ನಮ್ ಕಾಡೊಳಿಕ್ ನುಗ್ತಿರೋ ಪುಂಡುದನಗೋಳ್ನ ತಡ್ಯೋರು ಯಾರು?

ನಮ್ಮ ಬಂಡೀಪುರದ ಕಾಡೊಳಕ್ಕೆ ಪಕ್ಕದ್ ಕೇರಳದಿಂದ ಪ್ರವಾಸಿಗಳು ಬಂದು ಕಾಡ್ನ ಎಕ್ಕುಟ್ಟುಸ್ತಾ ಔರೆ ಅನ್ನೋ ಒಂದ್ ಸುದ್ದಿ ಇತ್ತೀಚ್ಗೆ "ದಿ ಹಿಂದೂ" ಪೇಪರ‍್ನಾಗ್ ಬಂದೈತೆ ಗುರೂ! ಅಲ್ಲಾ... ನಮ್ ನಾಡಲ್ಲಿ ಈ ಮಟ್ಟಿಗೆ ಏಳೋರು ಕೇಳೋರು ಇಲ್ದಂಗ್ ಆಗೋಯ್ತಾ? ನಮ್ ಪೊಲೀಸು, ಕಾಡಾಪೀಸೋರು ಎಲ್ಲಾ ಏನ್ ಕಳ್ಳೆಪುರಿ ತಿಂತಾ ಔರಾ ಅಂತಾ ನಾಡ್ ಜನವೆಲ್ಲಾ ಉರ‍್ಕೊಂಡ್ ಎಗುರ್ ಬೀಳ್ತಾ ಔರಂತೆ ಗುರೂ!


ರಕ್ಸಿತ ಅರಣ್ಯ ಪ್ರದೇಸ!


ಈ ಬಂಡೀಪುರ ಅನ್ನೋದೇ ಒಂಥರಾ ಆನೆ, ಕಾಡ್‍ಕ್ವಾಣ, ಉಲಿ, ಜಿಂಕೆ, ಆವು ಅಂತಾ ಪಿರಾಣಿಗಳಿಗೆ ಸ್ವರ್ಗಾ ಇದ್ದಂಗೆ. ಇವೆಲ್ಲಾ ದೇಸುದ್ ಸಂಪತ್ತು ಅಂತಾ ಇವುನ್ನ ಕಾಪಾಡ್ಕೊಂಬೇಕು ಅಂತಾನೇ ಇಡೀ ಕಾಡುನ್ನ ರಕ್ಸಿತ ಪ್ರದೇಸ ಅಂತಾ ಮಾಡವ್ರೆ. ಅಲ್ಲಿ ಅರಣ್ಯ ಇಲಾಖೆಯೋರು ಇರೋ ೯೯೦ ಚ.ಕೀ ಜಾಗದಲ್ಲಿರೋ ೩೨ ಚ.ಕೀ ಅಷ್ಟ್ ಜಾಗಾನ ಪ್ರವಾಸೋದ್ಯಮಕ್ಕೆ ಅಂತಾ ಬುಟ್ಕಂಡವ್ರೆ. ಆದ್ರೆ ಗುಂಡ್ರೆ, ಬೇಗೂರ್ ಅನ್ನೋ ಕಾಡ್ ಪ್ರದೇಶಕ್ಕೆ ಕೇರಳದ್ ಕಡೆಯಿಂದ ಉಂಡಾಡಿ ದನಗೋಳಂಗೆ ಮಜಾ ಮಾಡಕ್ಕೆ ಜನುಗೋಳ್ ಬಂದ್ ಓಯ್ತಿರ್ತಾರಂತೆ. ಇಂಗ್ ಬರೋರಿಂದ ಇಲ್ಲಿ ಕಾಡು ಪ್ರಾಣಿಗಳ ನೆಮ್ಮದಿ ಎಕ್ಕುಟ್ ಓಗಿದೆಯಂತೆ. ಅದೂ ಅಲ್ದೆ ಅಂಗ್ ಬರೋರ ಪ್ರಾಣುಕ್ ಏನಾರ ಎಚ್ಚೂ ಕಮ್ಮಿ ಆಯ್ತೂಂದ್ರೆ ನಾಳೆ ಅದುಕ್ ಯಾರ್ ಒಣೆ ಅಂತಾ. ಇದ್ಯಾಕೋ ಸರೀಗಿಲ್ಲಾ ಗುರೂ! ಇಂಗ್ ಬರೋ ಬಡ್ಡೆತ್ತವುನ್ನ ಕಂಟ್ರೋಲ್ ಮಾಡಕ್ಕೆ ಕೇರಳ ಸರ್ಕಾರದೋರು ಕ್ರಮಾ ತೊಗೊಂಬೇಕು. ಇಲ್ಲಾ ಅಂದ್ರೆ ನಮ್ ಕಾಡು ಕಾಯೋ ಪೋಲೀಸ್ನೋರಾದ್ರೂ ಸರಿಯಾದ್ ಕಡೆ ಅಂದ್ರೆ ಎಲ್ಡೂ ರಾಜ್ಯಾ ಸೇರೋ ಸೇತುವೇ ತಾವ ಬಲವಾದ ಕಾವಲು ಹಾಕ್ಬೇಕು. ಮೊನ್ ಮೊನ್ನೆ ತಾನೆ ಕೇರಳುದ್ ಸರ್ಕಾರದೋರು ಕರ್ನಾಟಕದ್ ಕಾಡು, ಕಾಡುಪ್ರಾಣಿ ಎಲ್ಲಾ ಆಳಾದ್ರೂ ಪರ್ವಾಗಿಲ್ಲಾ, ರಾತ್ರಿ ಓಡಾಡಕ್ ರಸ್ತೇಲಿ ಬುಡಬೇಕು ನಮ್ ಗಾಡಿಗೋಳ್ಗೆ ಅವಕಾಸ ಕೊಡಬೇಕು ಅನ್ನೋ ಕೂಗೆಬ್ಬಿಸಿ ಲಾಬಿ ಮಾಡ್ತಾ ಇದ್ದುದ್ ಸುದ್ದಿ ಬಂದಿತ್ತು. ಈಗ್ ನೋಡುದ್ರೆ ಜನ್ರು ಕಾಟ. ಒಟ್ನಲ್ಲಿ ನಮ್ ಕರ್ನಾಟಕದಾಗಿರೋ ನೀರು, ಕಾಡು, ರೋಡು ಎಲ್ಲಾನೂ ಒಳ್ಳೇ ತ್ವಾಟದಪ್ಪನ್ ಚತ್ರುದ್ ಥರಾ ಆಗೋಗದೇ ಅಂತಾ ಜನ ಮುನುಸ್ಕೊಂಡ್ ಕುಂತವ್ರೇ ಗುರೂ!

ಸಿ.ಬಿ.ಎಸ್.ಇ ಎಂಬ ನೆಲದ ಬೇರು ಸಡಿಲಿಸೋ ಪದ್ದತಿ !!

ಕರ್ನಾಟಕ ರಾಜ್ಯ ಸರ್ಕಾರದ, ನಗರಾಭಿವೃದ್ಧಿ ಮಂತ್ರಿಗಳಾದ ಶ್ರೀ ಸುರೇಶ್ ಕುಮಾರ್ ಅವ್ರು ಮೊನ್ನೆ ಒಂದು ಹೇಳಿಕೆ ಕೊಟ್ಟು ಶೀಘ್ರದಲ್ಲೇ ಕರ್ನಾಟಕದ ಎಲ್ಲಾ ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಖಾಸಗಿಯೋರ ಜೊತೆ ಸೇರ್ಕೊಂಡು ಸಿ.ಬಿ.ಎಸ್.ಇ ಶಾಲೆಗಳನ್ನು ಆರಂಭಮಾಡ್ತೀವಿ ಅಂದಿದ್ದಾರೆ. ಕರ್ನಾಟಕ ಸರ್ಕಾರದ ಈ ನಿಲುವು ನಾಡಿನ ಶಿಕ್ಷಣ ವ್ಯವಸ್ಥೆಯನ್ನು, ನಾಳಿನ ಪೀಳಿಗೆಯನ್ನು ವಿನಾಶದೆಡೆಗೆ ಒಯ್ಯುತ್ತಿರುವ ನಡೆಯಾಗಿದೆ.

ನಗರಾಭಿವೃದ್ಧಿ ಸಚಿವಾಲಯ ವ್ಯಾಪ್ತಿ ಮೀರಿದೆಯೇ?
ಇಷ್ಟಕ್ಕೂ ಒಂದು ನಗರಪಾಲಿಕೆಯ ವ್ಯಾಪ್ತಿ ಏನು? ಹೊಣೆಗಾರಿಕೆ ಏನು? ಎಂಬುದನ್ನೆಲ್ಲಾ ಅರಿತೇ ರಾಜ್ಯಸರ್ಕಾರ ಇಂತಹ ನಿಲುವಿಗೆ ಬಂದಿದೆಯೇ ಎಂಬ ಅಚ್ಚರಿ ಮೂಡುತ್ತದೆ. ಏಕೆಂದರೆ ಕರ್ನಾಟಕ ಶಿಕ್ಷಣ ಇಲಾಖೆಯ ಎಲ್ಲೆಯನ್ನು ನಗರ ಪಾಲಿಕೆ, ನಗರಾಭಿವೃದ್ಧಿ ಸಚಿವಾಲಯ ಮೀರುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಮಾನ್ಯ ಶಿಕ್ಷಣ ಮಂತ್ರಿಗಳಿಗೇಕೋ ಈ ವಿಷಯ ತೋಚಿದಂತಿಲ್ಲ. ಭಾರತೀಯ ಒಕ್ಕೂಟದಲ್ಲಿ ರಾಜ್ಯಗಳ ಹಿಡಿತದಲ್ಲಿರಬೇಕಾದ ಶಿಕ್ಷಣ ಕ್ಷೇತ್ರವು ಈಗಾಗಲೇ ಕಂಕರೆಂಟ್ ಪಟ್ಟಿಯಲ್ಲಿದೆ. ಕರ್ನಾಟಕ ಸರ್ಕಾರದ ಇಂದಿನ ನಡೆ ಶಿಕ್ಷಣವನ್ನು ಕೇಂದ್ರದ ಪಟ್ಟಿಗೆ ಸೇರಿಸಲು ತುದಿಗಾಲಲ್ಲಿ ನಿಂತಿರುವಂತಿದೆ.

ಕಟ್ಟಬೇಕಾದೋರೆ ಕೆಡವೋಕ್ಕೆ ನಿಂತಂತೆ!
ನಾಡಿನ ನಾಳೆಗಳು ಚೆನ್ನಾಗಿರಬೇಕು ಅಂದ್ರೆ ನಾಡಿನ ಶಿಕ್ಷಣದ ಗುಣಮಟ್ಟ ಚೆನ್ನಾಗಿರಬೇಕು. ಇದರರ್ಥ ನಮ್ಮ ವ್ಯವಸ್ಥೆಯನ್ನು ಅಷ್ಟೊಂದು ಚೆನ್ನಾಗಿಸುವ ಹೊಣೆಗಾರಿಕೆ ಸರ್ಕಾರದ್ದು. ಆದರೆ ಗುಣಮಟ್ಟದ ಈ ಮಾತನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳೋದು ಒಂದು ಸರ್ಕಾರ ತನ್ನ ಜನಕ್ಕೆ ಮಾಡೋ ದೊಡ್ಡ ಮೋಸ. ಯಾಕಂದ್ರೆ ತನ್ನ ನಿಲುವಿನಿಂದಾಗಿ ಕರ್ನಾಟಕ ಸರ್ಕಾರ, ಕನ್ನಡನಾಡಿನ ಶಿಕ್ಷಣ ವ್ಯವಸ್ಥೆ ಕಳಪೆ, ಗುಣಮಟ್ಟದ ಶಿಕ್ಷಣ ಅಂದ್ರೆ ಅದು ಸಿ.ಬಿ.ಎಸ್.ಇ ಪದ್ದತೀದು, ಅದಕ್ಕೆ ಆ ಕಲಿಕಾ ಪದ್ದತಿಗೇ ನಮ್ಮ ಪ್ರೋತ್ಸಾಹ ಅನ್ನುತ್ತಾ ಇದೆ. ಇದು ರಾಜ್ಯ ಪಠ್ಯಕ್ರಮದ ಶಿಕ್ಷಣವನ್ನು ಕಟ್ಟಬೇಕಾದ ಸರ್ಕಾರವೇ ತನಗೆ ಉತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಕಟ್ಟೋಕೆ ಯೋಗ್ಯತೆ ಇಲ್ಲಾ ಅಂತಾ ಡಂಗೂರಾ ಸಾರಿದ ಹಾಗಲ್ವಾ? ಕಳೆದ ವರ್ಷಾ ಇದೇ ಸರ್ಕಾರದ ಶಿಕ್ಷಣ ಸಚಿವರು ಕೇಂದ್ರೀಯ ಪಠ್ಯಕ್ರಮಗಳಲ್ಲಿ ದಯಮಾಡಿ ಕನ್ನಡವನ್ನು ಬೋಧಿಸಿ ಎಂದು ಗೋಗರೆದಿದ್ದರು. ಇಷ್ಟಕ್ಕೂ ಸರ್ಕಾರಕ್ಕೆ, ಶಿಕ್ಷಣ ಇಲಾಖೆಗೆ ನಾಡಿನ 85% ಮಕ್ಕಳು ಕಲೀತಾ ಇರೋ ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಯನ್ನು ಉತ್ತಮ ಪಡಿಸಬೇಕು, ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ನಾಡಿನ ಮಕ್ಕಳಿಗಾಗಿ ರೂಪಿಸಬೇಕು ಅಂತಾ ಅನ್ನುಸ್ತಾನೆ ಇಲ್ಲಾ ಅಂದ್ರೆ ಅದಕ್ಕಿಂತ ದುರಂತಾ ಇನ್ನೊಂದಿದ್ಯಾ? ನಮ್ಮ ಕಲಿಕಾ ವ್ಯವಸ್ಥೆಯ ಗುಣಮಟ್ಟದಲ್ಲಿ ಉಳಿದವಕ್ಕೆ ಸಾಟಿಯಾಗುವಂತೆ ಮಾಡೋದ್ರು ಬಗ್ಗೆ ಯೋಚಿಸದೆ ಇಡೀ ನಾಡಿಗೆ ಪಲಾಯನವಾದದ ದೊಡ್ಡ ಆದರ್ಶಾನ ಸರ್ಕಾರವೇ ತೋರಿಸಿಕೊಡ್ತಿದೆ. ಈ ನಡೆಯ ಮೂಲಕ ಸರ್ಕಾರ ನಾಡಿನ ಜನಕ್ಕೆ ಗುಣಮಟ್ಟದ ರಾಜ್ಯ ಪಠ್ಯಕ್ರಮವನ್ನು ಹೊಂದಿರುವ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಬೇಕಾದ ತನ್ನ ಮೂಲಭೂತ ಹೊಣೆಗಾರಿಕೆಯಿಂದ ತಲೆತಪ್ಪಿಸಿಕೊಂಡು ಓಡ್ತಾಯಿದೆ, ಅಷ್ಟೆ.

ಸಿ.ಬಿ.ಎಸ್.ಇ ಕಲಿಕಾ ಪದ್ದತಿ!
ಸೆಂಟ್ರಲ್ ಬೋರ್ಡ್ ಫಾರ್ ಸೆಕಂಡರಿ ಎಜುಕೇಷನ್ ಎಂಬುದರ ಸಂಕ್ಷಿಪ್ತ ರೂಪ ಸಿ.ಬಿ.ಎಸ್.ಇ. ಇದರ ಪಠ್ಯಕ್ರಮಾನ ಕೇಂದ್ರೀಯ ಪಠ್ಯಕ್ರಮ ಅಂತಾನೂ ಅಂತಾರೆ. ಈ ಶಿಕ್ಷಣ ಪದ್ದತಿಯ ಮೂಲೋದ್ದೇಶಗಳಲ್ಲಿ ಪ್ರಮುಖವಾದದ್ದು, ಕೇಂದ್ರಸರ್ಕಾರಿ ನೌಕರರ/ ವರ್ಗಾವಣೆಗೆ ಈಡಾಗಬಲ್ಲಂತ ಕೆಲಸಗಳಲ್ಲಿರುವವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲೀ ಅನ್ನುವುದು. ಇದನ್ನು ಸರ್ಕಾರ ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ.

ಹಿಂದಿ ಹೇರಿಕೆಯ ಪ್ರಬಲ ಅಸ್ತ್ರ!
ಪ್ರಪಂಚದ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯ ಮೂಲ ಇರೋದೆ ಸ್ಥಳೀಯವಾದದ್ದನ್ನು, ಮಕ್ಕಳಿಗೆ ಪರಿಚಿತವಾದ ವಸ್ತುಗಳನ್ನು ಬಳಸಿ ಕಲಿಸೋದು ಪರಿಣಾಮಕಾರಿ ಅನ್ನೋದ್ರಲ್ಲಿ. ಇವತ್ತು ಸರ್ಕಾರ ಸಿ.ಬಿ.ಎಸ್.ಇ ಪದ್ದತಿಗೆ ಮಣೆ ಹಾಕೋದ್ರ ಮೂಲಕ ಈ ಮೂಲಭೂತ ನಿಯಮಕ್ಕೇ ಕೊಡಲಿ ಪೆಟ್ಟು ಹಾಕಲು ಮುಂದಾಗಿದೆ. ಯಾಕಂದ್ರೆ ಕರ್ನಾಟಕದ ಮಕ್ಕಳ ಕಲಿಕೆಯಲ್ಲಿ ಕಮಲ, ಬಸವ ಹೆಚ್ಚು ಪರಿಣಾಮಕಾರಿಯೇ ಹೊರತು ಶೀತಲ್, ಚಂಚಲ್ ಅಲ್ಲಾ. ಇನ್ನು ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಏನು ಕಲಿಸ್ತಾರೆ ಅಂತಾ ಆ ಪದ್ದತಿಯ ಪುಸ್ತಕಗಳನ್ನು ನೋಡಿದರೇ ತಿಳಿಯುತ್ತೆ. ಇಲ್ಲಿನ ಕಲಿಕಾ ಮಾಧ್ಯಮ ಇಂಗ್ಲಿಷ್. ಪ್ರಿ-ನರ್ಸರಿಯಿಂದಲೇ ಹಿಂದಿ ಕಡ್ಡಾಯ. ಎಲ್.ಕೆ.ಜಿ ಮಕ್ಕಳಿಗೆ ಇರೋ ಅತೀ ದಪ್ಪದ ಪುಸ್ತಕ ಹಿಂದೀದು. ಕನ್ನಡನಾಡಲ್ಲೇ ಇದ್ದರೂ, ಕನ್ನಡಿಗರೇ ಆಗಿದ್ದರೂ ಇಲ್ಲಿ ಕನ್ನಡದ ಅ,ಆ,ಇ,ಈ ಕಲಿಯೋಕೆ ಶುರುವಾಗೋದು ಐದನೇ ತರಗತಿಯಲ್ಲಿ. ಆರನೇ ತರಗತೀಲಿ ಕ,ಕಾ,ಕಿ,ಕೀ ಅನ್ನೋ ಕಾಗುಣಿತ, ಎಂಟನೇ ತರಗತಿ ಆದ ಕೂಡಲೇ ಅದಕ್ಕೆ ಎಳ್ಳುನೀರು. ಐದನೇ ತರಗತಿಯಿಂದ ಕನ್ನಡ ಕಲಿಯೋದೂ ಕೂಡಾ ಕಡ್ಡಾಯ ಏನಲ್ಲಾ. ಕನ್ನಡ ನಾಡಲ್ಲಿರೋ ವಿದ್ಯಾರ್ಥಿಗಳು ಭಾಷೆಯಾಗಿ ತಮಿಳು, ತೆಲುಗು, ಗುಜರಾತಿ, ಮರಾಠಿ ಹೀಗೆ ಯಾವ ಭಾಷೇನಾದ್ರೂ ಕಲೀಬೌದು. ಹಿಂದೊಮ್ಮೆ ಪಂಜಾಬು ತನ್ನಲ್ಲಿನ ಸಿ.ಬಿ.ಎಸ್.ಇ ಶಾಲೆಗಳಲ್ಲಿ ಪಂಜಾಬಿ ಭಾಷೆಯನ್ನು ಕಡ್ಡಾಯ ಮಾಡಿ ಅಂತಾ ಬೋರ್ಡನ್ನು ಕೇಳ್ಕೊಂಡಿತ್ತು. ಆದ್ರೆ ಅಂತಹ ಅವಕಾಶವನ್ನು ನಿರಾಕರಿಸಲಾಗಿತ್ತು. ಇಂಥಾ ಪದ್ದತಿಯಿಂದಾಗೋ ಪರಿಣಾಮಾನಾದ್ರೂ ಸರ್ಕಾರ ಊಹೆ ಮಾಡೀತಾ? ನಾಡಲ್ಲಿ ಈಗಿರೋ ಪರಭಾಷಿಕರನ್ನು ಮುಖ್ಯವಾಹಿನಿಯಿಂದ ಇದು ದೂರಮಾಡೋದಿಲ್ವಾ? ಕನ್ನಡದ ಮಕ್ಕಳನ್ನೇ ಕನ್ನಡದಿಂದ ದೂರಾ ಮಾಡೋದಿಲ್ವಾ? ಭಾರತದ ವೈವಿಧ್ಯತೆಯನ್ನೇ ಅಳಿಸಿಹಾಕುವ ನಿಟ್ಟಿನಲ್ಲಿ ಇದು ಇದ್ದು, ಸಿ.ಬಿ.ಎಸ್.ಇ ಕಲಿಕಾ ಪದ್ದತಿಯ ಶಾಲೆಯನ್ನು ಪ್ರೋತ್ಸಾಹಿಸುವ/ ವಹಿಸಿಕೊಳ್ಳುವ ಮೂಲಕ ಕನ್ನಡಿಗರ ಮೇಲೆ ಹಿಂದೀ ಹೇರಿಕೆಯನ್ನು ಕನ್ನಡಿಗರ ಸರ್ಕಾರವೇ ಮಾಡಲು ಮುಂದಾಗ್ತಿರೋದು ಕಾಣ್ತಾಯಿದೆ.

ಸಿ.ಬಿ.ಎಸ್.ಇ ಎಂಬ ನೆಲದ ಬೇರು ಸಡಿಲಿಸೋ ಪದ್ದತಿ!
ಇನ್ನು ಈ ಶಾಲೆಗಳಲ್ಲಿ ಕಲಿಸೋ ಇತಿಹಾಸ, ಸಮಾಜದ ಶಾಸ್ತ್ರಗಳಲ್ಲಿ ಕನ್ನಡನಾಡಿಗೆ ಎಳ್ಳಷ್ಟು ಮಹತ್ವವೂ ಇಲ್ಲ. ನಮ್ಮ ಇತಿಹಾಸ, ನಮ್ಮ ಆಚರಣೆ, ನಂಬಿಕೆಗಳು, ಪದ್ದತಿಗಳು, ಪರಂಪರೆಗಳ ಬಗ್ಗೆ ಸಣ್ಣ ಪರಿಚಯವನ್ನೂ ಕೂಡಾ ಇವು ನೀಡುತ್ತಿಲ್ಲ. ಕೆಲದಿನಗಳ ಹಿಂದೆ ಮಾಧ್ಯಮಗಳಲ್ಲಿ ಒಂದು ವರದಿ ಬಂದಿತ್ತು. ಕನ್ನಡವೆನ್ನುವುದು ಒಂದು ವಿಚಿತ್ರವಾದ ನುಡಿಯೆನ್ನುವಂತೆ ಕೇಂದ್ರೀಯ ಪಠ್ಯಕ್ರಮದಲ್ಲಿ ಬರೆಯಲಾಗಿದೆ ಎಂಬುದನ್ನು ಆ ವರದಿ ಬಯಲು ಮಾಡಿತ್ತು. ಇಂತಹ ಪಠ್ಯಗಳಿಂದ ಕನ್ನಡದ ಮಕ್ಕಳಲ್ಲಿ ಕೀಳರಿಮೆ ಹುಟ್ಟುವುದಿಲ್ಲವೇ? ನಾನು, ನನ್ನ ಹಿರಿಯರು, ನನ್ನ ನಾಡು, ನನ್ನ ನುಡಿಗಳೆಲ್ಲಾ ಕೀಳು ಎನ್ನುವ ಮನೋಭಾವನೆಗೆ ಕಾರಣವಾಗುವುದಿಲ್ಲವೇ? ನಮ್ಮ ಮುಂದಿನ ಪೀಳಿಗೆಯನ್ನೇ ನಮ್ಮ ಇತಿಹಾಸ, ಸಂಸ್ಕೃತಿ, ಪರಂಪರೆಗಳಿಂದ ದೂರ ಹೋಗುವಂತೆ ಮಾಡೋದಿಲ್ವಾ? ಒಟ್ಟಿನಲ್ಲಿ ಸರ್ಕಾರದ ಈ ನಿಲುವು ನಿಜಕ್ಕೂ ಮುಂದಿನ ದಿನಗಳಲ್ಲಿ ಕನ್ನಡದ ಮಕ್ಕಳನ್ನು ಈ ನೆಲದ ಸಂಸ್ಕೃತಿ, ಪರಂಪರೆಗಳಿಂದ ದೂರಮಾಡಲಿದೆ. ನಮ್ಮತನದ ನಮ್ಮ ಬುನಾದಿಯ ಬೇರುಗಳನ್ನೇ ಇದು ಸಡಿಲಗೊಳಿಸಲಿದೆ.

ಕರ್ನಾಟಕ ಸರ್ಕಾರ ಮತ್ತು ಅದನ್ನು ನಡೆಸುತ್ತಿರೋ ಭಾರತೀಯ ಜನತಾ ಪಕ್ಷ ತನ್ನ ಸ್ವಹಿತಾಸಕ್ತಿಗಳನ್ನು ಈ ವಿಷಯದಲ್ಲಾದರೂ ಬದಿಗಿಟ್ಟು ತನ್ನ ನಿಲುವನ್ನು ಬದಲಿಸಬೇಕಾಗಿದೆ. ರಾಜ್ಯಸರ್ಕಾರದ ಶಿಕ್ಷಣ ಸಚಿವರು ಇದರ ವಿರುದ್ಧ ದನಿಯೆತ್ತಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಬೇಕಾಗಿದೆ. ನಾಡಿನ ಶಿಕ್ಷಣತಜ್ಞರುಗಳು, ಶಿಕ್ಷಣ ಇಲಾಖೆಯೋರು, ಬುದ್ಧಿಜೀವಿಗಳು, ಪ್ರಜ್ಞಾವಂತ ನಾಗರಿಕರು ಸರ್ಕಾರದ ಇಂದಿನ ನಿಲುವನ್ನು ಬದಲಾಯಿಸಲು ಸರ್ಕಾರದ ಒತ್ತಾಯಿಸಬೇಕಾಗಿದೆ.

ಹಿಂದಿಯ "ಕೈಟ್" ಹಾರಾಟಕ್ಕೆ ತಕರಾರೇಕೆ?

ಮೊನ್ನೆ ಶುಕ್ರವಾರ (21.05.2010) ಹಿಂದಿ ಭಾಷೆಯ "ಕೈಟ್ಸ್" ಅನ್ನೋ ಸಿನಿಮಾ ಎಲ್ಲಾ ಕಡೆ ಬಿಡುಗಡೆ ಆಯ್ತು. ಕರ್ನಾಟಕದಲ್ಲಿ ಮಾತ್ರಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೋರು ವಿರೋಧಿಸಿದ್ದರಿಂದ ಅನೇಕ ಕಡೆ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಈ ವಿರೋಧಕ್ಕೆ "ಕೈಟ್ಸ್" ಚಿತ್ರದ ವಿತರಕರು ಬಿಡುಗಡೆಯ ನಿಯಮ ಉಲ್ಲಂಘಿಸಿದ್ದೇ ಮುಖ್ಯಕಾರಣವಾಗಿತ್ತು. ಕಡೆಗೆ ಈ ಚಿತ್ರದ ವಿತರಕರು ವಾಣಿಜ್ಯ ಮಂಡಳಿಯ ಜೊತೆ ಮಾತುಕತೆಗೆ ಮುಂದಾಗಿ ತಮ್ಮದು ತಪ್ಪಾಯ್ತು ಅಂತಂದು ನಿಯಮದಂತೆ ಚಿತ್ರ ಬಿಡುಗಡೆಗೆ ಒಪ್ಪುದ್ರು. ಹಾಗಾಗಿ ನಿಯಮದಾಚೆಗೂ ಮೂರು ನಾಕು ಕಡೆ ಹೆಚ್ಚಿಗೆ ಬಿಡುಗಡೆಗೂ ಒಪ್ಪಿಗೆ ಪಡ್ಕೊಂಡ್ರು. ಒಟ್ನಲ್ಲಿ ಸದ್ಯಕ್ಕೆ ಒಳ್ಳೇ ಅಂತ್ಯಾನೆ ಕಂಡಿದೆ.

ಏನೀ ನಿಯಮ? ಯಾಕೀ ವಿರೋಧಾ?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೋರು ಕನ್ನಡ ಚಿತ್ರಗಳ ಮಾರುಕಟ್ಟೆ ಕಾಪಾಡೋ ದೃಷ್ಟಿಯಿಂದ ಪರಭಾಷಾ ಚಿತ್ರಗಳ ಬಿಡುಗಡೆಯ ಮೇಲೆ ಕಡಿವಾಣ ಹಾಕೋಕೆ ಅಂತ ಹಲವು ನಿಯಮಗಳನ್ನು ರೂಪಿಸಿದ್ದಾರೆ. ಅದರಂತೆ ಕನ್ನಡೇತರ ಚಿತ್ರಗಳು ಕರ್ನಾಟಕದಾದ್ಯಂತ ಒಟ್ಟು 17+4 ಚಿತ್ರಮಂದಿರಗಳಿಗಿಂತ ಹೆಚ್ಚು ಕಡೆ ಬಿಡುಗಡೆ ಆಗುವಂತಿಲ್ಲ. ಈ ನಿಯಮಕ್ಕೆ ವಾಣಿಜ್ಯ ಮಂಡಳಿಯ ಸದಸ್ಯರುಗಳು ಒಳಗಾಗ್ತಾರೆ. ಆದ್ರೆ ಈ ನಿಯಮ ಮೀರೋ ಕೆಲಸ ಆಗಾಗ ಆಗ್ತಾ ಇರುತ್ತೆ. ಪರಭಾಷೆಯ ದೊಡ್ಡ ಚಿತ್ರಗಳು ಬಿಡುಗಡೆ ಆಗೋ ಸಂದರ್ಭದಲ್ಲೆಲ್ಲಾ ಇದು ಮತ್ತಷ್ಟು ತೀವ್ರತೆ ಪಡ್ಕೊಳುತ್ತೆ. ಹಿಂದೆ ಅನೇಕ ಚಿತ್ರಗಳ ಬಿಡುಗಡೆ ಕಾಲದಲ್ಲಿ ಹೀಗೆ "ಜಂಟಲ್‍ಮನ್ ಅಗ್ರಿಮೆಂಟ್"ನ ಧಿಕ್ಕರಿಸೋದು ನಡೆದಿದೆ. ಈ ಬಾರಿಯೂ ಹಾಗೇ ನಿಯಮವನ್ನು ಗಾಳಿಗೆ ತೂರಿ "ಕೈಟ್ಸ್" ಸಿನಿಮಾನ ಕರ್ನಾಟಕದಲ್ಲಿ 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಮುಂದಾಗಿದ್ದರಿಂದ ವಿರೋಧ ಹುಟ್ಟಿತ್ತು.

ಹೀಗೆ ಮಾಡೋದು ಸರೀನಾ?

ಇಂಥಾ ಒಂದು ಪ್ರಶ್ನೆ ಹುಟ್ಟೋದು ಸಹಜ. ನಮ್ಮಲ್ಲೇ ಕೆಲಜನರಿಂದ "ಒಂದು ಸಿನಿಮಾ ತೆಗೆಯೋನು ಅವನಿಷ್ಟ ಬಂದಷ್ಟು ಕಡೆ ಬಿಡುಗಡೆ ಮಾಡ್ಲಿ, ಚೆನ್ನಾಗಿದ್ರೆ ಓಡುತ್ತೆ, ಇವರೂ ಗುಣಮಟ್ಟದ ಸಿನಿಮಾ ತೆಗೀಲಿ, ಕಲೆಗೆ ಭಾಷೆ ಇಲ್ಲಾ..." ಮುಂತಾದ ಉದಾರತೆಯ ಉಪದೇಶದ ಆಣಿಮುತ್ತುಗಳು ಉದುರೋದೂ ಸಹಜ. ಆದರೆ ಪ್ರತಿ ಪ್ರದೇಶವೂ ತನ್ನ ಅನನ್ಯತೆಯನ್ನು ಉಳಿಸಿಕೊಳ್ಳೋಕೆ ಅಗತ್ಯವಿರೋ ವ್ಯವಸ್ಥೆ ಮಾಡಿಕೊಳ್ಳದೇ ಇದ್ದರೆ ತನಗಿಂತ ಬಲಶಾಲಿಗಳಾದ ಪರಕೀಯರ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತೆ. ಈಗ ನೋಡಿ, ಕರ್ನಾಟಕದಲ್ಲಿ ಇರೋದೇ ಸುಮಾರು 600 ಚಿತ್ರಮಂದಿರಗಳು. ಅದರಲ್ಲಿ 120 ಚಿತ್ರಮಂದಿರಗಳನ್ನು ಇದೊಂದೇ ಸಿನಿಮಾ ಆಕ್ರಮಿಸಿಕೊಂಡು ಬಿಟ್ರೆ ಕನ್ನಡ ಚಿತ್ರಗಳ ಗತಿ ಏನು? ಈಗಾಗಲೇ ಓಡ್ತಿರೋ ಆಪ್ತರಕ್ಷಕ, ಪೃಥ್ವಿ, ನಾನು ನನ್ನ ಕನಸುವಿನಂತಹ ಯಶಸ್ವಿ ಚಿತ್ರಗಳು ಎತ್ತಂಗಡಿ ಆಗಲ್ಲಾ ಅನ್ನೋಕೆ ಏನು ಭರವಸೆ? ಇನ್ನು ಹೊಸದಾಗಿ ಬಿಡುಗಡೆ ಆದ ಶಂಕರ್ ಐ.ಪಿ.ಎಸ್, ನೂರು ಜನ್ಮಕೂ ಥರದ ಚಿತ್ರಗಳಿಗೆ ಚಿತ್ರಮಂದಿರಗಳು ಸಿಕ್ಕಾವಾ? ಹಿಂದಿ, ತಮಿಳು, ತೆಲುಗು, ಇಂಗ್ಲೀಷ್ ಸೇರಿದಂತೆ ಪರಭಾಷಾ ಚಿತ್ರಗಳಿಗೆ ಕರ್ನಾಟಕ ಪ್ರಾಥಮಿಕ ಮಾರುಕಟ್ಟೆಯಲ್ಲ. ಆ ಕಾರಣದಿಂದಲೇ ಸಮಂಜಸವಲ್ಲದ ಮಾರುಕಟ್ಟೆಗಳ ತಂತ್ರ ಬಳಸಬಲ್ಲರು. ಆದರೆ ಕನ್ನಡ ಚಿತ್ರಗಳಿಗೆ ಕರ್ನಾಟಕವೇ ಮೂಲ ಮಾರುಕಟ್ಟೆ ಆಗಿದೆ. ಹಾಗಾಗಿ ಇಲ್ಲಿ ಕನ್ನಡ ಚಿತ್ರಗಳನ್ನು ಕಾಪಾಡೋ ಕೆಲಸಕ್ಕೆ ಕನ್ನಡಿಗರು ಸಂಪೂರ್ಣ ಬೆಂಬಲ ಕೊಡಬೇಕಾಗಿದೆ, ಅಲ್ವಾ ಗುರೂ?

ಈ "ನೋ ಪಾರ್ಕಿಂಗ್" ಬೋರ್ಡು ಮಸ್ತಾಗಿದೆ ನೋಡಿ!



ಇವು ನಮ್ ಬೆಂಗಳೂರಲ್ಲೇ ಒಂದು ಬಡಾವಣೇಲಿ ಕಾಣೋ "ನೋ ಪಾರ್ಕಿಂಗ್" ಬೋರ್ಡುಗಳು ಗುರೂ! ಬೋ ಅಚ್ಚರಿ ಜೊತೇಗೆ ಖುಶಿ ಆಯ್ತು ಇವುನ್ನ ನೋಡಿ. ಯಾರಪ್ಪಾ ಈ ಕೆಲ್ಸ ಮಾಡಿರೋರು ಅಂತಾ ಇಚಾರ್ಸಮಾ ಅಂತಾ ಮನೆ ಯಜಮಾನ್ರುನ್ನ ಕೇಳುದ್ರೆ ಅವ್ರೇಳಿದ್ ಇಷ್ಟು.

ಬೆಂಗಳೂರಾಗೆ ಯಾವ ರೋಡಲ್ ನೋಡುದ್ರೂಮೆ ಎಲ್ಲಾರ್ ಮನೆ ಗೇಟಿನ್ ಮೇಲೆ ನೋ ಪಾರ್ಕಿಂಗ್ ಅನ್ನೋ ಬೋರ್ಡು ತಗುಲಾಕಿರ್ತಾರೆ. ಇಂಥಾ ಬೋರ್ಡಲ್ಲೂ ಕನ್ನಡತನದ ನೆನಪು ಮಾಡಿಕೊಡೋ ಕೆಲಸಾನಾ ಆ ಬಡಾವಣೇಲಿರೋ ಒಂದು ಸಂಸ್ಥೆಯೋರು ಮಾಡ್ತಾ ಔರಂತೆ.. ಓದ್ ವರ್ಸಾ ಆರಂಕುಸವಿಟ್ಟೊಡಂ ನೆನೆವುದೆನ್ನಮನಂ ಬನವಾಸಿ ದೇಸಮಂ, ಎಲ್ಲಾದರೂ ಇರು ಎಂತಾದರೂ ಇರು ಕನ್ನಡವಾಗಿರು ಅನ್ನೋ ಥರದ ಕವಿವಾಣಿಗಳ್ನ ಬಳ್ಸಿ ಇಂಥಾ ಬೋರ್ಡ್ ಮಾಡಿದ್ರಂತೆ. ಈ ಸಲ ಅದೇ ಬಡಾವಣೆಯಲ್ಲಿದ್ದ ಸಿ. ಅಶ್ವತ್ ಅವರನ್ನು ನೆನಪು ಮಾಡ್ಕೊಂಡು, ಜೊತೇಲಿ ವಿಷ್ಣೂನ ನೆನುಸ್ಕೊಳ್ಳೋ ಹಾಗೆ ಬೋರ್ಡ್ ಮಾಡವ್ರೆ!

ಬಸವನಗುಡಿಯಲ್ಲೊಂದು ಕನ್ನಡದ ಗುಡಿ!

ಬೆಂಗಳೂರು ದಕ್ಷಿಣದಲ್ಲಿ ಬಸವನಗುಡಿ ಇದೆ. ಇದರಲ್ಲಿ ನರಸಿಂಹರಾಜಾ ಕಾಲೋನಿ ಅನ್ನೋ ಪ್ರದೇಶಾನೂ ಇದೆ. ಇಲ್ಲಿ ಸುಮಾರು ವರ್ಷಗಳಿಂದ ಒಂದು ಗೆಳೆಯರ ಗುಂಪು ಸೇರ್ಕೊಂಡು ಸಂಗ ಮಾಡ್ಕಂಡವ್ರೆ. ಕಟ್ಟೆ ಬಳಗ ಅಂತಾ... ಈ ಕಟ್ಟೆಬಳಗದೋರು ಇಡೀ ಬಡಾವಣೆಯಲ್ಲಿ "ಗೇಟಿನ ಮುಂದೆ ಗಾಡಿ ನಿಲ್ಲುಸ್ಬೇಡಿ" ಅನ್ನೋ ಬೋರ್ಡುನ್ನ ಹಾಕವ್ರೆ, ಅದೂ ಪುಗಸಟ್ಟೆಯಾಗಿ. ಏನ್ ಪಸಂದಾಗ್ ಕಾಣ್ತೈತೆ ಗೊತ್ತಾ ಗುರೂ? ಬರ್ರಿ, ಒಂದ್ ದಪಾ ಎನ್.ಆರ್.ಕಾಲನಿ ಒಳಗಡೆ ಓಡಾಡಿ. ಇಂಥಾ ಕೆಲ್ಸಾನಾ ನಾವೂ ನಮ್ ನಮ್ ಬಡಾವಣೇಲಿ ಮಾಡಬೌದು ಅನ್ನೋ ಸಂದೇಶಾನಾ ಈ ಜನಾ ಕೊಡ್ತಾ ಅವ್ರೇ ಗುರೂ...

ನಮ್ಮ ಜನಪ್ರತಿನಿಧಿ ನಮ್ಮೋರೇ ಆಗಿರಬೇಕಲ್ವಾ?


ಸಧ್ಯದಲ್ಲೇ ಕರ್ನಾಟಕದಿಂದ ರಾಜ್ಯಸಭೆಗೆ ಸಂಸದರನ್ನು ಆರಿಸಿಕಳಿಸಬೇಕಾಗಿದೆ. ನಮ್ಮ ನಾಡಿನ ಮೂರೂ ರಾಜಕೀಯ ಪಕ್ಷಗಳೂ ತಮ್ಮ ತಮ್ಮ ಅಭ್ಯರ್ಥಿಗಳನ್ನು ಆರಿಸೋ ಪ್ರಕ್ರಿಯೆಯಲ್ಲಿವೆ. ಇದೇ ಸಂದರ್ಭದಲ್ಲಿ `ರಾಜ್ಯಸಭೆಗೆ ಕನ್ನಡಿಗರನ್ನೇ ಆರಿಸಿ ಕಳಿಸಿ, ಇದುವರೆಗೂ ಕಳಿಸಿರೋ ಪರಭಾಷಿಕರಿಂದ ಈ ನಾಡಿನ ಹಿತ ಕಾಪಾಡಕ್ಕೆ ಆಗಿಲ್ಲಾ' ಅನ್ನೋ ಕೂಗು ಕೇಳಿಬಂದಿದೆ.

ಯಾಕೆ ಸ್ಥಳೀಯರನ್ನು ಆರಿಸಬೇಕು?
ಭಾರತ, ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರೋ ದೇಶ ಅಂತ ಹೆಸರು ಹೊಂದಿದೆ. ಸಂತೋಷ. ಇಂಥಾ ಪ್ರಜಾಪ್ರಭುತ್ವದಲ್ಲಿ ಒಂದು ಪ್ರಮುಖ ಅಂಗ ಶಾಸಕಾಂಗ. ಜನಪ್ರತಿನಿಧಿಗಳು ಸೇರಿ ದೇಶಾನ ನಡ್ಸೋ ಉದ್ದೇಶ ಈ ವ್ಯವಸ್ಥೇದು. ಜನರಿಂದ, ಜನರಿಗೋಸ್ಕರ, ಜನರಿಗಾಗಿ ಅಂತನ್ನೋ ಮಾತಿಗೆ ಅರ್ಥ ಸಿಗ್ಬೇಕು ಅಂದ್ರೆ ಶಾಸಕಾಂಗ ಸಭೇಲಿ ಕೂಡೋ ನಮ್ಮ ಜನಪ್ರತಿನಿಧಿಗಳು ತಾವು ಯಾರಿಂದ ಅರಿಸಿ ಬಂದ್ರೋ ಅವರನ್ನು ಸರಿಯಾಗಿ ಪ್ರತಿನಿಧಿಸಬೇಕು.
ತಾಲೂಕು/ ಗ್ರಾಮ ಪಂಚಾಯ್ತಿಯಲ್ಲಾಗಲೀ, ವಿಧಾನಸಭೇಲಾಗಲಿ, ಲೋಕಸಭೇಲಾಗಲೀ, ರಾಜ್ಯಸಭೇಲಾಗಲೀ ನಮ್ಮುನ್ನ
ಪ್ರತಿನಿಧಿಸೋರಿಗೆ ಮೂಲಭೂತವಾಗಿ ಇರಬೇಕಾದ ಅರ್ಹತೆ ಏನಪ್ಪಾ ಅಂದ್ರೆ ನಮ್ಮ ಬದುಕು, ನಮ್ಮ ಸಮಸ್ಯೆ, ನಮ್ಮ ಅಗತ್ಯಗಳು, ನಮ್ಮ ಪರಿಸರ, ನಮ್ಮ ಸಂಪನ್ಮೂಲಗಳು... ಹೀಗೆ ನಮ್ಮದೆಲ್ಲದರ ಬಗ್ಗೆ ಅರಿವು ಇರಬೇಕಾದ್ದೇ ಆಗಿದೆ. ಇದರ ಜೊತೇಲಿ ನಮ್ಮ ಜನಕ್ಕೆ ಒಳ್ಳೇದು ಮಾಡಬೇಕು ಅನ್ನೋ ಕಾಳಜೀನೂ ಇರಬೇಕಾಗಿದೆ. ಒಟ್ಟಾರೆ ಅಂತಹ ಜನಪ್ರತಿನಿಧಿಯ ಬೇರು, ಹಿತಾಸಕ್ತಿಗಳು ಈ ನೆಲದಲ್ಲೇ ಇರಬೇಕಾದ್ದು ಅತ್ಯಂತ ಸರಳವಾದ ಮೂಲಭೂತ ಅಗತ್ಯವಾಗಿದೆ. ಯಾವ ಜನಪ್ರತಿನಿಧಿಗೆ ಕನಿಷ್ಠ ನಾವಾಡೋ ಭಾಷೇನೂ ಕಲಿಯಕ್ಕೆ ಸಾಧ್ಯವಾಗಿಲ್ಲವೋ ಅಂತಹವರು ನಮ್ಮನ್ನು ರಾಜ್ಯಸಭೇಲಿ ಸರಿಯಾಗಿ ಪ್ರತಿನಿಧಿಸಕ್ಕೆ ಸಾಧ್ಯಾನಾ? ನಿಜಕ್ಕೂ ಜನಕ್ಕೆ ಒಳ್ಳೇದು ಮಾಡಬೇಕು ಅನ್ನೋ ಮನಸ್ಥಿತಿ ನಮ್ಮ ರಾಜಕೀಯ ಪಕ್ಷಗಳಿಗೆ ಇದೆಯಾ? ಇದ್ದಿದ್ರೆ ಹೀಗೆ ಪರಭಾಷಿಕರನ್ನು ರಾಜ್ಯಸಭೇಗೆ ಪದೇ ಪದೇ ಕಳಿಸೋಕೆ ಮುಂದಾಗ್ತಾ ಇದ್ವಾ? ಹೋಗಲೀ, ಇದುವರೆಗೂ ಈ ರಾಜ್ಯಸಭಾ ಸಂಸದರು ನಾಡಿನ ಪರವಾಗಿ ಎಷ್ಟು ಸಲ ದನಿ ಎತ್ತಿದ್ದಾರೆ ಅನ್ನೋದನ್ನಾದ್ರೂ ಗಣನೆಗೆ ತೊಗೊಂಡಿದ್ದಾರಾ? ಏನಂತೀರಾ ಗುರುಗಳೇ?

IRS ವರದಿ ಹೊರಗೆಡಹಿದ ದಿಟ!


"ಭಾರತೀಯ ಓದುಗರ ಸಂಖ್ಯೆಯ ಸಮೀಕ್ಷೆ" [IRS] ನಿಯಮಿತವಾಗಿ ಪತ್ರಿಕೆಗಳ ಪ್ರಸಾರ ಸಂಖ್ಯೆಯ ಬಗ್ಗೆ ಸಮೀಕ್ಷೆ ಮಾಡ್ತಾ ವರದಿಗಳನ್ನು ಹೊರತರುತ್ತಿರುತ್ತೆ. ಇದೀಗ 2010ರ ಮೊದಲ ಮೂರು ತಿಂಗಳ ವರದಿ ಪ್ರಕಟವಾಗಿದ್ದು ನಮ್ಮ ಕರ್ನಾಟಕ ಮತ್ತು ಬೆಂಗಳೂರಿಗೆ ಸಂಬಂಧಿಸಿದ ವರದಿ ಸಕ್ಕತ್ ಆಸಕ್ತಿ ಹುಟ್ಟಿಸುತ್ತಿದೆ ಗುರೂ! ಈ ವರದೀ ಆಧಾರದ ಮೇಲೆ ಏನ್ ತೀರ್ಮಾನಕ್ ಬರ್ಬೋದಪ್ಪಾ ಅಂದ್ರೆ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ನೂರಕ್ಕೆ ಮೂವತ್ತು ಮಾತ್ರಾ ಅನ್ನೋದು ಹಸೀಸುಳ್ಳು ಅಂತಾ. ಅದೆಂಗೇ ಅಂತೀರಾ?

ಕನ್ನಡ ಪತ್ರಿಕೆಗಳ ಓದುಗರ ಸಂಖ್ಯೆ...

ಈ ವರದಿಯಂತೆ, ಕರ್ನಾಟಕದಲ್ಲಿ ಮಾರಾಟವಾಗೋ ಒಟ್ಟು ದಿನಪತ್ರಿಕೆಗಳಲ್ಲಿ ಮೊದಲ ಹತ್ತು ದಿನಪತ್ರಿಕೆಗಳ
ಓದುಗರ ಸಂಖ್ಯೆ ಸುಮಾರು 2.33 ಕೋಟಿಯಂತೆ. ಇದರಲ್ಲಿ ಕನ್ನಡ ಪತ್ರಿಕೆಗಳ ಸಂಖ್ಯೆ 2.03 ಕೋಟಿ... ಅಂದ್ರೆ ನೂರಕ್ಕೆ 89.80%.

ಹಾಗೇ ಬೆಂಗಳೂರಲ್ಲಿ ಮಾರಾಟವಾಗೋ ಪತ್ರಿಕೆಗಳ ಓದುಗರ ಸಂಖ್ಯೆ 44.46 ಲಕ್ಷಗಳು. ಇದ್ರಲ್ಲಿ ಕನ್ನಡದ ಪತ್ರಿಕೆಗಳನ್ನು ಓದೋರ ಸಂಖ್ಯೆ 30.79 ಲಕ್ಷ ಗುರೂ! ಇದರರ್ಥ ನೂರಕ್ಕೆ 69.25% ಜನ ಓದುಗರು ಕನ್ನಡ ಪತ್ರಿಕೇನೆ ಓದೋದು. ಇನ್ನು ಡೆಕ್ಕನ್ ಹೆರಾಲ್ಡ್, ಟೈಮ್ಸ್, ಹಿಂದೂ ಪತ್ರಿಕೆಗಳನ್ನು ಓದೋ ಕನ್ನಡಿಗರ ಲೆಕ್ಕಾನೂ ತೊಗೊಂಡ್ರೆ... ಬೆಂಗಳೂರಲ್ಲಿ ಕನ್ನಡದವರ ಸಂಖ್ಯೆ ನೂರಕ್ಕೆ ಏನಿಲ್ಲಾ ಅಂದ್ರೂ 80ಕ್ಕಿಂತ ಖಂಡಿತಾ ಹೆಚ್ಚು ಗುರೂ!

ಬೆಂಗಳೂರಲ್ಲಿ ಕನ್ನಡದೋರು ಕಮ್ಮೀ ಅನ್ನೋ ಹುನ್ನಾರ!

"ಬೆಂಗಳೂರಲ್ಲಿ ಕನ್ನಡದೋರು ನೂರಕ್ಕೆ ಮೂವತ್ತು ಜನದಷ್ಟಿದಾರೆ. ಇಲ್ಲಿ ಬೇರೆ ಭಾಷೆಯೋರೇ ಜಾಸ್ತಿ. ಹಾಗಾಗಿ ಇಲ್ಲಿನ ವ್ಯವಸ್ಥೆಗಳಲ್ಲಿ ಕನ್ನಡ ಇರಬೇಕು ಅಂತಾ ಒತ್ತಾಯಿಸಬೇಡಿ. ಬಸ್ಸುಗಳ ಬೋರ್ಡು, ಅಂಗಡಿಗಳ ಬೋರ್ಡು ಎಲ್ಲಾದ್ರಲ್ಲೂ ಕನ್ನಡ ಇರಬೇಕು ಅನ್ನಬೇಡಿ. ಇದು ಕಾಸ್ಮೋಪಾಲಿಟಿನ್ ಸಿಟಿ" ಅಂತೆಲ್ಲಾ ಪದೇ ಪದೇ ಎಗರಾಡೋರ ಕಣ್ಣು ಈಗಾದ್ರೂ ತೆರೆದೀತಾ? ಹಾಗೇನಾದ್ರೂ ಬೆಂಗಳೂರಲ್ಲಿ ಕನ್ನಡದೋರು ಕಮ್ಮಿ ಇದ್ದಿದ್ರೆ ಈ ಪಾಟಿ ಓದುಗರು ಇರಕ್ ಆಗ್ತಿತ್ತಾ? ನಮ್ಮ ಸರ್ಕಾರ, ಆಡಳಿತ ಯಂತ್ರಗಳೆಲ್ಲಾ ‘ಬೆಂಗಳೂರಲ್ಲಿ ಕನ್ನಡದೋರು ಅಲ್ಪಸಂಖ್ಯಾತರು’ ಅನ್ನೋ ಹುಸಿಯನ್ನು ನಂಬೋದು ಬಿಡ್ಲಿ. ನಮ್ಮ ನಾಡಲ್ಲಿ ಇನ್ನಾದ್ರೂ ವಲಸಿಗರಿಗಾಗಿ ವ್ಯವಸ್ಥೆ ಕಟ್ಟೋದ್ನ ನಿಲ್ಸಿ ಕನ್ನಡಿಗರಿಗಾಗಿ ವ್ಯವಸ್ಥೆ ಕಟ್ಟೊ ಕೆಲಸಕ್ಕೆ ಮುಂದಾಗಬೇಕಾಗಿದೆ. ಏನಂತೀರಾ ಗುರೂ?

"ಅಂಗಡಿಯಲ್ಲಿ ಕನ್ನಡ ನುಡಿ" ಹೊತ್ತಗೆ ಬಿಡುಗಡೆ


ಮುನ್ನುಡಿಯಲ್ಲಿ...


ಈ ಹೊತ್ತಗೆಯು ಮಾರುಕಟ್ಟೆಯಲ್ಲಿ ನಮ್ಮ ಹಕ್ಕಿನ ಬಗ್ಗೆ ಒಂದಷ್ಟು ಬೆಳಕು ಚೆಲ್ಲುವ ಪ್ರಯತ್ನ. ಈ ದಿನ ನಾಡಿನ ಮಾರುಕಟ್ಟೆಯಲ್ಲಿ ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನ ಸಿಗುತ್ತಿಲ್ಲ ಎನ್ನುವುದು ಒಂದೆಡೆ ಎದ್ದು ತೋರುತ್ತಿದ್ದರೆ, ಹಲವೆಡೆ ನಮ್ಮ ಜನರಿಗೇ ‘ಇಂತಿಂತಹ ಕಡೆಗಳಲ್ಲಿ ಕನ್ನಡ ಬಳಸಬಾರದು, ಬಳಸಲಾಗಲ್ಲ’ ಎನ್ನುವ ಮನಸ್ಥಿತಿ ಇದೆಯೇನೋ ಎನ್ನುವಂತೆ ತೋರುತ್ತದೆ. ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಬರೆಯಬಾರದು, ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಕನ್ನಡ ಬಳಸಬಾರದು, ಮಾಲ್‌ಗಳಿಗೆ ಹೋದಾಗ, ವಿಮಾನನಿಲ್ದಾಣಕ್ಕೆ ಹೋದಾಗೆಲ್ಲಾ ನಾವುಗಳು ಇಂಗ್ಲೀಷಲ್ಲೇ ಮಾತಾಡಬೇಕು... ಇತ್ಯಾದಿ ಭ್ರಮೆಗಳು ನಮ್ಮಲ್ಲಿರುವಂತೆ ತೋರುತ್ತದೆ. ಒಟ್ಟಾರೆ ನಮ್ಮ ಜನರು ಗ್ರಾಹಕಸೇವೆಯಲ್ಲಿ ನಮ್ಮ ನುಡಿಗೆ ಇರುವ ಮಹತ್ತರವಾದ ಪಾತ್ರವನ್ನೇ ಮರೆತಿರುವಂತೆ ತೋರುತ್ತದೆ. ಈ ಮರೆವನ್ನು ಹೋಗಲಾಡಿಸಬೇಕೆಂಬ ಉದ್ದೇಶದಿಂದ ನಾವು ಈ ಹೊತ್ತಗೆಯನ್ನು ಹೊರತರುತ್ತಿದ್ದೇವೆ.

ಬೆನ್ನುಡಿಯಲ್ಲಿ...

ಗ್ರಾಹಕ ಹಕ್ಕುಗಳ ಬಗ್ಗೆ ನಾನಾ ರೀತಿಯ ಜಾಗೃತಿ ಅಭಿಯಾನಗಳು ಎಲ್ಲೆಡೆ ನಡೆಯುತ್ತಾ ಇರುತ್ತವೆ. ತೂಕ, ಅಳತೆ, ಪ್ರಮಾಣ, ಬೆಲೆ, ಗುಣಮಟ್ಟ, ಸೇವೆ, ಇವೆಲ್ಲವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಾರ್ಚ್ 15ನ್ನು ವಿಶ್ವ ಗ್ರಾಹಕ ದಿನಾಚರಣೆಯಾಗೂ ಆಚರಿಸಲಾಗುತ್ತಿದೆ. ಈ ಗ್ರಾಹಕ ಹಕ್ಕುಗಳನ್ನು ಆಳವಾಗಿ ಪರಿಶೀಲಿಸಿದಾಗ ಇಲ್ಲಿ ಭಾಷೆಯ ಪಾತ್ರವನ್ನೇ ಮರೆತಿರುವುದು ಕಾಣುತ್ತದೆ. ಅಂತಹ ಭಾಷಾ-ಆಯಾಮ ಇಲ್ಲದ ಕಾರಣದಿಂದಲೇ ಗ್ರಾಹಕರಿಗೆ ನಾನಾ ರೀತಿಯಲ್ಲಿ ತೊಡಕುಗಳಾಗುತ್ತಿವೆ. ಈ ಬಗ್ಗೆ ಅರಿವು ಮೂಡಿಸುವ, ಈ ದಿಕ್ಕಿನಲ್ಲಿ ನಿಮ್ಮನ್ನು ಯೋಚಿಸಲು ಪ್ರೇರೇಪಿಸುವ ಉದ್ದೇಶದಿಂದ ಈ ಕೊಳ್ಳುಗರ ಕೈಪಿಡಿಯನ್ನು ರೂಪಿಸಿ ನಿಮ್ಮ
ಕೈಗಿಟ್ಟಿದ್ದೇವೆ.

ಬನವಾಸಿ ಬಳಗದ ಗುರಿ, ಕನ್ನಡನಾಡಿನ ಮಾರುಕಟ್ಟೆಯಲ್ಲಿ ಬರಿಯ ಕನ್ನಡವನ್ನಷ್ಟೇ ಬಲ್ಲ ಒಬ್ಬ ಸಾಮಾನ್ಯ ಕನ್ನಡಿಗನೂ ತನ್ನೆಲ್ಲಾ ವ್ಯಾಪಾರ ವಹಿವಾಟುಗಳನ್ನು ಸಲೀಸಾಗಿ ಪೂರೈಸಿಕೊಳ್ಳುವಂತಾಗಬೇಕು ಎಂಬುದು. ತನ್ನದೇ ನಾಡಿನ ಯಾವುದೇ ಅಂಗಡಿ, ಮುಂಗಟ್ಟು, ಕಛೇರಿ, ಬ್ಯಾಂಕು, ಮನರಂಜನೆ, ವ್ಯಾಪಾರ, ಉದ್ದಿಮೆ, ಮಾರುಕಟ್ಟೆಗಳಲ್ಲಿ ಭಾಷೆಯ ಕಾರಣದಿಂದ ಯಾವ ತೊಡಕನ್ನೂ ಎದುರಿಸದಂತಹ ವ್ಯವಸ್ಥೆ ನಿರ್ಮಾಣವಾಗಬೇಕು. ಈ ಗುರಿ ಈಡೇರಬೇಕಾದರೆ ಈಗಿರುವ ಪರಿಸ್ಥಿತಿ ಬದಲಾಗಬೇಕು. ಆ ಬದಲಾವಣೆ ಜಾಗೃತರಾದ ಗ್ರಾಹಕರಿಂದ ಮಾತ್ರ ಸಾಧ್ಯ. ಅಂತಹ ಬದಲಾವಣೆಯೆಡೆಗೆ ಹೆಜ್ಜೆಗಳನ್ನಿಡಲು ದೀವಿಗೆಯಾಗಲಿ ಈ ಹೊತ್ತಗೆ ಎಂಬ ಆಶಯ ನಮ್ಮದು. ಓದಿರಿ, ಜಾರಿಗೆ ತನ್ನಿ, ಬದಲಾವಣೆಗೆ ಕಾರಣರಾಗಿರಿ.

ಹೊತ್ತಗೆಗಾಗಿ ಸಂಪರ್ಕಿಸಿ...

ಈ ಪುಸ್ತಕದ ತುಂಬಾ ಅಂದವಾದ ವ್ಯಂಗ್ಯಚಿತ್ರಗಳು, ಕಿರುಸಂದೇಶಗಳು ಇದ್ದು 5 X 7 ಇಂಚು ಅಳತೆಯಲ್ಲಿ 56 ಪುಟಗಳಿವೆ. ಬಿಡುಗಡೆಗೆ ಬಂದಿದ್ದ ಗೆಳೆಯರೆಲ್ಲ ‘ಈ ಹೊತ್ತಗೆ ಆಕರ್ಷಕವಾಗಿ ಮೂಡಿ ಬಂದಿದೆ’ ಎಂದು ಬೆನ್ನು ತಟ್ಟಿದರು. ನೀವೂ ಈ ಪುಸ್ತಕವನ್ನು ಪಡೆದುಕೊಳ್ಳಬೇಕೆಂದಿದ್ದಲ್ಲಿ kacheri@banavasibalaga.org ಗೆ ಬರೆಯಿರಿ. ನಿಮಗೆ ಬೇಕಿರುವಷ್ಟು ಪ್ರತಿಗಳನ್ನು ಪಡೆದುಕೊಳ್ಳಿರಿ.

ಪಿವಿಆರ‍್ನಲ್ಲಿ ಕನ್ನಡ ಚಿತ್ರಗಳ ಬಗ್ಗೆ ತಾತ್ಸಾರ?

ಮೊನ್ನೆ ಮೊನ್ನೆ ಚೆನ್ನಾಗಿ ಓಡ್ತಾ ಇರೋ ಅಂತರಾತ್ಮ ಅನ್ನೋ ಕನ್ನಡ ಚಿತ್ರದ ಬಗ್ಗೆ ಅಪಪ್ರಚಾರ ಮಾಡಿ, ಅದನ್ನು ಚಿತ್ರ ಮಂದಿರದಿಂದ ಕಿತ್ತು ಹಾಕುವ ಕೀಳು ಕೆಲಸಕ್ಕೆ ಬೆಂಗಳೂರಿನ ಪ್ರಸಿದ್ಧ ಮಲ್ಟಿಪ್ಲೆಕ್ಸ್ ಪಿವಿಆರ್ ಇಳಿಯಿತಂತೆ ಮತ್ತು ಈ ಕಾರಣಕ್ಕೆ ಚಿತ್ರತಂಡದ ಪ್ರತಿಭಟನೆಗೆ ಗುರಿಯಾಯಿತಂತೆ ಅನ್ನೋ ಸುದ್ದಿ ಬಂದಿದೆ. ಚೆನ್ನಾಗಿ ಓಡ್ತಾ ಇರೋ ಸಿನೆಮಾವನ್ನು ಕಿತ್ತು ಹಾಕಲು ಪಿವಿಆರ್ ಸಿಬ್ಬಂದಿಯೇ ಮುಂದಾದ್ರು ಅನ್ನೋ ಸುದ್ದಿ ಹಲವು ಅನುಮಾನಕ್ಕೆ ಕಾರಣವಾಗಿದೆ ಗುರು!

ಚಿತ್ರವನ್ನು ಎತ್ತಂಗಡಿ ಮಾಡುವುದು ನಿಜವಾದ ಉದ್ದೇಶ!

ಅಲ್ಲ ಗುರು, ಈ ಸುದ್ದಿ ನಿಜವಾಗಿದ್ದಲ್ಲಿ ಪಿವಿಆರ‍್ನವರು ಚೆನ್ನಾಗಿ ಓಡುವ ಚಿತ್ರದ ಬಗ್ಗೆ ಅಪಪ್ರಚಾರ ಮಾಡುವ ಕೆಲಸಕ್ಕೆ ಯಾಕೆ ಇಳಿದ್ರು ? ಈ ರೀತಿ ಮಾಡಿ, ಕಲೆಕ್ಷನ್ ಇಲ್ಲದ ಕಾರಣವೊಡ್ಡಿ ಈ ಚಿತ್ರವನ್ನು ಎತ್ತಂಗಡಿ ಮಾಡುವುದು ಇದರ ಹಿಂದಿನ ಉದ್ದೇಶವಾಗಿತ್ತೇ? ಈ ರೀತಿ ಎತ್ತಂಗಡಿ ಮಾಡಿ, ಅದೇ ಜಾಗದಲ್ಲಿ ಇನ್ನಷ್ಟು ಲಾಭ ತರುವ ತೆಲುಗು,ತಮಿಳು, ಹಿಂದಿ ಚಿತ್ರಕ್ಕೆ ಅವಕಾಶ ಮಾಡಿಕೊಡುವುದು ಇದರ ಹಿಂದಿನ ಮರ್ಮವಾಗಿತ್ತೇ? ಅನ್ನೋ ಅನುಮಾನ ಹುಟ್ಟುಕೊಳ್ತವೆ.
ವಾಸ್ತವವಾಗಿ ಇವತ್ತಿನವರೆಗಿನ ಪಿವಿಆರ್‍ನ ಇತಿಹಾಸದಲ್ಲಿ ಅತಿ ಹೆಚ್ಚು ದಿನ ಓಡಿರುವ ಹೆಚ್ಚಿನ ಚಿತ್ರಗಳು ಕನ್ನಡದವು. ಜೋಗಿ, ಅಮೃತಧಾರೆ, ಮುಂಗಾರು ಮಳೆ, ಮಿಲನ, ಆ ದಿನಗಳು, ಮಳೆಯಲಿ ಜೊತೆಯಲಿ, ಆಪ್ತರಕ್ಷಕ ಹೀಗೆ ಸಾಲು ಸಾಲು ಕನ್ನಡ ಸಿನೆಮಾಗಳು ಇವರಿಗೆ ಅತಿ ಹೆಚ್ಚು ಕಲೆಕ್ಷನ್, ಅತಿ ಹೆಚ್ಚು ಲಾಭ ತಂದು ಕೊಟ್ಟರೂ ಕನ್ನಡ ಚಿತ್ರಗಳ ಬಗ್ಗೆ ಈ ರೀತಿಯ ಧೋರಣೆಯ ಹಿಂದೆ ವ್ಯವಹಾರಿಕ ಉದ್ದೇಶವಿರದೇ ಇನ್ನೇನೊ ಇದೆಯೆಂಬ ಅನುಮಾನ ಮೂಡುತ್ತಿಲ್ಲವೇ? ಪಿವಿಆರ್ ಪಿಕ್ಚರ್ಸ್ ಅನ್ನುವ ಅಂಗ ಸಂಸ್ಥೆಯ ಮೂಲಕ ಹಿಂದಿ ಚಿತ್ರಗಳ ವಿತರಣೆಯನ್ನು ಪಿವಿಆರ್ ಮಾಡುತ್ತೆ. ತಾವು ವಿತರಣೆ ಮಾಡ್ತಿರೋ ಯಾವುದೋ ಹಿಂದಿ ಸಿನೆಮಾಗೆ ಜಾಗ ಮಾಡಿಕೊಡಲು ಈ ರೀತಿ ಕನ್ನಡ ಚಿತ್ರವನ್ನು ಓಡಿಸುವ ಪ್ರಯತ್ನಕ್ಕೆ ಪಿವಿಆರ್ ಇಳಿದಿರುವ ಸಾಧ್ಯತೆಯಿದೆ ಅನ್ನುವುದು ಕೆಲ ಚಿತ್ರರಂಗದ ಗಣ್ಯರ ಅಭಿಪ್ರಾಯ.
ಈ ರೀತಿ ನಡೆದುಕೊಳ್ಳೋದು ತಪ್ಪು, ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ತೊಡಕು ಮಾಡೋದು ಸರಿಯಲ್ಲ ಅಂತಾ ಈ ಮಲ್ಟಿಪ್ಲೆಕ್ಸಿನವರಿಗೆ ತಿಳಿ ಹೇಳಬೇಕಾದವರು ನಾವೂ ನೀವೇ ಅಲ್ವಾ ಗುರೂ! ಮತ್ತೇಕೆ ತಡ. ಈಗಲೇ ಅವರಿಗೊಂದು ಮಿಂಚೆ - ಫೋನು - ಭೇಟಿ ಕೊಡೋಣ. ಏನಂತೀರಾ?

ಹೊಗೇನಕಲ್: ಸಂಧಾನಕ್ಕೆ ಬಲಿಯಾಗದಿರಲಿ ನಾಡಹಿತ!


ವಿವಾದಕ್ಕೆ ಕಾರಣವಾಗಿರೋ ಹೊಗೇನಕಲ್‍ನ ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿ ಬಗ್ಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಅಂತಾ ಕರ್ನಾಟಕ ರಾಜ್ಯಸರ್ಕಾರದ ಗೃಹಮಂತ್ರಿಗಳಾದ ಡಾII ವಿ.ಎಸ್.ಆಚಾರ್ಯ ಅವ್ರು ನೀಡಿರೋ ಹೇಳಿಕೆ, ಇವತ್ತಿನ (01.05.2010ರ) ದಿನಪತ್ರಿಕೆಗಳಲ್ಲಿ ಬಂದಿದೆ. ಭಾಳಾ ಸಂತೋಷ. ಅಂತರರಾಜ್ಯ ಸಂಬಂಧಗಳು ಮಾತುಕತೆ ಮೂಲಕ ಬಗೆಹರಿಯೋದು ಭಾಳಾ ಸಂತೋಷದ ವಿಷಯಾನೇ ಗುರೂ!
ಆದ್ರೆ ಮೂಲತಃ ಅಂತರರಾಜ್ಯ ವಿವಾದಗಳು ಯಾಕೆ ಹುಟ್ಟಿಕೊಳ್ಳುತ್ವೆ ಅನ್ನೋದ್ನ ಸ್ವಲ್ಪ ನೋಡೋಣ. ಯಾವುದೇ ಒಂದು ಸಂಪನ್ಮೂಲದ ಮೇಲೆ ಒಂದಕ್ಕಿಂತ ಹೆಚ್ಚು ರಾಜ್ಯದೋರು ಹಕ್ಕು ಸಾಧಿಸಕ್ಕೆ ಮುಂದಾದಾಗ ತಾನೆ ವಿವಾದ ಹುಟ್ಟೋದು? ಸೌಹಾರ್ದಯುತವಾಗಿ ಬಗೆಹರಿಯೋದು ಅಂದ್ರೆ ‘ಇಲ್ಲಿ ನಾವು ಸ್ವಲ್ಪ ಬಿಟ್ಟುಕೊಡ್ತೀವಿ - ನೀವೂ ಸ್ವಲ್ಪ ಬಿಟ್ಟುಕೊಡಿ. ನಾವೂ ಸ್ವಲ್ಪ ಗಳುಸ್ಕೊತೀವಿ - ನೀವೂ ಗಳಿಸಿಕೊಳ್ಳಿ' ಅನ್ನೋದು. ಈ ಸಣ್ಣ ವಿಷಯಾನಾ ಯಾಕಪ್ಪಾ ಹೇಳಬೇಕಾಯ್ತು ಅಂದ್ರೆ ನಮ್ಮ ಕರ್ನಾಟಕದ ಇಂದಿನ ಸರ್ಕಾರ ಬಹುಶಃ ಸಂಧಾನ ಅಂದ್ರೆ ನೆರೆಯವರ ಮುಂದೆ ಮಂಡಿಯೂರಿ ಕುಳಿತು ನಾಡಿನ ಹಿತ ಹಾಗೂ ಸ್ವಾಭಿಮಾನಾನ ಅವರುಗಳ ಪದತಲಕ್ಕೆ ಅರ್ಪಿಸುವುದು ಅಂದುಕೊಂಡಿರೋ ಹಾಗೆ ಕಾಣುತ್ತೆ.

ಕೊಡೋದೇನು? ಪಡ್ಯೋದೇನು?

`ನೀವು ಕುಡಿಯೋ ನೀರಿಗೆ ನಾವು ಅಡ್ಡಿ ಮಾಡಲ್ಲ, ನಮ್ಮ ವಿದ್ಯುತ್ ಯೋಜನೆಗೆ ನೀವು ಅಡ್ಡಿ ಮಾಡಬೇಡಿ' ಎನ್ನುತ್ತಿರೋ ಮಾತಿನ ಹಿಂದೆ ಎಂಥಾ ಅಪಾಯ ಇದೆ ನೋಡಿ. ಇದರಿಂದ ತಮಿಳುನಾಡಿನ ಕುಡಿಯೋ ನೀರಿನ ಯೋಜನೆಗೆ ನಾವು ಅಡ್ಡಿ ಮಾಡುತ್ತಿದ್ದೇವೆ ಅಂತಾ ಸರ್ಕಾರವೇ ಒಪ್ಪಿಕೋತಾಯಿದೆ. `ನಮ್ಮ ನೆಲದಲ್ಲಿ ನಾವು ವಿದ್ಯುತ್ ಯೋಜನೆ ಮಾಡಕ್ಕೆ ನೀವು ಅಡ್ಡಿ ಮಾಡಬೇಡಿ, ಆಗ ನಿಮ್ಮ ನೆಲದಲ್ಲಿ ನೀವು ಕುಡಿಯೋ ನೀರಿನ ಯೋಜನೆ ಮಾಡಿಕೊಳ್ಳಕ್ಕೆ ನಮ್ಮ ಅಡ್ಡಿ ಇಲ್ಲಾ' ಅಂತಾ ತಾನೆ ಇವರು ಹೇಳಬೇಕಾದ್ದು. ಸರ್ಕಾರದ ನಿಲುವು ಮಾತ್ರಾ `ಹೊಗೇನಕಲ್ ಯೋಜನೆಗೆ ನಮ್ಮ ತಕರಾರು ನೀರು ಹಂಚಿಕೆಗೆ ಸಂಬಂಧಿಸಿದ್ದು, ಗಡಿ ಒತ್ತುವರಿಗೆ ಸಂಬಂಧಿಸಿದ್ದಲ್ಲಾ, ಇದ್ದರೂ ಅದು ಆದ್ಯತೆಯ ವಿಷಯವಲ್ಲಾ' ಅನ್ನೋ ಹಾಗಿದೆ. ಈ ಲೆಕ್ಕದಲ್ಲಿ ಸಂಧಾನಕ್ಕೆ ಮುಂದಾದರೆ ಕೊನೆಗೆ ಕಳೆದುಕೊಳ್ಳೋದು ಕರ್ನಾಟಕವೇ ಹೊರತು ತಮಿಳುನಾಡಲ್ಲ. ಯಾಕಂದ್ರೆ ಇಂದಿನ ಈ ಉದ್ದೇಶಿತ ಸಂಧಾನ ಸೂತ್ರ `ನಮ್ಮ ನೆಲದಲ್ಲಿ ನಮಗೆ ವಿದ್ಯುತ್ ಯೋಜನೆಗೆ ಅಡ್ಡಿ ಮಾಡಬೇಡಿ, ಆಗ ನಮ್ಮ ನೆಲವನ್ನು ನೀವು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕುಡಿಯೋನೀರು ಯೋಜನೆ ಮಾಡಲು ನಾವು ಬಿಡ್ತೀವಿ' ಅಂದ ಹಾಗಿದೆಯಲ್ಲಾ ಗುರೂ!

ವಿವಾದದಲ್ಲಿರೋ ಸೂಕ್ಷ್ಮ!

ಕರ್ನಾಟಕ ಸರ್ಕಾರ ಬ್ರಿಟೀಷರ ಕಾಲದ ಟ್ರೋಪ್‍ಶೀಟ್ ಇಟ್ಕೊಂಡು ಹೊಗೇನಕಲ್ ತನಗೆ ಸೇರಿದ್ದು ಅಂತಾ ತಕರಾರು ಮಾಡ್ತಿದೆ. ಇದು ಸರಿಯಲ್ಲಾ... ಅನ್ನೋದು ತಮಿಳುನಾಡಿನ ನಿಲುವು. ಇದರಲ್ಲಿ ಈ ಟ್ರೋಪ್‍ಶೀಟ್ ಯಾವ್ದೋ ಓಬಿರಾಯನ ಕಾಲದ್ದು ಅನ್ನೋ ಒಳದನಿ ಕೇಳುತ್ತೆ. ಆದರೆ ಈ ಓಬೀರಾಯನ ಸೂತ್ರಾ, 1924ರ ಮೈಸೂರು-ಮದ್ರಾಸಿನ ಕಾವೇರಿ ಒಪ್ಪಂದಕ್ಕೆ ಅನ್ವಯ ಆಗಲ್ವಂತೆ. ತಮಿಳುನಾಡಿಗೆ 1947ರಲ್ಲಿ ಭಾರತಕ್ಕೆ ಸ್ವತಂತ್ರ ಸಿಕ್ಕಕೂಡಲೇ 1924ರ ಒಪ್ಪಂದ ಸಹಜವಾಗಿ ರದ್ದಾಗುತ್ತೆ ಅನ್ನೋದು ಮರೆತುಹೋಗುತ್ತೆ ಪಾಪ!
1997ರಲ್ಲೇ ಕರ್ನಾಟಕ ಸರ್ಕಾರ ಮತ್ತು ಕೇಂದ್ರಸರ್ಕಾರ ಈ ಯೋಜನೆಗಳಿಗೆ ಒಪ್ಪಿವೆ. ತಮಿಳುನಾಡು ಕರ್ನಾಟಕವು ಮೇಕೆದಾಟಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಕಾನೂನು ತೊಡಕು ಒಡ್ಡಲ್ಲ, ಕರ್ನಾಟಕ ಹೊಗೇನಕಲ್ ಯೋಜನೆಗೆ ಅಡ್ಡಿ ಮಾಡಲ್ಲಾ ಅನ್ನೋ ಒಪ್ಪಂದಕ್ಕೆ ಅಂದಿನ ಸಭೆಯಲ್ಲಿ ಬರಲಾಗಿತ್ತು. ಈಗ ಕರ್ನಾಟಕ ತಕರಾರು ಮಾಡೋದು ತಪ್ಪು ಅನ್ನೋ ಪ್ರಚಾರಾನೂ ನಡೀತಿದೆ. ನಿಜಕ್ಕೂ ನಮ್ಮ ಇಂದಿನ ವಿರೋಧ ಅಂದಿನ ಒಪ್ಪಂದದ ಉಲ್ಲಂಘನೇನಾ? ಸರ್ಕಾರವೇ ಇಂಥಾ ಗೊಂದಲಕ್ಕೆ ಕಾರಣವಾಗ್ತಿದೆ. 1997ರ ಒಪ್ಪಂದದ ಬಗ್ಗೆ ಗೊತ್ತಿದ್ದೋರಿಗೆ ಈಗ ಕರ್ನಾಟಕ ಸರ್ಕಾರ ಇನ್ಯಾವ ಹೊಸಸಂಧಾನದ ಪ್ರಸ್ತಾಪ ಇಡ್ತಿದೆ ಅಂತಾ ಗೊಂದಲ ಆಗೋದು ಸಹಜಾನೆ ಆಗಿದೆ.

ಸಮಗೌರವದ ಸಂಧಾನ ಸಾಧ್ಯವಾಗಲಿ!

ಕರ್ನಾಟಕ ಸರ್ಕಾರವು ಬಿಜೆಪಿ ಮತ್ತು ಡಿಎಂಕೆಗೆ ಹೇಗೆ ವಿವಾದ ಬಗೆಹರಿಸಿದ ಗೌರವ ದಕ್ಕುತ್ತೆ ಅನ್ನೋ ರಾಜಕೀಯ ಲಾಭದ ಬಗ್ಗೆ ಗಮನಕೊಡುತ್ತಾ, ಚಿನ್ನತಂಬಿ ಪೆರಿಯತಂಬಿ ನಾಟಕ ಮುಂದುವರೆಸುತ್ತಾ, ಕನ್ನಡನಾಡಿನ ಜನರ ಕಿವಿ ಮೇಲೆ ಲಾಲ್‍ಬಾಗ್ ಇಡೋ ಪ್ರಯತ್ನಾನಾ ಕೈಬಿಟ್ಟು ಈ ವಿಷಯವಾಗಿ ನಿಲುವು ತೆಗೆದುಕೊಳ್ಳಬೇಕಾಗಿದೆ. ನಾವು ಅಂದು ಒಪ್ಪಿದ್ದ ಕುಡಿಯುವ ನೀರಿನ ಯೋಜನೆಗೆ ಇಂದಿಗೂ ನಮ್ಮ ವಿರೋಧ ಇಲ್ಲ. ಆ ಒಪ್ಪಂದದಂತೆಯೇ ತಮಿಳುನಾಡು ಕೂಡಾ ಮೇಕೆದಾಟು ವಿದ್ಯುತ್ ಯೋಜನೆಗೆ ತಕರಾರು ಮಾಡದಿರಲಿ. ನಾವು ಕುಡಿಯುವ ನೀರು ಯೋಜನೆಗೆ ಅಡ್ಡಿ ಮಾಡುವುದು ಬೇಡ.
ಆದರೆ ತಮಿಳುನಾಡು ಈ ಯೋಜನೆಗಾಗಿ ಕನ್ನಡದ ನೆಲವನ್ನು ಅತಿಕ್ರಮಿಸುವುದನ್ನು ವಿರೋಧಿಸಲೇಬೇಕಾಗಿದೆ. ಎರಡೂ ರಾಜ್ಯಗಳ ಗಡಿಯನ್ನು ಜಂಟಿಯಾಗಿ ಸರ್ವೇ ಮಾಡಲೇಬೇಕು ಎನ್ನುವುದು ನಮ್ಮ ನಿಲುವಾಗಲಿ. ಸಂಧಾನದ ವಿಷಯವೇನೆಂದರೆ ಈ ಸರ್ವೇ ಬೇಕಾದರೆ ಕೇಂದ್ರಸರ್ಕಾರದ ಮಧ್ಯಸ್ಥಿಕೆಯಲ್ಲಿ ನಡೀಲಿ ಅನ್ನೋದಾಗಬೇಕು ಅಷ್ಟೆ. ನಿಜಕ್ಕೂ ಇಲ್ಲಿ ಆದ್ಯತೆಯ ವಿಷಯ ನೀರು ಬಳಕೆಯದ್ದಲ್ಲ, ಗಡಿ ಅತಿಕ್ರಮಣದ್ದು ಅನ್ನೋದನ್ನು ಸರ್ಕಾರ ಮರೆಯದಿರಲಿ. ಇಲ್ಲದಿದ್ದರೆ ಸಂಧಾನದ ಹೆಸರಲ್ಲಿ ಕೊನೆಗೆ ನಡೆಯೋದು ಕನ್ನಡಿಗರ ಶರಣಾಗತಿಯೇ, ಕಳೆದುಕೊಳ್ಳೋದು ಕರ್ನಾಟಕವೇ ಅನ್ನೋದಾಗುತ್ತೆ.

ಸಾಕು ಪ್ರತಿಮೆಯ ಉಪಮೆಯ ನಾಟಕ!

ಸರ್ಕಾರ ಪ್ರತಿಮೆಗಳ ವಿವಾದವನ್ನು ಬಗೆಹರಿಸಿದಂತೆ ಇದನ್ನೂ ಬಗೆಹರುಸ್ತೀವಿ ಅಂತಾ ಪದೇ ಪದೇ ಹೇಳ್ಕೊಳ್ಳೋ ಮೂರ್ಖತನಾನ ನಿಲ್ಲುಸ್ಲಿ. ಪ್ರತಿಮೆಗಳ ಸ್ಥಾಪನೆ ವಿಚಾರದಲ್ಲಿ ಇದ್ದ ವಿರೋಧವನ್ನು ಎರಡೂ ರಾಜ್ಯಗಳ ನಡುವಿನ, ಎರಡೂ ಜನಾಂಗಗಳ ನಡುವಿನ ಹತ್ತಾರು ವಿವಾದಗಳಿಂದ ಬೇರೆಯಾಗಿಸಿ "ಪ್ರತಿಮೆ ಸ್ಥಾಪಿಸಿದ್ದರಿಂದ ಸೌಹಾರ್ದ ಹೆಚ್ಚಿತು" ಅನ್ನೋ ಬೂಟಾಟಿಕೆಯ ಆತ್ಮವಂಚನೆ ಮಾಡಿಕೊಳ್ತಿರೋ ರಾಜ್ಯಸರ್ಕಾರ ಅರಿಯಬೇಕಾದ್ದು ಸಾಕಷ್ಟಿದೆ. ತಮಿಳುನಾಡು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನದ ಪ್ರಯೋಜನ ಸಿಗಲು, ತನ್ನಗೆ ಸಂಬಂಧವೇ ಇರದಿದ್ದರೂ ತೊಡಕುಂಟು ಮಾಡ್ತಿರೋ ಕಿತಾಪತಿ ಅರ್ಜಿಯನ್ನು ಇನ್ನೂ ವಾಪಸ್ಸು ತೆಗೆಸದಿರುವುದು ಸೌಹಾರ್ದತೆ ಹೆಚ್ಚಿಸೋ ಕ್ರಮವೇನು? ತಮಿಳುನಾಡು, ಹೊಗೇನಕಲ್ ಜಂಟೀ ಸಮೀಕ್ಷೆಗೆ ಒಪ್ಪಿ ಒಟ್ಟಾಗಿ ಸಮೀಕ್ಷೆ ಮಾಡಿ, ಈ ಯೋಜನೆಯ ಕಾಮಗಾರಿಯನ್ನು ತಮ್ಮ ನೆಲಕ್ಕೆ ಸೀಮಿತಗೊಳಿಸುವುದು ಸೌಹಾರ್ದತೆ ಹೆಚ್ಚಿಸೋ ಕ್ರಮವಲ್ಲವೇನು? ಇದೆಲ್ಲಾ ಬಿಟ್ಟು ಹಿಂದೆಯೇ ಆಗಿಹೋಗಿದ್ದ ಒಪ್ಪಂದವನ್ನು ಇವತ್ತು ಮಾಡಿಕೊಳ್ಳೋ ಹಾಗೆ ಸಂಧಾನಕ್ಕೆ ಮುಂದಾಗೋದು ಕರ್ನಾಟಕ ಸರ್ಕಾರಕ್ಕೆ ಶೋಭೆ ತಂದೀತೇನು? ಸರ್ಕಾರ 1997ರ ಒಪ್ಪಂದಕ್ಕೂ ಇಂದಿನ ಸಂಧಾನಕ್ಕೂ ಇರೋ ವ್ಯತ್ಯಾಸ ಏನು ಅಂತಾ ಜನಗಳ ಮುಂದೆ ಇಡೋ ಪ್ರಾಮಾಣಿಕತೆ ತೋರಿಸಲಿ ಗುರೂ! ಇದಕ್ಕೂ ಮೊದಲಿಗೆ ಕರ್ನಾಟಕ ಸರ್ಕಾರ ಮಾಡ್ಬೇಕಾದ ಒಂದು ಕೆಲ್ಸ ಇದೆ. ತಮಿಳುನಾಡು - ಇಡೀ ಹೊಗೇನಕಲ್ ಯೋಜನೆ ಧರ್ಮಪುರಿ ಭಾಗದ ಫ್ಲುರೋಸಿಸ್ ಅನ್ನೋ ಪೀಡೆಗೆ ಬಲಿಯಾಗಿರೋ ಜನಕ್ಕೆ ಶುದ್ಧ ಕುಡಿಯೋ ನೀರು ಒದಗಿಸೋ ಮಾನವೀಯ ಯೋಜನೆ, ಇದಕ್ಕೆ ಕರ್ನಾಟಕ ಅಡ್ಡಿ ಮಾಡಲು ಮುಂದಾಗಿರೋ ರಾಕ್ಷಸ - ಅನ್ನೋ ಅಪಪ್ರಚಾರ ಮಾಡ್ತಿರೋದನ್ನು ಗಮನಿಸಿ ನಮ್ಮ ರಾಜ್ಯದ ನಿಲುವನ್ನು ಸ್ಪಷ್ಟವಾಗಿ ಪ್ರಚುರಪಡಿಸಬೇಕಾಗಿದೆ. ಇದೆಲ್ಲಾ ಇವರು ಮಾಡ್ತಾರಾ? ಇವ್ರಿಂದ ಆಗುತ್ತಾ? ಗುರೂ!!!
Related Posts with Thumbnails