ಕನ್ನಡದಲ್ಲಿ ಮಾಹಿತಿ - ಇದಕ್ಕುಂಟೇ ಸರ್ಕಾರಿ ನಿಯಮ?


ನಾವು ಪ್ರತಿದಿನ ಬಳಸುವ ವಸ್ತುಗಳ ಮೇಲೆ ಕನ್ನಡದಲ್ಲಿ ಮಾಹಿತಿ ಇರಬೇಕು ಎನ್ನುವುದು ಕನ್ನಡ ಗ್ರಾಹಕರ ಕೂಗಾಗಿದ್ದು ಇದೊಂದು ಅತ್ಯಂತ ಸಹಜವಾದ ಬೇಡಿಕೆಯಾಗಿದೆ. ವಾಸ್ತವದಲ್ಲಿ ಪರಿಸ್ಥಿತಿ ಹೀಗಿದೆಯೇ ಎಂದು ನೋಡಿದರೆ ನಿರಾಸೆಯಾಗುತ್ತದೆ. ಎಷ್ಟೋ ಬಾರಿ ನಾವು ಬಳಸುವ, ನಮ್ಮೂರಿನಲ್ಲಿಯೇ ಕೊಳ್ಳಲಾದ ವಸ್ತುಗಳ ಮೇಲೂ ಅವುಗಳ ಹೆಸರು, ಬಳಕೆಯ ಮಾಹಿತಿಗಳು ಕನ್ನಡದಲ್ಲಿ ಇರುವುದಿಲ್ಲ. ಹೀಗೆ ಇರಬೇಕು ಎನ್ನಲು ಯಾವುದಾದರೋ ಕಾಯ್ದೆ ಕಾನೂನುಗಳಿವೆಯೇ? ಸರ್ಕಾರ ಈ ನಿಟ್ಟಿನಲ್ಲಿ ಯಾವುದಾದರೋ ನಿಯಮವನ್ನು ರೂಪಿಸಿದೆಯೇ? ಇಂಥಾ ನಿಯಮಗಳಿದ್ದೂ ಅದನ್ನು ಉಲ್ಲಂಘಿಸಲಾಗುತ್ತಿದೆಯೇ? ಈ ಎಲ್ಲವುಗಳ ಬಗ್ಗೆ ಸಂಬಂಧಿಸಿದವರಿಂದ ಮಾಹಿತಿಯನ್ನು ಕೋರಿ ಓದುಗರೊಬ್ಬರು ಅರ್ಜಿಯನ್ನು ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಕೇಳಿದ ಪಶ್ನೆಗಳು ಹೀಗಿವೆ: 

೧. ಕರ್ನಾಟಕ ರಾಜ್ಯಸರ್ಕಾರವು, ಕರ್ನಾಟಕ ರಾಜ್ಯದಲ್ಲಿ ಮಾರಾಟವಾಗಲ್ಪಡುವ ಯಾವುದೇ ವಸ್ತು ಅಥವಾ ಉತ್ಪನ್ನಗಳ ಮೇಲೆ, ಅವುಗಳ ಹೆಸರನ್ನು ಯಾವ ಭಾಷೆಯಲ್ಲಿ ಮುದ್ರಿಸಿರಬೇಕು ಎಂಬುದಕ್ಕೆ ವಿಧಿಸಿರುವ ನಿಯಮ/ಕಾನೂನುಗಳೇನು?
೨. ಕರ್ನಾಟಕ ರಾಜ್ಯಸರ್ಕಾರವು, ಕರ್ನಾಟಕ ರಾಜ್ಯದಲ್ಲಿ ಮಾರಾಟವಾಗಲ್ಪಡುವ ಯಾವುದೇ ವಸ್ತು ಅಥವಾ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು, ಆ ಉತ್ಪನ್ನದ ಮೇಲೆ ಅಚ್ಚು ಹಾಕಿಸಬೇಕು ಎಂಬುದನ್ನೇನಾದರೂ ಕಡ್ಡಾಯ ಮಾಡಿದೆಯೇ? ಕಡ್ಡಾಯ ಮಾಡಿದ್ದ ಪಕ್ಷದಲ್ಲಿ, ಯಾವ ಭಾಷೆಯಲ್ಲಿ ಆ ಮಾಹಿತಿ ಇರಬೇಕು ಎಂಬುದಕ್ಕೆ ವಿಧಿಸಿರುವ ನಿಯಮ/ ಕಾನೂನುಗಳೇನು?
೩. ಒಂದು ಪಕ್ಷ, ಪ್ರಶ್ನೆ ೧ ಮತ್ತು ೨ ರಲ್ಲಿ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ, ನಮ್ಮ ರಾಜ್ಯದಲ್ಲಿ ಯಾವುದೇ ನಿಯಮ/ಕಾನೂನು ಇಲ್ಲದೆ ಇದ್ದರೆ, ಉತ್ಪನ್ನಗಾರರು ಉತ್ಪನ್ನಗಳ ಮೇಲೆ, ಅವುಗಳ ಹೆಸರನ್ನು ಮತ್ತು ಅವುಗಳ ಬಗ್ಗೆ ಮಾಹಿತಿಯನ್ನು ಯಾವ ನಿಯಮ/ಕಾನೂನಿಗೆ ಒಳಪಟ್ಟು ಮುದ್ರಿಸಬಹುದಾಗಿದೆ?
೪. ಒಂದು ಪಕ್ಷ, ಪ್ರಶ್ನೆ ೧ ಮತ್ತು ೨ರಲ್ಲಿ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ನಮ್ಮ ರಾಜ್ಯದಲ್ಲಿ ಯಾವುದೇ ನಿಯಮ/ಕಾನೂನು ಇಲ್ಲದೆ ಇದ್ದರೆ, ಉತ್ಪನ್ನಗಾರರು ಉತ್ಪನ್ನಗಳ ಹೆಸರನ್ನು ಮತ್ತು ಉತ್ಪನ್ನಗಳ ಮಾಹಿತಿಯನ್ನು ಮುದ್ರಿಸುವುದು ಅವರ ವಿವೇಚನೆಗೆ ಬಿಟ್ಟದ್ದು ಎಂದು ಕರ್ನಾಟಕ ರಾಜ್ಯ ಸರ್ಕಾರ ಭಾವಿಸುತ್ತದೆಯೇ?

ಈ ಪ್ರಶ್ನೆಗಳಿಗೆ ಸಂಬಂಧಪಟ್ಟವರು ಏನುತ್ತರ ನೀಡುವರೋ ಎಂಬುದು ಕುತೂಹಲಕಾರಿಯಾಗಿದೆ. ನಮ್ಮ ನಾಡಿನಲ್ಲಿ ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಮೇಲೂ ಕನ್ನಡದಲ್ಲಿ ಹೆಸರು ಮಾಹಿತಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಸದರಿ ಮಾಹಿತಿ ಕೋರಿಕೆ ಅರ್ಜಿ ಒಂದು ಮೆಟ್ಟಿಲಾಗಿದ್ದು ಇದರಲ್ಲಿ ಯಶಸ್ಸು ಸಿಗಲೆಂಬುದು ಹಾರೈಕೆ.

ಕಡೆಗಾನು ಹುಡಿಯಾಗಿ: ಜಿ ಎಸ್ ಶಿವರುದ್ರಪ್ಪ

(ಫೋಟೋಕೃಪೆ: http://kannada.yahoo.com/)

ಬೇಡಿಕೆ


ನಿನ್ನಡಿಯ ಹುಡಿ ನನ್ನ
ಮುಡಿಯ ಸಿಂಗರಿಸಿರಲಿ,
ಕಡೆಗಾನು ಹುಡಿಯಾಗಿ
ನಿನ್ನಡಿಗೆ ಸಲಲಿ.

ನಿನ್ನೊಲವಿನಂಬುಧಿಗೆ
ನನ್ನೆದೆಯ ಕರೆಯತೊರೆ
ಸಂತತವು ಹೊನಲಾಗಿ
ಹರಿಯುತಿರಲಿ.

ನಿನ್ನ ಕರುಣೆಯ ಕಿರಣ
ನಾನೆಂಬ ಹಿರಿಮಂಜ
ಕರಗಿಸುತ ಹೊಳೆ ಹೊಳೆದು
ಬೆಳಗುತಿರಲಿ.

ನನ್ನ ದೋಷಗಳೆಲ್ಲ
ನಿನ್ನ ಕ್ಷಮೆಯಾಯುಧದಿ
ಸಿಡಿಸಿಡಿದು ಹುಡಿಯಾಗಿ
ಹೋಗುತಿರಲಿ.

ಮುನ್ನ ಗುಣಗಳನುಳಿದು
ನಿನ್ನ ಗುಣದಲಿ ಬೆರೆದು
ಹೊಳೆ ಕಡಲಿಗಿಳಿವಂತೆ
ನಾನಳಿಯಲಿ.

- ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ

ಪುಸ್ತಕ: ಸಮಗ್ರ ಕಾವ್ಯ
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕೃಪೆ: ಕಣಜ 

ರಾಷ್ಟ್ರಕವಿ ಡಾ. ಜಿ ಎಸ್ ಶಿವರುದ್ರಪ್ಪನವರ ಈ ಕವಿತೆ ಅವರ ಕೊನೆಯಾಸೆಯಂತೆ ತೋರುತ್ತಿದೆ! ಇವರಿಗೆ ನಮ್ಮ ಮನದುಂಬಿದ ಕಂಬನಿಗಳು. ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ..

ಶಾಲೆಯಲ್ಲಿ ಹಿಂದೀ ಕಲಿಕೆ ಕಡ್ಡಾಯವೇನಲ್ಲ!


ರಾಜ್ಯದ ಮಾಧ್ಯಮಿಕ ಶಾಲೆಗಳಲ್ಲಿ ಕನ್ನಡ, ಇಂಗ್ಲೀಶ್ ಜೊತೆಯಲ್ಲಿ ಹಿಂದೀಯನ್ನು ಕಡ್ಡಾಯವಾಗಿ ಕಲಿಸಬೇಕೆಂಬ ನೀತಿ ಇದೆಯೇನೋ ಎನ್ನುವಂತೆ ಕಾಣುತ್ತಿದ್ದು, ನಿಜಕ್ಕೂ ಕರ್ನಾಟಕ ಪ್ರಾಥಮಿಕ ಶಿಕ್ಷಣ ಇಲಾಖೆಯು ಇಂಥದ್ದೊಂದು ನೀತಿಯನ್ನು ಅಳವಡಿಸಿಕೊಂಡಿದೆಯೋ ಇಲ್ಲವೋ ಎನ್ನುವುದು ತಿಳಿದುಕೊಳ್ಳಬೇಕಾದ ವಿಷಯವಾಗಿದೆ. ೧೯೮೨ಕ್ಕೆ ಮುನ್ನ ಕರ್ನಾಟಕದ ಶಾಲೆಗಳಲ್ಲಿ ಹಿಂದೀ ಕಲಿಕೆ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಬೇಕಾದ ವಿಷಯವೇ ಆಗಿರಲಿಲ್ಲಾ. ಮುಂದೆ ಇದು ಐವತ್ತರ ಅಂಕೆಯ ಪರೀಕ್ಷೆಯ ವಿಷಯವಾದರೂ ಪಾಸಾಗಲು ೧೩ ಅಂಕ ಬಂದರೆ ಸಾಕು ಎಂದಾಗಿದ್ದು ಮುಂದೆ ನೂರಂಕೆಯ ಕಡ್ಡಾಯವಾಗಿ ಪಾಸಾಗಲೇ ಬೇಕಾದ ವಿಷಯವಾಗಿ ಬದಲಾಗಿದೆಯೆಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕಾಗಿದೆ. ಹಾಗಾಗಿದ್ದಲ್ಲಿ ಈ ಬದಲಾವಣೆಗೆ ಕಾರಣವೇನು? ಕರ್ನಾಟಕದ ಶಾಲಾಕಲಿಕೆಯಲ್ಲಿ ಅಸಲಿಗೆ ಇರುವ ನೀತಿಯೆಂಥದ್ದು? ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಗೆಳೆಯರೊಬ್ಬರು ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಮಾಹಿತಿಯನ್ನು ಕೋರಿ "ಮಾಹಿತಿ ಹಕ್ಕು ಕಾಯ್ದೆ:೨೦೦೫"ರ ಅನ್ವಯ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಗೆ ಉತ್ತರವಾಗಿ ಶಿಕ್ಷಣ ಇಲಾಖೆಯು ಕರ್ನಾಟಕ ರಾಜ್ಯಸರ್ಕಾರದ ಶಿಕ್ಷಣ ನೀತಿಯನ್ನು ಕುರಿತ ರಾಜ್ಯಪತ್ರವನ್ನು ಹಂಚಿಕೊಂಡಿದೆ. ಈ ರಾಜ್ಯಪತ್ರದ ಸಂಪೂರ್ಣ ರೂಪ ಇಂತಿದೆ:

ರಾಜ್ಯಪತ್ರ
ವಿಷಯ: ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅನುಸರಿಸಬೇಕಾದ ಭಾಷಾ ನೀತಿ ಅನುಷ್ಠಾನದ ಬಗ್ಗೆ

ಓದಲಾಗಿದೆ. ದಿನಾ೦ಕ ೩೦ನೇ ಏಪ್ರಿಲ್ ೮೨ರ ಇಡಿ ೧೧೨ ಎಸ್ ಹೆಚ್ ೭೯, ಕ್ರಮಾ೦ಕದ ಸರ್ಕಾರಿ ಆದೇಶ.

                    . ದಿನಾ೦ಕ ೧೯ನೇ ಜೂನ್ ೮೯ರ ಇಡಿ ೮೭ ಪ್ರೌಶೇಭಾ ೮೮, ಕ್ರಮಾ೦ಕದ ಸರ್ಕಾರಿ ಆದೇಶ.
                    . ದಿನಾ೦ಕ ೨೮ನೇ ಏಪ್ರಿಲ್ ೯೨ರ ಇಡಿ ೨೦೫ ಪಿಜಿಸಿ ೯೧, ಕ್ರಮಾ೦ಕದ ಸರ್ಕಾರಿ ಆದೇಶ.
                    . ದಿನಾ೦ಕ ೨೪ನೇ ಜೂನ್ ೯೨ರ ಇಡಿ ೨೦೫ ಪಿಜಿಸಿ ೯೧, ಕ್ರಮಾ೦ಕದ ಸರ್ಕಾರಿ ಆದೇಶ.
                    . ದಿನಾ೦ಕ ೨೦ನೇ ಜುಲೈ ೯೨ರ ಇಡಿ ೧೧೩ ಎಸ್ ಹೆಚ್ ೭೯ಕ್ರಮಾ೦ಕದ ಸರ್ಕಾರಿ ಆದೇಶ.
                    . ಸರ್ವೋಚ್ಛ ನ್ಯಾಯಾಲಯದ ಅರ್ಜಿ ಸ೦ಖ್ಯೆ : ೫೩೬/ ದರ ದಿನಾ೦ಕ ೮ನೇ ಡಿಸ೦ಬರ್ ೯೩ರ ತೀರ್ಪು
                    . ದಿನಾ೦ಕ ೨೨ನೇ ಏಪ್ರಿಲ್ ೧೯೯೪ರ ಇಡಿ ೨೮ ಪಿಜಿಸಿ ೯೪, ಕ್ರಮಾ೦ಕದ ಸರ್ಕಾರಿ ಆದೇಶ.

ಪ್ರಸ್ತಾವನೆ: ಪ್ರೌಢಶಾಲಾ ಹ೦ತದಲ್ಲಿ ಕನ್ನಡ ಅಥವಾ ವಿದ್ಯಾರ್ಥಿಯ ಮಾತೃ ಭಾಷೆಯು ಪ್ರಥಮ ಭಾಷೆಯಾಗಿರಬೇಕೆ೦ದು ದಿನಾ೦ಕ ೩೦ನೇ ಏಪ್ರಿಲ್ ೧೯೮೨ರ ಆದೇಶದಲ್ಲಿ ಸರ್ಕಾರವು ನಿಗದಿಪಡಿಸಿತ್ತು. ಇದರ ಜೊತೆಗೆ ವಿದ್ಯಾರ್ಥಿಯು ಆದೇಶದಲ್ಲಿ ನಮೂದಿಸಿರುವ ೧೦ ಭಾಷೆಗಳ ಪೈಕಿ ಎರಡರಲ್ಲಿ ಉತ್ತೀರ್ಣರಾಗಬೇಕಾಗಿತ್ತು. ಸರ್ಕಾರವು ಆದೇಶವನ್ನು ಪುನರ್ ಪರಿಶೀಲಿಸಿ, ದಿನಾ೦ಕ ೨೦ನೇ ಜುಲೈ ೮೨ರಲ್ಲಿ ಪರಿಷ್ಕೃತ ಆದೇಶ ಹೊರಡಿಸಿ ೧೯೮೭-೮೮ನೇ ಶೈಕ್ಷಣಿಕ ವರ್ಷದಿ೦ದ ಪ್ರೌಢಶಾಲಾ ಹ೦ತದಲ್ಲಿ ಕನ್ನಡವೇ ಏಕೈಕ ಪ್ರಥಮ ಭಾಷೆಯಾಗತಕ್ಕದ್ದೆ೦ದು ಹಾಗೂ ಆದೇಶದಲ್ಲಿ ತಿಳಿಸಿರುವ೦ತೆ ಕನ್ನಡವು ಸೇರಿದ೦ತೆ ೧೦ ಭಾಷೆಗಳ ಪೈಕಿ ಇತರ ಭಾಷೆಗಳನ್ನು ವಿದ್ಯಾರ್ಥಿಗಳು ಕಲಿಕೆಗಾಗಿ ಆಯ್ಕೆ ಮಾಡಿಕೊಳ್ಳಬಹುದೆ೦ದು ಆದೇಶಿಸಿತ್ತು. ಕನ್ನಡೇತರ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣದ ಪ್ರಥಮ ವರ್ಷದಿ೦ದಲೇ ಕನ್ನಡ ಭೋಧನವು ಕಡ್ಡಾಯವಾಗತಕ್ಕದ್ದೆ೦ದು ಸಹ ಆದೇಶದಲ್ಲಿ ನಿಗದಿಪಡಿಸಲಾಗಿತ್ತು.


ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಆದೇಶವನ್ನು ಪ್ರಶ್ನಿಸಲಾಗಿ ಉಚ್ಛ ನ್ಯಾಯಾಲಯವು ದಿನಾ೦ಕ ೨೭ನೇ ಜನವರಿ ೧೯೮೪ರ ತೀರ್ಪಿನಲ್ಲಿ ದಿನಾ೦ಕ ೨೦ನೇ ಜುಲೈ ೧೯೪೨ರ ಸರ್ಕಾರಿ ಆದೇಶವು ಭಾರತ ಸ೦ವಿಧಾನದ ಅನುಚ್ಛೇದ ೧೪, ೨೯ () ಮತ್ತು ೩೦() ವಿಧಿಗಳ ಉಲ್ಲ೦ಘನೆಯಾಗುವುದರಿ೦ದ ಅದನ್ನು ಅನೂರ್ಜಿತವೆ೦ದು ಘೋಷಿಸಿತ್ತು. ಆದರೂ ನ್ಯಾಯಲಯವು ಪ್ರಾಥಮಿಕ ಶಿಕ್ಷಣದ ಸಾಮಾನ್ಯ ಮಾದರಿಯ೦ತೆ ಮಾತೃ ಭಾಷೆಯ ಜೊತೆಗೆ ಮತ್ತೊ೦ದು ಭಾಷೆಯ ಕಲಿಕೆಯನ್ನು ಕಡ್ದಾಯ ಗೊಳಿಸಿದ ಪ್ರಾಥಮಿಕ ತರಗತಿಯಿ೦ದ ಎರಡು ಭಾಷೆಗಳ ಪೈಕಿ ಒ೦ದಾಗಿ ಕನ್ನಡವನ್ನು ಬೋಧಿಸಲು ಮತ್ತು ಪ್ರೌಢಶಾಲಾ ಹ೦ತದಲ್ಲಿ ಕನ್ನಡವನ್ನು ಮೂರು ಭಾಷೆಗಳ ಪೈಕಿ ಒ೦ದು ಕಡ್ಡಾಯ ಭಾಷೆಯನ್ನಾಗಿ ಅಳವಡಿಸಲು ಸೂಕ್ತ ಆದೇಶ ಅಥವ ನಿಯಮವನ್ನು ರೂಪಿಸಿ ಅದನ್ನು ಕನ್ನಡ ಮಾತೃ ಭಾಷೆಯಾದ ಎಲ್ಲರಿಗೂ ಮತ್ತು ರಾಜ್ಯದ ಶಾಶ್ವತ ನಿವಾಸಿಗಳಾದ ಮತ್ತು ಶಾಶ್ವತ ನಿವಾಸಿಗಳಾಗುವ ಭಾಷಾ ಅಲ್ಪ ಸ೦ಖ್ಯಾತರಿಗೂ ಅನ್ವಯಿಸಲು ರಾಜ್ಯ ಸರ್ಕಾರಕ್ಕೆ ಸ್ವತ೦ತ್ರ ನೀಡಿತ್ತು.


ಉಚ್ಛ ನ್ಯಾಯಾಲಯದ ಆದೇಶದ ವಿರುದ್ಧ ರಾಜ್ಯ ಸರ್ಕಾರವು ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದರೂ ಸವೋಚ್ಚ ನ್ಯಾಯಾಲಯದ ತೀರ್ಪನ್ನು ಕಾಯ್ದಿರಿಸಿ ರಾಜ್ಯ ಸರ್ಕಾರವು ದಿನಾ೦ಕ ೧೯ನೇ ಜೂನ್ ೧೯೮೯ರ ಆದೇಶದಲ್ಲಿ ಭಾಷಾ ನೀತಿಯನ್ನು ನಿರೂಪಿಸಿ ಆದೇಶ ಹೊರಡಿಸಿತ್ತು. ಆದೇಶದ ಪ್ರಕಾರ ರಿ೦ದ ೪ನೇ ತರಗತಿಯವರೆಗೆ ಮಕ್ಕಳು ಅಲ್ಲಿ ತಿಳಿಸಿದ ಭಾಷೆಗಳ (ಕನ್ನಡ ಮತ್ತು ಇ೦ಗ್ಲೀಶ್ ಸೇರಿದ೦ತೆ) ಪೈಕಿ ಒ೦ದು ಭಾಷೆಯನ್ನು ಮತ್ರ ಕಡ್ಡಾಯವಾಗಿ ಕಲಿಯಬೇಕು. ರಿ೦ದ ೭ನೇ ತರಗತಿಯ ವರೆಗೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಅಭ್ಯಾಸ ಮಾಡದ ವಿದ್ಯಾಥಿಗಳಿಗೆ ಕನ್ನಡವನ್ನು ಕಲಿಸುವುದು. ಆದರೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಲ್ಲ ಮತ್ತು ರಿ೦ದ ೧೦ನೇ ತರಗತಿವರಗೆ ಮೂರು ಭಾಷೆಗಳ ಪೈಕಿ ಒ೦ದು ಭಾಷಾ ವಿಷಯವನ್ನಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು.


ಮಧ್ಯೆ ಸರ್ಕಾರವು ಅನಧಿಕೃತ ಆ೦ಗ್ಲ ಮಾಧ್ಯಮ ಶಾಲೆಗಳ ಸಮಸ್ಯೆ ಮತ್ತು ಪ್ರಾಥಮಿಕ ಹ೦ತದಲ್ಲಿ ಇ೦ಗ್ಲಿಶ್ ಮಾಧ್ಯಮ ಹೊ೦ದುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಡಾ| ಹೆಚ್ ನರಸಿ೦ಹಯ್ಯನವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಸಮಿತಿಯ ವರದಿಯನ್ನು ಪರಿಗಣಿಸಿ, ದಿನಾ೦ಕ ೧೯ನೇ ಜೂನ್ ೧೯೮೯ರ ಆದೇಶದಲ್ಲಿ ಪ್ರಕಟಪಡಿಸಿದ ತಾತ್ಕಾಲಿಕ ಭಾಷಾ ನೀತಿಯನ್ನು ಗಮನದಲ್ಲಿ ಇರಿಸಿ ಶಿಕ್ಷಣ ಮಾಧ್ಯಮಕ್ಕೆ ಸ೦ಬ೦ಧವಾಗಿ ಇ೦ಗ್ಲಿಶ್ ಮಾಧ್ಯಮ ಶಾಲೆಗಳ ಬಗೆಗಿನ ನೀತಿಯನ್ನು ದಿನಾ೦ಕ ೨೮ನೇ ಏಪ್ರಿಲ್ ೧೯೯೨ ಮತ್ತು ೨೪ನೇ ಜೂನ್ ೧೯೯೨ರ ಆದೇಶದಲ್ಲಿ ಸರ್ಕಾರವು ತಿಳಿಯಪಡಿಸಿತ್ತು. ಪ್ರಾಥಮಿಕ ಶಾಲೆಗಳ ಶಿಕ್ಷಣ ಸ೦ಹಿತೆಯ ನಿಯಮ ೧೨ ಉಪನಿಯಮ () ಪರ೦ತುಕದ ಕಲು () ರಿ೦ದ () ನಿಬ೦ಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರುವ ಅನಧಿಕೃತ ಆ೦ಗ್ಲ ಮಾಧ್ಯಮ ಶಾಲೆಗಳಿಗೆ ಸರ್ಕಾರ ಅನುಮತಿ ನೀಡಬಹುದೆ೦ದು ಹಾಗೂ ಆ೦ಗ್ಲ ಮಾಧ್ಯಮ ಶಾಲೆಯ ಮ೦ಜೂರಾತಿಗೆ ಅರ್ಹವಲ್ಲದ ಶಾಲೆಗಳು ಅನುದಾನ ಸ೦ಹಿತೆಯ ಇತರೆ ನಿಬ೦ಧನೆಗಳನ್ನು ಪೂರೈಸಿದ್ದಲ್ಲಿ ಕನ್ನಡ ಅಥವಾ ಇತರ ಭಾಷಾ ಮಾಧ್ಯಮ ಶಾಲೆಯನ್ನು ಹೊ೦ದಲು ಅನುಮತಿ ನೀಡಬಹುದೆ೦ದು ಮತ್ತು ೫ರಿ೦ದ ಮು೦ದಿನ ತರಗತಿಗಳಲ್ಲಿ ವಿದ್ಯಾರ್ಥಿಗಳು ಇತರೆ ಯಾವುದೇ ಭಾಷಾ ಮಾಧ್ಯಮಕ್ಕೆ ಬದಲಾವಣೆ ಪಡೆಯಬಹುದೆ೦ದು ಆದೇಶದಲ್ಲಿ ನಿಗದಿಪಡಿಸಲಾಗಿತ್ತು.


ಸರ್ವೋಚ್ಛ ನ್ಯಾಯಾಲಯವು ದಿನಾ೦ಕ ೮ನೇ ಡಿಸ೦ಬರ್ ೧೯೯೩ರ ತೀರ್ಪನಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ಆರ್ಜಿತವನ್ನು ಮತ್ತು ಉಚ್ಛ ನ್ಯಾಯಾಲಯದ ಆದೇಶಾನುಸಾರ ಹೊರಡಿಸಿದ ದಿನಾ೦ಕ ೧೯ನೇ ಜೂನ್ ೧೯೮೯ರ ಸರ್ಕಾರಿ ಆದೇಶದ ಸಿ೦ಧುತ್ವವನ್ನು ಎತ್ತಿ ಹಿಡಿದಿಡೆ. ಮು೦ದುವರೆದು ಭಾಷಾ ನೀತಿಯನ್ನು ಹೇಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆ೦ದು ರಾಜ್ಯಕ್ಕೆ ತಿಳಿದಿದೆ ಎ೦ದು ಹಾಗೂ ಇದರಲ್ಲಿ ನ್ಯಾಯಾಲಯವು ಮಧ್ಯೆ ಪ್ರವೇಶಿಸಬಾರದು ಎ೦ದು ತೀರ್ಪಿತ್ತಿದೆ.


ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅನುಸರಿಸಬೇಕಾದ ಭಾಷಾ ನೀತಿಯನ್ನು ಮತ್ತು ಪ್ರಾಥಮಿಕ ಹ೦ತದಲ್ಲಿ ಅನುಸರಿಸಬೇಕಾದ ಶಿಕ್ಷಣ ಮಾಧ್ಯಮದ ನೀತಿಯನ್ನು ಕುರಿತು ಸಮಗ್ರವಾದ ಆದೇಶ ಹೊರಡಿಸುವ ಅಗತ್ಯವಿದೆ. ಅದರ೦ತೆ ದಿನಾ೦ಕ ೨೨ನೇ ಏಪ್ರಿಲ್ ೧೯೯೪ರ ಆದೇಶದಲ್ಲಿ ಪರಿಷ್ಕೃತ ಭಾಷಾನೀತಿಯನ್ನು ಪ್ರಕಟಿಸಲಾಗಿತ್ತು. ಭಾಷಾ ನೀತಿಯ ಕೆಲವು ಅ೦ಶಗಳು ದಿನಾ೦ಕ ೧೯ನೇ ಜೂನ್ ೧೯೮೯ಕ್ಕೆ ಮು೦ಚೆ ಪ್ರಾರ೦ಭಿಸಿದ ಶಾಲೆಗಳಿಗೆ ಅನ್ವಯಿಸುವುದಿಲ್ಲವೆ೦ದು ಆದೇಶದಲ್ಲಿ ತಿಳಿಸಲಾಗಿತ್ತು. ನಿರ್ಬ೦ಧವನ್ನು ತೆಗೆದುಹಾಕಿ ಭಾಷಾ ನೀತಿಯನ್ನು ಎಲ್ಲಾ ಅ೦ಗೀಕೃತ ಶಾಲೆಗಳಿಗೂ ಅನ್ವಯಿಸುವ ಅಗತ್ಯವಿದೆಯೆ೦ದು ಸರ್ಕಾರ ಭಾವಿಸಿದೆ. ಆದುದರಿ೦ದ ಆದೇಶ.


ಸರ್ಕಾರಿ ಆದೇಶ ಸ೦ಖ್ಯೆ : ಇಡಿ ೨೮ ಪಿಜಿಸಿ ೯೪, ಬೆ೦ಗಳೂರು , ದಿನಾ೦ಕ :೨೯ನೇ ಏಪ್ರಿಲ್ ೧೯೯೪

ವಿಷಯಕ್ಕೆ ಸ೦ಬ೦ಧಿಸಿದ ಹಿ೦ದಿನ ಎಲ್ಲಾ ಆದೇಶಗಳನ್ನು ಹಾಗು ದಿನಾ೦ಕ ೨೨ನೇ ಏಪ್ರಿಲ್ ೧೯೯೪ ಇಡಿ ೨೮ ಪಿಜಿಸಿ ೯೪ ಕ್ರಮಾ೦ಕದ ಆದೇಶವನ್ನು ರದ್ದು ಗೊಳಿಸಿ, ದಿನಾ೦ಕ ೮ನೇ ಡಿಸ೦ಬರ್ ೧೯೯೩ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಧಾರದ ಮೇರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ೧೯೯೪-೯೫ನೇ ಶೈಕ್ಷಣಿಕ ವರ್ಷದಿ೦ದ ಅನ್ವಯವಾಗುವ೦ತೆ ಅನುಸರಿಸಬೇಕಾದ ಭಾಷಾನೀತಿ ಕೆಳಕಡ೦ತೆ ಇರತಕ್ಕದ್ದೆ೦ದು ಸರ್ಕಾರ ಆದೇಶಿಸಿದೆ.

 ) ಸಾಮಾನ್ಯವಾಗಿ ಮಗುವಿನ ಮಾತೃ ಭಾಷೆಯೇ ಮಾಧ್ಯಮವಾಗಬೇಕೆ೦ದು ನಿರೇಕ್ಷೆ ಇರುವ ರಿ೦ದ ೪ನೇ ತರಗತಿಯವರೆಗೆ ಅನುಬ೦ಧ - ರಲ್ಲಿ ತಿಳಿಸಿರುವ ಭಾಷೆಗಳ ಪೈಕಿ ಒ೦ದು ಮಾತೃ ಭಾಷೆ ಅಥಾವಾ ಕನ್ನಡ ಮತ್ರ ಕಡ್ಡಾಯ ಭಾಷೆಯಾಗಿರುತ್ತದೆ.

) ೩ನೇ ತರಗತಿಯಿ೦ದ ಕನ್ನಡೇತರರಿಗೆ ಕನ್ನಡವು ಐಚ್ಛಿಕ ವಿಷಯವಾಗಿರುತ್ತದೆ. ಇದನ್ನು ಸ್ವಪ್ರೇರಣೆಯಿ೦ದ ಮಾತ್ರ ಕಲಿಸಲಾಗುವುದು ಮತ್ತು ಬೋಧನೆಯಿ೦ದ ಬೇರೆ ವಿಷಯಗಳ ಕಲಿಕೆ ಅಥವಾ ಶಾಲೆಯ ಎಲ್ಲಾ ವಿದ್ಯಾರ್ಥಿಗಳು  ಭಾಗವಹಿಸುವ ಶಾಲಾ ಚಟುವಟಿಕೆಗೆ ಯಾವುದೇ ಬಾಧಕವಾಗಬಾರದು. ವರ್ಷಾ೦ತ್ಯದಲ್ಲಿ ೩ನೇ ಮತ್ತು ೪ನೇ ತರಗತಿಯಲ್ಲಿ ಕನ್ನಡ ಭಾಷೆಗೆ ಯಾವುದೇ ಪರೀಕ್ಷೆ ಇರುವುದಿಲ್ಲ.


) ೫ನೇ ತರಗತಿಯಿ೦ದ ಅ೦ದರೆ ಸಾಮಾನ್ಯ ಪದ್ದತಿಯ೦ತೆ ದ್ವಿತೀಯ ಭಾಷೆಯನ್ನು ಕಲಿಸುವ ವ್ಯವಸ್ಥೆ ಎಲ್ಲಿದೆಯೋ ಅಲ್ಲಿ೦ದ ವಿದ್ಯಾರ್ಥಿ ಅನುಭ೦ದ - ರಲ್ಲಿ ತಿಳಿಸಿರುವ ಭಾಷೆಗಳಿ೦ದ ಆಯ್ಕೆ ಮಾಡಿದ ಪ್ರಥಮ ಭಾಷೆಯಾಗಿರದ ಭಾಷೆಯನ್ನು ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಬೇಕು. ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಅಭ್ಯಾಸ ಮಾಡದ ಮಗುವು ಕನ್ನಡವನ್ನು ದ್ವಿತಿಯ ಭಾಷೆಯಾಗಿ ಕಲಿಯಬೇಕು ಎ೦ಬ ಷರತ್ತಿಗೆ ಇದು ಒಳಪಟ್ಟಿದೆ.

  ೫ನೇ ತರಗತಿಯಿ೦ದ ತೃತೀಯ ಭಾಷೆಯನ್ನು ಕಲಿಯಲು ಅವಕಾಶ ಕಲ್ಪಿಸಲಾಗುವುದು. ತೃತೀಯ ಭಾಷೆಯು ವಿದ್ಯಾರ್ಥಿಯು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಿದ ಭಾಷೆಯಾಗಿರಬಾರದು. ವಿದ್ಯಾರ್ಥಿ ಅಭ್ಯಾಸ ಮಾಡಬಹುದಾದ ತೃತೀಯ ಭಾಷೆಯ ವಿವರವನ್ನು ಅನುಬ೦ಧ ೨ರಲ್ಲಿ ನೀಡಿದೆ.
  ತೃತೀಯ ಭಾಷೆಯ ತರಗತಿಗಳಿಗೆ ಹಾಜರಾಗುವುದು ಮತ್ತು ಪರೀಕ್ಷೆ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ತೃತೀಯ ಭಾಷೆಯ ಕಲಿಕೆಯನ್ನು ರಿ೦ದ ೭ನೇ ತರಗತಿಯವರೆಗೆ ಮು೦ದುವರಿಸುತ್ತಾರೆ. ಆದರೆ  ತೃತೀಯ ಭಾಷೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಲ್ಲ. ರಿ೦ದ ೭ನೇ ತರಗತಿಯಲ್ಲಿ ತೃತೀಯ ಭಾಷೆಯಲ್ಲಿ ಪಡೆಯುವ ಅ೦ಕಗಳ ಆಧಾರದ ಮೇಲೆ ರ್ಯಾ೦ಕ್, ದರ್ಜೆ ಇತ್ಯಾದಿಗಳಲ್ಲಿ ಹೆಚ್ಚಿನ ಸ್ಥಾನ ನೀಡಲಾಗುವುದಿಲ್ಲ.
   )   ಪ್ರೌಢಶಾಲಾ ಹ೦ತದಲ್ಲಿ ಅ೦ದರೆ ರಿ೦ದ ೧೦ ನೇ ತರಗತಿಯವರೆಗೆ ಮೂರು ಭಾಷೆಗಳನ್ನು ಕಲಿಸಲಾಗುವುದು. ಪ್ರಥಮ ಭಾಷೆಯು ೧೨೫ ಅ೦ಕಗಳನ್ನು, ದ್ವಿತೀಯ ಭಾಷೆಯು ೧೦೦ ಅ೦ಕಗಳನ್ನು ಮತ್ತು ತೃತೀಯ ಭಾಷೆಯು ೧೦೦ ಅ೦ಕಗಳನ್ನು ಹೊ೦ದಿರುವುದು. ಇವುಗಳ ಪೈಕಿ ಎರಡು  ಭಾಷೆಗಳಲ್ಲಿ ಉತ್ತೀರ್ಣರಾಗುವುದು ಕಡ್ಡಾಯ ಹಾಗೂ ಎರಡು ಭಾಷೆಗಳಲ್ಲಿ ಒ೦ದು ಕನ್ನಡ ಭಾಷೆಯಾಗಿರತಕ್ಕದ್ದು.
   ) ೧೦ನೇ ತರಗತಿಯ ಅ೦ತ್ಯದಲ್ಲಿ ದ್ವಿತೀಯ ಮತ್ತು ತೃತೀಯ ಭಾಷೆಯ ಕಲಿಕೆಯ ಮಟ್ಟವು ಭಾಷೆಗಳನ್ನು ಪ್ರಥಮ ಭಾಷೆಯಾಗಿ ವರ್ಷ ಅಭ್ಯಾಸ ಮಾಡಿದಾಗ ಗಳಿಸುವ ಮಟ್ಟಕ್ಕೆ ಸಮನಾಗಿರಬೇಕು.
   ) ಕನ್ನಡ ಮಾತೃ ಭಾಷೆಯಲ್ಲದ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ಮತ್ತು ಹಿ೦ದಿ  ಮಾತೃ ಭಾಷೆಯಲ್ಲದ ವಿದ್ಯಾರ್ಥಿಗಳಿಗೆ ಹಿ೦ದಿ ಭಾಷಾ ಪರೀಕ್ಷೆಯಲ್ಲಿ ಕೃಪಾ೦ಕ ನೀಡತಕ್ಕದ್ದು. ಭಾಷೆಗಳಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಅನುಕೂಲವಾಗುವ೦ತೆ ಗರಿಷ್ಠ ೧೫ ಅ೦ಕದವರೆಗೆ ಕೃಪಾ೦ಕ ನೀಡತಕ್ಕದ್ದು. ಸೌಲಭ್ಯವು ಆದೇಶ ಹೊರಡಿಸಿದ ದಿನಾ೦ಕದಿ೦ದ ೧೦ ವರ್ಷಗಳವರಗೆ ದೊರೆಯುವುದು.

) ೧೯೯೪-೯೫ ನೇ ಶೈಕ್ಷಣಿಕ ವರ್ಷದಿ೦ದ ರಾಜ್ಯ ಸರ್ಕಾರದಿ೦ದ ಅ೦ಗೀಕೃತವಾದ ಎಲ್ಲಾ ಶಾಲೆಗಳಲ್ಲಿ ರಿ೦ದ ೪ನೇ ತರಗತಿಯವರಗಿನ ಶಿಕ್ಷಣ ಮಾಧ್ಯಮವು ಮಾತೃ ಭಾಷೆ ಅಥವಾ ಕನ್ನಡ ಭಾಷೆಯೇ ಆಗತಕ್ಕದೆ೦ದು ಆದೇಶಿಸಲಾಗಿದೆ.


) ೧೯೯೪- ೯೫ ನೇ ಶೈಕ್ಷಣಿಕ ವರ್ಷದಲ್ಲಿ ನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಮಾತೃ ಭಾಷೆ ಅಥವಾ ಕನ್ನಡ ಭಾಷಾ ಮಾಧ್ಯಮದಲ್ಲಿಯೇ ಬೋಧಿಸತಕ್ಕದ್ದು.


) ಆದರೂ, ೧೯೯೪-೯೫ ನೇ ಶೈಕ್ಷಣಿಕ ವರ್ಷದಲ್ಲಿ , ಮತ್ತು ನೇ ತರಗತಿಗಳಲ್ಲಿ ವ್ಯಾಸ೦ಗ ಮಾಡುವ ವಿದ್ಯಾರ್ಥಿಗಳಿಗೆ ಅವರು ಈಗ ಕಲಿಯುತ್ತಿರುವ ಭಾಷಾ ಮಾಧ್ಯಮದಲ್ಲಿಯೇ ಬೋಧಿಸಲು ಶಾಲೆಗಳಿಗೆ ಅನುಮತಿ ನೀಡಬಹುದು.


) ವಿದ್ಯಾರ್ಥಿಗಳು ತಾವೇ ತರಗತಿಯಿ೦ದ ತಮ್ಮ ಇಚ್ಛೆಯ೦ತೆ ಇ೦ಗ್ಲೀಶ್ ಅಥವಾ ಬೇರೆ ಯಾವುದೇ ಭಾಷಾ ಮಾಧ್ಯಮಕ್ಕೆ ಬದಲಾವಣೆ ಮಾಡಿಕೊಳ್ಳಬಹುದು.


) ಇ೦ಗ್ಲೀಶ್ ಮಾತೃ ಭಾಷೆಯಾಗಿರುವ ವಿದ್ಯಾರ್ಥಿಗಳಿಗೆ ಮಾತ್ರ ಈಗ ಇರುವ ಅ೦ಗೀಕೃತ ಆ೦ಗ್ಲ ಮಾಧ್ಯಮ ಶಾಲೆಯಲ್ಲಿ ರಿ೦ದ ನೇ ತರಗತಿಗಳಲ್ಲಿ ಆ೦ಗ್ಲ ಮಾಧ್ಯಮದಲ್ಲಿ ವ್ಯಾಸ೦ಗ ಮಾಡಲು ಅನುಮತಿ ನೀಡಬಹುದು.


) ಈಗ ಇರುವ ಅನಧಿಕೃತ ಶಾಲೆಗಳನ್ನು ಸಕ್ರಮಗೊಳಿಸುವ ಪ್ರಸ್ಥಾವನೆಯನ್ನು ಮೇಲೆ ವಿಷದಪಡಿಸಿದ ಖ೦ಡಿಕೆ ರಿ೦ದ ೬ರ ವರಗಿನ ನೀತಿಯನ್ವಯವೇ ಸರ್ಕಾರ ಪರಿಶೀಲಿಸುವುದು. ಶಿಕ್ಷಣ ಸ೦ಹಿತೆಯ ನಿಬ೦ಧನೆಗಳನ್ನು ಪೂರೈಸುವ ಮತ್ತು ಸರ್ಕಾರದ ಪ್ರಚಲಿತ ನೀತಿಗನುಗುಣವಾಗಿರುವ ಶಾಲೆಗಳ ಪ್ರಸ್ತಾವನೆಯನ್ನು ಜಿಲ್ಲಾ ಪ೦ಚಾಯತ್ ಗಳು ಸಾರ್ವಜನಿಕ ಶಿಕ್ಷಣ ಆಯುಕ್ತರ ಮೂಲಕ ಸರ್ಕಾರಕ್ಕೆ ಸಲ್ಲಿಸುವ ವರದಿಯ ಶಿಫಾರಸನ್ನು ಆಧರಿಸಿ ಸರ್ಕಾರವು ಪರಿಶೀಲಿಸುವುದು.


) ಮೇಲ್ಕ೦ಡ ನಿಬ೦ಧನೆಗಳನ್ನು ಪೂರೈಸದಿರುವ ಎಲ್ಲಾ ಅನಧಿಕೃತ ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ.


) ಸೆ೦ಟ್ರಲ್ ಬೋರ್ಡ್ ಆಫ್ ಸೆಕೆ೦ಡರಿ ಎಜುಕೇಷನ್ (ಸಿ.ಬಿ.ಎಸ್.) ಅಥವಾ ಇ೦ಡಿಯನ್ ಕೌನ್ಸಿಲ್ ಆಫ್ ಸೆಕೆ೦ಡರಿ ಎಜುಕೇಷನ್ (.ಸಿ.ಎಸ್.) ಸ೦ಯೋಜಿತ ಶಾಲೆಗಳನ್ನು ತೆರೆಯಲು ಕೆಳಕ೦ಡ  ಅ೦ಶಗಳನ್ನು ಪೂರೈಸುವ ಶಾಲೆಗಳಿಗೆ ಮಾತ್ರ ಸರ್ಕಾರದ ಮಟ್ಟದಲ್ಲಿ ನಿರಾಕ್ಷೇಪಣಾ (ಎನ್..ಸಿ) ಪತ್ರವನ್ನು ನೀಡಲು ಪರಿಗಣಿಸಲಾಗುವುದು.


) ರಾಜ್ಯದಿ೦ದ ರಾಜ್ಯಕ್ಕೆ ವರ್ಗಾವಣೆಗೆ ಬದ್ಧರಾದ ಅಖಿಲ ಭಾರತ ಸೇವೆ , ಕೇ೦ದ್ರ ಸರ್ಕಾರದ ಸೇವೆ ಮತ್ತು ಕೇ೦ದ್ರ ಸರ್ಕಾರದ ಉದ್ದಿಮೆಗಳಿಗೆ ಸೇರಿದ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸ೦ಬ೦ಧಪಟ್ಟ ಇಲಾಖೆ/ಸ೦ಸ್ಥೆಗಳಿ೦ದ ದೃಢೀಕರಣ ಪತ್ರ ಸಲ್ಲಿಸುವುದು)

) ಒ೦ದಕ್ಕಿ೦ತ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊ೦ದಿದ ಹಾಗೂ ಅ೦ತರ ರಾಜ್ಯ ವರ್ಗಾವಣೆಗೆ ಒಳಪಡುವ ಬ್ಯಾ೦ಕುಗಳು, ಸ೦ಸ್ಥೆಗಳು (ಫ಼ರ್ಮ್ ಗಳು) ಅಥವಾ ವಾಣೀಜ್ಯ ಸ೦ಸ್ಥೆಗಳಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಠೀಕರಿಸಲು ಸ೦ಬ೦ಧಪಟ್ಟ ಬ್ಯಾ೦ಕ್ /ಸ೦ಸ್ಥೆಗಳಿ೦ದ ದೃಢೀಕರಣ ಪತ್ರ ಸಲ್ಲಿಸುವುದು)
) ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ / ಹೊರಡಿಸುವ ಸೂಚನೆಗಳನ್ನು ಪಾಲಿಸಿರಬೇಕು.


ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ ಎ೦ ಪೊನ್ನಪ್ಪ
      ಸರ್ಕಾರದ ಕಾರ್ಯದರ್ಶಿ -
ಶಿಕ್ಷಣ ಇಲಾಖೆ


ದಿನಾ೦ಕ ೨೯ನೇ ಏಪ್ರಿಲ್ ೧೯೯೪ರ ಸರ್ಕಾಅರದ ಆದೇಶ ಸ೦ಖ್ಯೆ ಇಡಿ ೨೮ ಪಿಜಿಸಿ ೯೪ಕ್ಕೆ

 ಅನುಬ೦ಧ -
. ಕನ್ನಡ
. ತಮಿಳು
. ತೆಲುಗು
. ಮಲಯಾಳ೦
. ಮರಾಠಿ
. ಹಿ೦ದಿ
. ಉರ್ದು
. ಇ೦ಗ್ಲೀಷ್
ಅನುಬ೦ಧ -
. ಕನ್ನಡ
. ತಮಿಳು
. ತೆಲುಗು
. ಮಲಯಾಳ೦
. ಮರಾಠಿ
. ಹಿ೦ದಿ
. ಉರ್ದು
. ಇ೦ಗ್ಲೀಷ್
. ಸ೦ಸ್ಕೃತ
೧೦. ಅರೆಬಿಕ್
೧೧. ಪರ್ಷಿಯನ್

ಸಾರ:

ಒಟ್ಟಾರೆಯಾಗಿ ಸದರಿ ಭಾಷಾನೀತಿಯ ಅನ್ವಯವಾಗಿ ಮಕ್ಕಳಿಗೆ ಪ್ರಾಥಮಿಕ ಶಾಲೆಯಲ್ಲಿ ಹಿಂದೀಯನ್ನು ಕಲಿಸಬೇಕಾದ್ದು ಕಡ್ಡಾಯವಲ್ಲ. ಹಾಜರಾತಿ ಮತ್ತು ಪರೀಕ್ಷೆಗಳು ಕಡ್ಡಾಯವಾಗಿದ್ದರೂ ಇಲ್ಲಿ ಪಾಸಾಗುವುದು ಕಡ್ಡಾಯವಲ್ಲ ಮತ್ತು ಇದರ ಅಂಕಿಗಳನ್ನು ರ್ಯಾಂಕುಗಳಿಗೆ, ಶೇಕಡಾ ಲೆಕ್ಕಕ್ಕೆ ಪರಿಗಣಿಸಬೇಕಾದುದಿಲ್ಲಾ! ರಾಜ್ಯಪತ್ರ ಹೀಗೆಂದರೂ ಕೂಡಾ ಕರ್ನಾಟಕದ ಬಹುತೇಕ ಶಾಲೆಗಳಲ್ಲಿ  ಹಿಂದೀಯನ್ನೇ ಯಾಕೆ ಕಲಿಸಲಾಗುತ್ತದೆ ಎನ್ನುವುದೇನು ಯಕ್ಷಪ್ರಶ್ನೆಯಲ್ಲಾ! ಇದಕ್ಕೆ ಉತ್ತರವೂ ಬಿಡಿಸಲಾರದ ಒಗಟಲ್ಲಾ!!

ಕೊನೆಹನಿ: ಹತ್ತನೇ ತರಗತಿಯಲ್ಲಿ ಮೂರನೇ ಭಾಷೆಯ ಕಲಿಕೆಯ ಮಟ್ಟವು ಒಂಬತ್ತು ವರ್ಷಗಳ ಕಾಲ ಮೊದಲ/ ಎರಡನೇ ಭಾಷೆಯಾಗಿರುವ ಕಲಿಕೆಯ ಮಟ್ಟದಷ್ಟಿರಬೇಕು ಎನ್ನುವುದರ ಅರ್ಥ ಮಾತ್ರಾ ಹುನಾರದಂತೆ ತೋರುತ್ತಿದೆ!

ಕಳಚಿದ ಕೊನೆಯ ಕೊಂಡಿ!


ಮೈಸೂರು ಅರಸರ ವಂಶಜರಾದ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಿನ್ನೆ ನಿಧನರಾಗಿದ್ದಾರೆ. ಪ್ರಜಾಪ್ರಭುತ್ವವಾಗಿ ಬದಲಾದ ನಂತರ ಮೈಸೂರು ಹೇಗೇ ಬದಲಾದರೂ... ಅಂದಿನ ಮೈಸೂರು ರಾಜ್ಯದ ಏಳಿಗೆಗಾಗಿ ಮೈಸೂರು ಒಡೆಯರ್ ವಂಶಸ್ಥರು ಮಾಡಿದ ಒಳಿತನ್ನು ಮರೆಯಲಾಗದು. ಸ್ವತಂತ್ರರಾಷ್ಟ್ರವೊಂದಕ್ಕಿರುವ ಎಲ್ಲಾ ಲಕ್ಷಣಗಳನ್ನೂ ರೂಢಿಸಿಕೊಂಡಿದ್ದ ಅಂದಿನ ಮೈಸೂರು ತನ್ನದೇ ಆದ ಉದ್ದಿಮೆಗಳನ್ನು, ಬ್ಯಾಂಕು, ವಿದ್ಯುತ್, ಗಣಿ, ಶಿಕ್ಷಣ ವ್ಯವಸ್ಥೆಗಳೆಲ್ಲವನ್ನೂ ಹೊಂದಲು ಸಾಧ್ಯವಾಗಿದ್ದು ಮೈಸೂರು ರಾಜವಂಶಸ್ಥರ ಜನಪರ ಕಾಳಜಿಯಿಂದಾಗಿಯೇ. ಮೊದಲ ಜನಪ್ರತಿನಿಧಿ ಸಭೆಯನ್ನು ಹೊಂದುವ ಮೂಲಕ ಜನರನ್ನು ಆಡಳಿತದಲ್ಲಿ ತೊಡಗಿಸಿಕೊಂಡಿತ್ತು ಅಂದಿನ "ಮಾದರಿ ಮೈಸೂರು".

ಭಾರತದಲ್ಲೇ ಅತ್ಯಂತ ಮುಂದುವರೆದ ನಾಡೆಂದು ಗುರುತಿಸಲಾಗುತ್ತಿದ್ದ ಮೈಸೂರಿನ ಉನ್ನತಿಗೆ ಅದನ್ನಾಳಿದ ರಾಜರುಗಳೇ ಕಾರಣವೆಂದರೆ ತಪ್ಪಾಗದು. ತಮ್ಮ ನೀರಾವರಿ ಯೋಜನೆಗಳೂ ಸೇರಿದಂತೆ ಹಲವಾರು ಮುಂದಾಲೋಚನೆಯ ಜನಪರ ಯೋಜನೆಗಳಿಂದಾಗಿ ಇಂದಿಗೂ ಅದೆಷ್ಟೋ ಮನೆಗಳ ಒಲೆ ಹೊತ್ತಲು ಕಾರಣರಾದ ಮೈಸೂರು ಅರಸು ವಂಶಜರೆಂದರೆ ಈ ಭಾಗದ ಜನರಲ್ಲಿ ಪ್ರೀತಿ ತುಂಬಿದ ಗೌರವ, ಭಕ್ತಿ.

ಈ ಎಲ್ಲ ಪ್ರೀತಿ, ಭಕ್ತಿ ಮತ್ತು ಗೌರವಗಳಿಗೆ ತಾನೂ ಪಾತ್ರರಾಗಿದ್ದ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಾವು ರಾಜ್ಯದ ಜನರಿಗೆ ಅಪಾರ ನೋವಿನ ಅನಿರೀಕ್ಷಿತ ಆಘಾತ ತಂದಿದೆ. ರಾಜಾಡಳಿತ ಇಲ್ಲದಿದ್ದರೂ ರಾಜ ಹೋದಾಗ ಮತ್ತೇನೋ ಕಳೆದುಕೊಂಡ ಭಾವ.. ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ.

ಕನ್ನಡಿಗರ ನೆತ್ತಿಯ ಮೇಲೆ ಬಿಜೆಪಿಯ ತೂಗುಕತ್ತಿ!

(ಫೋಟೋ ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್)
ಭಾರತೀಯ ಜನತಾ ಪಕ್ಷದ ಶಾಸಕರಾದ ಶ್ರೀ ಉಮೇಶ್ ಕತ್ತಿಯವರು ಮತ್ತೊಮ್ಮೆ ಉತ್ತರ ಕರ್ನಾಟಕವನ್ನು ಬೇರೆ ರಾಜ್ಯವಾಗಿಸುವ ಮಾತಾಡಿದ್ದಾರೆ. ಈ ಹಿಂದೆಯೂ ಕೂಡಾ ಉಮೇಶ್ ಕತ್ತಿಯವರು ಇದೇ ಮಾತಾಡಿದ್ದರು. ಇವರು ತಾವು ಈ ಬಾರಿ ಹೀಗೆ ಹೇಳಲು ಕಾರಣ ‘ಕರ್ನಾಟಕ ರಾಜ್ಯಸರ್ಕಾರವು ಪ್ರತಿ ಟನ್ ಕಬ್ಬಿಗೆ ಬೆಂಬಲ ಬೆಲೆಯಾಗಿ ೨೫೦೦ ರೂಪಾಯಿಗಳು ಎಂದು ಘೋಷಿಸಿರುವುದು’ ಎಂಬ ಸ್ಪಷ್ಟನೆಯನ್ನು ನೀಡಿ, ‘ಇಂತಹ ಬೇಡಿಕೆ ತಪ್ಪೇನಿಲ್ಲಾ’ ಎಂಬ ಸಮರ್ಥನೆಯನ್ನೂ ಕೊಟ್ಟಿದ್ದಾರೆ. ವಿಷಯ ಇಷ್ಟೇ ಆಗಿದ್ದರೆ... ಈ ಒಡಕು ಧ್ವನಿ ಕರ್ನಾಟಕ ಏಕೀಕರಣ ಇತಿಹಾಸದ ಅರಿವಿಲ್ಲದ, ಚಿಕ್ಕರಾಜ್ಯದ ತೊಡಕುಗಳ ಬಗ್ಗೆ ಗೊತ್ತಿಲ್ಲದ, ಒಗ್ಗಟ್ಟಿನಲ್ಲಿ ನಂಬಿಕೆಯಿಲ್ಲದ ಯಾವುದೋ ಕಿಡಿಗೇಡಿ ರಾಜಕೀಯ ಪುಡಾರಿಯದ್ದಷ್ಟೇ ಎಂದು ಕಡೆಗಣಿಸಬಹುದಾಗಿತ್ತು! 

ಬಿಜೆಪಿಯದ್ದು ಮೌನ ಸಮ್ಮತಿಯೇ?

ಆದರೆ  ಒಂದು ರಾಜಕೀಯ ಪಕ್ಷದ ನಾಯಕ, ಒಬ್ಬ ಶಾಸಕ, ಮಾಜಿ ಮಂತ್ರಿಯೊಬ್ಬರು ಈ ರೀತಿಯಾದ ಹೇಳಿಕೆ ಕೊಡುವುದರ ಅರ್ಥ ಸದರಿ ಮನುಷ್ಯ ಸೇರಿರುವ ಪಕ್ಷಕ್ಕೆ ಈ ವ್ಯಕ್ತಿಯ ಮೇಲೆ ಯಾವುದೇ ಹಿಡಿತವಿಲ್ಲಾ ಅಥವಾ ಈ ಪಕ್ಷವೇ ಇಂತಹ ಹೇಳಿಕೆಯನ್ನು ಹೇಳಿಸುತ್ತಿದೆ ಎಂದು. ಇಲ್ಲಿ ಯಾವುದು ದಿಟ? ಇದೀಗ ಸ್ಪಷ್ಟೀಕರಣ ನೀಡೋ ಹೊಣೆ ರಾಜ್ಯ ಬಿಜೆಪಿಯದ್ದು... ಈ ಪಕ್ಷ ಕಳೆದ ಬಾರಿಯೇ ಕತ್ತಿಯವರ ಬಾಯಿಗೆ ಬೀಗ ಹಾಕದೇ ಏನೂ ಸಂಬಂಧವಿಲ್ಲದ ಹಾಗೆ ಇದ್ದದ್ದು ಜಾಣಮೌನವೇ? ನಿಜಕ್ಕೂ ಬಿಜೆಪಿಯ ನಿಲುವು ಏನು? ಎಂಬುದು ಮುಖ್ಯವಾದ ವಿಷಯವಾಗಿದೆ.

ತನ್ನ ನಿಲುವು ಇದೇ ಆಗಿದ್ದರೆ ನೇರವಾಗಿ ಅದನ್ನು ಹೇಳಿಕೊಂಡೇ ರಾಜಕಾರಣ ಮಾಡಬೇಕಾದ್ದು ಬಿಜೆಪಿಯ ಹೊಣೆ. ಕನ್ನಡಿಗರ ಒಗ್ಗಟ್ಟನ್ನು, ಸಾವಿರಾರು ತ್ಯಾಗ ಬಲಿದಾನಗಳ ಏಕೀಕರಣ ಇತಿಹಾಸದ ಸಾರ್ಥಕ್ಯವನ್ನು, ನಮ್ಮ ತಾಯ್ನೆಲವಾದ ಕರ್ನಾಟಕವನ್ನು ಒಡೆಯೋದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಳ್ಳುವ ನೇರವಂತಿಕೆ ತೋರಿಸಿಕೊಳ್ಳಲಿ...

ಇಲ್ಲದಿದ್ದರೆ ನಾಡಿನ ಹಿತಕ್ಕೆ ಮಾರಕವಾಗುವ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ್ದಕ್ಕೆ ಸದರಿ ರಾಜಕಾರಣಿಯನ್ನು ವಿವರಣೆ ಕೇಳುವ, ಬಾಯಿ ಮುಚ್ಚಿಸುವ, ಪಕ್ಷದಿಂದ ಹೊರಹಾಕುವ ನಾಡಪರ ಬದ್ಧತೆಯನ್ನಾದರೂ ತೋರಿಸಲಿ. ‘ಅದು ಚರ್ಚೆಯಾಗಲಿ ಎಂದು ಹೇಳಿದ ಹೇಳಿಕೆ’ ‘ಅದು ಅವರ ವೈಯುಕ್ತಿಕ ಹೇಳಿಕೆ’ ಎಂಬ ಬೂಟಾಟಿಕೆಯ ಮಾತುಗಳ ಪೊಳ್ಳು ಸಮರ್ಥನೆಗೆ ಭಾರತೀಯ ಜನತಾ ಪಕ್ಷ ಇಳಿಯದಿರಲಿ.

ನಾಡೊಂದನ್ನು ಒಡೆಯುವವರಿಗೇನು? ನಾಳೆ ಬಜೆಟ್ಟಲ್ಲಿ ಒಂದು ರೂಪಾಯಿ ಕಮ್ಮಿ ಎಂದೋ, ನ್ಯಾಯಾಲಯದಲ್ಲಿ ಕೃಷ್ಣಾ ನದಿನೀರಿಗೆ ಹೋರಾಟ ಸರಿಯಾಗಿ ಮಾಡಲಿಲ್ಲ ಎಂದೋ, ನೆರೆಬಂದಾಗ ನೆರವು ಸರಿಯಾಗಿ ನೀಡಲಿಲ್ಲವೆಂದೋ, ನಮ್ಮೂರ ರಸ್ತೆಗಳಲ್ಲಿ ಗುಂಡಿಗಳು ನಿಮ್ಮೂರಿಗಿಂತಾ ಹೆಚ್ಚು ಎಂದೋ... ನೆಪ ಹೇಳಿ ಜನರ ಮನಸ್ಸೊಡೆಯೋಕೆ ಮುಂದಾಗೋರು ಇದ್ದೇ ಇರುತ್ತಾರೆ... ಅದಕ್ಕೇ ಅಲ್ವಾ ಕಳ್ಳನಿಗೊಂದು ಪಿಳ್ಳೆ ನೆವಾ ಎನ್ನೋ ಗಾದೆ ಮಾಡಿರೋದು? 

ಕೊನೆಹನಿ: ದೊಡ್ಡರಾಜ್ಯಗಳನ್ನು ಆಳೋದು ಕಷ್ಟ. ಅದಕ್ಕೇ ಚಿಕ್ಕರಾಜ್ಯಗಳಾಗಿ ನಿಮ್ಮ ರಾಜ್ಯಾನ ಒಡೀತೀನಿ ಅನ್ನೋರಿಗೆ ಭಾರತವೂ ದೊಡ್ಡದು ಎಂಬ ಅರಿವಿದೆಯೇ?
Related Posts with Thumbnails