ಚಾಮುಂಡಾ ಅಂದ್ರೆ ನಾಕ: ಚಾಮುಂಡಿ ಅಂದ್ರೆ ನರಕ... ಗೊತ್ತಾ?

ಇತ್ತೀಚಿಗೆ ಕನ್ನಡ ಬರವಣಿಗೆ : ದೋಷಗಳು, ದೌರ್ಬಲ್ಯಗಳು ಅಂತಾ ಮೇಲೂ, ಕನ್ನಡ ಬರೆವಣಿಗೆ ಅಂತಾ ಒಳಗೂ ಅಚ್ಚಾಗಿರೋ ಒಂದು ಪುಸ್ತಕ ಪ್ರಕಟವಾಗಿದೆ. ಈ ಪುಸ್ತಕವು ಕನ್ನಡದ ಬಗ್ಗೆ ಈ ವಿದ್ವಾಂಸ ವಲಯ ಹೊಂದಿರುವ ಅವೈಜ್ಞಾನಿಕವಾದ ನಿಲುವು ನಂಬಿಕೆಗಳನ್ನು ತೋರಿಸಿಕೊಡುತ್ತಿದೆ. ಕನ್ನಡ ಬರವಣಿಗೆ (ಬರೆವಣಿಗೆ?) ಇದೀಗ ದುಸ್ಥಿತಿಯಲ್ಲಿದೆ ಎಂದು ಭಾವಿಸಿರುವ ವಿದ್ವಾಂಸದ್ವಯರು ಬರೆದಿರೋ ಸದರಿ ಪುಸ್ತಕದ ಸಾರಾಂಶ ಇಂತಿವೆ. (ಬಣ್ಣದ ಪ್ಯಾರಾ ಪುಸ್ತಕದಲ್ಲಿದ್ದದ್ದು)

ಇವು ಇಂದಿನ ದುಸ್ಥಿತಿಗೆ ಕಾರಣಗಳಂತೆ!

ಬಳಕೆ ಹೆಚ್ಚಿದ ಹಾಗೇ ಭಾಷೆ ಸವೆಯುತ್ತದೆ. ಅಂದಗೆಡುತ್ತದೆ, ಶಕ್ತಿಗುಂದುತ್ತದೆ. ಏಕೆಂದರೆ ಬಳಕೆದಾರರೆಲ್ಲಾ ಒಂದೇಮಟ್ಟದಲ್ಲಿ ವಿದ್ಯಾವಂತರೂ ಸುಶಿಕ್ಷಿತರೂ ಆಗಿ ಇರುವುದಿಲ್ಲ. ಅವರು ತಮ್ಮ ಕೈಬಾಯಿಗಳಿಗೆ ಸಿಕ್ಕ ಈ ಭಾಷೆಯೆಂಬ ವಸ್ತುವನ್ನು ತೋರಿದಂತೆ ಎಳೆದಾಡುತ್ತಾರೆ, ಎಸೆದಾಡುತ್ತಾರೆ....ಇಂದು ಬಳಕೆಯಲ್ಲಿರುವ ಕನ್ನಡದ ಶಿಷ್ಟಭಾಷೆಯನ್ನು ಲಕ್ಷಿಸಿದರೆ, ಆ ಎಳೆದಾಟ, ಆ ಎಸೆದಾಟ ಯಾವ ರೀತಿಯದು ಎಂಬುದು ತಿಳಿಯುತ್ತದೆ.

ಈ ಸ್ಥಿತಿಗೆ ಕಾರಣವೇನು?

೧. ಕನ್ನಡ ಭಾಷೆಯ ಇಂದಿನ ಶಿಕ್ಷಣದಲ್ಲಿ ಕ್ರಮಬದ್ಧವಾದ ವ್ಯಾಕರಣ ಪಾಠ ಅಲಕ್ಷಿತವಾಗಿದೆ. ೨. ಸಂಸ್ಕೃತ ಭಾಷೆ ಸಾಹಿತ್ಯಗಳ ಅಧ್ಯಯನ ಅವಗಣನೆಗೆ ಗುರಿಯಾಗಿದೆ. ೩. ಭಾಷೆ ಸಾಹಿತ್ಯಗಳ ಶಿಕ್ಷಕರ ಭಾಷಾಜ್ಞಾನ ತೀರಾ ಕೆಳಮಟ್ಟದಲ್ಲಿದೆ. ೪. ಅಭ್ಯಾಸಿಗಳಿಗೂ ವಿದ್ಯಾರ್ಥಿಗಳಿಗೂ ಅನುಸರಣಯೋಗ್ಯವಾದ ಒಳ್ಳೆಯ ಮಾದರಿಗಳು ದೊರೆಯುತ್ತಿಲ್ಲ. ೫. ಕಲಿಯುವವರೂ ಕಲಿಸುವವರೂ ಸಮಾನವಾಗಿ ಶಿಷ್ಟ ಭಾಷೆಯ ಬಳಕೆಯಲ್ಲಿ ಅಸಡ್ಡೆ ತಿರಸ್ಕಾರಗಳನ್ನು ತೋರಿಸುತ್ತಿದ್ದಾರೆ. ೬. ತಾಂತ್ರಿಕ, ವೈದ್ಯಕೀಯ ಮತ್ತು ವೈಜ್ಞಾನಿಕ ಶಿಕ್ಷಣಕ್ಕೆ ಬಹುವಾಗಿ ಪ್ರಾಶಸ್ತ್ಯ ದೊರೆಯುತ್ತಿದ್ದು, ಭಾಷೆ ಸಾಹಿತ್ಯಗಳ ಅಧ್ಯಯನದಲ್ಲಿ ಉತ್ಸಾಹವೂ ಶ್ರದ್ಧೆಯೂ ಸಾಧನೆ ಪರಿಶ್ರಮಗಳೂ ಉದಾಸೀನಕ್ಕೆ ಗುರಿಯಾಗಿವೆ. ೭. ಸೃಜನಾತ್ಮಕ ಸಾಹಿತ್ಯ ಪ್ರಕಾರಗಳಲ್ಲಿ ಪ್ರಾದೇಶಿಕವೂ ಸಾಮಾಜಿಕವೂ ಆದ ಉಪಭಾಷೆಗಳನ್ನೂ ಗ್ರಾಮ್ಯವನ್ನೂ ಹೆಚ್ಚುಹೆಚ್ಚಾಗಿ ಬಳಸುವ ರೂಢಿ ಬೆಳೆಯುತ್ತಿರುವುದರಿಂದ ಶಿಷ್ಟಭಾಷೆಯ ತಿಳಿವಳಿಕೆಗೆ ಬೇಕಾದ ಶಿಕ್ಷಣವೂ ಸಂಸ್ಕಾರವೂ ಈಗ ಅನಾವಶ್ಯಕವೆಂದೂ ತೋರುತ್ತಿದೆ. ೮. ತಪ್ಪುಗಳನ್ನು ತಪ್ಪೆಂದು ತಿಳಿಯದಿರುವುದೂ, ತಿಳಿದರೂ ತಿದ್ದಿಕೊಳ್ಳದಿರುವುದು ಪ್ರವೃತ್ತಿಯಾಗಿದೆ. ೯. ಸರ್ಕಾರ ಮತ್ತು ಸಾಮಾಜಿಕ ಸಂಸ್ಥೆಗಳು ಭಾಷಾ ಶುದ್ಧತೆಯ ಬಗ್ಗೆ ನಿರ್ಲಕ್ಷ್ಯದಿಂದಿವೆ. (ಪುಟ ೭: ಕ.ಬ:ದೋ.ದೌ)

ಆಡಿದಂತೆ, ಬಳಸಿದಂತೆ ಭಾಷೆ ಸವೆಯುತ್ತದೆ ಎನ್ನುವುದಾದರೆ, ಬಳಸಿದರೆ ಸವೆಯುತ್ತದೆಯೆಂದು ಭಾಷೆಯ ಬಳಕೆ ಹೆಚ್ಚಬಾರದು ಎಂಬುದು ಲೇಖಕರ ನಿಲುವೇನು? ಭಾಷೆಯನ್ನು ಬಳಸಲು ವಿದ್ಯಾವಂತರೂ ಸುಶಿಕ್ಷಿತರೂ ಆಗಿರಬೇಕೇನು? ಉಳಿದವರು ಬಳಸುವುದು ಭಾಷೆಯಲ್ಲವೇನು? ಸಂಸ್ಕೃತದ ಅಧ್ಯಯನವು ಐದೂವರೆ ಕೋಟಿ ಕನ್ನಡಿಗರಿಗೆಲ್ಲಾ ಆಗಬೇಕು ಎಂಬುದು ಇವರ ನಿಲುವೇನು? ಸಂಸ್ಕೃತದ ಅಧ್ಯಯನವಾಗದೆ ಕನ್ನಡವನ್ನು ಬಳಸುವುದು ಸರಿಯಲ್ಲವೇನು? ಒಟ್ಟಾರೆ ಕನ್ನಡದ ನಾಲಗೆಯನ್ನು ಸಂಸ್ಕೃತವೆಂಬ ಬೆಣಚುಕಲ್ಲಿಂದ ಗಸಗಸ ತಿಕ್ಕಿ ಶುದ್ಧ ಶಿಷ್ಟ ಕನ್ನಡವೆಂಬ - ಎಂದಿಗೂ ಜನಬಳಕೆಯಲ್ಲಿಲ್ಲದ, ಇದ್ದರೂ ಬೆರಳೆಣಿಕೆಯ ಸಂಸ್ಕೃತ-ಕನ್ನಡ ಪಂಡಿತರ ಬರಹದಲ್ಲಿರುವ - ಭಾಷೆಯನ್ನು ಉಳಿಸಿ ಬಳಸಿ ಬೆಳೆಸಬೇಕೆಂಬ ನಿಲುವು ಕಾಣುತ್ತಿದೆ.

ಈ ಹಿಂದೆ ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಮಹಾಪ್ರಾಣಘಟಿತ ಪದಗಳು ತದ್ಭವಗಳಾಗಿ ಬಂದಿರುವುದು ಸರಿಯಷ್ಟೇ. ಇವನ್ನು ಬಳಸುವುದಕ್ಕೆ ಆಕ್ಷೇಪವಿಲ್ಲ. ಆದರೆ ಹೊಸದಾಗಿ ಪದಗಳನ್ನು ಸ್ವೀಕರಿಸುವುದಾದರೆ ಹಾಗೆ ತದ್ಭವ ರೂಪಕ್ಕೆ ತರಬಾರದು. ಆಗ ಸಂಸ್ಕೃತಶಬ್ದಗಳು ಅಂದಗೆಟ್ಟು ಅಪಪ್ರಯೋಗಗಳಾಗುತ್ತವೆ. ಹೀಗೆ ಅಂದಗೆಟ್ಟ ಕೆಲವು ಪದಗಳೆಂದರೆ ಧೃಢ, ಉಚ್ಛ, ಭೀಭತ್ಸ, ಪುತ್ಥಳಿ, ಸ್ವಚ್ಚ ಇತ್ಯಾದಿಗಳು. (ಪುಟ ೯: ಕ.ಬ:ದೋ.ದೌ)

ಯಾವುದೇ ಭಾಷೆಯ ಪದಗಳನ್ನು ಕನ್ನಡಿಗರು ಬಳಸುವಾಗ ಕನ್ನಡದ ಶೈಲಿಯ ಉಚ್ಚರಣೆ ಸಹಜ. ಹಾಗಾಗಿಯೇ ಅಂದು ತತ್ಭವಗಳು ಉಂಟಾಗಿದ್ದು. ಅಂದಿಗೆ ಅದು ಸರಿ, ಇಂದಿಗೆ ಸರಿಯಿಲ್ಲ ಎಂದರೆ ಹೇಗೆ? ಬಸ್, ಕಾರ್ ಎಂಬುವು ಕನ್ನಡದಲ್ಲಿ ಬಸ್ಸು, ಕಾರು ಎಂದು ಬದಲಾಗುವುದೂ ಸಹಜವಾದ ಬದಲಾವಣೆ ತಾನೆ? ಅದು ಅಂದಗೆಡಿಸುವುದೋ? ಎಲ್ಲ ಕನ್ನಡಿಗರೂ ಕನ್ನಡ ನುಡಿಯಲ್ಲಿ ಇರುವ ಸಂಸ್ಕೃತ ಪದಗಳನ್ನು ಸಂಸ್ಕೃತದಲ್ಲಿರುವಂತೆಯೇ ಉಚ್ಚರಿಸಬೇಕೆಂಬ ನಿಲುವು/ ಬಯಕೆಯು ಎಷ್ಟರ ಮಟ್ಟಿಗೆ ಸರಿ? ಎಷ್ಟರ ಮಟ್ಟಿಗೆ ವೈಜ್ಞಾನಿಕ? ಇದು ಎಂದಿಗೂ ಆಗಲಾರದ್ದಲ್ಲವೇನು?

ಸಂಸ್ಕೃತ ವ್ಯಾಕರಣದ ಪರಿಚಯವಿಲ್ಲದೇ ಇರುವ ತಪ್ಪಿನಿಂದಾಗಿಯೂ. ಬಲ್ಲವರ ಒಡನಾಟವಿರದ ತಪ್ಪಿನಿಂದಾಗಿಯೂ ಅನೇಕ ಸಂಸ್ಕೃತ ಪದಗಳು / ಪದಕಟ್ಟುಗಳು ತಪ್ಪಾಗಿವೆ. ಕೋಟ್ಯಾಧೀಶ, ಜಾತ್ಯಾತೀತ, ತಿಂಗಳಾಂತ್ಯ, ಹಿಂದಿಯೇತರ, ಜೈ ರಾಮ, ಅರ್ಧಂಬರ್ಧ, ಕೆಂಪಾಂಬುಧಿ ಇವೆಲ್ಲಾ ತಪ್ಪು. ಕೋಟ್ಯಧೀಶ, ಜಾತ್ಯತೀತ, ತಿಂಗಳಂತ್ಯ, ಹಿಂದೀತರ, ಜಯರಾಮ, ಅರ್ಧಾರ್ಧ, ಕೆಂಪಂಬುಧಿ ಅನ್ನುವುದು ಸರಿ. ಅಂಗಾಂಗ ತಪ್ಪು, ಅಂಗೋಪಾಂಗ ಅನ್ನಬೇಕು, ನಾಯಕಿ ಅಲ್ಲ ನಾಯಿಕೆ, ಸಮಾಜಸೇವಕಿ ಅಲ್ಲಾ ಸಮಾಜಸೇವಿಕೆ, ಪಾಶ್ಚಿಮಾತ್ಯ ಅಲ್ಲ ಪಾಶ್ಚ್ಯಾತ್ಯ, ದಾಯಾದಿ, ಶೋಭಾಯಮಾನ, ಮಹದೇಷ್ವರ, ಯೌವ್ವನ, ಉಪದ್ರ, ಚಾತುರ್ಯ, ಧೂಮ್ರಪಾನ, ಐಕ್ಯತೆ, ದೈನ್ಯತೆ, ಗಾಂಭೀರ್ಯತೆ, ವೈವಿಧ್ಯತೆ, ಔದಾರ್ಯತೆ, ಮಾಲಿನ್ಯತೆ, ದೇವಾನುದೇವತೆ, ಪ್ರಸ್ತಾಪ, ಜಿಗುಪ್ಸೆ, ಮಹತ್ಕಾರ್ಯ, ಲೇಖಕಿ, ಪೌರ್ಣಿಮೆ... ಎಲ್ಲಾ ತಪ್ಪು. ಮಹತ್ವ ಅಂದರೆ ತಪ್ಪು, ಮಹತ್ತ್ವ ಅನ್ನಬೇಕು, ಬಹುತ್ತ್ವ ತಪ್ಪು ಬಹುತ್ವ ಸರಿ... (ಪುಟ ೧೪~೨೩ರ ಸಾರ: ಕ.ಬ:ದೋ.ದೌ)
ಉಲಿದಂತೆ ಬರೆಯಬೇಕು ಅನ್ನುವ ವಾದಕ್ಕೆ ಮೇಲಿನ ಉದಾಹರಣೆಗಳು ಸಮರ್ಥನೆ ಕೊಡುತ್ತವೆ. ಆಡುಭಾಷೆಯಲ್ಲಿ ಇವುಗಳ ಉಚ್ಚರಣೆಯನ್ನು ತಿದ್ದಿಕೊಳ್ಳಬೇಕು ಎಂದರೆ ಎಲ್ಲ ಜನರ ನಾಲಗೆ ಬದಲಿಸಬೇಕು. ‘ಹಾಗೇನೂ ಈ ಪುಸ್ತಕ ಹೇಳುತ್ತಿಲ್ಲ. ಬರಹದಲ್ಲಿ ಹೀಗಿರಬೇಕ’ ಅನ್ನುವುದಾದರೆ ಬರಹಕ್ಕೂ ಆಡುವುದಕ್ಕೂ ನಡುವಿನ ವ್ಯತ್ಯಾಸ ಹೀಗೇ ಉಳಿಸಿಕೊಳ್ಳಬೇಕಾಗುತ್ತದೆ. ಆಗ ಬರಹಕ್ಕೆ ಅರ್ಥವೇ ಇರುವುದಿಲ್ಲ. ನಿಮಗೊಂದು ತಮಾಷೆ ಗೊತ್ತಾ? ಈ ಪಂಡಿತರ ಪ್ರಕಾರ ನಮ್ಮ ಪುರಂದರ ದಾಸರು... ‘ಆಡಿಸಿದಳೆಶೋದೆ ಜಗದೋದ್ಧಾರನಾ...’ ಅಂದಿರೋದು ತಪ್ಪು. ‘ಆಡಿಸಿದಳು ಯಶೋದೆ, ಜಗದುದ್ಧಾರನಾ...’ ಅನ್ನಬೇಕಿತ್ತು.
ಇನ್ನು ಹೆಸರುಗಳನ್ನು ಇಡುವಾಗ (ಅಂಕಿತ ನಾಮ ಬಳಸುವಾಗ) ಸದೃಶರೂಪಗಳ ಅಂಧಾನುಕರಣೆಯಿಂದಾಗಿಯೂ, ಉಚ್ಚಾರಣೆಯ ವಿಕೃತಿಯ ಫಲವಾಗಿಯೂ, ಅಸಡ್ಡೆ, ಅಶಿಕ್ಷೆಯ ಫಲವಾಗಿಯೂ ತಪ್ಪು ಹೆಸರುಗಳನ್ನು ಇಡುತ್ತಾರೆ/ ಬಳಸುತ್ತಾರೆ. ಚಾಮುಂಡಿ, ದುರ್ಗಿ, ಗಾಯಿತ್ರಿ, ರಘೋತ್ತಮ ಪಾಲಾಕ್ಷ ಇವೆಲ್ಲಾ
ಕ್ರಮವಾಗಿ ಚಾಮುಂಡಾ, ದುರ್ಗಾ, ಗಾಯತ್ರಿ, ರಘೂತ್ತಮ ಹಾಗೂ ಫಾಲಾಕ್ಷ ಎಂದಾಗಬೇಕು. ಸಂಖ್ಯಾಪದಗಳು
ಕೂಡಾ ತಪ್ಪಾಗಿವೆ. ಇಪ್ಪತ್ರೊಂಬತ್ತು, ಮೂವತ್ರೊಂಬತ್ತು ಅಂತಾ ಬಳಸುವುದು ತಪ್ಪು. (ಪುಟ ೨೫~೨೬ರ ಸಾರ: ಕ.ಬ:ದೋ.ದೌ)

ಉಚ್ಚರಣೆ ಆಯಾ ಜನರ ಭಾಷೆಯು ನೂರಾರು ವರ್ಷಗಳಿಂದ ಹೊಂದಿರುವ ಶೈಲಿಗೆ ಮಾರ್ಪಾಡಾಗುವುದು ಸಹಜ. ಮಲಯಾಳಿಗಳ ಇಂಗ್ಲೀಷಿಗೂ ಕನ್ನಡಿಗರ ಇಂಗ್ಲೀಷಿಗೂ ಇರುವ ವ್ಯತ್ಯಾಸದಂತೆ... ಇದು ತಾಯ್ನುಡಿಗೂ ಅನ್ವಯವಾಗುತ್ತದೆ. ಬೆಂಗಳೂರಿನ ಶೈಲಿ ಬೇರೆ, ಧಾರವಾಡದ್ದು ಬೇರೆ, ಮಂಗಳೂರಿನದ್ದು ಬೇರೆ. ಧೂಮಪಾನ, ಇಪ್ಪತ್ತೊಂಬತ್ತು, ಮೂವತ್ತೊಂಬತ್ತು ಅನ್ನೋದನ್ನು ಕೆಲವು ಪ್ರದೇಶಗಳ ಕನ್ನಡಿಗರು ಧೂಮ್ರಪಾನ, ಇಪ್ಪತ್ರೊಂಬತ್ತು, ಮೂವತ್ರೊಂಬತ್ತು ಎಂದು ಬಳಸೋದು ನಾಡಿನ ನಾನಾ ಪ್ರದೇಶಗಳ ವೈವಿಧ್ಯತೆ ಎಂಬಂತೆ ನೋಡೋದು ಸರಿ. ವೈವಿಧ್ಯತೆಯನ್ನು ಶಾಪ ಎಂಬಂತಲ್ಲ.


ವಿಭಕ್ತಿಗಳಲ್ಲೂ ತಪ್ಪಾಗುತ್ತಿದೆ. ಕುವೆಂಪುರವರು ತಪ್ಪು. ಕುವೆಂಪು ಅವರು ಅನ್ನಬೇಕು. ರಾಮಸ್ವಾಮಿಯವರು ಅಂದರೆ ತಪ್ಪು, ರಾಮಸ್ವಾಮಿಗಳು ಸರಿ, ಗೀತಳಿಂದ ಎನ್ನುವುದು ತಪ್ಪು ಗೀತನಿಂದ ಎನ್ನುವುದು ಸರಿ. ಅಲ್ಲಿನ, ಇಲ್ಲಿನ, ಇತ್ತೀಚಿನ ಎಂದರೆ ತಪ್ಪು. ಅಲ್ಲಿಯ, ಇಲ್ಲಿಯ, ಇತ್ತೀಚೆಯ ಮಾತ್ರಾ ಸರಿ. ನಡೆಸು, ಬೆಳೆಸು, ತೊಳೆಸು ಎಲ್ಲಾ ತಪ್ಪು. ನಡೆಯಿಸು, ಬೆಳೆಯಿಸು, ತೊಳೆಯಿಸು ಅಂತನ್ನಬೇಕು. (ಪುಟ ೩೯~೪೪ರ ಸಾರ: ಕ.ಬ:ದೋ.ದೌ)

ಆಡುನುಡಿಗೂ ಬರಹಕ್ಕೂ ವ್ಯತ್ಯಾಸ ಇದೆ. ಅಂತಹ ವ್ಯತ್ಯಾಸ ಇದ್ದಷ್ಟೂ ತೊಡಕು ಅನ್ನುವ ನಿಲುವು ಸರಿಯಾಗಿದೆ. ಆದರೆ ಅದನ್ನು ಕಡಿಮೆ ಮಾಡಲು, ಸರಿಪಡಿಸಲು ಹಿಡಿಯಬೇಕಾದ ದಾರಿ ಸರಿಯೇ ಎಂಬುದು ಪ್ರಶ್ನೆ. ಇಲ್ಲಿ ಬರೆದಂತೆ/ ಬರಹದಲ್ಲಿರುವಂತೆ ಉಚ್ಚರಿಸಬೇಕು ಎನ್ನುವುದು ಸರಿಯಲ್ಲ. ಯಾಕೆಂದರೆ ಅದು ಸಾಧಿಸಲು ಸಾಧ್ಯವೂ ಅಲ್ಲ. ಸಾಧುವೂ ಅಲ್ಲ. ಮಾತಾಡಿದಂತೆ ಬರೆಯುವುದು ಮಾತ್ರಾ ಈ ತೊಡಕನ್ನು ತಕ್ಕಮಟ್ಟಿಗೆ ನಿವಾರಿಸಬಹುದೇನೋ ಅಷ್ಟೆ. ಒಟ್ಟಲ್ಲಿ ಈ ಪಂಡಿತರ ಶಿಷ್ಟ ಕನ್ನಡ ಕಲ್ಪನೆ ಅಂಗಿಯ ಅಳತೆಗೆ ಮೈ ಹೊಂದಿಸಬೇಕೆನ್ನುವಂತೆ ಇದೆಯೇ ಹೊರತು ಮೈ ಅಳತೆಗೆ ಅಂಗಿ ಹೊಲಿಸಬೇಕು ಎನ್ನುವ ಹಾಗಿಲ್ಲ. ಹೌದಲ್ವಾ ಗುರೂ?

ರಾಷ್ಟ್ರೀಯ ಅಧ್ಯಕ್ಷರೂ ಅಂದ್ರೆ ಹಿಂಗಿರ್ಬೇಕಾ?


ಬೆಳಗಾವಿಗೆ ಬಂದಿದ್ದ ಭಾರತೀಯ ಜನತಾ ಪಕ್ಷವೆಂಬ ರಾಷ್ಟ್ರೀಯ ಪಕ್ಷದ ಮಹಾದಂಡನಾಯಕರು ಅರ್ಥಾತ್ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮರಾಠಿಗ ಶ್ರೀ ಶ್ರೀ ಶ್ರೀ ನಿತಿನ್ ಗಡ್ಕರಿಯವರು ಬೆಳಗಾವಿ ಗಡಿ ವಿಷಯವಾಗಿ, ತಾವು ಭಾರೀ ನಿಷ್ಪಕ್ಷಪಾತಿ ಅನ್ನುವಂತೆ ಮಾತಾಡೋ ನಾಟಕ ಮಾಡಿ ಎಡವಟ್ಟು ಮಾತಾಡಿರೋ ಸುದ್ದಿ 21.08.2010ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಂದಿದೆ ಗುರೂ!

ಬೆಳಗಾವಿ ಮತ್ತು ಮಹಾರಾಷ್ಟ್ರದ ರಾಜಕಾರಣ!

ಶ್ರೀ ಶ್ರೀ ಶ್ರೀ ಗಡ್ಕರಿಯವರು ತಮ್ಮ ಮಾತಲ್ಲಿ, ಬೆಳಗಾವಿ ವಿಷಯದಲ್ಲಿ ಪ್ರಧಾನಿಗಳು ಮಧ್ಯ ಪ್ರವೇಶಿಸಬೇಕೆಂದು ಮಹಾರಾಷ್ಟ್ರದ ನಿಲುವನ್ನು ಒಳಗೊಳಗೇ ಬೆಂಬಲಿಸಿರೋ ರೀತಿ ಹೇಳಿಕೆ ನೀಡಿ, ಆ ಮೂಲಕ ತಾವು ಮೇಲ್ನೋಟಕ್ಕೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು, ಒಳಗೊಳಗೆ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರು ಅನ್ನೋದನ್ನು ಸಾರಿದ್ದಾರೆ. ಹೇಗೇ ಅಂತೀರಾ? ಬೆಳಗಾವಿ ವಿಷಯದಲ್ಲಿ 1960ರ ದಶಕದಲ್ಲೇ ಶ್ರೀ ಸೇನಾಪತಿ ಬಾಪಟ್ ಅವರ ಉಪವಾಸ ಮುಷ್ಕರಕ್ಕೆ ಮಣಿದು, ಕರ್ನಾಟಕದ ವಿರೋಧದ ನಡುವೆಯೇ, ಕೇಂದ್ರಸರ್ಕಾರವು ಮಹಾಜನ್ ಆಯೋಗ ರಚಿಸಿತ್ತು. ಆ ವರದಿಯನ್ನು ಸಲ್ಲಿಸೋ ಮೊದಲೇ ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿಗಳಾಗಿದ್ದ ವಿ.ಪಿ.ನಾಯಕ್ ಅವರು ‘ವರದಿ ಹೇಗಿದ್ದರೂ ಒಪ್ಕೋತೀವಿ’ ಅಂದಿದ್ರು. ವರದಿ ಬಂದಮೇಲೆ ಉಲ್ಟಾ ಹೊಡೆದ ಮಹಾರಾಷ್ಟ್ರದ ರಾಜಕಾರಣಿಗಳು ಇವತ್ತಿನ ತನಕ ಸರಿಹೋಗಿಲ್ಲ. ಗಡಿ ಕಿತಾಪತೀನಾ ಇತ್ತೀಚಿಗೆ ಅವರು ಸುಪ್ರಿಂಕೋರ್ಟಿಗೆ ಒಯ್ದು, ಸಂಸತ್ತಲ್ಲಿ ಅವಕಾಶ ಸಿಕ್ಕಾಗೆಲ್ಲಾ ‘ಪ್ರಧಾನಮಂತ್ರಿ ಮಧ್ಯಸ್ಥಿಕೆ ಮಾಡ್ಲಿ, ಕೇಂದ್ರಸರ್ಕಾರ ಮಧ್ಯಸ್ಥಿಕೆ ಮಾಡ್ಲಿ’ ಅಂತಾ ಹಟಾ ಮಾಡ್ತಾನೆ ಇದಾರೆ. ಈ ರಾಷ್ಟ್ರೀಯ ಪಕ್ಷದ ಮರಾಠಿ ಅಧ್ಯಕ್ಷರು ಕೂಡಾ ಹೇಳ್ತಿರೋದು ಇದನ್ನೇ ತಾನೇ?

ರಾಷ್ಟ್ರೀಯ ಅಧ್ಯಕ್ಷರ ನಿಲುವು!

ಹೀಗೆ ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರೋ ದೊಡ್ ಜನುಗೋಳು, ಇನ್ನೂ ವಿವಾದವನ್ನು ಜೀವಂತವಾಗಿ ಉಳಿಸಿಕೊಳ್ಳೋ ತೆರೆನಾಗಿ ಹೇಳಿಕೆ ಕೊಡೋ ಬದಲು ‘ರಾಜ್ಯಗಳ ಗಡಿ ನಿಶ್ಚಯಕ್ಕೆ, ಸ್ವಾತಂತ್ರ್ಯ ಬಂದಾಗಿನಿಂದ ಕಾಲಕಾಲಕ್ಕೆ ರಚಿಸಿರುವ ರಾಜ್ಯ ವಿಂಗಡನಾ ಸಮಿತಿಯ ತೀರ್ಮಾನಗಳಿಗೆ, ಸಂಸತ್ತು ನೇಮಿಸಿದ್ದ ಆಯೋಗದ ತೀರ್ಪಿಗೆ ಎಲ್ಲಾ ರಾಜ್ಯಗಳೂ ಒಪ್ಪಿ, ಅದರಂತೆ ನಡೆಯಬೇಕು. ಆದಕಾರಣ ಮಹಾಜನ್ ವರದಿಯೆನ್ನುವ ಸಂವಿಧಾನಬದ್ಧವಾದ ವರದಿಯೇ ಗಡಿ ತಕರಾರಿಗೆ ಅಂತಿಮ ಪರಿಹಾರ’ ಅಂತಾ ಹೇಳಬೇಕಿತ್ತಲ್ವಾ? ‘ಈಗ ಸುಪ್ರಿಂಕೋರ್ಟಿನಲ್ಲಿ ವಿಷಯ ಇದೆ, ಪ್ರಧಾನಿ ಮಧ್ಯ ಪ್ರವೇಶ ಆಗಬೇಕು...’ ಇತ್ಯಾದಿ ಮಹಾರಾಷ್ಟ್ರದ ನಿಲುವುಗಳನ್ನು ಹೇಳೋವಾಗ, ಕರ್ನಾಟಕ ಬಿಜೆಪಿಯ "ಮಹಾಜನ್ ವರದಿಯೇ ಅಂತಿಮ" ಎನ್ನುವ ನಿಲುವನ್ನು ಯಾಕೆ ಹೇಳಲಿಲ್ಲ ಅನ್ನಿಸಲ್ವಾ? ಇರಲಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಗಡ್ಕರಿಯವರು ನೀಡಿರೋ ಹೇಳಿಕೇಗೆ ಕರ್ನಾಟಕದ ಭಾರತೀಯ ಜನತಾ ಪಕ್ಷದ ಧುರೀಣರು ಹೇಗೆ ಪ್ರತಿಕ್ರಿಯಿಸ್ತಾರೆ ಅಂತಾ ನೋಡ್ಮಾ...!

ರಾಷ್ಟ್ರೀಯ ನಾಯಕರ ಪಕ್ಷಪಾತತನ!

ಕರ್ನಾಟಕದಿಂದ ರಾಜ್ಯಸಭೆ ಹೊಕ್ಕ ಮತ್ತೊಬ್ಬ ಬಿಜೆಪಿ ರಾಷ್ಟ್ರೀಯ ನಾಯಕರಾದ ಶ್ರೀ ವೆಂಕಯ್ಯನಾಯ್ಡು ಅವರು ಮೊನ್ನೆ ನಡಕೊಂಡಿದ್ದು ಕೂಡಾ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ನಮ್ಮ ಬಳ್ಳಾರಿಯಲ್ಲಿ ಬಿಜೆಪಿ ಮಾಡಿದ ಸಮಾವೇಶದಲ್ಲಿ, ಪಾಪಾ, ಅಷ್ಟು ದೂರದಿಂದ ಬಂದಿದ್ದ ಶ್ರೀಮತಿ ಸುಷ್ಮಾ ಸ್ವರಾಜ್ ಅವರೇ ಕನ್ನಡದಲ್ಲಿ ಮಾತಾಡೋ ಪ್ರಯತ್ನ ಮಾಡುದ್ರೆ, ಈ ಯಪ್ಪಾ ತೆಲುಗಲ್ಲಿ ಮಾತಾಡುದ್ರು. ಯಾಕ್ರಪ್ಪಾ? ಬಳ್ಳಾರಿ ಅನ್ನೋ ಅಚ್ಚಗನ್ನಡದ ಪ್ರದೇಶಾನಾ ಕರ್ನಾಟಕಕ್ಕೆ ಸೇರಿಸಿಕೊಳ್ಳಲು ಅನಕೃ ಕಾಲದಿಂದಾ ನಡೆದ ಹೋರಾಟಾನಾ, ಬಳ್ಳಾರೀನಾ ಕರ್ನಾಟಕಕ್ಕೆ ಸೇರಿಸಲು ಜೀವ ಕೊಟ್ಟ ರಂಜಾನ್ ಸಾಬ್ ಅವರ ಬಲಿದಾನದ ಕಥೇನಾ ಇವರಿಗೆ ಯಾರೂ ಹೇಳಲಿಲ್ವಾ? ಅನ್ಯಾಯವಾಗಿ ಕರ್ನಾಟಕ ಕಳೆದುಕೊಂಡು ಮೂರು ತಾಲ್ಲೂಕುಗಳ ಕಥೇನಾ ಇವರಿಗೆ ಹೇಳಲಿಲ್ವಾ? ಬಳ್ಳಾರಿ ಅನ್ನೋದು ಹೇಗೂ ಭೂಪಟದಲ್ಲಿ ಕರ್ನಾಟಕದಲ್ಲಿ ಇದೆಯಲ್ಲಾ, ಅಷ್ಟು ಸಾಕು... ಅಂದ್ಕೊಂಡು ತೆಲುಗಲ್ಲಿ ಭಾಷಣ ಮಾಡ್ಬುಟ್ರಾ ಯಜಮಾನ್ರು? ಗಡಿಭಾಗದ ಊರುಗಳಲ್ಲಿ ಆಯ ರಾಜ್ಯದ ಭಾಷೇನೆ ಕಡೆಗಣಿಸಿ, ನೆರೆ ರಾಜ್ಯದ ಭಾಷೇಲಿ ಭಾಷಣ ಮಾಡೋದು ಸುಖಾಸುಮ್ಮನೇ ಭಾಷಾ ವೈಷಮ್ಯ ಹುಟ್ಟುಹಾಕುವಂಥಾ ಪ್ರಚೋದನಾತ್ಮಕ ಕ್ರಮಾ ಆಗಲ್ವಾ? ಯಾಕೆ ಈ ರಾಷ್ಟ್ರೀಯ ನಾಯಕರು ಹೀಗೆ ಮಾಡುದ್ರು ಅಂತಾ ಕರ್ನಾಟಕದ ಒಬ್ಬರಾದರೂ ಬಿಜೆಪಿ ಧುರೀಣರು ಕೇಳುತ್ತಾರಾ ಅಂತಾ ಕುತೂಹಲ ಆಗ್ತಿದೆ ಗುರೂ!

ಇದೇನು ರಾಷ್ಟ್ರೀಯ ವಿಷಯಾನಾ?

"ಅಯ್ಯೋ, ನಿಮಗೇನಾದ್ರೂ ತಲೆ ಕೆಟ್ಟಿದೆಯಾ? ರಾಷ್ಟ್ರೀಯ ಪಕ್ಷಾ ಅಂದ್ರೆ ಅದುಕ್ಕೆ ಪ್ರಾದೇಶಿಕ ಚಿಂತನೆ ಇರಬಾರದು ಅಂತಾ ಗೊತ್ತಿಲ್ವಾ? ವೆಂಕಯ್ಯನಾಯ್ಡು ಅವರೇ ನಾನು ರಾಷ್ಟ್ರೀಯ ವಿಷಯಗಳಲ್ಲಿ ಮಾತ್ರಾ ತಲೆ ಹಾಕ್ತೀನಿ ಅಂದಿಲ್ವಾ ಪಾಪಾ, ಅದುಕ್ಕೆ ರಾಷ್ಟ್ರೀಯ ಮಟ್ಟದ ಭಾಷಣಾನಾ ಕನ್ನಡನಾಡೊಳಗೆ ಬಂದು ತೆಲುಗಲ್ಲಿ ಮಾಡ್ತಾರೆ. ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ಗಡ್ಕರಿಯವರು ಮಹಾರಾಷ್ಟ್ರದ ನಿಲುವನ್ನು ಪರೋಕ್ಷವಾಗಿ ಬೆಂಬಲುಸ್ತಾರೆ. ಇದುನ್ನ ಪ್ರಶ್ನಿಸೋದುಂಟಾ? ಅದು ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರೋದಿಲ್ವಾ" ಅಂತೀರಾ ಗುರೂ! ಅದೂ ದಿಟಾನೆ ಬುಡಿ!!

ಅಬ್ಬಾ! ಅಂತೂ ಬಂತು ಕನ್ನಡದ್ದೇ ವ್ಯಾಕರಣ!!


ಕನ್ನಡ ನುಡಿಯನ್ನು ವೈಜ್ಞಾನಿಕವಾಗಿ, ಅದರದೇ ನೆಲೆಯಲ್ಲಿ ಅಧ್ಯಯನ ಮಾಡುತ್ತಿರುವ ಕೆಲವೇ ನುಡಿಯರಿಗರಲ್ಲಿ ಮುಂಚೂಣಿಯಲ್ಲಿರುವವರು ಡಾ. ಡಿ ಎನ್ ಶಂಕರ್ ಭಟ್. ಈ ಹಿಂದೆ ಇವರು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎನ್ನುವ ಹೊತ್ತಗೆಯಲ್ಲಿ ಇದುವರೆಗೂ ನಮಗೆ ಕಲಿಸಲಾಗುತ್ತಿದ್ದ ವ್ಯಾಕರಣದ ಮೂಲನೆಲೆ ಕನ್ನಡದ್ದೇ ಅಲ್ಲ ಎನ್ನುವುದನ್ನು ಎಳೆಎಳೆಯಾಗಿ ಬಿಡಿಸಿದ್ದರು ಮತ್ತು ಕನ್ನಡಕ್ಕೆ ಅದರದೇ ನೆಲೆಯಲ್ಲಿ ವ್ಯಾಕರಣವನ್ನು ಬರೆಯಬೇಕಾದ ಅಗತ್ಯವನ್ನು ತಿಳಿಸಿಕೊಟ್ಟಿದ್ದರು. ಇದೀಗ ಕನ್ನಡದ್ದೇ ನೆಲೆಯ ಕನ್ನಡದ ವ್ಯಾಕರಣದ ಹೊತ್ತಗೆಯನ್ನು ಬರೆಯಲು ಮುಂದಾಗಿದ್ದಾರೆ. ಅದರ ಮೊದಲ ಭಾಗ ಇದೀಗ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಈ ಹೊತ್ತಗೆಯಲ್ಲೇನಿದೆ?

ಈ ಹೊತ್ತಗೆಯ ಮೊದಲಲ್ಲಿ ಶಂಕರ ಭಟ್ ಅವರು ಹೀಗಂದಿದ್ದಾರೆ :
ಸೊಲ್ಲರಿಮೆಯ ಈ ಹೊತ್ತಗೆಯಲ್ಲಿ ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸ ಪದಗಳನ್ನು ಹೇಗೆ ಉಂಟು ಮಾಡಲಾಗುತ್ತದೆ ಎಂಬುದನ್ನು ವಿವರಿಸಿದ್ದೇನೆ.ಅರಿಮೆಯ (ವಿಜ್ನಾನದ) ಬರಹಗಳಲ್ಲಿ ಹೊಸ ಪದಗಳನ್ನು ಹುಟ್ಟುಹಾಕಬೇಕೆಂದಿರುವವರು ಸಂಸ್ಕ್ರುತದ ಮೊರೆ ಹೋಗುವ ಬದಲು, ಕನ್ನಡದಲ್ಲೇನೇ ತಮಗೆ ಬೇಕಾಗಿರುವ
ಪದಗಳನ್ನು ಉಂಟುಮಾಡಲು ಇದು ತಿಳಿವನ್ನೀಯಬಲ್ಲದು.
ನನ್ನ ಇತ್ತೀಚೆಗಿನ ಕನ್ನಡ ವ್ಯಾಕರಣ ಯಾಕೆ ಬೇಕು? ಎಂಬ ಹೊತ್ತಗೆಯಲ್ಲಿ ಹಲವು ಬಗೆಯ ಕಲಿಕೆ ಮತ್ತು ಉದ್ಯೋಗಗಳಲ್ಲಿ ಕನ್ನಡದ ಸೊಲ್ಲರಿಮೆ ಹೇಗೆ ನೆರವಿಗೆ ಬರಬಲ್ಲದು ಎಂಬುದನ್ನು ವಿವರಿಸಿದ್ದೇನೆ. ಅಂತಹ ನೆರವನ್ನು ಕೊಡಬಲ್ಲ ಹೊತ್ತಗೆಗಳನ್ನು ಬರೆಯುವವರಿಗೆ ಈ ಕನ್ನಡ ಬರಹದ ಸೊಲ್ಲರಿಮೆ ಅಡಿಗಟ್ಟನ್ನೊದಗಿಸುವಂತಾಗಲಿ ಎಂಬುದು ನನ್ನ ಹಾರೈಕೆ.
ಅರಿಮೆಯ ಬರಹಕ್ಕೆ ಬೇಕಾಗಿ ಬರುವ ಪದಗಳನ್ನೆಲ್ಲ ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ ಮತ್ತು ಅಂತಹ ಪದಗಳನ್ನು ಬಳಸುವುದರಿಂದ ತೊಂದರೆಯೇನೂ ಆಗುವುದಿಲ್ಲ ಎಂಬುದನ್ನು ತೋರಿಸಿಕೊಡುವುದೂ ಈ ಹೊತ್ತಗೆಯ ಒಂದು ಗುರಿಯಾಗಿದೆ.

ಇದು ಬರಿಯ ಮೊದಲ ಕಂತು!
ಕನ್ನಡ ಬರಹದ ಸೊಲ್ಲರಿಮೆಯ ಮೊದಲ ಕಂತು ಮಾತ್ರವೇ ಈ ಹೊತ್ತಗೆಯಲ್ಲಿ ಅಚ್ಚಾಗಿದೆ. ಇದರಲ್ಲಿ ಪ್ರಮುಖವಾಗಿ ಸೊಲ್ಲರಿಮೆಯ ಅಗತ್ಯ, ಸ್ವರೂಪಗಳ ಮುನ್ನೋಟ, ಹೆಸರುಪದಗಳ ಕುರಿತ ಭಾಗಗಳಿವೆ. ಶ್ರೀಯುತ ಶಂಕರ್ ಭಟ್ ಅವರು ಮುಂದಿನ ಕಂತುಗಳ ರಚನೆಯಲ್ಲಿ ತೊಡಗಿದ್ದಾರೆ. ಸದ್ಯದಲ್ಲೇ ಎರಡನೇ ಭಾಗವೂ ಸಿದ್ಧವಾಗಲಿದೆ. ಹೆಗ್ಗೋಡಿನ ಬಾಶಾ ಪ್ರಕಾಶನದವರು ಹೊರತಂದಿರುವ ಈ ಹೊತ್ತಗೆಯನ್ನು ಮಂಗಳೂರಿನ ಅತ್ರಿ ಬುಕ್ ಸೆಂಟರ್ ಅವರು ಹಂಚಿಕೆ/ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರಿನ ನವಕರ್ನಾಟಕ, ಟೋಟಲ್ ಕನ್ನಡ.ಕಾಂ ಮಳಿಗೆಗಳೂ ಸೇರಿದಂತೆ ಹೆಸರಾಂತ ಹೊತ್ತಗೆಯಂಗಡಿಗಳಲ್ಲಿ ಸಿಗುತ್ತಿದೆ. ಕನ್ನಡದ ಸೊಲ್ಲರಿಮೆಯನ್ನು ಅರಿಯಬೇಕೆಂದವರಿಗೆ ಇದೊಂದು ಒಳ್ಳೆಯ ಹೊತ್ತಗೆ. ನೀವೂ ಕೊಂಡು ಓದಿ, ನಿಮ್ಮವರಿಗೂ ತಿಳಿಸಿ.

ಭಾರತದ ಒಪ್ಪುಕೂಟ ಮತ್ತು ಸ್ವಾತಂತ್ರ್ಯ!!

ಇವತ್ತು ಭಾರತ ದೇಶದ 64ನೇ ಸ್ವಾತಂತ್ರ್ಯ ದಿನಾಚರಣೆ. ಎಲ್ಲೆಡೆ ಮೂರ್ಬಣ್ಣದ ಬಾವುಟ ಮುಗಿಲೆತ್ತರಕ್ಕೆ ಹಾರಾಡುತ್ತಿದೆ. ಕೆಂಪುಕೋಟೆಯ ಮೇಲಿಂದ, ಮಾಣಿಕ್ ಶಾ ಬಯಲಿಂದ ದೇಶಪ್ರೇಮದ ಕರೆ, ಜೈ ಹಿಂದ್ ಎಂಬ ಕೂಗು ಮುಗಿಲು ಮುಟ್ಟುತ್ತಿವೆ. ಆದ್ರೆ ಇದೇ ಸಮಯದಲ್ಲಿ ಕೇಂದ್ರಸರ್ಕಾರವು ರಾಜ್ಯಗಳ ಆರ್ಥಿಕ ಸ್ವತಂತ್ರವನ್ನು ಮೊಟಕು ಮಾಡಕ್ಕೆ ಹುನ್ನಾರ ನಡೆಸಿ ಸ್ವಾತಂತ್ರ್ಯ ಅನ್ನೋದನ್ನೇ ವಿಡಂಬನೆ ಮಾಡಕ್ಕೆ ಮುಂದಾಗಿದೆ ಗುರೂ! ವಿಷಯ ಏನೂಂದ್ರೆ ಕಳೆದ ವಾರ "ಸರಕು ಮತ್ತು ಸೇವಾ ತೆರಿಗೆ" ಗೆ ಸಂಬಂಧಿಸಿದ್ದ ಒಂದು ತಿದ್ದುಪಡಿಯನ್ನು ಸಂವಿಧಾನಕ್ಕೆ ಮಾಡಲು ಕೇಂದ್ರಸರ್ಕಾರ ಮುಂದಾಗಿದೆ. ಈ ತಿದ್ದುಪಡಿಯಲ್ಲಿ ಕೇಂದ್ರದ ಅರ್ಥಸಚಿವರಿಗೆ ರಾಜ್ಯಗಳ ಸಮಿತಿಯ ನಿಲುವನ್ನು, ಅದಕ್ಕೆ ಬಹುಮತ ಇದ್ದಾಗಲೂ, ತಿರಸ್ಕರಿಸೋ... ವಿಟೋ ಹಕ್ಕನ್ನು ಕೊಡಮಾಡಲಾಗಿದೆ. ಸದ್ಯಕ್ಕೆ ಇದನ್ನು ರಾಜ್ಯಗಳು ತಿರಸ್ಕರಿಸಿವೆ ಅನ್ನೋ ಸುದ್ದಿಯೇನೋ ಬಂದಿದೆ.

ಒಪ್ಪುಕೂಟವೆಂದರೆ ಅಧಿಕಾರ ವಿಕೇಂದ್ರೀಕರಣ!

ಭಾರತದ ಸ್ವರೂಪ ಒಪ್ಪುಕೂಟದ್ದು. ಈ ಸ್ವರೂಪ ಯಾರೋ ಕೊಟ್ಟುಹೋದ ಕೊಡುಗೆ ಅಲ್ಲಾ. ಬೇರೆ ಬೇರೆ ನುಡಿ, ಪ್ರದೇಶ, ವಾತಾವರಣ, ಸಂಸ್ಕೃತಿ, ಆಚರಣೆ, ನಂಬಿಕೆಗಳ ಜನಾಂಗಗಳಿರೋ ಭಾರತಕ್ಕೆ ಇದು ಅನಿವಾರ್ಯವಾದ ಸ್ವರೂಪ ಇದು. ಹಾಗಾಗಿ ಇಲ್ಲಿ ಒಪ್ಪುಕೂಟದ ಅಡಿಪಾಯವೇ ಸಮಾನ ಗೌರವ ಮತ್ತು ಆರ್ಥಿಕ ಸ್ವಾಯತ್ತತೆ. ಹೆಚ್ಚು ಹೆಚ್ಚು ಅಧಿಕಾರ ವಿಕೇಂದ್ರೀಕರಣ. ಕೇಂದ್ರಸರ್ಕಾರ ಹೆಚ್ಚು ಹೆಚ್ಚು ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಬದಲಿಗೆ ಇರೋ ಅಧಿಕಾರವನ್ನು ಕಿತ್ತುಕೊಳ್ಳುವ ಈ ಮನಸ್ಥಿತಿ ಒಪ್ಪುಕೂಟದ ಕಲ್ಪನೆಗೆ ವಿರುದ್ಧವಾಗಿದೆ. ಈಗಾಗಲೇ ಇರುವ ಅಧಿಕಾರಗಳನ್ನು ಮತ್ತಷ್ಟು ಬಲಪಡಿಸೋ ಬದಲು ಹೀಗೆ ರಾಜ್ಯಗಳನ್ನು ಬಲಹೀನಗೊಳಿಸೋದು ಮುಂದೆ ಸಾಗೋ ಪ್ರಗತಿ ರಥಾನ ಹಿಂದೆ ಹಿಂದೆ ಓಡಿಸೋ ಹಾಗಿದೆ...

ಕನ್ನಡ ಚಿತ್ರರಂಗದ ಸಮಸ್ಯೆ!

ಇದುವರೆಗೆ...

ದಕ್ಷಿಣ ಭಾರತೀಯ ಚಿತ್ರರಂಗದ ಬಗ್ಗೆ E&Y ಮತ್ತು FICCI ಒಂದು ವರದಿಯನ್ನು ಹೊರತಂದಿದ್ದು ಅದರಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಇರುವ ಮಾಹಿತಿ ತಪ್ಪಾಗಿದ್ದು, ಉದ್ಯಮದ ಬೆಳವಣಿಗೆಗೆ ಮಾರಕವಾಗಿತ್ತು. ಈ ವರದಿಯನ್ನು ಚಿತ್ರರಂಗದ ಗಣ್ಯರ ಜೊತೆ ಬಳಗ ಹಂಚಿಕೊಳ್ಳಲು ಮುಂದಾಯಿತು. ಕರ್ನಾಟಕ ಚಲನಚಿತ್ರ ಅಕಾಡಮಿಯು ಇದರಲ್ಲಿ ಆಸಕ್ತಿ ತೋರಿ ಚಿತ್ರರಂಗದ ಎಲ್ಲಾ ಪ್ರಮುಖ ಕ್ಷೇತ್ರಗಳ ಪ್ರತಿನಿಧಿ ಸಭೆಯನ್ನು ಕರೆದು ವರದಿ ಬಗ್ಗೆ ಮಾಹಿತಿ ಹಂಚಿಕೊಂಡಿತು. ಆಗ ಸರಿಯಾದ ಮಾಹಿತಿ ನೀಡಲು ಸಮೀಕ್ಷೆಯನ್ನು ಮಾಡಲು ತೀರ್ಮಾನಿಸಲಾಯಿತು. ಬಳಗ ಮತ್ತು ಅಕಾಡಮಿಗಳು ಒಗ್ಗೂಡಿ ಏಳು ತಿಂಗಳು ಶ್ರಮಿಸಿ "ಕನ್ನಡ ಚಿತ್ರರಂಗ: ಒಂದು ಸಮೀಕ್ಷೆ" ಯನ್ನು ಹೊರತಂದವು.

ಸಮೀಕ್ಷೆಯ ಬಿಡುಗಡೆ ಮತ್ತು ಪ್ರತಿಕ್ರಿಯೆ!

ಸದರಿ ಸಮೀಕ್ಷೆಯನ್ನು ಅಕಾಡಮಿಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯ್ತು. ಸಮಿತಿಯ ಸಮೀಕ್ಷೆಯಲ್ಲಿ ಮೂಡಿಬಂದಿದ್ದ ಕೆಲ ಅಂಶಗಳ ಬಗ್ಗೆ ಕೆಲವರಿಂದ ವಿರೋಧ ಮೂಡಿಬಂದಿತು. ಹಾಗಾಗಿ ವರದಿಯನ್ನು ಅಕಾಡಮಿ ಹಿಂಪಡೆಯಿತು.

ಕನ್ನಡ ಚಿತ್ರರಂಗಕ್ಕೆ ಬೇಡವಾದ ಸತ್ಯ!

ಕನ್ನಡ ಚಿತ್ರರಂಗಕ್ಕೆ E&Y ಮತ್ತು FICCI ನೀಡಿದ ವರದಿಯ ಅಪಾಯದ ಬಗ್ಗೆಯಾಗಲೀ, ಆ ವರದಿಗೆ ಉತ್ತರ ನೀಡಬೇಕಾದ ಅಗತ್ಯದ ಬಗ್ಗೆಯಾಗಲೀ ಅರಿವಿದ್ದಂತಿಲ್ಲ. ಅಕಾಡಮಿ ಮತ್ತು ಬಳಗ ನಡೆಸಿದ ಸಮೀಕ್ಷೆಯಲ್ಲಿನ ಅಭಿಪ್ರಾಯಗಳನ್ನು ತೂಗಿ ನೋಡಬೇಕೆನ್ನುವ, ನಿಜಕ್ಕೂ ಚಿತ್ರರಂಗದ ಸಮಸ್ಯೆಗಳೇನು? ಎದುರಿಸಬೇಕಾದ ಸವಾಲುಗಳೇನು? ಎಂದು ಯೋಚಿಸಬೇಕೆಂಬ
ಮನಸ್ಥಿತಿ ಇರುವಂತೆಯೂ ಕಾಣಲಿಲ್ಲ. ಮುಂದೆ ಬರಲಿರುವ ದಿನಗಳು ತಮ್ಮ ಅಸ್ತಿತ್ವಕ್ಕೇ ಧಕ್ಕೆ ತಂದಾವು ಅದನ್ನು ಎದುರಿಸಲು ಒಂದಾಗಿ ಯೋಚಿಸೋಣ ಎನ್ನುವ ಅರಿವೂ ಕಾಣಲಿಲ್ಲ.

ಚಿತ್ರರಂಗದ ಮುಂದಿರುವ ಸವಾಲು!

ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಬಿಡುಗಡೆಗೆ ವಿಧಿಸಿರುವ ಪ್ರಿಂಟ್ ಸಂಖ್ಯೆಯ, ಏಳುವಾರದ ಗಡುವಿನ ಒಪ್ಪಂದಕ್ಕೆ ಕವಡೆ ಕಿಮ್ಮತ್ತೂ ಇರುವುದಿಲ್ಲ. ಇದರಿಂದಾಗಿ ಕರ್ನಾಟಕದ ಮೂಲೆ ಮೂಲೆಯಲ್ಲಿ ತಮಿಳು, ತೆಲುಗು, ಇಂಗ್ಲೀಷ್, ಹಿಂದೀ ಇತ್ಯಾದಿ ಚಿತ್ರಗಳು ರಾರಾಜಿಸುವುದರ ಜೊತೆಯಲ್ಲೇ ಇಡೀ ಕನ್ನಡ ಜನತೆ ನಿಧಾನವಾಗಿ ಕನ್ನಡ ಚಿತ್ರಗಳಿಂದ ದೂರವಾಗುವ ಸಾಧ್ಯತೆಗಳು ಕಾಣುತ್ತಿವೆ. ರಾಷ್ಟ್ರೀಯ ಅಂತರರಾಷ್ಟ್ರೀಯ ಸಮಿತಿಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಕನ್ನಡ ಚಿತ್ರರಂಗದ ಪ್ರತಿನಿಧಿಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಈಗಲೇ ಇಲ್ಲದಂತಾಗಿದೆ. ಇದು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಕನ್ನಡ ಚಿತ್ರರಂಗದ ಸದಸ್ಯರನ್ನು ಒಮ್ಮೆಗೇ ಅಮಾನತ್ತು ಗೊಳಿಸಿದಾಗ ಸಾಬೀತಾಗಿದೆ. ಗೋವಾ ಚಿತ್ರೋತ್ಸವದಲ್ಲಿ ಆಗುತ್ತಿರುವ ಅಪಮಾನಗಳಿಗಂತೂ ಲೆಕ್ಕವೇ ಇಲ್ಲ. ಪಾಲಿಸಿ ಮಾಡುವಾಗ ನಮ್ಮವರ ಮಾತಿಗೆ ಸರ್ಕಾರ ಯಾಕಾದರೂ ಬೆಲೆ ಕೊಟ್ಟೀತು. "ನಾವು ತೆಗೆಯೋ ಚಿತ್ರಗಳ ರಿಮೇಕೆಂಬ ಎಂಜಲು ತಿನ್ನುವವವರು ನೀವು" ಎನ್ನುವ ಅವಹೇಳನ ಅದೆಷ್ಟು ಕಡೆ ತಾನೇ ಆಗಿಲ್ಲ. ನಮ್ಮ ಚಿತ್ರರಂಗ ಉದ್ಧಾರವಾಗಲು ಇದೀಗ ಗಂಭೀರವಾಗಿ ಚಿಂತಿಸಲು ಸಕಾಲ.

ಏನೇನಾಗಬೇಕು?

ಕನ್ನಡ ಚಿತ್ರರಂಗದಲ್ಲಿ ಹೊಸಬರ, ಹೊಸತನದ ಚಿತ್ರಗಳು ತಯಾರಾಗಬೇಕಾಗಿದೆ. ವೃತ್ತಿಪರತೆ ಹೆಚ್ಚಾಗಬೇಕಿದೆ. ಪ್ರತಿಭಾ ಶೋಧ, ತರಬೇತಿಗಳಿಗೆ ಗಮನ ಕೊಡಬೇಕಾಗಿದೆ. ಹಣಕಾಸು ವ್ಯವಸ್ಥೆಯೂ ಮೀಟರ್ ಬಡ್ಡಿ ರೂಪದಲ್ಲಿ ಹರಡಿಕೊಂಡಿರುವುದು ನಿಂತು ಸಂಸ್ಥಾ ಹಣಕಾಸು ವ್ಯವಸ್ಥೆಗೆ ಸಾಗಬೇಕಿದೆ. ತಯಾರಿಕೆಯ ವೆಚ್ಚ ಕೆಟ್ಟ ಯೋಜನೆಯಿಂದಾಗಿ ಹೆಚ್ಚಾಗದಂತೆ ಸಿನಿಮಾ ನಿರ್ಮಾಣದ ತರಬೇತಿಗಳು ನಡೆಯಬೇಕಾಗಿದೆ. ಚಿತ್ರಮಂದಿರಗಳ ಅವ್ಯವಸ್ಥೆ, ಟಿಕೆಟ್ ಮಾರಾಟದಲ್ಲಿನ ಹುಳುಕುಗಳನ್ನು ಇಲ್ಲವಾಗಿಸಬೇಕಾಗಿದೆ. ವಿತರಕ, ಪ್ರದರ್ಶಕ, ನಿರ್ಮಾಪಕರ ನಡುವೆ ಯೋಗ್ಯವಾದ ರೀತಿಯಲ್ಲಿ ಲಾಭ ಹಂಚಿಕೆ, ಕಾರ್ಮಿಕರಿಗೆ ಗುಂಪುವಿಮೆ ಮೊದಲಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಕನ್ನಡ ಚಿತ್ರಗಳ ಮಾರುಕಟ್ಟೆಗಳನ್ನು ನಾಡಿನೊಳಗಡೆ ಗಟ್ಟಿಮಾಡಿಕೊಳ್ಳಬೇಕಾಗಿದೆ. ಹೊರರಾಜ್ಯಗಳಲ್ಲಿ, ಹೊರದೇಶಗಳಲ್ಲಿ ಮಾರುಕಟ್ಟೆ ಕಟ್ಟಿಕೊಳ್ಳಬೇಕಾಗಿದೆ. ಅಂತರ್ಜಾಲ, ಆಡಿಯೋ ವೀಡಿಯೋ ಮಾರುಕಟ್ಟೆಗಳನ್ನು ಉಪಯೋಗಿಸಿಕೊಳ್ಳಬೇಕಾಗಿದೆ. ಪುಟ್ಟ ಪುಟ್ಟ ಚಿತ್ರಮಂದಿರಗಳನ್ನು ರಾಜ್ಯದ ಎಲ್ಲೆಡೆ ಕಟ್ಟುವ ಮೂಲಕ ಚಿತ್ರಮಂದಿರಗಳ ಕೊರತೆ ನೀಗಿಸಬೇಕಾಗಿದೆ. ಹೀಗೆ... ಮಾಡಲು ಹತ್ತಾರು ಕೆಲಸಗಳಿವೆ. ಇದನ್ನು ಬಿಟ್ಟು ಗತವೈಭವದಲ್ಲೇ ತೇಲಾಡಿಕೊಂಡು ಇರ್ತೀವಿ, ಕಾನೂನು ಬಾಹಿರವೂ ನ್ಯಾಯಬಾಹಿರವೂ ಆದ ಮಾರ್ಗದಲ್ಲಿ ಸ್ಪರ್ಧೆ ತಡೀತೀನಿ ಎನ್ನುವ ಮನಸ್ಥಿತಿಯಿಂದ ಹೊರಬರಬೇಕಾಗಿದೆ.

ಕನ್ನಡ ಚಿತ್ರರಂಗವು ಕೆಲವು ಸ್ವಹಿತಾಸಕ್ತಿಯ ನಾಯಕರ ಮಾತುಗಳಿಗೆ ಮರುಳಾಗದೆ ಇಡೀ ಚಿತ್ರರಂಗದ ನಾಳೆಗಳ ಬಗ್ಗೆ ಒಂದು ಆರೋಗ್ಯಕರವಾದ ಚರ್ಚೆಗೆ ತನ್ನನ್ನು ತಾನು ತೆರೆದುಕೊಂಡಿದ್ದರೆ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಕಾಶವಾದರೂ ಇದೆ ಅನ್ನಿಸುವುದಿಲ್ಲವೇನು? ಕರ್ನಾಟಕದಲ್ಲಿ ಕನ್ನಡಿಗರ ಮನರಂಜನೆಯು ಕನ್ನಡದಲ್ಲೇ ಇರಬೇಕಾದ್ದು ಕನ್ನಡಿಗರು ಹಕ್ಕು ಎಂಬುದನ್ನೂ, ಈಗಿರುವಂತೆಯೇ ಪರಭಾಷಾ ಚಿತ್ರಗಳು ಆಯಾ ಭಾಷೆಗಳಲ್ಲೇ ಕನ್ನಡ ನಾಡಿನ ಹಳ್ಳಿಹಳ್ಳಿಗಳಲ್ಲಿ ನಡೆಯುವುದು ಮುಂದಾದರೆ ಮುಂದೊಂದು ದಿನ ಕರ್ನಾಟಕದಲ್ಲಿ ಕನ್ನಡವೆಲ್ಲಿ ಉಳಿದೀತು? ಕನ್ನಡ ಚಿತ್ರರಂಗವೆಲ್ಲಿ ಉಳಿದೀತು? ಅನಿಸುವುದಿಲ್ಲವೇ?

ಕನ್ನಡ ಚಲನಚಿತ್ರ ಅಕಾಡೆಮಿ & ಬಳಗದಿಂದ ಸಮೀಕ್ಷೆ!

ಇಂತಹ ಹುಡುಕಾಟದಲ್ಲಿ ನಮಗೆ ಸಿಕ್ಕಿದ್ದು, ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷರಾದ ಶ್ರೀ ಟಿ. ಎಸ್. ನಾಗಾಭರಣರವರು. ಬನವಾಸಿ ಬಳಗದ ನಮ್ಮನ್ನು ಬಹಳ ಆದರದಿಂದ ಕಂಡು E&Y ಮತ್ತು FICCI ನೀಡಿದ ವರದಿಯನ್ನು ಗಂಭೀರವಾಗಿ ಓದಿ, ಇಡೀ ಕನ್ನಡ ಚಿತ್ರೋದ್ಯಮದ ಗಮನವನ್ನು ಇತ್ತ ಸೆಳೆಯಲು ಇವರು ಮುಂದಾದರು. ಕನ್ನಡ ಚಿತ್ರರಂಗದ ಮುಂಚೂಣಿ ಸಂಸ್ಥೆಯಾದ ವಾಣಿಜ್ಯ ಮಂಡಲಿಯೂ ಸೇರಿದಂತೆ ಪ್ರದರ್ಶಕ, ವಿತರಕ, ನಿರ್ಮಾಪಕ, ನಿರ್ದೇಶಕರನ್ನು ಇದರತ್ತ ಸೆಳೆದು ಇಡೀ E&Y ಮತ್ತು FICCI ಹೊರತಂದಿದ್ದ ವರದಿಗೆ ಗಂಭೀರವಾಗಿ ಉತ್ತರಿಸುವ ಉದ್ದೇಶವನ್ನು ಅಕಾಡಮಿಯ ಪರವಾಗಿ ಅವರು ವ್ಯಕ್ತಪಡಿಸಿದಾಗ ಚಿತ್ರರಂಗದ ಗಣ್ಯರೆದುರು ಸದರಿ ವರದಿಯನ್ನಿಡಲು ಯೋಜಿಸಿದೆವು.

ಚಲನಚಿತ್ರರಂಗದ ಗಣ್ಯರ ಪ್ರತಿಕ್ರಿಯೆ!

ಇದಾದ ಮೇಲೊಂದು ದಿನ ಅಕಾಡಮಿಯ ಆಶ್ರಯದಲ್ಲಿ E&Y ಮತ್ತು FICCI ನೀಡಿದ ವರದಿಯನ್ನು ಚಿತ್ರರಂಗದ ಗಣ್ಯರೊಂದಿಗೆ ಹಂಚಿಕೊಳ್ಳಲು ಒಂದು ಸಭೆಯನ್ನು ನಡೆಸಲಾಯಿತು. ಆ ಸಭೆಯಲ್ಲಿ ಅನೇಕ ಹಿರಿಯ ನಿರ್ಮಾಪಕರು, ವಿತರಕರು, ಪ್ರದರ್ಶಕರು, ನಿರ್ದೇಶಕರು, ಆಡಿಯೋ ಸಂಸ್ಥೆಯವರು ಸೇರಿದಂತೆ ಹಲವರು ಭಾಗವಹಿಸಿದ್ದರು. E&Y ವರದಿಯನ್ನು ಆ ಸಭೆ ಒಕ್ಕೊರಲಿನಿಂದ ಖಂಡಿಸಿತು. E&Y ವರದಿಯಲ್ಲಿನ ಮಾಹಿತಿ ತಪ್ಪಾಗಿದೆ. ನಿಜವಾಗಿಯೂ ಕನ್ನಡ ಚಿತ್ರರಂಗದ ವಹಿವಾಟು ಏಳೆಂಟು ಪಟ್ಟು ಹೆಚ್ಚೇ ಇದೆ ಅನ್ನುವ ಅಭಿಪ್ರಾಯ ಮೂಡಿಬಂದಿತು. ಆ ಸಭೆಯಲ್ಲೇ ಚಲನಚಿತ್ರ ಅಕಾಡಮಿಯ ವತಿಯಿಂದ ಸಮೀಕ್ಷೆಯೊಂದನ್ನು ನಡೆಸಿ E&Y ಮತ್ತು FICCI ನೀಡಿದ ವರದಿಗೆ ಪರ್ಯಾಯವಾದ ವರದಿಯೊಂದನ್ನು ತಯಾರಿಸಲು ನಿಶ್ಚಯಿಸಲಾಯಿತು. ಈ ಸಮೀಕ್ಷೆಯನ್ನು ಬನವಾಸಿ ಬಳಗ ಮತ್ತು ಕರ್ನಾಟಕ ಚಲನಚಿತ್ರ ಅಕಾಡಮಿಗಳು ಹೀಗೆ ಜಂಟಿಯಾಗಿ ಕೈಗೆತ್ತಿಕೊಂಡವು. "ಅಕಾಡಮಿಯು E&Y ಮತ್ತು FICCI ಗೆ ಒಂದು ಪತ್ರವನ್ನು ಕೂಡಾ ಬರೆದಿದ್ದು, ಪ್ರಕಟಿತ ವರದಿಯಲ್ಲಿನ ಕನ್ನಡ ಚಿತ್ರರಂಗದ ಬಗೆಗಿನ ಮಾಹಿತಿ ಅಪೂರ್ಣವಾಗಿದೆ ಮತ್ತು ತಪ್ಪಾಗಿಯೂ ಇದೆಯೆಂದೂ, ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಅಕಾಡಮಿಯೇ ಸರಿಯದ ವರದಿಯನ್ನು ಕಳಿಸಿಕೊಡುವುದಾಗಿ ತಿಳಿಸಲಾಗಿದೆ"ಯೆಂದೂ ನಾಗಾಭರಣರು ನಮಗೆ ತಿಳಿಸುವ ಮೂಲಕ ಸಮಯದ ಗಡುವನ್ನು ತೀರ್ಮಾನಿಸಿ ಸಮೀಕ್ಷೆಯನ್ನು ಆರಂಭಿಸಲಾಯಿತು.

ಸಮೀಕ್ಷೆಯ ಪರಿ ಮತ್ತು ಪರಾಮರ್ಶೆ

ಬನವಾಸಿ ಬಳಗದ ಹದಿನೈದು ಜನರ ತಂಡವೊಂದು ಸುಮಾರು ಏಳು ತಿಂಗಳ ಶ್ರಮದ ನಂತರ ಈ ಸಮೀಕ್ಷೆಯನ್ನು ಪೂರ್ಣಗೊಳಿಸಿ ಇಡೀ ವರದಿಯನ್ನು ತಯಾರಿಸಿತು. ಸಮೀಕ್ಷೆಯ ಅಂಗವಾಗಿ ಅಕಾಡಮಿ ಪಟ್ಟಿ ಮಾಡಿದ ಉದ್ಯಮದ ಗಣ್ಯರುಗಳನ್ನು ಭೇಟಿ ಮಾಡಲಾಯಿತು. ಪ್ರತ್ಯೇಕವಾದ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡು, ಸಂದರ್ಶನಗಳನ್ನು ನಡೆಸಿ ಮಾಹಿತಿಗಳನ್ನು ಕಲೆಹಾಕಲಾಯಿತು. ಹೀಗೆ ಮಾಹಿತಿಗಳನ್ನು ಕಲೆಹಾಕಿ ಸಿದ್ಧಪಡಿಸಿ ಹೊರತಂದ ವರದಿಯೇ “ಕನ್ನಡ ಚಿತ್ರರಂಗ : ಒಂದು ಸಮೀಕ್ಷೆ”.

(ಮುಂದುವರೆಯುವುದು...)

E & Y - FICCI ವರದಿ ಮತ್ತು ಕನ್ನಡ ಚಿತ್ರರಂಗ!

E & Y ಮತ್ತು FICCI ಜಂಟಿಯಾಗಿ ನಡೆಸಿದ ಸಮೀಕ್ಷೆಯಾಧರಿಸಿದ ಆ ವರದಿಯನ್ನು ನೋಡಿದಾಗ ನಂಬಲಿಕ್ಕೆ ಕಷ್ಟವಾಯ್ತು. ಇದರ ಸತ್ಯಾಸತ್ಯತೆಯ ಹುಡುಕಾಟ ಚಿತ್ರರಂಗದ ದೃಷ್ಟಿಯಿಂದ ಅತ್ಯಗತ್ಯ ಅನ್ನಿಸಿತು. ಯಾಕೆಂದರೆ ಒಂದು ನಾಡಿನ ಅತಿ ಮಹತ್ವದ ಕ್ಷೇತ್ರಗಳಲ್ಲಿ ಒಂದು ಮನರಂಜನಾ ಕ್ಷೇತ್ರ. ಅದರಲ್ಲೂ ಸಿನಿಮಾ ಮಾಧ್ಯಮ ಅನ್ನೋದು ಬಹು ಪ್ರಭಾವಶಾಲಿ ಮಾಧ್ಯಮ ಅನ್ನೋದನ್ನು ಬಲ್ಲೆವಷ್ಟೆ. ನಮ್ಮ ಕನ್ನಡನಾಡಿನಲ್ಲೇ ಹಿಂದೆ ಸಮಾಜದ ಮೇಲೆ ಪ್ರಭಾವ ಬೀರಿದಂತಹ ಬಂಗಾರದ ಮನುಷ್ಯ, ಮಯೂರ, ರಣಧೀರ ಕಂಠೀರವ, ಶ್ರೀಕೃಷ್ಣದೇವರಾಯ, ಸ್ಕೂಲ್‌ಮಾಸ್ಟರ್ ಮೊದಲಾದ ಚಿತ್ರಗಳ ಉದಾಹರಣೆಯನ್ನು ನಾವು ನೋಡಬಹುದು. ಯಾವುದೇ ಭಾಷಿಕ ಸಮುದಾಯಕ್ಕೆ ತನ್ನದೇ ಆದ ಚಲನಚಿತ್ರವೆನ್ನುವ ಪರಿಣಾಮಕಾರಿ ಮಾಧ್ಯಮವೇ ಇಲ್ಲದಿದ್ದರೆ ಆಗುವ ನಷ್ಟಕ್ಕಿಂತಲೂ, ಆ ನಾಡಿನಲ್ಲಿ ತನ್ನದಲ್ಲದ ಭಾಷೆಯ ಚಲನಚಿತ್ರ ಮಾಧ್ಯಮವು ಪ್ರಭುತ್ವ ಹೊಂದಿರುವುದು ಅಪಾಯಕಾರಿ. ಇದು ಮನರಂಜನಾ ಮಾಧ್ಯಮದ ಮಹತ್ವ. ಕನ್ನಡನಾಡಿನಲ್ಲೂ ಕೂಡಾ ಕನ್ನಡ ಚಲನಚಿತ್ರರಂಗಕ್ಕೆ ಇಂಥದ್ದೇ ಮಹತ್ವವಿದೆ. ಇಲ್ಲದಿದ್ದರೆ ಬರೀ ಇನ್ನೂರು ಮುನ್ನೂರು ಕೋಟಿ ವಹಿವಾಟಿನ ಪುಟ್ಟ ಉದ್ಯಮಕ್ಕೆ ಸಾವಿರಾರು ಕೋಟಿ ವಹಿವಾಟಿನ ಉದ್ಯಮಗಳಿಗಿಂತಲೂ ಹೆಚ್ಚಿನ ಮಹತ್ವ ನೀಡುವ ಅಗತ್ಯವಿರಲಿಲ್ಲ.

E & Y ಮತ್ತು FICCI ವರದಿಗೇಕೆ ಮಹತ್ವ?

ಇಷ್ಟೆಲ್ಲಾ ಮಹತ್ವ ಇರುವ ಚಿತ್ರರಂಗದ ಬಗ್ಗೆ ಅಂತರರಾಷ್ಟ್ರೀಯ ಸಂಸ್ಥೆಯೊಂದು ದೇಶೀ ಸಂಸ್ಥೆಯೊಂದಿಗೆ ಸೇರಿ ನೀಡುವ ವರದಿಗೆ ಇರುವ ಮಹತ್ವವೇನು? ನಾಳೆ ಇಂತಹ ವರದಿಯನ್ನಾಧರಿಸಿಯೇ ನಾನಾಸಂಸ್ಥೆಗಳು ಈ ಕ್ಷೇತ್ರದಲ್ಲಿ ಬಂಡವಾಳ ಹೂಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಸಹಜ. ಹಾಗಾಗಿ ಈ ವರದಿಯಲ್ಲಿ ನಮ್ಮ ಚಿತ್ರರಂಗವನ್ನು ಚಿಕ್ಕದೆಂದು ಬಿಂಬಿಸುವುದಾಗಲೀ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗಿಂತಲೂ ದೊಡ್ಡದಾದ ಮಾರುಕಟ್ಟೆ ತಮಿಳು ಸಿನಿಮಾಗಳಿಗಿದೆ ಎನ್ನುವುದಾಗಲೀ ನಾಳೆ ಕನ್ನಡ ಚಿತ್ರೋದ್ಯಮವನ್ನೇ ಮುಳುಗಿಸಬಲ್ಲಷ್ಟು ಅಪಾಯಕಾರಿಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಹಿಂಜರಿಯುವಂತೆ, ಆಸಕ್ತಿ ತೋರದಂತೆ ಈ ವರದಿ ಇರುವುದು ಈ ನಿಟ್ಟಿನಲ್ಲಿರುವ ಒಂದು ಅಪಾಯಕಾರಿ ಪರಿಣಾಮಕಾರಿಯಾದರೆ, ಪರಭಾಷೆಗಳಲ್ಲಿ ಬಂಡವಾಳ ತೊಡಗಿಸುವ ಸಂಸ್ಥೆಗಳು ಕನ್ನಡನಾಡಿನ ಒಳಗೂ ಆ ಚಿತ್ರಗಳ ಬಿಡುಗಡೆಗೆ ಕನ್ನಡ ಚಿತ್ರಗಳೊಂದಿಗೆ ಪೈಪೋಟಿ ನಡೆಸುತ್ತವೆ ಎನ್ನುವುದು ಮತ್ತೊಂದು ಪರಿಣಾಮ. ಇದು ಇತ್ತೀಚೆಗೆ ಕೈಟ್ ಮತ್ತು ರಾವಣ್ ಸಿನಿಮಾಗಳ ಬಿಡುಗಡೆಯ ವಿಷಯದಲ್ಲಿ ಸಾಬೀತಾಯಿತು. ಸದ್ಯದ ಪರಿಸ್ಥಿತಿ ಹೀಗೇ ಮುಂದುವರೆದರೆ ಪರಭಾಷಾ ಚಿತ್ರಗಳ ಮೇಲೆ ಹೇರಿರುವ ಏಳು ವಾರಗಳ ನಿರ್ಬಂಧ, ಚಿತ್ರಗಳ ಪ್ರಿಂಟ್ ಸಂಖ್ಯೆಗಳ ಬಗೆಗಿನ ನಿರ್ಬಂಧ, ಬಿಡುಗಡೆ ಕೇಂದ್ರಗಳ ಸಂಖ್ಯೆಯ ಮೇಲಿನ ನಿರ್ಬಂಧವೇ ಮೊದಲಾದ ಯಾವ "ಜಂಟಲ್‌ಮನ್ ಅಗ್ರಿಮೆಂಟು"ಗಳಿಗೂ ಕನ್ನಡ ಚಿತ್ರರಂಗವನ್ನುಳಿಸಲು ಆಗುವುದಿಲ್ಲ ಎಂಬುದೇ ಕಹಿಸತ್ಯ. ಹಾಗಾಗಿ ಪರಭಾಷಾ ಚಿತ್ರಗಳ ಸವಾಲನ್ನು ಎದುರಿಸುತ್ತಾ ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಬೆಳೆಸಿಕೊಳ್ಳಲು, ನಮ್ಮ ಚಿತ್ರರಂಗದ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಇಲ್ಲಿಗೆ ಹೊಸನೀರು ಹರಿಯಲೇ ಬೇಕು, ಆ ನೀರು ಚಿತ್ರರಂಗವನ್ನು ಒಂದು ಗಂಭೀರ ಉದ್ಯಮವಾಗಿ ಪರಿಗಣಿಸುವ ಸಂಸ್ಥೆಗಳ ಪ್ರವೇಶದಿಂದಾಗಿ ಹರಿದು ಬರಲಿದೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರಗಳು ಪರಭಾಷಾ ಚಿತ್ರಗಳನ್ನು ಎದುರಿಸಲು, ತನ್ನ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಎಲ್ಲಾ ತಂತ್ರ ಪ್ರತಿತಂತ್ರಗಳನ್ನು ಅನುಸರಿಸಬೇಕಾಗಿದೆ. ಇಂತಹಾ ಬದಲಾವಣೆಗೆ ನಾವು ಸಿದ್ಧರಾಗುವುದು ಹೇಗೆ ಎಂಬುದರ ಬಗ್ಗೆ ಕನ್ನಡ ಚಿತ್ರೋದ್ಯಮ ಗಂಭೀರವಾಗಿ ಚಿಂತಿಸುವ ಅನಿವಾರ್ಯತೆಗೆ ಈ ವರದಿ ಬೀಜ ಹಾಕಿ ನಾಂದಿ ಹಾಡಿದೆ ಅನ್ನುವುದು ಸದರಿ ವರದಿಯ ಮಹತ್ವವನ್ನು ಸಾರುತ್ತಿದೆ.


E & Y ಮತ್ತು FICCI ವರದಿಯ ತುಲನೆ

ಈ ವರದಿಯಲ್ಲಿ ಬರೆದಷ್ಟು ದುಸ್ಥಿತಿಯಲ್ಲಿ ಕನ್ನಡ ಚಿತ್ರೋದ್ಯಮವಿದೆಯೇ? ಈ ವರದಿಯಲ್ಲಿನ ನಮ್ಮ ಚಿತ್ರರಂಗದ ಬಗ್ಗೆ ಬರೆದಿರುವ ಅಂಕಿಅಂಶಗಳು, ಅಭಿಪ್ರಾಯಗಳು ಸರಿಯಿವೆಯೇ? ನಿಜಕ್ಕೂ ಈ ವರದಿಯಲ್ಲಿನ ಅಂಶಗಳು ತಪ್ಪಾಗಿದ್ದಲ್ಲಿ ಕರ್ನಾಟಕದ ಚಿತ್ರೋದ್ಯಮದ ಪ್ರತಿನಿಧಿ ಸಂಸ್ಥೆಗಳ ಮೂಲಕ ಸರಿಯಾದ ಅಂಕಿ ಅಂಶಗಳನ್ನು ಸಂಬಂಧಪಟ್ಟವರಿಗೆ ತಿಳಿಸಿ ತಿದ್ದುಪಡಿ ಮಾಡಿಸುವುದು ಅತ್ಯಗತ್ಯವಾಗಿದೆ. ಆಕಸ್ಮಾತ್ ಈ ವರದಿಯ ಅಂಕಿ ಅಂಶಗಳೇ ದಿಟವಾಗಿದ್ದಲ್ಲಿ ಕನ್ನಡ ಚಿತ್ರರಂಗದ ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳನ್ನು, ಹೇಗೆ ಇಂತಹ ದುಸ್ಥಿತಿಯಿಂದ ಹೊರಬರುವುದು ಎನ್ನುವುದರ ಬಗ್ಗೆ ಗಂಭೀರವಾಗಿ ದುಡಿಯುವ ಕಡೆ ಒಗ್ಗೂಡಿಸಿ ಮುನ್ನಡೆಯುವುದು ಅತ್ಯಗತ್ಯ ಎಂದು ಬನವಾಸಿ ಬಳಗ ಭಾವಿಸಿತು. ಇದೆಲ್ಲಕ್ಕೂ ಮೊದಲಹೆಜ್ಜೆಯಾಗಿ ಈ ವರದಿಯ ಬಗ್ಗೆ ಚಿತ್ರರಂಗದ ಗಣ್ಯರ ಅಭಿಪ್ರಾಯಗಳನ್ನು ಭೇಟಿಯಾಗಿ ಮಾತನಾಡುವ ಮೂಲಕ ತಿಳಿಯಲು ಮುಂದಾದೆವು.

ನಿದ್ದೆಯಲ್ಲಿದ್ದ ಕನ್ನಡ ಚಿತ್ರರಂಗವೆಂಬ ಕುಂಭಕರ್ಣ

ದುರಂತವೆಂದರೆ ನಾವು ಭೇಟಿ ಮಾಡಿದ ಕನ್ನಡ ಚಿತ್ರರಂಗದ ಅನೇಕರಿಗೆ E & Y ಮತ್ತು FICCI ಎಂಬ ಸಂಸ್ಥೆಗಳು ಇರುವುದರ ಬಗ್ಗೆಯಾಗಲೀ, ಅವುಗಳಿಗಿರುವ ಮಹತ್ವದ ಸ್ಥಾನವಾಗಲೀ, ಅವುಗಳು ಹೊರತರುವ ವರದಿಗಳಿಂದಾಗುವ ಪರಿಣಾಮಗಳ ಬಗ್ಗೆಯಾಗಲೀ ಮಾಹಿತಿಯಿರಲಿಲ್ಲ. ಹೆಚ್ಚಿನವರಿಗೆ ಚಲನ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಇಂತಹ ಒಂದು ವರದಿ ಹೊರಬಂದಿರುವುದೇ ಗೊತ್ತಿರಲಿಲ್ಲ. ನಾವು ವರದಿಯನ್ನು ಅವರುಗಳಲ್ಲಿ ಕೆಲವರ ಮುಂದಿಟ್ಟಾಗಲೂ ಇದರಿಂದಾಗಬಹುದಾದ ಕಂಟಕಗಳ ಬಗ್ಗೆ ಗಂಭೀರವಾಗಿ ಪರಿಗಣಿಸಲು ಪ್ರಯತ್ನ ಮಾಡಿದಂತೆ ತೋರಲಿಲ್ಲ. ಈ ವರದಿಯನ್ನು ನೋಡಿದ ಕೆಲಮಹನೀಯರ ಪ್ರತಿಕ್ರಿಯೆಯೂ ಹೀಗೇ ಇತ್ತು. "ಇಂತಹ ವರದಿಯಿಂದೇನೂ ಆಗಲ್ಲ. ಕಾರ್ಪೋರೇಟ್ ಸಂಸ್ಕೃತಿ ಕನ್ನಡಕ್ಕೆ ಒಗ್ಗಲ್ಲ, ಅಂಥಾ ಸಂಸ್ಥೆಗಳು ಇಲ್ಲಿ ಉದ್ಧಾರ ಆಗಲ್ಲ. ಕನ್ನಡ ಚಿತ್ರರಂಗದ ಆರ್ಥಿಕ ಸ್ಥಿತಿ ಇರೋದೇ ಹೀಗೆ..." ಇತ್ಯಾದಿ ಅಭಿಪ್ರಾಯಗಳು ಕೇಳಿಬಂದವು.

ಸಾವಿರಾರು ಜನರಿರುವ ಕರ್ನಾಟಕ ಚಿತ್ರರಂಗ - ಸೃಜನಶೀಲತೆಗೆ, ಸೂಕ್ಷ್ಮತೆಗೆ, ಪ್ರತಿಭೆಗೆ ಹೆಸರಾದ ಕನ್ನಡ ಚಿತ್ರರಂಗ - ರಾಷ್ಟ್ರಮಟ್ಟದ ಅಂತರರಾಷ್ಟ್ರೀಯ ಮಟ್ಟದ ಚಿತ್ರ ತೆಗೆಯಬಲ್ಲ ಕನ್ನಡ ಚಿತ್ರರಂಗ - ಭಾರತೀಯ ಚಿತ್ರರಂಗಕ್ಕೆ ಹತ್ತಾರು ಪ್ರತಿಭಾಶಾಲಿಗಳನ್ನು ಕೊಡುಗೆಯಾಗಿತ್ತ ಚಿತ್ರರಂಗ - ಇಂತಹ ಮಹಾನ್‌ ರಂಗದಲ್ಲಿ ತನ್ನ ಬಗ್ಗೆಯೇ ಅಪಪ್ರಚಾರ ಮಾಡುತ್ತಿರುವ ಅಂತರರಾಷ್ಟ್ರೀಯ ಮಟ್ಟದ ವರದಿಯಲ್ಲಿನ ಹುನ್ನಾರಗಳು ಅರ್ಥವಾಗುವುದಿಲ್ಲವೇನು? ಎಂಬ ನಂಬಿಕೆಯಿಂದ ಕುಂಭಕರ್ಣ ವಂಶಜರನೇಕರಿಂದ ಕೂಡಿದ ಸದರಿ ಕನ್ನಡ ಚಿತ್ರರಂಗದಲ್ಲಿ ಇನ್ನೂ ಅರಿವು ಇರುವವರನ್ನು, ಅರಿವುಗೆಡದವರನ್ನು ಹುಡುಕಲು ಬನವಾಸಿ ಬಳಗ ಮುಂದಾಯಿತು.

(ಮುಂದುವರೆಯುವುದು...)

ಕನ್ನಡ ಚಿತ್ರರಂಗ - ಆಟಕ್ಕುಂಟು ಲೆಕ್ಕಕ್ಕಿಲ್ಲ ?

ಪ್ರಖ್ಯಾತ ಸಂಸ್ಥೆ E&Y ಮತ್ತು FICCI ಜೊತೆಗೂಡಿ ಮಾಡಿದ ಸಮೀಕ್ಷೆಯೊಂದರ ವರದಿಯಂತೆ 2008ರಲ್ಲಿ ಇಡೀ ದೇಶದ ಚಿತ್ರೋದ್ಯಮದ ಆದಾಯದಲ್ಲಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಚಿತ್ರೋದ್ಯಮದ ಪಾಲು 75% ರಷ್ಟು ಅಂದ್ರೆ ಸುಮಾರು 1730 ಕೋಟಿಯಷ್ಟಿದೆಯಂತೆ, ಆದರೆ ಅದರಲ್ಲಿ ಕನ್ನಡ ಚಿತ್ರರಂಗದ ಪಾಲು ಬರೀ 2% ಅಂದ್ರೆ ಕೇವಲ ರೂ 34 ಕೋಟಿ ಇದೆ ಅಂತ ವರದಿ ಮಾಡಿದೆ. ವರ್ಷಕ್ಕೆ ನೂರಕ್ಕೂ ಹೆಚ್ಚು ಚಿತ್ರ ನಿರ್ಮಿಸುವ ಕನ್ನಡ ಚಿತ್ರರಂಗದ ಆದಾಯದ ಬಗ್ಗೆ ಇವರು ಕೊಟ್ಟಿರೋ ಅಂಕಿ ಅಂಶ ತಪ್ಪು ತಪ್ಪಾಗಿದೆ ಅನ್ಸಲ್ವಾ ಗುರು ?

ಏನ್ ಹೇಳುತ್ತೆ ವರದಿ?
ಈ ವರದಿ ಪ್ರಕಾರ, ದಕ್ಷಿಣ ಭಾರತದ ಚಿತ್ರರಂಗದ ಒಟ್ಟು 1730 ಕೋಟಿ ಆದಾಯದಲ್ಲಿ ತಮಿಳು-ತೆಲುಗಿನ ಪಾಲು ತಲಾ 45% ( ಅಂದರೆ 770 ಕೋಟಿ), ಮಲಯಾಳಂ ಸುಮಾರು 8%( ಅಂದರೆ ಸುಮಾರು 140 ಕೋಟಿ) ಹಾಗೂ ಕನ್ನಡ ಚಿತ್ರೋದ್ಯಮದ ಪಾಲು ಕೇವಲ 2% ( ಅಂದರೆ ಕೇವಲ 34 ಕೋಟಿ !! ) ಇದ್ದು, ಕನ್ನಡ ಚಿತ್ರೋದ್ಯಮ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತ ಒಂದು ಉದ್ಯಮ, ಇದಕ್ಕೊಂದು ಅಸ್ತಿತ್ವವೇ ಇಲ್ಲವೆಂಬಂತೆ ಬಿಂಬಿಸಿದೆ ಗುರು.

ಕನ್ನಡ ಚಿತ್ರೋದ್ಯಮ - 2008ರ ಆದಾಯವೇನು?

ಕನ್ನಡ ಚಿತ್ರರಂಗದ ಆದಾಯ ನಿಜಕ್ಕೂ ಇಷ್ಟು ಕಮ್ಮಿ ಇದೆಯಾ ಅನ್ನೋ ಪ್ರಶ್ನೆನಾ ಇಟ್ಕೊಂಡು ಕನ್ನಡ ಚಿತ್ರರಂಗದ ಹಲವು ಗಣ್ಯರನ್ನು ಏನ್ ಗುರು ಮಾತನಾಡಿಸಿತು. ಅವರಿಂದ ಪಡೆದ ಮಾಹಿತಿಯ ಜೊತೆ ಅಂತರ್ಜಾಲದಿಂದ ಪಡೆದ ಒಂದಿಷ್ಟು ಮಾಹಿತಿಯೊಂದಿಗೆ 2008ರಲ್ಲಿ ಕನ್ನಡ ಚಿತ್ರರಂಗದ ಅಂದಾಜು ಹೂಡಿಕೆ ಮತ್ತು ಆದಾಯ ನಿಜಕ್ಕೂ ಎಷ್ಟಿರಬಹುದು ಅಂತ ಲೆಕ್ಕ ಹಾಕಿದ್ರೆ ಏನ್ ಗುರುಗೆ ಕಂಡಿದ್ದು ಇಷ್ಟು (ಇದು ಏನ್ ಗುರುಗೆ ಸಿಕ್ಕ ಅಂಕಿ ಅಂಶ, ಮಾಹಿತಿ ಆಧಾರದ ಮೇಲೆ ಮಾಡಿರುವ ವಿಶ್ಲೇಷಣೆ):



ಮೇಲಿನ ಅಂದಾಜು ವಿಶ್ಲೇಷಣೆಯಿಂದ ಕನ್ನಡ ಚಿತ್ರರಂಗದ ಆದಾಯ ಖಂಡಿತವಾಗಿಯೂ E&Y ಹೇಳಿರುವುದಕ್ಕಿಂತ 7-8 ಪಟ್ಟು ಹೆಚ್ಚಿದೆ ಅಂತ ಅನ್ಸಲ್ವಾ ಗುರು?

ಇಂತಹ ವರದಿಗಳಿಂದ ಆಗೋ ತೊಂದರೆಗಳೇನು?
ಈಗ ಇಂತಹ ವರದಿಗಳಿಂದ ಆಗೋ ತೊಂದರೆಗಳೇನು ಅಂತ ನೋಡೋಣ ಗುರು. ಇವತ್ತು ಮನರಂಜನೆ ಮತ್ತು ಮಾಧ್ಯಮ ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಭಾರತದ ಬೇರೆ ಬೇರೆ ಭಾಷೆಗಳ ಚಿತ್ರರಂಗದಲ್ಲಿ ಬಂಡವಾಳ ಹೂಡಲು ಬರುತ್ತಿದ್ದಾರೆ. ಹಾಗೇ ಬರುವವರು, ಆ ಉದ್ಯಮದ ಬಗ್ಗೆ, ಅದರ ಆದಾಯದ ಬಗ್ಗೆ, ಅಲ್ಲಿ ಮಾಡಿಕೊಳ್ಳಬಹುದಾದ ಲಾಭದ ಬಗ್ಗೆ ತಿಳಿಯಲು ಬಳಸುವುದು ಇಂತಹ ವರದಿಗಳನ್ನೇ. ಈಗ, ನೀವು ಹೇಳಿ, E&Y ಪ್ರಕಾರ ವರ್ಷಕ್ಕೆ ಜುಜುಬಿ 34 ಕೋಟಿ ಆದಾಯ ಇರೋ ಕನ್ನಡ ಚಿತ್ರರಂಗಕ್ಕೆ ಎಂದಾದರೂ ಈ ಸಂಸ್ಥೆಗಳು ಹಣ ಹೂಡಲು ಬಂದಾರೆಯೇ? ಹಾಗೇ, ಇಂತಹ ವೃತ್ತಿಪರ ಕಂಪನಿಗಳು ಬರದೇ, ಇಲ್ಲಿನ ವೃತ್ತಿಪರ ಕಲಾವಿದರಿಗೆ, ತಂತ್ರಜ್ಞರಿಗೆ, ಏನಾದರೂ ಹೊಸತನ್ನು ನೀಡಬೇಕು ಎಂದು ಹಂಬಲಿಸುವವರಿಗೆ ಎಂದಿಗಾದರೂ ಅವಕಾಶ ಸಿಕ್ಕಿತಾ? ಹಾಗೊಂದು ಅವಕಾಶ ಸಿಗದೇ, ಕನ್ನಡ ಚಿತ್ರರಂಗದಲ್ಲಿ ಹೊಸತನ ತುಂಬುವ ಪ್ರಯತ್ನ ಎಂದಿಗಾದರೂ ನಡೆದೀತಾ? ಇಂತಹ ತಪ್ಪು ಮಾಹಿತಿಯುಳ್ಳ ವರದಿಗಳು ನಮ್ಮ ಚಿತ್ರರಂಗಕ್ಕೆ ಬಂಡವಾಳ ಹೂಡುವವರನ್ನು ಹಿಂಜರಿಯುವಂತೆ ಮಾಡುವುದಷ್ಟೇ ಅಲ್ಲದೇ, ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎಂದು ಬರುವ ಕಲಾವಿದರನ್ನು ಕೂಡಾ ಪಲಾಯನಗೈಯುವಂತೆ ಮಾಡುತ್ತೆ ಅನ್ಸಲ್ವಾ ಗುರು?

ಇದಕ್ಕೇನು ಪರಿಹಾರ?
KFCC ಈಗಲೂ ನಿದ್ದೆ ಮಾಡುವುದನ್ನು ಬಿಟ್ಟು, ಇಂತಹದೊಂದು ವರದಿ, ಅದರಲ್ಲಿನ ಲೋಪ ದೋಷಗಳ ಬಗ್ಗೆ ಮಾತನಾಡಬೇಕು. ಅಲ್ಲದೇ, ಜಿಡ್ಡುಗಟ್ಟಿರುವ ವ್ಯವಸ್ಥೆಯಲ್ಲಿ ಹೊಸ ಚೈತನ್ಯ ತುಂಬೋ ಕೆಲಸ ಮಾಡಬೇಕು. ಚಿತ್ರರಂಗ ಬೆಳವಣಿಗೆಗೆ ನಿಜಕ್ಕೂ ಬೇಕಿರೋದು ಏನು? ಮಾರುಕಟ್ಟೆ ಕಟ್ಟಿಕೊಳ್ಳೋ ತಂತ್ರಗಾರಿಕೆ ಹೇಗಿರಬೇಕು? ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸೋದು ಹೇಗೆ? ಕಾರ್ಮಿಕರ ಬದುಕಿಗೆ ಭದ್ರತೆ ಕಲ್ಪಿಸೋದು ಹೇಗೆ? ತಾಂತ್ರಿಕವಾಗಿ ಚಿತ್ರರಂಗವನ್ನು ಮುಂದೆ ತರಲು ಸಂಸ್ಥೆಗಳನ್ನು ಕಟ್ಟುವುದು ಹೇಗೆ? ಕನ್ನಡ ಚಿತ್ರಗಳಿಗೆ ಹೆಚ್ಚು ಚಿತ್ರಮಂದಿರಗಳನ್ನು ಕೊಡಿಸೋದು ಹೇಗೆ? ಒಟ್ಟಾರೆ ಈಗಿರೋ 250 ಕೋಟಿ ಯಿಂದ 750 ಕೋಟಿ ಆದಾಯ ಗಳಿಸೋವತ್ತ ಹೋಗೊದು ಹೇಗೆ ಅನ್ನೋ ಬಗ್ಗೆ ಚಿಂತನೆ ನಡೆಸಬೇಕು. ಹಾಗೇ, ಸರಿಯಾದ ಕಾರ್ಯ ಯೋಜನೆ ಹಾಕಿಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಏನಂತೀಯಾ ಗುರು?
Related Posts with Thumbnails