ಮರೆಯಾದ ಯಶವಂತ ಹಳಿಬಂಡಿ!

(ಚಿತ್ರಕೃಪೆ: ಕಣಜ)

ಹಿರಿಯ ಹಾಡುಗಾರರಾದ ಶ್ರೀ ಯಶವಂತ ಹಳಿಬಂಡಿಯವರು ಇಂದು ತೀರಿಕೊಂಡಿದ್ದಾರೆ. ಅರವತ್ತೆರಡು ವರ್ಷ ವಯಸ್ಸಿನ ಹಳಿಬಂಡಿಯವರು "ಪಾತರಗಿತ್ತಿ ಪಕ್ಕಾ, ನೋಡಿದ್ಯೇನೇ ಅಕ್ಕಾ" "ಹೋಗೂ ಮನಸೇ ಹೋಗು, ನಲ್ಲೇ ಇರುವಲ್ಲಿ ಹೋಗು" "ನಾನು ಚಿಕ್ಕವನಾಗಿದ್ದಾಗ ಅಪ್ಪಾ ಹೇಳುತ್ತಿದ್ದರೂ..." ಮೊದಲಾದ ಹಾಡುಗಳಿಂದ ಕನ್ನಡನಾಡಿನ ಮನೆ ಮನೆಯನ್ನು ತಲುಪಿದ್ದವರು. ಕನ್ನಡ ಭಾವಗೀತೆಯ ಕ್ಷೇತ್ರ ಇವರ ನಿಧನದಿಂದ ಸೊರಗಿದೆ. ಇವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಬನವಾಸಿ ಬಳಗ ಕೋರುತ್ತದೆ.

"ವ್ಯಾಪಾರಿ" ನಿರ್ಮಾಪಕ ಮತ್ತು "ಗ್ರಾಹಕ" ಕಲಾರಸಿಕ!

(ಚಿತ್ರಕೃಪೆ: ಪ್ರಜಾವಾಣಿ)
ಡಬ್ಬಿಂಗ್ ತಡೆಯುತ್ತೇವೆ ಎನ್ನುವ ಕೂಗು ತಾರಕಕ್ಕೇರಿರುವ ಈ ಹೊತ್ತಿನಲ್ಲೇ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲಿ ಪ್ರಮುಖವಾದದ್ದು ಕನ್ನಡ ಚಿತ್ರನಿರ್ಮಾಪಕರಲ್ಲಿ ಹಲವರು ನಡೆಸಿದ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನಗಳು. ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಈ ವರದಿಯನ್ನು ನೋಡಿದರೆ ನಿರ್ಮಾಪಕರುಗಳು ಡಬ್ಬಿಂಗ್ ಪರವಾಗಿದ್ದಾರೆ ಎಂಬುದು ಅರಿವಾಗುತ್ತದೆ. ಆದರೆ ಇದಕ್ಕೂ ಮಿಗಿಲಾದದ್ದೇನೆಂದರೆ ಸಿನಿಮಾ ಕಲೆಯಷ್ಟೇ ಅಲ್ಲಾ, ಅದು ವ್ಯಾಪಾರ ಎನ್ನುವುದು ಮನದಟ್ಟಾಗುತ್ತದೆ.

ನಿರ್ಮಾಪಕ ಅನ್ನದಾತನೇ? ಪ್ರೇಕ್ಷಕ ಗ್ರಾಹಕನೇ?

ಕನ್ನಡಿಗರ ಕಣ್ಮಣಿ ಡಾ. ರಾಜ್‌ಕುಮಾರ್ ಅವರು ನಿರ್ಮಾಪಕರನ್ನು "ಅನ್ನದಾತ"ರೆಂದೂ ಪ್ರೇಕ್ಷಕರನ್ನು "ಅಭಿಮಾನಿ ದೇವರು"ಗಳೆಂದೂ ಕರೆಯುತ್ತಿದ್ದುದನ್ನು ಎಲ್ಲರೂ ಬಲ್ಲೆವು. ಆದರೆ ಚಿತ್ರರಂಗದ ಕೆಲಮಂದಿ "ಸಿನಿಮಾ ಒಂದು ಕಲೆ, ಇದು ಉದ್ಯಮವಲ್ಲ" "ಪ್ರೇಕ್ಷಕ ಕಲಾರಸಿಕ, ಗ್ರಾಹಕನಲ್ಲ" ಎಂದು ಆಡುವ ಮಾತುಗಳನ್ನು ಕೇಳಿದರೆ ಅಚ್ಚರಿಯಾಗುತ್ತದೆ. ವಾಸ್ತವವಾಗಿ ಮೇಲಿನ ಸುದ್ದಿ ಅದನ್ನು ಅಲ್ಲಗಳೆಯುತ್ತಿದೆ. ಸಿನಿಮಾ ಕಲೆಯೂ ಹೌದು, ಪ್ರೇಕ್ಷಕ ರಸಿಕನೂ ಹೌದು. ಆದರೆ ಅದೇ ಹೊತ್ತಿನಲ್ಲಿ ಸಿನಿಮಾ ಉದ್ಯಮವೂ ಆಗಿದೆ. ಪ್ರೇಕ್ಷಕ ಗ್ರಾಹಕನೂ ಆಗಿದ್ದಾನೆ ಎಂಬುದನ್ನು ಅಲ್ಲಗಳೇಯಲಾಗದು.

ಡಬ್ಬಿಂಗ್ ಬಂದೊಡನೆ ಕನ್ನಡ ಚಿತ್ರರಂಗ ಉದ್ಧಾರವಾಗಿಬಿಡುತ್ತದೆ ಎಂದು ಹೇಗೆ ಹೇಳಲು ಸಾಧ್ಯವಿಲ್ಲವೋ ಹಾಗೆಯೇ ಸಿನಿಮಾ ರಂಗ ಅಳಿದು ಹೋಗುತ್ತದೆ ಎನ್ನಲೂ ಆಗದು. ಚಿತ್ರವೊಂದು ಎಷ್ಟೇ ಕಲಾತ್ಮಕವಾಗಿದೆ ಎಂದರೂ ಅಲ್ಲಿ "ಎಕನಾಮಿಕ್ಸ್" (ಲಾಭ ನಷ್ಟದ ಲೆಕ್ಕಾಚಾರ) ಇದ್ದೇ ಇರುತ್ತದೆ. ಯಾಕೆಂದರೆ ಯಾವ ಸಿನಿಮವನ್ನೂ ಪುಗಸಟ್ಟೆ ತೆಗೆಯಲು ಸಾಧ್ಯವಾಗದು. ಅದಕ್ಕೆ ಹಣ ಬೇಕೇ ಬೇಕು ಮತ್ತು ಹಾಗೆ ತೊಡಗಿಸಿದವನು ಹಾಕಿದ್ದನ್ನು ಕಳೆದುಕೊಳ್ಳಲು ಎಂದೂ ಸಿದ್ಧನಾಗನು. ಹೀಗಿದ್ದಾಗ ಸಹಜವಾಗೇ ಬಂಡವಾಳ ಹಾಕುವವನು ಸಿನಿಮಾ ತಯಾರಾದ ನಂತರದ ಲಾಭ-ನಷ್ಟವನ್ನೂ ಎಣಿಕೆ ಹಾಕಲೇಬೇಕಾಗುತ್ತದೆ. ಆದರೆ ನಿರ್ದೇಶಕ, ತಂತ್ರಜ್ಞರು, ನಟರೂ ಸೇರಿದಂತೆ ಎಲ್ಲಾ ಕಲಾವಿದರಿಗೂ ತಮ್ಮ ಸಂಭಾವನೆ ಸಿಕ್ಕರೆ ಮುಗಿಯಿತು. ಇದನ್ನೆಲ್ಲಾ ನೀಡುವ ನಿರ್ಮಾಪಕನೇ ಚಿತ್ರರಂಗದ ಎಲ್ಲಾ ಕಾರ್ಮಿಕರ ಅನ್ನದಾತ! ನಿರ್ಮಾಪಕರನ್ನು ಹೊರತುಪಡಿಸಿ ಉಳಿದವರಿಗೆ ಒಂದು ಸಿನಿಮಾ ತಯಾರಾದ ನಂತರ ಅದು ಬಿಡುಗಡೆಯಾಗುತ್ತಾ, ಬಿಡುಗಡೆಯಾದರೂ ಓಡುತ್ತಾ, ದುಡ್ಡು ಮಾಡುತ್ತಾ ಅನ್ನೋದೆಲ್ಲಾ ಮಹತ್ವದ್ದಲ್ಲವೇನೋ ಎನ್ನಿಸುತ್ತದೆ. "ವರ್ಷವೊಂದಕ್ಕೆ ನೂರಿಪ್ಪತ್ತು ಸಿನಿಮಾ ಬರುತ್ತೆ, ಅದರಲ್ಲಿ ಐದೋ ಆರೋ ಮಾತ್ರಾ ಲಾಭ ತರುತ್ತೆ ಎಂದು ಒಪ್ಪಿಕೊಳ್ಳುತ್ತಲೇ ನಮ್ಮ ಕಾರ್ಮಿಕರಿಗೆ ೧೨೦ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ, ಅದರಿಂದ ಹೊಟ್ಟೆ ಹೊರೆಯಬೇಕು, ಡಬ್ಬಿಂಗ್ ಬಂದರೆ ಅದು ನಿಲ್ಲುತ್ತದೆ" ಎಂದು ಇವರಾಡುವ ಮಾತಿನ ಹಿಂದಿರುವ ಗೂಡಾರ್ಥವೇನು? ನಷ್ಟವೆಲ್ಲಾ ನಿರ್ಮಾಪಕರದ್ದಾಗಲಿ, ನಮ್ಮ ಸಂಭಾವನೆ ನಮಗೆ ಸಿಗುತ್ತಿರಲಿ ಎಂದಲ್ಲವೇ? ಹೀಗಿದ್ದಾಗ ನಿರ್ಮಾಪಕರು ತಮ್ಮ ದಾರಿ ತಾವು ನೋಡಿಕೊಳ್ಳುವುದು ಸಹಜವೇ ಅಲ್ಲವೇ? ಬಂಡವಾಳವನ್ನು ಹೂಡುವುದಷ್ಟೇ ಅಲ್ಲದೆ ಅತಿ ಹೆಚ್ಚು ಮಾರುಕಟ್ಟೆ ಗಂಡಾಂತರಕ್ಕೆ(ರಿಸ್ಕಿಗೆ) ತನ್ನನ್ನು ತಾನು ಒಡ್ಡಿಕೊಳ್ಳುವ ನಿರ್ಮಾಪಕನಿಗೇ ಸಿನಿಮಾ ಮಾರುಕಟ್ಟೆಯ ಬಗ್ಗೆ ಮಾತಾಡುವ, ತೀರ್ಮಾನಿಸುವ ಹಕ್ಕಿರುವುದಲ್ಲವೇ? ವಾಸ್ತವ ಹೀಗಿರುವಾಗ ಕನ್ನಡ ಚಿತ್ರರಂಗದ ಮಂದಿ ಡಬ್ಬಿಂಗ್ ಬೇಕೆನ್ನುವ ನಿರ್ಮಾಪಕರನ್ನು "ಕನ್ನಡ ದ್ರೋಹಿ"ಗಳ ಪಟ್ಟಿಗೆ ಸೇರಿಸಲಾರರು ಎಂದುಕೊಳ್ಳೋಣ.

ಇನ್ನು ಸಿನಿಮಾ ಎಷ್ಟೇ ಕಲಾತ್ಮಕವಾದರೂ ಅದನ್ನು ತನ್ನ ದುಡ್ಡು ಮತ್ತು ಸಮಯ ಖರ್ಚು ಮಾಡೇ ನೋಡುವ ಪ್ರೇಕ್ಷಕನು ಕಲಾರಸಿಕನೇ ಆಗಿದ್ದರೂ ಜೊತೆಯಲ್ಲೇ ಗ್ರಾಹಕನೂ ಆಗಿರುತ್ತಾನೆ. ಇಲ್ಲಿ ಸಾಮಾನ್ಯ ಗ್ರಾಹಕನಿಗೆ ಇರುವ ಎಲ್ಲಾ "ಹಕ್ಕುಗಳು" ಅವನಿಗೆ ಇರಬೇಕೆನ್ನುವುದಕ್ಕಿಂತಲೂ "ಗೌರವ" ಇರಬೇಕೆನ್ನುವುದು ಮುಖ್ಯವಾದುದಾಗಿದೆ. ಇಡೀ ಡಬ್ಬಿಂಗ್ ಚರ್ಚೆಯಲ್ಲಿ ಡಬ್ಬಿಂಗ್ ತಡೆಯುವ ಮಾತಾಡುತ್ತಿರುವವರು ಒಮ್ಮೆಯಾದರೂ ಗ್ರಾಹಕನ ಈ ಬೇಕು ಬೇಡಗಳಿಗೆ ಸ್ಪಂದಿಸಿದ್ದಾರೆಯೇ? ಇವರು "ನಾವೆಷ್ಟೊಂದು ಅದ್ಭುತ ಸಿನಿಮಾಗಳನ್ನು ತೆಗೆದಿದ್ದೇವೆ, ಕನ್ನಡಿಗರು ಅವನ್ನು ನೋಡಲ್ಲಾ, ಅವರಿಗೆ ಬೇರೆ ಭಾಷೇದೇ ಬೇಕು" ಎಂದು ದೂರಲು ಮಾತ್ರಾ ಪ್ರೇಕ್ಷಕ ಬಳಕೆಯಾಗುತ್ತಾನೆ! ಸತ್ಯಮೇವ ಜಯತೇ ಬೇಕೆಂದರೆ ಬದುಕು ಜಟಕಾ ಬಂಡಿ ನೋಡಿ ಎನ್ನುವ ಉದ್ಧಟತನ ಇವರದ್ದು! ಈ ಮಂದಿ ನಮಗೇನು ಬೇಕು ಬೇಡ ಎಂಬುದನ್ನು ತೀರ್ಮಾನಿಸುವ ದೊಣೆನಾಯಕರಾಗಿಬಿಡುತ್ತಾರೆ! ಇದು ಬಿಟ್ಟು ಇನ್ನುಳಿದಂತೆ ಗ್ರಾಹಕನ ಯಾವುದೇ ಬೇಕು ಬೇಡಗಳಿಗೆ ಇವರಿಂದ ಸ್ಪಂದನೆಯೂ ಇಲ್ಲಾ, ಬೆಲೆಯೂ ಇಲ್ಲಾ. ಹಾಗೆ ಗ್ರಾಹಕ, ಇವರದೇ ಭಾಷೆಯಲ್ಲಿ ಪ್ರೇಕ್ಷಕ, ಕಲಾರಸಿಕನ ಬಗ್ಗೆ ಕಿಂಚಿತ್ತದರೂ ಗೌರವವಿದ್ದಿದ್ದರೆ ಅಷ್ಟೊಂದು ಮಂದಿ ಬೇಕು ಬೇಕು ಎನ್ನುತ್ತಿದ್ದರೂ... ಮೂರೇ ದಿನದಲ್ಲಿ ಮೂವತ್ತು ಸಾವಿರ ಮಂದಿ ಅಂತರ್ಜಾಲ ತಾಣದಲ್ಲಿಯೇ ನೋಡಿ ತಣಿಯುತ್ತಿದ್ದುದನ್ನು ಸಹಿಸದೇ "ಸತ್ಯಮೇವ ಜಯತೇ" ಧಾರಾವಾಹಿಯ ಕನ್ನಡ ಅವತರಣಿಕೆಯನ್ನು ತೆಗೆಸಿ ಹಾಕುತ್ತಿರಲಿಲ್ಲಾ!! (ಅಯ್ಯೋ, ಅದು ನಾವು ತೆಗೆಸಿದ್ದಲ್ಲಾ, ಅವರೇ ತೆಗೆದದ್ದು ಎನ್ನುವ ಗೋಸುಂಬೆ ಮಾತುಗಳನ್ನು ಇನ್ನು ನಿರೀಕ್ಷಿಸಬಹುದು!) ಹೀಗಿದ್ದಾಗ ಚಲನಚಿತ್ರವನ್ನು ನೋಡುವವನೊಬ್ಬ ತನ್ನ ಬೇಕು ಬೇಡಗಳ ಹಕ್ಕನ್ನು ಗ್ರಾಹಕನಾಗಿ ಚಲಾಯಿಸದೇ ಇರುತ್ತಾನೆಯೇ? ತೀರಾ ಸಾರಾಸಗಟು ನಿಶೇಧ ಎನ್ನುತ್ತಾ ನೋಡುಗನ ಅವಕಾಶಗಳ ಬಾಗಿಲುಗಳನ್ನು ಮುಚ್ಚಿದರೆ ಅವನಾದರೋ ಏನು ತಾನೇ ಮಾಡಬಲ್ಲ? ಇರುವ ಕಾನೂನಿನ ಎಲ್ಲ ಅವಕಾಶಗಳನ್ನು ಬಳಸಿ ಕೊಳ್ಳುವುದು ಸಹಜ!

ಇರಲಿ, ನಿರ್ಮಾಪಕ ವ್ಯಾಪಾರಿಯೋ ಅಲ್ಲವೋ, ಸಿನಿಮಾ ಸರಕೋ ಅಲ್ಲವೋ ಬೇರೆಯದೇ ಮಾತು. ಆದರೆ ಸಿನಿಮಾವನ್ನು ದುಡ್ಡುಕೊಟ್ಟು ನೋಡುವ ಪ್ರೇಕ್ಷಕನೊಬ್ಬನಿಗೆ ತನಗೆ ಬೇಕಾದುದನ್ನು ನೋಡುವ, ಮೆಚ್ಚುವ, ತಿರಸ್ಕರಿಸುವ ಆಯ್ಕೆ ಸ್ವಾತಂತ್ರ್ಯವಿರುವುದನ್ನಾದರೂ ಚಿತ್ರರಂಗ ಗೌರವಿಸಬೇಕಾಗುತ್ತದೆ. ಇದನ್ನು ಕಡೆಗಣಿಸಿದಾಗ ಕಾನೂನು ಈ ಹಕ್ಕನ್ನು ಎತ್ತಿಹಿಡಿಯುವುದು ಮಾತ್ರಾ ದಿಟ! ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಯಷ್ಟೇ ಅಲ್ಲಾ, ದೇಶದ ಪ್ರಧಾನಿಯೇ ಮಧ್ಯಸ್ತಿಕೆಗಿಳಿದರೂ ಆಗಬೇಕಾದ್ದೂ, ಆಗುವುದೂ ಇದೇ!

ಡಬ್ಬಿಂಗ್ ಬೇಕೆನ್ನೋದು ಬರೀ ಹಕ್ಕಲ್ಲಾ!


ಕನ್ನಡಕ್ಕೆ ಡಬ್ಬಿಂಗ್ ಬರಲು ಬಿಡದೇ ತಡೆಯುತ್ತಿರುವ ಹತೋಟಿಕೂಟವೊಂದು ಇದೆ ಎನ್ನುವುದು ಈ ಬಾರಿ ಅನುಮಾನಕ್ಕೆಡೆಯಿರದ ರೀತಿಯಲ್ಲಿ ಸಾಬೀತಾಗುತ್ತಿದೆ. ಕನ್ನಡ ಗ್ರಾಹಕ ಕೂಟವು ಭಾರತೀಯ ಸ್ಪರ್ಧಾ ಆಯೋಗಕ್ಕೆ (ಸಿಸಿಐ - ಕಾಂಪಿಟೇಶನ್ ಕಮಿಶನ್ ಆಫ಼್ ಇಂಡಿಯಾ) ಸಲ್ಲಿಸಿದ್ದ ದೂರನ್ನು ಆಧರಿಸಿ ಆಯೋಗದ ಶೋಧನಾ ಸಮಿತಿಯು ಸಿದ್ಧಪಡಿಸಿದೆಯೆನ್ನಲಾದ ವರದಿಯೊಂದು ಅದು ಹೇಗೋ ಮಾಧ್ಯಮಗಳಿಗೆ ಸೋರಿ ಹೋಗಿ ಪ್ರಕಟವಾದ ಕ್ಷಣದಿಂದಲೇ ಕಲ್ಲುಬಿದ್ದ ಜೇನುಗೂಡಿನಂತೆ ಇಡೀ ಹತೋಟಿ ಕೂಟವು ಚಡಪಡಿಸಲು ಶುರುಮಾಡಿ ತಾನಾಗೇ ಹೊರಬಂದು ತನ್ನ ಅಸ್ತಿತ್ವವನ್ನು ಸಾರುತ್ತಿರುವುದು ಕಾಣುತ್ತಿದೆ. ಇದನ್ನು ಕಂಡಾಗ ಕನ್ನಡದಲ್ಲಿರುವ ಅಘೋಶಿತ ಡಬ್ಬಿಂಗ್ ನಿಶೇಧ ಇನ್ನಿಲ್ಲವಾಗುವ ಗಳಿಗೆ ಹತ್ತಿರವಾದಂತೆ ಅನ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಡಬ್ಬಿಂಗ್ ಕುರಿತಾದ ಕೆಲ ವಿಶಯಗಳತ್ತ ಕಣ್ಣು ಹಾಯಿಸೋಣ.

೬೦ರ ದಶಕದ ಐತಿಹಾಸಿಕ ನಿಶೇಧದಿಂದೀಚೆಗೆ...

ಕನ್ನಡ ಚಿತ್ರರಂಗ ಮದ್ರಾಸಿನ ಮೇಲೆ ಅವಲಂಬಿತವಾಗಿದ್ದ ಕಾಲದಲ್ಲಿ ಡಬ್ಬಿಂಗಿನಿಂದಾಗಿ ಕನ್ನಡದಲ್ಲಿಯೇ ಚಿತ್ರ ತೆಗೆಯುವುದು ಕಡಿಮೆಯಾಗಿ ಕನ್ನಡ ಕಲಾವಿದರಿಗೆ, ಚಿತ್ರೋದ್ಯಮಿಗಳಿಗೆ ಅವಕಾಶ ಇಲ್ಲವಾಗುತ್ತಿದೆ ಎಂದು ಡಬ್ಬಿಂಗ್ ವಿರೋಧಿ ಹೋರಾಟವೊಂದು ನಡೆದು ನಮ್ಮ ನಾಡಲ್ಲಿ ಕನ್ನಡಕ್ಕೆ ಡಬ್ ಆದ ಪರಭಾಷಾ ಚಿತ್ರಗಳು ಬಿಡುಗಡೆಯಾಗುವುದು ನಿಂತಿತು. ಆಗಲೂ ಇದು ಸಂವಿಧಾನ, ನೆಲದ ಕಾನೂನುಗಳಿಗೆ ವಿರುದ್ಧವಾಗಿಯೇ ಇತ್ತು. ಬಹುಷಃ, ಈ ಏರ್ಪಾಟಿನಿಂದಾಗಿ ಕನ್ನಡಿಗರು ಬೇರೆ ಭಾಷೆಯ ಚಿತ್ರಗಳನ್ನು ಆ ಭಾಷೆಗಳು ಬಾರದು ಎನ್ನುವ ಕಾರಣಕ್ಕೆ ನೋಡದೆ (ಆ  ಮೂಲಕ ಅವುಗಳಿಗೆ ಯಶಸ್ಸು ತಂದುಕೊಡದೆ) ಕನ್ನಡ ಚಿತ್ರಗಳನ್ನು ಮಾತ್ರಾ ನೋಡಿ ಮೆಚ್ಚಿ ಗೆಲ್ಲಿಸುವ ಹಂತಕ್ಕೆ ಬಂದರೇನೋ ಗೊತ್ತಿಲ್ಲಾ!

ನಿಜವಾದ ಭಯ ಏನೆಂದರೆ...

ಆದರೆ ನಿಧಾನವಾಗಿ ಪರಭಾಷೆಯ ಚಿತ್ರಗಳು ಪ್ರತಿಊರಿನಲ್ಲೂ ಬೆಳಗಿನ ಆಟ, ಒಂದು ಟಾಕೀಸಿನಿಂದ ಶುರುವಾಗಿ ಇದೀಗ ಕನ್ನಡನಾಡಲ್ಲೇ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗತೊಡಗಿವೆ. ಪ್ರತಿಯೊಂದು ಹಬ್ಬದ ಸಂದರ್ಭದಲ್ಲಿಯೂ ದೊಡ್ಡ ಕನ್ನಡ ಚಿತ್ರಗಳು ನಮ್ಮ ನಾಡಲ್ಲಿ ಬಿಡುಗಡೆಯಾಗುತ್ತಿದ್ದ ದಿನಗಳು ಇತ್ತೀಚೆಗೆ ಮರೆಯಾಗಿ ಹಬ್ಬದ ಸಂದರ್ಭದಲ್ಲೂ ಪರಭಾಷೆಯ ದೊಡ್ಡಚಿತ್ರ ಬರುತ್ತಿದೆ ಎಂದು ಬೆದರಿ ಕನ್ನಡ ಚಿತ್ರಗಳು ಬಿಡುಗಡೆ ಆಗುವುದೇ ನಿಂತು ಹೋಗಿದೆ. ಇದು ಚಲನಚಿತ್ರಗಳಿಗೆ ಸಂಬಂಧಿಸಿದಂತಾದರೆ ದೂರದರ್ಶನಗಳದ್ದು ಮತ್ತೊಂದು ಕಥೆ! ಪ್ರತಿಮನೆಯಲ್ಲೂ ಮಕ್ಕಳು ನೋಡುವ ಕಾರ್ಟೂನ್ ಸಿನಿಮಾಗಳು, ಡಿಸ್ಕವರಿ, ಹಿಸ್ಟರಿ, ಅನಿಮಲ್ ಪ್ಲಾನೆಟ್ ಥರದ ಅನೇಕ ಚಾನೆಲ್ಲುಗಳಲ್ಲಿ ಕನ್ನಡವಿರದೆ, ಕನ್ನಡದ ಮಕ್ಕಳು ಚಿಕ್ಕಂದಿನಿಂದಲೇ ಮನರಂಜನೆಗಾಗಿ ಪರಭಾಷೆಯನ್ನು ಅವಲಂಬಿಸುವ ಪರಿಸ್ಥಿತಿ ಹುಟ್ಟಿಕೊಂಡಿದೆ. ಹೀಗೆ ಬಾಲ್ಯದಿಂದಲೇ ಮನರಂಜನೆಯ ವಿಷಯದಲ್ಲಿ ಪರಭಾಷೆಗೆ ಅಂಟಿಕೊಳ್ಳುವ ಮಕ್ಕಳು ನಾಳೆ ಕನ್ನಡ ಚಿತ್ರಗಳನ್ನು ನೋಡುವುರಾದರೋ ಹೇಗೇ? ಡಬ್ಬಿಂಗ್ ನಿಶೇಧ ಎನ್ನುವುದು ಇಂದು ಕನ್ನಡಿಗರನ್ನು ಕನ್ನಡದಿಂದ ದೂರ ಮಾಡುವ ಕ್ರಮವಾಗಿದೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ.

ಇಂದಿನ ಬೆಳವಣಿಗೆಗೆ ಕಾರಣ...

ಇಷ್ಟಕ್ಕೂ ನಮ್ಮ ವಿರೋಧವಿರುವುದು ಸಾರಾಸಗಟು ನಿಶೇಧಕ್ಕೆ ಮಾತ್ರವೇ! ಆದರೆ ಖಾಸಗಿ ಟಿ.ವಿ ವಾಹಿನಿಯವರು ಸತ್ಯಮೇವ ಜಯತೇ ಎಂಬ ಹಿಂದೀ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲು ಮುಂದಾದಾಗ, ಚಿತ್ರೋದ್ಯಮದ ಕೆಲಗಣ್ಯರು ಸಾರ್ವಜನಿಕವಾಗಿ "ಸೌಹಾರ್ದತೆ"ಯಿಂದ ಮಾಲೀಕರೇ ಒಪ್ಪಿ ಹಿಂತೆಗೆದೆರೆನ್ನುತ್ತಾ ಕನ್ನಡ ಕಾರ್ಯಕ್ರಮವನ್ನು ಪ್ರಸಾರ ಮಾಡುವುದನ್ನು ತಡೆಹಿಡಿದದ್ದಲ್ಲದೆ... ವಾಹಿನಿಯವರು ವೆಬ್‌ಕ್ಯಾಸ್ಟ್ ಮಾಡಿದ್ದಕ್ಕೂ ಕತ್ತರಿ ಹಾಕಿಸಿದ್ದರಿಂದಾಗಿ ಬೇರೆ ದಾರಿಯಿರದ ನೋಡುಗರು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಇದರಿಂದಾಗಿ ಭಾರತೀಯ ಸ್ಪರ್ಧಾ ಆಯೋಗ(ಸಿ.ಸಿ.ಐ)ಕ್ಕೆ ದೂರು ಸಲ್ಲಿಸಲಾಯಿತು. ಸದರಿ ದೂರಿನ ತನಿಖೆಯನ್ನು ಹಿರಿಯ ಅಧಿಕಾರಿಯೊಬ್ಬರ ನೇತೃತ್ವದ ಸಮಿತಿಗೆ ಸಿ.ಸಿ.ಐ ಒಪ್ಪಿಸಿತು. ಈ ಸಮಿತಿಯ ವರದಿಯೇ ಇದೀಗ ಮಾಧ್ಯಮಗಳಿಗೆ ಸೋರಿ ಹೋಗಿ ಊರೆಲ್ಲಾ ಢಾಣಾಡಂಗೂರವಾಗಿರುವುದು! ಈ ವರದಿ ಪತ್ರಿಕೆಯಲ್ಲಿ ಪ್ರಕಟವಾದದ್ದೇ ತಡ ಡಬ್ಬಿಂಗ್ ವಿರೋಧಿ ಹೋರಾಟವನ್ನು ನಡೆಸುವುದಾಗಿ ಚಿತ್ರರಂಗ ಸಾರಿತು! ಅಲ್ಲೂ ಪರ ವಿರೋಧದ ವಾಗ್ವಾದಗಳು ನಡೆದವು. ಡಬ್ಬಿಂಗ್ ನಿಶೇಧ ಕಾನೂನುಬಾಹಿರ ಎನ್ನುವುದನ್ನು ಒಪ್ಪದ ಕೆಲವರಂತೂ ಸಿಸಿಐ ಅಸ್ತಿತ್ವವನ್ನೇ ಪ್ರಶ್ನಿಸಿದರು! ವಾಸ್ತವವಾಗಿ ನ್ಯಾಯಾಲಯವೊಂದು ನೀಡುವ ತೀರ್ಪು ಸಮ್ಮತವಲ್ಲದಿದ್ದರೆ ಮೇಲಿನ ನ್ಯಾಯಾಲಯಕ್ಕೆ ಹೋಗಬೇಕಲ್ಲದೇ ನ್ಯಾಯಾಲಯದ ಅಸ್ತಿತ್ವವನ್ನೇ ಪ್ರಶ್ನೆ ಮಾಡೊದು ಹತಾಶೆಯ ಪರಮಾವಧಿ ಎನ್ನಿಸುತ್ತದೆ! ಹಾಸ್ಯಾಸ್ಪದವಾಗುತ್ತದೆ!

ವಿಷಯ ಡಬ್ಬಿಂಗ್ ಅಲ್ಲಾ... ನುಡಿಹಮ್ಮುಗೆಯದು!

ವಾಸ್ತವವಾಗಿ ಮೇಲ್ನೋಟಕ್ಕೆ ಇದು ಕನ್ನಡದಲ್ಲಿ ಮನರಂಜನೆ ಬೇಕೆಂದು ಹಟ ಹಿಡಿದ ಕೆಲವರ ಕಾನೂನು ಹೋರಾಟದ ಹಾಗೆ ಕಂಡರೂ ಆಳದಲ್ಲಿ ಇದು ಕನ್ನಡದ ನುಡಿಹಮ್ಮುಗೆಯ ವಿಷಯಕ್ಕೆ ಸಂಬಂಧಿಸಿದಂತಹುದು. ಕನ್ನಡಕ್ಕೆ ಮಾತ್ರಾ ಸೀಮಿತವಲ್ಲದ ಈ ನುಡಿಹಮ್ಮುಗೆ, ನುಡಿಯೊಂದು ಎಷ್ಟೆಲ್ಲಾ ಹರವು ಹೊಂದಿರಬೇಕೆನ್ನುವುದನ್ನು ಹೇಳುತ್ತದೆ. ನುಡಿಯೊಂದರ ಇಂತಹ ಹರವು... ಆಯಾಜನಾಂಗದ ಕಲಿಕೆ, ಮನರಂಜನೆ, ದುಡಿಮೆ, ಗ್ರಾಹಕಸೇವೆ ಮೊದಲಾದ ಹತ್ತುಹಲವು ಆಯಾಮಗಳನ್ನು ಹೊಂದಿರುತ್ತದೆ ಮತ್ತು ಇಲ್ಲೆಲ್ಲಾ ನುಡಿಯೊಂದು ತನ್ನ ಅಸ್ತಿತ್ವವನ್ನು ಹೊಂದಿರಬೇಕಾದ್ದು ಮಹತ್ವದ್ದಾಗಿರುತ್ತದೆ. ಇದಕ್ಕೆ ಡಬ್ಬಿಂಗ್ ಕೂಡಾ ಒಂದು ಸಾಧನವಾಗಿದೆ ಎನ್ನುವುದನ್ನು ವಿಶ್ವಸಂಸ್ಥೆ(UNESCO)ಯೂ ಬಾರ್ಸಿಲೋನಾ ಭಾಷಾ ಘೋಷಣೆಯ ಮೂಲಕ ಎತ್ತಿಹಿಡಿದಿರುವುದನ್ನು ಗಮನಿಸಿದಾಗ "ಡಬ್ಬಿಂಗ್ ನುಡಿಯೊಂದಕ್ಕೆ ಮಾರಕವಲ್ಲಾ, ಬದಲಿಗೆ ಪೂರಕ" ಎನ್ನುವುದು ಅರಿವಾಗುತ್ತದೆ. ಒಟ್ಟಾರೆ ಡಬ್ಬಿಂಗ್ ಎನ್ನುವುದು "ನುಡಿಹಮ್ಮುಗೆ"ಯಲ್ಲೊಂದು ಪ್ರಮುಖ ಅಸ್ತ್ರವಾಗಿದೆ ಎಂಬುದು ಮಾತ್ರಾ ಸತ್ಯ. ಕನ್ನಡದ ನುಡಿಹರವಿನ ಒಂದು ಅಂಗ, ಕನ್ನಡಿಗರ ಮನರಂಜನೆ. ಇಲ್ಲಿ ಕನ್ನಡವಿರಬೇಕಾದ್ದು ಕನ್ನಡಿಗರ ಅಸ್ತಿತ್ವ ಮತ್ತು ಏಳಿಗೆಯ ದೃಷ್ಟಿಯಿಂದ ಬಲುಮುಖ್ಯವಾದುದಾಗಿದೆ. ಹಾಗೆಂದು ಇದು ಮನರಂಜನೆ ಮಾತ್ರಾ ಸೀಮಿತವಾದುದಲ್ಲಾ! ಮನರಂಜನೆಯೂ ಇದರಲ್ಲಿ ಸೇರಿರುವುದರಿಂದಾಗಿ ಇಂದು ಡಬ್ಬಿಂಗ್ ಹೋರಾಟ, ಡಬ್ಬಿಂಗ್ ಚರ್ಚೆ ಮುಂಚೂಣಿಗೆ ಬಂದು ನಿಂತಿದೆ...

ಡಬ್ಬಿಂಗ್ ಬಂದರೆ ಕನ್ನಡ ಬೆಳೆಯುತ್ತದೆಯೇ? ತೊಂದರೆ ಇಲ್ಲವೇ?

ಈ ಪ್ರಶ್ನೆಗೆ ಉತ್ತರ "ಹೌದು" ಮತ್ತು "ಇದೆ" ಎಂಬುದಾಗಿದೆ. ಬದಲಾವಣೆ ಎಂದಿಗೂ ನೋವಿನಿಂದಲೇ ಕೂಡಿರುವುದು ಸಹಜ. ಡಬ್ಬಿಂಗ್ ಬಂದೊಡನೇ ಕನ್ನಡ ಉದ್ಧಾರವಾಗಿಬಿಡುತ್ತದೆ ಎನ್ನುವ ಭ್ರಮೆ ನಮಗೂ ಇಲ್ಲಾ. ಮೊದಲಿಗೆ ಕೆಟ್ಟಾಕೊಳಕಾ ಚಿತ್ರಗಳ ಸುರಿಮಳೆಯೂ ಆದೀತು, ಗುಣಮಟ್ಟದಲ್ಲೂ ಡಬ್ ಆದವು ಕೆಟ್ಟದಾಗಿರಬಹುದು! ಮುಂದೆ ಇದು ಸುಧಾರಿಸುವುದಂತೂ ಖಂಡಿತಾ! ಯಾಕೆಂದರೆ ಮಾರುಕಟ್ಟೆಯೇ ಬದಲಾವಣೆಯನ್ನು ನಿರ್ಣಯಿಸುತ್ತದೆ! ಡಬ್ಬಿಂಗ್ ಬಂದೊಡನೆಯೇ ಮೂಲಚಿತ್ರಗಳ ಸಂಖ್ಯೆ ಕಡಿಮೆಯೂ ಆಗಬಹುದು. ಆದರೆ ಡಬ್ಬಿಂಗ್ ಎನ್ನುವುದು, ತಮ್ಮ ಮನರಂಜನೆಗಾಗಿ ನಿಧಾನವಾಗಿ ಕನ್ನಡದಿಂದಲೇ ದೂರಾಗುತ್ತಿರುವ ಪ್ರೇಕ್ಷಕರನ್ನು ಖಚಿತವಾಗಿ ಕನ್ನಡಕ್ಕೆ ಅಂಟಿಕೊಳ್ಳುವಂತೆ ಮಾಡುತ್ತದೆ. ಡಬ್ಬಿಂಗ್ ಚಿತ್ರಗಳು ಸ್ಪರ್ಧೆಯನ್ನು ಹೆಚ್ಚಿಸುತ್ತದೆ. ನೆಲದ ಸೊಗಡಿನ, ನಮ್ಮ ಬೇರ್ಮೆಯನ್ನು ಎತ್ತಿಹಿಡಿವ ಚಿತ್ರಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ. ಸಾವಿರಾರು ಜನರಿಗೆ ಇದು ಅನ್ನವೇ ಆಗಿದ್ದರೂ ಕೋಟ್ಯಾಂತರ ಜನರಿಗೆ ಮನರಂಜನೆ ಎನ್ನುವುದನ್ನು ಕಡೆಗಣಿಸಲಾಗದು. ಕನ್ನಡದ ಮನರಂಜನೆ ನಿಧಾನ ಸಾವಿಗೆ ತುತ್ತಾಗುತ್ತಿರುವುದನ್ನು ಗಮನಿಸಬಲ್ಲ ಜನರು ಡಬ್ಬಿಂಗನ್ನು ಒಂದು ಮದ್ದು ಎಂದು ಗುರುತಿಸಬಲ್ಲರು. ಈ ಮದ್ದು ಕೆಲವರಿಗೆ ಕಹಿಯೂ ಆಗಿರಬಹುದು... ಆದರೆ ಡಬ್ಬಿಂಗಿನಿಂದಾಗಿ ನಮ್ಮ ಸಂಸ್ಕೃತಿ ಹಾಳಾಗುತ್ತದೆ, ಭಾಷೆ ಅಳಿಯುತ್ತದೆ ಮುಂತಾಗಿ ಹೇಳುವುದು ಮಾತ್ರಾ ಪೊಳ್ಳು ಎನ್ನಿಸುತ್ತದೆ. ಕನ್ನಡ ಚಿತ್ರೋದ್ಯಮವೂ ಕೂಡಾ ಡಬ್ಬಿಂಗ್ ಒಡ್ಡುವ ಗುಣಮಟ್ಟದ ಸವಾಲನ್ನು ಸರಿಯಾಗಿ ಸ್ವೀಕರಿಸಿ ಒಳ್ಳೊಳ್ಳೆಯ ಸ್ವಂತಿಕೆಯ ಚಿತ್ರಗಳನ್ನು ನೀಡುವ ಮೂಲಕವೇ ತನ್ನ ಅಸ್ತಿತ್ವ ಕಾಯ್ದುಕೊಳ್ಳಬೇಕಲ್ಲದೆ ಆ ಸಬ್ಸಿಡಿ, ಈ ವಿನಾಯಿತಿ, ಆ ನಿಶೇಧ, ಈ ಸಹಾಯಧನಗಳಿಂದ ಅಲ್ಲಾ!! ಇಷ್ಟಕ್ಕೂ ಕನ್ನಡದ ಪ್ರೇಕ್ಷಕನು ತನಗೇನು ಬೇಕೋ ಅದನ್ನು ಮಾತ್ರವೇ ಹೀರಿಕೊಳ್ಳಬಲ್ಲನಲ್ಲದೆ ಡಬ್ಬಿಂಗ್ ಆದವುಗಳನ್ನೆಲ್ಲಾ ಒಪ್ಪಿಕೊಂಡು ಮೂಲಚಿತ್ರಗಳಿಂದ ದೂರಾಗುತ್ತಾನೆ ಎನ್ನುವಂತಿಲ್ಲಾ! ಹಾಗಾಗಿ ಕನ್ನಡ ಚಿತ್ರರಂಗದ ಮಂದಿ ಸ್ಪರ್ಧೆಯನ್ನು ಎದುರಿಸುವ ರಾಜಮಾರ್ಗವನ್ನು ಹಿಡಿಯಲಿ ಮತ್ತು ಅದರಲ್ಲಿ ಗೆಲ್ಲಲಿ ಎಂದು ಆಶಿಸೋಣ. ಏನಂತೀ ಗುರೂ?

ಕನ್ನಡ ನುಡಿಯರಿಮೆಯ ಇಣುಕುನೋಟ: ಶಂಕರಬಟ್ಟರ ಹೊಸಹೊತ್ತಗೆ ಮಾರುಕಟ್ಟೆಗೆ!


ಇತ್ತೀಚಿಗೆ ಕರ್ನಾಟಕ ಸರ್ಕಾರದಿಂದ ಪಂಪ ಪ್ರಶಸ್ತಿ ಪಡೆದಿರುವ ನಾಡಿನ ಹೆಮ್ಮೆಯ ಭಾಷಾವಿಜ್ಞಾನಿ ನಾಡೋಜ ಡಾ. ಡಿ ಎನ್ ಶಂಕರ ಬಟ್ಟರ ಹೊಸಹೊತ್ತಗೆಯೊಂದು ಬಿಡುಗಡೆಯಾಗಿದೆ. ಯುವಚಿಂತಕ ಶ್ರೀ ಕಿರಣ್ ಬಾಟ್ನಿಯವರು ಸಂಪಾದಿಸಿರುವ ಕನ್ನಡ ನುಡಿಯರಿಮೆಯ ಇಣುಕುನೋಟ ಹೆಸರಿನ ಈ ಹೊತ್ತಗೆ ಕನ್ನಡ ಸಮಾಜಕ್ಕೆ ದಾರಿತೋರುಕವಾದುದಾಗಿದೆ. ತಮ್ಮ ಎಡೆಬಿಡದ ಹತ್ತಾರು ವರ್ಷಗಳ ಅಧ್ಯಯನದ ಸಾರವನ್ನು ಎಳೆಯರಿಗೂ ಅರ್ಥವಾಗುವಂತೆ ತಿಳಿಯಾಗಿ ತಿಳಿಸಬಲ್ಲ ಸಾಮರ್ಥ್ಯವಿರುವ ಬಟ್ಟರ ಬರಹದ ಶೈಲಿ ಈ ಹೊತ್ತಗೆಯಲ್ಲೂ ಇದ್ದು ಓದುಗರಿಗೆ ಸರಳವಾಗಿ ಅರಿಮೆಯನ್ನು ತಲುಪಿಸುತ್ತದೆ. ಈ ಹೊತ್ತಗೆಯು ಮಡಿಕೇರಿಯಲ್ಲಿನ "೮೦ನೇ ಕನ್ನಡ ಸಾಹಿತ್ಯ ಸಮ್ಮೇಳನ"ದಲ್ಲಿ ಮೊದಲಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಬನವಾಸಿ ಬಳಗ ಪ್ರಕಾಶನದ ಮಳಿಗೆಯಲ್ಲಿ ಮಾರಾಟಕ್ಕೆ ಸಿಗುತ್ತಿರುವ ಈ ಹೊತ್ತಗೆಯ ಮೊದಲಲ್ಲಿ ಸಂಪಾದಕರಾದ ಕಿರಣ ಬಾಟ್ನಿಯವರು ಹೀಗೆ ಬರೆದಿದ್ದಾರೆ.

ಇಣುಕುನೋಟದ ಮುನ್ನುಡಿಯಲ್ಲಿ...

ಬರಹದ ಕನ್ನಡವು ಕಾಲಕಾಲಕ್ಕೆ ಮಾರ್ಪಡುತ್ತಲೇ ಬಂದಿದೆ. ಬರಿಗೆಮಣೆ (ಅಕ್ಶರಮಾಲೆ), ಪದಬಳಕೆಹಾಗೂ ಒಡ್ಡವದಲ್ಲಾದ ಮಾರ್ಪಾಡುಗಳು ಒಂದು ಬಗೆಯವಾದರೆ, ಬರವಣಿಗೆಯ ಇಟ್ಟಳದಲ್ಲಾದ ಮಾರ್ಪಾಡುಗಳು ಇನ್ನೊಂದು ಬಗೆಯವು ಎನ್ನಬಹುದು. ಆದರೆ ಇವೆರಡು ಬಗೆಯ ಮಾರ್ಪಾಡುಗಳು ಒಂದನ್ನೊಂದು ಬೆಂಬಲಿಸಿಯೇ ನಡೆದಿವೆ ಎನ್ನಬಹುದು. ಎತ್ತುಗೆಗೆ, -ಕಾರ ಮತ್ತು ಱ-ಕಾರಗಳು ಚಲಾವಣೆಯಲ್ಲಿದ್ದಾಗ ಬರವಣಿಗೆಯನ್ನು ಹೆಚ್ಚು-ಕಡಿಮೆ ದಾರ್ಮಿಕ ವಿಶಯಗಳನ್ನು ಪದ್ಯರೂಪದಲ್ಲಿ ಹೇಳುವುದಕ್ಕಾಗಿ ಮಾತ್ರವೇ ಬಳಸಲಾಗುತ್ತಿತ್ತು; ಆದರೆ, ಕಾಲ ಕಳೆದಂತೆ ಈ ಬರಿಗೆಗಳು ಕಾಣೆಯಾದವಶ್ಟೇ ಅಲ್ಲ, ದರ್ಮಕ್ಕೆ ನಂಟಿರದ ವಿಶಯಗಳನ್ನು ಪದ್ಯವಲ್ಲದ ಒಡ್ಡವಗಳಲ್ಲಿ ಹೇಳುವಂತಹ ಬರವಣಿಗೆಗಳೂ ಕಾಣಿಸಿಕೊಂಡವು.


ಇವತ್ತಿನ ದಿನವಂತೂ ಹೊಚ್ಚಹೊಸದಾದ ಅರಿಮೆಗಳನ್ನು ಆಯಾ ಅರಿಮೆಯ ವಲಯಗಳಲ್ಲಿ ಕೆಲಸ ಮಾಡುತ್ತಿರುವವರು ಬರವಣಿಗೆಗೆ ಇಳಿಸಬೇಕಾದ ಪರಿಸ್ತಿತಿಯಿದೆ. ಒಂದಲ್ಲ ಒಂದು ಬಗೆಯ ನಲ್ಬರಹ(ಸಾಹಿತ್ಯ)ಕ್ಕಾಗಿ ಮಾತ್ರ ಬಳಸಲಾಗುತ್ತಿದ್ದ ಕನ್ನಡವಿಂದು ಹಿಂದೆಂದೂ ಇಡದ ಹೆಜ್ಜೆಯನ್ನು ಇಡಬೇಕಿದೆ. ಕವಿತೆ, ನಾಟಕ, ಕಾದಂಬರಿ ಮುಂತಾದವುಗಳನ್ನು ಬರೆಯುವವರು ಮಾತ್ರ ಬಳಸುತ್ತಿದ್ದ ಕನ್ನಡವನ್ನು ಇಂದು ಇವಾವುದರ ಗಂದವೂ ಇಲ್ಲದ ಅರಿಗರು, ಇಂಜಿನಿಯರುಗಳು, ಡಾಕ್ಟರುಗಳು, ಮುಂತಾದವರು ತಂತಮ್ಮ ಕೆಲಸಗಳಿಗೆ ಚೆನ್ನಾಗಿ ಬಳಸಿಕೊಂಡು ಕನ್ನಡವನ್ನು ಜಪಾನೀಸ್, ಕೊರಿಯನ್, ಜರ್ಮನ್, ಹೀಬ್ರೂ, ಮುಂತಾದ ನುಡಿಗಳ ಸಾಲಿನಲ್ಲಿ ನಿಲ್ಲಿಸಬೇಕಿದೆ.


ಇದನ್ನೆಲ್ಲ ಅರಿತು, ಈ ಬೆಳವಣಿಗೆಗಳು ಆಗದಿದ್ದರೆ ಕನ್ನಡಿಗರು ಪಡಲಿರುವ ಕಶ್ಟವನ್ನೆಲ್ಲ ಮನಗಂಡು, ನಲ್ಬರಹವನ್ನು ಬಿಟ್ಟು ಬೇರೆಲ್ಲೂ ಕನ್ನಡದ ಬಳಕೆ ಆಗುತ್ತಿಲ್ಲವೆಂದು ಕಣ್ಣೀರು ಸುರಿಸುವುದೊಂದೇ ನಮ್ಮ ಪಾಡೆಂದು ನಂಬಲು ತಯಾರಿಲ್ಲದ ಕನ್ನಡದ ಯುವಕರ ಪಡೆಯೊಂದು ಮೆಲ್ಲನೆ ಎದ್ದುನಿಲ್ಲುತ್ತಿದೆ, ಮತ್ತು ಅದರಿಂದ ಕನ್ನಡದಲ್ಲಿ ಹಿಂದೆಂದೂ ಕಂಡಿರದ ರೀತಿಯ ಬರವಣಿಗೆಗಳು ಇಂದು ಮೂಡುತ್ತಿವೆ.ಆದರೆ ಹಿಂದೆಯೂ ಆಗಿರುವಂತೆ, ಬರವಣಿಗೆಯ ಇಟ್ಟಳದಲ್ಲಾಗುತ್ತಿರುವ ಈ ಬೆಳವಣಿಗೆಯು ಬರಿಗೆಮಣೆ, ಪದಬಳಕೆ ಮತ್ತು ಬರವಣಿಗೆಯ ಒಡ್ಡವದಲ್ಲಿಯೂ ಮಾರ್ಪಾಡುಗಳನ್ನು ಚಿಗುರಿಸುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ಮಾರ್ಪಾಡುಗಳಿಂದ ಈಗಎಲ್ಲರ ಕನ್ನಡವೊಂದು ರೂಪುಗೊಳ್ಳುತ್ತಿದೆ. ಇದರಲ್ಲಿ ಕನ್ನಡಿಗರ ಉಲಿಕೆಯಲ್ಲಿಲ್ಲದ ಮಹಾಪ್ರಾಣಗಳಿಲ್ಲ, ಋಕಾರವಿಲ್ಲ, ವಿಸರ್ಗವಿಲ್ಲ; -ಕಾರ, -ಕಾರಗಳಿಲ್ಲ. ಹಾಗೆಯೇ, ‘ಎಲ್ಲರ ಕನ್ನಡವೆಂದರೆ ನಿಜಕ್ಕೂ ಎಲ್ಲರದಾಗಿದ್ದು, ಅತಿ ಹೆಚ್ಚು ಸಂಸ್ಕ್ರುತದ ಪದಗಳನ್ನು ಬಳಸುವ ಬದಲು ಆದಶ್ಟು ಕನ್ನಡದ ಪದಗಳನ್ನೇ ಬಳಸಲಾಗುತ್ತದೆ, ಹೊಸ ಪದಗಳನ್ನು ಕನ್ನಡದಲ್ಲೇ ಕಟ್ಟಲಾಗುತ್ತದೆ.

ಕನ್ನಡವನ್ನು ಮುಂಬೊತ್ತಿಗೆ ಸಜ್ಜಾಗಿಸುವ ಹೊಣೆ ಕೆಲವು ಜಾತಿಗಳ ಬೆರಳೆಣಿಕೆಯ ಮಂದಿಯದಲ್ಲ, ಎಲ್ಲರದೂ ಆಗಿದೆಯೆಂದು ಕಂಡುಕೊಂಡರೆ ಈ ಮಾರ್ಪಾಡುಗಳು ಏತಕ್ಕೆ ಬೇಕೆಂದು ತಾನಾಗಿಯೇ ತಿಳಿದು ಬರುತ್ತದೆ.

ಕನ್ನಡ ಸಮಾಜದ ಬಗ್ಗೆ ಕಾಳಜಿಯಿರುವ, ಕನ್ನಡಿಗರ ಏಳಿಗೆಗೆ ದಾರಿ ಹುಡುಕುತ್ತಿರುವ ಮಂದಿಗೆ ಈ ಹೊತ್ತಗೆ ದಾರಿದೀಪವಾದರೆ ನುಡಿಯರಿಮೆಯನ್ನು ಸಾಮಾನ್ಯರೂ ಅರಿಯಲು ಅತ್ಯಂತ ಸಹಕಾರಿಯಾಗಿದೆ. ಇದು ನಿಮ್ಮಲ್ಲಿರಲೇಬೇಕಾದ ಹೊತ್ತಗೆ.

ಕನ್ನಡ ಡಿಂಡಿಮ: ಬಳಗದ ಹೊಸ ಹೊತ್ತಗೆ ಮಾರುಕಟ್ಟೆಗೆ!


ಬನವಾಸಿ ಬಳಗವು ಪ್ರಕಾಶನದ ಮೂಲಕ ಹೊತ್ತಗೆಗಳನ್ನು ಅಚ್ಚುಹಾಕಿಸಲು ಶುರುಮಾಡಿ ಐದುವರ್ಷಗಳಾದ ಹಿನ್ನೆಲೆಯಲ್ಲಿ ಇದೀಗ ಐದು ಹೊಸಹೊತ್ತಗೆಗಳನ್ನು ಹೊರತಂದಿದೆ. ಹೊತ್ತಗೆಗಳನ್ನು ಕೊಳ್ಳಿರಿ, ಓದಿರಿ, ತಿಳಿದವರಿಗೆ ಉಡುಗೊರೆಯಾಗಿ ನೀಡಿರಿ. ಹೊತ್ತಗೆಗಳು ದಿನಾಂಕ ೦೭ನೇ ಜನವರಿಯಿಂದ ೯ನೇ ಜನವರಿಯವರೆಗೆ, ಮಡಿಕೇರಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಬನವಾಸಿ ಬಳಗದ ಮಳಿಗೆಯಲ್ಲಿ ಸಿಗುತ್ತದೆ. ಎಲ್ಲೆಡೆಯ ಹೊತ್ತಗೆ ಅಂಗಡಿಗಳಲ್ಲೂ ಸಿಗಲಿವೆ. "ಕನ್ನಡ ಡಿಂಡಿಮ - ಸತ್ತಂತಿಹರನು ಬಡಿದೆಚ್ಚರಿಸು" ಹೆಸರಿನ ಈ ಹೊತ್ತಗೆಗಳ ಮುನ್ನುಡಿಯ ಕೆಲಸಾಲುಗಳು ತಮ್ಮ ಓದಿಗಾಗಿ...

ಕನ್ನಡ ಡಿಂಡಿಮ

ಕನ್ನಡ ಕನ್ನಡಿಗ ಕರ್ನಾಟಕಗಳ ಏಳಿಗೆಯ ಹೆಗ್ಗುರಿಯು ನಮ್ಮ ಮುಂದಿರುವಾಗ,ಇದನ್ನೇ ಮನದಲ್ಲಿಟ್ಟುಕೊಂಡು ನೋಡತೊಡಗಿದರೆ ನಮ್ಮ ಸುತ್ತಲಿನ ಜಗತ್ತನ್ನು ನಾವು ನೋಡುವ ಬಗೆಯೇ ಬದಲಾಗುತ್ತದೆ. ಹಾಗೆ ನೋಡುತ್ತಾ ಹೋದರೆ ಕಾಣುವ ನೋಟಗಳು ಹೆಜ್ಜೆಹೆಜ್ಜೆಗೂ ಸ್ಪಷ್ಟವಾಗುತ್ತಾ ಹೋಗುತ್ತದೆ. ನಮ್ಮ ಸುತ್ತ ನಡೆಯುತ್ತಿರುವುದರಲ್ಲಿ ಯಾವುದು ನಮಗೆ ಮತ್ತು ನಮ್ಮ ನಾಡಿಗೆ ಮಾರಕ, ಯಾವುದು ನಮ್ಮ ಏಳಿಗೆಗೆ ಪೂರಕ ಎಂಬುದು ಅರಿವಾಗತೊಡಗುತ್ತದೆ. ಈ ಯೋಚನೆಗಳ ದೀಪಕ್ಕೆ ನಿಜಕ್ಕೂ ಎಣ್ಣೆಯಾಗುವುದು ಹೊರದೇಶಗಳಲ್ಲಿರುವ ವ್ಯವಸ್ಥೆಗಳನ್ನು ಕಂಡ ಅನುಭವಗಳು. ಈ ಅನುಭವ ನಮ್ಮ ಮೂಲಗುರುತನ್ನು ನುಡಿಗೆ ಅಂಟಿಸಿಬಿಡುತ್ತದೆ.

 ಹಾಗೆ ನೋಡಿದರೆ ನಮ್ಮೆಲ್ಲರ ಅತಿ ಪುರಾತನವಾದ ಗುರುತೆಂದರೆ ನಮ್ಮ ನುಡಿಯೇ! ನುಡಿಯೊಂದು ಬೆಳೆದು ಬರುವ ಪರಿ, ಅದನ್ನಾಡುವ ಜನರು ಒಂದು ಸಮಾಜವಾಗಿರುವುದರ ಹಳಮೆಯನ್ನು ಕಂಡಾಗ ನಮ್ಮ ಹಳಮೆಯು ನಮ್ಮ ಮೂಲಗುರುತನ್ನು ನಾವಾಡುವ ನುಡಿಯೊಂದಿಗೆ ಜೋಡಿಸುವುದು ಸಹಜ ಎನ್ನಿಸುತ್ತದೆ. ಕಾಲಾಂತರದಲ್ಲಿ ಸಮಾಜದಲ್ಲಿನ ಕಟ್ಟುಪಾಡುಗಳಿಂದಾಗಿ ಹೊಸ ಹೊಸ ಗುರುತುಗಳು ಆವರಿಸುತ್ತಾ ಮೂಲಗುರುತನ್ನು ಮರೆಸುವಂತೆ ಮೆತ್ತಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ‘ನಾನು’ ಕನ್ನಡಿಗನೆನ್ನುವ ಗುರುತು ಉಳಿದೆಲ್ಲಾ ಗುರುತಿಗಿಂತ ಸಹಜವಾದದ್ದೂ, ಏಳಿಗೆಯನ್ನು ಸಾಧಿಸಲು ಬಳಕೆಯಾಗಬೇಕಾದದ್ದು ಎಂಬುದು ಮನವರಿಕೆಯಾಗುತ್ತದೆ. ಕನ್ನಡ ಡಿಂಡಿಮ ಹೊತ್ತಗೆಯು, ಕನ್ನಡಿಗರಲ್ಲಿ ಕನ್ನಡತನದ ಅರಿವನ್ನು ಎಚ್ಚರಿಸುವ ಡಿಂಡಿಮವಾಗಲೆಂದು ನನ್ನಾಶಯ.





ಈ ಹೊತ್ತಗೆಯ ಹೆಸರನ್ನು ಕನ್ನಡ ಡಿಂಡಿಮ ಎಂದು ಇಡಲು ಪ್ರೇರಣೆಯೇ ರಾಷ್ಟ್ರಕವಿ ಕುವೆಂಪು ಅವರ ಹೆಸರಾಂತ ಕವನ. ಈ ಕವನ ಹೀಗಿದೆ:

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯಶಿವ
ಬಾರಿಸು ಕನ್ನಡ ಡಿಂಡಿಮವ ||

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು ||

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯಶಿವ
ಬಾರಿಸು ಕನ್ನಡ ಡಿಂಡಿಮವ ||

ಈ ಪದ್ಯವನ್ನು ನಾವೆಲ್ಲಾ ಶಾಲೆಯಲ್ಲಿ ಕಲಿತಿರುತ್ತೇವೆ. ಶಾಲೆಯಲ್ಲಿ ಓದುವಾಗ ಇದರ ಆಶಯವೇ ಅರ್ಥವಾಗಿರಲಿಲ್ಲ. ಯಾಕಾಗಿ ಇಷ್ಟೊಂದು ಕಟುವಾಗಿ ಕನ್ನಡಿಗರನ್ನು “ಸತ್ತಂತಿಹರು” ಎಂದಿದ್ದಾರೆ? ಯಾಕಾಗಿ “ಹೃದಯಶಿವ”ನಲ್ಲಿ “ಡಿಂಡಿಮ” “ಬಾರಿಸು”ವಂತೆ ಬೇಡಿದ್ದಾರೆ? ಕುವೆಂಪುರವರು ಡಿಂಡಿಮವನ್ನು “ನುಡಿಸು” ಎನ್ನದೆ “ಬಾರಿಸು” ಎಂದಿರುವುದರಲ್ಲೇ, ಕನ್ನಡಿಗರ ಈ ಸತ್ತಂತಿರುವಿಕೆಯ ತೀವ್ರತೆ ಎಷ್ಟೆಂದು ಅರಿವಾಗುತ್ತದೆ. ಏನಾಗಿದೆ ಕನ್ನಡಿಗರಿಗೆ? ಏನಿದು ಸತ್ತಂತಿರುವಿಕೆ? ಹೃದಯಶಿವ ನುಡಿಸಬೇಕಾದ ಡಿಂಡಿಮ ಯಾವುದು? ಈ ಎಲ್ಲಾ ಪ್ರಶ್ನೆಗಳ ಆಳಕ್ಕೆ ಇಳಿದಾಗ ನಮ್ಮನ್ನು ಮುಸುಕಿರುವ ತೆರೆ ಎಂಥದ್ದು... ನಮ್ಮ ಮೇಲೆ ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯು ಎಂಥದ್ದು ಎಂಬುದು ಅರಿವಾಗುತ್ತದೆ.

ನಮ್ಮ ನಾಡಿನಲ್ಲಿ ಕನ್ನಡವೊಂದನ್ನೇ ಬಲ್ಲ ಒಬ್ಬ ಸಾಮಾನ್ಯ ನಾಗರೀಕನಿಗೆ ತನ್ನೆಲ್ಲಾ ಕೆಲಸ ಕಾರ್ಯಗಳನ್ನು ಯಾವುದೇ ಹಿಂಜರಿಕೆ, ಕೀಳರಿಮೆಯಿಲ್ಲದೇ ಮಾಡಿಕೊಳ್ಳುವುದು ಸಾಧ್ಯವಾಗುವ, ತನ್ನ ಬದುಕಿನಲ್ಲಿ ಏಳಿಗೆ ಸಾಧಿಸಲು ಬೇರೊಂದು ನುಡಿಯ ಕಲಿಕೆ ಅನಿವಾರ್ಯ ಎನ್ನುವುದು ಇಲ್ಲವಾಗುವ ದಿನ ಬಂದಂದು ನಿಜಕ್ಕೂ ನಾಡಿನ ಮತ್ತು ನಾಡಜನರ ಏಳಿಗೆಯ ಕನಸು ನನಸಾಗುವುದು. ಇಂಥದ್ದೊಂದು ದಿನ ತಾನಾಗೇ ಎಂದಿಗೂ ಬಾರದು. ಕನ್ನಡದ ಜನರು ತಾವಾಗೇ ದೇಶಕಾಲಗಳಲ್ಲಿ ಒಗ್ಗಟ್ಟನ್ನು ಸಾಧಿಸುವ ಮೂಲಕ ಈ ಗುರಿಯನ್ನು ಮುಟ್ಟಲು ಸಾಧ್ಯ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಕನ್ನಡಿಗನಿಗೆ ಏಳಿಗೆಯ ಪರಮಗುರಿಯೇ ಕಾಣುತ್ತಿದೆ ಎನ್ನಿಸದು. ಕಾಣುತ್ತಿದ್ದರೂ ಅದನ್ನು ಮುಟ್ಟುವ ದಾರಿ ಕಾಣುತ್ತಿದೆ ಎನ್ನಿಸದು. ಈ ಗುರಿ ಮತ್ತು ದಾರಿಯನ್ನು ಕಂಡುಕೊಳ್ಳುವ ಮತ್ತು ಕಂಡುಕೊಂಡಿದ್ದನ್ನು ಕನ್ನಡಿಗರಿಗೆ ಮುಟ್ಟಿಸುವ ಹಿರಿಯ ಗುರಿಯೊಡನೆ ಬನವಾಸಿ ಬಳಗವು ಕೆಲಸ ಮಾಡುತ್ತಿದೆ. ಈ ನಾಡಪರ ಚಿಂತನೆಗಳ ಸಾರವೇ ಇದೀಗ ಹೊತ್ತಗೆಯಾಗಿ ಮೂಡಿಬಂದಿದೆ.
Related Posts with Thumbnails