ABVP ನಿರ್ಣಯದಲ್ಲಿ ಮರೆತ ತಾಯ್ನುಡಿಯಲ್ಲಿ ಕಲಿಕೆ!


ನಿನ್ನೆ ಬೆಂಗಳೂರಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮೂರು ದಿನಗಳ ಸಮಾವೇಶ ಮುಕ್ತಾಯವಾಯಿತು. ನಮ್ಮ ನಾಳಿನ ಭವಿಷ್ಯದ ರೂವಾರಿಗಳು ಕೈಗೊಳ್ಳಲಿರುವ ನಿರ್ಣಯಗಳ ಬಗ್ಗೆ ಕುತೂಹಲವನ್ನು ಈ ಸಮ್ಮೇಳನ ಹುಟ್ಟು ಹಾಕಿತ್ತು.

ನಿರ್ಣಯಗಳು

ಈ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಇವತ್ತಿನ (29.12.2010ರ) ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿ ಮೂಡಿಬಂದಿದೆ. ಆ ವರದಿಯಂತೆ ನಿರ್ಣಯಗಳಲ್ಲಿ ಕಂಡಿರೋದು 2ಜಿ ಸ್ಪೆಕ್ಟ್ರಂ ಹಗರಣ, ಶಿಕ್ಷಣದ ವ್ಯಾಪಾರಿಕರಣಕ್ಕೆ ವಿರೋಧ, ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ, ಜಗತ್ತಿನ ತಾಪಮಾನ ಏರಿಕೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿಯಂತಹ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಭಾಳ ಸಂತೋಷ. ದೇಶದ, ಪ್ರಪಂಚದ ಎಲ್ಲಾ ಆಗುಹೋಗುಗಳ ಬಗ್ಗೆ ಕಾಳಜಿ ಹೊಂದಿರೋದು ಸರಿ. ಆದರೆ ದೇಶದ ನಾನಾ ಭಾಗಗಳಿಂದ ಬಂದಿರೋ ಹತ್ತು ಸಾವಿರ ಪ್ರತಿನಿಧಿಗಳ ಈ ಸಭೆಯಲ್ಲಿ ಭಾರತೀಯರ ಕಲಿಕೆ ತಾಯ್ನುಡಿಯಲ್ಲಿ ಆಗಬೇಕು ಅನ್ನೋ ದಿಕ್ಕಲ್ಲಿ ಚರ್ಚೆ ನಡೆದಿದ್ರೆ ಚೆನ್ನಾಗಿರೋದಲ್ವಾ ಗುರೂ? ನಾಳಿನ ಭವಿಷ್ಯ ರೂಪುಗೊಳ್ಳೋಕೆ ನಮ್ಮ ವಿದ್ಯಾರ್ಥಿಗಳ ಕಲಿಕೆ ಮತ್ತು ದುಡಿಮೆಗಳು ಅತ್ಯುತ್ತಮವಾಗಬೇಕು. ಹೀಗಾಗಲು ತಾಯ್ನುಡಿಯಲ್ಲಿನ ಕಲಿಕೆಯೊಂದೇ ಸರಿಯಾದ ದಾರಿ, ಈ ದಿಕ್ಕಲ್ಲಿ ನಾಡಿನ ಕಲಿಕಾ ವ್ಯವಸ್ಥೆಗಳು ಸಾಗಬೇಕು ಅನ್ನೋ ಬಗ್ಗೆ ನಿರ್ಣಯಗಳಲ್ಲಿ ಒಂದಂಶವನ್ನು ಎಬಿವಿಪಿಯ ಹಿರಿತಲೆಗಳು ಸೇರಿಸುವುದು ಇಂದಿನ ಅಗತ್ಯವಾಗಿತ್ತು ಅಲ್ವಾ ಗುರೂ?

ಕಾಗೇರಿಯವರೇ, ಒಸಿ ಏಳ್ತೀರಾ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ, ಸ್ಥಾಯಿ ಸಮಿತಿ ಹೆಸರಲ್ಲಿ ಬೆಂಗಳೂರಿನ ಪಾಲಿಕೆ ಶಾಲೆಗಳನ್ನು ಸಿ.ಬಿ.ಎಸ್.ಇ ಶಾಲೆಗಳಾಗಿ ಬದ್ಲಾಯ್ಸೋ ಕೆಲಸ ಹೆಜ್ಜೆ ಹೆಜ್ಜೆಯಾಗಿ ನಡೀತಾ ಇದ್ರೂ, ಕರ್ನಾಟಕ ರಾಜ್ಯದ ಸನ್ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಶ್ರೀ ಶ್ರೀ 1008 ವಿಶ್ವೇಶ್ವರಹೆಗ್ಡೆ ಕಾಗೇರಿಯೋರು ಸೊಂಪು ನಿದ್ದೇಲಿ ಇದ್ದಂಗವ್ರೆ. ಇವತ್ತಿನ ದಿವಸದ (23.12.2010ರ) ಡೆಕ್ಕನ್ ಹೆರಾಲ್ಡ್ ಪತ್ರಿಕೇಲಿ ಬಂದಿರೋ ಸುದ್ದಿ ನೋಡುದ್ರೆ ಮಾನ್ಯ ಸಚಿವರ/ ಅವರ ಸರ್ಕಾರದ/ ಅವರು ಪ್ರತಿನಿಧಿಸೋ ಪಕ್ಷದ ನಿಲುವುಗಳೇ ಪಾಲಿಕೆ ಸ್ಥಾಯಿ ಸಮಿತಿಯ ನಿಲುವಾಗಿದೆಯೇನೋ ಅನ್ನಿಸುವಂತಿದೆ.

ವಿಷಯಾಂತರ ಅನ್ನೋ ಸಮರ್ಥನೆ!

ಪತ್ರಿಕೆಗಳಲ್ಲಿ ಬಂದಿರೋ ವರದೀನ ಎಷ್ಟು ಜಾಣತನದಿಂದ ವಿಷಯಾಂತರ ಮಾಡ್ತಿದಾರೆ ಅಂತಾ ನೋಡಿ. ಕನ್ನಡವನ್ನು ಒಂದು ಭಾಷೆಯಾಗಿ ಈ ಶಾಲೇಲಿ ಕಲುಸ್ತಾರಂತೆ... ಅದೂ ಕಡ್ಡಾಯವಾಗಿ. ಹಾಗಾಗಿ ಕನ್ನಡವನ್ನು ನಾವಿಲ್ಲಿ ಕಡೆಗಣಿಸೋಲ್ಲಾ ಅಂತಾ ಸಮಿತಿಯ ಸದಸ್ಯರಿಗೆ ಭರವಸೆ ಕೊಟ್ರಂತೆ. ಪಾಪಾ! ಎಂಥಾ ಉಪಕಾರ ಮಾಡ್ತಿದಾರೆ ಅಲ್ವಾ? ಇದುಕ್ಕೆ ಸಮಿತಿಯೋರು "ಹೌದೂ, ಹೌದೂ, ಹಾಗಾದ್ರೆ ನೀವು ತುಂಬಾ ಒಳ್ಳೇವ್ರು" ಅಂತಂದು ಬಂದ್ರಂತೆ. ನಿಜವಾಗ್ಲೂ ಇಲ್ಲಿರೊ ಪ್ರಶ್ನೆ ಸಿ.ಬಿ.ಎಸ್.ಇ ಶಾಲೇಲಿ ಕನ್ನಡ ಕಲಿಸೋದು ಅಥವಾ ಕಲಿಸದೇ ಇರೋದು ಮಾತ್ರಾನಾ? ಅಥವಾ ರಾಜ್ಯಸರ್ಕಾರ ನಾಡಿನ ಶಿಕ್ಷಣ ವ್ಯವಸ್ಥೆ ಕಟ್ಟೊ ತನ್ನ ಹೊಣೆಗಾರಿಕೆಯಿಂದ ನುಣುಚ್ಕೊಂಡು, ತಾನೇ ಒಪ್ಪಿರೋ ಭಾಷಾನೀತಿಗೆ ಎಳ್ಳುನೀರು ಬಿಡ್ತಿರೋ ಅಂಥಾ ಅನೇಕ ವಿಷಯಗಳಾ?

ಕಾಗೇರಿಯವ್ರೇ ಒಸಿ ಎದ್ದೇಳಿ!

ಸನ್ಮಾನ್ಯರೂ ಸಭ್ಯರೂ ಪ್ರಾಮಾಣಿಕರೂ ಆಗಿರೋ ಸಚಿವರೆಂದು ಹೆಸರಾಗಿರೋ ಕಾಗಿಯವರೇ... ಕರ್ನಾಟಕ ರಾಜ್ಯದಲ್ಲಿ ಇರೋ ರಾಜ್ಯ ಪಠ್ಯಕ್ರಮದ ಶಿಕ್ಷಣ ವ್ಯವಸ್ಥೆಗೆ ನಮ್ಮ ಮಕ್ಕಳಿಗೆ ಕಲಿಕೆ ಒದಗಿಸೋ ಸಾಮರ್ಥ್ಯ ಹೊಂದಿಲ್ವಾ? ರಾಜ್ಯ ಪಠ್ಯಕ್ರಮಕ್ಕಿಂತಾ ಕೇಂದ್ರೀಯ ಪಠ್ಯಕ್ರಮಾನೇ ಉತ್ತಮ ಅಂತಾ ನೀವೂ ಒಪ್ತೀರಾ? ಹಾಗೆ ಒಪ್ಪೋದಾದ್ರೆ ನಾಡಿನ ಕಲಿಕೆಯನ್ನು ಉತ್ತಮಪಡಿಸಬೇಕು ಅನ್ನೋ ಕಾಳಜಿ, ಯೋಗ್ಯತೆ ನಿಮ್ಮ ಸರ್ಕಾರಕ್ಕಿಲ್ವಾ? ಇದುವರೆಗೂ ಕರ್ನಾಟಕ ರಾಜ್ಯಸರ್ಕಾರ ಒಪ್ಪಿ ನಡುಸ್ತಿರೋ ಭಾಷಾನೀತಿಗೆ ಮಾರಕವಾಗಿ, ನಿಮ್ಮ ಕಣ್ರೆಪ್ಪೆ ಕೆಳಗಿರೋ ಈ ಪಾಲಿಕೆಯ ಸ್ಥಾಯಿ ಸಮಿತಿಯ ಶಿಫಾರಸ್ಸು, ಪಾಲಿಕೆಯ ನಿಲುವು ಇರೋದು ನಿಮಗೆ ಗೊತ್ತಾಗ್ತಿಲ್ವಾ? ರಾಜ್ಯಸರ್ಕಾರದ ನೀತಿಗೆ ವಿರುದ್ಧವಾಗಿರೋ ಇಂಥಾ ನಿಲುವನ್ನು ಯಾವುದೇ ನಗರ ಪಾಲಿಕೆ ತೊಗೊಂಡ್ರೆ ಅದು ಕಾನೂನು ಬಾಹಿರ ಅಲ್ವಾ? ನಿಮ್ಮ ಕಡೆಯಿಂದಾ ಈ ಬಗ್ಗೆ ಒಂದಾದ್ರೂ ಹೇಳಿಕೆ ಯಾಕೆ ಬರ್ತಿಲ್ಲಾ? ನಿದ್ದೆ ಸಾಕು.... ಒಸಿ ಎದ್ದೇಳ್ತೀರಾ?

ಗೋವಾ ಎಂಬ ಗುಬ್ಬಿಯ ಬ್ರಹ್ಮಾಸ್ತ್ರ!


ಗೋವಾ ರಾಜ್ಯದ ಮಾಜಿ ಮುಖಮಂತ್ರಿಗಳೂ, ಹಾಲಿ ಪಿಡಬ್ಲ್ಯುಡಿ ಸಚಿವರೂ ಆಗಿರುವ ಅಲೆಮಾವೊ ಚರ್ಚಿಲ್ ಅನ್ನೋ ರಾಜಕಾರಣಿಯೊಬ್ಬರು ಗೋವಾ ರಾಜ್ಯವನ್ನು ದೊಡ್ಡದಾಗಿಸಿಕೊಳ್ಳೋ ಅಗತ್ಯದ ಬಗ್ಗೆ ಕಾಳಜಿ ತೋರಿಸಿ ಕರ್ನಾಟಕದ ಕಾರವಾರ ಗೋವಾಕ್ಕೇ ಸೇರಬೇಕು ಅಂತಾ ಹೇಳಿದ ಸುದ್ದಿ ಪತ್ರಿಕೆಗಳಲ್ಲಿ ಬಂದಿದೆ. ಹಳೇ ಕಾಲದಲ್ಲಿ ರಾಜರುಗಳು ಪಕ್ಕದ ರಾಜ್ಯದ ಮೇಲೆ ದಂಡೆತ್ತಿ ಹೋಗೋಕೂ ಈ ಮನಸ್ಥಿತೀಗೂ ಅಂಥಾ ವ್ಯತ್ಯಾಸವೇನೂ ಕಾಣ್ತಾಯಿಲ್ಲಾ ಗುರೂ!

ಗುಬ್ಬಿಯ ಬ್ರಹ್ಮಾಸ್ತ್ರ!

ಇಂಥಾ ಕಿತಾಪತಿಯನ್ನು ಗೋವಾದಂಥಾ ಪುಟಾಣಿ ರಾಜ್ಯ ಮಾಡ್ತಾಯಿದ್ರೆ ನಮ್ಮ ರಾಜ್ಯ ಸರ್ಕಾರ, ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಕುಂಭಕರ್ಣ ನಿದ್ದೆಯಲ್ಲಿರೋದು ಶೋಚನೀಯವಾಗಿದೆ. ಮೊದಲಿಗೆ ಹೀಗೆ ಸಣ್ಣದಾಗಿ ಶುರುವಾಗೋ ಹುಣ್ಣಿಗೆ ಕೂಡಲೇ ಖಾರವಾದ ಪ್ರತಿಕ್ರಿಯೆಯ ಔಷಧಿ ಕೊಡದಿದ್ರೆ ನಾಳೆ ಇದೇ ದೊಡ್ಡ ರಣವಾದೀತು ಗುರೂ! ನೀವೇ ನೋಡಿ, ಬರೀ ಹದಿನಾಲ್ಕು ಲಕ್ಷ ಜನಸಂಖ್ಯೆಯನ್ನೂ, ಕೇವಲ ಇಬ್ಬರು ಸಂಸದರನ್ನೂ ಹೊಂದಿರುವ ಗೋವಾ ರಾಜ್ಯ, ರಾಜಕೀಯವಾಗಿ ಯಾವ ರಾಷ್ಟ್ರೀಯ ಪಕ್ಷಕ್ಕೂ ಕರ್ನಾಟಕದಷ್ಟು ಸೀಟುಗಳನ್ನು ತಂದುಕೊಡಬಲ್ಲಷ್ಟು ಶಕ್ತಿಶಾಲಿಯಾಗಿಲ್ಲ. ಆದರೆ ಮಹದಾಯಿ ನದಿ ನೀರು ಹಂಚಿಕೆಯ ಅಂಗವಾಗಿ ಕರ್ನಾಟಕವು ಕಳಸಾ ಭಂಡೂರ ಯೋಜನೆ ಕೈಗೆತ್ತಿಕೊಂಡಾಗ, ಗೋವಾ ನ್ಯಾಯಾಧಿಕರಣವನ್ನು ಹಟಮಾಡಿ ಪಡೆದುಕೊಂಡಿತು. ಅಂತಿಮ ತೀರ್ಪು ಏನೇ ಆಗಿರಲಿ, ಇಡೀ ಯೋಜನೆ ಸದ್ಯಕ್ಕಂತೂ ಜಾರಿಯಾಗುವಂತಿಲ್ವೇ... ಇದೀಗ ಮತ್ತೆ ಕಾರವಾರ, ಜೋಯಿಡಾ ಸೇರ್ಪಡೆ ವಿವಾದವನ್ನು ಎತ್ತಿರೋದನ್ನು ನೋಡುದ್ರೆ, ಇದಕ್ಕೆಲ್ಲಾ ಬಲ ಅವರಿಗೆ ಎಲ್ಲಿಂದ ಬಂತೆಂದು ಅಚ್ಚರಿಯಾಗುತ್ತದೆ ಗುರೂ!

ಕರ್ನಾಟಕ ಕೇಂದ್ರಿತ ರಾಜಕಾರಣವೇ ಮದ್ದು!

ಹೌದೂ, ಗೋವಾಕ್ಕೆ ಮಹಾರಾಷ್ಟ್ರದ ಕುಮ್ಮಕ್ಕಿದೆ ಅನ್ನೋ ಮಾತು ದಿಟವಿರಬಹುದು. ಆದರೂ ಗೋವಾದ ರಾಜಕಾರಣಿಗಳಲ್ಲಿರೋ ನಾಡಪರ ಕಾಳಜಿ, ನಾಡಹಿತವನ್ನು ರಾಜಕಾರಣದ ಕೇಂದ್ರವನ್ನಾಗಿಸೋ ಮನಸ್ಥಿತಿ, ರಾಜ್ಯದ ಹಿತವೇ ತಮ್ಮ ಪರಮಹಿತವೆನ್ನುವ ಬದ್ಧತೆಯೇ ಇಂಥಾ ಸಾಹಸಗಳಿಗೆಲ್ಲಾ ಕಾರಣ ಅನ್ನೋದನ್ನು ನಾವು ಗಮನಿಸಬೇಕಾಗುತ್ತೆ. ಅಲ್ಲಾ, ಗೋವಾದ ಇಂಥಾ ಕಿತಾಪತಿಯನ್ನು ಮಣಿಸಬಲ್ಲ ರಾಜಕೀಯ ಬದ್ಧತೆ ನಮ್ಮ ನಾಡಿನ ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ, ರಾಜ್ಯ ಸರ್ಕಾರಕ್ಕೆ ಇರುವಂತೆ ಕಾಣುತ್ತಲೇ ಇಲ್ಲವಲ್ಲಾ ಗುರೂ! ಕರ್ನಾಟಕ ಕೇಂದ್ರಿತ ರಾಜಕಾರಣವೇ ಇಂಥಾ ಕಿತಾಪತಿಯ ಗುಬ್ಬಿಗಳು ಆಗಾಗ ಬಿಡೋ ಬ್ರಹ್ಮಾಸ್ತ್ರಗಳಿಗೆ ಸರಿಯಾದ ಮದ್ದು! ಏನಂತೀ ಗುರೂ?

ಅಧ್ಯಾತ್ಮವೂ ಕನ್ನಡದಲ್ಲಿದ್ದರೇ ಸಾರ್ಥಕವಾಗೋದು!


ಭಾರತ ಅಧ್ಯಾತ್ಮದ ತವರು ಎಂದು ಹೆಸರು ಪಡೆದಿದೆ. ಸಾವಿರಾರು ವರ್ಷಗಳಿಂದ ಈ ಅಧ್ಯಾತ್ಮದ ಅರಿವು ನಮ್ಮ ನಾಡಲ್ಲಿದೆ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು, ಭಗವದ್ಗೀತೆ, ವೇದ, ಉಪನಿಷತ್ತುಗಳು ಅವುಗಳಲ್ಲಿ ಪ್ರಮುಖವಾದವು. ಅಂದಿನ ಸಾಮಾಜಿಕ ಸ್ಥಿತಿಗೆ ಅನುಗುಣವಾಗಿ ಈ ಎಲ್ಲಾ ಅರಿಮೆಗಳು ಸಂಸ್ಕೃತದಲ್ಲಿವೆ. ಹಿಂದೆ ಈ ಅರಿವು ಬೇಕಾದವರು ಸಂಸ್ಕೃತ ಕಲಿತಿರಬೇಕಿತ್ತು, ಅಥವಾ ಕಲಿತವರು ತಿಳಿಸಿ ಹೇಳಬೇಕಿತ್ತು. ಈಗ ಜನಸಾಮಾನ್ಯರಿಗೆ ಇವುಗಳು ಬೇಕೆಂದರೆ ಹಿಂದಿದ್ದಂತೆ, ಸಂಸ್ಕೃತವನ್ನು ಕಲಿತಿರಲೇಬೇಕಾಗಿಲ್ಲ. ನಮ್ಮ ಹಿರಿಯರು ಇವುಗಳನ್ನು, ಇವುಗಳ ತಿರುಳುಗಳನ್ನು, ಇವುಗಳಿಗೆ ಅರ್ಥ-ಭಾಷ್ಯಗಳನ್ನು ಕನ್ನಡದಲ್ಲೇ ಬರೆದು ಕನ್ನಡಿಗರಿಗೆ ಉಪಕರಿಸಿದ್ದಾರೆ. ಇಂತಹ ಭಾಷಾಂತರಗೊಂಡ ಒಂದು ಹೊತ್ತಗೆ “ಭಗವಂತನ ನಲ್ನುಡಿ”. ಬರಹಗಾರರು ಶ್ರೀ ಬನ್ನಂಜೆ ಗೋವಿಂದಾಚಾರ್ಯರು. ಅದ್ಸರಿ, ಈ ಹೊತ್ತಗೆಯ ಬಗ್ಗೆ ನಮಗೆ ಯಾಕಪ್ಪಾ ಆಸಕ್ತಿ, ಮೆಚ್ಚುಗೆ ಅಂದರೆ ಇದರಲ್ಲಿ ಬಳಸಲಾಗಿರುವ ಭಾಷೆ.

ಮುರಿಯಲ್ಪಟ್ಟ ಸಾಮಾನ್ಯ ಹವ್ಯಾಸಗಳು!

ಸಾಮಾನ್ಯವಾಗಿ ಇಂತಹ ಕಾವ್ಯಗಳನ್ನು ಕನ್ನಡಕ್ಕೆ ತರುವಾಗ ಅವುಗಳಲ್ಲಿನ ಹೆಚ್ಚಿನ ಪದಗಳನ್ನು ಅವಿರುವಂತೆಯೇ ಬಳಸಿ ಎಸಗುಪದ (ಕ್ರಿಯಾಪದ)ವನ್ನು ಕನ್ನಡದಲ್ಲಿ ಬರೆಯುವುದು ವಾಡಿಕೆ. ಆದರೆ ಈ ಹೊತ್ತಗೆಯಲ್ಲಿ ಬಳಸಲಾಗಿರುವ ಪದಗಳ ಸೊಗಡನ್ನು ಓದಿಯೇ ಅನುಭವಿಸಬೇಕು. ಮಹಾರಥಿ = ತೇರಾಳು. ಹೃಷಿಕೇಷ = ಪೊದೆಗೂದಲಿನವ, ದ್ವಿಜೋತ್ತಮ = ಹೆಬ್ಬಾರ್ವ ಹೀಗೆ ಸಾಗುತ್ತದೆ. ಈ ಅನುವಾದವನ್ನು ನೋಡಿ:

ಭಗವಾನುವಾಚ

ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚಃ I
ಯತ್ ಯೇಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ II
ಭಗವಂತ ಹೇಳಿದನು: ಓ ಮಹಾವೀರ, ಇನ್ನೂ ಕೇಳು ನನ್ನ ಹಿರಿನುಡಿಯನ್ನು. ಏಕೆಂದರೆ ಕೇಳಿ ಖುಷಿಪಡುತ್ತಿರುವ ನಿನಗೆ ಒಳಿತನ್ನು ಬಯಸಿಯೇ ನಾನು ಹೇಳುತ್ತಿದ್ದೇನೆ.
ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ I
ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ II
ನನ್ನ ಆಳವನ್ನು [ನಾನು ಜಗವನ್ನು ನಿರ್ಮಿಸುವ ಬಗೆಯನ್ನು], ದೇವತೆಗಳ ಗಡಣಗಳೂ ಅರಿತಿಲ್ಲ; ಹಿರಿಯ ಋಷಿಗಳೂ ಕೂಡ. [ ನನಗೂ ಒಂದು ಹುಟ್ಟು ಇದೆಯೆಂದು ದೇವತೆಗಳ ಗಡಣಗಳಾಗಲಿ, ಮಹರ್ಷಿಗಳಾಗಲಿ ತಿಳಿದವರಿಲ್ಲ] ದೇವತೆಗಳಿಗೆ ಹಿರಿಯ ಋಷಿಗಳಿಗೆ, ಎಲ್ಲರಿಗೂ ಮೂಲ ನಾನೇ ಅಲ್ಲವೇ?
ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್ I
ಅಸಮ್ಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ II
ನಾನು ಹುಟ್ಟಿರದವನು, ಎಲ್ಲವನ್ನು ನಡೆಸುತ್ತ ಎಲ್ಲದರ ಮೊದಲಿದ್ದವನು [ಪ್ರಾಣತತ್ವಕ್ಕೂ ಮೂಲಕಾರಣ]. ಎಲ್ಲಲೋಕಗಳ ಒಡೆಯರಿಗು ಹಿರಿಯೊಡೆಯ. ಮನುಜರಲ್ಲಿ ಹೀಗೆ ನನ್ನನ್ನು ತಿಳಿದವನು ಮೋಹವಳಿದವನು.ಅವನು ಪಾಪಗಳಿಂದ ಪಾರಾಗುತ್ತಾನೆ.

ಇಡೀ ಹೊತ್ತಗೆಯಲ್ಲಿ ಸೊಗಸಾದ ನೂರಾರು ಕನ್ನಡ ಪದಗಳನ್ನು ಬನ್ನಂಜೆಯವರು ಬಳಸಿದಿದ್ದಾರೆ. ಭಗವದ್ ಗೀತೆಯ ಅನುವಾದ ಈ ಹೊತ್ತಗೆಯಲ್ಲಿ ಸರಳವಾಗಿದ್ದು, ಓದುಗರಿಗೆ ಅರ್ಥವಾಗುವಂತಿದ್ದು ಹತ್ತಿರವೆನ್ನಿಸುತ್ತದೆ. ಈ ಕಾರಣಕ್ಕಾಗಿಯೇ ಮೆಚ್ಚುಗೆಯಾಗುತ್ತದೆ. ಹೌದೂ ಗುರೂ, ಪ್ರಪಂಚದ ಯಾವ ಅರಿಮೆಯೇ ಆಗಿದ್ದರೂ ಅದು ಕನ್ನಡಿಗರಿಗೆ ಹೆಚ್ಚು ಅರ್ಥವಾಗೋದು ಅವು ಕನ್ನಡದಲ್ಲಿದ್ದಾಗ ಮಾತ್ರವೇ.

ರಾಜ್ಯಸರ್ಕಾರದ ದೇಣಿಗೆ ದಾಸೋಹ!

ಮತ್ತೊಮ್ಮೆ ಈ ಸುದ್ದಿ ಬಂದಿದೆ. ದಿನಾಂಕ 05.12.2010ರ ವಿಜಯಕರ್ನಾಟಕದ ಎರಡನೇ ಪುಟದಲ್ಲಿ ತಮಿಳುನಾಡಿನ ಗುಡಿಯೊಂದಕ್ಕೆ ರಾಜ್ಯಸರ್ಕಾರದ ಬೊಕ್ಕಸದಿಂದ ಒಂದು ಕೋಟಿ ರೂಪಾಯನ್ನು ಕನ್ನಡಿಗರ ಹೆಮ್ಮೆಯ ಮುಖ್ಯಮಂತ್ರಿ ಯಡ್ಯೂರಪ್ಪನವರು ಕೊಟ್ಟಿದ್ದಾರಂತೆ.

ದೇಣಿಗೆಯ ದಾನಶೂರ!

ಯಾರದ್ದೋ ದುಡ್ಡು ಯಲ್ಲಮ್ಮನ್ ಜಾತ್ರೆ ಅನ್ನೋ ಹಾಗೆ ಕರ್ನಾಟಕದ ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಸೇರಿದ ಬೊಕ್ಕಸದಿಂದ ಮೊಗೆಮೊಗೆದು ಕೋಟಿ ಕೋಟಿ ರೂಪಾಯಿಗಳನ್ನು ಕಂಡ ಕಂಡ ಗುಡಿಗಳಿಗೆ ದಾನಾ ಮಾಡ್ತಾರಲ್ಲಾ ಇದೆಂಥಾ ಮರುಳು ಇವರಿಗೆ ಅಂತಾ... ನಿಜವಾಗ್ಲೂ ಸರ್ಕಾರಗಳು ಮಾಡೋಕೆ ನೂರಾರು ಆದ್ಯತೆಯ ಕೆಲಸಗಳಿರೋವಾಗ ಇಂಥಾ ದೇಣಿಗೆ ದಾಸೋಹಕ್ಕೆ ಇವರು ಯಾಕೆ ಟೊಂಕ ಕಟ್ಟಿ ನಿಂತಿದಾರೆ ಅಂತಾ... ಯಾವುದೇ ಸರ್ಕಾರ ತನ್ನ ಜನಕ್ಕೆ ಬೇಕಾಗಿರೋ ಶಾಲೆ ಕಾಲೇಜು ಆಸ್ಪತ್ರೆ ರಸ್ತೆ ಕುಡಿಯೋ ನೀರು, ನೀರಾವರಿ ಅಂತಾ ಯೋಜನೆ ಮಾಡ್ಕೊಂಡು ಜಾರಿ ಮಾಡೋದು ಸರಿಯಾದ್ದು, ಉತ್ತರ ಕರ್ನಾಟಕದ ನೆರೆ ಪೀಡಿತರ ಗೋಳು ಇವತ್ತಿಗೂ ಕೇಳೋರಿಲ್ಲದೇ ಇರೋವಾಗ ಈ ಯಪ್ಪಂದು ಇದೆಂಥಾ ಕೆಲ್ಸಾ ಅಂತಾ ಜನ ಮಾತಾಡ್ತಿದಾರೆ. ಹೋಗ್ಲೀ, ಅಷ್ಟರ ಮೇಲೂ ಗುಡಿಗಳಿಗೆ ದೇಣಿಗೆ ಕೊಡೋದೇ ಆದ್ರೂ ಕರ್ನಾಟಕದಲ್ಲಿರೋ ಗುಡಿಗಳು ಇವರ ಕಣ್ಣಿಗೆ ಕಾಣ್ತಿಲ್ವಾ ಅಂತಾ... ಅಂತಿದಾರೆ ಗುರೂ!

ನಮ್ ದೇವ್ರುಗಳೂ ನಮ್ ಪಕ್ಷಗಳಂಗೇ...

ನೀವೇನೇ ಹೇಳ್ರೀ... ಕನ್ನಡನಾಡಿನ ದೇವಾನುದೇವತೆಗಳು ನಮ್ ರಾಜ್ಯದ ರಾಜಕೀಯ ಪಕ್ಷಗಳ ಥರಾನೇ ಭಾಳಾ ವೀಕು. ನಮ್ ರಾಜ್ಯದ ಇವತ್ತಿನ ರಾಜಕೀಯ ಪಕ್ಷಗಳಿಗೆ ನಾಡಿನ ಹಿತ ಕಾಪಾಡೊಕ್ ಹೇಗೆ ಆಗ್ತಿಲ್ವೋ/ ಮನಸಿಲ್ವೋ ಹಾಗೇ ನಮ್ಮ್ ಕರ್ನಾಟಕದ ದೇವರುಗಳಿಗೆ ನಮ್ ಜನಗಳನ್ನು ಕಾಪಾಡೋ ತಾಕತ್ತಿಲ್ಲ. ಅದ್ರಲ್ಲೂ ನಮ್ಮ ನಾಯಕರಾದ ಯಡ್ಯೂರಪ್ಪನವರ ಹಿತ ಕಾಪಾಡಕ್ ಆಗ್ತಿಲ್ಲಾ ಅನ್ಸುತ್ತೆ. ಇದು ನಿಜಾನೋ ಸುಳ್ಳೋ ಬೇರೆ ಮಾತು. ಆದ್ರೆ ಯಡ್ಯೂರಪ್ಪನೋರು ಮಾತ್ರಾ ಹಿಂಗೇ ನಂಬಿರೋ ಹಾಂಗ್ ಕಾಣ್ತಿದೆ. ಇಲ್ದಿದ್ರೆ ಗಳಿಗ್ಗೊಮ್ಮೆ ಪಕ್ಕದ ರಾಜ್ಯಗಳ ಗುಡಿಗಳಿಗೆ ಹೋಗೋದುನ್ನಾ, ಹೋದ ಕಡೇಗೆಲ್ಲಾ ದೇಣಿಗೆ ಕೊಡೋದನ್ನಾ ನೋಡೋ ಭಾಗ್ಯ ಕನ್ನಡಿಗರಿಗೆ ಸಿಗ್ತಿರಲಿಲ್ಲಾ... ಅಲ್ವಾ ಗುರೂ?

ಹಣಕಾಸು ಒಳಗೊಳ್ಳುವಿಕೆ - ಪರಿಣಾಮಕಾರಿಯಾಗಲಿ!

ವಿಶ್ವಸಂಸ್ಥೆಯು 2003ರಲ್ಲಿ ಈ ಬಗ್ಗೆ ಮಾತಾಡಿತ್ತು. ಅಂದಿನ ಮುಖಂಡರಾಗಿದ್ದ ಕೋಫಿ ಅನ್ನನ್ ಅವರು ಇಡೀ ವಿಶ್ವದಲ್ಲಿ ಹಣಕಾಸು ವ್ಯವಸ್ಥೆಗಳ ಬಳಕೆಯನ್ನು ಎಲ್ಲಾ ಜನರಿಗೂ ತಲುಪಿಸುವಂತಾಗಬೇಕೆಂಬ ಕರೆಯನ್ನು ಕೊಟ್ಟಿದ್ದರು. ಇದನ್ನು Financial Inclusion ಎಂಬ ಹೆಸರಿಂದಲೇ ಇಂದು ಕರೀತಾ ಇದೀವಿ. ಭಾರತ ಕೂಡಾ ಈ ಯೋಜನೆಯನ್ನು ರೂಪಿಸಿದೆ. ಇದರ ಮೂಲ ಉದ್ದೇಶವೇ ನಾಡಿನ ಆರುಲಕ್ಷ ಹಳ್ಳಿಗಳ ಜನರಿಗೆ ಹಣಕಾಸು ವ್ಯವಸ್ಥೆಯನ್ನು ಪರಿಚಯಿಸಿ ಅದನ್ನು ಬಳಸಲು ಶುರು ಮಾಡಿಸುವುದು. ಈ ಬಗ್ಗೆ ಒಂದು ಬರಹ ಇತ್ತೀಚಿಗೆ ಫೋರ್ಬ್ಸ್ ಅವರ ಬುಸಿನೆಸ್ಸ್ ಪತ್ರಿಕೇಲಿ ಪ್ರಕಟವಾಗಿದೆ. Financial Inclusion, ಅಂದರೆ ಹಣಕಾಸು ವ್ಯವಹಾರಗಳ ಸೇವೆಗಳನ್ನು ಸಾಮಾನ್ಯ ಜನರತ್ತ ಕೊಂಡೊಯ್ಯುವಲ್ಲಿ ಬ್ಯಾಂಕಿನ ಅಧಿಕಾರಿಗಳು, ಇಂಜಿನಿಯರುಗಳು, ಸರ್ಕಾರೀ ಅಧಿಕಾರಿಗಳು ಒಟ್ಟಾಗಿ ದುಡೀತಿದಾರೆ ಅಂತ ಫೋರ್ಬ್ಸ್ ಪತ್ರಿಕೆಯಲ್ಲಿ ಮೂಡಿ ಬಂದಿರೋ ಈ ಬರಹ ಹೇಳ್ತಿದೆ.

ಏನಿದು (Financial Inclusion) ಹಣಕಾಸು ವ್ಯವಸ್ಥೆಯಲ್ಲಿ ಒಳಗೊಳ್ಳುವಿಕೆ?

ಭಾರತದಂತಹ ದೇಶದಲ್ಲಿ ಇಂದಿಗೂ ಬ್ಯಾಂಕಿಂಗ್, ವಿಮೆ ಮೊದಲಾದ ಹಣಕಾಸು ಸಂಬಂಧಿತ ವ್ಯವಸ್ಥೆಯ ಪರಿಚಯವೇ ಇಲ್ಲದ ಜನರಿದ್ದಾರೆ ಅನ್ನುವುದು ವಾಸ್ತವ ಸಂಗತಿ. ಈ ಬಗ್ಗೆ ದೇಶಾದ್ಯಂತ ನಡೆದ ಸಮೀಕ್ಷೆಯಲ್ಲಿ ಕಂಡುಕೊಂಡ ಪ್ರಮುಖವಾದ ವಿಷಯಗಳೇನೆಂದರೆ...ದೇಶದ 40 ಪ್ರತಿಶತ ಜನರು ಮಾತ್ರಾ ಬ್ಯಾಂಕು ಖಾತೆ ಹೊಂದಿದಾರಂತೆ, ಹತ್ತರಲ್ಲಿ ಒಬ್ಬರಿಗೆ ಮಾತ್ರ ಇನ್ಶೂರನ್ಸ್ ಇದೆಯಂತೆ, 13 ಪ್ರತಿಶತ ಜನರ ಬಳಿ ಮಾತ್ರ ಡೆಬಿಟ್ ಕಾರ್ಡುಗಳಿವೆಯಂತೆ... ಬ್ಯಾಂಕಿನ ಖಾತೆ, ಇನ್ಶೂರನ್ಸು, ಡೆಬಿಟ್ ಕಾರ್ಡು ಇಂತಹ ಸೌಲಭ್ಯಗಳನ್ನು ನಾಡಿನಲ್ಲಿ ಹೆಚ್ಚು ಹೆಚ್ಚು ಜನರು ಬಳಸುವಂತಾದರೆ ಒಟ್ಟೂ ದೇಶದ ಅಭಿವೃದ್ಧಿಗೆ ಇದು ವೇಗವನ್ನು ತಂದುಕೊಡಲಿದೆಯಂತೆ. ಬಹಳ ಸಂತೋಷ. ನಿಜಕ್ಕೂ ನಾವು ಹೇಳಕ್ಕೆ ಹೊರಟಿರೋ ವಿಷಯ ಏನಪ್ಪಾ ಅಂದ್ರೆ ಇಂತಹ ಒಂದು ಒಳಗೊಳ್ಳುವಿಕೆಯ ಯಾವುದೇ ಯೋಜನೆ ಪರಿಣಾಮಕಾರಿಯಾಗುವಂತೆ ಮಾಡಲು ಬೇಕಾದ ಸರಳವಾದ ತತ್ವವನ್ನೇ ಭಾರತ ಸರ್ಕಾರ ಗಮನಿಸುತ್ತಿಲ್ಲವಲ್ಲಾ ಅಂತಾ... ಹೌದೂ, ಇದು ಯಾವುದೇ ಗ್ರಾಹಕ ಸೇವೆಯು ಕಡೆಗಣಿಸಲಾಗದ ಭಾಷಾ ಆಯಾಮ.

ಏನಾಗಿದೆ? ಏನಾಗಬೇಕು?

ಭಾರತ ದೇಶದಲ್ಲಿ ಬ್ಯಾಂಕುಗಳು, ವಿಮಾ ವಿಭಾಗಗಳು ಹೆಚ್ಚಾಗಿ ಕೇಂದ್ರಸರ್ಕಾರ ಹಾಕಿರೋ ನೀತಿ ನಿಯಮಗಳನ್ನು ಅನುಸರಿಸುತ್ತವೆ. ಬ್ಯಾಂಕುಗಳೂ ಕೂಡಾ ಭಾರತದ ಭಾಷಾನೀತಿಯ ಒಳಗೇ ಕೆಲಸ ಮಾಡುತ್ತವೆ. ಹೀಗಾಗಿ ಎಂದಿನಂತೆ ಭಾರತದ ಯಾವ ಮೂಲೆಯ ಬ್ಯಾಂಕಿಗೆ ಹೋದರೂ ಹಿಂದಿ/ ಇಂಗ್ಲೀಷಿಗೆ ಮಣೆ. ದಯವಿಟ್ಟು ನೀವು ನಮ್ಮೂರಲ್ಲಿರೋ ಈ ಬ್ಯಾಂಕಿನ ಈ ಶಾಖೇಲಿ ಕನ್ನಡಾನೆ ಇರೋದು ಅನ್ನಬೇಡಿ. ನಾವು ಮಾತಾಡ್ತಾ ಇರೋದು ಭಾರತ ಅನುಸರಿಸುತ್ತಿರೋ ನೀತಿ ಬಗ್ಗೆ.

ಬ್ಯಾಂಕುಗಳಲ್ಲಿ ಹಿಂದೀ ಬಳಕೆಯನ್ನು ಹೀಗೆ ಹೀಗೆ ಹೆಚ್ಚಿಸಬೇಕು ಅನ್ನೋ ನೀತಿಯನ್ನು ಭಾರತ ಹೊಂದಿದೆ ಅನ್ನೋದೇ ನಮ್ಮ ಕಾಳಜಿಗೆ ಕಾರಣ. ಯಾಕೆ ಕನ್ನಡ ನಾಡಲ್ಲಿ ಕನ್ನಡದಲ್ಲಿ ವ್ಯವಹರಿಸದೇ ಇರೋದು ಅಪರಾಧ ಅಂತಾ ನಿಯಮ ಮಾಡಿಲ್ಲಾ ಅನ್ನೋದೇ ನಮ್ಮ ಕಳಕಳಿ. ಕನ್ನಡ ಮಾತ್ರಾ ಬಲ್ಲವನಿಗೆ ಬ್ಯಾಂಕಿನ ಒಂದು ಚೆಕ್ ಬರೆಯಕ್ಕೆ ಆಗಲ್ಲ. ವಿಮೆ ಮಾಡಿಸೋ ಅರ್ಜಿ ತುಂಬ್ಸಕ್ಕೆ ಆಗಲ್ಲಾ ಅನ್ನೋ ಪರಿಸ್ಥಿತಿಯನ್ನು ಕೇಂದ್ರಸರ್ಕಾರವೇ ಹುಟ್ಟುಹಾಕಿರುವಾಗ ಹೇಗೆ ಈ ಯೋಜನೆ ಯಶಸ್ವಿಯಾದೀತು ಅನ್ನೋದು ಯಕ್ಷಪ್ರಶ್ನೆ. ನಿಜಕ್ಕೂ ನೋಡಿದರೆ ಹಣಕಾಸು ವ್ಯವಹಾರದಲ್ಲಿ ನಂಬಿಕೆಯೇ ಅತಿಮುಖ್ಯ. ಹಾಗಾಗಿ ವ್ಯವಹಾರದ ಪ್ರತಿಯೊಂದು ಹೆಜ್ಜೆಯಲ್ಲೂ ಜನರ ಭಾಷೆ ಅಳವಡಿಕೆಯಾಗಬೇಕು ಗುರು. ಆಗ ಮಾತ್ರ Financial Inclusion ಎಂಬ ಕನಸು ನನಸಾಗಲು ಸಾಧ್ಯ. ಇಲ್ಲವಾದರೆ, ಹಣಕಾಸು ಸೇವೆಗಳು ಈಗಿನಂತೆ ಕೆಲವೇ ಜನರಿಗೆ ಮಾತ್ರ ಎಟುಕೋ ಹಣ್ಣಾಗಿ ಉಳಿಯುತ್ತೆ ಅಷ್ಟೇ!
Related Posts with Thumbnails