಿಸಲು ಮುಂದಾಗಿದೆ ಗುರು! ಇಂಥಾ ಒಂದು ಒಳ್ಳೇ ಸುದ್ದಿ 25.02.2009ರ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ. ಕ.ಮು.ವಿ.ವಿಯ ಈ ನಡೆ ಕನ್ನಡ ನಾಡಿನಲ್ಲಿರೋ ಉಳಿಕೆ ಭಾಷೆಯೋರ್ನ ನಾಡಿನ ಮುಖ್ಯವಾಹಿನೀಗೆ ತರೋ ದಿಕ್ಕಲ್ಲಿ ಒಂದು ದೊಡ್ಡ ದಾಪುಗಾಲಿನ ಕ್ರಮವಾಗಿದೆ.
ಸರ್ಕಾರದ ಜೊತೆ ಸಾರ್ವಜನಿಕರೂ ಮುಂದಾಗಬೇಕಿದೆ!

ನಾಡಿನ ಪರಭಾಷಿಕರಿಗೆ ಕನ್ನಡ ಕಲ್ಸೋ ಮೂಲಕ ನಾಡಿನ ಮುಖ್ಯವಾಹಿನಿಗೆ ಭಾಷಿಕವಾಗಿ ಮಾತ್ರಾ ತರಲು ಸಾಧ್ಯಾ ಅನ್ನೋ ಹಾಗಿಲ್ಲ. ನಮ್ಮ ನಾಡು ನುಡಿ ಜನ ಜೀವನಗಳ ಜೊತೆ ಅಕ್ಕರೆಯ ಒಡನಾಟ ಮತ್ತು ತಮಗೆ ಸೇರಿದ್ದೆಂಬ ಭಾವನೆ ಕೂಡಾ ಇದರಿಂದ ಜಾಗೃತವಾಗಲಿ ಅನ್ನೋದು ಕಾರ್ಯಕ್ರಮ ರೂಪಿಸಿರೋರ ಆಶಯವಾಗಿದೆ. ಕನ್ನಡ ಕಲಿಸೋ ಈ ಕಾರ್ಯಕ್ರಮಾ ರಾಜ್ಯದ ಎಲ್ಲಾ ಮೆಡಿಕೆಲ್, ಇಂಜಿನಿಯರಿಂಗ್ ಕಾಲೇಜುಗಳು, ವೃತ್ತಿ ಶಿಕ್ಷಣ ಕೇಂದ್ರಗಳು, ಖಾಸಗಿ ಸಂಸ್ಥೆಗಳಿಗೂ ಹಬ್ಬಬೇಕಾಗಿದೆ. ಈ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಯಾಗಲಿ, ಇದನ್ನು ಉರ್ದು ಭಾಷಿಕರಿಗೆ ಮಾತ್ರವಲ್ಲದೆ ಇತರೆ ಭಾಷಿಕರಿಗೂ ತಲುಪಿಸೋ ವ್ಯವಸ್ಥೆಯಾಗಲಿ. ಯಾವುದೇ ವಿಶ್ವವಿದ್ಯಾಲಯ ಅಥವಾ ಸರ್ಕಾರಗಳು ಮಾಡಲಿಕ್ಕೆ ಮುಂದಾಗೋ ಕೆಲಸಾ ಯಶಸ್ವಿಯಾಗಬೇಕಂದ್ರೆ ನಾಡಿನ ಜನರೂ ಇದರಲ್ಲಿ ತೊಡಗಿಕೋಬೇಕು. ಪರಭಾಷಿಕರ ಜೊತೆ ವ್ಯವಹರಿಸೋವಾಗ ನಾವೂ ಕನ್ನಡದಲ್ಲೇ ವ್ಯವಹರಿಸೋಣ.. ಗುರು!

ಇಲ್ಲಿ ಯಾರ ಉದ್ಯೋಗ ಗುರಿಯಾಗಬೇಕು?

ಬಜೆಟ್ ನಂತರ ನಿರುದ್ಯೋಗ ನಿವಾರಣೆ ಗುರಿಯಿಟ್ಟುಕೊಂಡು ಕೈಗಾರಿಕಾ ಕ್ಷೇತ್ರದ ಬಗ್ಗೆ ರಾಜ್ಯ ಸರ್ಕಾರ ಸಮಾಲೋಚನೆ ಮಾಡ್ತಿರೋದು ಕಾಣುತ್ತಿದೆ. ಇತ್ತೀಚೆಗೆ ೨೦೦೯-೧೪ರ ಕಾಲಕ್ಕೆ ಅನ್ವಯಿಸುವಂತ ಹೊಸ ಕೈಗಾರಿಕಾ ನೀತಿಗೆ ಒಪ್ಪಿಗೆಯೂ ನೀಡಿದೆ. ಈ ನೀತಿಯಲ್ಲಿ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಿ ಅದರಿಂದ ೧೦ ಲಕ್ಷ ಜನರಿಗೆ ಉದ್ಯೋಗವನ್ನ ಹುಟ್ಟಿಸಲಾಗುತ್ತೆ ಎಂದು ಘೋಷಣೆ ಹೊರಡಿಸಿದೆ. ಈ ವರದಿ ಮಾರ್ಚಿ ೧ರ ವಿಜಯ-ಕರ್ನಾಟಕದಲ್ಲಿ ಬಂದಿದೆ.

ಕರ್ನಾಟಕ ಸರ್ಕಾರದ ಈ ಹೆಜ್ಜೆ ಸ್ವಾಗತಾರ್ಹ. ಕರ್ನಾಟಕದಲ್ಲಿರುವ ನಿರುದ್ಯೋಗದ ಪಿಡುಗು ಮತ್ತು ರಾಜ್ಯದ ಜನರೇ ಅದರ ಅತಿಮುಖ್ಯ ಸಂಪನ್ಮೂಲವೆಂದು ಸರ್ಕಾರದ ಗಮನಕ್ಕೆ ಬಂದಿರುವ ಸೂಚನೆ ಇದರಿಂದ ಹೊರಬಿದ್ದಿದೆ. ಆದರೆ ಈ ಲಕ್ಷಾಂತರ ಕೋಟಿ ಬಂಡವಾಳ ಬಂದು, ಅದರಿಂದ ಲಕ್ಷಾಂತರ ಉದ್ಯೋಗಗಳು ರಾಜ್ಯದೊಳಗೆ ಹುಟ್ಟಿದರೂ ಅದರಲ್ಲಿ ಹೆಚ್ಚಿನ ಪಾಲು ಕನ್ನಡೇತರರಿಗೇ ಸಿಕ್ಕರೆ ಇಂತಹ ಅದೆಷ್ಟು ಕೋಟಿ ಬಂಡವಾಳ ಮತ್ತು ಅದೆಷ್ಟೋ ಲಕ್ಷ ಉದ್ಯೋಗಗಳು ಹುಟ್ಟಿದರೂ ರಾಜ್ಯದ ಆರ್ಥಿಕ ಏಳ್ಗೆ ಮಾತ್ರ ಕನಸಾಗೇ ಉಳಿದು ಹೋಗುವುದು ಖಚಿತ ಗುರು!

ಈ ಸಮಸ್ಯೆ ನಿವಾರಿಸಲು ಈಗಾಗಲೇ ಒಡಿಸ್ಸಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಆ ರಾಜ್ಯಗಳಲ್ಲಿ ಹುಟ್ಟುವ ಎಲ್ಲಾ ಉದ್ಯೋಗಗಳ ಸಿಂಹಪಾಲು ಆ ರಾಜ್ಯದೋರಿಗೇ ಸಿಗಬೇಕೆಂಬ ಕಾನೂನನ್ನೇ ವಿಧಿಸಿವೆ. ಕರ್ನಾಟಕದಲ್ಲೂ ಈ ರೀತಿಯ ಉದ್ಯೋಗ ನೀತಿಗಳ ಅನುಷ್ಠಾನ ಆಗಬೇಕಿದೆ. ಈ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿಯ ಆದೇಶಗಳು ಕರ್ನಾಟದಲ್ಲಿ ಕೂಡಲೆ ಅನುಷ್ಠಾನ ಆಗಬೇಕಿವೆ. ಬೇಲಿಯೇ ಇಲ್ಲದ ಹೊಲದಂತೆ, ರಾಜ್ಯದೊಳಗೆ ಹುಟ್ಟುವ ಉದ್ಯೋಗಗಳು ಹೊರರಾಜ್ಯದವರ ಪಾಲಾಗದಂತೆ ರಾಜ್ಯ ಸರ್ಕಾರ ಕಾನೂನು ವಿಧಿಸಬೇಕು, ರಾಜ್ಯದ ಸಧೃಡ ಭವಿಷ್ಯ ನಿರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಬೇಕು.
Related Posts with Thumbnails