ಸಹಜ ನ್ಯಾಯವೆನ್ನುವುದೇ ಇಲ್ಲಿ ಸಂವಿಧಾನ ಬಾಹಿರ!

(ಚಿತ್ರಕೃಪೆ: ಉದಯವಾಣಿ ದಿನಪತ್ರಿಕೆ)
ರಾಜ್ಯಸರ್ಕಾರ ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕವನ್ನು ಹಾಕುವುದನ್ನು ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು "ಸರಿಯಿಲ್ಲಾ" ಎಂದು ರಾಜ್ಯ ಉಚ್ಚನ್ಯಾಯಾಲಯ ಹೇಳಿದೆ ಎನ್ನುವ ಸುದ್ದಿ ಇಂದಿನ (೩೧.೦೩.೨೦೧೪ರ) ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಸಂವಿಧಾನಬಾಹಿರ ಎಂದರೂ ಇದು ನ್ಯಾಯಬದ್ಧ!

ಕನ್ನಡನಾಡಲ್ಲಿರುವ ಎಲ್ಲಾ ವಾಣಿಜ್ಯ ಸಂಸ್ಥೆಗಳು ತಮ್ಮ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕೆನ್ನುವುದು ಸಹಜ ನ್ಯಾಯ. ಯಾಕೆಂದರೆ ಸರ್ಕಾರ ತನ್ನ ನಾಡಿನ ವ್ಯವಸ್ಥೆಗಳನ್ನು ತನ್ನ ಜನರಿಗೆ ಆದಷ್ಟೂ ಹತ್ತಿರಗೊಳಿಸುವಲ್ಲಿ ಜನರ ನುಡಿ ಪ್ರಮುಖವಾದದ್ದು. ಪ್ರಜಾಪ್ರಭುತ್ವದ ಯಶಸ್ಸಿಗೆ ಇದೊಂದು ಅತ್ಯುತ್ತಮ ಸಾಧನ ಎನ್ನುವುದನ್ನು ಪ್ರಪಂಚವೇ ಎತ್ತಿಹೇಳುತ್ತದೆ. ವಿಶ್ವಸಂಸ್ಥೆಯೂ ನುಡಿಜನಾಂಗಕ್ಕಿರುವ ಹಕ್ಕುಗಳನ್ನು ಗುರುತಿಸಿ ಘೋಷಿಸಿದೆ. ಆದರೆ ಭಾರತದ ಸಂವಿಧಾನದಲ್ಲಿರುವ ಭಾಷಾನೀತಿಯ ಹುಳುಕಿನ ಸಾಲುಗಳು ಈ ನಾಡ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ದಮನ ಮಾಡಿದೆ. ರಾಜ್ಯಸರ್ಕಾರಗಳು ಕೇಂದ್ರದ ಗುಲಾಮರು ಎನ್ನುವಂತೆ ರೂಪಿಸಿರುವ ಈ ದೇಶದ ನೀತಿ ನಿಯಮಗಳಲ್ಲಿ...
- ಕರ್ನಾಟಕದ ವಾಹನಗಳ ಮೇಲೆ ಕನ್ನಡದಲ್ಲಿ ನೋಂದಣಿ ಸಂಖ್ಯೆ ಬರೆಯುವುದು ಕಾನೂನು ಬಾಹಿರ
- ಕರ್ನಾಟಕದಲ್ಲಿರುವ ಪಾಸ್‌ಪೋರ್ಟ್ ಕಚೇರಿ, ವಿಮಾನ ನಿಲ್ದಾಣ ಮೊದಲಾದೆಡೆ ಕನ್ನಡ ಬಳಸದಿರುವುದು ಅಪರಾಧವಲ್ಲಾ.
- ಈ ನಾಡಿನ ಅಂಚೆಕಚೇರಿ, ಬ್ಯಾಂಕು, ರೈಲುಗಳಲ್ಲಿ ಕನ್ನಡವೇ ಇರದೆ ಬರೀ ಹಿಂದೀ ಇಂಗ್ಲೀಷ್ ಇರುವುದು ಸಂವಿಧಾನ ಬದ್ಧ!
- ಈ ನಾಡಿನಲ್ಲಿ ಮಾರಾಟವಾಗುವ ಔಷಧಗಳ ಮೇಲೆ ಕನ್ನಡದಲ್ಲಿ ಯಾವ ಮಾಹಿತಿಯನ್ನು ಕೊಡದಿದ್ದರೂ ಪರ್ವಾಗಿಲ್ಲಾ, ಇಂಗ್ಲೀಷು ಹಿಂದೀಲಿ ಇರಬೇಕು.

ಭಾರತದ ಸಂವಿಧಾನವೇ ಇಂಥಾ ಹುಳುಕನ್ನು ಪೊರೆಯುತ್ತಿರುವಾಗ ನಮ್ಮ ಹಣೆಬರಹ ಹೀಗಿರದೆ ಇನ್ನು ಹೇಗಿರಲು ತಾನೇ ಸಾಧ್ಯ? ಇದಕ್ಕೆಲ್ಲಾ ಮದ್ದು ರಾಜ್ಯಸರ್ಕಾರದ ನಾಡಪರಬದ್ಧತೆಯಲ್ಲಿದೆ, ಭಾರತದ ಹುಳುಕಿನ ಭಾಷಾನೀತಿ ಬದಲಾಗುವುದರಲ್ಲಿದೆ, ಕರ್ನಾಟಕದ ರಾಜಕಾರಣ ಕರ್ನಾಟಕ ಕೇಂದ್ರಿತವಾಗುವುದರಲ್ಲಿದೆ... ಬನವಾಸಿ ಬಳಗವು ನಮ್ಮ ಹಕ್ಕೊತ್ತಾಯವನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ತಲುಪಿಸಲು ಮಿಂಬಲೆಯಲ್ಲಿ ಒಂದು ಸಹಿ ಅಭಿಯಾನ ಆರಂಭಿಸಿದೆ. ನೀವು ಅದಕ್ಕೆ ಸಹಿ ಹಾಕಿರಿ. ನಿಮ್ಮವರೊಂದಿಗೂ ಹಂಚಿಕೊಳ್ಳಿ. ಈ ಹಕ್ಕೊತ್ತಾಯವನ್ನು ಮುಖ್ಯಮಂತ್ರಿಗಳಿಗೆ ನಾವು ತಲುಪಿಸುತ್ತೇವೆ.

ಪಿಟಿಷನ್ನಿನ ಕೊಂಡಿ: http://chn.ge/1dJ4zsv

ಲೋಕಸಭಾ ಚುನಾವಣೆಗಳು ಕರ್ನಾಟಕ ಕೇಂದ್ರಿತವಾಗಲಿ!

(ಫೋಟೋ ಕೃಪೆ: ಪ್ರಜಾವಾಣಿ)
ಬರುವ ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕದ ೨೮ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆಗಳು ನಡೆಯಲಿದ್ದು ಭಾರತದ ಸಂಸತ್ತಿನಲ್ಲಿ ನಮ್ಮ ಪ್ರತಿನಿಧಿಗಳಾಗಿ ದನಿಯೆತ್ತುವವರನ್ನು ಆರಿಸುವ ಸಂದರ್ಭ ನಮ್ಮೆದುರು ಮೂಡಿಬಂದಿದೆ. ಹೌದೇ? ನಿಜಕ್ಕೂ ಲೋಕಸಭಾ ಚುನಾವಣೆಗಳು ಈ ಉದ್ದೇಶಕ್ಕಾಗಿಯೇ ನಡೆಯುತ್ತಿದೆಯೇ? ಈ ಹಿಂದೆ ಇಷ್ಟೂ ವರ್ಷಗಳ ಕಾಲ ನಡೆದ ಅಷ್ಟೂ ಚುನಾವಣೆಗಳಲ್ಲಿ ನಮ್ಮಿಂದ ಆರಿಸಿಹೋದ ಸಂಸದರು ನಮ್ಮ ದನಿಯಾಗಿ ದೆಹಲಿಗೆ ತೆರಳಿದ್ದರೇ? ನಾಡಿನ ಪರವಾಗಿ ಬೇಡ, ಸಂಸದರಾಗಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆಯೇ ಎಂದು ನೋಡಿದರೆ ಪಕ್ಷಾತೀತರಾಗಿ ಎಲ್ಲರೂ ಕಳಪೆಯೇ ಎಂಬ ಭಾವ ಮೂಡುತ್ತದೆ.

ವಾಸ್ತವವಾಗಿ ಭಾರತದ ಬಹುತೇಕ ಕಡೆಗಳಲ್ಲಿರುವಂತೆ ಪ್ರಾದೇಶಿಕ ಪಕ್ಷಗಳು ಕರ್ನಾಟಕದಲ್ಲಿನ್ನೂ ಅಸ್ತಿತ್ವಕ್ಕೆ ಬಾರದಿರುವ ಈವತ್ತಿನ ಸನ್ನಿವೇಶದಲ್ಲಿ ಕರ್ನಾಟಕದ ಮತದಾರರ ಮುಂದೆ ಆಯ್ಕೆಗಳು ವಿರಳವಾಗಿದ್ದು, ಕನ್ನಡ ಕನ್ನಡಿಗ ಕರ್ನಾಟಕದ ಪರವಾಗಿ ದನಿ ಎನ್ನುವುದೇ ಚುನಾವಣೆಯ ವಿಷಯವೇ ಆಗದೆ ಇರುವುದು ನಾಡಿನ ದುರಂತವಲ್ಲದೆ ಮತ್ತೇನು? ಇಡೀ ಚುನಾವಣೆಯಲ್ಲಿ ನಮ್ಮ ನಾಡಿನ ಕುರಿತಾಗಿ ಸ್ಪಷ್ಟವಾದ ಯಾವ ಭರವಸೆಯನ್ನು ನಮ್ಮ ಅಭ್ಯರ್ಥಿಗಳು/ ಪಕ್ಷಗಳು ನೀಡುತ್ತಿವೆ, ಯಾವ ಪಕ್ಷ/ ಅಭ್ಯರ್ಥಿ ಯಾವ ಯೋಜನೆಗಳನ್ನು ನಮ್ಮ ನಾಡಿಗಾಗಿ ಯೋಜಿಸುತ್ತಿವೆ ಎಂಬುದಾಗಿ ಮತದಾರರು ಯೋಚನೆಯನ್ನೂ ಮಾಡಲು ಬಿಡದ ಹಾಗೆ ಇಡೀ ಲೋಕಸಭಾ ಚುನಾವಣೆಯ ವಿಷಯವನ್ನು ಸಾಮಾನ್ಯರಿಂದ ದೂರಕ್ಕೊಯ್ದು ನಿಲ್ಲಿಸಿರುವುದು ಕಣ್ಣಿಗೆ ರಾಚುತ್ತದೆ,

ಕೇಂದ್ರದಲ್ಲಿ ರಾಜ್ಯದ ಕಡೆಗಣನೆ

ಸ್ವತಂತ್ರ ಬಂದಾಗಿನಿಂದ ಇಂದಿನವರೆವಿಗೂ ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳ ಸರಮಾಲೆಯನ್ನು ಕಂಡಾಗ ಇದಕ್ಕೆ ಮೂಲ ಕಾರಣ ನಮ್ಮ ಸಂಸದರು ಎಂಬುದು ಕಾಣುತ್ತದೆ. ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಚಿಕ್ಕದಾಗಿರುವ ನೆರೆಯ ತಮಿಳುನಾಡಿನಲ್ಲಿರುವ ರೈಲು ಮಾರ್ಗದ ಉದ್ದ ೫೯೫೨ ಕಿಮೀ ಇದ್ದರೆ ಕರ್ನಾಟಕದ್ದು ೩೦೮೯ ಕಿಮೀ. ಒಟ್ಟು ರಾಷ್ಟ್ರೀಯ ಹೆದ್ದಾರಿಯ ಉದ್ದ ಅಲ್ಲಿ ೫೦೩೬ ಕಿಮೀ ೩೯೭೩ ಇದೆ. ತಮಿಳುನಾಡಿನ ೩೦% ರೈಲು ಮಾರ್ಗ ವಿದ್ಯುತ್ ಮಾರ್ಗವಾಗಿದ್ದರೆ ಇಲ್ಲಿಯದು ಬರೀ ೫%. ಇದು ಇಡೀ ದೇಶದಲ್ಲೇ ಅತಿ ಕಡಿಮೆ. ಕೇಂದ್ರವಿದ್ಯುತ್ ಜಾಲದಿಂದ ತಮಿಳುನಾಡಿಗೆ ೬೧% ವಿದ್ಯುತ್ ಸಿಗುತ್ತಿದ್ದರೆ ನಮ್ಮ ರಾಜ್ಯಕ್ಕೆ ಸಿಗುತ್ತಿರುವುದು ೨೧% ಮಾತ್ರಾ, ಪ್ರತಿಷ್ಟಿತ ನರ್ಮ್ ಯೋಜನೆಯಲ್ಲಿ ಬಿಡುಗಡೆಯಾದ ಹಣ ತಮಿಳುನಾಡಿಗೆ ೨೨೫೦ ಕೋಟಿಯಾದರೆ ಕರ್ನಾಟಕಕ್ಕೆ ೧೫೨೪ ಕೋಟಿ. ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ತಮಿಳುನಾಡಿನಿಂದ ಆಯ್ದದ್ದು ೭೨% ಆದರೆ ಕರ್ನಾಟಕದ್ದು ೩೬%. ಚೆನ್ನೈ ಮೆಟ್ರೋದಲ್ಲಿ ಬರೀ ತಮಿಳು ಇಂಗ್ಲೀಷಿಗೆ ಸ್ಥಾನವಾದರೆ ಬೆಂಗಳೂರಿನಲ್ಲಿ ಕನ್ನಡ ಹಿಂದೀ ಇಂಗ್ಲೀಷಿಗೆ ಸ್ಥಾನ! ಈ ಬರಹದಲ್ಲಿ ಓದುಗರಿಗೆ ಸುಲಭವಾಗಿ ಅರ್ಥವಾಗಲೆಂದು ಬರಿಯ ನೆರೆಯ ತಮಿಳುನಾಡಿನೊಂದಿಗೆ ಹೋಲಿಕೆ ನೀಡಲಾಗಿದೆ. ವಾಸ್ತವವಾಗಿ ದೇಶದ ಸರಾಸರಿಗೆ ಹೋಲಿಸಿದರೂ, ಇನ್ನಾವುದೇ ರಾಜ್ಯಕ್ಕೆ ಹೋಲಿಸಿದರೂ ನಮ್ಮ ನಾಡಿನ ಪರಿಸ್ಥಿತಿ ಇಷ್ಟೇ! ಒಟ್ಟಾರೆ ಸದಾಕಾಲ ಕರ್ನಾಟಕದ ಕಡೆಗಣನೆಯೇ ಆಗುತ್ತಿರುವುದನ್ನು ಸರ್ಕಾರಿ ಅಂಕಿಅಂಶಗಳೇ ತೋರಿಸುತ್ತಿರುವಾಗ ಇದಕ್ಕೆಲ್ಲಾ ಕಾರಣ ಏನು ಎಂದು ಹುಡುಕಬೇಕಾಗಿದೆ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷವಿದೆ ಇಲ್ಲಿ ರಾಷ್ಟ್ರೀಯ ಪಕ್ಷಗಳು ಆಳುತ್ತಿವೆ ಎಂಬುದು ಮೇಲ್ನೋಟಕ್ಕೆ ಕಂಡರೂ ಆಳದಲ್ಲಿ ಕಾಣುವುದು ನಮ್ಮ ಸಂಸದರು ಪ್ರತಿನಿಧಿಸುತ್ತಿರುವುದು ಕರ್ನಾಟಕವನ್ನಾಗಲೀ, ಕನ್ನಡಿಗರನ್ನಾಗಲೀ ಅಲ್ಲಾ.. ಬದಲಿಗೆ ತಮ್ಮ ಪಕ್ಷದ ಹೈಕಮಾಂಡ್/ ಸರ್ಕಾರವನ್ನು ಮಾತ್ರಾ ಎನ್ನುವುದು ಎದ್ದು ಕಾಣುತ್ತದೆ.

ನಮ್ಮ ಸಂಸದರು ಮತ್ತು ಸಂಸತ್ತು

ಸಂಸದರಾಗಿದ್ದವರು ಲೋಕಸಭೆಯ ಕಲಾಪಗಳಲ್ಲಿ ಭಾಗವಹಿಸದಿರುವುದು, ಸಂಸದರ ನಿಧಿಯನ್ನು ಸರಿಯಾಗಿ ಬಳಸಿಕೊಳ್ಳದಿರುವುದು, ಪ್ರಶ್ನೆಗಳನ್ನು ಕೇಳದಿರುವುದು ಇವೆಲ್ಲಾ ಒಂದೆಡೆಯಾದರೆ ನಮ್ಮ ನಾಡಿಗೆ ಸಂಬಂಧವೇ ಇರದ ಬುಂದೇಲಖಂಡದ ಯಾವುದೋ ನೀರಾವರಿ ಯೋಜನೆಯ ಸ್ಥಿತಿಗತಿ ತಿಳಿಯಲು ಮೇಲೆ ಬಿದ್ದು ಮೂರ್ಮೂರು ಮಂದಿ ಸಂಸದರು ಪ್ರಶ್ನೆಯನ್ನು ಕೇಳಿರುವುದೂ ಇದೆ. ಮತ್ತೊಂದೆಡೆ ನಾಡಿನ ಸಮಸ್ಯೆಗಳ ವಿಷಯಕ್ಕೆ ಬಂದಾಗ ನಮ್ಮ ಸಂಸದರೆಲ್ಲಾ ಒಂದಾಗಿ ನಿಲ್ಲುವುದೇ ಅಪರೂಪ ಎನ್ನುವ ಪರಿಸ್ಥಿತಿಯಿದೆ. ಹಾಗೆ ನಿಂತರೂ ಕೂಡಾ ಗಾಂಧಿ ಪ್ರತಿಮೆಯೆದುರು ಪ್ರತಿಭಟನೆ ಮಾಡಿಯೋ, ಸಂಸತ್ತಿನ ಹೊರಗೋ, ಜಂತರ್ ಮಂತರ್ ಬಳಿ ಸೇರಿ ಕೂಗುವುದೋ ಮೊದಲಾದ ತೋರಿಕೆಯ ಪ್ರತಿಭಟನೆಗಳಿಗಷ್ಟೇ ಇವರ ದನಿ ಸೀಮಿತವಾಗಿರುವುದನ್ನು ಕಾಣಬಹುದಾಗಿದೆ.

ಸಂಸದರಿಂದ ನಿರೀಕ್ಷೆಗಳು

ಭಾರತವೆನ್ನುವ ರಾಜ್ಯಗಳ ಒಕ್ಕೂಟದಲ್ಲಿ ಕೇಂದ್ರಸರ್ಕಾರವು ಹೇಗೆ ಕೆಲಸ ಮಾಡಬೇಕಾಗಿದೆ, ಸಂಸತ್ತಿನಲ್ಲಿ ರೂಪುಗೊಳ್ಳುವ ಕಾಯ್ದೆ ಕಾನೂನು ನಿಯಮಾವಳಿಗಳು ಹೇಗಿರಬೇಕಾಗಿದೆ ಎಂಬ ಚಿಂತನೆಯೇ ನಮ್ಮ ಸಂಸದರಲ್ಲಿ ಇಲ್ಲವಾಗಿದೆ. ರಾಷ್ಟ್ರೀಯ ಪಕ್ಷಗಳೇ ಈ ಚುನಾವಣೆಯ ಪ್ರಮುಖ ಪಾಲುದಾರರಾಗಿದ್ದು ತಮ್ಮ ಮೂಗಿನ ನೇರದ ವಿಷಯಗಳನ್ನಷ್ಟೇ ಚುನಾವಣೆಗಳ ಕೇಂದ್ರವಾಗಿಸುತ್ತಿರುವುದು ಕಾಣುತ್ತಿದೆ. ಈ ಹಂತದಲ್ಲಿ ನಮ್ಮ ನಾಡಿನ ಸಂಸದರಿಂದ ಜನರಿಗಿರಬೇಕಾದ ನಿರೀಕ್ಷೆಗಳ ಬಗ್ಗೆ ಮತದಾರರು ಯೋಚಿಸಬೇಕಾಗಿದೆ.

ಸಮಾನತೆಯ ಭಾರತ ಒಕ್ಕೂಟ: ಸಂಸತ್ತು ಕಾಯ್ದೆ ಕಾನೂನುಗಳನ್ನು ರೂಪಿಸುವ ಪ್ರಾಥಮಿಕ ಹೊಣೆ ಹೊಂದಿದ್ದು ಭಾರತದ ಸ್ವರೂಪವನ್ನು ಒಕ್ಕೂಟವಾಗಿಸುವತ್ತ ಗಮನಹರಿಸಬೇಕಾಗಿದೆ. ಸಂಸದರು ರಾಜ್ಯಗಳಿಗೆ ಹೆಚ್ಚೆಚ್ಚು ಸ್ವಾಯತ್ತತೆ ಕೊಡಿಸುವ ಬಗ್ಗೆ, ಅಧಿಕಾರ ವಿಕೇಂದ್ರೀಕರಣದ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ದುಡಿಯಬೇಕಾಗಿದೆ, ಕೇಂದ್ರಸರ್ಕಾರದ ಕಪಿಮುಷ್ಟಿಯಲ್ಲಿರುವ ಅಧಿಕಾರಗಳಲ್ಲಿ ಬಹುತೇಕವನ್ನು ರಾಜ್ಯಗಳಿಗೆ ಬಿಟ್ಟುಕೊಡುವಂತೆ ಮಾಡಬೇಕಾಗಿದೆ, ರಾಜ್ಯಗಳ ಅನನ್ಯತೆಯನ್ನು ಎತ್ತಿಹಿಡಿಯುವ ವೈವಿಧ್ಯತೆಯನ್ನು ಪೊರೆಯುವ ಆಡಳಿತ ಭಾಷಾನೀತಿ, ಅನಿಯಂತ್ರಿತ ವಲಸೆ ನಿಯಂತ್ರಣ ನೀತಿ, ರಾಜ್ಯ ರಾಜ್ಯಗಳ ಸಂಬಂಧ ಸುಧಾರಣೆಗೆ ಅಂತರರಾಜ್ಯ ಮಾತುಕತೆಗೆ ಒತ್ತುಕೊಡುತ್ತಲೇ ನದಿ ನೀರು ಹಂಚಿಕೆ ಮಾರ್ಗದರ್ಶಿ ಸೂತ್ರ, ಗಡಿ ನಿರ್ಣಯಿಸುವ ಮಾರ್ಗದರ್ಶಿ ಸೂತ್ರ ಮೊದಲಾದ ನೀತಿಗಳನ್ನು ರೂಪಿಸಲು ಶ್ರಮಿಸಬೇಕಾಗಿದೆ.

ಕಾಪಾಡಬೇಕಾದ ನಾಡಿನ ಹಿತ: ಕರ್ನಾಟಕದ ಸಂಸದರು ಕನ್ನಡನಾಡಿಗೆ ರೈಲ್ವೇ, ರಾಷ್ಟ್ರೀಯ ಹೆದ್ದಾರಿ, ನೀರಾವರಿ, ವಿದ್ಯುತ್ ಸೇರಿದಂತೆ ನಾಡಿನ ಏಳಿಗೆಗೆ ಬೇಕಾದ ಯೋಜನೆಗಳನ್ನು ದಕ್ಕಿಸಿಕೊಳ್ಳುವತ್ತ ದುಡಿಯಬೇಕಾಗಿದೆ. ಕಾವೇರಿ, ಕೃಷ್ಣಾ, ಕಳಸಾ ಭಂಡೂರ ಯೋಜನೆಯಂತಹ ನದಿನೀರು ಹಂಚಿಕೆಯ ವಿಷಯಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾಗಿದೆ. ನೆರೆ ಬರ ಮೊದಲಾದ ಸಂಕಷ್ಟಗಳ ಸಮಯದಲ್ಲಿ ಮಾಡಲಾಗುವ ಕೇಂದ್ರದ ನೆರವು ಹಂಚಿಕೆಯಲ್ಲಿ ತಾರತಮ್ಯವಾಗದಂತೆ ರಾಜ್ಯದ ಹಿತ ಕಾಪಾಡಬೇಕಾಗಿದೆ, ನಮ್ಮ ಸಂಸದರ ನಿಧಿಯನ್ನು ಸೂಕ್ತವಾಗಿ ಬಳಸುವ ಮೂಲಕ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಮೂಲಭೂತ ಹೊಣೆಯೂ ಇವರಿಗಿದೆ. ಮುಂದಿನ ದಿನಗಳಲ್ಲಿ ಕನ್ನಡಿಗರ ಒಗ್ಗಟ್ಟು ಮತ್ತು ಏಳಿಗೆಗೆ ಕಂಟಕಪ್ರಾಯವಾಗುವಂಥಾ ಎರಡನೇ ರಾಜ್ಯ ಪುನರ್ವಿಂಗಡನಾ ಆಯೋಗ ರಚನೆಯಂತಹ ಕ್ರಮಗಳನ್ನು ಆರಂಭದಿಂದಲೇ ವಿರೋಧಿಸುವ, ನಾಡಿನ ಒಗ್ಗಟ್ಟು ಏಳಿಗೆಗಳಿಗಾಗಿ ತಮ್ಮದೇ ಪಕ್ಷದ ಸರ್ಕಾರ/ ಹೈಕಮಾಂಡುಗಳನ್ನು ಎದುರುಹಾಕಿಕೊಳ್ಳಬಲ್ಲಂಥಾ ಗಟ್ಟಿತನವನ್ನು ನಮ್ಮೆಲ್ಲಾ ಸಂಸದರಿಂದ ನಿರೀಕ್ಷಿಸಬೇಕಾಗಿದೆ. ಈ ಚುನಾವಣೆಯಲ್ಲಿ ನಮ್ಮ ಮುಂದೆ ಇಂತಹ ನಿಲುವಿನ ಪಕ್ಷಗಳಾಗಲೀ ಅಭ್ಯರ್ಥಿಗಳಾಗಲೀ ಕಾಣದಿದ್ದರೆ ನಾಳೆಗಳಿಗಾಗಿ ಕನ್ನಡಿಗರು ಇಂತಹ ಬದಲಾವಣೆಯನ್ನು ನಾಡಿನ ರಾಜಕಾರಣದಲ್ಲಿ ತರಲೇಬೇಕಾಗಿದೆ.

(ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಬರಹ)

ಗ್ರಾಹಕ ಹಕ್ಕಿಗಾಗಿ ನೀವೂ ದನಿಗೂಡಿಸಿ!



ಪ್ರತಿವರ್ಷ ಮಾರ್ಚ್ ತಿಂಗಳ ೧೫ನೇ ದಿನವನ್ನು ವಿಶ್ವ ಗ್ರಾಹಕಹಕ್ಕು ದಿನವಾಗಿ ಆಚರಿಸಲಾಗುತ್ತದೆ. ೧೯೬೨ರ ಇದೇ ದಿನ ಅಮೇರಿಕಾದ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಜಾನ್ ಎಫ಼್ ಕೆನಡಿಯವರು ಮಾಡಿದ ಭಾಷಣದ ನೆನಪಿಗಾಗಿ ಈ ದಿನವನ್ನು ಹೀಗೆ ಆಚರಿಸಲಾಗುತ್ತದೆ. ಭಾರತದಲ್ಲೂ ಕೂಡಾ ಹೀಗೆ ಎಲ್ಲೆಡೆ ಗ್ರಾಹಕರ ಹಕ್ಕುಗಳಿಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ತಮಾಶೆಯೆಂದರೆ ಗ್ರಾಹಕಹಕ್ಕು ರಕ್ಷಣೆಯ ಬಗ್ಗೆ ಮೂಡಿಸುವ ಜಾಗೃತಿಯ ಈ ಕಾರ್ಯದಲ್ಲಿ ಗ್ರಾಹಕರ ನುಡಿಯನ್ನು ಬಳಸಬೇಕೆನ್ನುವ ಆಯಾಮವನ್ನೇ ಕೈಬಿಟ್ಟು ಬರೀ ಉತ್ಪನ್ನಗಳ ತೂಕ, ಗುಣಮಟ್ಟ, ಅಳತೆಗಳ ಬಗ್ಗೆ ಇರುವ ಹಕ್ಕುಗಳನ್ನು ಮನದಟ್ಟು ಮಾಡಿಕೊಡಲಾಗುತ್ತದೆ. ನಿಜವಾಗಿ ಗ್ರಾಹಕರ ಹಕ್ಕುಗಳನ್ನು ಸರಿಯಾಗಿ ದಕ್ಕಿಸಿಕೊಳ್ಳಲು ಇರುವ ಸಾಧನಗಳಲ್ಲಿ ಗ್ರಾಹಕನ ನುಡಿಯ ಬಳಕೆ ಮುಖ್ಯವಾದದ್ದು. ಈ ಬಗ್ಗೆ ಕನ್ನಡಿಗರಲ್ಲಿ ಎಚ್ಚರ ಮೂಡಿಸುವ ಕನ್ನಡ ಗ್ರಾಹಕರ ಕೂಟದ ಒಂದು ಪ್ರಯತ್ನ ಇಲ್ಲಿದೆ.


ಸಾಮಾನ್ಯವಾಗಿ ಗ್ರಾಹಕನ ಹಕ್ಕು ಎಂದಾಗ ತೂಕ, ಅಳತೆ, ಗುಣಮಟ್ಟಗಳ ಸುತ್ತ ವಿಷಯಗಳು ಚರ್ಚಿಸಲ್ಪಡುತ್ತವೆ. ಈ ವಿಷಯಗಳು ನಿಜಕ್ಕೂ ಮುಖ್ಯವಾದವಾಗಿದ್ದರೂ ಸಹ, ಈ ವಿಷಯಗಳು ಜನರಿಗೆ ಯಾವ ಭಾಷೆಯಲ್ಲಿ ತಿಳಿಸಲ್ಪಡುತ್ತವೆ ಅನ್ನುವುದು ಹೆಚ್ಚಾಗಿ ಪ್ರಸ್ತಾಪವಾಗುವುದಿಲ್ಲ. ಈ ಮಾಹಿತಿಗಳು ಇಂಗ್ಲೀಶ್ ಅಥವಾ ಹಿಂದೀ ಭಾಷೆಗಳಲ್ಲಿ ಮಾತ್ರವಿದ್ದು, ಜನರ ಭಾಷೆಯಲ್ಲಿ ಇರದೇ ಹೋದರೆ ಈ ಮಾಹಿತಿಯನ್ನು ಕೊಡುವುದರಿಂದ ತಾನೇ ಏನು ಪ್ರಯೋಜನ? ಸ್ಥಳೀಯ ಭಾಷೆಗಳಲ್ಲಿ ಮಾಹಿತಿಯನ್ನು ಕೊಡಬೇಕಾದುದು ಸ್ವಾಭಾವಿಕವೂ, ಜನಪರವೂ ಹಾಗೂ ನ್ಯಾಯಸಮ್ಮತವೂ ಆಗಿದೆ. ಆದ್ದರಿಂದ ಕನ್ನಡ ನಾಡಿನಲ್ಲಿ ಕನ್ನಡದಲ್ಲೇ ಸೇವೆಯನ್ನು ಪಡೆಯುವುದು ನಮ್ಮೆಲ್ಲರ ಹಕ್ಕಾಗಿದೆ. ಈ ಹಕ್ಕು ಸಹಜವಾಗಿ ನಮಗೆ ದಕ್ಕುತ್ತಿಲ್ಲದಿದ್ದಲ್ಲಿ ಅದಕ್ಕಾಗಿ ದನಿಯೆತ್ತುವ, ಹೋರಾಟಗಳ ಮೂಲಕವಾದರೂ ಸರಿಯೇ, ಅವುಗಳನ್ನು ದಕ್ಕಿಸಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ.


ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ದಕ್ಕಿಸಿಕೊಳ್ಳಲು ಹಲವಾರು ಪ್ರಯತ್ನಗಳು ಈವರೆಗೂ ನಡೆದಿವೆ ಹಾಗೂ ನಡೆಯುತ್ತಿವೆ. ಗ್ರಾಹಕ ಸೇವೆಯಲ್ಲಿ ಹಾಗೂ ನಾಗರೀಕ ಸೇವೆಯಲ್ಲಿ ಕನ್ನಡದ ಬಳಕೆ ಆಗುವಂತೆ ಮಾಡಲು ನಾವು ನೀವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕಿದೆ. ಕನ್ನಡದಲ್ಲಿ ಸೇವೆ ಪಡೆಯಲು ಆಗುತ್ತಿರುವ ಎಲ್ಲಾ ಪ್ರಯತ್ನಗಳಿಗೆ ಇಂಬು ಕೊಡುವ ಉದ್ದೇಶದಿಂದ ಕನ್ನಡ ಗ್ರಾಹಕರ ಕೂಟದ ವತಿಯಿಂದ ಒಂದು ಫೋರಮ್ ಅನ್ನು ತೆರೆಯಲಾಗಿದೆ. ಈ ಫೋರಮ್ ನಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗದೆ ನಿಮಗಾದ ಕಹಿ ಅನುಭವವನ್ನು ಹಂಚಿಕೊಳ್ಳಬಹುದು. ಹಾಗೆ ಅದನ್ನು ಸರಿ ಮಾಡಲು ಮಾಡಿದ ಪ್ರಯತ್ನಗಳನ್ನು ಕೂಡ ಹಂಚಿಕೊಳ್ಳಬಹುದು. ಇದರೊಟ್ಟಿಗೆ ಮಾರುಕಟ್ಟೆಯ ಮಾಹಿತಿ ಮತ್ತು ಗ್ರಾಹಕ ಸೇವೆ ಕಾನೂನಿನ ಮಾಹಿತಿಯನ್ನು ಹಂಚಿಕೊಳ್ಳಬಹುದು. ಅಷ್ಟೇ ಅಲ್ಲದೇ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗುವೆಡೆ ನೀವು ಪ್ರಯತ್ನಿಸಿ ಯಶಸ್ವಿಯಾದ ಸುದ್ದಿಗಳನ್ನೂ ಕೂಡ ಇಲ್ಲಿ ಹಂಚಿಕೊಳ್ಳಬಹುದು.

ಕನ್ನಡ ಗ್ರಾಹಕರ ಒಗ್ಗಟಿನ ಸೂರಾದ ಈ ಫೋರಮ್ ಗೆ ಸೇರಲು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ. ನಿಮ್ಮ ಗೆಳೆಯರಿಗೂ ಇದರ ಬಗ್ಗೆ ತಿಳಿಸಿ.

ನಮಗೆ ಬೇಕಿರೋದು "ನಮ್ಮ ಮೆಟ್ರೋ"! "ಹಮಾರಾ ಮೆಟ್ರೋ" ಅಲ್ಲಾ!!



ಉಪೇಂದ್ರ ಅವರ ಸಿನಿಮಾ ಶೈಲಿಯಲ್ಲಿ ಹೇಳಬೇಕೆಂದರೆ... ಇಂದು ಬೆಂಗಳೂರಿನಲ್ಲಿ ಎರಡನೇ ಹಂತದ "ಹಮಾರ ಮೆಟ್ರೋ" ಉದ್ಘಾಟನೆಯಾಗಿದೆ. ಐ ಲೈಕ್ ಇಟ್! ಎಲ್ಲಾ ಕನ್ನಡಿಗರಿಗೂ ಅಭಿನಂದನೆ. "ಹಮಾರಾ ಮೆಟ್ರೋ" ಅಧಿಕಾರಿ ವರ್ಗಕ್ಕೂ, ಅರ್ಧಕ್ಕಿಂತಾ ಹೆಚ್ಚು ಬಂಡವಾಳ ಹಾಕಿ ಇಡೀ ಕರ್ನಾಟಕವನ್ನು ಹಿಂದೀಮಂದಿಗೆ ಬರೆದುಕೊಡುತ್ತಿರುವ ರಾಜ್ಯಸರ್ಕಾರಕ್ಕೂ... ಇಷ್ಟೆಲ್ಲಾ ನಡೆಯುತ್ತಿದ್ದರೂ ‘ತಮಗೆ ಏನೂ ಆಗೇ ಇಲ್ಲಾ, ಆಗೋದೇ ಇಲ್ಲಾ, ಹಿಂದೀ ಭಾರತದ ರಾಷ್ಟ್ರಭಾಷೆ, ಇದು ಭಾರತದ ಒಗ್ಗಟ್ಟಿನ ಭಾಷೆ’ ಎಂಬ ಭ್ರಮೆಯಲ್ಲಿ ನಾಳಿನ ಕನ್ನಡಿಗರ ಬದುಕನ್ನು ಕರಾಳವಾಗಿಸುತ್ತಿರುವ ಕನ್ನಡನಾಡಿನ ಎಲ್ಲಾ "ಸತ್-ಪ್ರಜೆ"ಗಳಿಗೂ ಅಭಿನಂದನೆಗಳು!

ಇಂದು ಮೆಟ್ರೋ ಮೂಲಕ ನುಸುಳುವ ಹಿಂದೀ ನಾಳೆ ಬಿಎಂಟಿಸಿಯನ್ನು ಬಿಡೋದಿಲ್ಲಾ! ಮುಂದೊಮ್ಮೆ ಮುಂಬೈಯಲ್ಲಿ ಮರಾಟಿಗೆ ಆಗಿರುವ ಗತಿ ಕನ್ನಡಕ್ಕೂ ಆಗುವ ಮೊದಲು ನಾಡಿನ ಜನರು, ಸರ್ಕಾರ ಎಚ್ಚೆತ್ತುಕೊಂಡರೆ ಒಳಿತು. ಯಾವುದೇ ಕಾನೂನಿನ ಬೆಂಬಲವಿಲ್ಲದ, ಕೇವಲ ಮೆಟ್ರೋದ ಆಡಳಿತ ಮಂಡಳಿ ತೆಗೆದುಕೊಂಡಿರುವ ಈ ಹಿಂದೀ ಪರವಾದ ನಿಲುವು ಎಷ್ಟು ಬೇಗ ಬದಲಾದರೆ ಅಷ್ಟು ನಾಡಿಗೆ ಒಳಿತು! ಏಕೆಂದರೆ...

ನಮ್ಮ ಮೆಟ್ರೋ ಎಂಬ ಹಿಂದೀ ಪ್ರಚಾರಕ!

"ಸಮಾನತೆಯೇ ಜೀವಾಳ, ಇಲ್ಲಿ ಎಲ್ಲರೂ ಸಮಾನರು" ಎಂದು ಬಡಾಯಿ ಕೊಚ್ಚಿಕೊಳ್ಳುವ ಭಾರತ ದೇಶದಲ್ಲಿ ಪ್ರಜಾಪ್ರಭುತ್ವದ ಹೆಸರಲ್ಲಿ, ಬಹುಸಂಖ್ಯಾತರ ನೆಪದಲ್ಲಿ... ನಿಜಕ್ಕೂ ಅರ್ಧಕ್ಕಿಂತಲೂ ಹೆಚ್ಚು ಭಾರತೀಯರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಮಾಡಿರುವುದು ಉತ್ತರವಾಗಿ ಕಾಣುತ್ತದೆ. ಭಾರತವು ತನ್ನ ಸಂವಿಧಾನದಲ್ಲಿ ಬರೆದುಕೊಂಡು ಒಪ್ಪಿಕೊಂಡು ಆಚರಿಸುತ್ತಿರುವ "ಆಡಳಿತ ಭಾಷಾ ನೀತಿ"ಯೇ ಇದಕ್ಕೆ ಕಾರಣವಾಗಿದೆ. ಈ ಕಾರಣದಿಂದಾಗಿಯೇ ನಮ್ಮ ನಿಮ್ಮ ಕೋಟ್ಯಾಂತರ ರೂಪಾಯಿಗಳಷ್ಟು ತೆರಿಗೆ ಹಣವನ್ನು ‘ಹಿಂದೀ ಭಾಷೆಯನ್ನು ಈ ದೇಶದ ಮೂಲೆಮೂಲೆಗಳಿಗೆ ಹರಡಲು’ ಬಳಸಲಾಗುತ್ತಿದೆ. ಈ ಹರಡುವಿಕೆಯ ಹಿಂದಿರುವ ಉದ್ದೇಶವೇ ಇಡೀ ಭಾರತವನ್ನು ಹಿಂದೀ ಭಾಷಿಕರ ಆಡುಂಬೊಲ ಮಾಡುವುದು ಎಂಬಂತೆ ಕಾಣುತ್ತಿದೆ.  ಹಿಂದೀ ಭಾಷಿಕರು ಎಲ್ಲೇ ಹೋಗಲಿ ಅವರ ಬದುಕು ಸರಾಗವಾಗಿರುವಂತೆ ನೋಡಿಕೊಳ್ಳುವುದೇ ಇದರ ಗುರಿಯಾಗಿದೆ. ಇಲ್ಲದಿದ್ದರೆ ಭಾರತದ ಯಾವುದೇ ಮೂಲೆಯಲ್ಲಿನ ಕೇಂದ್ರಸರ್ಕಾರಿ ಕಚೇರಿಯಲ್ಲೂ ಹಿಂದೀಯಲ್ಲಿ ಬರೆಯಲಾದ ಪತ್ರಕ್ಕೆ ಹಿಂದೀಯಲ್ಲೇ ಉತ್ತರಿಸುವುದು ಕಡ್ಡಾಯ ಎನ್ನುವ ಕಾನೂನು ಇರುತ್ತಿರಲಿಲ್ಲ! ಇರಲಿ... ಈ ಹರಡುವಿಕೆಯು ಕೆಲವೆಡೆ ಹೇರಿಕೆಯಾಗಿದ್ದರೆ ಇನ್ನೂ ಕೆಲವೆಡೆ ಹೇರಿಕೆ ಗೊತ್ತೇ ಆಗದಂತಿದೆ. ಇಂಥಾ ಒಂದು ಪುಣ್ಯಕ್ಷೇತ್ರ ನಮ್ಮ ಬೆಂಗಳೂರಿನಲ್ಲೇ ಹರಿದಾಡುತ್ತಿದೆ. ಅದು "ನಮ್ಮ ಮೆಟ್ರೋ" ರೈಲು ಸಂಪರ್ಕ ವ್ಯವಸ್ಥೆ!

ಮೆಟ್ರೋದಲ್ಲಿ ಹಿಂದೀ ನರ್ತನ!

ನಮ್ಮ ಮೆಟ್ರೋದಲ್ಲಿ ಕೇಂದ್ರಸರ್ಕಾರದ ಹಣ ಸ್ವಲ್ಪಮಟ್ಟಿಗೆ ತೊಡಗಿಸಲಾಗಿದೆ ಎನ್ನುವ ಕಾರಣ ನೀಡಿಯೋ, ಕರ್ನಾಟಕವು ತ್ರಿಭಾಷಾಸೂತ್ರವನ್ನು ಒಪ್ಪಿದೆಯೆನ್ನುವ ಕಾರಣ ನೀಡಿಯೋ ಮೂರುಭಾಷೆಗಳಲ್ಲಿ ಎಲ್ಲಾ ಸೇವೆಗಳನ್ನು ನೀಡಲಾಗುತ್ತಿದೆ. ಇದುವರೆವಿಗೆ ಬೆಂಗಳೂರಿನ ಸಾರ್ವಜನಿಕ ಬಳಕೆಯ ಸ್ಥಳೀಯ ಸಾರಿಗೆಯಲ್ಲಿ ಕನ್ನಡ ಮತ್ತು ಇಂಗ್ಲೀಶ್ ಬಿಟ್ಟು ಹಿಂದೀಯನ್ನು ಬಳಸಿರಲಿಲ್ಲಾ! ಇದೀಗ ನಮ್ಮ ಮೆಟ್ರೋದಲ್ಲಿ ಬರಿಯ ಫಲಕಗಳಷ್ಟೇ ಅಲ್ಲದೆ ಹಿಂದೀಯಲ್ಲಿ ಸೂಚನೆಗಳನ್ನು ಕೂಡಾ ನೀಡಲು ಶುರುಮಾಡಿದ್ದಾರೆ. ಅಲ್ಲಾರೀ! ಕನ್ನಡದಲ್ಲಿದೆಯಲ್ಲಾ... ಹಿಂದೀಲಿ ಇದ್ದರೇನು? ಎಂದು ಭಾವಿಸುವ ಜನರಿಗೇನು ನಮ್ಮಲ್ಲಿ ಕೊರತೆಯಿಲ್ಲ. ಆದರೆ ಯೋಚಿಸಿ ನೋಡಿದರೆ.. ಇದರ ಹಿಂದೆ ಹಿಂದೀ ಭಾಷಿಕರ ವಲಸೆಯನ್ನು ಉತ್ತೇಜಿಸುವ, ಆ ಮೂಲಕ ಕರ್ನಾಟಕದಂತಹ ರಾಜ್ಯಗಳ ಜನಲಕ್ಷಣವನ್ನೇ ಬುಡಮೇಲುಗೊಳಿಸುವ ಹುನ್ನಾರ ಕಾಣುತ್ತದೆ. ಈ ನೀತಿಯ ಹಿಂದೆ ಭಾರತದ ಭಾಷಾನೀತಿಯು ಕೆಲಸ ಮಾಡಿರುವುದು ಕಾಣುತ್ತದೆ ಮತ್ತು ಅದರ ಹುಳುಕು ಕಣ್ಣಿಗೆ ರಾಚುತ್ತದೆ!

ಹುಳುಕು ಯಾಕೆಂದರೆ...!

ಇಲ್ಲಿ ಹಿಂದೀಯ ಅಗತ್ಯವೇ ಇಲ್ಲದಿರುವಾಗಲೂ ಹಾಗೆ ಹಿಂದೀಯನ್ನು ಬಳಸಿರುವುದರ ಏಕೈಕ ಉದ್ದೇಶ "ಹಿಂದೀ ಭಾಷಿಕ ಜನರಿಗೆ ಅನುಕೂಲವಾಗಲೀ" ಎನ್ನುವುದೇ ಆಗಿದೆ. ‘ಬೆಂಗಳೂರಿಗೆ ಭಾರತದ ಎಲ್ಲೆಡೆಯಿಂದ ಜನರು ಬರುತ್ತಾರೆ ಹಾಗಾಗಿ ಇಲ್ಲಿ ಹಿಂದೀ ಬೇಕು’ ಎನ್ನುವವರು ಅರಿಯಬೇಕಾದದ್ದು, ಬೆಂಗಳೂರಿನ ಎರಡನೇ ದೊಡ್ಡ ಭಾಷಿಕ ಸಮುದಾಯ ನೂರಾರು ವರ್ಷಗಳ ಹಿಂದೆಯೇ ಇಲ್ಲಿ ಬಂದು ನೆಲೆಸಿರುವ ತೆಲುಗರದ್ದು! ಹಾಗೇ ಉರ್ದು ಭಾಷಿಕರು, ತಮಿಳರು ಎಲ್ಲಾ ಆದಮೇಲೆ ಹಿಂದಿಯವರ ಸರತಿ ಬರುತ್ತದೆ. ಭಾರತೀಯರೆಲ್ಲಾ ಸಮಾನರೆನ್ನುವುದೇ ದಿಟವಾದರೆ ನಮ್ಮ ಮೆಟ್ರೋದಲ್ಲಿ ಕನ್ನಡದ ಜೊತೆಗೆ ತೆಲುಗು, ಉರ್ದು, ತಮಿಳು ಭಾಷೆಗಳೂ ಇರಬೇಕಿತ್ತು! ಬೇಡಪ್ಪಾ... ದೆಹಲಿಯ ಮೆಟ್ರೋದಲ್ಲಿ ಭಾರತದ ಇನ್ಯಾವ ಭಾಷೆಗೆ ಸ್ಥಾನ ನೀಡಿದ್ದಾರೆ? ಅಂದರೆ ಭಾರತದ ಮೂಲೆಮೂಲೆಯಲ್ಲೂ ಆಯಾಜನರ ಭಾಷೆಯ ಜೊತೆಗೆ ಹಿಂದೀಯನ್ನು ಸೇರಿಸುವುದು! ಅದಕ್ಕೆ ಹೆಚ್ಚು ಜನರಿಗೆ ಅದು ಬರುವ ಭಾಷೆ ಎಂದುಬಿಡುವುದು. ಆ ಮೂಲಕ ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಹಿಂದೀ ಭಾಷಿಕ ರಾಜ್ಯಗಳ ಜನರಿಗೆ ಕರ್ನಾಟಕದಂತಹ ಸಮೃದ್ಧ ಜನವಿರಳ ಪ್ರದೇಶಗಳಿಗೆ ವಲಸೆ ಹೋಗಲು ಅನುಕೂಲ ಮಾಡಿಕೊಡುವುದು! ಇದು ಯಾವರೀತಿಯಲ್ಲಿ ಸಮಾನತೆಯೇ ಜೀವಾಳ ಎನ್ನುವ ಮಾತಿಗೆ ಹತ್ತಿರವಾಗಿದೆ? ಇನ್ನು ಹೀಗೆ ಮೆಟ್ರೋದಂತಹ ಸ್ಥಳೀಯ ಸಮೂಹ ಸಾರಿಗೆಯಲ್ಲಿ ಹಿಂದೀ ತೂರಿಸಿರುವುದನ್ನು ಸಮಾನತೆಯ ಸಂಕೇತವಾಗಿ ಕಾಣಬೇಕೋ... ಹಿಂದೀ ಸಾಮ್ರಾಜ್ಯಶಾಹಿ ಮನಸ್ಥಿತಿಯ ಪ್ರತೀಕವಾಗಿ ಕಾಣಬೇಕೋ? ಬೆಂಗಳೂರಿಗೆ ವಲಸೆ ಬರುವ ಹಿಂದೀ ಭಾಷಿಕರಿಗೆ ತೊಂದರೆಯಾಗಬಾರದೆನ್ನುವ ಘನ ಉದ್ದೇಶ ಭಾರತ ಸರ್ಕಾರಕ್ಕಿರುವಂತೆಯೇ... ದೆಹಲಿಗೆ ಹೋಗುವ, ದೆಹಲಿಯಲ್ಲಿರುವ ಕನ್ನಡದವರ ಬಗ್ಗೆಯೂ ಇದೆಯೇ? ಅಸಲಿಗೆ ಹೀಗೆ ಎಲ್ಲರಿಗೂ ಅನುಕೂಲ ಮಾಡಿಕೊಡುವಂತಹ ಭಾಷಾನೀತಿ ಭಾರತದಲ್ಲಿದೆಯೇ ಎಂದರೆ ಕಾಣುವುದು ದೊಡ್ಡ ನಿರಾಸೆ! 

ಸಮಾನತೆಯ ಕೂಗು!

"ಈ ಹುಳುಕು ಸರಿ ಹೋಗಲಿ... ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಗಲಿ. ತನ್ನ ನಾಡಿನಲ್ಲಿ ಆಯಾಭಾಷೆಯ ಸಾರ್ವಭೌಮತ್ವಕ್ಕೆ ಧಕ್ಕೆ ತಾರದಂತಹ ಭಾಷಾನೀತಿ ರೂಪುಗೊಳ್ಳಲಿ" ಎಂಬ ದನಿ ಎತ್ತುವಲ್ಲಿ ನಮ್ಮ ಕನ್ನಡಿಗರೇನು ಹಿಂದೆ ಬಿದ್ದಿಲ್ಲ - ಇದು ಹಿಗ್ಗಿನ,  ಭರವಸೆಯ ವಿಷಯ. ಮೆಟ್ರೋದಲ್ಲಿ ಹಿಂದೀ ತುರುಕಲು ಆರಂಭಿಸಿದಾಗಲೇ ಇದರ ಬಗ್ಗೆ ಸಂಸ್ಥೆಯ ಮುಖ್ಯಸ್ಥರೊಂದಿಗೆ ದೂರು ಸಲ್ಲಿಸಿದವರು ಹಲವರು. ಮೆಟ್ರೋ ಮುಖ್ಯಸ್ಥರ ಉದ್ಧಟತನದ ಉತ್ತರದಿಂದ ಬೇಸತ್ತವರು ಮತ್ತೆ ಕೆಲವರು. ಸೋಲೊಪ್ಪದೆ ಬೆನ್ನು ಹತ್ತಿ ಮೆಟ್ರೋದ ಈ ಹಿಂದೀ ಪರವಾದ ನಿಲುವನ್ನು ಪ್ರಶ್ನಿಸಿ "ಇಂತಹ ನಿಲುವಿಗೆ ಕಾರಣ ವಿವರಿಸಿ" ಎಂದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿ ನಕ್ಷತ್ರಿಕನ ಹಾಗೆ ಬೆನ್ನು ಹತ್ತಿದವರು ಮತ್ತೆ ಕೆಲವರು. ಮನವಿಕಾಯುವಿಕೆಮೇಲ್ಮನವಿದೂರು,  ವಿಚಾರಣೆ... ಹೀಗೆ ಛಲ ಬಿಡದ ತ್ರಿವಿಕ್ರಮನಂತೆ ಎಲ್ಲಾ ಮೆಟ್ಟಿಲುಗಳನ್ನೂ ಹತ್ತುತ್ತಾ, ಸುಮಾರು ಎರಡು ವರ್ಷಗಳಿಂದಲೂ ಉತ್ಸಾಹ ಬತ್ತಿಸಿಕೊಳ್ಳದೆ ಮೆಟ್ರೋದ ಬೆನ್ನು ಬಿದ್ದಿರುವ ಗೆಳೆಯರಿಗೆ ಬಂದಿರುವ ಉತ್ತರಗಳನ್ನು ನೀವು ಇಲ್ಲಿ ನೋಡಿರಿ.

ಆರ್ ಟಿ ಐಗೆ ಉತ್ತರ!



ಹೀಗೆ ರಾಜ್ಯಸರ್ಕಾರದ ಗೆಜೆಟ್ ಸೂಚನೆಯಂತೆ ಹಿಂದೀ ಬಳಸಿದ್ದೇವೆ ಎಂದು ಮೊದಲು ಹೇಳಿದವರು ಅದಕ್ಕೆ ಬೇಕಾದ ಆಧಾರ ಕೊಡದೆ ಯಾವುದೋ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪತ್ರ ಲಗತ್ತಿಸಿದ್ದರು. ಮುಂದೆ ಮೇಲ್ಮನವಿ/ ವಿಚಾರಣೆ ಅಂದಾಗ ಇದು ತಮ್ಮ ಆಡಳಿತ ಮಂಡಳಿಯ ತೀರ್ಮಾನ ಮತ್ತು ಯಾವುದೇ ಸರ್ಕಾರದ ಆದೇಶವಲ್ಲಾ ಎಂದರು. ಇದು ಇವರ ಸದ್ಯದ ಕೊನೆಯ ಉತ್ತರ. ಕನ್ನಡ ನಾಡಿನ ಮೆಟ್ರೋಲಿ ಹಿಂದೀ ಇರಬೇಕೆಂಬ ನಿರ್ಣಯವನ್ನು ತೆಗೆದುಕೊಳ್ಳಲು ಇದೇನು ಇವರ ಖಾಸಗಿ ಸ್ವತ್ತೇ ಎಂಬ ಪ್ರಶ್ನೆ ಜನರದ್ದು! ನಾಳೆ ನಾಲ್ಕು ಮಂದಿ ಮಲಯಾಳಿಗಳೋ, ತಮಿಳರೋ ಬಂದು ಆಡಳಿತ ಮಂಡಳಿಯಲ್ಲಿ ಕೂತು ಮಲಯಾಳವನ್ನೋ, ತಮಿಳನ್ನೋ ಬೆಂಗಳೂರಿನ ಮೆಟ್ರೋದಲ್ಲಿ ತರುವುದಿಲ್ಲಾ ಎನ್ನಲು ಸಾಧ್ಯವೇ! ಕನ್ನಡದ ಜನತೆ ಎಚ್ಚೆತ್ತುಕೊಳ್ಳದೆ ಹೋದರೆ ನಾಳೆ ಪಶ್ಚಾತ್ತಾಪ ಪಡಬೇಕಾದೀತು!! ಅಲ್ವಾ ಗುರೂ?







Related Posts with Thumbnails