ಡಬ್ಬಿಂಗ್ ಮತ್ತು ಜನಪರತೆ


ಡಬ್ಬಿಂಗ್ ಕನ್ನಡಕ್ಕೆ ಬರಬೇಕು ಎನ್ನುವ ದನಿಗಳು ಇದೀಗ ಬಲ ಪಡೆದುಕೊಳ್ಳುತ್ತಿದ್ದು ಜನಪರ ಸಂಘಟನೆಗಳು ಈ ನಿಲುವಿಗೆ ಸಹಮತ ತೋರುತ್ತಿರುವುದನ್ನು ನಾವು ಕಾಣಬಹುದು. ಡಬ್ಬಿಂಗ್ ಬರುವುದರಿಂದ ಕೆಲಸ ಕಳೆದುಕೊಳ್ಳುತ್ತೇವೆಂಬ ದಿಗಿಲಿನಿಂದ ನಲುಗುತ್ತಿರುವ ಚಿತ್ರರಂಗದ ಒಂದು ವರ್ಗ ಒಂದೆಡೆಯಾದರೆ ಕನ್ನಡ ಸಂಸ್ಕೃತಿಯ ಅಳಿವು ಡಬ್ಬಿಂಗ್‌ನಿಂದಾಗುತ್ತದೆ ಎನ್ನುವ ನಿಲುವಿನ ಕೆಲವು ಹಿರಿಯರು ಇನ್ನೊಂದೆಡೆ... ಇದು "ಡಬ್ಬಿಂಗ್ ಬೇಡ" ಎನ್ನುವ ಪಕ್ಷದೊಳಗಿನ ಪ್ರಮುಖ ಪಂಗಡಗಳು. ಡಬ್ಬಿಂಗ್ ಕೇವಲ ಫೇಸ್‌ಬುಕ್ಕಿಗರಿಗೆ ಬೇಕೆನ್ನೋ ಹಾದಿ ತಪ್ಪಿಸೋ ಮಾತಾಡ್ತಿರೋ ಚಿತ್ರರಂಗದವರು, ಯಾವ ಆಧಾರದ ಮೇಲೆ ಡಬ್ಬಿಂಗ್ ಆರು ಕೋಟಿ ಜನರಿಗೆಲ್ಲಾ ಬೇಡಾ ಎಂದು ಹೇಳುತ್ತಿದ್ದಾರೆ ತಿಳಿಯುತ್ತಿಲ್ಲ. ಫೇಸ್‌ಬುಕ್ಕಿನಲ್ಲಿ ಚರ್ಚೆ ಮಾಡುವವರು ನೂರಾರು ಜನರಿರಬಹುದು... ಪಿಟಿಷನ್‌ಗೆ ಸಾವಿರಾರು ಜನರು ಸಹಿ ಹಾಕಿರಬಹುದು, ಅಂತರ್ಜಾಲದಲ್ಲಿ ಡಬ್ ಆದ ಸತ್ಯಮೇವ ಜಯತೇ ನೋಡಿದ ಮೂವತ್ತು ಸಾವಿರ ಜನರಿರಬಹುದು ಅಥವಾ ಪತ್ರಿಕೆಗಳಿಗೆ ಪತ್ರ ಬರೆಯುತ್ತಿರುವ, ಕೆಲವೆಡೆಗಿನ ಮತದಾನಗಳಲ್ಲಿ ಡಬ್ಬಿಂಗ್ ಬೇಕೆಂದು  ಮತನೀಡುತ್ತಿರುವ ಮತ್ತಷ್ಟು ಜನರಿರಬಹುದು, ಚಿತ್ರರಂಗದ ಒಳಗಿದ್ದೇ ಬಹಿರಂಗವಾಗಿ ದನಿಯೆತ್ತಿರುವ ಬೆರಳೆಣಿಕೆಯವರಿರಬಹುದು... ಈ ಎಲ್ಲಾ ಒಟ್ಟಾಗಿ ಪ್ರತಿನಿಧಿಸುತ್ತಿರುವುದು ಕನ್ನಡ ಜನತೆಯನ್ನೇ ಅಲ್ಲವೇ? ಸಮತಾ ಸೈನಿಕ ದಳವಾಗಲೀ, ಕರ್ನಾಟಕ ರಾಜ್ಯ ರೈತ ಸಂಘವಾಗಲೀ ಜನರನ್ನು ಪ್ರತಿನಿಧಿಸುತ್ತಿಲ್ಲವೇ? ಇವೆಲ್ಲಾ ಕಾಣುತ್ತಿದ್ದರೂ ಇವರಿಗೆ ಬಹುಷಃ ಕನ್ನಡಿಗರೆಲ್ಲಾ "ನಮಗೆ ಡಬ್ಬಿಂಗ್ ಬೇಕು" ಎಂದು ಬರೆದು ಕೇಳಿಕೊಳ್ಳಬೇಕೇನೋ...?! ಇಷ್ಟಕ್ಕೂ ಮಾರುಕಟ್ಟೆಯಲ್ಲಿ ಸಿನಿಮಾಗಳನ್ನು ಗೆಲ್ಲಿಸುವ ಅಥವಾ ಸೋಲಿಸುವ ಮೂಲಕ ನೀಡುವ ಉತ್ತರ ಸಾಲದೇ? ಡಬ್ ಆದವೂ ಕೂಡಾ ಇದೇ ಪ್ರಕ್ರಿಯೆಗೆ ಒಳಗಾಗುವ ಅವಕಾಶ ಇರಬೇಕಲ್ಲವೇ?

ವಾಸ್ತವವಾಗಿ ‘ಡಬ್ಬಿಂಗ್ ಎನ್ನುವುದು ಭಾಷೆಯನ್ನು ಉಳಿಸುವ ಸಾಧನ’ವೆನ್ನುವ ವಿಶ್ವಸಂಸ್ಥೆಯ ನಿಲುವಿನ ಹಿನ್ನೆಲೆಯಲ್ಲಿ ನಾವು ಇಡೀ ಪ್ರಕರಣವನ್ನು ನೋಡಬೇಕಾಗಿದೆ. ನಾಳೆ ಡಬ್ಬಿಂಗ್ ಬರುವುದರಿಂದ ಕನ್ನಡ ನಾಡಿಗೆ ಕೆಟ್ಟಾ-ಕೊಳಕಾ ಕಾರ್ಯಕ್ರಮಗಳು ದಾಳಿಯಿಡುತ್ತವೆ ಎನ್ನುವ ಆತಂಕ ನಿಜವಾಗಲೂಬಹುದು! ಆದರೆ ಇದು ವರ್ಷಗಳಿಂದ ಮುಚ್ಚಲಾಗಿದ್ದ ಅಣೆಕಟ್ಟೆಯ ತೂಬು ತೆರೆದಾಗ ಮೊದಲು ನುಗ್ಗುವ ಕಸದಂತೆಯೇ ಇರುತ್ತದೆ. ಕನ್ನಡ ಜನರು ಇಂಥಾ ಕಸ ಕಡ್ಡಿಗಳನ್ನು ಮಾರುಕಟ್ಟೆಯಲ್ಲಿ ಸೋಲಿಸುವ ಮೂಲಕ ಮುಂದೊಮ್ಮೆ ಒಳ್ಳೆಯವಕ್ಕೆ ಮಾತ್ರಾ ಗೆಲುವು ತಂದುಕೊಟ್ಟಲ್ಲಿ ಈ ಬಾಧೆ ನಿವಾರಣೆಯಾಗುತ್ತದೆ. ಈ ಮಾತಿಗೆ ಇಂದು ನೆರೆಯ ತಮಿಳು ತೆಲುಗು ಚಿತ್ರರಂಗಗಳಲ್ಲಿ ಡಬ್ ಆಗುತ್ತಿರುವ ಚಿತ್ರಗಳ ಪ್ರಮಾಣವೇ ಸಾಕ್ಷಿಯಾಗಿದೆ. ಅಲ್ಲಿ ವರ್ಷಕ್ಕೆ ಇಪ್ಪತ್ತಕ್ಕಿಂತಾ ಕಡಿಮೆ ಸಿನಿಮಾಗಳು ಡಬ್ ಆಗೋದನ್ನು ನಾವು ನೋಡಬಹುದು! ಡಬ್ಬಿಂಗ್ ಅಧಿಕೃತವಾದಾಗ ಅಲ್ಲೂ ಗುಣಮಟ್ಟದ ಸಂಭಾಷಣೆ, ದನಿಲೇಪನಗಳು ನಡೆಯಬಹುದು!!

ಆದರೆ ಡಬ್ಬಿಂಗ್ ಬರುವುದರಿಂದ ನೇರವಾಗಿ ಆಗುವ ಬದಲಾವಣೆಗಳು ಅತ್ಯಂತ ಉಪಕಾರಿಯಾದುವಾಗುವ ಸಾಧ್ಯತೆಗಳೇ ಹೆಚ್ಚು! ಕನ್ನಡದಲ್ಲಿ ಪೋಗೋ, ಕಾರ್ಟೂನ್ ನೆಟ್‌ವರ್ಕ್ ಮೊದಲಾದ ಮೂಲತಃ ಮಕ್ಕಳನ್ನು ಸೆಳೆಯುವ ವಾಹಿನಿಗಳು ಕನ್ನಡದಲ್ಲಿ ಬರಬೇಕಾಗಿದೆ. ಜ್ಞಾನ ಹೆಚ್ಚಿಸುವ ಹಿಸ್ಟರಿ, ಡಿಸ್ಕವರಿ, ನ್ಯಾಶನಲ್ ಜಿಯಾಗ್ರಫಿ ಮೊದಲಾದ ವಾಹಿನಿಗಳು ಕೂಡಾ ಕನ್ನಡದಲ್ಲಿರುವುದು ಕನ್ನಡಿಗರ ಅರಿಮೆಯ ಮಟ್ಟ ಹೆಚ್ಚಿಸಲು ಸಹಕಾರಿ. ಅಂತೆಯೇ ಹಲವಾರು ಜನಪ್ರಿಯ/ ಗುಣಮಟ್ಟದ ಪರಭಾಷಾ ಚಿತ್ರಗಳು ಕನ್ನಡಕ್ಕೆ ಬರುವುದು ಕೂಡಾ ಸಹಕಾರಿ. ಇವೆಲ್ಲಾ ಬೆಳವಣಿಗೆಗಳು ನೇರವಾಗಿ ಕನ್ನಡಿಗರನ್ನು ಕನ್ನಡಕ್ಕೆ ಅಂಟಿಕೊಳ್ಳುವಂತೆ ಮಾಡುವುದರಲ್ಲಿ ಸಂದೇಹವಿಲ್ಲ! ಜೊತೆಗೇ ಕನ್ನಡದಲ್ಲೇ ಸುಲಭವಾಗಿ ಅರಿವು ಸಿಗಲು ಇವು ಸಹಕಾರಿಯಾಗಲಿವೆ!!

ಕನ್ನಡ ಕಲಾವಿದರು ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನುವ ಮಾತು ನಿಜವೋ ಸುಳ್ಳೋ ತೀರ್ಮಾನವಾಗುವುದು ಕನ್ನಡ ಚಿತ್ರರಂಗ ಸ್ಪರ್ಧೆಯನ್ನು ಹೇಗೆ ಎದುರಿಸಲಿದೆ ಎನ್ನುವುದರ ಮೇಲೆ. ಡಬ್ಬಿಂಗ್‌ಗೆ ಅವಕಾಶವಾಯಿತೆಂದು ಕನ್ನಡ ಚಿತ್ರ ತೆಗೆಯುವುದನ್ನು ನಿರ್ಮಾಪಕರು ನಿಲ್ಲಿಸಿಯೇ ಬಿಡುತ್ತಾರೆ ಎನ್ನುವುದಾಗಲೀ... ಈಗಿನಷ್ಟೇ ಸಂಖ್ಯೆಯ ಚಿತ್ರಗಳು ಬರುತ್ತವೆ ಎನ್ನುವುದಾಗಲೀ ಕೇವಲ ಊಹೆಯ ಮಾತಾಗುತ್ತದೆ. ವಾಸ್ತವವಾಗಿ ಈ ಎರಡೂ ಸ್ವಲ್ಪ ಸ್ವಲ್ಪ ಆಗುವ ಸಾಧ್ಯತೆಗಳಿದ್ದು ಸ್ಪರ್ಧೆಯ ಕಾರಣದಿಂದ ಗುಣಮಟ್ಟದ ಚಿತ್ರಗಳು ಖಂಡಿತಾ ಬರುತ್ತವೆ ಎನ್ನಬಹುದು. ರಿಮೇಕು ಚಿತ್ರಗಳು ಕಡಿಮೆಯಾಗಬಹುದು! ಇವತ್ತೂ ಕೂಡಾ ತಯಾರಾಗುವ ೧೨೦+ ಚಿತ್ರಗಳಲ್ಲಿ ಗೆಲ್ಲುವುದು/ ಬಂಡವಾಳ ವಾಪಸ್ಸು ತರುವುದು ಕೆಲವೇ ಚಿತ್ರಗಳು ಎನ್ನುವಾಗ ಹಣ ಕಳೆದುಕೊಳ್ಳುವ ನಿರ್ಮಾಪಕರ ಸಂಖ್ಯೆ ಕಮ್ಮಿಯಾಗಬಹುದು ಅಷ್ಟೇ! ಆದರೆ ನೋಡುಗನಿಗೆ ಇದರಿಂದ ಲಾಭವೇ ಹೆಚ್ಚು. ಕನ್ನಡದ ಜನರು ತಮಗೆ ಬೇಕಾದ ಯಾವುದೇ ಭಾಷೆಯ ಚಿತ್ರವನ್ನು ತಮ್ಮದೇ ಭಾಷೆಯಲ್ಲಿ ನೋಡುವ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆನ್ನುವುದು ಮಾತ್ರಾ ಹದಿನಾರಾಣೆ ಸತ್ಯಾ!! ಇನ್ನು ಕನ್ನಡ ಕಿರುತೆರೆಯಲ್ಲಿ ಮೂಲ ಧಾರವಾಹಿಗಳು ನಿಲ್ಲುತ್ತವೆಯೋ, ಪರಭಾಷೆಯಿಂದ ರಿಮೇಕ್ ಆಗುವ ಧಾರಾವಾಹಿಗಳು ನಿಂತು ಮೂಲ ಕನ್ನಡದ ಸೊಗಡಿನ ಈ ನೆಲದ ಕಥೆಯ ಧಾರಾವಾಹಿಗಳು ಮಾತ್ರಾ ಉಳಿಯುತ್ತವೆಯೋ ಎನ್ನುವುದೂ ಕೂಡಾ ಬಲ್ಲವರಿಲ್ಲ! ಸ್ಪರ್ಧೆಯನ್ನು ಹೇಗೆ ಎದುರಿಸುತ್ತೇವೆ ಎನ್ನುವುದರ ಮೇಲೆ ಇದು ತೀರ್ಮಾನವಾಗಲಿದೆ. ಏನೆಂದರೂ ಕನ್ನಡದ್ದೇ ಮೂಲದ ಮೂಡಲಮನೆ, ಮುಕ್ತಾಮುಕ್ತಾ, ಗುರುರಾಘವೇಂದ್ರ ವೈಭವ ರೀತಿಯ ಧಾರಾವಾಹಿಗಳೆಲ್ಲಾ ನಿಂತುಬಿಡುತ್ತವೆ ಎನ್ನುವುದು ನಂಬಲಾಗದ ಮಾತು! ಇಲ್ಲೂ ಕೂಡಾ ನೋಡುಗನಿಗೆ ಗುಣಮಟ್ಟದ ಹೊಸತನದ ಕಾರ್ಯಕ್ರಮಗಳು ಸಿಗುವ ಸಾಧ್ಯತೆಯೇ ಹೆಚ್ಚು!

ಇವೆಲ್ಲವೂ ಕೂಡಾ ಕನ್ನಡಿಗನನ್ನು ಕನ್ನಡದಿಂದ ದೂರ ಹೋಗದ ಹಾಗೆ ನೋಡಿಕೊಳ್ಳೋ ಸಾಧ್ಯತೆಗಳು ಹೆಚ್ಚು. ಜೊತೆಗೆ ಪ್ರಪಂಚದಲ್ಲಿ ಡಬ್ಬಿಂಗ್‌ನಿಂದಾಗಿ ಯಾವೊಂದು ನುಡಿಗೂ ಆಗಿರದ ತೊಂದರೆ, ಯಾವ ಸಂಸ್ಕೃತಿಗೂ ಆಗಿರದ ತೊಂದರೆ ಕನ್ನಡಕ್ಕಾಗುತ್ತದೆ ಎನ್ನುವುದನ್ನು ನಂಬುವುದಕ್ಕಿಂತಲೂ... ಸಂವಿಧಾನ ಕೊಡಮಾಡಿರುವ, ವಿಶ್ವಸಂಸ್ಥೆಯೇ ಎತ್ತಿಹಿಡಿದಿರುವ ನಿಲುವನ್ನು ಬೆಂಬಲಿಸುವುದು ಸೂಕ್ತ! ಗೆಳೆಯರೊಬ್ಬರು ಬರೆದಂತೆ "ಗುಮ್ಮನಿಗೆ ಹೆದರಿ ಅಮ್ಮನಿಗೂ ಕದ ತೆರೆಯಲಿಲ್ಲ" ಎನ್ನುವ ಮಾತು ಡಬ್ಬಿಂಗಿಗೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗಕ್ಕೆ ಸಕ್ಕತ್ತಾಗೇ ಅನ್ವಯಿಸುತ್ತದೆ!! ಚಿತ್ರರಂಗದೋರು ಅಮ್ಮನನ್ನಾದರೂ ಒಳಗೆ ಬಿಟ್ಟುಕೊಳ್ಳಬೇಕು... ಅಲ್ವಾ ಗುರೂ? ಇಲ್ಲಾಂದ್ರೆ ಮುಂದೆ ಇವತ್ತಿನ ೧೫೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗೋ ರಚ್ಚಾ ಪಚ್ಚಾಗಳು ಇರೋ ಆರುನೂರನ್ನೂ ಆಕ್ರಮಿಸಿಕೊಳ್ಳೋ ಕಾಲ ಬಂದೀತು!

ಪ್ರಜಾಪ್ರಭುತ್ವ ಮತ್ತು ಡಬ್ಬಿಂಗ್ - ಒಂದು ವಿಚಾರ ಸಂಕಿರಣ


"ಸತ್ಯಮೇವ ಜಯತೇ" ನಿಲ್ಲಿಸಿದ್ದು ಯಾಕೆ? ಸತ್ಯವನ್ನು ಹೇಳಿ ಸ್ಟಾರ್ ಸುವರ್ಣಾ...


ಸನ್ಮಾನ್ಯರೇ,

ಕೆಲದಿನಗಳ ಹಿಂದೆ ತಾವೊಂದು ಪ್ರಕಟಣೆಯ ಮೂಲಕ ಅಮೀರ್‌ಖಾನ್‌ರವರ "ಸತ್ಯಮೇವ ಜಯತೇ" ದೂರದರ್ಶನ ಕಾರ್ಯಕ್ರಮವನ್ನು ತಮ್ಮ ಪ್ರತಿಷ್ಠಿತ ವಾಹಿನಿಯಾದ ಸುವರ್ಣ ಕನ್ನಡ ವಾಹಿನಿಯಲ್ಲಿ ಕನ್ನಡದಲ್ಲಿಯೇ ಪ್ರಸಾರ ಮಾಡುವುದಾಗಿ ಹೇಳಿಕೆ ನೀಡಿದ್ದಿರಿ. ಕೆಲವು ಕನ್ನಡ ಚಲನಚಿತ್ರ ಹಾಗೂ ಟಿವಿ ಕಲಾವಿದರ ಸಂಘದ ಪದಾಧಿಕಾರಿಗಳನ್ನು ಭೇಟಿಯಾದ ನಂತರ ನಿಮ್ಮ ನಿಲುವನ್ನು ಬದಲಿಸಿರುವುದಾಗಿ ಮತ್ತೊಂದು ಹೇಳಿಕೆಯನ್ನು ಕೂಡಾ ನೀಡಿದಿರಿ. 

ನಿಮ್ಮ ಮೊದಲ ಹೇಳಿಕೆಯಿಂದ "ಕನ್ನಡಿಗರಿಗೆ ಹತ್ತಿದ್ದ ನಲವತ್ತು ವರ್ಷಗಳ ಶಾಪ" ಕಳೆಯಿತು ಎಂಬ ಸಂತಸದಲ್ಲಿದ್ದ ಕನ್ನಡ ಪ್ರೇಕ್ಷಕನಿಗೆ ನಿಮ್ಮ ಎರಡನೆಯ ಹೇಳಿಕೆ ನಿರಾಸೆಯುಂಟು ಮಾಡಿದ್ದು ಸತ್ಯ! ಈ ಪ್ರಕ್ರಿಯೆಗಳಲ್ಲಿ ಕನ್ನಡ ನೋಡುಗನ ಅನಿಸಿಕೆಗೂ ಮಹತ್ವವಿದ್ದೀತೆಂದು ಭಾವಿಸಿ "ಮಿಂಬಲೆ ಮನವಿ" (ಆನ್‌ಲೈನ್ ಪಿಟಿಷನ್) ಒಂದನ್ನು ಆರಂಭಿಸಿ ಕೇವಲ ಎರಡೇ ದಿನಗಳಲ್ಲಿ ಒಂಬೈನೂರಾ ಐವತ್ತಕ್ಕೂ ಹೆಚ್ಚಿನ ಸಹಿಗಳನ್ನು ಸಂಗ್ರಹಿ,ಸಿ ತಮ್ಮ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಮಾಡಿ ಮನವಿ ಸಲ್ಲಿಸಲಾಯಿತು. ಆ ಸಂದರ್ಭದಲ್ಲಿ ತಮ್ಮ ಮುಖ್ಯಸ್ಥರು ಸದರಿ ಕನ್ನಡದ ಸತ್ಯಮೇವ ಜಯತೇ ಸರಣಿಯನ್ನು ವೆಬ್‌ಕ್ಯಾಸ್ಟ್ ಮೂಲಕ ಪ್ರಕಟಿಸುವುದಾಗಿ ಭರವಸೆಯನ್ನು ನೀಡಿದ್ದರು.

ತಮ್ಮ ಮಾತಿನಂತೆಯೇ ಕನ್ನಡದಲ್ಲಿ "ಸತ್ಯಮೇವ ಜಯತೇ" ಸರಣಿಯ ಮೊದಲನೇ ಕಂತನ್ನು ವೆಬ್‌ಕ್ಯಾಸ್ಟ್ ಮೂಲಕ ಪ್ರಕಟಿಸಿಯೂ ಬಿಟ್ಟಿರಿ. ಆ ಮೂಲಕ ಕನ್ನಡದಲ್ಲಿ ನಮ್ಮ ಮನರಂಜನೆಯನ್ನು ಪಡೆದುಕೊಳ್ಳುವ ನಮ್ಮ ಹಕ್ಕನ್ನು ಎತ್ತಿಹಿಡಿದಿರೆಂದು ಜನತೆ ಹಿಗ್ಗಲು ಕಾರಣರಾದಿರಿ. ಜನರಿಗೆ ಡಬ್ಬಿಂಗ್ ಆದ ಕಾರ್ಯಕ್ರಮ ಬೇಕು ಎನ್ನುವುದಕ್ಕೆ ಪುರಾವೆಯೆಂಬಂತೆ ಕೇವಲ ಮೂರೇ ದಿನದಲ್ಲಿ ೩೦,೦೦೦ಕ್ಕೂ ಹೆಚ್ಚು ಜನರು ಕನ್ನಡದಲ್ಲಿ ಡಬ್ ಆದ ಆ ಕಾರ್ಯಕ್ರಮವನ್ನು ನೋಡಿದ್ದು ತಮ್ಮ ಗಮನಕ್ಕೂ ಬಂದಿದೆಯೆಂದು ಭಾವಿಸುತ್ತೇವೆ.

ಇದಾದ ನಂತರ ತಮ್ಮದೇ ಸುದ್ದಿವಾಹಿನಿಯ ಮೂಲಕ ಮಿಂಬಲೆಯಲ್ಲಿ ಜನಾಭಿಪ್ರಾಯವನ್ನು ಪಡೆದುಕೊಂಡಿರಿ. ಇದರಲ್ಲಿ ನೂರಕ್ಕೆ ೯೧ರಷ್ಟು ಮಂದಿ ಡಬ್ಬಿಂಗ್ ಕಾರ್ಯಕ್ರಮವನ್ನು ಬೆಂಬಲಿಸಿ ಮತದಾನ ಮಾಡಿದ್ದನ್ನು ತಾವೇ ಪ್ರಕಟಿಸಿದಿರಿ. ಡಬ್ಬಿಂಗ್ ಪರವಾದ ಜಾಗೃತಿಯು ಕೇವಲ ಅಂತರ್ಜಾಲದಲ್ಲಷ್ಟೇ ಆಗಿಲ್ಲ ಎನ್ನುವುದನ್ನು ಸಾಬೀತು ಪಡಿಸುವಂತೆ, ಎಸ್ಸೆಮ್ಮೆಸ್ ಮೂಲಕ ನಡೆದ ಮತದಾನದಲ್ಲಿ ನೂರಕ್ಕೆ ೮೭ರಷ್ಟು ಜನರು ಡಬ್ಬಿಂಗ್ ಪರವಾಗಿದ್ದುದನ್ನು ಕೂಡಾ ತಾವೇ ಪ್ರಕಟಿಸಿದಿರಿ. ದುರಾದೃಷ್ಟವಶಾತ್ ಈ ಫಲಿತಾಂಶಗಳನ್ನು ಇತ್ತ ತಮ್ಮ ಸುದ್ದಿ ವಾಹಿನಿಯು ಪ್ರಕಟಿಸುತ್ತಿರುವಾಗಲೇ ಅತ್ತ ಕನ್ನಡದಲ್ಲಿ ಡಬ್ ಆಗಿ ಅಂತರ್ಜಾಲದಲ್ಲಿ ಮಾತ್ರಾ ಸಿಗುತ್ತಿದ್ದ, ಎರಡೇ ದಿನಗಳಲ್ಲಿ ೩೦,೦೦೦ಕ್ಕೂ ಹೆಚ್ಚು ಜನರಿಂದ ನೋಡಲಾದ ಕನ್ನಡ ಅವತರಣಿಕೆಯ "ಸತ್ಯಮೇವ ಜಯತೇ" ಕಾರ್ಯಕ್ರಮದ ಮೊದಲ ಕಂತಿನ ವೀಡಿಯೋವನ್ನು ಯೂಟ್ಯೂಬಿನಿಂದ ತೆಗೆದು ಹಾಕಿಬಿಟ್ಟಿರಿ!

ಈ ಮೂಲಕ ತಮ್ಮನ್ನು "ಕನ್ನಡಿಗ ಪ್ರೇಕ್ಷಕರು ಯಾವ ತಪ್ಪೆಸೆಗಿದ್ದಕ್ಕಾಗಿ ಹೀಗೆ ತಾವು ಮಾಡಿದಿರಿ? ಅದಾವ ಕಾಣದ ಕೈಗಳ ಒತ್ತಡಕ್ಕೆ ತಾವು ಮಣಿಯಬೇಕಾಯಿತು? ಇದ್ದ ಸೀಮಿತ ಸಮಯದಲ್ಲೇ ಅತ್ಯಂತ ಹೆಚ್ಚು ಜನರಿಂದ ನೋಡಲ್ಪಟ್ಟ ಒಂದು ಕಾರ್ಯಕ್ರಮವನ್ನು ತಾವು ಹೀಗೆ ಏಕೆ ಏಕಾಏಕಿ ತೆಗೆದುಹಾಕಿಬಿಟ್ಟಿರಿ?" ಎಂದು ಕೇಳ ಬಯಸುತ್ತೇವೆ. ಇಷ್ಟಕ್ಕೂ ತಮ್ಮ ವಾಹಿನಿ, ತಮ್ಮ ಕಾರ್ಯಕ್ರಮ... ಹಾಗಾಗಿ  ತಮಗೆ ಬೇಕಾದುದನ್ನು ಹಾಕುವ, ತೆಗೆಯುವ, ಹಾಕುತ್ತೇವೆಂದು ಹೇಳಿ ಹಾಕದಿರುವ, ಹಾಕಿಯೂ ತೆಗೆದು ಹಾಕುವ, ತೆಗೆದು ಹಾಕಿದ್ದಕ್ಕೆ ಕಾರಣವನ್ನು ನೀಡದಿರುವ ಎಲ್ಲಾ ಸ್ವಾತಂತ್ರ್ಯವೂ ತಮಗಿದೆ ಎನ್ನುವುದನ್ನು ಗೌರವಿಸುತ್ತಲೇ "ಸತ್ಯಮೇವ ಜಯತೇ" ಕಾರ್ಯಕ್ರಮದ ಕನ್ನಡ ಅವತರಣಿಕೆಯನ್ನು ಯಾವ ಕಾರಣಕ್ಕಾಗಿ ತೆಗೆದುಹಾಕಿಬಿಟ್ಟಿರಿ ? ಎನ್ನುವುದಕ್ಕೆ ಜನರಿಗೆ ಉತ್ತರ ನೀಡಬೇಕಾದ ನೈತಿಕ ಹೊಣೆ ತಮ್ಮದೆಂದು ಮಾತ್ರಾ ನೆನಪು ಮಾಡಲು ಬಯಸುತ್ತೇವೆ. ಹೇಳಿ... ಸತ್ಯಮೇವ ಜಯತೇ ಎಂದು ಇಡೀ ಭಾರತಕ್ಕೇ ಸಾರಲು ಹೊರಟಿರುವ ನೀವು "ಸತ್ಯಮೇವ ಜಯತೇ" ಕನ್ನಡ ಅವತರಣಿಕೆಯನ್ನು ತೆಗೆದುಹಾಕಿದ್ದು ಯಾಕೆ? ಸತ್ಯಾ ಹೇಳಿ ಸ್ಟಾರ್ ಸುವರ್ಣಾ...!

UPSC ಪರೀಕ್ಷೆ - ಕನ್ನಡದಲ್ಲೇ ಬರೆದು ವಿಜಯ ಸಾಧಿಸಿದ ವಿಜಯಕುಮಾರ್ !

ಕೇಂದ್ರ ಲೋಕ ಸೇವಾ ಆಯೋಗ ನಡೆಸಿದ 2011ರ ನಾಗರೀಕ ಸೇವಾ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು ಕರ್ನಾಟಕದಿಂದ 56 ಜನರು ಆಯ್ಕೆಯಾಗಿರುವ ಸುದ್ದಿ ಪತ್ರಿಕೆಗಳಲ್ಲಿದೆ. 2009 ರಲ್ಲಿ ಕೇವಲ 12 ರಷ್ಟಿದ್ದ ಆಯ್ಕೆಯಾದವರ ಸಂಖ್ಯೆ ಈಗ ಅದರ ನಾಲ್ಕು ಪಟ್ಟು ಹೆಚ್ಚಿರುವುದು ಬಹು ಸಂತಸದ ಸಂಗತಿಯಾಗಿದೆ. ಆಯ್ಕೆಯಾದ ಎಲ್ಲರಿಗೂ ಸಿಹಿ ಹಾರೈಕೆಗಳನ್ನು ಸಲ್ಲಿಸುತ್ತಲೇ ಕನ್ನಡದಲ್ಲೇ ಈ ಪರೀಕ್ಷೆಗಳನ್ನು ತೆಗೆದುಕೊಂಡು ಗೆಲುವು ಸಾಧಿಸಿದ ಬನವಾಸಿ ಬಳಗದ ಹಿತೈಷಿಗಳು, ಗೆಳೆಯರೂ ಆದ ವಿಜಯಕುಮಾರ್ ಸಾಸಲು ಮಹದೇವಪ್ಪ ಅವರ ಪರಿಚಯ ಇಲ್ಲಿದೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಸಾಸಲು ಗ್ರಾಮದವರಾದ ವಿಜಯಕುಮಾರ್ ಕಷ್ಟದ ನಡುವೆಯೇ ಛಲ ಬಿಡದೇ ವಿದ್ಯಾಭ್ಯಾಸ ಪೂರೈಸಿದ ಸಾಹಸಿ. ಬಿ.ಇ ಮೆಕಾನಿಕಲ್ ಪದವಿಧರರಾದ ಅವರು ಸತತ ಪ್ರಯತ್ನದ ನಂತಹ ಈ ವರ್ಷದ ಯು.ಪಿ.ಎಸ್.ಇ ಪರೀಕ್ಷೆಯಲ್ಲಿ ದೇಶಕ್ಕೆ 152ನೇ ಸ್ಥಾನ ಪಡೆದಿದ್ದಾರೆ. ಈ ಬಗ್ಗೆ ಏನ್ ಗುರುವಿನ ಜೊತೆ ಫೋನಿನಲ್ಲಿ ನಡೆದ ಚಿಕ್ಕ ಸಂದರ್ಶನದಲ್ಲಿ ಮಾತನಾಡಿದ ಅವರು ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ:

ಏನ್ ಗುರು: ಕನ್ನಡದಲ್ಲೇ ಈ ಪರೀಕ್ಷೆ ತೆಗೆದುಕೊಂಡು ಗೆಲುವು ಸಾಧಿಸಿದ ಬಗ್ಗೆ ಏನು ಹೇಳುವಿರಿ?
ವಿಜಯ: ಕನ್ನಡದಲ್ಲಿ ನಾಗರೀಕ ಸೇವಾ ಪರೀಕ್ಷೆಗಳನ್ನು ಬರೆಯಲು ಅಸಾಧ್ಯ ಅನ್ನುವ ಮಾತುಗಳೇ ಕೇಳಿ ಬರುತ್ತಿದ್ದ ಸಂದರ್ಭದಲ್ಲಿ ಅದನ್ನು ಸುಳ್ಳೆಂದು ತೋರಿಸಲೇಬೇಕು, ಕನ್ನಡದಲ್ಲೂ ಇದನ್ನೆಲ್ಲ ಸಾಧಿಸಿ ತೋರಿಸಬಹುದು ಅನ್ನುವ ಹಟ ತೊಟ್ಟೇ ಕನ್ನಡದಲ್ಲಿ ಬರೆದೆ. ನನ್ನ ಕೆಲಸದಿಂದ ಇನ್ನಷ್ಟು ಕನ್ನಡದ ಯುವಕರಿಗೆ ಸ್ಪೂರ್ತಿ ಸಿಕ್ಕರೆ ನನ್ನ ಪ್ರಯತ್ನ ಸಾರ್ಥಕ ಅನ್ನಿಸುವುದು.

ಏನ್ ಗುರು: ಎಲ್ಲ ಸುತ್ತಿನಲ್ಲಿಯೂ ಕನ್ನಡದಲ್ಲಿ ಉತ್ತರಿಸುವ ಅವಕಾಶವಿದೆಯೇ?
ವಿಜಯ: ಮೊದಲ ಮತ್ತು ಎರಡನೆಯ ಹಂತದಲ್ಲಿ ಪ್ರಶ್ನೆ ಪತ್ರಿಕೆ ಇಂಗ್ಲಿಷ್-ಹಿಂದಿಯಲ್ಲಷ್ಟೇ ಇದ್ದರೂ ಕನ್ನಡದಲ್ಲಿ ಉತ್ತರ ಬರೆಯುವ ಅವಕಾಶವಿತ್ತು. ಅದನ್ನು ಉಪಯೋಗಿಸಿಕೊಂಡು ಕನ್ನಡದಲ್ಲೇ ಬರೆದು ಮುಂದಿನ ಹಂತಕ್ಕೆ ತೇರ್ಗಡೆಯಾದೆ. ಕೊನೆಯ ಸುತ್ತಿನ ಸಂದರ್ಶನದಲ್ಲೂ ಕನ್ನಡದಲ್ಲೇ ಮಾತನಾಡುವ ಅವಕಾಶ ಕೊಟ್ಟಿದ್ದರು. ಅಷ್ಟರ ಮಟ್ಟಿಗೆ ಯು.ಪಿ.ಎಸ್.ಸಿ ಭಾರತದ ಬೇರೆ ಬೇರೆ ಭಾಷೆಯಲ್ಲೇ ಪರೀಕ್ಷೆ ತೆಗೆದುಕೊಳ್ಳಲು ಸಹಕಾರ ನೀಡುತ್ತೆ. ಆದ್ದರಿಂದ ಪರೀಕ್ಷೆ ಬರೆಯುವ ಹುಡುಗರು ಯಾವುದೇ ಅಳಕು, ಅಂಜಿಕೆಯಿಲ್ಲದೇ ತಮ್ಮ ತಾಯ್ನುಡಿಯಲ್ಲಿ ಪರೀಕ್ಷೆ ಬರೆಯಲು ಮುಂದಾಗಿ, ಗೆಲುವು ಖಂಡಿತ ಸಾಧ್ಯ

ಏನ್ ಗುರು: ಪರೀಕ್ಷೆಯ ತಯಾರಿಗಾಗಿ ವಿಶೇಷ ತರಬೇತಿ ಏನಾದರೂ ಪಡೆದಿದ್ರಾ?
ವಿಜಯ: ಇಲ್ಲವೇ ಇಲ್ಲ. ದೆಹಲಿ, ಜೈಪುರದಂತಹ ಊರಲ್ಲಿ ಲಕ್ಷ ಲಕ್ಷ ಖರ್ಚು ಮಾಡಿ ತರಬೇತಿ ತೆಗೆದುಕೊಂಡರಷ್ಟೇ ನಾಗರೀಕ ಸೇವಾ ಪರೀಕ್ಷೆಯಲ್ಲಿ ಗೆಲ್ಲಲು ಸಾಧ್ಯ ಅನ್ನುವ ನಂಬಿಕೆಯನ್ನು ತಪ್ಪೆಂದು ಸಾಧಿಸಬೇಕು ಅನ್ನುವ ಹಟ ನನ್ನಲ್ಲಿತ್ತು. ಹೀಗಾಗಿ ಯಾವುದೇ ತರಬೇತಿ ಪಡೆಯದೇ ಕುಳಿತು ಓದಿಯೇ ಈ ಹಂತಕ್ಕೆ ಬಂದೆ. ಚಿಕ್ಕಂದಿನಿಂದಲೂ ಇದ್ದ ಪತ್ರಿಕೆ, ಸಾಹಿತ್ಯದ ಓದು ದೊಡ್ಡ ಮಟ್ಟದಲ್ಲೇ ನನ್ನ ನೆರವಿಗೆ ಬಂತು.

ಏನ್ ಗುರು: ಹೆಚ್ಚೆಚ್ಚು ಕನ್ನಡಿಗರು ನಾಗರೀಕ ಸೇವಾ ಪರೀಕ್ಷೆ ಬರೆಯಬೇಕು ಅನ್ನುವ ಬಗ್ಗೆ ನಿಮ್ಮ ನಿಲುವು?
ವಿಜಯ: ಖಂಡಿತವಾಗಿಯೂ ಹೆಚ್ಚೆಚ್ಚು ಕನ್ನಡಿಗರು ನಾಗರೀಕ ಸೇವಾ ಪರೀಕ್ಷೆಗಳನ್ನು ಬರೆಯುವುದರ ಮೂಲಕ ವ್ಯವಸ್ಥೆಯ ಪಾಲುದಾರರಾಗಬೇಕು. ಕನ್ನಡ ಆಡಳಿತದ ನುಡಿಯಾಗದಿರಲು ಉನ್ನತ ಸ್ಥಾನದಲ್ಲಿರುವ ಅಧಿಕಾರಗಳೇ ಕಾರಣ ಅನ್ನುವ ಮಾತು ಯಾವತ್ತೂ ಕೇಳುತ್ತೇವೆ. ಕನ್ನಡದ ಬಗ್ಗೆ ಕಾಳಜಿಯುಳ್ಳ ಅಧಿಕಾರಿಗಳು ಹೆಚ್ಚಿದಷ್ಟು ಮತ್ತು ಅಂತವರು ಕರ್ನಾಟಕ ರಾಜ್ಯದ ಸೇವೆಗೆ ಸೇರಿಕೊಂಡಷ್ಟು ಕನ್ನಡ ಆಡಳಿತದ ನುಡಿಯಾಗಿ ಅನುಷ್ಟಾನಕ್ಕೆ ಬರುತ್ತೆ. ನನಗೆ ಕರ್ನಾಟಕ ರಾಜ್ಯದ ಕೇಡರ್ ಗೆ ಪೋಸ್ಟಿಂಗ್ ಸಿಗಲಿ ಎಂದು ನಿರೀಕ್ಷಿಸುತ್ತಿದ್ದೇನೆ. ಕನ್ನಡ, ಕನ್ನಡಿಗರ ಸೇವೆಗೆ ತೊಡಗುವುದಕ್ಕಿಂತ ಭಾಗ್ಯ ಇನ್ನೊಂದಿಲ್ಲ.

ಏನ್ ಗುರು: ನಿಮ್ಮ ಮುಂದಿನ ಹಾದಿಯಲ್ಲಿ ಒಳಿತಾಗಲಿ, ಗೆಲುವಾಗಲಿ.
ವಿಜಯ: ಧನ್ಯವಾದಗಳು.
Related Posts with Thumbnails