ಮರಾಠಿ ಮಾಣುಸ್ ಮನಸ್ಸಾಗ ಮನಸೇ ಐತ್ರೀಪಾ!!

ಮೊನ್ನಿ ಮೂರು ರಾಜ್ಯದಾಗ್ ಆದ ವಿಧಾನಸಭಾ ಚುನಾವಣಿಗಳೊಳಗಾ, ಮಹಾರಾಷ್ಟ್ರದಾಗಿನ ಚುನಾವಣಿ ಭಾಳ್ ಕುತೂಹಲ ಹುಟ್ ಹಾಕಿದ್ದಂತೂ ಖರೇ ರೀ ಯಪ್ಪಾ! ಮಂದೀ ಎಲ್ಲಾ "ಅಲ್ಲಾ, ಈ ಮಕ್ಳು ಈ ಪರಿ ಮರಾಟಿಗ್ರು, ಮರಾಟಿಗ್ರೂ ಅಂತ್ ಹೊಯ್ಕೊಳಾಕ್ ಹತ್ಯಾರಲ್ಲಾ, ಮಹಾರಾಷ್ಟ್ರದಾಗಿನ್ ಮಂದಿ ಇದುಕ್ ಮಣಿ ಹಾಕ್ಕ್ಯಾರೋ? ಇಲ್ಲೋ?" ಅನ್ನೂ ಮಾತ್‍ನ ಮಹಾರಾಷ್ಟ್ರ ನವನಿರ್ಮಾಣ ಸೇನಾ ಬಗ್ಗಿ ಆಡಾಕ್ ಹತ್ತಿತ್ರೀಪಾ. ಚುನಾವಣೀ ಆತು. ರಾಜ್‍ಠಾಕ್ರೆ ಮುಂದಾಳ್ತನದ ಎಂ.ಎನ್.ಎಸ್ ಒಟ್ಟು ಹದಿಮೂರು ಕಡಿ ಗೆಲುವು ಕಾಣ್ತು. ಅಲ್ರೀಪಾ... ಇರೂ ಇನ್ನೂರೆಂಬತ್ತೆಂಟರಾಗಾ ಹದಿಮೂರಂದ್ರಾ ಯಾ ಮೂಲಿಗಾತು ಅನ್ನಾಕ್ ಹತ್ತೀರೇನೂ? ಬರ್ರಲಾ... ಎಂ.ಎನ್.ಎಸ್ ಏನ್ ಮಾಡೈತಿ ಅನ್ನೂದ್ ನೋಡೋಣು...

ಚುನಾವಣಾ ವಿಷ್ಯಾ ಆತು ಮ-ಮ-ಮ!!

ಹಿಂದಾ ಅಲ್ಲೀ ಚುನಾವಣ್ಯಾಗಾ ಮರಾಠಿ-ಮರಾಠಿಗ-ಮಹಾರಾಷ್ಟ್ರ ಅನ್ನೂ ಮಾತು ಇಲ್ಲೀಮಟಾ ಶಿವಸೇನಾ ಪಾರ್ಟಿ ಪ್ರಣಾಳಿಕಿಯೊಳಗಾ ಇರ್ತಿತ್ರೀಪಾ... ಆದ್ರಾ ನಡಬರಕಾ ಶಿವಸೇನಾ ತನ್ನ ಗಮನಾನ ಬ್ಯಾರೀ ಕಡೀಗ್ ಹರ್ಸಾಕ್ ಹತ್ತೈತಿ ಅಂತಾ ಮಂದಿಗಾ ಅನ್ಸಾಕ್ ಚಾಲೂ ಆತ್ರೀಪಾ. ಅಷ್ಟರಾಗ ಇಂವಾ, ರಾಜ್ ಠಾಕ್ರೆ ಇತ್ತೀಚಿನ್ ದಿನಗಳಾಗ ಮರಾಠಿ ಮಂದಿ ಬದುಕು, ಕೆಲ್ಸಾ ಅಂತಾ ಜೋರ‍್ಜೋರಲೇ ಮಾತಾಡಕ್ ಹತ್ತಿದ್ದೇ ತಡಾ... ಎಲ್ಲಾ ಪಾರ್ಟಿ ಮಂದಿ ತಮ್ ಪ್ರಣಾಳಿಕಿ ಒಳಗಾ ಈ ಮಾತ್ ಆಡಾಬೇಕಾತ್ರೀ ಗುರುಗಳಾ.... ನೀವಾ ನೋಡ್ರಲಾ... ಭಾರತೀಯ ಜನತಾ ಪಕ್ಷ, ಶಿವಸೇನಾ ಕೂಡಾ ಬಿಡುಗಡಿ ಮಾಡಿದ್ದ ಪ್ರಣಾಳಿಕೆಯೊಳಗಾ "ಅನಿಯಂತ್ರಿತ ವಲಸಿ ತಡ್ಯಾಕ್ ಮುಂದಾಗ್ತೀವೀ" ಅಂದಾರ! ಈ ಮಂದಿ ಅಂತಾರಾ... "ಮಾರಾಷ್ಟ್ರಾದಾಗಿನ ೮೦% ಕೆಲಸ ಮರಾಠಿ ಮಂದೀಗಾ ಮೀಸಲು ಮಾಡ್ತೇವಾ" ಅಂತಾ.
A museum will be set up in Mumbai depicting the 'Samyukta Maharashtra' movement and a permanent mechanism would be created to stop the inflow of illegal migrants, Thackeray said.

Stating that 80 per cent of the skilled and unskilled jobs will be provided to locals, it vowed to encourage the sons-of-the soil to take up self-employment

ಫಲಿತಾಂಶ ಹೀಂಗದಾ!

ಇನ್ನು ಒಟ್ಟು ಫಲಿತಾಂಶಾ ಕಂಡಾಗ ತನ್ನ ಮೊದಲನೇ ಚುನಾವಣಿಯಾಗಾ ಎಂ.ಎನ್.ಎಸ್ ಹದಿಮೂರು ಸ್ಥಾನಾ ಗಳಸೈತಿ ಅದೂ ಯಾರ್ ಕೂಡಾ ಹೊಂದಾಣಿಕೆ ಮಾಡ್ಕೊಳ್ದೆ ಅನ್ನೋದು ದೊಡ್ ಮಾತೇ ಬಿಡ್ರೀಪಾ. ಮಹಾರಾಷ್ಟ್ರದೊಳಗಾ ಮುಂದಿನ ದಿನಗಳಾಗ ಎಂ.ಎನ್.ಎಸ್ ಒಂದು ದೊಡ್ಡ ಶಕ್ತಿಯಾಗ್ತೈತಿ ಅನ್ನೋ ಸೂಚನಿ ಕೊಟ್ಟಿರೋದಂತೂ ಖರೆ ಐತಿ. ಒಟ್ಟಾರೆ ಮರಾಠಿ ಮಾಣುಸ್ ಮನಸ್ಸಾಗ ಮ.ನ.ಸೇ ಐತ್ರೀಪಾ. ಅದ್ಕಿಂತ ದೊಡ್ ಮಾತಂದ್ರಾ ಮರಾಠಿ-ಮಹಾರಾಷ್ಟ್ರ-ಮರಾಠಿಗ ಅನ್ನೂದಂತೂ ರಾಜಕಾರಣದ ನಡುಮನಿ ಒಳಗ್ ದೊಡ್ಡಾಟ ಆಡೂದಂತೂ ಖರೀ ಐತ್ರಪಾ! ಏನಂತೀರ್ರೀ ಗುರುಗಳಾ?

ಕನ್ನಡ ಕಲಿಸೋ ಹೊಸ ತಾಣ!

ಸೆಪ್ಟೆಂಬರ್ 30ರ ಮೈ ಬ್ಯಾಂಗಲೊರ್‍ನಲ್ಲಿ ಕನ್ನಡ ಕಲಿ ಇದೀಗ ಆನ್ ಲೈನ್‍ನಲ್ಲಿ ಸಿಗ್ತಿದೆ ಅಂತಾ ಒಂದು ಸುದ್ದಿ ಪ್ರಕಟವಾಗಿದೆ ಗುರು! ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು ಇದನ್ನು ರೂಪಿಸಿದ್ದಾರಂತೆ. ಅವರ ಉದ್ದೇಶ ಹೊರನಾಡಿನಿಂದ ನಮ್ಮೂರುಗಳಿಗೆ ಬರುವ ಪರಭಾಷಿಕರಿಗೆ ಕನ್ನಡ ಜನ, ನುಡಿ ಮತ್ತು ಸಂಸ್ಕೃತಿಗಳ ಪರಿಚಯ ಮಾಡಿಕೊಡುವುದಂತೆ.

ಇಂಥವರ ಸಂತತಿ ಸಾವಿರವಾಗಲಿ...

ತಮ್ಮ ಕಾಲೇಜಿನ ಪರಭಾಷಿಕರನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಿರೋ ಈ ತಂಡದೋರು ಪೋಸ್ಟರ್, ಆಡಿಯೋ ವಿಡಿಯೋಗಳನ್ನು ಬಳಸೋ ಮೂಲಕ ಕನ್ನಡ ನುಡಿಯ ಪರಿಚಯ ಮಾಡಿಸಿಕೊಡೋದ್ರ ಜೊತೆಯಲ್ಲೇ ಕನ್ನಡದ ಹಿರಿಯ ಚೇತನಗಳ ಪರಿಚಯವನ್ನು, ನಾಡಿನ ಪ್ರವಾಸಿ ತಾಣಗಳ ಪರಿಚಯ ಮಾಹಿತಿಗಳನ್ನು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಮಾಡಿಕೊಡೋ ಯೋಜನೆಗಳನ್ನು ಹೊಂದಿದಾರಂತೆ. ಕರ್ನಾಟಕಕ್ಕೆ ಬರೋ ಪರಭಾಷಿಕರಿಗೆ ಕನ್ನಡ ಕಲಿಸುವ ಈ ಯೋಜನೆ ಉಳಿದ ಕಾಲೇಜುಗಳಿಗೆ ಮಾದರಿಯಾಗಲಿ. ಈ ಯೋಜನೆಯ ಹಿಂದಿರುವ ತಂಡದ ಸ್ಪೂರ್ತಿ ನೂರ್ಮಡಿಸಲಿ, ನೂರ್ಕಾಲ ಹೀಗೆ ಇರಲಿ.. ಇಂಥವರ ಸಂತತಿ ಸಾವಿರವಾಗಲಿ ಅಂತಾ ಹಾರೈಸೋಣ ಗುರು!

ಮಾಹಿತಿ ಹಕ್ಕು ಎಲ್ಲಾ ನುಡಿಯಲ್ಲಿರಬೇಕು ಅಂದೋರ್ಯಾರು ಗೊತ್ತಾ?

ಮೊನ್‍ಮೊನ್ನೆ ಅಂದ್ರೆ 2009ರ ಅಕ್ಟೋಬರ್ 13ನೇ ತಾರೀಕಿನಂದು ನವದೆಹಲಿಯಲ್ಲಿ ನಡೆದ, 2005ರ ಮಾಹಿತಿ ಹಕ್ಕು ಕಾಯ್ದೆಯ ನಾಲ್ಕನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾರತದ ಉಪರಾಷ್ಟ್ರಪತಿಗಳಾದ ಶ್ರೀ ಮೊಹಮದ್ ಹಮೀದ್ ಅನ್ಸಾರಿಯವರು ಒಂದು ಸೊಗಸಾದ ಹೇಳಿಕೆ ಕೊಟ್ಟಿದಾರೆ ಅಂತ ಯಾಹೂ ಸುದ್ದಿ ಹೇಳ್ತಿದೆ ಗುರು!

ಪ್ರಜಾತಂತ್ರಕ್ಕಿದು ನಿಜವಾದ ಅರ್ಥ!

ಭಾರತ ಒಪ್ಪಿರೋ 22 ಅಧಿಕೃತ ಭಾಷೆಗಳಲ್ಲಿರೋ ಎಲ್ಲಾ ಭಾಷೆಗಳಲ್ಲಿ ಈ ಮಾಹಿತಿ ಹಕ್ಕು ಕಾಯ್ದೆ ಇರಬೇಕು ಮತ್ತು ವ್ಯವಹಾರ ನಡೀಬೇಕು ಅನ್ನೋ ಉಪರಾಷ್ಟ್ರಪತಿಗಳ ಈ ಅನಿಸಿಕೆ ಭಾರತ ಒಪ್ಪುಕೂಟಕ್ಕೆ ನಿಜವಾಗಿ ಗೌರವ ತರೋ ಕೆಲಸ. ಜನರಿಂದ ಜನರಿಗಾಗಿ ಇರೋ ವ್ಯವಸ್ಥೆಗಳು ಸಹಜವಾಗಿ ಜನರ ನುಡಿಯಲ್ಲಿ ಇರಬೇಕಾಗ್ತದೆ. ಆ ಕಾರಣದಿಂದ ಈ ನಿಲುವು ಸರಿಯಾಗಿದೆ. ಹಿಂದಿಯೆನ್ನುವ ನುಡಿನುಂಗಣ್ಣನನ್ನು ತಲೆಮೇಲೆ ಹೊತ್ತು ಮೆರೆಸುತ್ತಿರುವ ಭಾರತ ದೇಶದ ಇಂದಿನ ವ್ಯವಸ್ಥೇಲಿ ಭಾರತ ದೇಶದೊಂದು ಉನ್ನತ ಸ್ಥಾನದಲ್ಲಿರೋ ವ್ಯಕ್ತಿ ಈ ಥರ ಮಾತಾಡ್ತಿರೋದು ಒಳ್ಳೇ ಬೆಳವಣಿಗೆ!

ಹೌದು, ಪ್ರಜಾತಂತ್ರಕ್ಕೆ ನಿಜವಾದ ಅರ್ಥ ಸಿಗಬೇಕಾದರೆ ಆಯಾ ಪ್ರದೇಶದ ಆಡಳಿತ ಆಯಾ ಭಾಷೇಲಿ ನಡೀಬೇಕು. ಕೇಂದ್ರ ಸರ್ಕಾರ ತನ್ನ ಪಟ್ಟೀಲಿರೋ 22 ಭಾಷೇಲಿ ಇಂಥಾ ಮಾಹಿತೀನಾ ಒದಗಿಸಿಕೊಡಲಿ. ಆದ್ರೆ ಇಂಥಾ ವ್ಯವಸ್ಥೆ ಭಾರತ ಒಪ್ಪುಕೂಟ ಶುರು ಆದಾಗಿನಿಂದಲೂ ಸಹಜವಾಗೇ ಇರಬೇಕಿತ್ತು, ಈಗ ಅಂಥ ಕೊರತೇನಾ ಉಪರಾಷ್ಟ್ರಪತಿಗಳು ಗುರುತಿಸಿ ಹೇಳಿರೋದು ತಡವಾಗಿ ಆಗ್ತಿರೋ ಜ್ಞಾನೋದಯದ ಗುರುತಲ್ವಾ ಗುರು?

ಹೊರದೇಶದೋರ ಕಣ್ಣಲ್ಲಿ ಕನ್ನಡಿಗ!

ಹಂಪಿ ವಿಶ್ವವಿದ್ಯಾಲಯದೋರು ೨೦೦೫ರಲ್ಲಿ ಡಾ. ವಿವೇಕ್ ರೈ ಅವರ ಸಂಪಾದಕತ್ವದಲ್ಲಿ “ಪ್ರವಾಸಿ ಕಂಡ ವಿಜಯನಗರ” ಅನ್ನೋ ಹೆಸರಿನ ಪುಸ್ತಕ ಹೊರತಂದಿದಾರೆ. ಕನ್ನಡದೋರೆಲ್ಲಾ ಒಮ್ಮೆ ಆ ಪುಸ್ತಕ ಓದಲೇ ಬೇಕು ಗುರು! ಅದರಲ್ಲಿ ಬಲು ಸೊಗಸಾಗಿ ನಮ್ಮ ನಾಡಿನ ಬಗ್ಗೆ ಮೈ ಝುಂ ಅನ್ಸೋ ಹಾಗೆ ಬರೆದಿದಾರೆ. ಕರ್ನಾಟಕ ಸಾಮ್ರಾಜ್ಯವನ್ನು ಭೇಟಿ ಮಾಡಿದ ಪರದೇಶಿಯರಲ್ಲಿ ಪ್ರಮುಖರೆಂದರೆ. ಇಬ್-ನೆ-ಬತೂತ, ನಿಕೊಲೋ-ದೆ-ಕೊಂತಿ, ದುಆರ್ತೆ ಬಾರ್ಬೋಸಾ, ಡೊಮಿಂಗೋ ಪ್ಯಾಸ್ ಮೊದಲಾದವರು. ಪರ್ಷಿಯಾ ದೇಶದವನಾದ ಅಬ್ದುಲ್ ರಜಾಕ್‌ನ ಮಾತುಗಳಲ್ಲಿ ಕೆಲವನ್ನು ನೋಡಿ :

ಬಿಜನಗರದಂತಹ ನಗರವನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ. ಈ ನಗರವನ್ನು ಹೇಗೆ ನಿರ್ಮಿಸಿದ್ದಾರೆಂದರೆ ಏಳು ದುರ್ಗಗಳೂ ಏಳು ಕೋಟೆಗಳೂ ಒಂದನ್ನೊಂದು ಆವರಿಸಿಕೊಂಡಿವೆ. ಒಂದನೆಯ ದುರ್ಗದ ಸುತ್ತ ಮನುಷ್ಯನ ಎತ್ತರದ ಕಲ್ಲು ಕಂಭಗಳನ್ನು ಭೂಮಿಯಲ್ಲಿ ಅರ್ಧ ಹೂತು ಇನ್ನರ್ಧ ಮೇಲೆ ಕಾಣುವಂತೆ ನೆಟ್ಟಿರುವರು. ಇವುಗಳನ್ನು ಒಂದರ ಪಕ್ಕ ಒಂದರಂತೆ ಹೇಗೆ ಹೂತಿದ್ದಾರೆಂದರೆ, ರಾವುತನಾಗಲೀ ಪದಾತಿಯಾಗಲೀ ಧೈರ್ಯವಾಗಿ ಅಥವಾ ಸುಲಭವಾಗಿ ದುರ್ಗದ ಕಡೆ ಹೋಗುವಂತಿಲ್ಲ. ಈ ಕೋಟೆ ಚಕ್ರಾಕಾರವಾಗಿದೆ. ಇದನ್ನು ಬೆಟ್ಟದ ತುದಿಯ ಮೇಲೆ ಕಲ್ಲು ಮತ್ತು ಗಾರೆಗಳಿಂದ ಕಟ್ಟಿದ್ದಾರೆ. ಇದರ ಹೆಬ್ಬಾಗಿಲುಗಳು ಬಲು ಬಲವಾಗಿವೆ. ಈ ಹೆಬ್ಬಾಗಿಲುಗಳನ್ನು ಒಂದೇ ಸಮನೆ ಕಾಯುತ್ತಿರುತ್ತಾರೆ. ಯಾರನ್ನೂ ಪೂರ್ಣಪರೀಕ್ಷೆ ಮಾಡದೆ ಒಳಗೆ ಬಿಡುವುದಿಲ್ಲ...

ಅರಮನೆಯ ಆನೆಗಳಿಗೆ ಕಿಚಡಿಯನ್ನು ತಿನ್ನಿಸುತ್ತಾರೆ. ಇ‌ದನ್ನು ತಾಮ್ರದ ಹಂಡೆಗಳಲ್ಲಿ ಬೇಯಿಸಿ ಆನೆಗಳ ಮುಂದೆಯೇ ಹೊರಗೆ ತೆಗೆದು, ಹರಡಿ ಅದರ ಮೇಲೆ ಉಪ್ಪನ್ನೂ ಸಕ್ಕರೆಯನ್ನೂ ಎರಚಿ ಚೆನ್ನಾಗಿ ಕಲಸುತ್ತಾರೆ. ಹೀಗೆ ಕಲಸಿದ ಮೇಲೆ ಅದನ್ನು ಎರಡು ಮಣದಷ್ಟು ತೂಕದ ಉಂಡೆಗಳನ್ನಾಗಿ ಮಾಡುತ್ತಾರೆ. ಈ ಉಂಡೆಗಳನ್ನು ತುಪ್ಪದಲ್ಲಿ ಅದ್ದಿ ಆನೆಯ ಬಾಯೊಳಗೆ ಇಡುತ್ತಾರೆ...

ಹೀಗೆ ವಿಜಯನಗರದ ಪ್ರತಿ ವಿವರವೂ ಇಲ್ಲಿ ದಾಖಲಾಗಿದೆ. ಅಂದಿನ ಸಾಮಾಜಿಕ ಜೀವನ, ಸಾಹಸ, ವೈಭವ, ಇತಿಹಾಸ, ಕ್ರೌರ್ಯ, ಮೌಢ್ಯ ಎಲ್ಲವನ್ನೂ ಓದ್ತಾ ಇದ್ರೆ ಮೈಮೇಲೆ ಮುಳ್ಳೇಳುತ್ತೆ ಗುರು! ಈ ಪುಸ್ತಕಾನ ಮುಂದಿನ ಸಲ ಹಂಪೆಗೆ ಹೋದಾಗ ಖಂಡಿತಾ ಕೊಳ್ಳಿ. ಇದು ನಿಮ್ಮ ಹತ್ತಿರದ ಪುಸ್ತಕದ ಅಂಗಡಿಯಲ್ಲಿಯೂ ಸಿಗಬಹುದು. “ಪ್ರವಾಸಿ ಕಂಡ ವಿಜಯನಗರ” ಹೊತ್ತಿಗೆ ಮನೆಗೊಂದು ಶೋಭೆ.

ಅಲ್ಲಿರೋವ್ರು ಕನ್ನಡ ಬಳುಸ್ತಿಲ್ಲಾ ಅಂದ್ರೆ ಇಲ್ಲಿರೋವ್ರು ತಾನೆ ಹೊಣೆ?


ಆರು ಲಕ್ಷಕ್ಕೂ ಹೆಚ್ಚಿರುವ ಕರ್ನಾಟಕ ಸರ್ಕಾರಿ ನೌಕರರ ಪೈಕಿ ಸುಮಾರು ಒಂದು ಲಕ್ಷಕ್ಕೂ ಅಧಿಕ ನೌಕರರಿಗೆ (ಅಂದರೆ ಸುಮಾರು 17% ನೌಕರರು!!) ಕನ್ನಡ ಬಳಸಕ್ಕೆ ತ್ರಾಸಂತೆ! ಇವರಿಗೆ ಸುಲಲಿತವಾಗಿ ಕನ್ನಡಾನ ಬರೆಯಕ್ಕೆ ಬರಲ್ಲ ಅನ್ನೋ ಹೌಹಾರುವಂತಾ ಸುದ್ದೀನಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಹೊರ ಹಾಕಿದ್ದಾರೆ ಗುರು! ಈಗ ಇವರೆಲ್ಲರಿಗೂ ಸುಮಾರು 2.5 ಕೋಟಿ ರೂಪಾಯಿ ಸರ್ಕಾರಿ ವೆಚ್ಚದಲ್ಲಿ ಕನ್ನಡ ಕಲಿಸುವ ಕೆಲಸಕ್ಕೆ ಸರ್ಕಾರ ಕೈ ಹಾಕಲಿದೆ ಅಂತಾನೂ ಹೇಳಿದ್ದಾರೆ. ಕರ್ನಾಟಕದ ಆಡಳಿತ ಭಾಷೆಯನ್ನೇ ಸಲೀಸಾಗಿ ಬಳಸಕ್ಕೆ ಬರದವರು ನಮ್ಮ ರಾಜ್ಯಸರ್ಕಾರಿ ನೌಕರಿಯಲ್ಲಿ ವರ್ಷಗಟ್ಲೆ ಅರಾಮಾಗಿ ಕೆಲಸ ಮಾಡಕ್ಕೆ ಆಗುತ್ತೇ ಅನ್ನೋದೆ ತಮಾಷೆ ಸುದ್ದಿ ಅಲ್ವಾ? ಪಾಪಾ! ಚಂದ್ರು ಅವ್ರು ಈಗ ಇವರಿಗೆ ಪಾಠ ಹೇಳಿಕೊಡೋದು ಬಿಟ್ಟು ಇನ್ನೇನು ತಾನೆ ಮಾಡಬಲ್ಲರು?

ಕನ್ನಡ ಬಳುಸ್ತಿಲ್ಲ ಅಂದ್ರೆ ಯಾರು ಕಾರಣ?

ಅಲ್ಲಾ ಗುರು! ನಾಡಿನ ಜನರ ನುಡಿಯಾದ ಕನ್ನಡದಲ್ಲೇ ನಮ್ಮ ಆಡಳಿತಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳೆಲ್ಲಾ ನಡೀಬೇಕು ಅನ್ನೋದನ್ನು ಸರಿಯಾಗಿ ಸರ್ಕಾರ ಅರ್ಥ ಮಾಡ್ಕೊಂಡು ವ್ಯವಸ್ಥೆ ಜಾರಿಗೆ ತಂದಿದ್ರೆ ಇಂಥಾ ಕೆಟ್ಟ ಪರಿಸ್ಥಿತಿ ಬರ್ತಿತ್ತಾ? ಈಗ ಇರೋರಲ್ಲಿ ಲಕ್ಷಾಂತರ ಜನಕ್ ಕನ್ನಡ ಬಳಸಕ್ ಆಗದೆ ಇರೋದ್ರಿಂದ ಎಷ್ಟು ಜನರಿಗೆ ಸಮಸ್ಯೆ ಅಲ್ವಾ? ಸರ್ಕಾರಗಳು ಮೊದ್ಲಿಂದ ಬಿಗಿಯಾಗಿ ಆಡಳಿತದಲ್ಲಿ ಕನ್ನಡ ಅನುಷ್ಠಾನ ಮಾಡದೇ ಈಗ 17% ನೌಕರರಿಗೆ ಕನ್ನಡದಲ್ಲಿ ಸರಿಯಾಗಿ ವ್ಯವಹರಿಸಕ್ ಆಗಲ್ಲಾ ಅಂದ್ರೆ ಕನ್ನಡ ಅನುಷ್ಠಾನ ಮಾಡಕ್ಕೆ ನಮ್ಮ ಸರ್ಕಾರಗಳು ಎಷ್ಟೊಂದು ಕಾಳಜಿ ತೋರಿಸಿವೆ ಅನ್ನೋದ್ ತಿಳಿಯಲ್ವಾ? ಆಡಳಿತ ಭಾಷೆಯ ಅನುಷ್ಠಾನಕ್ಕೆ ಅಂತ ಯಾವ್ದೋ ಸಮಿತಿ, ಸುಡ್ಗಾಡು ಶುಂಠಿ ಅಂತ ಮಾಡಿ ಸರ್ಕಾರ ಕೈತೊಳ್ಕೊಂಬುಟ್ರೆ ಆಗೋಯ್ತಾ? ಪಾಪಾ, ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅನ್ನೋ ಹಲ್ಲು ಕಿತ್ತ ಹಾವು ಎಷ್ಟು ಭುಸುಗುಟ್ಟುದ್ರೆ ತಾನೇ ಏನಾಗುತ್ತೆ? ಈಗಲಾದರೂ ಸರ್ಕಾರ ತನ್ನ ಕೆಲಸದಲ್ಲಿ ಆಗ್ತಿರೋ 20% ಕ್ಷಮತೆಯ ನಷ್ಟಾನಾ ಅರ್ಥ ಮಾಡ್ಕೊಂಡು ಸರೀಗೆ ಕನ್ನಡದಲ್ಲಿ ಆಡಳಿತ ಮಾಡಬೇಕು ಗುರು!

ಕನ್ನಡದ ದೊಡ್ಡಜನ ನಾಗರೀಕ ದನಿಯಾಗಬೇಕು!

ಇತ್ತೀಚಿನ ದಿನಗಳಲ್ಲಿ ನಮ್ಮೂರುಗಳು ಹಂಗೀರ್ಬೇಕು, ಹಿಂಗಿರ್ಬೇಕು ಅಂತಾ ಹೇಳಕ್ಕೆ, ಏನೇನ್ ಬದಲಾಗಬೇಕು, ಏನೇನು ಸುಧಾರಣೆ ಆಗ್ಬೇಕು ಅನ್ನಕ್ಕೆ, ಈಗಾಗ್ಲೆ ಇರೋ ಜನಪ್ರತಿನಿಧಿ ವ್ಯವಸ್ಥೆಗೆ ಹಿಡಿದಿರೋ ತುಕ್ಕು ಬಿಡಿಸೋಕ್ಕೆ ನಾಗರೀಕರೇ ಸೇರ್ಕೊಂಡು ಕಟ್ಕೊಂಡಿರೋ ಹಲವಾರು ಸಂಸ್ಥೆಗಳು ಕೆಲಸ ಮಾಡ್ತಿವೆ. ಅದ್ರಲ್ಲಿ ನಮ್ಮ ಬೆಂಗಳೂರಲ್ಲಿ ಜನಾಗ್ರಹ, ಬ್ಯಾಂಗಲೂರ್ ಸಿಟಿಜನ್ ಮ್ಯಾಟರ್ಸ್.ಇನ್ ಮೊದಲಾದವು ಇವೆ. ಈ "ಲಾಭರಹಿತ" ಸಂಸ್ಥೆಗಳಲ್ಲಿ ಹೆಚ್ಚಿನವು ಬೆಂಗಳೂರಿನ ವ್ಯವಸ್ಥೆ ಹೇಗಿರಬೇಕು ಅಂತಾ ಕೆಲಸ ಮಾಡ್ತಿವೆ. ಇವುಗಳಲ್ಲಿ ಬಹುತೇಕ ಸಂಸ್ಥೆಗಳನ್ನು ಕಟ್ಕೊಂಡಿರೋರು, ನಡುಸ್ತಿರೋರು ಯಾರಪ್ಪಾ ಅಂತಾ ನೋಡುದ್ರೆ ಅದರಲ್ಲಿ ನಮ್ಮ ಜನ ಅಂದ್ರೆ ಕನ್ನಡಿಗರಿರೋದು ಬೆರಳೆಣಿಕೆಯಷ್ಟು ಮಾತ್ರಾ ಕಣ್ರೀ.. ಅಲ್ಲಾರೀ, ಬೆಂಗಳೂರಿನ ವ್ಯವಸ್ಥೆ ಹೇಗಿರಬೇಕು ಅಂತಾ ರಾಜಾಸ್ಥಾನದಿಂದ, ಮುಂಬೈಯಿಂದ, ಕೇರಳದಿಂದ, ತಮಿಳುನಾಡಿಂದ ವಲಸೆ ಬಂದಿರೋ ಹೈಕ್ಳು ನಿರ್ಧಾರ ಮಾಡಬೇಕಾ? ಇದರಲ್ಲಿ ಯಾವ ತಪ್ಪೂ ಇಲ್ಲಾ ಅಂದ್ರೂ ಇವರಿಗೆ ನಮ್ಮೂರು, ನಮ್ಮೂರ ಜನ, ನಮ್ಮೂರ ಸಂಸ್ಕೃತಿಗಳು ಇದನ್ನೆಲ್ಲಾ ಲೆಕ್ಕಕ್ಕೆ ತಗೊಂಡು ಕೆಲಸ ಮಾಡೋ ಉಮ್ಮೇದಿ ಅದೆಂಗ್ ಇರಕ್ ಆಗುತ್ತೆ ಹೇಳಿ. ಇದ್ರಾಗೆಲ್ಲಾ ನಮ್ ಜನಗಳು ಇರಬೇಕು. ಆಗ ಸಮಸ್ಯೇನೂ ಸರಿಯಾಗಿ ಅರ್ಥ ಆಗುತ್ತೆ, ಪರಿಹಾರಾನೂ ಸರಿಯಾಗ್ ಸಿಗ್ತದೆ.

ಇವ್ರು ಯಾವ ಸೀಮೆ ಬೆಂಗಳೂರಿನ ಪ್ರತಿನಿಧಿಗಳು?

ದೊಡ್ಡ ಓದು ಓದಿದೀವಿ ಅಂತಾನೋ, ಸಮಾಜದಲ್ಲಿ ದೊಡ್ಡ ಸ್ಥಾನದಲ್ಲಿ ಇದೀವೀ ಅಂತಾನೋ ಇವರು ತಮ್ಮುನ್ ತಾವು ಇಡೀ ಬೆಂಗಳೂರಿನ ಪ್ರತಿನಿಧಿಗಳು ಅಂತ ಅಂದ್ಕೊಂಡಿದ್ರೆ ಮೂರ್ಖರಾಗ್ತಾರೆ ಅಷ್ಟೆ. ಈ ಬೆಂಗಳೂರಿನಲ್ಲಿ ಇರೋ ಕನ್ನಡಿಗರನ್ನೇ ಗಣನೆಗೆ ಇಟ್ಕೊಳ್ದೆ, ಹೊರಗಿಂದ ಬಂದೋರ ಹಿತ ಕಾಯೋದೊಂದೇ ಗುರಿ ಅನ್ನೋ ಹಾಗೆ ಇವರುಗಳು ನಡ್ಕೊತಿರೋದು ಎದ್ದು ಕಾಣ್ತಿದೆ. ಯಾಕಪ್ಪಾ ಅಂದ್ರೆ, ಬೆಂಗಳೂರಿನ ನಾಗರೀಕರನ್ನು ಪ್ರತಿನಿಧುಸ್ತೀವಿ ಅಂತಾ ಹೇಳ್ಕೊಳ್ಳೋ ಇವರ ಅಂತರ್ಜಾಲ ತಾಣಗಳಲ್ಲಿ ಕನ್ನಡವೇ ಇಲ್ಲ. ಅಂಥಾದ್ರಲ್ಲಿ ಇವರು ಯಾವ ಸೀಮೆ ಬೆಂಗಳೂರನ ನಾಗರೀಕರ ಪ್ರತಿನಿಧಿಗಳಾಗ್ತಾರೆ? ನೀವೆ ಹೇಳಿ. ಕನ್ನಡದೋರ ಅನುಭವ, ಸಮಸ್ಯೆ, ಯೋಜನೆ ಇವುನ್ನೆಲ್ಲಾ ಇವರ ತಾಣಗಳು, ಸಂಸ್ಥೆಗಳೂ ಪ್ರತಿನಿಧಿಸಲಾರವು. ಇವತ್ತಿನ ದಿವ್ಸ ಇವರ ಜೊತೆ ಕೆಲಸ ಮಾಡ್ತಿರೋ ಒಬ್ರೋ ಇಬ್ರೋ ಕನ್ನಡಿಗರೂ ಕೂಡಾ ಕನ್ನಡ ಬಳುಸೋದು ಹೆಂಗಪ್ಪಾ ಅನ್ನೋ ಕೀಳರಿಮೆಯಲ್ಲಿ ನರಳ್ತಿದಾರೇನೋ ಅನ್ಸುತ್ತೆ. ಇಲ್ದಿದ್ರೆ ಇಷ್ಟ್ ಹೊತ್ತಿಗೆ ಇವರ ಅಂತರ್ಜಾಲ ತಾಣದಲ್ಲಿ ದೇವ್ರಾಣೆಗೂ ಕನ್ನಡ ಇರ್ತಿತ್ತು. ಹೀಗೆ ಬುಡಹಂತದಲ್ಲೇ ಹುಳುಕು ಇಟ್ಕೊಂಡು, ತಮ್ಮ ಬರಹಗಳಲ್ಲಿ ನೇರವಾಗೇ ಪರಭಾಷೆಯೋರುನ್ನಾ ಮೆರುಸೋ ಸಲುವಾಗಿ ಕನ್ನಡದವರನ್ನೇ ಕಡೆಗಣುಸ್ತಿರೋ ಇವರಿಂದ ಬೆಂಗಳೂರು ಉದ್ಧಾರ ಆದ ಹಾಗೇ ಗುರೂ!

ಇದ್ಯಾವ ಮಹಾ ಸಂಸ್ಥೆಗಳು ಅನ್ನೋ ಅಸಡ್ಡೆ ಬೇಡಾ!

ಹಾಗಂತಾ ಇವ್ಯಾವ ಮಹಾ ಸಂಸ್ಥೆಗಳು ಅಂತಾ ನಾವೂ ನೀವೂ ಇವುಗಳ್ನ ಕಡೆಗಣಿಸಕ್ಕೆ ಆಗಲ್ಲಾ. ಯಾಕಂದ್ರೆ ಇವತ್ತು ಈ ಸಂಸ್ಥೆಗಳು ಎತ್ತುತಿರೋ ದನಿ ಆಡಳಿತದಲ್ಲಿರೋರ ಕಿವಿಗೆ ಮುಟ್ತಾಯಿದೆ. ಮಾಧ್ಯಮಗಳಲ್ಲಿ ಇವರ ಕೂಗು ಕೇಳಿ ಬರ್ತಾಯಿದೆ. ಹೌದಪ್ಪಾ, ಇವರು ಹೇಳ್ತಿರೋ ಸುಧಾರಣೆ ಮಾಡುದ್ರೆ ಊರು ಉದ್ಧಾರ ಆಗುತ್ತೆ ಅಂತಾ ಆಳೋರಿಗೆ ಅನ್ಸೋಕೆ ಶುರು ಆಗಿದೆ. ಇಂಥಾ ಸಂಸ್ಥೆಗಳು ಕೂಡಾ ನಿಜವಾಗಿ ಬೆಂಗಳೂರಿನ ವ್ಯವಸ್ಥೆಯನ್ನು ಸುಧಾರಿಸಬೇಕು ಅಂತಾ... ಬಹಳ ಅಧ್ಯಯನ ಮಾಡಿ ತಮ್ಮೆಲ್ಲಾ ಪರಿಣಿತಿ ಅನುಭವಗಳನ್ನು ಸುರಿದು ನಿಜವಾದ ಕಾಳಜಿಯಿಂದಲೇ ಕೆಲಸ ಮಾಡ್ತಿರಬಹುದು. ಆದರೇನು? ಇದರಲ್ಲಿ ನಮ್ಮ ಜನ ಇಲ್ಲದಿದ್ರೆ ಇವರ ಪರಿಹಾರಗಳು, ಯೋಜನೆಗಳೆಲ್ಲಾ ಇಲ್ಲಿಗೆ ಬರೋ ವಲಸಿಗರ ಬದುಕನ್ನು ಹಸನು ಮಾಡೋದ್ರಲ್ಲಿ ಮುಗಿದು ಹೋಗುತ್ತೆ! ಅದೆಂಗೇ ಅಂತೀರಾ? ಈಗ ನೋಡಿ, ಬೆಂಗಳೂರಿನ ಬಸ್ಸುಗಳಲ್ಲಿ ಇಂಗ್ಲಿಷ್ ಬರಹ ಬೇಕು ಅಂತಾ ಇವರು ಬಲವಾಗಿ ಪ್ರತಿಪಾದುಸ್ತಾರೆ. ಆದ್ರೆ ಇದೇ ಜನ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ, ಬೆಂಗಳೂರಿನ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಬರೀ ಕನ್ನಡ ಬರೋ ನಮ್ಮ ಎಂಕ ವ್ಯವಹರಿಸಕ್ಕೆ ಅನುಕೂಲ ಆಗೋ ಅಂಥಾ ವ್ಯವಸ್ಥೆ ಬೇಕು ಅನ್ನಲ್ಲ. ಇವರ್ಯಾರೂ ಅಂಥಾ ವ್ಯವಸ್ಥೆ ಬೇಡಾ ಅನ್ನಲ್ಲ. ಆದ್ರೆ ಈಗ ಇಂಗ್ಲಿಷ್ ಬೋರ್ಡ್ ಬೇಕು ಅನ್ನೋ ಹಾಗೆ ಎಂಕಂಗೆ ಅನುಕೂಲ ಆಗೋ ಥರದ ವ್ಯವಸ್ಥೆ ಕಟ್ಟಿ ಅನ್ನಲ್ಲ. ಅನ್ನಲ್ಲ ಅನ್ನಬಾರದು, ಇದುವರ್ಗೂ ಅಂದಿಲ್ಲಾ ಅಷ್ಟೆ.

ಜನಾಭಿಪ್ರಾಯದ ನಾಟಕ!

ಇವ್ರು ಜನಾಭಿಪ್ರಾಯ ತಿಳ್ಕೊಳಕ್ಕೆ ಅಂತಾ ಮತಕ್ಕೆ ಹಾಕಿರೋ ಈ ಪ್ರಶ್ನೆ ನೋಡಿ : ಇದರ ಉತ್ತರಗಳಲ್ಲಿ ಯಾವುದನ್ನು ಆರಿಸಿದ್ರೂ ನೀವು ಇಂಗ್ಲಿಷ್ ಬೋರ್ಡನ್ನು ಒಪ್ಪಿದ ಹಾಗೇ. ಇಂಥಾ ಸಂಸ್ಥೆಗಳು ನಿಜಕ್ಕೂ ಬೆಂಗಳೂರನ್ನು, ಬೆಂಗಳೂರಿನ ಜನತೆಯನ್ನು ಪ್ರತಿನಿಧಿಸ್ತಾ ಇದಾರಾ? ಇವರು ಪ್ರತಿನಿಧಿಸ್ತಾ ಇರೋ ಬೆಂಗಳೂರು ಕನ್ನಡಿಗರನ್ನು ಒಳಗೊಂಡಿದ್ಯಾ ಇಲ್ವಾ? ಅಂತೆಲ್ಲಾ ಪ್ರಶ್ನೆಗಳು ನಿಮ್ಮಲ್ಲಿ ಹುಟ್ತಿಲ್ವಾ ಗುರುಗಳೇ! ಇನ್ನೂ ಏನು ಯೋಚನೇ ಮಾಡ್ತಿದೀರಾ? ಸಮಾಜದಲ್ಲಿ ದೊಡ್ಡ ಸ್ಥಾನ ಹೊಂದಿರೋ ಕನ್ನಡಿಗರು ಇಂಥಾ ಸಂಸ್ಥೆಗಳ ಒಳಹೊಕ್ಕು ಚುಕ್ಕಾಣಿ ಹಿಡೀದಿದ್ರೆ, ಮಾತು ನಡ್ಯೋ ಹಂತಕ್ ತಲುಪದೇ ಇದ್ರೆ, ಅಥ್ವಾ ಈ ಸಂಸ್ಥೆಗಳಿಗಿಂತಾ ಪ್ರಭಾವಶಾಲಿಯಾದ ದೊಡ್ಡ ಸಂಸ್ಥೆಗಳ್ನ ಕಟ್ಟದೇ ಹೋದ್ರೆ ಮುಂದೆ ಅನಾಹುತಾ ಗ್ಯಾರಂಟಿ.

ಇವರ ನಿಲುವೇ ಬೆಂಗಳೂರಿಗರದ್ದೇನು?

ಮೊನ್ನೆ ನೋಡಿ ತಿರುವಳ್ಳುವರ್ ಸ್ಥಾಪನೆ ಮಾಡಿದ್ದೇ ಸರಿ ಅಂತಾ ಅಭಿಪ್ರಾಯಾನ ಬೆಂಗಳೂರು ಸಿಟಿಜನ್ ಮ್ಯಾಟರ್ಸ್‍‍ನ ಸಂಪಾದಕರು ಬರೆದಿದ್ದಾರೆ. ಇದನ್ನು ಮೀರಿಸೋ ಹಾಗೆ ಜನಾಗ್ರಹದ ಸಂಪಾದಕೀಯ ಇದೆ. ಇದೇನು ಇಡೀ ಕನ್ನಡಿಗರ ಅಭಿಪ್ರಾಯವೇನು? ಈ ಪ್ರತಿಮೆ ವಿಚಾರದಲ್ಲಿ ಸರ್ಕಾರ ಹೇಗೆ ನಡ್ಕೊಳ್ತು ಅಂತಾ ಇಡೀ ನಾಡಿಗೇ ಗೊತ್ತಿದೆ. ಜನರ ಅಭಿಪ್ರಾಯ ಏನಿತ್ತು ಅನ್ನೋದನ್ನು ಗಣನೆಗೆ ತೊಗೊಳ್ದೆ, ಸುದ್ದಿ ಕೊಡಬೇಕಾದೋರು ಅಭಿಪ್ರಾಯ ಕೊಡ್ತಾ ಅವರಿವರ ಪರ ವಕೀಲಿಕೆ ಮಾಡ್ತಾ ಇರೋದು ಎಷ್ಟರ ಮಟ್ಟಿಗೆ ಒಪ್ಪೋ ಮಾತು? ಇವರ ಸಂಪಾದಕೀಯಾನೂ, ಇವರ ಸಂಸ್ಥೇನೂ ಬೆಂಗಳೂರು ಜನತೆಯ ಪ್ರತಿನಿಧಿಸೋವು ಅಂತಾಗ್ಬುಟ್ರೆ, ನಾಳೆ ಇಡೀ ಬೆಂಗಳೂರಿನ ಒಟ್ಟಭಿಪ್ರಾಯವೇ ಇದು ಅಂತಾ ಅಗೋಗಲ್ವಾ? ಇಂಥಾದ್ದೆಲ್ಲಾ ಆಗಬಾರ್ದು ಅಂದ್ರೆ ಇರೋದು ಒಂದೇ ದಾರಿ. ಇಂಥಾ ಸಂಸ್ಥೆಗಳಲ್ಲಿ ನಾವೂ ತೊಡುಗುಸ್ಕೋಬೇಕಾಗಿದೆ. ಅದಕ್ಕಿಂತಾ ಪರಿಣಾಮಕಾರಿಯಂದ್ರೆ ಇಂಥಾ ಸಂಸ್ಥೆಗಳಿಗಿಂತ ದೊಡ್ಡ ಸಂಸ್ಥೆಗಳನ್ನು ಕನ್ನಡಿಗರು ಕೂಡಿ ಕಟ್ಟಬೇಕಾಗಿದೆ. ಏನಂತೀರಾ ಗುರುಗಳೇ?

ಮನೆಗೆ ಮಾರಿಯಾಗದಿರಲಿ ಕನ್ನಡಿಗ!!

ಅಂದೊಮ್ಮೆ...
ಕಾರ್ಗಿಲ್‌ ಯುದ್ಧದಿ
ದಂಡಿನ ಮಂದಿ ಬಲಿಯಾದಾಗ
ಮರುಗಿದ ಕನ್ನಡ ಮನವೇ ...

ಹಿಂದೊಮ್ಮೆ ...
ಲಾಥೂರ್‌, ಕಿಲಾರಿಯಲ್ಲಿ,
ಕಛ್‌, ಭುಜ್‌ನಲ್ಲಿ,
ಗುಡುಗುಡುಗಿ ನೆಲನಡುಗಿ,
ಮನೆಮುರಿದಾಗ
ಮಿಡಿದ ಕನ್ನಡ ಮನವೇ ...

ನಿನ್ನೆ ...
ಸಾಗರದಲೆಗಳು ತಮಿಳು ತೀರದಲಿ
ಮೃತ್ಯು ನರ್ತನ ನಡೆಸಿರಲು,
ಧಿಗ್ಗನೆ ನೆರವಿಗೆ
ಧಾವಿಸಿದ ಕನ್ನಡ ಮನವೇ ...

ಮೆಚ್ಚಿ ತಲೆಬಾಗುವೆ
ನಿನ್ನ ರಾಷ್ಟ್ರೀಯ ಭಾವಕ್ಕೆ!
ಜಾತಿ ಭಾಷೆ ಮೀರಿದ
ನಿನ್ನ ಉದಾತ್ತತೆಗೆ!!
ನಿನ್ನೊಡಲ ದೇಶ ಪ್ರೇಮಕ್ಕೆ ...

ಇಂದು ...
ಸುರಿದ ಮಳೆಗೆ ಕೃಷ್ಣೆ ಉಕ್ಕಿಹುದು,
ಮಲಪ್ರಭೆ, ತುಂಗಭಧ್ರೆ ನುಗ್ಗಿಹುದು
ನಿನ್ನದೇ ಮನೆಯ ಒಳಗೆ ...
ನೆಲ, ಮನೆ, ದನಕರು
ಕಡೆಗೆ ಹೆತ್ತಕಂದಮ್ಮಗಳೂ ... ಕೃಷ್ಣಾರ್ಪಣ!!

ಇಂದು ...
ರಾಯಚೂರಾಗಿದೆ ಚೂರು ಚೂರು,
ಬಿಜಾಪುರದ ಗುಂಬಜ್‍ಗಳಲ್ಲಿ ಮಸಣಮೌನ,
ಕಾರವಾರದಿ ಮೈಮೇಲೆ ಮುರಿದು ಬಿದ್ದ ಗುಡ್ಡ!
ಕಮರಿದೆ ಕನಸು, ಮುರುಟಿದೆ ಮನಸು
ಬಟಾ ಬಯಲಾಗಿದೆ ಬದುಕು...

ಭೂಕಂಪಿತರಿಗೆ ಬಟ್ಟೆ
ಸೈನ್ಯದ ಜನಕೆ ಹಣ,
ಸುನಾಮಿ ಪೀಡಿತರಿಗೆ ಚಪಾತಿ ಅನ್ನ.
ನಿನ್ನಯ ಮನೆಯ ಜನಕ್ಕೆ ??
ಕಡೆ ಪಕ್ಷ ಒಂದು ಹನಿ ಕಣ್ಣೀರು ?
ಮನೆಗೆ ಮಾರಿ ಊರಿಗೆ ಉಪಕಾರಿ

ಇದು ಕನ್ನಡಿಗನ ನಿಜ ರೂಪವೆಂದು
ಬೆಚ್ಚಿಹಳು ಭುವನೇಶ್ವರಿ ...
ನಿನ್ನ ನಿರಭಿಮಾನ ನಿರ್ಲಜ್ಜತನ, ನಿನ್ನದೇ ಜನಗಳ
ಕಷ್ಟಕಾಲದಲ್ಲೂ ತಟಸ್ಥವಾಗಿಹ ನಿನ್ನ ಗುಣ,
ಮೈಮನ ತುಂಬಿಹ ನಿರ್ವಿಣ್ಣತೆ
ನಿನ್ನಂತಹ ಮಕ್ಕಳನ್ನು ಹಡೆದವ್ವೆ ಧನ್ಯ !!!

ಅಳಿಸು ಈ ಕೆಟ್ಟಹೆಸರನಿಂದು ಗೆಳೆಯಾ,
ಇದು ನಮ್ಮವರ ಕಣ್ಣೊರೆಸೆ ಮುನ್ನುಗ್ಗೊ ಸಮಯಾ!
ಮುಂದಾಗು ಕನ್ನಡದ ಮನೆಯ ಮತ್ತೆ ಕಟ್ಟಲು,
ಕನ್ನಡ ರಾಜರಾಜೇಶ್ವರಿಯ ಋಣ ತೀರಿಸಲು!!

ಎಚ್ಚರವಾಗ್ತಿರೋ ಮರಾಠಿ ಮಾಣುಸ್!


ಮೊನ್ ಮೊನ್ನೆ ಸಿ.ಎನ್.ಎನ್-ಐ.ಬಿ.ಎನ್‍ನೋರು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಒಂದಿಬ್ರು ರಾಜಕೀಯ ನಾಯಕರನ್ನು ಸಂದರ್ಶನ ಮಾಡುದ್ರು ಗುರು! ಒಬ್ರು ಶಿವಸೇನೆಯ ಬಾಳಾಠಾಕ್ರೆಯ ಉತ್ತರಾಧಿಕಾರಿಯಾದ ಉದ್ಧವ್ ಠಾಕ್ರೆಯವರು. ಇನ್ನೊಬ್ರು ಮಹಾರಾಷ್ಟ್ರಾ ನವನಿರ್ಮಾಣ ಸೇನೆಯ ದಂಡನಾಯಕರಾದ ರಾಜ್ ಠಾಕ್ರೆಯವರು. ನೀವು ಆ ಸಂದರ್ಶನಗಳ್ನ ನೋಡುದ್ರಾ ಗುರು? ಇಲ್ದಿದ್ರೆ ಇಕಾ ಇಲ್ಲಿ ನೋಡಿ.

ಕಳಚುತ್ತಿರುವ ಸುಳ್ಳಿನ ಪೊರೆ ಒಂದೆಡೆ! ತನ್ನತನವ ತೊರೆದವರೊಂದೆಡೆ!!

ಶಿವಸೇನೆ ಅನ್ನೋದು ಹೇಗೆ ದಿಕ್ಕೆಟ್ಟು, ಸಿದ್ಧಾಂತದ ಗೊಂದಲದಲ್ಲಿ ತೊಳಲಾಡ್ತಾ ಇದೆ ಅನ್ನೋದನ್ನು ತಿಳ್ಯಕ್ಕೆ ಉದ್ಧವ್ ಆಡಿರೋ ಮಾತುಗಳ್ನ ನೋಡುದ್ರೆ ಸಾಕು. ಹಿಂದಿಯಲ್ಲಿ ಮಾತಾಡ್ತಾ, ಮಹಾರಾಷ್ಟ್ರ-ಮರಾಠಿ-ಮರಾಠಿಗರ ಬಗ್ಗೆ ಯಾವ್ದೇ ವಿಶೇಷ ಯೋಜನೆಗಳಿಟ್ಕೊಳ್ದೇ ರಾಷ್ಟ್ರೀಯ ಪಕ್ಷದ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಸಿದ್ಧವಾಗಿರೋ ಶಿವಸೇನೆ ತಾನು ಹುಟ್ಟಿದ್ದು ಯಾಕೆ ಅನ್ನೋದನ್ನೇ ಮರೆತು ಹೋದಂಗಿದೆ ಗುರು! ಇವರಿಗಿಂತಾ ಹೆಚ್ಚು ದಿಟದ ಮನವರಿಕೆ ಎಂ.ಎನ್.ಎಸ್‍ನವರಿಗೆ ಆಗಿರೋ ಹಾಗೆ, ರಾಜ್ ಠಾಕ್ರೆಯ ಮಾತುಗಳನ್ನು ಕೇಳ್ದಾಗ ಅನ್ಸುತ್ತೆ. ತಮಾಷೆ ಅಂದ್ರೆ ರಾಜ್‍ಠಾಕ್ರೆಯವರು ಮರಾಠಿಯಲ್ಲಿ ಮಾತಾಡೋದನ್ನೇ ಈ ಚಾನೆಲ್‍ನವರು ದೇಶ ಒಡೆಯೋ ಪ್ರಯತ್ನ ಅನ್ನೋಹಾಗೆ ಪ್ರಶ್ನೆಮಾಡಿರೋದನ್ನು ನೀವು ನೋಡಬಹುದು. ಹಿಂದಿ ಒಪ್ಪಿದ್ದಕ್ಕೇ ಮುಂಬೈ ಮಟಾಷ್ ಆಗಿರೋದು ಅನ್ನೋದನ್ನು ಅರ್ಥ ಮಾಡ್ಕೊಂಡಂಗಿರೋ ರಾಜ್‍ಠಾಕ್ರೆ, ಇದರಿಂದ ಚೂರು ಗಲಿಬಿಲಿಗೆ ಈಡಾಗಿದ್ದಂಗೆ ಕಾಣ್ಸಿದ್ರೆ ಅದುಕ್ಕೆ ಕಾರಣ, ಪಾಪಾ ಅವರೂ ಹಿಂದೀನಾ ರಾಷ್ಟ್ರಭಾಷೆ ಅಂತ ತಪ್ಪಾಗಿ ಭಾವಿಸಿರೋದೆ ಆಗಿದೆ ಗುರು! ಈ ಸಂದರ್ಶನ ಮಾಡಿದ ಮಹನೀಯ ರಾಜ್‍ದೀಪ್ ಕೂಡಾ ಪೆದ್ದುಪೆದ್ದಾಗಿ (ಅತಿ ಜಾಣತನ ಅಂತನ್ನೋ ಗುಮಾನೀನೂ ಇದೆ) ಹಿಂದೀನಾ ರಾಷ್ಟ್ರಭಾಷೇ ಅಂತನ್ನೋದುನ್ನ ನೋಡುದ್ರೆ, ಅವರ ಅಜ್ಞಾನಕ್ಕೆ ಮರುಗಬೇಕೋ ಅಥವಾ ಭಾರತೀಯರ ತಲೇಲಿ ಕೇಂದ್ರಸರ್ಕಾರ ಎಷ್ಟು ಯೋಜಿತವಾಗಿ ಒಂದು ಸುಳ್ಳುನ್ನ ತುಂಬ್ಕೊಂಡು ಬಂದಿದೆ ಅಂತಾ ಅಚ್ಚರಿ ಪಡಬೇಕೋ ಅರಿಯದಾಗಿದೆ ಗುರು! ಏನೇ ಆದರೂ ಹಿಂದಿಯಿಂದಾಗಿರೋ ಅಪಾಯದ ಅರಿವು ಮರಾಠಿಗರಿಗೆ ಅರ್ಥವಾಗ್ತಾ ಇರೋದೂ, ಜೊತೆಯಲ್ಲಿ ಈ ಅರಿವಿನ ರಾಜಕೀಯ ಪಕ್ಷ ಬೆಳೀತಾ ಇರೋದೂ ಒಳ್ಳೇ ಬೆಳವಣಿಗೆ ಆಗಿದೆ.

ರಾಜ್‍ಠಾಕ್ರೆ ಮಾತಿನ ಎರಡು ಸತ್ಯಗಳು!

ಮೊದಲನೇದಾಗಿ ಹಿಂದೀಲಿ ಮಾತಾಡದೆ ಮರಾಠಿ ಭಾಷೆಯನ್ನು ಬಳಸೋ ಮೂಲಕ ‘ಭಾರತದಲ್ಲಿ ಹಿಂದಿಯಷ್ಟೇ ಮರಾಠಿಯೂ ಭಾರತೀಯ’ ಅನ್ನೋ ಸಂದೇಶ ಕೊಡ್ತಾ, ‘ಇಷ್ಟು ದಿವಸ ಹಿಂದೀನ ಒಪ್ಕೊಂಡು ತಲೆಮೇಲೆ ಹೊತ್ತು ಮೆರೆಸಿದ್ದಕ್ಕೆ ಮರಾಠಿಗರ ಬದುಕು, ಉದ್ಯೋಗ ಎಲ್ಲಾ ಮಠ ಹತ್ತೋಗಿದೆ ಅನ್ನೋದು ನಮಗೆ ಗೊತ್ತಾಗಿದೆ. ಇನ್ಮೇಲೆ ಮರಾಠಿ ಸ್ವಾಭಿಮಾನ ಜಾಗೃತವಾಗಿದೆ ಅನ್ನೋದರ ಕುರುಹಾಗಿ ಹೀಗೆ ಮರಾಠಿಯಲ್ಲಿ ಮಾತಾಡ್ತಾ ಇದೀನಿ’ ಅನ್ನೋ ಸಂದೇಶಾನೂ ರಾಜ್ ಕೊಟ್ಟಿದಾರೆ. ಇದರ ಜೊತೆಗೆ ಯಾವ ಪಕ್ಷ ಮಹಾರಾಷ್ಟ್ರ, ಮರಾಠಿ ಮತ್ತು ಮರಾಠಿಗರ ಏಳಿಗೆಗೆ ದುಡಿಯಲು ಸಿದ್ಧವೋ, ಯಾವ ಪಕ್ಷ ಕಾಲಮಿತಿ ಹಾಕಿಕೊಂಡು ಏಳಿಗೆಯ ಯೋಜನೆಗಳನ್ನು ಜಾರಿಗೆ ತರಲು ಸಿದ್ಧವೋ ಅಂತಹ ಪಕ್ಷಗಳನ್ನು ಬೆಂಬಲಿಸುವುದಾಗಿಯೂ ರಾಜ್ ಠಾಕ್ರೆ ಹೇಳಿಕೆ ನೀಡಿದ್ದಾರೆ. ಒಟ್ಟಾರೆ ಈ ಸಂದರ್ಶನ ನೋಡಿದಾಗ ರಾಜ್‍ಠಾಕ್ರೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಹೆಚ್ಚು ಹೆಚ್ಚು ಸ್ಪಷ್ಟವಾದ ಚಿಂತನೆಯನ್ನೂ, ನಿಲುವನ್ನೂ ಮೈಗೂಡಿಸಿಕೊಳ್ಳುತ್ತಿರುವುದು ಕಾಣುತ್ತಿದೆ. ಅಂತೂ ಮರಾಠಿ ಮಾಣುಸ್ ಎಚ್ಚೆತ್ತುಕೊಳ್ತಿರೋದು ಭಾರತದ ಏಳಿಗೆಯ, ಒಕ್ಕೂಟದ ಸ್ವರೂಪದ ದೃಷ್ಟಿಯಿಂದ ಭಾಳಾ ಒಳ್ಳೇದು ಗುರು!!
Related Posts with Thumbnails