ಸಮಾನ ಗೌರವದ ಭಾಷಾನೀತಿಗಾಗಿ ಒತ್ತಾಯಿಸಿ...

 - ವಸಂತ್ ಶೆಟ್ಟಿ

ಮೊನ್ನೆ ಆಗಸ್ಟ್
15ಕ್ಕೆ ಬ್ರಿಟಿಷರಿಂದ ಬಿಡುಗಡೆಯಾಗಿ 66 ವರ್ಷ ಕಳೆದ ಸಂಭ್ರಮ. ಕೆಂಪುಕೋಟೆಯ ಮೇಲಿನಿಂದ ಭಾರತ ಅನ್ನುವುದು ಭಾಷೆ, ಜನಾಂಗ, ಧರ್ಮಗಳ ವೈವಿಧ್ಯತೆಯ ತವರೂರು, ಇಲ್ಲಿ ಎಲ್ಲ ಜನರು, ಎಲ್ಲ ಭಾಷೆಗಳು ಸಮಾನ, ಈ ವಿವಿಧತೆಯಲ್ಲೇ ಏಕತೆ ಅಡಗಿದೆ ಅನ್ನುವ ನುಡಿಮುತ್ತುಗಳು ಎಂದಿನಂತೆ ಕೇಳಿ ಬಂದವು. ದೀಪದ ಕೆಳಗೆಯೇ ಕತ್ತಲು ಎಂಬಂತೆ ಯಾವ ದೆಹಲಿಯಿಂದ ಈ ನುಡಿಮುತ್ತುಗಳನ್ನು ಉದುರಿಸಿದರೋ ಅಲ್ಲಿಂದಲೇ "ಹಿಂದಿ ರಾಷ್ಟ್ರಭಾಷೆ ಅನ್ನುವ ಸುಳ್ಳನ್ನು" ವ್ಯವಸ್ಥಿತವಾಗಿ ಹರಡುತ್ತಾ ವೈವಿಧ್ಯತೆಯ ಬುಡಕ್ಕೆ ಕೊಡಲಿ ಪೆಟ್ಟು ಹಾಕುವ ಕೆಲಸ ನಿರಂತರವಾಗಿ ನಡೆದುಕೊಂಡು ಬಂದಿದೆ. ಸಮಾನತೆಯ ನೆಲೆಗಟ್ಟಿನ ಮೇಲೆ ಕಟ್ಟಲ್ಪಟ್ಟ ಭಾರತ ಒಕ್ಕೂಟದಲ್ಲಿ ಒಂದು ಪ್ರದೇಶದ ಜನರ ನುಡಿಯಾದ ಹಿಂದಿಯನ್ನು ಭಾರತೀಯತೆಯ ಸಂಕೇತ, ದೇಶಪ್ರೇಮದ ಪ್ರತೀಕ ಅನ್ನುವ ಹೆಸರಿನಲ್ಲಿ ಎಲ್ಲ ಹಿಂದಿಯೇತರ ಜನರ ಮೇಲೆ ಹೇರಲಾಗುತ್ತಿದೆ. ಇದು ಹಿಂದಿಯೇತರ ನುಡಿಗಳೆಲ್ಲವನ್ನು ನಿಧಾನಕ್ಕೆ ಸಾವಿನ ಮನೆಗೆ ತಳ್ಳುತ್ತಿದೆ. ಇದು ಸರಿ ಹೋಗಬೇಕು. ಎಲ್ಲ ನುಡಿಗಳಿಗೂ ಸಮಾನ ಸ್ಥಾನಮಾನ ಸಿಗಬೇಕು. ಆಗಲೇ ವಿವಿಧತೆಯಲ್ಲಿ ಏಕತೆ ಅನ್ನುವ ಘೋಷಣೆಗೆ ನಿಜ ಅರ್ಥ ಬರಲು ಸಾಧ್ಯ. ಆ ನಿಟ್ಟಿನಲ್ಲಿ ಬನವಾಸಿ ಬಳಗ ಕಳೆದ ಹಲವಾರು ವರ್ಷಗಳಿಂದ ನಾನಾರೀತಿಯಲ್ಲಿ ಕನ್ನಡ ಸಮಾಜದಲ್ಲಿ ಜನಜಾಗೃತಿ ಮಾಡುತ್ತಿದೆ. ನಾವು ಸಾಗಬೇಕಿರುವ ಹಾದಿ ದೊಡ್ಡದು ಮತ್ತು ಅದರತ್ತ ಪ್ರಾಮಾಣಿಕವಾದ ಎಲ್ಲ ಪ್ರಯತ್ನಗಳನ್ನು ನಾವು ಮುಂದುವರಸುತ್ತೇವೆ. ಇವತ್ತಿನ ಅಂಕಣ ಇಲ್ಲಿಯವರೆಗೆ ಈ ನಿಟ್ಟಿನಲ್ಲಿ ಆಗಿರುವ ಕೆಲಸಗಳು ಮತ್ತು ಮುಂದಿನ ಹಾದಿಯ ಬಗ್ಗೆ ಓದುಗ ಗೆಳೆಯರೊಡನೆ ಹಂಚಿಕೊಳ್ಳಲು ಮುಡಿಪಾಗಿದೆ.
ಕುವೆಂಪು ಅವರಿಂದ ಹಿಡಿದು ಇಲ್ಲಿಯವರೆಗೆ...

ಭಾರತದ ಹಿಂದಿ ಪರ ಭಾಷಾನೀತಿಯ ಬಗ್ಗೆ ಕುವೆಂಪು ಅವರು ಈ ಹಿಂದೆಯೇ ದನಿ ಎತ್ತಿದ್ದರು. ತ್ರಿಭಾಷಾ ಸೂತ್ರ ಕನ್ನಡದ ಮಕ್ಕಳ ಎದೆಗೆ ತಿವಿದ ತ್ರಿಶೂಲವೇ ಆಗಿದೆ ಅನ್ನುವ ಅರ್ಥದಲ್ಲಿ  ಈ ಕೆಳಗಿನ ಮಾತುಗಳನ್ನು ಹೇಳಿದ್ದರು.

ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ;
ಬಾಲಕರ ರಕ್ಷಿಸೈ, ಹೇ ತ್ರಿಣೇತ್ರ!
ಚೂರು ತಿಂಡಿಗೆ ಸಿಕ್ಕಿಸಿಹರೊ ಈ ಮೂರು ಗಾಳ
ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣಶೂಲ!
ಅಲ್ಲಿಂದಾಚೆ ಹಿಂದಿ ಹೇರಿಕೆಯ ವಿರೋಧಿಸಿ, ಭಾಷಾನೀತಿಯ ಬದಲಾವಣೆಯ ದನಿ ಕರ್ನಾಟಕದಲ್ಲಿ ಅಷ್ಟಾಗಿ ಕೇಳಿ ಬರಲಿಲ್ಲ. 1991ರ ಆರ್ಥಿಕ ಸುಧಾರಣೆಗಳ ನಂತರ ಕರ್ನಾಟಕಕ್ಕೆ ಹಿಂದಿಭಾಷಿಕರ ಮಿತಿ ಮೀರಿದ ವಲಸೆಯೂ ನಡೆಯುವುದರೊಂದಿಗೆ ತ್ರಿಭಾಷಾ ಸೂತ್ರ ನಿಜವಾದ ಅರ್ಥದಲ್ಲಿ ಕನ್ನಡ ಸಮಾಜದಿಂದ ಕನ್ನಡವನ್ನೇ ಮೂಲೆಗುಂಪಾಗಿಸುವ ಅಸ್ತ್ರವಾಯಿತು. ಒಂದೆಡೆ ವಲಸೆ, ಇನ್ನೊಂದೆಡೆ ಹಾಗೆ ವಲಸೆ ಬಂದವರೊಡನೆ ಮಾತನಾಡಲು ಕನ್ನಡಿಗರಿಗೇ ಹಿಂದಿ ಕಲಿಸಿದ ವ್ಯವಸ್ಥೆ. ಈ ಎರಡೂ ಕಾರಣಗಳು ಸೇರಿ ಕರ್ನಾಟಕಕ್ಕೆ ವಲಸೆ ಬಂದ ಹಿಂದಿ ಭಾಷಿಕರು ಕನ್ನಡ ಕಲಿಯುವ ಅಗತ್ಯವೇ ಇಲ್ಲವೆನೋ ಅನ್ನುವಂತಹ ಬದಲಾವಣೆಗಳಾದವು. ಅದರೊಂದಿಗೆ ನಮ್ಮ ಊರುಗಳ ಮಾರುಕಟ್ಟೆಯಲ್ಲಿ ನೆಲೆನಿಂತಿದ್ದ ಕನ್ನಡ ಕಣ್ಮರೆಯಾಗಿ ಅಲ್ಲೆಲ್ಲ ಹಿಂದಿ,ಇಂಗ್ಲಿಶ್ ಬಂದು ನಿಲ್ಲುವ ಬದಲಾವಣೆಗಳಿಗೆ ವೇಗ ಸಿಕ್ಕಿತು. 
2006ರಿಂದಿಚೆಗೆ ನಮ್ಮ ಕೆಲಸ

ಈ ಹಂತದಲ್ಲಿ 2006ರಿಂದ ಬನವಾಸಿ ಬಳಗ ಈ ತೊಡಕಿನ ಭಾಷಾ ನೀತಿ ಹೇಗೆ ಕರ್ನಾಟಕದಲ್ಲಿ ಕನ್ನಡದ ಹರಿವು, ಉಸಿರು ಎರಡನ್ನು ಬತ್ತಿಸುತ್ತಿದೆ ಅನ್ನುವ ಬಗ್ಗೆ ಜನಜಾಗೃತಿಗೆ ಮುಂದಾಯಿತು. ಇದಕ್ಕೆ ನಾವು ಆಯ್ದುಕೊಂಡ ಸಾಧನ ಅಂತರ್ಜಾಲದ ಬ್ಲಾಗ್. ಏನ್ ಗುರು ಕಾಫಿ ಆಯ್ತಾ ಮೂಲಕ ಈ ಹುಳುಕಿನ ಭಾಷಾನೀತಿಯ ಎಲ್ಲ ಮಜಲನ್ನು ಸವಿಸ್ತಾರವಾಗಿ ಕನ್ನಡಿಗರ ಮುಂದೆ ತೆರೆದಿಡುತ್ತ ಬಂದೆವು. ಈ ಸಮಸ್ಯೆಯ ಮೂಲ ಭಾರತದ ಸಂವಿಧಾನದ ಪುಟಗಳಲ್ಲೇ ಅಡಗಿದ್ದು ೩೪೩ನೇ ವಿಧಿಯಿಂದ ೩೫೧ರ ವಿಧಿಯವರೆಗೆ ಬರೆಯಲಾಗಿರುವ ಮಾತುಗಳು ತಿದ್ದುಪಡಿಗೊಳಗಾಗಬೇಕಾಗಿದೆ.

ಪ್ರತಿವರ್ಷ ಹಿಂದಿ ಸಾಮ್ರಾಜ್ಯಶಾಹಿ ಸಂಕೇತದಂತೆ ಆಚರಿಸಲಾಗುತ್ತಿದ್ದ "ಹಿಂದಿ ಸಪ್ತಾಹ" ಅನ್ನುವ ಒಕ್ಕೂಟ ವಿರೋಧಿ, ಜನವಿರೋಧಿ ಆಚರಣೆಯ ಸಮಯವನ್ನು ಹಿಂದಿಹೇರಿಕೆ ವಿರೋಧಿ ಸಪ್ತಾಹವೆಂದು ಆಚರಿಸುತ್ತ ಜಾಗೃತಿ ಅಭಿಯಾನವನ್ನು ನಡೆಸುತ್ತ ಬಂದಿದ್ದೇವೆ. 2011ರಲ್ಲಿ ಭಾರತದ ಭಾಷಾನೀತಿಯ ಬಗ್ಗೆ ಸಮಗ್ರವಾದ ಸಂಶೋಧನೆ ಮಾಡುವ ಮೂಲಕ "ಹಿಂದಿ ಹೇರಿಕೆ - ಮೂರುಮಂತ್ರ, ನೂರು ತಂತ್ರ" ಅನ್ನುವ ಪುಸ್ತಕವನ್ನು ಹೊರತಂದು ಹಿಂದಿಹೇರಿಕೆಯ ತೊಡಕುಗಳನ್ನು ಜನರ ಮುಂದಿಟ್ಟೆವು. ಆ ಪುಸ್ತಕಕ್ಕೆ ವ್ಯಾಪಕ ಪ್ರತಿಕ್ರಿಯೆಯೂ ವ್ಯಕ್ತವಾಯಿತು. ಇದೇ ಹೊತ್ತಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಮೆಟ್ರೋ ನಗರ ಸಾರಿಗೆ ರೈಲು ವ್ಯವಸ್ಥೆ ಅನಗತ್ಯವಾಗಿ ಹಿಂದಿ ಬಳಸಿ ರಾಜ್ಯಸರ್ಕಾರದ ದ್ವಿಭಾಷಾ ನೀತಿಯನ್ನು ಉಲ್ಲಂಘಿಸಿದಾಗ ಅದರ ವಿರುದ್ದ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿ ಕಳೆದ ಒಂದುವರೆ ವರ್ಷದಿಂದಲೂ ಯಾವ ಮಾನದಂಡದ ಮೇಲೆ ಹಿಂದಿ ಹೇರಿಕೆ ಮಾಡಲಾಗಿದೆ ಅನ್ನುವುದನ್ನು ಪ್ರಶ್ನಿಸಿದ್ದೇವೆ. ಈ ಪ್ರಕರಣ ಇನ್ನು ವಿಚಾರಣೆಯಲ್ಲಿದೆ. ಮುಂದೆ 2012ರಲ್ಲಿ ಸಹಿ ಸಂಗ್ರಹ ಅಭಿಯಾನವೊಂದನ್ನು ಮಾಡಿ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಭಾರತದ ಭಾಷಾ ನೀತಿ ಬದಲಾಯಿಸುವಂತೆ ಮನವಿ ಸಲ್ಲಿಸಿದೆವು.
ಕಳೆದವರ್ಷ ಬಿಜಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಒಂದು ಪ್ರಮುಖವಾದ ನಿರ್ಣಯದಲ್ಲಿ ಸಂವಿಧಾನದ ೩೪೩ನೇ ವಿಧಿಯಿಂದ ೩೫೧ನೇ ವಿಧಿಯಲ್ಲಿ ಹೇಳಲಾಗಿರುವ ಹುಳುಕಿನ ಭಾಷಾನೀತಿಯನ್ನು ಕೈಬಿಟ್ಟು,  ಸರ್ಕಾರಿ ಪ್ರಾಯೋಜಿತವಾಗಿರುವ "ಹಿಂದೀಹೇರಿಕೆ"ಯನ್ನು ನಿಲ್ಲಿಸಿ, ಕನ್ನಡವೂ ಸೇರಿದಂತೆ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ನೀಡುವ, ಭಾರತದ ಆಡಳಿತ ಭಾಷೆಯನ್ನಾಗಿಸುವ ಭಾಷಾನೀತಿಯೊಂದನ್ನು ಕೇಂದ್ರಸರ್ಕಾರ ರೂಪಿಸಬೇಕು ಎಂಬುದಾಗಿದೆ.

ಈ ವರ್ಷ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಒಂದು ಸಹಿ ಸಂಗ್ರಹ ಅಭಿಯಾನವೊಂದನ್ನು ಮಾಡಿ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನವಿರುವ ಹೊಸ ಭಾಷಾನೀತಿ ರೂಪಿಸಿ ಎಂದು ಕರ್ನಾಟಕ ಸರ್ಕಾರದ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಕೆಲಸ ಮಾಡುತ್ತಿದ್ದೇವೆ. ಮುಂದಿನವರ್ಷ ಹೊಸ ಸಂಸತ್ತು ಅಸ್ತಿತ್ವಕ್ಕೆ ಬಂದ ನಂತರ ಈ ಮನವಿಯನ್ನು ಎಲ್ಲ ಸಂಸದರಿಗೂ ಮಾಡುವ ಯೋಚನೆ ಹೊಂದಿದ್ದೇವೆ. ಹಾಗೆಯೇ ಕರ್ನಾಟಕದ ಸಂಸದರ ಮೂಲಕ ಭಾಷಾನೀತಿ ಬದಲಾವಣೆಗೆ ಖಾಸಗಿ ಸದಸ್ಯರ ಮಸೂದೆಯೊಂದನ್ನು (private member bill) ಮಂಡಿಸುವತ್ತಲೂ ಕೆಲಸ ಮಾಡಲಿದ್ದೇವೆ. ಪ್ರಜಾಪ್ರಭುತ್ವ, ಸಂವಿಧಾನ ಕೊಟ್ಟಿರುವ ಎಲ್ಲ ಅಸ್ತ್ರಗಳನ್ನು ಬಳಸಿ ಬದಲಾವಣೆ ತಂದುಕೊಳ್ಳುವತ್ತ ನಿರಂತರವಾಗಿ ಕೆಲಸ ಮಾಡುವ ಬದ್ಧತೆ ಬನವಾಸಿ ಬಳಗಕ್ಕಿದೆ. ಯಾಕೆಂದರೆ ಈ ಬದಲಾವಣೆ ಸಮಯ ತೆಗೆದುಕೊಳ್ಳುವಂತದ್ದು ಮತ್ತು ಅದಕ್ಕೆ ನಿರಂತರವಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುವುದೊಂದೇ ಹಾದಿಯಾಗಿದೆ. ನಿಮ್ಮ ಬೆಂಬಲ ಎಂದಿನಂತಿರಲಿ.

ಈ ಪಿಟಿಷನ್ನಿಗೆ ಸಹಿ ಹಾಕಲು ಈ ಕೊಂಡಿಯನ್ನೊತ್ತಿರಿ: http://chn.ge/17S72rs

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails