ಭಾರತದ ಭಾಷಾನೀತಿ ತಂದಿರೋ ಕೇಡುಗಾಲ: ನಿನ್ನೆ ರೈಲ್ವೇ, ಇವತ್ತು ಯುಜಿಸಿ, ನಾಳೆ ಆಧಾರ್!

ಭಾರತ ಸರ್ಕಾರ ನಡೆಸ್ತಾಯಿರೋ, `ಇಡೀ ಭಾರತದ ವಿಶ್ವವಿದ್ಯಾಲಯಗಳ ಗುಣಮಟ್ಟ ಕಾಪಾಡಿಕೊಳ್ಳುವ/ಹೆಚ್ಚಿಸುವ' ಘೋಷಿತ ಉದ್ದೇಶವಿರೋ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (UGC) ಅನ್ನೋ ಸಂಸ್ಥೆಯು, ನಾಡಿನ ಕಾಲೇಜುಗಳ ಶಿಕ್ಷಕರ ನೇಮಕಾತಿ ನಡುಸ್ತಾಯಿದೆ.
ಈ ಪರೀಕ್ಷೆಯನ್ನು ಕನ್ನಡದಲ್ಲೂ ನಡೆಸಿ ಅಂತಾ ಒಂದು ಮನವೀನಾ ರಾಜ್ಯಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಮದನಗೋಪಾಲ್ ಅವರು ಒಂದು ಮನವಿ ಸಲ್ಲಿಸಿದ್ದಾರೆ ಅನ್ನೋ ಸುದ್ದಿ ನಿನ್ನೆಯ(23.11.2010ರ) ಡಿಎನ್ಎ ಪತ್ರಿಕೇಲಿ ಪ್ರಕಟವಾಗಿದೆ. ಇದರ ಬಗ್ಗೆ ಕೇಂದ್ರಸರ್ಕಾರವೆನ್ನೋ ದೇವರು ಯಾವ ನಿಲುವು ತೊಗೊಂಡು ಎಂಥಾ ಪ್ರಸಾದ ಕೊಡುತ್ತೋ ಅಂತಾ ಕಾಯ್ಕೊಂಡು ಕೂಡೋ ಪರಿಸ್ಥಿತಿ ಇವತ್ತು ಕರ್ನಾಟಕ ರಾಜ್ಯಸರ್ಕಾರದ ಉನ್ನತ ಶಿಕ್ಷಣ ಇಲಾಖೆಗಿದೆ.

ಆಧಾರ್ ಗುರುತು ಚೀಟಿಯ ಅರ್ಜಿ
ಇತ್ತ ಇವತ್ತಿನ (24.11.2010ರ) ವಿಜಯಕರ್ನಾಟಕದ ಒಂಬತ್ತನೇ ಪುಟದಲ್ಲಿ "ಆಧಾರ್ - ರಾಷ್ಟ್ರೀಯ ಗುರುತು ಯೋಜನೆ"ಯ ಕುರಿತಾದ ಬರಹ ಇಂತಹುದೇ ಇನ್ನೊಂದು ಮಾಹಿತಿಯನ್ನು ಹೊರಗೆಡುವುತ್ತಿದೆ. ಈ ಯೋಜನೆಯಲ್ಲಿ ಇಡೀ ಭಾರತದ ಎಲ್ಲಾ ಪ್ರಜೆಗಳಿಗೆ ಗುರುತು ಚೀಟಿ ಕೊಡ್ತಾರಂತೆ, ಅದುಕ್ಕೆ ಬೇಕಾದ ಮಾಹಿತಿಯನ್ನು ಕಲೆಹಾಕೋ ಅರ್ಜಿ ಹಿಂದಿ/ ಇಂಗ್ಲೀಷ್ ಭಾಷೆಗಳಲ್ಲಿ ಮಾತ್ರಾ ಇರುತ್ತಂತೆ. "ಇದಕ್ಕೆ ಏನು ಕಾರಣ? ನಮ್ಮ ಕನ್ನಡನಾಡಿನ ಹಳ್ಳಿಗಾಡಿನ ಜನಕ್ಕೆ ಕನ್ನಡದಲ್ಲಿ ಮಾಹಿತಿ ತುಂಬಿಸಲು ಸುಲಭ ಅಲ್ವಾ? ಕನ್ನಡದಲ್ಲಿ ಇಡಕ್ಕೆ ಸರ್ಕಾರ ಮರೆತಿರಬೋದು" ಅಂತ ನೀವು ಅಂದ್ಕೊತೀರೇನೋ? ಊಹೂಂ... ಆದ್ರೆ ಇದುಕ್ಕೆಲ್ಲಾ ಕಾರಣ ಭಾರತ ದೇಶ ಅನುಸರಿಸುತ್ತಿರೋ ಭಾಷಾನೀತಿ. ಆ ಭಾಷಾನೀತಿಯಲ್ಲಿ ಕೇಂದ್ರಸರ್ಕಾರದ ಅಧಿಕೃತ ಭಾಷೆಯಾಗಿ ಹಿಂದಿ/ ಇಂಗ್ಲೀಷುಗಳನ್ನು ಮಾತ್ರಾ ಹೊಂದಿರೋದು. ಯಾಕಂದ್ರೆ ಈ ದೇಶದಲ್ಲಿ ಕೇಂದ್ರಸರ್ಕಾರ ಏನಾದ್ರೂ ಕೆಲಸ ಅಂತಾ ಮಾಡೋದಿದ್ರೆ ಅದು ಹಿಂದಿ/ ಇಂಗ್ಲೀಷಲ್ಲಿ ಮಾತ್ರಾನೆ.

ಭಾರತದ ಮಾನಗೇಡಿ ಭಾಷಾನೀತಿ!

ಹೌದು. ಜನರಿಂದ, ಜನಗಳಿಗಾಗಿ ಅಂತಾ ಕಟ್ಟಿರೋ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ(?) ಅಂತ ಕೊಚ್ಕೊಳ್ಳೋ ಭಾರತ ತನ್ನ ನಾಡೊಳಗೆ ಕಟ್ಕೊಂಡಿರೋ ಈ ಹುಳುಕಿನ ಭಾಷಾ ವ್ಯವಸ್ಥೆಯ ಕಾರಣದಿಂದಲೇ ಇವೆಲ್ಲಾ ಆಗ್ತಿರೋದು. ಹಿಂದೆ ರೈಲ್ವೇ ಪರೀಕ್ಷೆಗಳು ಹಿಂದಿ/ ಇಂಗ್ಲೀಷಲ್ಲಿ ನಡೀತಾ ಇದ್ದಿದ್ದು, ಇವತ್ತು ಯು.ಜಿ.ಸಿ ಪರೀಕ್ಷೆಗಳು ಹಿಂದಿ/ ಇಂಗ್ಲೀಷಲ್ಲಿ ಮಾತ್ರಾ ಇರಬೇಕು ಅನ್ನೋದೂ, ಆಧಾರ್ ಗುರುತು ಚೀಟಿ ಮಾಹಿತಿ ಕಲೆ ಹಾಕೋ ಕೆಲಸ ಹಿಂದೀ/ ಇಂಗ್ಲೀಷಲ್ಲಿ ಮಾತ್ರಾ ಇರಬೇಕೂ ಅನ್ನೋದೂ, ರಾಜ್ಯ ಕಾರ್ಮಿಕರ ವಿಮಾ ಸಂಸ್ಥೆಯ ಪೆಹೆಚಾನ್ ಕಾರ್ಡ್ (ಗುರುತು ಚೀಟಿ) ಹಿಂದೀ ಹೆಸರು ಹೊಂದಿರೋದೂ... ಇವೆಲ್ಲಾ ಕರ್ಮಕಾಂಡಕ್ಕೂ ಕಾರಣ ಇದೇ ಭಾಷಾನೀತಿ. ಈಗಿನ ಯು.ಜಿ.ಸಿ ಉದಾಹರಣೆಯನ್ನೇ ನೋಡಿ. ಹಿಂದಿ/ ಇಂಗ್ಲೀಷುಗಳಲ್ಲಿ ಮಾತ್ರಾ ಬರೆಯಬೇಕೆನ್ನೋ ನಿಯಮಾ ಇರೋ ಪರೀಕ್ಷೆಯಲ್ಲಿ ಪಾಸಾಗೋ ಕನ್ನಡದವರ ಸಂಖ್ಯೆ 9216ಕ್ಕೆ ಬರೀ 55 ಜನ ಮಾತ್ರವಂತೆ.
ರೈಲು ಪರೀಕ್ಷೆಯಲ್ಲಿ ಅರ್ಜಿಯನ್ನು ಹಿಂದಿ/ ಇಂಗ್ಲೀಷಲ್ಲಿ ಮಾತ್ರಾ ಬರೀಬೇಕು ಅನ್ನೋವಾಗ, ಬ್ಯಾಂಕು ಕೆಲಸಗಳಲ್ಲಿ ಅರ್ಜಿ ಹಾಕಕ್ಕೆ ಹತ್ತನೇ ತರಗತಿ ಅಂಕಪಟ್ಟೀಲಿ ಹಿಂದೀ ಇರಲೇ ಬೇಕು ಅನ್ನೋ ನಿಯಮ ಇರೋವಾಗ, ಯು.ಜಿ.ಸಿ ಪರೀಕ್ಷೆಗಳಲ್ಲಿ ಹಿಂದಿ ಗೊತ್ತಿರಲೇ ಬೇಕು ಅನ್ನೋ ನಿಯಮ ಇರುವಾಗ ಹಿಂದೀ/ ಇಂಗ್ಲೀಷಿನಲ್ಲಿ ಪ್ರಾವೀಣ್ಯತೆ ಇಲ್ಲದ ಕನ್ನಡಿಗ ಅಂತಹ ಕೆಲಸಗಳಿಂದ ವಂಚಿತನಾಗ್ತಾನೆ. ಆದರೆ ತಮ್ಮ ತಾಯ್ನುಡಿಯಾದ ಹಿಂದಿ ರಾಷ್ಟ್ರದ ಅಧಿಕೃತ ಭಾಷೆಯಾಗಿರೋ ಕಾರಣದಿಂದ ಎಲ್ಲಾ ಪರೀಕ್ಷೆ/ ಸಂದರ್ಶನಗಳನ್ನು ಹಿಂದಿಯಲ್ಲೇ ಎದುರಿಸಲು ಅವಕಾಶ ಇರುವ ನಿಯಮ ಕೆಲಸದ ಎಲ್ಲಾ ಅವಕಾಶಗಳನ್ನು ಹಿಂದಿ ತಾಯ್ನುಡಿಯವರಿಗೆ ಒದಗಿಸಿ ಕೊಡುತ್ತೆ. ಈ ಕಾರಣದಿಂದಲೇ ನಮ್ಮ ಜನ ಎಷ್ಟೊ ಅವಕಾಶಗಳನ್ನು ಕಳ್ಕೊತಾ ಇದಾರೆ. ಅಂದ್ರೆ ಭಾರತ ಸರ್ಕಾರಕ್ಕೆ ಇವೆಲ್ಲಾ ಗೊತ್ತಾಗಲ್ಲಾ ಅಂತೀರೇನು? "ಅಯ್ಯೋ ನನ್ ಮಕ್ಳಾ, ಭಾರತ ದೇಶದಲ್ಲಿದ್ದ ಮೇಲೆ ಹಿಂದೀ ಕಲೀದಿದ್ರೆ ಸರೀನಾ? ಭಾರತೀಯ ಅನ್ನುಸ್ಕೊಳಕ್ಕೆ ಇರಬೇಕಾದ ಅತಿ ಮುಖ್ಯವಾದ ಅರ್ಹತೆ ಅದೇ ಕಣ್ರುಲಾ..." ಅಂತಿದೆಯೇನೋ ಭಾರತ ಸರ್ಕಾರ ಅಲ್ವಾ? ಮೇರಾ ಭಾರತ್ ಮಹಾನ್...

ತ್ರಿಭಾಷಾ ಸೂತ್ರಕ್ಕೆ ಕೊನೆ ಹಾಡಲಿ.

ಅಲ್ಲಾ ಗುರೂ, ಯಾಕೆ ರಕ್ಷಣಾ ವೇದಿಕೆಯೋರು ಹೊಡದಾಡಿ, ಜೈಲು ಸೇರಿ, ಪೋಲೀಸರಿಮ್ದ ಒದೆ ತಿಂದು ರೈಲ್ವೇ ನೇಮಕಾತಿ ಚಳವಳಿ ಮಾಡಬೇಕು? ಯಾಕೆ ವಿಜಯಕರ್ನಾಟಕದಲ್ಲಿ ತುರುವೇಕೆರೆ ಪ್ರಸಾದ್ ಆಧಾರ್ ಬಗ್ಗೆ ಬರೀಬೇಕು? ಯಾಕೆ ಮದನ್ ಗೋಪಾಲ್ ಅವರಂಥಾ ಸರ್ಕಾರಿ ಅಧಿಕಾರಿ ಯುಜಿಸೀನಾ ಗೋಗರೀಬೇಕು? ಇವೆಲ್ಲಕ್ಕೂ ಕೊನೆ ಹಾಡೋಕೆ ಆಗಲ್ವಾ? ಭಾರತ ಸರ್ಕಾರ ಪಾಪ, ಹಿಂದಿಯವರು ಜಾಸ್ತಿ ಜನಾ ಇದಾರೆ ಅಂತ ಅವರ ಹಿತ ಕಾಪಾಡ್ಲಿ. ಆದರೆ ಕನ್ನಡಿಗರ ಏಳಿಗೆಗಾಗೇ ಇರೋ ಕರ್ನಾಟಕ ಸರ್ಕಾರ ಏನಾದ್ರೂ ಮಾಡಬೇಕಲ್ವಾ? ನೀವು "ಕರ್ನಾಟಕ ರಾಜ್ಯ ಸರ್ಕಾರವು ಭಾರತದ ಭಾಷಾನೀತಿಯನ್ನು ಬದಲಾಯಿಸಲು, ದೇಶದ ಎಲ್ಲಾ ಪ್ರದೇಶದ ಭಾಷೆಗಳಿಗೂ ಭಾರತದ ಆಡಳಿತ ಭಾಷೆಯ ಸ್ಥಾನಮಾನ ಕೊಡಿಸುವ ಪಣತೊಟ್ಟು ತಾನೇ ಮುಂದಾಳ್ತನ ವಹಿಸಿಕೊಳ್ಳಲಿ" ಅಂತಾ ಆಸೆಪಟ್ರೆ ಅದು ಅತಿಯಾಸೆ ಆದೀತು. ಆದರೆ ಕೊನೇಪಕ್ಷ, ಕೇಂದ್ರದ ತ್ರಿಭಾಷಾ ನೀತಿ ಅನ್ನೋ ಹೆಸರಿನ, ಆದರೆ ನಿಜಕ್ಕೂ ನಮ್ಮ ರಾಜ್ಯಭಾಷೆಯ ಸೀಟಲ್ಲಿ ತಾವು ಜಾಗ ಮಾಡ್ಕೊಂಡು ಹಿಂದೀ/ ಇಂಗ್ಲೀಷನ್ನು ಕೂಡಿಸೋ ಅಂಥಾ, ಸೂತ್ರಕ್ಕೆ ಕೊನೆ ಹೇಳಲಿ. ಆಡಳಿತ ಭಾಷಾ ಕಾಯ್ದೆಯಿಂದ ತಮಿಳುನಾಡು ವಿನಾಯ್ತಿ ಪಡೆದುಕೊಂಡಂತೆ ತಾನೂ ವಿನಾಯ್ತಿ ಪಡೆದುಕೊಳ್ಳಲಿ. ಏನಂತೀರಾ ಗುರೂ?

ಬನವಾಸಿ ಬಳಗದಿಂದ ಕ್ಯಾಂಪಸ್ ಆಯ್ಕೆ ಸಮೀಕ್ಷೆ.


ಕನ್ನಡನಾಡಿನ ಏಳಿಗೆ ಆಗಬೇಕೂಂದ್ರೆ ನಮ್ಮ ನಾಡಲ್ಲಿ ಹೆಚ್ಚುಹೆಚ್ಚು ಉದ್ದಿಮೆಗಳು ಆರಂಭವಾಗಬೇಕು ಮತ್ತು ನಮ್ಮ ಜನಕ್ಕೆ ಹೆಚ್ಚುಹೆಚ್ಚು ಕೆಲಸಗಳು ಸಿಗಬೇಕು. ಇಂಥಾ ಕೆಲಸಗಳು ನಮ್ಮ ಜನಕ್ಕೇ ಸಿಗದೇ ಹೋದರೆ ನಮ್ಮ ನಾಡಿನ ನಿರುದ್ಯೋಗ ಸಮಸ್ಯೆಯಂತೂ ಬಗೆಹರಿಯಲ್ಲ. ನಿರುದ್ಯೋಗ ನಿವಾರಣೆಗಾಗೇ ನಮ್ಮ ಸರ್ಕಾರಗಳು ಉದ್ದಿಮೆಗಳನ್ನು ಆರಂಭಿಸೋದು. ಪುಗಸಟ್ಟೆ ನೆಲ, ತೆರಿಗೆ ರಜಾ, ವಿದ್ಯುತ್ ಇತ್ಯಾದಿ ಕೊಡೋದಕ್ಕೂ ಇದೇ ದೊಡ್ಡ ಕಾರಣ ಅಂದ್ರೆ ತಪ್ಪಿಲ್ಲ. ಹೀಗೆ ಆರಂಭವಾದ ಉದ್ದಿಮೆಗಳಲ್ಲಿ ಐಟಿ ಕ್ಷೇತ್ರದ ಉದ್ಯಮಗಳು ಪ್ರಮುಖವಾಗಿವೆ.

ಕ್ಯಾಂಪಸ್ ಆಯ್ಕೆ ಮತ್ತು ಸಮೀಕ್ಷೆ.

ಇಂಥಾ ಐ.ಟಿ ಉದ್ದಿಮೆಗಳು ತಮ್ಮ ಸಂಸ್ಥೆಗೆ ನೇಮಕ ಮಾಡಿಕೊಳ್ಳಲು ನಾಡಿನ ಬೇರೆ ಬೇರೆ ಕಾಲೇಜುಗಳಿಗೆ ಹೋಗುತ್ತವೆ. ಇವು ಹೆಚ್ಚು ಹೆಚ್ಚು ಕರ್ನಾಟಕದ ಕಾಲೇಜುಗಳಿಗೇ ಹೋಗಬೇಕು ಮತ್ತು ನಮ್ಮ ವಿದ್ಯಾರ್ಥಿಗಳು ನೇಮಕಾತಿಯಲ್ಲಿ ಆಯ್ಕೆಯಾಗಬೇಕು ಮತ್ತು ವಿದ್ಯಾಸಂಸ್ಥೆಗಳು ಕ್ಯಾಂಪಸ್ ಆಯ್ಕೆಯ ಪ್ರಕ್ರಿಯೆಯನ್ನು ಸಮರ್ಥವಾಗಿ ಆಯೋಜಿಸಬೇಕು. ಅಂದರೆ ಇಂಥಾ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಗಳ ಸಂಪೂರ್ಣ ಲಾಭ ನಮ್ಮ ನಾಡಿನ ವಿದ್ಯಾರ್ಥಿಗಳಿಗೂ, ನಾಡಿನ ಉದ್ದಿಮೆಗಳಿಗೂ ಸಿಗುವಂತಾಗುವುದು ಅತ್ಯಂತ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ರಾಜ್ಯದಲ್ಲಿರುವ ನಾನಾ ಉದ್ದಿಮೆದಾರರು, ವಿದ್ಯಾಸಂಸ್ಥೆಗಳು ಮತ್ತು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಬನವಾಸಿ ಬಳಗವು ಒಂದು ಸಮೀಕ್ಷೆಯನ್ನು ಆರಂಭಿಸಲು ಮುಂದಾಗಿದೆ. ಈ ಉದ್ದೇಶಿತ ಸಮೀಕ್ಷೆಯು ಪ್ರಾತಿನಿಧಿಕವಾಗಿದ್ದು ಆಯ್ದ ಕೆಲವು ಸಂಸ್ಥೆಗಳಿಂದಲೂ, ಕಾಲೇಜುಗಳಿಂದಲೂ, ಅಭ್ಯರ್ಥಿಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಕರ್ನಾಟಕದ ವೃತ್ತಿಪರ ಕಾಲೇಜುಗಳಲ್ಲಿ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಯನ್ನು ಹೆಚ್ಚಿಸಿ, ಆ ಮೂಲಕ ಹೆಚ್ಚು-ಹೆಚ್ಚು ಕನ್ನಡಿಗರಿಗೆ ಉದ್ಯೋಗ ಸಿಗಲು ನೆರವಾಗುವುದು.

ಸಮೀಕ್ಷೆಯ ತಿರುಳಲ್ಲಿದೆ...

ಈ ಸಮೀಕ್ಷೆಯ ಮೂಲಕ ಕ್ಯಾಂಪಸ್ ಆಯ್ಕೆ ನಡೆಸುತ್ತಿರುವ/ ನಡೆಸಬೇಕೆಂದಿರುವ ಕಾಲೇಜುಗಳು ಮಾಡಿಕೊಂಡಿರುವ ವ್ಯವಸ್ಥೆಗಳು, ಅವು ಎದುರುಸುತ್ತಿರುವ ಸವಾಲುಗಳು, ಅನುಸರಿಸುತ್ತಿರುವ ಯಶಸ್ವಿ ಕ್ರಮಗಳು - ಇವುಗಳ ಬಗ್ಗೆ ಮಾಹಿತಿ ಕೂಡಿಹಾಕಲಾಗುವುದು. ಹಾಗೆಯೇ, ಕ್ಯಾಂಪಸ್ ಆಯ್ಕೆ ಮಾಡುವ ಕಂಪನಿಗಳ ನೇಮಕಾತಿ ವರ್ಗದವರು ಕಾಲೇಜುಗಳಿಂದ ಏನೇನು ತಯಾರಿ ಬಯಸುವರು, ಕ್ಯಾಂಪಸ್ ಆಯ್ಕೆಗೆ ಕಾಲೇಜುಗಳನ್ನ ಯಾವ ಆಧಾರದ ಮೇಲೆ ಆರಿಸುತ್ತಾರೆ? ಆಯ್ಕೆ ಪ್ರಕ್ರಿಯೆಯಲ್ಲಿ ಏನಿರುತ್ತದೆ? ಮತ್ತು ಕ್ಯಾಂಪಸ್ ಆಯ್ಕೆಯನ್ನು ಸುಸೂತ್ರವಾಗಿ ನಡೆಸುವಲ್ಲಿ ಕಂಪನಿಗಳು ಎದುರಿಸುತ್ತಿರುವ ಸವಾಲುಗಳೇನು? - ಇವುಗಳ ಬಗ್ಗೆಯೆಲ್ಲಾ ಮಾಹಿತಿ ಕೂಡಿಸಿ ಹಂಚಿಕೊಳ್ಳುವ ಉದ್ದೇಶ ನಮಗಿದೆ.

ಸಮೀಕ್ಷೆಯಲ್ಲಿ ಕೈಜೋಡಿಸಲು ಕರೆ..

ಸಮೀಕ್ಷೆ ಯಶಸ್ವಿಯಾಗಲು, ನಿಮ್ಮೆಲ್ಲರ ಸಹಕಾರ ಅತ್ಯಗತ್ಯ. ನೀವು ಓದಿದ ಅಥವಾ ನಿಮ್ಮ ಮಿತ್ರರು ಓದುತ್ತಿರುವ ಕರ್ನಾಟಕದ ವಿವಿಧ ಇಂಜಿನಿಯರಿಂಗ್/ ಎಂ.ಸಿ.ಎ. ಕಾಲೇಜುಗಳಲ್ಲಿ ನಡೆಸುವ ಕ್ಯಾಂಪಸ್ ಆಯ್ಕೆ ಬಗ್ಗೆ ನಿಮಗೆ ಮಾಹಿತಿ ಗೊತ್ತಿದ್ದಲ್ಲಿ ಅದನ್ನು ನಮಗೆ ತಿಳಿಸಿ. ಹಾಗೆಯೇ, ನಿಮ್ಮ ಕಂಪನಿಗಳಿಂದ ಕ್ಯಾಂಪಸ್ ಆಯ್ಕೆ ನಡೆಸುತ್ತಿದ್ದರೆ, ಆ ಪ್ರಕ್ರಿಯೆಯ ಬಗ್ಗೆ ಮಾಹಿತಿ ತಿಳಿಸಬಹುದು. ಈ ವಿಷಯವಾಗಿ ನೀವು ನಮ್ಮ ಬಳಗದ ಶ್ರೀ ಜಯಪ್ರಕಾಶ್ ಅವರನ್ನು ಸಂಪರ್ಕಿಸಬೇಕೆಂದು ಕೋರುತ್ತೇವೆ.

ಅವರ ಮಿಂಚೆ ವಿಳಾಸ: jayaprakash@banavasibalaga.org

ಬಿಬಿಎಂಪಿ ಶಾಲೆಗಳು ಇನ್ಮುಂದೆ ಇಂಗ್ಲೀಷ್ ಮಾಧ್ಯಮದಲ್ಲಿ !!!

ದಿನಾಂಕ 12.11.2010ರ ವಿಜಯಕರ್ನಾಟಕ ದಿನಪತ್ರಿಕೆಯ ಆರನೇ ಪುಟದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮವನ್ನು ಮುಂದಿನ ವರ್ಷದಿಂದ ಆರಂಭಿಸಲಾಗುವುದು ಅನ್ನೋ ಒಂದು ಸುದ್ದಿ ಬಂದಿದೆ. ಮಹಾನಗರ ಪಾಲಿಕೆಯ ಒಂದು ‘ಸ್ಥಾಯಿಸಮಿತಿ’ಯು ಈ ಶಿಫಾರಸ್ಸನ್ನು ಮಾಡಿದೆಯಂತೆ. ಈ ಸುದ್ದಿ ಕನ್ನಡನಾಡಿನ ಕಲಿಕೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಮತ್ತು ಈಗಿನ ಸರ್ಕಾರವು ಮಾತೃಭಾಷಾ ಕಲಿಕೆಯ ಪರವಾದ ತನ್ನ ನಿಲುವಿನಿಂದ ಹಿಂದೆ ಸರಿದಿರುವ ಅನುಮಾನಕ್ಕೆ ಕಾರಣವಾಗಿದೆ. ಇದು ಯಾವುದೋ ಒಂದು ನಗರ ಪಾಲಿಕೆಯ, ಒಂದು ಸ್ಥಾಯಿ ಸಮಿತಿಯ ಶಿಫಾರಸ್ಸು ಮಾತ್ರವಾಗಿರದೆ ಇಡೀ ಸರ್ಕಾರವನ್ನು ನಡೆಸುತ್ತಿರುವ ಭಾರತೀಯ ಜನತಾ ಪಕ್ಷದ ನಿಲುವಾ ಅನ್ನುವ ಅನುಮಾನಕ್ಕೆ ಕಾರಣವಾಗಿದೆ.

ಉದ್ಯಮಿಯ ಅನಿಸಿಕೆ!

ಕಳೆದ ಕೆಲವು ದಿನಗಳ ಹಿಂದೆಯಷ್ಟೇ, ಕನ್ನಡ ಮಾಧ್ಯಮದಲ್ಲೇ ಕಲಿತು ಅಷ್ಟೆತ್ತರಕ್ಕೇರಿದ ಇನ್ಫೋಸಿಸ್ಸಿನ ಶ್ರೀಯುತ ನಾರಾಯಣಮೂರ್ತಿಗಳು ಇಂತಹದ್ದೇ ನಿಲುವಿನ ಒಂದು ಹೇಳಿಕೆ ನೀಡಿದ್ದಾರೆ. ಇವರಂತೂ ಆಗ್ಗಿಂದಾಗ್ಗೆ ಕನ್ನಡನಾಡಿನ ಮೂಲೆಮೂಲೆಗಳಲ್ಲಿ ಇಂಗ್ಲೀಷ್ ಶಾಲೆಗಳನ್ನು ಆರಂಭಿಸಬೇಕೆಂದೂ, ಕನ್ನಡದ ಮಕ್ಕಳ ಕಲಿಕೆ ಇಂಗ್ಲೀಷಿನಲ್ಲಿರಬೇಕೆಂದೂ ಆಗ್ಗಾಗ್ಗೆ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಬಹುಷಃ ಜಾಗತೀಕರಣದ ಇಂದಿನ ಯುಗದಲ್ಲಿ ಬೃಹತ್ತಾಗಿ ಬೆಳೆದಿರುವ ಕಾಲ್ ಸೆಂಟರ್, ಸಾಫ್ಟ್‍ವೇರ್ ಉದ್ಯಮಗಳಲ್ಲಿನ ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಶ್ರೀಯುತರು ಹೀಗೆ ಹೇಳಿಕೆ ನೀಡಿರಬಹುದು. ಇರಲಿ... ಆದರೆ ಇಡೀ ಕನ್ನಡನಾಡು ಒಂದು ಕಾಲ್ ಸೆಂಟರ್ ಆಗಿರಬೇಕು ಎನ್ನುವ ನಿಲುವಂತೂ ಇವರದ್ದಲ್ಲಾ ಎಂದೇ ಭಾವಿಸೋಣ. ಮೇಲ್ನೋಟಕ್ಕೆ ಅತ್ಯಂತ ಜನಪರವೆಂಬಂತೆ ಕಾಣುವ ಈ ನಿಲುವಿನ ಸಾಧಕ ಬಾಧಕಗಳ ಬಗ್ಗೆ ಸರ್ಕಾರ ಯೋಚಿಸಬೇಕಿತ್ತು. ಶ್ರೀಯುತರು ಯಶಸ್ವಿ ಉದ್ಯಮಿ ಮಾತ್ರವೇ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ಇವರ ಹೇಳಿಕೆಗೆ ಕೊಡಬೇಕಾದ ಮಹತ್ವ ಎಷ್ಟು ಎಂಬುದು ಅರಿವಾಗುತ್ತದೆ.

ಕನ್ನಡದ ನಾಲಗೆ ಕಿತ್ತು ಇಂಗ್ಲೀಷ್ ನಾಲಗೆ ಸಿಕ್ಕಿಸಲಾದೀತೆ?
ಹೌದು. ಇಂಗ್ಲೀಷ್ ಶಾಲೆಗಳನ್ನು ಸರ್ಕಾರವೇ ಎಲ್ಲಾಕಡೆ ಶುರುಮಾಡಬಹುದು, ಆದರೆ ಕಲಿಕೆಯೆನ್ನುವುದು, ಜ್ಞಾನಾರ್ಜನೆ ಎನ್ನುವುದು ಕನ್ನಡದ ಮಕ್ಕಳಿಕೆ ತಾಯ್ನುಡಿಯಾದ ಕನ್ನಡಕ್ಕಿಂತಾ ಪರನುಡಿಯಾದ ಇಂಗ್ಲೀಷಿನಲ್ಲಿ ಸುಲಭವಾಗುತ್ತದೆಯೇ? ನಮ್ಮ ನಾಡಿನ ಎಲ್ಲಾ ಮಕ್ಕಳಿಗೂ ಇಂಗ್ಲೀಷಿನಲ್ಲಿನ ಕಲಿಕೆ ಸುಲಭವಾಗುತ್ತದೆಯೇ? ಇಂಗ್ಲೀಷಿನ ಮೂಲಕ ಕಲಿಯಬೇಕೆಂಬುದೇ ಒಂದು ಓಟದ ಸ್ಪರ್ಧೆಯಲ್ಲಿ ಕಾಲಿಗೆ ಕಲ್ಲುಕಟ್ಟಿ ಓಡಲು ಬಿಟ್ಟಂತಾಗುವುದಿಲ್ಲವೇ? ಮಕ್ಕಳ ಕಲಿಕೆ ತಾಯ್ನುಡಿಯಲ್ಲಿ ಉತ್ತಮವೆಂದ ವಿಜ್ಞಾನಿಗಳ ಸಂಶೋಧನೆಗಳು ಪೊಳ್ಳೇ? ಜಗತ್ತಿನ ಅತ್ಯಂತ ಮುಂದುವರೆದ ರಾಷ್ಟ್ರಗಳಲ್ಲಿ ಬಹುತೇಕವುಗಳೆಲ್ಲಾ (ಜಪಾನು, ಜರ್ಮನಿ, ಇಸ್ರೇಲು, ಫ್ರಾನ್ಸು, ಇಟಲಿ, ಕೊರಿಯಾ... ಸೇರಿ) ತಾಯ್ನುಡಿಯಲ್ಲೇ ತಮ್ಮ ಮಕ್ಕಳ ಕಲಿಕೆಯನ್ನು ನಡೆಸೇ ಯಶ ಗಳಿಸಿರುವುದು ಸುಳ್ಳೇ? ಜ್ಞಾನ ವಿಜ್ಞಾನ ತಂತ್ರಜ್ಞಾನಗಳೆಲ್ಲವನ್ನೂ ಇಂಗ್ಲೀಷ್ ಮಾಧ್ಯಮದ ಮೂಲಕ ಕಲಿಸುತ್ತೇನೆನ್ನುವ ಸರ್ಕಾರದ ನಿಲುವು ಎಷ್ಟು ಆತ್ಮಹತ್ಯಾತ್ಮಕವೆಂದರೆ ನಾಳಿನ ನಮ್ಮ ಮುಂದಿನ ಪೀಳಿಗೆಯವರು ಕನ್ನಡದಲ್ಲೂ ಇಂಗ್ಲೀಷಲ್ಲೂ ಪರಿಣಿತಿಯಿಲ್ಲದ ಅರೆಬೆಂದಮಡಿಕೆಗಳಾಗುವುದಿಲ್ಲವೇ? ಕರ್ನಾಟಕ ಸರ್ಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಕರ್ನಾಟಕ ರಾಜ್ಯದ ಮಕ್ಕಳ ಕಲಿಕೆ ಇಂಗ್ಲೀಷಿನಲ್ಲಾಗಬೇಕೆಂಬ ನಿಲುವು ಹೊಂದಿದೆಯೇ? ಈ ನೆಲದ ಸಂಸ್ಕೃತಿ ಇತಿಹಾಸ ಹೇಳುವ ಸಮಾಜಶಾಸ್ತ್ರದ ಕಲಿಕೆ ನಮ್ಮ ಮಕ್ಕಳಿಗೆ ಇಲ್ಲದೆ ನೆಲದ ಸಂಸ್ಕೃತಿಯ ಬೇರಿನಿಂದ ದೂರಾಗುವುದು ಬಿಜೆಪಿಗೆ ಪರವಾಗಿಲ್ಲವೇ? ಹಾಗಿದ್ದಲ್ಲಿ ಅದು ತನ್ನ ನಿಲುವನ್ನು ಹಾಗೆಂದು ಘೋಷಿಸಿಕೊಳ್ಳಲಿ... ಆದರೆ ಇದು ನಾಡನ್ನು ಹಿಂದಕ್ಕೊಯ್ಯುವ ಕಾರ್ಯವಾಗುತ್ತದೆ ಎಂಬುದನ್ನು ಮರೆಯದಿರಲಿ.

ಮಾಡಬೇಕಾದ್ದು...!

ರಾಜ್ಯಸರ್ಕಾರವು ಈ ನಾಡಿನ ಮಕ್ಕಳ ಏಳಿಗೆಯನ್ನು ರೂಪಿಸಬಲ್ಲ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಜವಾಬ್ದಾರಿ ಹೊಂದಿದೆ. ಈಗಿರುವ ವ್ಯವಸ್ಥೆಯು ಸರಿಯಿಲ್ಲವೆನ್ನುವುದು ಮತ್ತು ಅದರಲ್ಲಿ ಸುಧಾರಣೆಯಾಗಬೇಕಿದೆ ಎನ್ನುವುದು ಮನವರಿಕೆಯಾಗಿದ್ದರೆ ಅದು ಒಳ್ಳೆಯದೇ. ಆದರೆ ಅದನ್ನು ಸರಿ ಮಾಡಬೇಕಾದ ಬಗೆ ಏನು? ತಾನೇ ಸರಿಮಾಡಬೇಕಾದ ವ್ಯವಸ್ಥೆಯನ್ನು ತಿಪ್ಪೆಗೆಸೆದು ಬೇರೊಂದು ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ಮುಂದಾಗುವ ಮೂಲಕವೇ? ಇದಕ್ಕೆ ಬದಲಾಗಿ "ಕನ್ನಡನಾಡಿನ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದು ಹೇಗೆ? ಮೂಲಭೂತವ್ಯವಸ್ಥೆಯನ್ನು ಸುಧಾರಿಸುವ ಬಗೆ ಹೇಗೆ?" ಎಂದು ಚಿಂತಿಸಿ ಎಂದು ಸರಿಯಾದ ಯೋಜನೆಗಳನ್ನು ರೂಪಿಸುವುದಕ್ಕೆ ಬೇಕಾದ ಕ್ರಮ ಕೈಗೊಳ್ಳುವುದಲ್ಲವೇ? ಕನ್ನಡಿಗರು ಜಗತ್ತಿನ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲು ಕನ್ನಡದಲ್ಲಿ ಕಲಿಯುವುದೇ ದಾರಿಯೆನ್ನುವುದನ್ನು ಅರಿಯಬೇಕಾಗಿದೆ. ಇಂದು ಕನ್ನಡದ ಶಿಕ್ಷಣ ಅಷ್ಟು ಪ್ರಬುದ್ಧವಾಗಿಲ್ಲದಿದ್ದರೆ ಅದನ್ನು ಆ ಹಂತಕ್ಕೆ ಹಂತಹಂತವಾಗಿ ಒಯ್ಯುವ ಬಗ್ಗೆ ಯೋಚಿಸಬೇಕಾಗಿದೆ. ಆಗ ಮಾತ್ರಾ ಜ್ಞಾನದ ಭಂಡಾರ ಕನ್ನಡದ ಎಲ್ಲಾ ಮಕ್ಕಳಿಗೆ ಎಟುಕಲು ಸಾಧ್ಯ, ಆಗ ಮಾತ್ರವೇ ನಮ್ಮ ಮಕ್ಕಳಿಂದ ಜಗತ್ತಿನ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ನಿರೀಕ್ಷಿಸಲು ಸಾಧ್ಯ. ನಾಡಿನ ಆರ್ಥಿಕ ಏಳಿಗೆ, ಜನಶಕ್ತಿಯ ಸದುಪಯೋಗ ಸಾಧ್ಯ. ನಾಳೆಗಳನ್ನು ಹಸನು ಮಾಡಲು ಸಜ್ಜಾಗಬೇಕಾದರೆ ಅದಕ್ಕೆ ಪೂರಕವಾಗುವಂತಹ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಬೇಕಾಗಿದೆ. ದೀರ್ಘಾವಧಿಯಲ್ಲಿ ಇದೊಂದೇ ಏಳಿಗೆಗೆ ದಾರಿ... ಹೆದ್ದಾರಿಯಾಗಿದೆ. ನಮ್ಮನ್ನಾಳುವವರಿಗೆ, ನಮ್ಮ ಮಕ್ಕಳ ಭವಿಷ್ಯದ ಹೊಣೆ ಹೊತ್ತವರಿಗೆ ಇದರ ಅರಿವಿಲ್ಲದಿರುವುದು ನಾಡಿನ ದುರಂತವಲ್ಲವಾ ಗುರೂ!

ಯುವಜನೋತ್ಸವ ಮರೆತ ಏಕತೆಯ ಮೂಲಮಂತ್ರ!

ನಮ್ಮದು ಕನ್ನಡಪರ ಸರ್ಕಾರ ಅಂತಾ ಗಂಟೆಗೊಮ್ಮೆ, ಗಳಿಗೆಗೊಮ್ಮೆ ಬಡ್ಕೊಳ್ಳೋ ಘನ ಕರ್ನಾಟಕ ರಾಜ್ಯಸರ್ಕಾರವೇ ಮಾಡಿರೋ ಈ ಕೆಲಸವನ್ನು ನೋಡಿ. ನಿನ್ನೆಯ (10.11.2010ರ) ವಿಜಯಕರ್ನಾಟಕದಲ್ಲಿ ಇಂಥದ್ದೊಂದು ಜಾಹೀರಾತನ್ನು ಹಾಕಲಾಗಿದೆ. ಇದರಲ್ಲಿ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ನಾಡಿನ ಯುವಕರಿಗೆ ಕರೆಕೊಡಲಾಗಿದೆ. ಆದರೆ ಈ ಯುವಜನೋತ್ಸವದಲ್ಲಿ ಭಾಷಣ ಸ್ಪರ್ಧೆ ಮತ್ತು ಏಕಾಂಕ ನಾಟಕ ಸ್ಪರ್ಧೆಗಳು ಹಿಂದಿ/ ಇಂಗ್ಲೀಷಿನಲ್ಲಿರಬೇಕಂತೆ! ಇಲ್ಲಿ ಬೇರೆಬೇರೆ ಹಂತಗಳಲ್ಲಿ ಗೆದ್ದು ಮುಂದೆ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಿ, ಅಲ್ಲೂ ಬಹುಮಾನ ಗೆಲ್ಲಿ, ಹೊರದೇಶದಲ್ಲಿ ನಿಮ್ಮ ಪ್ರತಿಭೆ ತೋರಿಸೋ ಅವಕಾಶ ಗಿಟ್ಟುಸಿಕೊಳ್ಳಿ ಅಂತಾ ನಮ್ಮ ಹಳ್ಳಿಹಳ್ಳಿಯಲ್ಲಿ ಕರೆಕೊಟ್ಟಿದ್ದುನ್ನ ನೋಡಿ ನಮ್ ಜನರೇನಾದ್ರೂ ಹಿಗ್ಗುದ್ರೆ ಬಾಯಿಗೆ ಮಣ್ಣಾಕ್ಕೊಂಡಂಗೇನೆ! ಏಕಂದ್ರೆ ನೀವು ನಾಟಕ ಮಾಡಬೇಕಾದ್ದು ಹಿಂದೀ/ ಇಂಗ್ಲಿಷಲ್ಲಿ ಅಂತಿದೆ ಈ ಜಾಹೀರಾತು. ಇದುನ್ ಹೊರಡ್ಸಿರೋದು ನಮ್ಮ ಕನ್ನಡನಾಡಿನ, ಕನ್ನಡಿಗರನ್ನು ಮುನ್ನಡೆಸುವ, ಜಗತ್ತಿನ ಕೆಡುಕುಗಳಿಂದ ಕನ್ನಡಿಗರನ್ನು ಕಾಯಬೇಕಾದ ಘನ ಕರ್ನಾಟಕ ರಾಜ್ಯಸರ್ಕಾರ!

ರಾಷ್ಟ್ರೀಯ ಅಂತಂದ್ರೆ ಹಿಂದೀ/ ಇಂಗ್ಲೀಷಾ?

ಹೌದೂ, ಭಾರತದ ಮೂಲೆಮೂಲೆಗಳ ಪ್ರತಿಭೆಗಳನ್ನು ಬೆಳಕಿಗೆ ತರಲು ಹೊರಟವರಿಗೆ ಭಾಷೆಯ ಮಿತಿ ಹಾಕುವಂತಹ ಈ ಕಟ್ಟಳೆಯಾದ್ರೂ ಯಾಕೆ ಬೇಕಿತ್ತು? ಇಲ್ಲಿ ಭಾರತದ ಎಲ್ಲಾ ನುಡಿಗಳಿಗೂ ಸ್ಥಾನ ಕೊಡಬೇಕಲ್ವಾ? ಇಲ್ಯಾಕೆ ಕನ್ನಡದಲ್ಲಿ ನಾಟಕ ಮಾಡುವುದು, ಭಾಷಣ ಮಾಡುವುದು ತಪ್ಪಾಗುತ್ತೆ? ವೈವಿಧ್ಯತೆ, ನಾನಾ ಭಾಗಗಳ ನಾನಾ ಸಂಸ್ಕೃತಿಯ ಜನರನ್ನು ಪರಸ್ಪರ ಪರಿಚಯಿಸಿ ರಾಷ್ಟ್ರೀಯ ಏಕತೆಯನ್ನು ಹೆಚ್ಚಿಸಲು ಈ ಯುವಜನೋತ್ಸವ ನಡೆಸಲಾಗುತ್ತದೆ ಅನ್ನುವ ಕೇಂದ್ರಸರ್ಕಾರದ ಮೂಲೋದ್ದೇಶವೇ ಇಂಗ್ಲೀಷ್/ ಹಿಂದೀ ಮಾತ್ರಾ ಬಳಸಿ ಅನ್ನುವ ಈ ನಿಲುವಿಂದ ಅರ್ಥಹೀನವಾಗುವುದಿಲ್ಲವೇ? ಎಲ್ಲಾ ಭಾಷೆಗಳಿಗೆ ಸಮಾನ ಗೌರವ ಕೊಡುತ್ತೇವೆ, ವೈವಿಧ್ಯತೆಯಲ್ಲಿ ಏಕತೆ ಸಾಧಿಸುತ್ತೇವೆ ಎನ್ನುವ ನಾಡಿನಲ್ಲಿ ಹೀಗಿರುವುದು ಸರಿಯೇ? ಇದು ಏಕತೆಗೆ ಪೂರಕವೇ? ಹಿಂದಿ/ ಇಂಗ್ಲೀಷ್ ಅರಿಯದ ಭಾರತೀಯರಿಗೆ ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ಹಕ್ಕೇ ಇಲ್ಲವೇ? ಏನಂತೀರಾ ಗುರೂ?

ಅನ್ನದಾತರನ್ನೇ ಕಡೆಗಣಿಸಿತೇ ಕನ್ನಡ ಚಿತ್ರರಂಗ?


ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯಲ್ಲಿ, ಕಳೆದ ಕೆಲವು ದಿನಗಳಿಂದ ಎದ್ದಿರೋ ಕೋಲಾಹಲ ನೋಡ್ತಾಯಿದ್ರೆ ಈ ಚಿತ್ರರಂಗದ ಒಳಗಿನ ಮಂದೀನೇ ಕನ್ನಡ ಚಿತ್ರರಂಗವನ್ನು ಒಂದು ಉದ್ದಿಮೆಯಾಗಿ ಪರಿಗಣಿಸಿರೋ ಹಾಗೆ ಕಾಣ್ತಾಯಿಲ್ಲಾ ಗುರೂ! ಇಲ್ಲಿರೋ ಜನಾ ಇಡೀ ನಾಡುನ್ನ, ಉದ್ಯಮಾನಾ ಮತ್ತು ಸರ್ಕಾರಾನಾ ಬ್ಲಾಕ್‍ಮೇಲ್ ತಂತ್ರ ಉಪಯೋಗಿಸಿ ಆಡುಸ್ತಾ ಇದಾರಾ ಅನ್ನೋ ಅನುಮಾನ ಜನರಲ್ಲಿ ಇಷ್ಟೊತ್ತಿಗೆ ಮೂಡಿರಲೂಬಹುದು. ಒಟ್ನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ತಪ್ಪು ನಡೆ ಇಡ್ತಿದ್ಯಾ? ಇಂಥಾ ನಡೆಗಳಿಂದಾಗಿ ಇಡೀ ಚಿತ್ರೋದ್ಯಮ ಮತ್ತು ಕನ್ನಡನಾಡಿಗೇ ಹಾನಿ ಮಾಡ್ತಿದ್ಯಾ? ಅನ್ನೋ ಪ್ರಶ್ನೆಗಳು ಜನರಲ್ಲಿ ಹುಟ್ಕೊಂಡಂಗಿದೆ ಗುರೂ!

ಚಿತ್ರರಂಗ ಕಡೆಗಣಿಸಿರೋ ಅನ್ನದಾತರು!

ಹೌದೂ, ಮಾತೆತ್ತುದ್ರೆ ಅನ್ನದಾತರು, ಅಭಿಮಾನಿ ದೇವರೂ ಅಂತಾ ಜನರನ್ನು ಅಟ್ಟಕ್ಕೇರಿಸೋ ಈ ಜನ, ನಿಜಕ್ಕೂ ಈ ಇಡೀ ಪ್ರಕರಣದಲ್ಲಿ ಜನರ `ಆಯ್ಕೆಯ ಸ್ವಾತಂತ್ರ್ಯಾ'ನ ಮತ್ತು ಜನರು ತಮ್ಮ `ತಾಯ್ನುಡಿಯಲ್ಲಿ ಮನರಂಜನೆ' ಪಡೆಯೋ ಹಕ್ಕುನ್ನ ನಿರಾಕರುಸ್ತಾನೆ ಬಂದಿದಾರೆ. ಪರಭಾಷಾ ಚಿತ್ರಗಳ ಬಗ್ಗೆ, ಡಬ್ಬಿಂಗ್ ಬಗ್ಗೆ ಕಿಡಿ ಕಾರುವ ಸದರಿ ವಾಣಿಜ್ಯ ಮಂಡಲಿಯವನ್ನೂ, ಇವರನ್ನು ಬೆಂಬಲಿಸೋ ಚಿತ್ರರಂಗದವರನ್ನೂ "ಅನ್ನದಾತರೂ, ಅಭಿಮಾನಿ ದೇವರೂ - ಅಂತಾ ನೀವು ಪದೇ ಪದೇ ಹೊಗಳಿ ಅಟ್ಟಕ್ಕೇರಿಸುವ ಕನ್ನಡ ಪ್ರೇಕ್ಷಕನಿಗೆ ಏನು ಬೇಕು? ಏನು ಬೇಡಾ? ಅಂತಾ ಯಾವತ್ತಾದ್ರೂ ಯೋಚಿಸಿದ್ದೀರಾ" ಅಂತಾ ಕೇಳಬೇಕಾಗಿದೆ. "ಹೊಲಸು ರಿಮೇಕುಗಳು, ಕೆಟ್ಟದಾಗಿ ಕನ್ನಡ ಉಲಿಯುವ ಹಾಡುಗಾರರು, ಇಲ್ಲಿ ಅವಕಾಶಕ್ಕಾಗಿ ಕಾದಿರುವ ಪ್ರತಿಭಾವಂತರನ್ನು ಕಡೆಗಣಿಸಿ ಕರೆತರೋ ನಾಯಕಿಯರು, ನಟರುಗಳು ಇವನ್ನೆಲ್ಲಾ ಯಾಕೆ ತಂದಿರಿ ಅಂತಾ ನಾವೇನೂ ಕೇಳಿಲ್ಲಾ… ನಮಗೆ ಇಷ್ಟವಾದಾಗ ಗೆಲ್ಸಿದೀವಿ, ಚೆನ್ನಾಗಿಲ್ಲದಿದ್ದಾಗ ಸೋಲಿಸಿದ್ದೀವಿ... ಜನಕ್ ಬೇಡದಿದ್ರೆ ಮಾರುಕಟ್ಟೆ ಗೆಲ್ಲಕ್ ಆಗಲ್ಲಾ" ಅನ್ನೋದೇ ದಿಟವಾದ ಮಾತು. ಆದರೆ ಜನರಿಗೆ ಆಯ್ಕೆಯ ಸ್ವಾತಂತ್ರ ಇರಬೇಕು, ಅವರಿಗೆ ಬೇಕಾದ್ದನ್ನು ಪಡೆದುಕೊಳ್ಳುವ, ಬೇಡದ್ದನ್ನು ನಿರಾಕರಿಸುವ ಹಕ್ಕು ಇರಬೇಕು ತಾನೆ? 500 ಸಿನಿಮಾ ಸರದಿಯಲ್ಲಿ ಡಬ್ ಆಗಿ ಕಾಯ್ತಿದೆ ಅಂದ್ರೆ… ಬರಲಿ ಬಿಡಿ. ಜನ ಬೇಕಾದ್ದನ್ನು ಹಿಟ್ ಮಾಡ್ತಾರೆ, ಬೇಡದಿದ್ರೆ ಡಬ್ಬಾ ಸೇರುಸ್ತಾರೆ. ವರ್ಷಕ್ಕೆ ನಾಲ್ಕೇ ಸಿನಿಮಾ ಹಿಟ್ ಮಾಡ್ಬೇಕು ಅಂತಾ ಜನರೇನೂ ಆಣೆ ಮಾಡಿಲ್ವಲ್ವಾ? ಚೆನ್ನಾಗಿರೋ ಸಿನಿಮಾ ಕನ್ನಡದೋರು ತೆಗೆದರೂ ಓಡುತ್ತವೆ. ಹಾಗಾಗಿ ಇದ್ದಕ್ಕಿದ್ದಂತೆ ಹತ್ತು ಪರಭಾಷೆಯ ಚಿತ್ರಗಳು ಡಬ್ ಆಗಿ ಬಂದು ಚೆನ್ನಾಗಿ ಓಡುದ್ರೆ ಕನ್ನಡ ಚಿತ್ರಾನ ಜನ ನೋಡಲ್ಲಾ ಅನ್ನೋ ಭಯಾ ಏಕೆ? ಹೊಸಬರ ಅನೇಕ ಸಿನಿಮಾಗಳು ಕೂಡಾ ಯಶಸ್ವಿಯಾಗುತ್ತಿರೋದು ಆ ಚಿತ್ರಗಳು ಚೆನ್ನಾಗಿವೆ ಅನ್ನೋ ಒಂದೇ ಕಾರಣಕ್ಕ ತಾನೇ? ಇಷ್ಟಕ್ಕೂ ಗ್ರಾಹಕನಿಗೆ ಇರಬೇಕಾದ ಆಯ್ಕೆಯ ಸ್ವಾತಂತ್ರವನ್ನು ನಿರಾಕರಿಸೋ ಹಕ್ಕನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಗಾಗಲೀ ಚಿತ್ರರಂಗಕ್ಕಾಗಲೀ ಕೊಟ್ಟೋರು ಯಾರು? ಇವರು ‘ಚಿತ್ರರಂಗದ ಕಾರ್ಮಿಕರ ಹಿತ’ ಅನ್ನೋ ವಾದ ಮುಂದಿಟ್ಟುಕೊಂಡು ಕನ್ನಡದ ಗ್ರಾಹಕರ ಹಿತವನ್ನು ಕಡೆಗಣಿಸೋದು ಸರೀನಾ… ಗುರೂ?

ನೆನಪಿರಲಿ...

ಇಷ್ಟೆಲ್ಲಾ ಆಗ್ತಿದ್ರೂ ಕನ್ನಡ ಚಲನಚಿತ್ರರಂಗದವರು ತಾವು ಸ್ವತಂತ್ರವಾಗಿ ಬದುಕಬೇಕು ಅನ್ನೋ ಮನಸ್ಥಿತೀಲೇ ಇದ್ದಂಗಿಲ್ಲಾ. ಸಿನಿಮಾ ತೆಗೆದರೆ ಸಬ್ಸಿಡಿ, ತೆರಿಗೆ ವಿನಾಯ್ತಿ ಅಂತಾ ಸರ್ಕಾರದ ಕಡೆ ಊರುಗೋಲಿಗಾಗಿ ನೋಡೋದನ್ನು ಇನ್ನಾದ್ರೂ ಬಿಡಬೇಕಾಗಿದೆ. ಇದನ್ನು ಒಂದು ಇಂಡಸ್ಟ್ರಿ ಅಂತಾ ಪರಿಗಣಿಸಿ, ತಮ್ಮ ಸಿನಿಮಾನ ಒಂದು ಮಾರುಕಟ್ಟೆಯನ್ನು ಗೆಲ್ಲಲಿ ಅಂತಾ ಬಿಡಬೇಕಾದ ಉತ್ಪನ್ನ ಎಂದು ಪರಿಗಣಿಸಬೇಕಾಗಿದೆ. ಪ್ರತಿವರ್ಷ ಕೋಟಿಗಟ್ಟಲೆ ಹಣವನ್ನು - ಕನ್ನಡ ಚಿತ್ರರಂಗದ ಮಾರುಕಟ್ಟೆ ಚಿಕ್ಕದು, ಇದು ಬಡಕಲು, ಇದು ಅಳಿವಿನಂಚಿನಲ್ಲಿದೆ - ಅಂತ ಅಂದಂದೇ ಸಬ್ಸಿಡಿ ರೂಪದಲ್ಲೂ, ವಿನಾಯ್ತಿ ರೂಪದಲ್ಲೂ ಪಡೆದುಕೊಳ್ತಾನೆ ಇದ್ರೆ ಯಾವಾಗ ನಮ್ಮ ಚತ್ರರಂಗ ತನ್ನ ಕಾಲಮೇಲೆ ತಾನು ನಿಲ್ಲುವುದು? ಹೀಗೆ ಊರುಗೋಲನ್ನೇ ನಂಬಿರೋ ಚಿತ್ರರಂಗ ಹೇಗೆ ತಾನೇ ಉಳಿದೀತು? ಪರಭಾಷೆ ಚಿತ್ರ ಬ್ಯಾನ್, ಡಬ್ಬಿಂಗ್ ಬ್ಯಾನ್ ಅನ್ನುವಂತಹ ನಕಾರಾತ್ಮಕ ಕ್ರಮಮಗಳಿಂದ ಚಿತ್ರರಂಗಕ್ಕೆ ಏನುಪಯೋಗ? ಎನ್ನುವುದನ್ನೆಲ್ಲಾ ಚಿಂತಿಸಬೇಕಾಗಿದೆ.
ಕನ್ನಡದ ಚಿತ್ರಗಳು ಗುಣಮಟ್ಟದ ಚಿತ್ರಗಳಾಗಿರಬೇಕು ಅಂದ್ರೆ ಸಾಲದು. ಇದರಲ್ಲಿ ಎಲ್ಲಾ ತೆರನಾದ ಅಭಿರುಚಿಗಳನ್ನೂ ಪೂರೈಸಬಲ್ಲ ಬಹುವಿಧದ ಚಿತ್ರಗಳು ಬರಬೇಕು. ಹೊಸ ಪ್ರತಿಭೆಗಳ ಪ್ರವಾಹ ಉಕ್ಕಿ ಹರೀಬೇಕು. ಚಿತ್ರರಂಗಾನ ಒಂದು ಉದ್ಯಮವಾಗಿ ಪರಿಗಣ್ಸೋ ಮನಸ್ಥಿತಿ ನಮ್ಮವರಿಗೆ ಬರಬೇಕು. ಆ ಸಹಾಯ ಕೊಡಿ, ಈ ಸಹಾಯ ಕೊಡಿ, ಸಬ್ಸಿಡಿ ಕೊಡಿ... ಅಂತ ಬರೀ ಬೇಡೋದೇ ಆಗಿಬಿಡಬಾರ್ದು. ಎಪ್ಪತ್ತೈದು ವರ್ಷಗಳಲ್ಲಿ ಚಿತ್ರರಂಗದ ಹಿರಿಯರು ಸಾಧಿಸಿದ್ದನ್ನು ಮುಂದಿನ ಇಪ್ಪತ್ತೈದು ವರ್ಷದಲ್ಲಿ ಹೇಗೆ ಸಾಧುಸ್ತೀವಿ? ಕನ್ನಡದ ಮಾರುಕಟ್ಟೆನಾ ಹೇಗೆ ಕರ್ನಾಟಕದಲ್ಲಿ ಗಟ್ಟಿ ಮಾಡ್ತೀವಿ? ಅದಕ್ಕೆ ಡಬ್ಬಿಂಗ್ ಅನ್ನೋ ಸಲಕರಣೆನಾ ಹ್ಯಾಗೆ ಬಳುಸ್ತೀವಿ? ಹೊರನಾಡುಗಳಲ್ಲಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಹ್ಯಾಗೆ ವಿಸ್ತರಿಸಿಕೊಳ್ತೀವಿ? ಹ್ಯಾಗೆ ಹೊಸಹೊಸ ತಂತ್ರಜ್ಞಾನಾನ ಬಳುಸ್ಕೊತೀವಿ?... ಅನ್ನೋದ್ರು ಬಗ್ಗೆ ಚಿತ್ರರಂಗ ಯೋಚಿಸಬೇಕಾಗಿದೆಯೇ ಹೊರತು ಬರೀ... ಸರ್ಕಾರ ನಮಗೆ ಸಬ್ಸಿಡಿ ಅದೂ ಇದೂ ಅಂತಾ ಜನರ ತರಿಗೆ ದುಡ್ಡುನ್ನ ಕೊಡ್ತಾನೆ ಇರಬೇಕು, ನಮ್ಮ ಮಾರುಕಟ್ಟೆಯಲ್ಲಿ ಸ್ಪರ್ಧೆ ಇರಬಾರದು, ಬೇರೆ ಭಾಷೆಯ ಚಿತ್ರಗಳು ಬರಬಾರದು, ನಮಗೆ ಇಂತಿಷ್ಟು ಸವಲತ್ತುಗಳು ಬೇಕು ಅನ್ನೋ ‘ದೇಹಿ’ ಅನ್ನೋ ಮನಸ್ಥಿತಿಯಿಂದ ಹೊರಬರಬೇಕಾಗಿದೆ ಗುರೂ! ಊರುಗೋಲಿನ ಆಸರೆ ಬಯಸುತ್ತಲಿದ್ದಷ್ಟು ದಿನವೂ ಕನ್ನಡ ಚಿತ್ರರಂಗ ಏಳಿಗೆ ಕಾಣೋದು ಕಷ್ಟ ಅನ್ನೋದು ಕನ್ನಡ ಚಿತ್ರರಂಗಕ್ಕೆ ನೆನಪಿರಲಿ...
Related Posts with Thumbnails